Friday, May 3, 2024

ನೈತಿಕ ನೆಲೆಗಟ್ಟು: ಶಿಕ್ಷಕರದೂ ಪಾಲಿದೆ

     



    (ಪ್ರಜಾವಾಣಿ, ೨೪.೦೨.೨೦೨೪)

    ಇತ್ತೀಚೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ರೋಗಿಗಳೆದುರು ವಿವಿಧ ಭಾಷೆಗಳ ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಸುದ್ಧಿಯಾಗಿತ್ತು. ಈ ಘಟನೆಯ ಹಿಂದೆಯೇ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರೊಬ್ಬರು ತಮ್ಮೊಂದಿಗೆ ಮದುವೆ ನಿಶ್ಚಯವಾದ ವೈದ್ಯೆ ಜೊತೆಗೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಪ್ರೀ ವೆಡ್ಡಿಂಗ್ ಚಿತ್ರೀಕರಣ ಮಾಡಿದ ಘಟನೆ ಪತ್ರಿಕೆಯಲ್ಲಿ ಪ್ರಕಟವಾಗಿ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾದವು. ಶಾಲೆಯೊಂದರಲ್ಲಿ ತನಗೆ ಮಧ್ಯಾಹ್ನದ ಊಟ ತಂದುಕೊಡಲಿಲ್ಲವೆಂದು ಕೋಪಗೊಂಡ ಶಿಕ್ಷಕಿ ವಿದ್ಯಾರ್ಥಿಗಳನ್ನು ತರಗತಿಯ ಕೋಣೆಯಲ್ಲಿ ಕೂಡಿಹಾಕಿ ಥಳಿಸಿದ ಅಮಾನವೀಯ ಕೃತ್ಯ ಪಾಲಕರನ್ನು ಆತಂಕಕ್ಕೊಳಗಾಗಿಸಿದೆ.

ಈ ಮೇಲಿನ ಘಟನೆಗಳು ಇಂದಿನ ಯುವ ವಿದ್ಯಾವಂತರ ಅನಾರೋಗ್ಯಕರ ಮನಸ್ಥಿತಿಗೆ ಕನ್ನಡಿ ಹಿಡಿಯುವಂತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಅನಾಗರಿಕ ವರ್ತನೆ, ಯುವವೈದ್ಯರ ಸಂವೇದನಾರಹಿತ ನಡೆ ಮತ್ತು ಶಾಲೆಯಲ್ಲಿ ಶಿಕ್ಷಕಿಯ ದುರ್ನಡತೆಗೆ ಯಾರನ್ನು ಹೊಣೆಯಾಗಿಸಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಸಹಜವಾಗಿಯೇ ಸಮಾಜ ವಿದ್ಯಾವಂತರ ಆಕ್ಷೇಪಾರ್ಹ ವರ್ತನೆಗೆ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಹೊಣೆಯಾಗಿಸುತ್ತದೆ. ವಿದ್ಯಾ ಕೇಂದ್ರಗಳಾದ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅನುಚಿತ ವರ್ತನೆ ಹಾಗೂ ಹಿಂಸಾಪ್ರವೃತ್ತಿಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿವೆ. 

ಸಮಾಜದಲ್ಲಿ ನಾಗರಿಕರ ಅನುಚಿತ ವರ್ತನೆಗೆ ಶಿಕ್ಷಣ ವ್ಯವಸ್ಥೆಯನ್ನು ಗುರಿಯಾಗಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸುವ ಶಿಕ್ಷಕರ ಸಂಖ್ಯೆ ಬಹಳಷ್ಟಿದೆ. ವ್ಯಕ್ತಿಯ ನಡೆ, ನುಡಿಯನ್ನು ರೂಪಿಸುವಲ್ಲಿ ಶಿಕ್ಷಣವೇ ನೆಲೆಗಟ್ಟು. ಪ್ರತಿಯೊಬ್ಬ ಮನುಷ್ಯ ತನ್ನ  ವಿದ್ಯಾರ್ಥಿ ಬದುಕಿನಲ್ಲಿ ದಿನದ ಬಹುಪಾಲು ಸಮಯವನ್ನು ಕಳೆಯುವುದು ಶಾಲೆ, ಕಾಲೇಜುಗಳ ವಾತಾವರಣದಲ್ಲಿ ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತು. ಹೀಗಾಗಿ ಶಿಕ್ಷಕರು ತಮ್ಮ ಕರ್ತವ್ಯ ಕೇವಲ ಪಾಠ ಬೋಧಿಸುವುದಕ್ಕೆ ಮಾತ್ರ ಸೀಮಿತ ಎಂದು ನುಣುಚಿಕೊಳ್ಳುವಂತಿಲ್ಲ. ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆ ಶಿಕ್ಷಣದ ಉದ್ದೇಶವಾಗಿರುವುದರಿಂದ ಪಾಠ ಬೋಧನೆಯ ಜೊತೆಗೆ ಮಕ್ಕಳ ನಡೆ, ನುಡಿಯನ್ನು ತಿದ್ದುವ ಕೆಲಸ ಶಿಕ್ಷಕರು ಮಾಡಬೇಕಾಗುತ್ತದೆ 

ಪ್ರಾಮಾಣಿಕರಾಗಿ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡವರ ನಡುವೆ ಅಪ್ರಾಮಾಣಿಕರು ಮತ್ತು ಅನೀತಿವಂತರೂ ಸೇರಿಕೊಂಡಿರುವುದರಿಂದ ಶಿಕ್ಷಕ ವೃತ್ತಿ ಸಮಾಜದಲ್ಲಿ ತನ್ನ ಮೊದಲಿನ ಗೌರವವನ್ನು ಕಳೆದುಕೊಳ್ಳುತ್ತಿದೆ. ಶಾಲೆಯಲ್ಲಿ ಪಾಠ ಮಾಡಬೇಕಾದ ಶಿಕ್ಷಕರು ಪಡೆಯುತ್ತಿರುವ ಅತ್ಯಾಕರ್ಷಕ ಸಂಬಳದ ಹೊರತಾಗಿಯೂ ಹಣಗಳಿಸುವ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರ್ಶ ಶಿಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಇವತ್ತಿನ ಶಿಕ್ಷಣ ಕ್ಷೇತ್ರದ ಬಹುಮುಖ್ಯ ಸಮಸ್ಯೆಯಾಗಿದೆ. ಹಿಂದಿನ ದಿನಗಳಲ್ಲಿ ಶಾಲಾ ಅವಧಿಯ ನಂತರವೂ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ಪಠ್ಯಕ್ರಮದಾಚೆ ಬದುಕಿನ ಮೌಲ್ಯಗಳನ್ನು ಬೋಧಿಸುತ್ತಿದ್ದರು. ಆದರೆ ಅಂಥ ಮನೋಭಾವದ ಶಿಕ್ಷಕರು ಇಂದು ನೋಡಲು ಸಿಗುತ್ತಿಲ್ಲ. 

ಇರುವೆಯೊಂದು ಪಾರಿವಾಳದ ಜೀವ ಉಳಿಸಿದ್ದು, ಶಿಬಿ ಚಕ್ರವರ್ತಿಯ ತ್ಯಾಗ, ಪುಣ್ಯಕೋಟಿಯ ಪ್ರಾಮಾಣಿಕತೆ, ಗಾಂಧೀಜಿಯ ಸತ್ಯಸಂಧತೆ ಇಂತಹ ಕಥೆಗಳನ್ನೆಲ್ಲ ಆಗ ನೀತಿಶಿಕ್ಷಣದ ಮೂಲಕ ಬೋಧಿಸಲಾಗುತ್ತಿತ್ತು. ನೀತಿಶಿಕ್ಷಣಕ್ಕೆ ವೇಳಾಪಟ್ಟಿಯಲ್ಲಿ ಆದ್ಯತೆ ನೀಡಲಾಗುತ್ತಿತ್ತು. ಒಟ್ಟಾರೆ ಮಕ್ಕಳಲ್ಲಿ ನೈತಿಕ ಮತ್ತು ವೈಚಾರಿಕ ಪ್ರಜ್ಞೆಯನ್ನು ಬೆಳೆಸಲು ಪೂರಕವಾದ ಶೈಕ್ಷಣಿಕ ವಾತಾವರಣವಿರುತ್ತಿತ್ತು. ಆದರೆ ಇಂದು ನೀತಿಶಿಕ್ಷಣ ಶಾಲಾ ಕಾಲೇಜುಗಳ ವೇಳಾಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ. ವ್ಯಾಪಾರೀಕರಣ ಶಿಕ್ಷಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಶಿಕ್ಷಣದ ಉದ್ದೇಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಶಿಕ್ಷಣದಿಂದ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗುತ್ತಿಲ್ಲ. ಶಿಕ್ಷಕರು ಪಠ್ಯಕ್ರಮದಾಚೆ ಏನನ್ನೂ ಬೋಧಿಸುತ್ತಿಲ್ಲ. ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವುದರಲ್ಲೇ ತಮ್ಮ ಪೂರ್ಣ ಸಮಯವನ್ನು ವಿನಿಯೋಗಿಸುತ್ತಿರುವ ಶಿಕ್ಷಕರು ವಿದ್ಯಾರ್ಥಿಗಳ ನಡತೆಯನ್ನು ನಿರ್ಲಕ್ಷಿಸುತ್ತಿರುವರು.

ಶಾಲಾ ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣ ಹದಗೆಡುತ್ತಿರುವುದರಲ್ಲಿ ಸಿನಿಮಾ ಮಾಧ್ಯಮದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ‘ಸ್ವಾಮಿದೇವನೆ ಲೋಕಪಾಲನೆ’ ಎನ್ನುವ ಸಿನಿಮಾ ಹಾಡು ಒಂದು ಕಾಲದಲ್ಲಿ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿತ್ತು. ಮುಂದೊಂದು ದಿನ ಇದೇ ಸಿನಿಮಾ ಮಾಧ್ಯಮ ‘ಒಓಔಅಂ...ಆ:...’ ಎಂದು ಶಿಕ್ಷಕಿ ಪಾತ್ರದ ನಟಿಯ ಮೂಲಕ ಮಾದಕವಾಗಿ ಹಾಡಿಸಿ ಹೆಜ್ಜೆ ಹಾಕಿಸಿದ್ದನ್ನು ಮರೆಯುವಂತಿಲ್ಲ. ಇಂದು ಶಾಲೆ ಮತ್ತು ಕಾಲೇಜುಗಳ ಆವರಣಗಳಲ್ಲಿ ಲೀಲಾಜಾಲವಾಗಿ ಹರಿದಾಡುತ್ತಿರುವ ಮತ್ತು ಶಬ್ದಕೋಶದಲ್ಲಿ ನೋಡಲು ಸಿಗದ ಪದಗಳು ಸಿನಿಮಾ ಮಾಧ್ಯಮದ ಕೊಡುಗೆಗಳಾಗಿವೆ ಎಂದರೆ ತಪ್ಪಾಗಲಾರದು.  

ಗಾಂಧೀಜಿ ಅವರು ಸಪ್ತ ಸಾಮಾಜಿಕ ಪಾಪಗಳಲ್ಲಿ ಶಿಕ್ಷಣದ ಕುರಿತು ಪ್ರಸ್ತಾಪಿಸಿರುವರು. ಚಾರಿತ್ರ್ಯವಿಲ್ಲದ ಜ್ಞಾನ ಅದು ಪಾಪಕ್ಕೆ ಸಮಾನವೆಂದು ಹೇಳಿ ಜ್ಞಾನದ ಜೊತೆಗೆ ಚಾರಿತ್ರ್ಯ ಕೂಡ ಉತ್ತಮವಾಗಿರಬೇಕು ಎಂದಿರುವರು.  ಚಾರಿತ್ರ್ಯ ಮತ್ತು ಜ್ಞಾನ ವ್ಯಕ್ತಿಯ ಹೃದಯ ಮತ್ತು ಆತ್ಮಗಳಿದ್ದಂತೆ. ತತ್ವಬದ್ಧವಾದ ಚಾರಿತ್ರ್ಯವಿಲ್ಲದೆ ಬರೀ ಜ್ಞಾನ ಹೊಂದಿರುವುದು ಅತ್ಯಂತ ಅಪಾಯಕಾರಿ. ಒಂದರ್ಥದಲ್ಲಿ ಅದು ಹೃದಯವಿಲ್ಲದ ಆತ್ಮವಿದ್ದಂತೆ. ಮೌಲ್ಯ ಪರಿಷ್ಕರವಾಗದೆ ಯಾವುದೇ ಮಟ್ಟದ ಜ್ಞಾನವು ಉದಿಸುವುದು ಸಾಧ್ಯವೇ ಇಲ್ಲ ಎನ್ನುವುದು ತತ್ವಶಾಸ್ತ್ರಜ್ಞರ ನಿಲುವಾಗಿದೆ. ಅದಕ್ಕೆಂದೇ ಗಾಂಧೀಜಿ ಶಿಕ್ಷಣದಲ್ಲಿ ಮೌಲ್ಯದ ಅವಶ್ಯಕತೆಗೆ ಮಹತ್ವ ನೀಡಿದರು.  

  ಭೈರಪ್ಪನವರ ‘ತಂತು’ ಕಾದಂಬರಿಯಲ್ಲಿ ಹೀಗೊಂದು ಮಾತಿದೆ- ‘ಜನರು ಮೂಲತ: ಒಳ್ಳೆಯವರು, ಕೆಟ್ಟೋರು ಅನ್ನೂ ವಿಂಗಡಣೆ ಸರಿಯಲ್ಲ. ಅವರು ಗೊಬ್ಬರದ ಥರ ಇದ್ದಾರೆ. ಗೊಬ್ಬರ ಒಯ್ದು ತೆಂಗಿನ ಮರಕ್ಕೆ ಹಾಕಿದರೆ ಅದೂ ಫಲ ಕೊಡುತ್ತೆ. ಪಾಪಾಸುಕಳ್ಳಿಗೆ ಹಾಕಿದರೆ ಅದೂ ಹೊರವಾಗಿ ಬೆಳೆಯುತ್ತೆ. ಗೊಬ್ಬರದ ಹಂಗಿರೊ ಅವರನ್ನು ನಿಜವಾದ ಜನರ ಹಂಗೆ ಮನುಷ್ಯರ ಹಂಗೆ ಮಾಡೂದೇ ಮೂಲ ಪ್ರಶ್ನೆ’. ವಿದ್ಯಾರ್ಥಿಗಳನ್ನು ಪಾಪಾಸುಕಳ್ಳಿಗಳನ್ನಾಗಿಸದೆ ಅವರನ್ನು ತೆಂಗಿನ ಮರದಂತೆ ಮಾಡುವುದು ಇಂದಿನ ಶಿಕ್ಷಣ ವ್ಯವಸ್ಥೆ, ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿಯಾಗಿದೆ. ಪರಿಣಾಮವಾಗಿ ಶಿಕ್ಷಕರು ಮತ್ತು ಪಾಲಕರು ಜೊತೆಗೂಡಿ ಶಿಕ್ಷಣದ ನೈತಿಕ ನೆಲೆಗಟ್ಟನ್ನು ಗಟ್ಟಿಗೊಳಿಸಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ.

-ರಾಜಕುಮಾರ ಕುಲಕರ್ಣಿ