Thursday, May 7, 2026

ಚಿಣ್ಣರಿಗೆ ಸೆರೆಮನೆ ಆಗದಿರಲಿ ಬೇಸಿಗೆ ಶಿಬಿರ

 




(ಪ್ರಜಾವಾಣಿ, 04.04.2026)

   ಹಿಂದೆಲ್ಲ ಶಾಲಾಪರೀಕ್ಷೆಗಳು ಮುಗಿಯುತ್ತಿದ್ದಂತೆ ಮಕ್ಕಳು ಅಜ್ಜಂದಿರ ಮನೆಗಳಿಗೆ ದಾಂಗುಡಿ ಇಡುತ್ತಿದ್ದರು. ಬೇಸಿಗೆ ರಜೆಯ ಆ ಎರಡು ತಿಂಗಳುಗಳಲ್ಲಿ ಈಜು, ಆಟ, ತೋಟಗಳಲ್ಲಿ ಸುತ್ತಾಟ ಎಂದು ಸಮಯ ಕಳೆದುಹೋದದ್ದೆ ಗೊತ್ತಾಗುತ್ತಿರಲಿಲ್ಲ. ಬೇಸಿಗೆ ರಜೆಯಿಂದ ದೊರೆತ ಹೊಸ ಹುರುಪು, ಹೊಸ ಚೈತನ್ಯದೊಂದಿಗೆ ಮಕ್ಕಳು ಶಾಲೆಗಳಿಗೆ ಮರಳುತ್ತಿದ್ದರು. ಈಗ ಕಾಲ ಬದಲಾಗಿದೆ. ಪರೀಕ್ಷೆ ಮುಗಿದು ರಜೆ  ಆರಂಭವಾಗುತ್ತಿದ್ದಂತೆ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಸೇರಿಸುವ ಧಾವಂತ ಪಾಲಕರಲ್ಲಿ ಶುರುವಾಗುತ್ತದೆ. ರಜೆಯ ನಂತರವೂ ಪಠ್ಯಪುಸ್ತಕಗಳನ್ನು ಓದಬೇಕಾದ ಸಜೆ ಮಕ್ಕಳಿಗೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಅಮೂಲ್ಯ ಸಮಯ ವ್ಯರ್ಥವಾಗಬಾರದೆಂಬ ಆಸೆ ಪಾಲಕರದು. ಪರೀಕ್ಷೆ ಮುಗಿಯುತ್ತಿದ್ದಂತೆ ಮುಂದಿನ ವರ್ಷದ ಓದಿಗೆ ಮಕ್ಕಳು ಸಿದ್ಧಗೊಳ್ಳಬೇಕು. ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಮಕ್ಕಳನ್ನು ವಸತಿ ವ್ಯವಸ್ಥೆಯ ಬೇಸಿಗೆ ಶಿಬಿರಗಳಿಗೆ ಸೇರಿಸಿ ಪಾಲಕರು ನಿರಾಳರಾಗುವರು.

ಪಾಲಕರ ಮನೋಭಾವವನ್ನು ಬಂಡವಾಳ ಆಗಿಸಿಕೊಳ್ಳುತ್ತಿರುವ ಬೇಸಿಗೆ ಶಿಬಿರಗಳು ಈಗ ಉದ್ಯಮವಾಗಿ ಬೆಳೆದು ನಿಂತಿವೆ. ವರ್ಷಪೂರ್ತಿ ಬೋಧಿಸುವುದನ್ನು ಎರಡು ತಿಂಗಳುಗಳ ಕಾಲಾವಧಿಯಲ್ಲಿ ಬೋಧಿಸಲಾಗುತ್ತಿದೆ. ಜೊತೆಗೆ ವಾರದ ಕೊನೆಯ ದಿನ ಮಕ್ಕಳು ಪರೀಕ್ಷೆಗೆ ಸಿದ್ಧರಾಗಬೇಕು.  ಒಂದರ್ಥದಲ್ಲಿ ಇದು ನೀರು ಇಳಿಯದ ಗಂಟಲಲ್ಲಿ ಕಡುಬು ತುರುಕಿದಂತಹ ಪರಿಸ್ಥಿತಿ. ಕಡಿಮೆ ಅವಧಿಯಲ್ಲಿ ಹೆಚ್ಚಿನ ವಿಷಯವಸ್ತುವನ್ನು ಅಧ್ಯಯನ ಮಾಡಬೇಕಾದ ಒತ್ತಡದಲ್ಲಿ ಮಕ್ಕಳು ಸಿಲುಕಿರುವರು. ವಾರಪೂರ್ತಿ ತರಗತಿಗಳು, ಕಲಿಕೆ ಮತ್ತು ಪರೀಕ್ಷೆಯ ಸಿದ್ಧತೆಯಿಂದ ಮಕ್ಕಳು ಹೈರಾಣಾಗುತ್ತಿರುವರು. 

ವರ್ಷಪೂರ್ತಿ ಓದು, ಪರೀಕ್ಷೆ ಎಂದು ಮಾನಸಿಕ ಶ್ರಮದಿಂದ ಬಸವಳಿಯುವ ಮಕ್ಕಳಿಗೆ ಬೇಸಿಗೆ ರಜೆಯ ವಿರಾಮ ಸಮಯವನ್ನು ಒದಗಿಸಲು ಪಾಲಕರು ಸಿದ್ಧರಿಲ್ಲ. ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳನ್ನು ಭವಿಷ್ಯದಲ್ಲಿ ವೈದ್ಯರು, ಎಂಜಿನಿಯರರು, ಉನ್ನತ ಅಧಿಕಾರಿಗಳನ್ನಾಗಿಸುವ ಪ್ರಯತ್ನ ಆರಂಭಗೊಳ್ಳುತ್ತದೆ. ನಿರಂತರ ಮಾನಸಿಕ ಶ್ರಮ ಮಕ್ಕಳ ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಬೌದ್ಧಿಕ ಬೆಳವಣಿಗೆಯಷ್ಟೇ ಅವರ ದೈಹಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಇಂದಿನ ಅದೆಷ್ಟೋ ಶಾಲೆ ಮತ್ತು ಕಾಲೇಜುಗಳಲ್ಲಿ ಆಟದ ಮೈದಾನಗಳಿಲ್ಲ. ವಿದ್ಯಾರ್ಥಿಗಳು ತಮ್ಮ ದಿನದ ಹೆಚ್ಚಿನ ಸಮಯವನ್ನು ತರಗತಿಯ ನಾಲ್ಕು ಗೋಡೆಗಳ ಮಧ್ಯದಲ್ಲೇ ಕಳೆಯುತ್ತಿರುವರು. ಇಂತಹ ಪರಿಸ್ಥಿತಿಯಲ್ಲಿ ಬೇಸಿಗೆ ರಜೆಯಲ್ಲೂ ಮಕ್ಕಳನ್ನು ಮತ್ತದೆ ಶೈಕ್ಷಣಿಕ ವಾತಾವರಣದಲ್ಲೇ ಸಮಯ ಕಳೆಯುವಂತಹ ಶಿಕ್ಷೆಗೆ ಗುರಿಪಡಿಸುವುದು ಸರಿಯಲ್ಲ.

ಮಕ್ಕಳನ್ನು ಪರೀಕ್ಷಾಕಣದಲ್ಲಿ ಸ್ಪರ್ಧೆಗೆ ಸಿದ್ಧಗೊಳಿಸುತ್ತಿರುವ ಭರಾಟೆಯಲ್ಲಿ ಅವರು ಏನನ್ನು ಕಳೆದುಕೊಳ್ಳುತ್ತಿರುವರು ಎಂದು ಆಲೋಚಿಸಬೇಕಿದೆ. ಬೇಸಿಗೆಯ ರಜೆ ಎನ್ನುವುದು ವರ್ಷಪೂರ್ತಿ ಓದಿ ಹೈರಾಣಾದ ಮಕ್ಕಳು ಒಂದಿಷ್ಟು ಮನೋರಂಜನೆ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ದೊರೆಯುವ ಒಂದು ಉತ್ತಮ ಅವಕಾಶ. ಪ್ರವಾಸ, ಮನೆಯ ಸದಸ್ಯರೊಡನೆ ಸಮಯಪಾಲನೆ, ಹಳ್ಳಿಗಳಲ್ಲಿರುವ ಅಜ್ಜ-ಅಜ್ಜಿಯ ಮನೆಗೆ ಭೇಟಿ, ಗೆಳೆಯರೊಡನೆ ಆಟೋಟ, ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಇಷ್ಟದ ಪುಸ್ತಕಗಳ ಓದು, ಹೊಲ-ತೋಟದಲ್ಲೊಂದು ಸುತ್ತು, ಚಿತ್ರಕಲೆ-ಸಂಗೀತ-ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುವುದು ಇತ್ಯಾದಿ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಕ್ಕಳು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಹೊಂದಬೇಕು. ಇಂತಹ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯಕವಾಗುತ್ತವೆ. 

ಈ ಮೊದಲು ಬೇಸಿಗೆ ಶಿಬಿರಗಳಲ್ಲಿ ಚಾರಣ, ಕ್ರೀಡೆ, ನಾಟಕಗಳನ್ನಾಡಿಸುವುದು, ಚಿತ್ರಬಿಡಿಸುವುದು, ಕಥೆಗಳನ್ನು ಹೇಳುವುದು ಇತ್ಯಾದಿ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಈಗ ಬೇಸಿಗೆ ಶಿಬಿರಗಳು ಟ್ಯುಟೋರಿಯಲ್‍ಗಳಾಗಿ ರೂಪಾಂತರಗೊಂಡಿವೆ. ವರ್ಷಪೂರ್ತಿ ಶಾಲೆಯ ನಾಲ್ಕು ಗೋಡೆಗಳ ತರಗತಿಯಲ್ಲಿ ಕಲಿಯಬೇಕಾದದ್ದನ್ನು ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಕಲಿಯುತ್ತಿದ್ದಾರೆ. ಮಕ್ಕಳ ಮಾನಸಿಕ ಉಲ್ಲಾಸಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ಶಿಬಿರಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಗಣಿತ, ವಿಜ್ಞಾನ, ಇಂಗ್ಲಿಷ್ ವ್ಯಾಕರಣದಂತಹ ವಿಷಯಗಳು ಮುನ್ನೆಲೆಗೆ ಬಂದಿವೆ. ಪಾಲಕರು ಕೂಡ ತಮ್ಮ ಮಕ್ಕಳು ಈ ವಿಷಯಗಳನ್ನೇ ಬೇಸಿಗೆ ಶಿಬಿರಗಳಲ್ಲಿ ಕಲಿಯಬೇಕೆಂದು ಅಪೇಕ್ಷಿಸುತ್ತಿರುವರು. 

ಕುಟುಂಬ ಘಟಕ ಒಡೆದು ನ್ಯೂಕ್ಲಿಯರ್ ಕುಟುಂಬಗಳು ಸೃಷ್ಟಿಯಾಗಿರುವ ಈ ದಿನಗಳಲ್ಲಿ ಮಕ್ಕಳನ್ನು ವಸತಿ ಶಾಲೆಗಳಲ್ಲಿಟ್ಟು ಓದಿಸುವ ಪ್ರವೃತ್ತಿ ಪಾಲಕರಲ್ಲಿ ಹೆಚ್ಚುತ್ತಿದೆ. ಶೈಕ್ಷಣಿಕ ವರ್ಷದುದ್ದಕ್ಕೂ ವಸತಿ ಶಾಲೆಗಳಲ್ಲಿರುವ ಮಕ್ಕಳಿಗೆ ಪರೀಕ್ಷೆ ನಂತರದ ರಜಾದಿನಗಳಲ್ಲಾದರೂ ಪಾಲಕರ ಸಾಂಗತ್ಯ ಅಗತ್ಯವಾಗಿರುತ್ತದೆ. ವಿಪರ್ಯಾಸವೆಂದರೆ ಉದ್ಯೋಗದ ಕಾರಣದಿಂದ ಪಾಲಕರಿಗೆ ಬೇಸಿಗೆಯ ರಜಾದಿನಗಳಲ್ಲೂ ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಪಾಲಕರು ಬೇಸಿಗೆ ಶಿಬಿರಗಳ ಮೊರೆ ಹೋಗುತ್ತಿರುವರು. ಮಕ್ಕಳನ್ನು ಒಂದು ಸುರಕ್ಷಿತ ವಲಯದೊಳಗೆ ಸೇರಿಸುವ ಧಾವಂತದಲ್ಲಿ ಅವರನ್ನು ಮತ್ತದೇ ಅಸಹನೀಯ ಎನಿಸುವ ಶೈಕ್ಷಣಿಕ ವಾತಾವರಣಕ್ಕೆ ದೂಡುತ್ತಿರುವರು. 

ಬೇಸಿಗೆ ಶಿಬಿರಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಯೋಗ, ಬರವಣಿಗೆ, ಚಿತ್ರಕಲೆ, ಸಂಗೀತ, ನಾಟಕ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡುವುದು ಉತ್ತಮ ವಿಧಾನ. ಕಥಾಕಮ್ಮಟವನ್ನು ಆಯೋಜಿಸಿ ಮಕ್ಕಳಲ್ಲಿ ಕಥೆ ಹೇಳುವ ಮತ್ತು ಕೇಳುವ ಪ್ರವೃತ್ತಿಗೆ ಉತ್ತೇಜನ ನೀಡಬೇಕು. ಕ್ರೀಡೆಯ ಮೂಲಕ ಸಹಬಾಳ್ವೆಯ ಅರಿವು ಮೂಡಿಸಬೇಕು. ದುರಂತವೆಂದರೆ ಹೆಚ್ಚಿನ ಪಾಲಕರು ಬೇಸಿಗೆ ಶಿಬಿರಗಳ ಸೃಜನಾತ್ಮಕ ಚಟುವಟಿಕೆಗಳಲ್ಲಿ ತಮ್ಮ ಮಕ್ಕಳು ತೊಡಗಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಬೇಸಿಗೆ ಶಿಬಿರಗಳಲ್ಲೂ ಮಕ್ಕಳು ಪಠ್ಯಪುಸ್ತಕಗಳನ್ನೇ ಓದಬೇಕೆನ್ನುವ ಹಟ ಅವರದು. ಪಾಲಕರ ಇಷ್ಟಾರ್ಥ ಪೂರೈಸಲು ಬೇಸಿಗೆ ಶಿಬಿರಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಪಾಲಕರ ಹಟ ಮತ್ತು ಶಿಬಿರಗಳ ಆಯೋಜಕರ ಹಣಗಳಿಸುವ ದಾಹದಿಂದ ಮಕ್ಕಳು ಹೈರಾಣಾಗುತ್ತಿರುವರು. ಬೇಸಿಗೆ ಶಿಬಿರಗಳು ರಿಯಾಲಿಟಿ ಶೋಗಳಲ್ಲ ಮತ್ತು ಮಕ್ಕಳು ಸ್ಪರ್ಧಿಗಳಲ್ಲ ಎನ್ನುವುದನ್ನು ಪಾಲಕರು ಹಾಗೂ ಶಿಬಿರಗಳ ಆಯೋಜಕರು ಅರ್ಥಮಾಡಿಕೊಳ್ಳಬೇಕಿದೆ. 

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಂಸಾತ್ಮಕ ಕೃತ್ಯಗಳು ಘಟಿಸುತ್ತಿವೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರವೃತ್ತಿಗೆ ನೈತಿಕತೆಯ ಕೊರತೆಯೇ ಕಾರಣವಾಗಿದೆ. ನೈತಿಕ ಅಧ:ಪತನ ಭವಿಷ್ಯದ ನಾಗರಿಕರೆಂದು ಕರೆಯಲ್ಪಡುತ್ತಿರುವ ಮಕ್ಕಳಿಂದ ಶುರುವಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಶಿಕ್ಷಣ ವ್ಯವಸ್ಥೆ ವಾಣಿಜ್ಯೀಕರಣಗೊಂಡಿರುವ ಸಧ್ಯದ ಸಂದರ್ಭದಲ್ಲಿ ಶಾಲೆಗಳಲ್ಲಿ ನೈತಿಕ ಬೋಧನೆ ಮರೀಚಿಕೆಯಾಗಿದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಬೇಸಿಗೆ ಶಿಬಿರಗಳು ನೈತಿಕ ಬೋಧನೆ ಮತ್ತು ಸೃಜನಾತ್ಮಕ ಚಟುವಟಿಕೆಗಳಿಂದ ದೂರವಾದರೆ ಮಕ್ಕಳಲ್ಲಿ ನೈತಿಕ ಅಧ:ಪತನ ಮತ್ತಷ್ಟು ಹೆಚ್ಚುವ ಅಪಾಯದ ಸಾಧ್ಯತೆಯಿದೆ. ಪಾಲಕರು ಈ ಕುರಿತು ಯೋಚಿಸಬೇಕು. 

-ರಾಜಕುಮಾರ ಕುಲಕರ್ಣಿ