Thursday, May 3, 2018

ಚಿತ್ತಾಲರ ಬರವಣಿಗೆಯಲ್ಲಿ ಮನುಷ್ಯ ಪ್ರಜ್ಞೆ

           


            ಯಶವಂತ ಚಿತ್ತಾಲರು ಕನ್ನಡದ ಅನನ್ಯ ಮತ್ತು ಅಪೂರ್ವ ಬರಹಗಾರ. ಕನ್ನಡ ಸಾಹಿತ್ಯಕ್ಕೆ ಅವರದು ಬಹುದೊಡ್ಡ ಕೊಡುಗೆ. ಐದು ದಶಕಗಳ ಕಾಲ ಕನ್ನಡದ ನೆಲದಿಂದ ದೂರವಾದ ಮುಂಬಯಿಯಲ್ಲಿ ಕುಳಿತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಚಿತ್ತಾಲರು ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದು ದಟ್ಟವಾದ ಜೀವನಾನುಭವವನ್ನು. ಮನುಷ್ಯನ ಗುಣ, ಸ್ವಭಾವಗಳನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಚಿತ್ತಾಲರು ವಿಶ್ಲೇಷಿಸಿ ನೋಡಿದಷ್ಟು ಬೇರೆ ಬರಹಗಾರರು ನೋಡಿದ್ದು ಕಡಿಮೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಚಿತ್ತಾಲರ ಕಥೆ, ಕಾದಂಬರಿ, ಪ್ರಬಂಧಗಳಲ್ಲಿ (ಚಿತ್ತಾಲರು ಪ್ರಬಂಧವನ್ನೂ ಕಥೆಯಂತೆ ಬರೆಯುತ್ತಾರೆ ಎನ್ನುತ್ತಾರೆ ಲೇಖಕ ಜೋಗಿ) ಮನುಷ್ಯ ಪ್ರಜ್ಞೆ ಎನ್ನುವುದು ಮತ್ತೆ ಮತ್ತೆ ಓದುಗನ ಅನುಭವಕ್ಕೆ ಒಳಗಾಗುವುದು ತೀರ ಸಹಜವೆಂಬಂತಿದೆ. ಚಿತ್ತಾಲರ ಕೃತಿಗಳಲ್ಲಿ ಮನುಷ್ಯ ಪ್ರಜ್ಞೆ ಎಂಬುದು ಸಾಮಾಜಿಕ ಪ್ರಜ್ಞೆಗೆ ಒಂದು ಪ್ರವೇಶಿಕೆಯಾಗಿ ಗೋಚರಿಸುತ್ತದೆ. ಸಮಾಜ ಎನ್ನುವುದು ಮನುಷ್ಯನಿಂದ ಪ್ರತ್ಯೇಕವಾದ ವ್ಯವಸ್ಥೆಯೇನಲ್ಲ. ಮನುಷ್ಯರಿಂದ ಕೂಡಿದ ಒಂದು ಸಂಘಟನೆಯೇ  ಸಮಾಜ. ಈ ಕಾರಣದಿಂದಲೇ ಅರಿಸ್ಟಾಟಲ್ ಮನುಷ್ಯ ಮೂಲತ: ಸಮಾಜ ಜೀವಿ ಎನ್ನುತ್ತಾನೆ. ಪರಿಣಾಮವಾಗಿ ಸಮಾಜ ಪರಿವರ್ತನೆ ಎನ್ನುವುದು ಮನುಷ್ಯ ಪರಿವರ್ತನೆಯಲ್ಲೇ ಅಡಕವಾಗಿದೆ. ಆದ್ದರಿಂದ ಚಿತ್ತಾಲರು ತಮ್ಮ ಕೃತಿಗಳಲ್ಲಿ ನೇರವಾಗಿ ಸಮಾಜಿಕ ಪ್ರಜ್ಞೆಯನ್ನು ಪ್ರವೇಶಿಸದೇ ಮನುಷ್ಯ ಪ್ರಜ್ಞೆಯ ಕಡೆ ಹೊರಳುತ್ತಾರೆ. ನಾನೇಕೆ ಬರೆಯುತ್ತೇನೆ ಎನ್ನುವ ಪ್ರಬಂಧದಲ್ಲಿ ಚಿತ್ತಾಲರು ತಮ್ಮ ಸಾಹಿತ್ಯ ಸೃಷ್ಟಿಯ ಕಾರಣವನ್ನು ಹೀಗೆ ವಿವರಿಸುತ್ತಾರೆ ‘ನೀವೇಕೆ ಬರೆಯುತ್ತೀರಿ ಎನ್ನುವ ಪ್ರಶ್ನೆಗೆ ನನ್ನಲ್ಲಿ ನೇರವಾದ ಉತ್ತರವಿಲ್ಲ. ಬರೆಯುವ ಅನುಭವ ನನ್ನ ಬದುಕಿಗೆ ಅರ್ಥಪೂರ್ಣತೆಯನ್ನು ತಂದುಕೊಟ್ಟ ಅನುಭವಗಳಲ್ಲೇ ಅತ್ಯಂತ ಮಹತ್ವದ್ದೆಂದು ಅನಿಸಿದ್ದುಂಟು. ನನ್ನ ಹುಟ್ಟನ್ನು, ಅಸ್ತಿತ್ವವನ್ನು ಅಲ್ಲಗಳೆಯುವಷ್ಟರ ಮಟ್ಟಿಗೆ ನಿರಾಸಕ್ತವಾದ ಈ ವಿಶಾಲ ವಿಶ್ವದಲ್ಲಿ ನನ್ನ ವೈಯಕ್ತಿಕ ಇರುವಿಕೆಯ ಪ್ರಸ್ತುತತೆಯನ್ನು ಕಂಡುಕೊಳ್ಳುವ ಹಾಗೂ ಆ ಮೂಲಕ ನನ್ನ ಸಮಾಜವನ್ನು ನನಗೆ ಜೀವಂತವಾಗಿಸುವ ಕ್ರಿಯೆಯಲ್ಲಿ ನನನ್ ಬರವಣಿಗೆ ಮಹತ್ವಪೂರ್ಣವಾಗಿ ಭಾಗವಹಿಸಿದೆ ಎಂದು ನನಗನಿಸುತ್ತದೆ. ಒಟ್ಟಿನಲ್ಲಿ ನಾನು ಬರೆಯಲು ಕಾರಣ ನಾನು ನಾನೇ ಆಗಲು, ನಾನು ನಾನೇ ಆಗಿ ಉಳಿದು ಉಳಿದವರೊಂದಿಗೆ ಬೆರೆಯಲು, ಪ್ರೀತಿಸಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಿಕೊಳ್ಳಲು. ನಾನು ಬರೆಯುವುದು ಬೇರೆಯವರನ್ನು ತಿದ್ದುವುದಕ್ಕಲ್ಲ. ಆ ಯೋಗ್ಯತೆಯಾಗಲಿ, ಅಧಿಕಾರವಾಗಲಿ ನನಗಿಲ್ಲ’. ಒಟ್ಟಾರೆ ಚಿತ್ತಾಲರು ತಮ್ಮ ಬರವಣಿಗೆಯನ್ನು ತಾವೊಬ್ಬ ಮನುಷ್ಯರಾಗಿ ಉಳಿಯಲು ಅಗತ್ಯವಾದ ಸೃಜನಶೀಲ ಕ್ರಿಯೆ  ಎನ್ನುವ ಅರ್ಥದಲ್ಲಿ ಭಾವಿಸುತ್ತಾರೆ.

      ಸಾಹಿತ್ಯಕ್ಕೂ ಮತ್ತು ಮನುಷ್ಯ ಪ್ರಜ್ಞೆಗೂ ಇರುವ ಸಂಬಂಧದ ಕುರಿತು ಚಿತ್ತಾಲರಿಗಿರುವ ಒಂದು ಸ್ಪಷ್ಟ ಕಲ್ಪನೆಯನ್ನು ನಾವು ಅವರ ಅನೇಕ ಲೇಖನಗಳಲ್ಲಿ ಕಾಣಬಹುದು. ಮನುಷ್ಯನನ್ನು ಮನುಷ್ಯನನ್ನಾಗಿಸುವ ಸಾಧ್ಯತೆಗೆ ಒಳಪಡಿಸುವ ಮಾಧ್ಯಮಗಳಲ್ಲಿ ಸಾಹಿತ್ಯವೇ ಮುಖ್ಯವಾದದ್ದು ಎನ್ನುತ್ತಾರೆ ಚಿತ್ತಾಲರು. ‘ನಾವು ವಿಚಾರ ಮಾಡುವ, ಭಾವಿಸುವ ಹಾಗೂ ನೋಡುವ ಮಟ್ಟಗಳು ಎತ್ತರಗೊಂಡು ನಾವು ಮಾನವರಾಗಿ ಅರಳುವ ಸಾಧ್ಯತೆಯೇ  ಸಾಹಿತ್ಯ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯೆಂದು  ನಾನು ನಂಬುತ್ತೇನೆ. ಬದುಕಿನ ಬಗ್ಗೆ ನಾವು ಬೆಳೆಸಿಕೊಂಡ ತಪ್ಪು ಅಪೇಕ್ಷೆಗಳಿಂದಾಗಿ ಮನುಷ್ಯ ಜೀವನಕ್ಕೆ ಅರ್ಥ ತಂದುಕೊಡಬಹುದಾದಂಥ ಗಂಭೀರ ಭಾವನೆಗಳೇ ಭ್ರಷ್ಟವಾಗುತ್ತ ನಮ್ಮ ಸಾಮಾಜಿಕ ಜೀವನದ ಮೇಲೆ, ರಾಜಕೀಯ ನಡುವಳಿಕೆಯ ಮೇಲೆ ಅತ್ಯಂತ ದುಷ್ಟವಾದ, ಅನಾರೋಗ್ಯಕರವಾದ ಪರಿಣಾಮ ಉಂಟಾಗುತ್ತಿರುವ ಇಂದಿನ ಕಾಲದಲ್ಲಿ ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಕಲೆಗಳು ಬಹುಮುಖ್ಯವಾಗಿ ಸಾಹಿತ್ಯ ವಹಿಸಬಹುದಾದ ಪಾತ್ರವನ್ನು ಒತ್ತಿ ಹೇಳಿದಷ್ಟೂ ಕಡಿಮೆಯೆನಿಸುತ್ತದೆ. ಸಾಹಿತ್ಯ ಕಮಿಟ್ ಆಗಬೇಕಾದದ್ದು ಈ ದಿಕ್ಕಿನಲ್ಲೆಂದು ನಾನು ಭಾವಿಸುತ್ತೇನೆ’ ಸಾಹಿತ್ಯವನ್ನು ಮನುಷ್ಯ ಪ್ರಜ್ಞೆಯ ಹಿನ್ನೆಲೆಯಲ್ಲಿ ಚಿತ್ತಾಲರು ವಿಶ್ಲೇಷಿಸಿ ನೋಡುವ ಪರಿಯಿದು. 

      ಆಧುನಿಕತೆಯ ಈ ಯುಗದಲ್ಲಿ ಬದಲಾಗುತ್ತಿರುವ ಮನುಷ್ಯ ಸ್ವಭಾವ ಮತ್ತು ಹೆಚ್ಚುತ್ತಿರುವ ತಣ್ಣನೆಯ ಕ್ರೌರ್ಯ ಚಿತ್ತಾಲರ ಬರವಣಿಗೆಯಲ್ಲಿ ಮತ್ತೆ ಮತ್ತೆ ವಿಮರ್ಶೆಗೆ ಒಳಗಾಗುತ್ತವೆ. ಮನುಷ್ಯ ಮನುಷ್ಯನನ್ನೇ ತನ್ನ ಸ್ವಾರ್ಥಕ್ಕಾಗಿ, ಸುಖಕ್ಕಾಗಿ ಉಪಯೋಗಿಸಿಕೊಳ್ಳಲು ತೊಡಗಿರುವ ಹಿಂಸಕ ಪ್ರವೃತ್ತಿಯನ್ನು ಚಿತ್ತಾಲರು ತಮ್ಮ ಬರವಣಿಗೆಯಲ್ಲಿ ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಮಾನವೀಯ ಮೌಲ್ಯಗಳಲ್ಲಿನ ಶ್ರದ್ಧೆ ಕುಸಿಯುತ್ತಿರುವ ರೀತಿಗೆ ಅವರ ಸಾಹಿತ್ಯಿಕ ಮನಸ್ಸು ದಿಗಿಲುಗೊಳ್ಳುತ್ತದೆ. ಮನುಷ್ಯನ ಕ್ರೌರ್ಯ ಹೀಗೆ ಮುಂದುವರೆದಲ್ಲಿ ಮನುಷ್ಯ ಚೇತನ ಬದುಕಿನ ಕ್ರಿಯಾ ಕ್ಷೇತ್ರದಿಂದಲೇ ಪಲಾಯನ ಹೇಳಬಹುದಾದ ಭಯಾನಕ ಸ್ಥಿತಿ ಹುಟ್ಟಿಕೊಳ್ಳಬಹುದೆಂದು ಎಚ್ಚರಿಸುತ್ತಾರೆ.

    ಮನುಷ್ಯ ಪ್ರಜ್ಞೆ ಚಿತ್ತಾಲರ ಬರವಣಿಗೆಯಲ್ಲಿ ಒಡಮೂಡುವ ಬಗೆಗೆ ಉದಾಹರಣೆಯಾಗಿ ಅವರ ‘ಸುತ್ತು ಸುತ್ತೋ ಸುತ್ತಾಟ’ ಕಥೆಯನ್ನು ನೋಡಬಹುದು. ತನ್ನ ಹಿಂದೆ ನಡೆದು ಬರುತ್ತಿದ್ದ ಹುಡುಗ ಕಾಣೆಯಾದದ್ದಕ್ಕೂ ಅದೇ ದಾರಿಯಲ್ಲಿದ್ದ ಉಪಯೋಗದಲ್ಲಿಲ್ಲದ ಹಳೆ ಕೊಳವೆ ಬಾವಿಗೂ ಸಂಬಂಧ ಕಲ್ಪಿಸಿ ಹುಡುಗನ ಸಾವಿಗೆ ನಾನೇ ಕಾರಣನೆಂದು ಪರಿತಪಿಸುವ ದಾರಿಹೋಕನ ನೋವು ಮನುಷ್ಯ ಪ್ರಜ್ಞೆಯಾಗಿ ಓದುಗನ ಅಂತ:ಕರಣವನ್ನು ತಟ್ಟುತ್ತದೆ. ‘ಆ ದಿನ ಮನೆಯನ್ನು ತಲುಪುವ ಆತುರದಲ್ಲಿ ಬಸ್ ನಿಲ್ದಾಣದಿಂದ ನಮ್ಮ ಕಟ್ಟಡಕ್ಕೆ ಹೋಗುವ ರಾಜರಸ್ತೆಯನ್ನು ಹಿಡಿಯದೇ ಶೀಘ್ರದಾರಿಯಾದ ಸಮೀಪದ ಕಚ್ಚಾ ನೆಲದ ಬಯಲು ಭೂಮಿಯನ್ನು ಹಾದು ಹೋಗುತ್ತಿದ್ದಾಗ ಯಾವ ಸ್ಪಷ್ಟ ಕಾರಣವೂ ಇಲ್ಲದೇ ಸರಕ್ಕನೆ ಹಿಂತಿರುಗಿ ನೋಡಿದೆ. ಸುಮಾರು ಆರೇಳು ವರ್ಷದ ಹುಡುಗನೊಬ್ಬ ನನ್ನ ಬೆನ್ನ ಹಿಂದೆಯೇ  ಬರುತ್ತಿದ್ದದ್ದು ಕಣ್ಣಿಗೆ ಬಿತ್ತು. ಹುಡುಗ ನನ್ನಿಂದ ಸಾಕಷ್ಟು ದೂರದಲ್ಲಿದ್ದ. ಶಾಲೆಗೆ ಹೋಗುವ ಡ್ರೆಸ್‍ನಲ್ಲಿದ್ದ. ನಾನು ತುಳಿಯುತ್ತಿದ್ದ ದಾರಿಯಲ್ಲಿ ದಿನವೂ ದಾಟಿಯೇ  ಹೋಗಬೇಕಾಗಿದ್ದ ಉಪಯೋಗದಲ್ಲಿಲ್ಲದ ಹಳೇ ಕೊಳವೆ ಬಾವಿಯಿತ್ತು. ಅದರ ಬಾಯಿಯನ್ನು ಹರಕು ಮುರಕು ಜಂಗು ಹಿಡಿದ ಲೋಹದ ತಗಡಿನಿಂದ ಮುಚ್ಚಿದ್ದರು. ಅದನ್ನು ದಾಟುವಾಗ ಪ್ರತಿಸಾರಿ ಒಂದು ದಿನ ಈ ದರ್ವೇಶಿ ಯಾರದಾದರೂ ಜೀವಕ್ಕೆ ಅಪಾಯ ತರದೇ ಇರಲಾರದು ಎಂದು ಮನಸ್ಸಿನಲ್ಲೇ ಶಪಿಸುತ್ತಿದ್ದೆ. ಬಾವಿಯನ್ನು ದಾಟುವಾಗ ನನ್ನಹಾಗೇ ಮನಸ್ಸಿನಲ್ಲೇ ಬಾವಿಯನ್ನು ಬೈದವರು ಹಲವರಿರಬೇಕು. ಬಾವಿ ದಾಟಿಹೋದ ಕೆಲ ಹೊತ್ತಿನ ಮೇಲೆ ಬಂದ ಒಂದು ವಿಚಾರಕ್ಕೆ ಜೀವ ಝಲ್ ಎಂದು ನಡುಗಿತು. ಹಿಂತಿರುಗಿ ನೋಡಿದೆ. ಇಲ್ಲ ಹುಡುಗ ಇರಲಿಲ್ಲ. ಇಷ್ಟರಲ್ಲೇ ಬಾವಿಯನ್ನು ದಾಟಿ ಬರಬೇಕಾಗಿತ್ತು. ಇನ್ನೂ ದಾಟಿಯೇ  ಇಲ್ಲವೋ ಅಥವಾ ನಾವು ಇಷ್ಟು ದಿನ ಯಾವುದು ನಡೆಯಬಹುದೆಂದು ಹೆದರಿದ್ದೆವೋ ಅದು ಎಲ್ಲ ಬಿಟ್ಟು ಇವತ್ತು ಇದೀಗ ನನ್ನನ್ನು ಹಿಂಬಾಲಿಸುತ್ತಿದ್ದಾಗ ನಡೆದು ಹೋಯಿತೇ?’ ಎಂದು ಕ್ಷೋಭೆಗೊಳಗಾಗುವ ದಾರಿಹೋಕ ನಡೆದದ್ದರಲ್ಲಿ ನನ್ನ ಪಾತ್ರವನ್ನು ಕುರಿತು ನೀವು ಕೊಡುವ ತೀರ್ಪು ಕೊನೆಯದೆಂದು ಮೊರೆ ಹೋಗುತ್ತಾನೆ. ಕಾಣೆಯಾದ ಮಗುವಿನ ಬಗ್ಗೆ ಸುದ್ದಿ ಬರಲು ತಡವಾಗಿ ಹುಡುಗ ಬಾವಿಯಲ್ಲಿ ಬಿದ್ದಿರುವ ಬಗೆಗಿನ ಸಂಶಯ ತೀವ್ರವಾಗುತ್ತ ಹೋದಂತೆ ದಾರಿಹೋಕನ ಯಾತನೆ ತನ್ನ ಪರಾಕಾಷ್ಠೆಯನ್ನು ಮುಟ್ಟುತ್ತದೆ. ಹೀಗೆ ಘಟನೆಯೊಂದನ್ನು ಕಲ್ಪಿಸಿಕೊಂಡು ಅದರಲ್ಲಿ ತನ್ನ ಪಾತ್ರವೇನು ಎನ್ನುವ ಮಾನಸಿಕ ಕ್ಷೋಭೆಗೆ ಒಳಗಾಗುವ ಪಾತ್ರದಲ್ಲಿ ನಾವು ಕಾಣುವುದು ಮತ್ತದೇ ಮನುಷ್ಯ ಪ್ರಜ್ಞೆಯನ್ನು. ನಿವೃತ್ತಿಯ ದಿನವೇ ನಡೆಯುವ ಈ ಘಟನೆ ನಂತರದ ಹಲವು ದಿನಗಳ ಕಾಲ ಆತನ ಮಾನಸಿಕ ನೆಮ್ಮದಿಯನ್ನೇ ಕದಡುತ್ತದೆ. ನಡೆದಿದೆ ಎಂದು ಕಲ್ಪಿಸಿಕೊಂಡ ಒಂದು ಅಸಂಗತ ಘಟನೆಗೆ ನಾನು ಕಾರಣನಾದೆ ಎನ್ನುವ ವಿಚಾರ ಆತನನ್ನು ಕಾಡಲು, ಕ್ಷೋಭೆಗೆ ಒಳಪಡಿಸಲು ಅವನೊಬ್ಬ ರಕ್ತ ಮಾಂಸಗಳಿಂದ ಕೂಡಿದ ಮನುಷ್ಯನಾಗಿರುವುದೇ ಕಾರಣವಾಗುತ್ತದೆ. ಚಿತ್ತಾಲರೇ ಹೇಳುವಂತೆ ‘ಪ್ರೀತಿ, ದ್ವೇಷ, ಕ್ರೋಧ ಇವೇ ಮೊದಲಾದವು ಯಾವ ಕಾಲಕ್ಕೂ ಸಲ್ಲಬಹುದಾದ ಭಾವನೆಗಳಾದರೂ ಅವು ನಮ್ಮನ್ನು ತಟ್ಟಲು ಸಾಧ್ಯವಾಗುವುದು ನಿಜವಾದ ಮಾನವೀಯ ಯುಗದಲ್ಲಿ ಬದುಕುತ್ತಿರುವ ರಕ್ತ ಮಾಂಸಗಳ ಜೀವಂತ ವ್ಯಕ್ತಿಗಳಲ್ಲಿ ಉದ್ಭವಿಸಿದಾಗ’. 

        1971 ರಲ್ಲಿ ಪ್ರಕಟವಾದ ಮತ್ತು ಚಿತ್ತಾಲರಲ್ಲಿ ಒಂದು ರೋಮಾಂಚಕಾರಿ ಅನುಭವವಾಗಿ ಉಳಿದ ಶಿಕಾರಿ ಕಾದಂಬರಿಯಲ್ಲಿ ಮನುಷ್ಯ ಸಂಬಂಧಗಳ ವಿಶ್ಲೇಷಣೆಯಿದೆ. ‘ಶಿಕಾರಿ’ ಅಂದಿನ ದಿನಗಳಲ್ಲಿ ಮೈಯಲ್ಲಿ ಹೊಕ್ಕ ದೆವ್ವವಾಗಿತ್ತು ಎನ್ನುತ್ತಾರೆ ಚಿತ್ತಾಲರು ಕಾದಂಬರಿಯನ್ನು ಬರೆಯುವಾಗಿನ ತಮ್ಮ ಅನುಭವವನ್ನು ಕುರಿತು. ವಿಮರ್ಶಕ ಜಿ.ಎಸ್.ಆಮೂರ ಅವರು ಹೇಳುವಂತೆ ‘ಶಿಕಾರಿ ಕಾದಂಬರಿಯ ಕೇಂದ್ರ ಪ್ರತಿಮೆ ಬೇಟೆ. ಇಲ್ಲಿ ನಡೆಯುವ ಬೇಟೆ ಮನುಷ್ಯನಿಂದ ಪಶು ಪಕ್ಷಿಗಳ ಬೇಟೆಯಾಗಿರದೆ ಮನುಷ್ಯನಿಂದ ಮನುಷ್ಯನ ಬೇಟೆಯಾಗಿದೆ’. ಉತ್ತರ ಕನ್ನಡದ ಹನೇಹಳ್ಳಿಯ ನಾಗಪ್ಪ ‘ಶಿಕಾರಿ’ ಕಾದಂಬರಿಯ ಕಥಾನಾಯಕ. ಅಂತರ್ಮುಖಿ ಮತ್ತು ಭಾವಜೀವಿಯೂ ಆದ ನಾಗಪ್ಪ ನೌಕರಿಯಿಂದ ವಜಾಗೊಂಡ ಅವಧಿಯಲ್ಲಿ ಅನುಭವಿಸುವ ಒಟ್ಟು ಮಾನಸಿಕ ಕ್ಷೋಭೆ ಕಾದಂಬರಿಯ ಮುಖ್ಯ ವಸ್ತುವಾಗಿದೆ. 

          ಶಿಕಾರಿ ಕಾದಂಬರಿಯಲ್ಲಿ ಮನುಷ್ಯ ಪ್ರಜ್ಞೆಯೊಂದು ಹೇಗೆ ಪ್ರಜ್ಞಾಪೂರ್ವಕವಾಗಿ ಮೈದಾಳಿದೆ ಎನ್ನುವುದನ್ನು ಈ ಕೆಳಗಿನ ಸಾಲುಗಳು ಪುಷ್ಟೀಕರಿಸುತ್ತವೆ.

● ಈ ಮನುಷ್ಯನ ವ್ಯವಹಾರಿಕ ಜಗತ್ತಿನ ಅಸಹ್ಯವಾದ ಅಂದಗೇಡಿತನದಿಂದ ಮನಸ್ಸು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲೆಂದು ಸೃಜನಶೀಲ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಆ ದೇವರೇ ಕೊಟ್ಟಿರಬೇಕು. ಸಭ್ಯತೆಯ ಮುಖವಾಡದ ಹಿಂದೆ ಎಂತಹ ಕ್ರೌರ್ಯದ ಹಲ್ಲು ಮಸೆತ ನೋಡಿ.

● ಮನುಷ್ಯ ಎಷ್ಟೇ ಪ್ರಾವೀಣ್ಯತೆ ಹೊಂದಿದವನಾಗಿದ್ದರೂ ಅವನೊಬ್ಬ ಭಾವನಾಜೀವಿ, ವ್ಯವಹಾರ ಜ್ಞಾನವಿಲ್ಲದವನು ಎನ್ನುವ ಅಭಿಪ್ರಾಯವೇ ಇಡೀ ವ್ಯವಸ್ಥೆ ಅವನನ್ನು ವ್ಯಂಗ್ಯವಾಗಿ ನೋಡಲು ಕಾರಣವಾಗಬಹುದು. 

● ಪ್ರತಿಯೊಬ್ಬನನ್ನು ಅಪನಂಬಿಕೆಯಿಂದ ನೋಡುವುದೇ ಜಾಣತನವಾದರೆ ಬದುಕಿರಬೇಕು ಎನ್ನುವ ಅಭೀಪ್ಸೆಗೆ ಅರ್ಥವಾದರೂ ಏನು?

● ಏನಿರದಿದ್ದರೂ ಬದುಕಬಹುದೇನೋ ಆದರೆ ಪ್ರೀತಿಯಿಲ್ಲದೆ, ಗೆಳೆತನವಿಲ್ಲದೆ, ಮಾನವೀಯ ಅಂತ:ಕರಣವಿಲ್ಲದೆ, ಸಹಾನುಭೂತಿಯಿಲ್ಲದೆ ಬದುಕುವುದು ಸಾಧ್ಯವೇ ಇಲ್ಲವೇನೋ?

         ಚಿತ್ತಾಲರ ಒಟ್ಟು ಬರವಣಿಗೆಯ ಪ್ರಧಾನ ಉದ್ದೇಶ ಮನುಷ್ಯ ಬದುಕಿನ ಹುಡುಕಾಟವಾಗಿದೆ. ಹನೇಹಳ್ಳಿಯಾಗರಲಿ ಅಥವಾ ಮುಂಬಯಿ ಮಹಾನಗರವಾಗಿರಲಿ ಅವರು ಸೃಷ್ಟಿಸುವ ಪಾತ್ರಗಳು ಆಯಾ ಪರಿಸರದ ಸಂಕೀರ್ಣ ಬದುಕಿನಲ್ಲಿ ಮನುಷ್ಯತ್ವದ ಹುಡುಕಾಟಕ್ಕೆ ತೊಡಗುತ್ತವೆ. ಸಾಹಿತ್ಯದ ಮೂಲಕವೇ ಮನುಷ್ಯ ಬದುಕಿನ ಹುಡುಕಾಟಕ್ಕೆ ಚಿತ್ತಾಲರು ಕೊಡುವ ಕಾರಣ ಹೀಗಿದೆ ‘ಒಬ್ಬ ಲೇಖಕನಾಗಿ ನನಗೆ ಆಸ್ಥೆಯಿದ್ದದ್ದು ಮನುಷ್ಯನನ್ನು ಅವನ ಮೂಲಕ ಬದುಕನ್ನು ಅರಿಯುವುದರಲ್ಲಿ. ಮನುಷ್ಯನನ್ನು ಅರಿಯುವುದಕ್ಕೆ ನಮಗೆ ಲಭ್ಯವಿದ್ದ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದಾಗಿದೆ ಮಾತ್ರವಲ್ಲ ಇತರ ಮಾಧ್ಯಮಗಳಿಗೆ ಇಲ್ಲದ ಕೆಲವು ಶಕ್ತಿಗಳು ಸಾಹಿತ್ಯಕ್ಕೆ ಮಾತ್ರ ಇವೆ ಎನ್ನುವುದು ನನ್ನ ತಿಳುವಳಿಕೆಯಾಗಿದೆ, ಭರವಸೆಯಾಗಿದೆ’. ಹೀಗೆ ಮನುಷ್ಯ ಬದುಕಿನ ಹುಡುಕಾಟಕ್ಕೆ ತಮ್ಮ ಬರವಣಿಗೆಯನ್ನು ಸಶಕ್ತವಾಗಿ ದುಡಿಸಿಕೊಂಡ ಚಿತ್ತಾಲರು ಓದುಗರು ಸಾಹಿತ್ಯದ ಸೃಷ್ಟಿಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದನ್ನು ಬಯಸುತ್ತಾರೆ. ಏಕೆಂದರೆ ಸ್ಪಿನೋಝಾ ನೈತಿಕ ನಡವಳಿಕೆಯ ಬಗ್ಗೆ ಹೇಳಿದ ಮಾತನ್ನು ಆಧರಿಸಿ ಹೇಳುವುದಾದರೆ ನಾವು ಬದ್ಧರಾಗಬೇಕಾದದ್ದು ಮನುಷ್ಯರ ಹಾಗೆ ಬದುಕುವುದಕ್ಕೆ, ಪ್ರೀತಿಸುವುದಕ್ಕೆ ಮತ್ತು ಮನುಷ್ಯರಾಗುವುದಕ್ಕೆ. ಮನುಷ್ಯ ಸೃಜನಶೀಲನಾದರೆ ಆತ ಮನುಷ್ಯನಾದಂತೆಯೇ. ಏಕೆಂದರೆ ಸೃಜನಶೀಲನಾಗುವುದು, ಪ್ರೀತಿಸುವ ಸಾಮರ್ಥ್ಯವುಳ್ಳವನಾಗುವುದು, ಮನುಷ್ಯನಾಗುವುದು ಇವೆಲ್ಲವುಗಳ ಅರ್ಥ ಒಂದೇ. ಆದ್ದರಿಂದ ಸಾಹಿತ್ಯವನ್ನು ಮನುಷ್ಯತ್ವದ ಅನ್ವೇಷಣೆಗೆ ಉಪಯೋಗಿಸಿಕೊಂಡಲ್ಲಿ ಮನುಷ್ಯ ಪ್ರಜ್ಞೆಯನ್ನು ನಾವು ಪ್ರತಿಯೊಬ್ಬರಲ್ಲಿ ಕಾಣಲು ಸಾಧ್ಯವಾಗುವುದು ಎನ್ನುವ ಆಶಯ ಚಿತ್ತಾಲರದಾಗಿತ್ತು. ಈ ಸಾಧ್ಯತೆಯನ್ನು ಚಿತ್ತಾಲರ ಸಾಹಿತ್ಯದ ಕುರಿತಾದ ಇಲ್ಲಿನ ಹೇಳಿಕೆಯಲ್ಲಿ ಕಾಣಬಹುದು ‘ಮನುಷ್ಯನಿಗೆ ಮನುಷ್ಯತ್ವದ ಸಾಕ್ಷಾತ್ಕಾರವಾಗುವುದು ಕೆಲವೇ ಕೆಲವು ವಿರಳ ಕ್ಷಣಗಳಲ್ಲಿ ಮಾತ್ರ. ಅಂಥ ವಿರಳ ಕ್ಷಣಗಳಲ್ಲಿ ಸಾಹಿತ್ಯಕ್ಕೆ ಮುಖಾಮುಖಿಯಾಗುವ ಕ್ಷಣ ಕೂಡ ಒಂದು. ಆದ್ದರಿಂದ ಸಾಹಿತ್ಯದ ಪ್ರಭಾವಕ್ಕೆ ಒಳಗಾದ ವ್ಯಕ್ತಿ ಮುಕ್ತ ಮನಸ್ಸಿನ, ಜೀವಂತ ಸೃಷ್ಟಿಶೀಲ ವ್ಯಕ್ತಿ ಎನ್ನುವ ನಂಬಿಕೆ ನನ್ನದು’.

          ‘ಚಿತ್ತಾಲರ ಶಿಕಾರಿ ನಮ್ಮಲ್ಲಿ ತುಂಬುವ ಆತ್ಮವಿಶ್ವಾಸವನ್ನು, ಕಳ್ಳಗಿರಿಯಣ್ಣ ಕಥೆ ನಮಗೆ ತೋರಿಸುವ ಉಲ್ಲಾಸದ ಜಗತ್ತನ್ನು, ಪಯಣ ತೋರಿಸುವ ಸಾವನ್ನು, ಆಟ ಕತೆಯಲ್ಲಿ ಬರುವ ಬುಡಾಣ ಸಾಬರ ಉಲ್ಲಾಸವನ್ನು ಬೇರೆ ಯಾವ ಓದು ಕೂಡ ಕಟ್ಟಿಕೊಡಲಾರದು’ ಎಂದು ಲೇಖಕ ಜೋಗಿ ಚಿತ್ತಾಲರ ಒಟ್ಟು ಸಾಹಿತ್ಯವನ್ನು ಮನುಷ್ಯ ಪ್ರಜ್ಞೆಯ ಹಿನ್ನೆಲೆಯಲ್ಲಿ ತುಂಬ ಅರ್ಥಪೂರ್ಣವಾಗಿ ವಿವರಿಸುತ್ತಾರೆ. ಸಂಖ್ಯಾ ದೃಷ್ಟಿಯಿಂದ ಯಶವಂತ ಚಿತ್ತಾಲರ ಕೃತಿಗಳ ಸಂಕ್ಯೆ ತುಂಬ ಕಡಿಮೆ. ಆದರೆ ಗುಣಾತ್ಮಕವಾಗಿ ಚಿತ್ತಾಲರ ಕೃತಿಗಳಿಗೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಠ ಸ್ಥಾನವಿದೆ. ಚಿತ್ತಾಲರ ಒಟ್ಟು ಬರವಣಿಗೆಯ ಸಾರ್ಥಕತೆಯಿರುವುದು ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುವಲ್ಲಿ. ಅವರ ಕಥೆ, ಕಾದಂಬರಿಗಳ ಪಾತ್ರಗಳು ಮಾನವೀಯ ಪ್ರೀತಿ, ಅಂತ:ಕರಣವನ್ನು ಹುಡುಕುತ್ತ ಅಲೆಯುವುದು ಸಹಜವೆಂಬಂತೆ ಚಿತ್ರಿತವಾಗಿದೆ. ಚಿತ್ತಾಲರು ಸೃಷ್ಟಿಸಿದ ಕಥಾನಾಯಕ ಝೋಪಡಪಟ್ಟಿಗಳಲ್ಲಿ, ಹೂ ಮಾರುವ ಬಾಲಕಿಯಲ್ಲಿ, ರಸ್ತೆ ಬದಿಯಲ್ಲಿನ ನಿರ್ಗತಿಕರಲ್ಲಿ ಹೀಗೆ ತನಗೆ ಎದುರಾಗುವ ಪ್ರತಿಯೊಬ್ಬರಲ್ಲಿ ಮನುಷ್ಯ ಪ್ರೇಮಕ್ಕಾಗಿ ಹಂಬಲಿಸುತ್ತಾನೆ. ಚಿತ್ತಾಲರ ಕಥೆ, ಕಾದಂಬರಿಗಳ ನಾಯಕರು ವ್ಯವಹಾರಿಕ ಬದುಕಿನಲ್ಲಿ ಸೋಲನ್ನನುಭವಿಸಿದರೂ ವೈಯಕ್ತಿಕ ಬದುಕಿನಲ್ಲಿ ಗೆಲುವು ಸಾಧಿಸುವುದು ಆ ಮೂಲಕ ಮನುಷ್ಯ ಪ್ರಜ್ಞೆಯನ್ನು ಗೆಲ್ಲಿಸುವುದು ಅವರ ಒಟ್ಟು ಬರವಣಿಗೆಯ ಪ್ರಧಾನ ನೆಲೆಯಾಗಿದೆ. ಕಥೆಗಾರ ದಿವಾಕರ್ ಅವರು ಹೇಳುವಂತೆ ಚಿತ್ತಾಲರ ಕೃತಿಗಳಲ್ಲಿ ಜೀವಂತ ಮನುಷ್ಯನೊಬ್ಬನ ಬಗ್ಗೆ ಜೀವಂತ ಮನುಷ್ಯನೊಬ್ಬ ಕಿವಿಗೊಟ್ಟು ಕೇಳಿಸಿಕೊಳ್ಳಬೇಕಾದ ಜೀವನ ದರ್ಶನವಿದೆ.   

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, April 3, 2018

ಮಲಿನಗೊಂಡಿದೆ ರಾಜಕಾರಣ

           



        ಕರ್ನಾಟಕ ಈಗ ಚುನಾವಣೆಯ ಹೊಸ್ತಿಲಲ್ಲಿದೆ. ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯು ಕನಿಷ್ಠ 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸಾಧ್ಯತೆಯಿದೆ ಎಂದು ನನ್ನ ಮಿತ್ರರೊಬ್ಬರು ಆತಂಕ ವ್ಯಕ್ತಪಡಿಸಿದಾಗ ದೇಶದ ರಾಜಕಾರಣ ಚಿಂತಾಜನಕ ಸ್ಥಿತಿಯಲ್ಲಿದೆ ಎಂದೆನಿಸಿತು. ರಾಜ್ಯದಲ್ಲಿ ಮೂರು ಪ್ರಬಲ ಪಕ್ಷಗಳಿರುವುದರಿಂದ ಒಂದು ಮತ ಕ್ಷೇತ್ರದಿಂದ ಕೇವಲ ಮೂರು ಅಭ್ಯರ್ಥಿಗಳನ್ನು ಲೆಖ್ಖಕ್ಕೆ ತೆಗೆದುಕೊಂಡರೆ ಈ ಸಲದ ವಿಧಾನಸಭಾ ಚುನುವಾಣೆಗೆ ಅಭ್ಯರ್ಥಿಗಳಿಂದ ಖರ್ಚಾಗುವ ಅಂದಾಜು ಹಣ 1344 ಕೋಟಿ ರೂಪಾಯಿಗಳಾಗುತ್ತದೆ. ಹಣ ಮತ್ತು ಹೆಂಡ ನೀರಿನಂತೆ ಹರಿಯಲಿವೆ, ಮತದಾರರಿಗೆ ಬಾಡೂಟದ ಆತಿಥ್ಯ ದೊರೆಯಲಿದೆ, ಸೀರೆ ಮತ್ತು ಪಂಚೆಗಳ ವಿತರಣೆಯಾಗಲಿದೆ, ಬಣ್ಣದ ಟಿ ವಿ ಮತದಾರರ ಮನೆಗಳನ್ನು ಅಲಂಕರಿಸಲಿವೆ ಇದೆಲ್ಲ ಭಾರತದ ರಾಜಕಾರಣದಿಂದ ಮತದಾರ ಪ್ರಭುಗಳಿಗೆ ಪ್ರಾಪ್ತವಾಗುವ ಭಾಗ್ಯ. ಜೊತೆಗೆ ನಮ್ಮ ರಾಜಕಾರಣಿಗಳು ಪ್ರಣಾಳಿಕೆಯ ಮೂಲಕ ಸಾರ್ವಜನಿಕರಿಗೆ ಇಲ್ಲದ ಆಮಿಷಗಳನ್ನು ಒಡ್ಡಿ ಮತಗಳನ್ನು ಸೆಳೆಯುವ ನಾಟಕ ಮಾಡುತ್ತಾರೆ. ಒಟ್ಟಿನಲ್ಲಿ ಅಧಿಕಾರದ ಆಕಾಂಕ್ಷೆಗೆ ಒಳಗಾಗುವ ರಾಜಕಾರಣಿಗಳು ತಮ್ಮ ಹಣ ಮತ್ತು ತೋಳ್ಬಲದಿಂದ ರಾಜಕೀಯ ಕ್ಷೇತ್ರವನ್ನು ಅಪವಿತ್ರಗೊಳಿಸಿ ಸುಗುಣರು, ಪ್ರಾಮಾಣಿಕರು ಮತ್ತು ಕರ್ತವ್ಯನಿಷ್ಟರು ರಾಜಕೀಯಕ್ಕೆ ವಿಮುಖರಾಗುವಂಥ ವಾತಾವರಣವನ್ನು ನಿರ್ಮಿಸುತ್ತಿರುವರು. ಒಟ್ಟಿನಲ್ಲಿ ರಾಜಕಾರಣ  ಮಲಿನಗೊಂಡಿದೆ ಎನ್ನುವುದು ಪ್ರಾಮಾಣಿಕರ ಕೂಗಾಗಿದೆ.  

ನಿರ್ಣಾಯಕರಾಗುತ್ತಿರುವ ಅನಕ್ಷರಸ್ಥರು

ಇವತ್ತು ರಾಜಕೀಯದಲ್ಲಿ ಅಸಮರ್ಥರು, ಅಪ್ರಾಮಾಣಿಕರು ಮತ್ತು ಅದಕ್ಷರು ಚುನಾಯಿತರಾಗಿ ಅಧಿಕಾರ ನಡೆಸುತ್ತಿರುವುದಕ್ಕೆ ದೇಶದ ಬಹುಸಂಖ್ಯಾತ ಅನಕ್ಷರಸ್ಥರೆ ಪ್ರಮುಖ ಕಾರಣರಾಗಿರುವರು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನಕ್ಷರಸ್ಥರ ಮತ್ತು ಬಡವರ ಮತಗಳನ್ನು ಸುಲಭವಾಗಿ ಸೆಳೆದುಕೊಳ್ಳಬಹುದೆನ್ನುವುದು ವಾಸ್ತವಿಕ ಸತ್ಯವಾಗಿದೆ. ಹೀಗಾಗಿ ನಮ್ಮ ರಾಜಕಾರಣಿಗಳು ತಮ್ಮ ಗೆಲುವಿಗಾಗಿ ಹೆಚ್ಚು ಅವಲಂಬಿತರಾಗಿರುವುದು ಈ ಬಡ ಮತ್ತು ಅವಿದ್ಯಾವಂತ ಮತದಾರರ ಮೇಲೆಯೇ. ಬಡತನ ಮತ್ತು ನಿರುದ್ಯೋಗದಂಥ ಸಮಸ್ಯೆಗಳು ಒಂದು ವರ್ಗದ ಜನರನ್ನು ರಾಜಕಾರಣಿಗಳು ಕೊಡಮಾಡುತ್ತಿರುವ ಆಮಿಷಕ್ಕೆ ಸುಲಭವಾಗಿ ಬಲಿಯಾಗಿಸುತ್ತಿವೆ. ಹಣ ಮತ್ತು ಹೆಂಡಕ್ಕೆ ಮಾರುಹೋಗುವ ಬಡವರು ಹಾಗೂ ಅನಕ್ಷರಸ್ಥರು ಚುನಾವಣೆಯಲ್ಲಿ ಹಣಬಲವಿರುವ ಅಭ್ಯರ್ಥಿಗಳಿಗೆ ಜಯ ತಂದು ಕೊಡುತ್ತಿರುವರು. ವಿದ್ಯಾವಂತರೆಂದು ಗುರುತಿಸಿಕೊಂಡಿರುವ ಒಂದು ಇಡೀ ವರ್ಗ ಚುನಾವಣೆಯ ಸಂದರ್ಭ ಮತದಾನಕ್ಕೆ ವಿಮುಖವಾಗುತ್ತಿರುವುದರಿಂದ ರಾಜಕೀಯ ಪ್ರಜ್ಞೆಯೇ  ಇಲ್ಲದ ಅನಕ್ಷರಸ್ಥರ ಸಮೂಹ ಇವತ್ತಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ. 

ಸಾಹಿತ್ಯವಲಯದ ಓಲೈಕೆ

ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಲೇಖಕ ಮಾರಿಯೋ ವರ್ಗಾಸ್ ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು”. ಯೋಸಾನ ಒಟ್ಟು ಹೇಳಿಕೆಯ ಅರ್ಥ ಬರಹಗಾರ ರಾಜಕೀಯ ಅಥವಾ ರಾಜಕಾರಣದೊಂದಿಗೆ ರಾಜೀ ಮಾಡಿಕೊಳ್ಳದೆ ಸಮಾಜವನ್ನು ಭ್ರಷ್ಟ ರಾಜಕಾರಣದಿಂದ ಕಾಯುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಭೇಟಿಯಾಗಲು ಮನೆಗೆ ಬರುವ ವಿಚಾರ ತಿಳಿದು  ಭೇಟಿಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ದೇವನೂರ ಮಹಾದೇವರಂಥ ಸೂಕ್ಷ್ಮ ಸಂವೇದನೆಯ ಬರಹಗಾರ ರಾಜಕೀಯದಿಂದ ಅಂತರವನ್ನು ಕಾಯ್ದುಕೊಂಡು ರಾಜಕಾರಣವನ್ನು ಶುಚಿಗೊಳಿಸುವ ಕೆಲಸ ಮಾಡಬಲ್ಲ. ಆದರೆ ದುರಂತದ ಸಂಗತಿ ಎಂದರೆ ನಮ್ಮ ಬಹುಪಾಲು ಬರಹಗಾರರು ಅಧಿಕಾರ ಕೇಂದ್ರವನ್ನು ಓಲೈಸುವ ಮತ್ತು ರಾಜಕಾರಣಿಗಳನ್ನು ಹೊಗಳುವ ಬಹುಪರಾಕ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವರು. ಸಾಹಿತ್ಯ ಸಮ್ಮೇಳನದಂಥ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರು ಆಳುವ ಸರ್ಕಾರದ ಪರ ಮಾತನಾಡುವುದು, ಪ್ರಶಸ್ತಿ ಪುರಸ್ಕಾರಗಳಿಗಾಗಿ ಲಾಬಿಗಿಳಿಯುವುದು, ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕಾಗಿ ರಾಜಕಾರಣಿಗಳ ಮನೆ ಬಾಗಿಲನ್ನು ಕಾಯುವುದು ಇಂಥ ಕಾರ್ಯಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುತ್ತಿರುವ ಸಾಹಿತಿಗಳು ರಾಜಕಾರಣಕ್ಕೆ ತಮ್ಮ ಬರವಣಿಗೆ ಮೂಲಕ ಪರಿಶುದ್ಧತೆಯ ರೂಪವನ್ನು ನೀಡುವುದು ದೂರದ ಮಾತು. ಅಕಾಡೆಮಿಗಳ ಚುನಾವಣೆಗೆ ಸ್ವತ: ರಾಜಕೀಯದ ಖದರು ನೀಡಿರುವ ನಮ್ಮ ಸಾಹಿತ್ಯವಲಯದಿಂದ ಹೆಚ್ಚಿನದೇನನ್ನೂ ಅಪೇಕ್ಷಿಸುವಂತಿಲ್ಲ. ಯೇಟ್ಸ್  ತನ್ನ ಸುಪ್ರಸಿದ್ಧ ಕವಿತೆ ‘ದ’ಸೆಕೆಂಡ್ ಕಮಿಂಗ್’ನಲ್ಲಿ ಯುರೋಪಿನ ಸನ್ನಿವೇಶವನ್ನು ವರ್ಣಿಸುತ್ತ the best lack conviction and the worst are full of passionate intensity  ಎಂದು ಆತಂಕದಿಂದ ಬರೆಯುತ್ತಾನೆ. ಯೇಟ್ಸ್ ನ  ಈ ಹೇಳಿಕೆಯನ್ನು ಆಧರಿಸಿ ಹೇಳುವುದಾದರೆ ಬರಹಗಾರರು ಮೌನವಾಗಿರದೆ ಮಾತನಾಡುವುದನ್ನು ಮತ್ತು ಪ್ರತಿಭಟಿಸುವುದನ್ನು ಕಲಿಯಬೇಕು. ಅಧಿಕಾರದ  ಶಕ್ತಿಕೇಂದ್ರ ಮತ್ತು ರಾಜಕಾರಣವನ್ನು ಓಲೈಸದೆ ಬರಹಗಾರರು ಹೋರಾಟ ಮತ್ತು ಚಳವಳಿಯಂಥ ಪ್ರಕ್ರಿಯೆಯಲ್ಲಿ  ಪಾಲ್ಗೊಳ್ಳುವುದು ಸಮಾಜದ ಹಿತದ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. 

ಸಮಿತಿಯ ನಿಷ್ಕ್ರಿಯತೆ

ಟಿ.ಎನ್.ಶೇಷನ್ ಅವರ ಅಧಿಕಾರವಧಿಯ ನಂತರ ಭಾರತದ ಚುನಾವಣಾ ಸಮಿತಿಯು ಜಡವಾದಂತೆ ಕಾಣುತ್ತಿದೆ. ಭಾರತದ ಚುನಾವಣಾ ರಾಜಕಾರಣಕ್ಕೆ ಒಂದು ಪಾರದರ್ಷಕತೆಯನ್ನು ತಂದುಕೊಟ್ಟ ಹಿರಿಮೆ ಟಿ.ಎನ್.ಶೇಷನ್ ಅವರದು. ಶೇಷನ್ ಚುನಾವಣಾ ಸಮಿತಿಯ ಆಯುಕ್ತರಾಗುವುದಕ್ಕಿಂತ ಪೂರ್ವದಲ್ಲಿ ಚುನಾವಣೆಯಲ್ಲಿ ಹಣ ಮತ್ತು ತೋಳ್ಬಲದ ಅಬ್ಬರ ಬಲವಾಗಿತ್ತು. ಚುನಾವಣೆ ಎನ್ನುವುದು ಅಕ್ಷರಶ: ಹಣವಂತರ ಮತ್ತು ತೋಳ್ಬಲವಿರುವವರ ಅಖಾಡ ಎನ್ನುವ ವಾತಾವರಣ ರಾಜಕೀಯದಲ್ಲಿ ಮನೆ ಮಾಡಿತ್ತು. ಶೇಷನ್ ಆಯುಕ್ತರಾಗಿ ಬಂದವರೆ ಚುನಾವಣಾ ಸಮಿತಿಗೆ ಪರಮಾಧಿಕಾರದ ಸ್ಪರ್ಷ ನೀಡಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚಿಗೆ ಕಡಿವಾಣ ಹಾಕಿದರು. ಪ್ರತಿ ಅಭ್ಯರ್ಥಿಯು ಖರ್ಚು ಮಾಡುವ ಒಟ್ಟು ಹಣವನ್ನು ನಿಗದಿಪಡಿಸಿದ್ದಲ್ಲದೆ ಚುನಾವಣಾ ಖರ್ಚು ವೆಚ್ಚದ ಲೆಕ್ಕ ಒಪ್ಪಿಸುವ ನಿಯಮವನ್ನು ಜಾರಿಗೆ ತಂದದ್ದು ಭಾರತದ ರಾಜಕೀಯದಲ್ಲಿ ಅದೊಂದು ಮಹತ್ವದ ಸಾಧನೆಯಾಯಿತು. ಟಿ.ಎನ್.ಶೇಷನ್ ಅವರ ಪ್ರಯತ್ನದ ಪರಿಣಾಮ ದೇಶದ ರಾಜಕಾರಣದಲ್ಲಿ ಒಂದಿಷ್ಟು ಪ್ರಮಾಣಿಕತೆಯ ಗಾಳಿಯೇನೋ  ಬೀಸಿತಾದರೂ ಅವರ ನಂತರದ ಅಧಿಕಾರಿಗಳಲ್ಲಿನ ಅದಕ್ಷತೆಯ ಪರಿಣಾಮ ಇವತ್ತು ಚುನಾವಣಾ ಸಮಿತಿ ನಿಷ್ಕ್ರಿಯಗೊಂಡಿದೆ. 

ಮಠ ಮತ್ತು ಮಸೀದಿಗಳು

ಭಾರತ ಧಾರ್ಮಿಕ ನೆಲೆಯ ರಾಷ್ಟ್ರವಾಗಿರುವುದರಿಂದ ಇಲ್ಲಿ ರಾಜಕಾರಣದ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಿಗೆ ಮಠ ಮತ್ತು ಮಸೀದಿಗಳು ರಾಜಕೀಯ ಮಹತ್ವವನ್ನು ಪಡೆದುಕೊಂಡಿವೆ. ಇವತ್ತು ಮಠ ಮತ್ತು ಮಸೀದಿಗಳು ರಾಜಕೀಯ ವೇದಿಕೆಗಳಾಗಿ ರೂಪಾಂತರಗೊಂಡಿವೆ. ಮಠಗಳನ್ನು ಮತ್ತು ಮಸೀದಿಗಳನ್ನು ಓಲೈಸಿದರೆ ತಮ್ಮದೆ ಆದ ಮತಬ್ಯಾಂಕವೊಂದನ್ನು ಸೃಷ್ಟಿಸಿಕೊಳ್ಳಲು ಸಾಧ್ಯ ಎನ್ನುವುದು ನಮ್ಮ ರಾಜಕಾರಣಿಗಳಿಗೆ ಮನವರಿಕೆಯಾಗಿದೆ. ಧರ್ಮ ಮತ್ತು ಜಾತಿಗೊಂದರಂತೆ ತಲೆ ಎತ್ತುತ್ತಿರುವ ಮಠಗಳು ಇವತ್ತು ದೇಶದ ರಾಜಕೀಯದ ನಡೆಯನ್ನು ನಿರ್ಣಯಿಸುವಷ್ಟು ಪ್ರಬಲವಾಗಿವೆ. ಪುರಾಣ, ಪ್ರವಚನದಂಥ ಸಾತ್ವಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಮಠಗಳು ಮತ್ತು ಮಸೀದಿಗಳು ಚುನಾವಣೆಯ ಸಂದರ್ಭ ತಮ್ಮದೆ ನಿರ್ಧಿಷ್ಟ ಧರ್ಮದ ಮತ್ತು ಜಾತಿಯ ಅಭ್ಯರ್ಥಿಗಳ ಬೆಂಬಲಕ್ಕೆ ನಿಲ್ಲುತ್ತಿವೆ. ಧರ್ಮ ಮತ್ತು ಜಾತಿಯ ವ್ಯಾಮೋಹಕ್ಕೆ ಸಿಲುಕಿರುವ ಧಾರ್ಮಿಕ ಸಂಸ್ಥೆಗಳು ರಾಜಕಾರಣಿಗಳ ಅಪ್ರಾಮಾಣಿಕತೆ ಮತ್ತು ಅನೀತಿಯ ನಡೆಯನ್ನು ಗುರುತಿಸಿಯೂ ಅಂಥವರನ್ನು ಪ್ರೋತ್ಸಾಹಿಸುತ್ತಿರುವುದು  ದೇಶದ ಘೋರ ದುರಂತಗಳಲ್ಲೊಂದು.  

ಕುಲದ ಕಸುಬು

ಭಾರತದಲ್ಲಿ ರಾಜಕಾರಣ ಎನ್ನುವುದು ಅದೊಂದು ಸಮಾಜಸೇವೆ ಎನ್ನುವುದಕ್ಕಿಂತ ಹಣಮಾಡುವ ದಂಧೆ ಮತ್ತು ವಂಶಪಾರಂಪರ್ಯವಾಗಿ ಪ್ರಾಪ್ತವಾಗುವ ಕುಲದ ಕಸುಬಿನಂತಾಗಿದೆ. ಅನೇಕ ರಾಜಕಾರಣಿಗಳು ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳಿಗಾಗಿ ಮತ್ತು ಮೊಮ್ಮಕ್ಕಳಿಗಾಗಿ ರಾಜಕೀಯ ವೇದಿಕೆಯನ್ನು ಸಿದ್ಧ ಪಡಿಸುವುದು ಇವತ್ತಿನ ವಾಸ್ತವಿಕ ಚಿತ್ರಣವಾಗಿದೆ. ನಾಲ್ಕೈದು ದಶಕಗಳ ಕಾಲ ಶಾಸಕರಾಗಿ, ಸಂಸದರಾಗಿ ಮತ್ತು ಮಂತ್ರಿಗಳಾಗಿ ಅಧಿಕಾರ ಅನುಭವಿಸುವ ರಾಜಕಾರಣಿಗಳು ತಮ್ಮ ನಂತರ ಮಕ್ಕಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡುತ್ತಿರುವುದು ಬಹುದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶದ ವಿಪರ್ಯಾಸಗಳಲ್ಲೊಂದು. ಒಂದೇ ಕುಟುಂಬದಲ್ಲಿ ಇಬ್ಬರು ಅಥವಾ ಮೂರು ಶಾಸಕರು, ಸಂಸದರು, ಮಂತ್ರಿಗಳಿರುವುದು ಸಹಜ ಚಿತ್ರಣವಾಗಿದೆ. ಪ್ರಜಾಪ್ರಭುತ್ವದಡಿಯಲ್ಲಿ ವಂಶಪಾರಂಪರ್ಯದ ರಾಜಾಡಳಿತವನ್ನು ಅಸ್ತಿತ್ವಕ್ಕೆ ತರುತ್ತಿರುವ ನಮ್ಮ ರಾಜಕಾರಣಿಗಳು ರಾಜಕೀಯವನ್ನು ಕುಲದ ಕಸುಬಾಗಿ ರೂಪಾಂತರಿಸುತ್ತಿರುವಾಗ ಪ್ರಾಮಾಣಿಕತೆ ಮತ್ತು ನೈತಿಕತೆಯ ನೆಲೆಯಲ್ಲಿ ರಾಜಕೀಯ ಮಾಡಬೇಕೆನ್ನುವ ಸುಶಿಕ್ಷಿತರು ಭ್ರಮನಿರಸನಗೊಂಡಿರುವರು. 

ವಿದ್ಯಾವಂತರ  ಗೈರು

ರಾಜಕೀಯಕ್ಕೆ ವಿದ್ಯಾವಂತರು ಮತ್ತು ಸುಶಿಕ್ಷಿತರು ಪ್ರವೇಶಿಸುತ್ತಿಲ್ಲವೇಕೆ ಎನ್ನುವುದು ಬಹುಮುಖ್ಯ ಪ್ರಶ್ನೆಯಾಗಿದೆ. ಜೊತೆಗೆ ಸುಶಿಕ್ಷಿತರೆಂದು ಗುರುತಿಸಿಕೊಂಡಿರುವ ಒಂದು ವರ್ಗ ಚುನಾವಣೆಯ ಸಂದರ್ಭ ಮತದಾನದಂಥ ಪವಿತ್ರ ಕಾರ್ಯದಲ್ಲಿಯೂ ಪಾಲ್ಗೊಳ್ಳುತ್ತಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಿದ್ಯಾವಂತರು ರಾಜಕಾರಣಕ್ಕೆ ಬೆನ್ನು ಮಾಡಿ ನಿಂತಿರುವುದರಿಂದ ಇವತ್ತು ಅನಕ್ಷರಸ್ಥ ರಾಜಕಾರಣಿಗಳು ದೇಶದ ಕಾನೂನನ್ನು ರೂಪಿಸುವ ನಿರ್ಣಾಯಕ ಸ್ಥಾನದಲ್ಲಿರುವರು. ಶಿಕ್ಷಣ, ವೈದ್ಯಕೀಯ, ಕಾನೂನು, ಆರೋಗ್ಯದಂಥ ಕ್ಷೇತ್ರಗಳು ಅನಕ್ಷರಸ್ಥ ಜನಪ್ರತಿನಿಧಿಗಳ ಕೈಗೆ ಸಿಲುಕಿ ಭ್ರಷ್ಟಾಚಾರದ ಕೂಪಗಳಾಗಿವೆ. ವಿದ್ಯಾವಂತರು ಮತದಾನದ ಪ್ರಕ್ರಿಯೆಯಲ್ಲಿ  ಪಾಲ್ಗೊಳ್ಳುತ್ತಿಲ್ಲವಾದುದರಿಂದ ಚುನಾವಣೆಯ ಸೋಲು ಗೆಲುವಿನಲ್ಲಿ ಅವಿದ್ಯಾವಂತ ಮತದಾರರ ಮತಗಳೇ ನಿರ್ಣಾಯಕವಾಗುತ್ತಿವೆ. ಮತದಾನದ ದಿನದಂದು ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಹೋಗುವ, ಮನೆ ಸ್ವಚ್ಛಗೊಳಿಸುವ, ಸುತ್ತಲಿನ ಕಸ ತೆಗೆಯುವ ಚಟುವಟಿಕೆಗಳಲ್ಲಿ ಧನ್ಯತೆ ಅನುಭವಿಸುವ ಸುಶಿಕ್ಷಿತರು ಮತ ಕೇಂದ್ರಗಳ ಕಡೆ ಮಾತ್ರ ತಲೆಹಾಕಲಾರರು. ಆಶ್ಚರ್ಯವೆಂದರೆ ಇದೇ ಸುಶಿಕ್ಷಿತ ವರ್ಗದವರು ಅತ್ಯಂತ ಪ್ರಾಮಾಣಿಕರಾಗಿ ಉದ್ದನೆಯ ಸಾಲಿನಲ್ಲಿ ನಿಂತು ವಿದ್ಯುತ್, ನೀರು, ದೂರವಾಣಿ ಬಿಲ್ಲನ್ನು ಪಾವತಿಸುತ್ತಾರೆ, ಸರ್ಕಾರಕ್ಕೆ ಮೋಸ ಮಾಡದೆ ಕಾಲ ಕಾಲಕ್ಕೆ ತೆರಿಗೆ ಕಟ್ಟುತ್ತಾರೆ ಮತ್ತು ತರಕಾರಿ, ದಿನಸಿ ಪದಾರ್ಥ ಖರೀದಿಸುವಾಗ ಗಂಟೆಗಟ್ಟಲೆ ಚೌಕಾಸಿ ಮಾಡುತ್ತಾರೆ.

ಒಟ್ಟಿನಲ್ಲಿ ದೇಶದ ರಾಜಕಾರಣವನ್ನು ಪರಿಶುದ್ಧಗೊಳಿಸುವ ಕೆಲಸ ಇವತ್ತಿನ ತುರ್ತು ಅಗತ್ಯವಾಗಿದೆ. ಸುಶಿಕ್ಷಿತರು, ವಿದ್ಯಾವಂತರು, ರಾಷ್ಟ್ರ ಪ್ರೇಮಿಗಳು, ಪ್ರಾಮಾಣಿಕರು ರಾಜಕೀಯಕ್ಕೆ ಪ್ರವೇಶಿಸಬೇಕು. ರಾಜಕೀಯ ಎನ್ನುವುದು ಹಣಗಳಿಸುವ ಉದ್ದಿಮೆಯಾಗದೆ, ಕುಟುಂಬದ ಕಸುಬಾಗದೆ ಅದೊಂದು ಸಮಾಜ ಸೇವೆ ಎನ್ನುವ ಮನೋಭಾವ ಬೆಳೆಯಬೇಕು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಅತ್ಯುತ್ತಮ ರಾಜಕಾರಣಿಗಳನ್ನು ರೂಪಿಸುವ ಕೇಂದ್ರಗಳಾಗಬೇಕು.  ಜಯಪ್ರಕಾಶ ನಾರಾಯಣ, ಲೋಹಿಯಾ, ವಾಜಪೇಯಿ ಅವರಂಥ ಸಮರ್ಥ ಮತ್ತು ನಿಸ್ವಾರ್ಥ ರಾಜಕಾರಣಿಗಳು ನಮ್ಮ ವಿದ್ಯಾರ್ಥಿ ಸಮುದಾಯದಿಂದ ಬೆಳೆದು ಬರಬೇಕು. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

    

Thursday, March 8, 2018

ಭೈರಪ್ಪನವರ ಕಾದಂಬರಿಗಳಲ್ಲಿ ನೈತಿಕ ಪ್ರಜ್ಞೆ




ಎಸ್. ಎಲ್. ಭೈರಪ್ಪ ಕನ್ನಡದ ಅನನ್ಯ ಬರಹಗಾರ. ಅವರು ತಮ್ಮ ಕಾದಂಬರಿಗಳ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ನೀಡುತ್ತಲೇ ಬಂದಿರುವರು. ಓದುಗನಾಗಿ ನನಗೆ ಭೈರಪ್ಪನವರ ಕಾದಂಬರಿಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಮತದಾನ, ಗೃಹಭಂಗ, ದಾಟು, ಪರ್ವ, ಮಂದ್ರ, ಸಾಕ್ಷಿ, ಸಾರ್ಥ, ವಂಶವೃಕ್ಷ  ಮತ್ತು ಯಾನ ಕಾದಂಬರಿಗಳ ಹಾಗೂ ಅವರ  ಆತ್ಮಕಥನ 'ಭಿತ್ತಿ' ಯ ಓದು ನನ್ನ ಅರಿವಿನ ವ್ಯಾಪ್ತಿಯನ್ನು ಒಂದಿಷ್ಟು ವಿಸ್ತರಿಸುವಂತೆ ಮಾಡಿದೆ ಎನ್ನುವುದನ್ನು ನಾನು ಅತ್ಯಂತ ವಿನಮ್ರನಾಗಿ ಒಪ್ಪಿಕೊಳ್ಳುತ್ತೇನೆ. ಭೈರಪ್ಪನವರ ಕಾದಂಬರಿಗಳನ್ನು ಓದಿದ ಮೇಲೆ ಕಥೆಯ ವಸ್ತುವಾಗಿ ನೈತಿಕತೆಗೆ ಲೇಖಕರು ಹೆಚ್ಚು ಒತ್ತು ಕೊಟ್ಟಿದ್ದು ಅದು ಓದುಗರ ಅನುಭವಕ್ಕೆ ಬರುವ ಮುಖ್ಯ ಸಂಗತಿಗಳಲ್ಲೊಂದು. ವಿಶೇಷವಾಗಿ ಅವರ ಸಾಕ್ಷಿ, ಮಂದ್ರ ಮತ್ತು ಯಾನ ಕಾದಂಬರಿಗಳಲ್ಲಿ ಭೈರಪ್ಪನವರು ನೈತಿಕ ಬದುಕನ್ನು ಕುರಿತು ಹೆಚ್ಚು ಹೆಚ್ಚು ಪ್ರಾಸ್ತಾಪಿಸಿರುವರು ಎನ್ನುವುದು ಈ ಮೂರು ಕಾದಂಬರಿಗಳನ್ನು ಓದಿದಾಗ ನನ್ನ ಅನುಭವಕ್ಕೆ ಬಂದ ಸಂಗತಿ. ಅವರ ಸಾಕ್ಷಿ ಮತ್ತು ಮಂದ್ರ ಕಾದಂಬರಿಗಳಲ್ಲಿ ಮೊದಮೊದಲು ಅನೈತಿಕತೆ ವಿಜೃಂಭಿಸಿದರೂ ಅದು  ನೈತಿಕತೆಯೊಂದಿಗೆ ಘರ್ಷಣೆಗಿಳಿದು ಕೊನೆಗೂ ತನ್ನ ಸೋಲನ್ನೊಪ್ಪಿಕೊಳ್ಳುತ್ತದೆ. ಅವರ ಇತ್ತೀಚಿನ ಕಾದಂಬರಿ 'ಯಾನ' ದಲ್ಲಿ ಈ ನೆಲದ ಪಾರಂಪರಿಕ ಮೌಲ್ಯಗಳನ್ನು ಎತ್ತಿಹಿಡಿದಿರುವರು. 

ಸಾಕ್ಷಿ: ಸೌಂದರ್ಯ ಮತ್ತು ಸಂಸ್ಕಾರ 


        'ಎಂದಾದರೂ ಆತ್ಮಶೋಧ ಮಾಡಿಕೊಂಡಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇರಲಿಲ್ಲ. ಹೆಂಡತಿ ಸತ್ತ ಮೇಲೆ ಮನಸ್ಸನ್ನೆಲ್ಲ ಒಳಕ್ಕೆ ಅಂದರೆ ಒಳಗೆ ಇದೆ ಅಂತ ನೀವೆಲ್ಲ ಹೇಳ್ತಿರಲ್ಲ ಆ ಆತ್ಮದೊಳಕ್ಕೆ ತಿರುಗಿಸಿ ಬಿಟ್ಟರು. ಆಗ ಅವರಿಗೆ ಇನ್ನೂ ನಲವತ್ತು ವರ್ಷ. ನನ್ನ ಹಾಗೆ ಹೊಸ ಹೊಸ ಸುಖವನ್ನರಸುಕ್ಕೆ ನಾಚಿಕೆಯಾದರೆ ಹೋಗಲಿ ಇನ್ನೊಂದು ಮದುವೆಯಾದರೂ ಮಾಡಿಕೊಂಡಿದ್ದರೆ ಸದಾ ಒಳಗೆ ನೋಡಿಕೊಳ್ಳುವ ರೋಗ ತಪ್ಪುತ್ತಿತ್ತು. ಕಠಿಣ ಬ್ರಹ್ಮಚರ್ಯದ ಮೇಲೆ ಜೀವನ ನಿಲ್ಲಿಕೊಂಡಿರೋರಿಗೆ ಆತ್ಮಹತ್ಯೆ ಬಿಟ್ಟು ಬೇರೆ ಯಾವ ದಾರಿ ಇದೆ? ನಿಮಗೂ ಅಷ್ಟೇ ಹೆಂಡತಿ ಸತ್ತಾಗ ಕರಾರುವಾಕ್ಕ್ ಇಪ್ಪತ್ತೆಂಟುವರೆ ವರ್ಷ. ನಿಮ್ಮ ಗಾಂಧಿ ಹೇಳಿದ ಅಂತ ಬ್ರಹ್ಮಚರ್ಯಕ್ಕೆ ನಿಂತಿರಿ. ಮದುವೆ ಬೇಡ ಮೇಯುಕ್ಕೆ ಹೊರಟಿದ್ದರೆ ಎಷ್ಟು ಹುಲ್ಲು ಸಿಕ್ತಿತ್ತು? ಏನೂ ಮಾಡಲಿಲ್ಲ. ಸಾಧಿಸಿದ್ದಾದರೂ ಏನು? ಸ್ವಾರ್ಥ. ಮಗನನ್ನು ಬೆಳೆಸಿ ಮದುವೆ ಮಾಡಿ ಎಲ್ಲವನ್ನೂ ಅವನಿಗೊಪ್ಪಿಸಿ ಅವನ ಮನೆಯ ಸಂಬಳವಿಲ್ಲದ ಆಳಾಗಿದೀರಿ. ಹೆಂಗಸಿನ ಸವಾಸ ಮಾಡಿದ್ದರೂ ಆ ಕೆಲಸ ಮಾಡಭೌದಾಗಿತ್ತು. ವೃತವೂ ಇಲ್ಲ ಸುಖವೂ ಇಲ್ಲ. ನಾನು ಹೇಳ್ತೀನಿ ಕೇಳಿ ಯಾವನು ಸಮೃದ್ಧವಾಗಿ ಈ ಸುಖ ಪಡ್ತಾನೆಯೋ ಅವನಲ್ಲಿ ಔದಾರ್ಯವಿರುತ್ತೆ. ಬ್ರಹ್ಮಚರ್ಯ ಪಾಲಿಸೋನಲ್ಲಿ ಕಾಠಿಣ್ಯವಿರುತ್ತೆ. ನಿಮಗೆ ಯಾವತ್ತು ಆಶೆಯಾಗುತ್ತೋ ನನ್ನ ಹುಡಿಕ್ಕಂಡು ಬನ್ನಿ. ನೋಡಿದ ತಕ್ಷಣ ನಿಮಗೇ ಇಪ್ಪತ್ತೆರಡರ ಪ್ರಾಯ ಮರುಕಳಿಸುವ ಮರುಮಾತಿಲ್ಲದೆ ಪರಮಶ್ರದ್ಧೆಯಿಂದ ನೈವೇದ್ಯ ಮಾಡಿಕೊಳ್ಳುವಂಥವಳನ್ನು ಕೊಡಿಸುತಿನಿ' ಸಾಕ್ಷಿ ಕಾದಂಬರಿಯ ಮಂಜಯ್ಯನ ಒಟ್ಟು ವ್ಯಕ್ತಿತ್ವವನ್ನು ಹಿಡಿದಿಡುವ ಸಾಲುಗಳಿವು. ಎತ್ತರದ ನಿಲುವಿನ, ಕೆಂಪು ಮಿಶ್ರಿತ ಬಿಳುಪು ಬಣ್ಣದ, ದೃಢಕಾಯದ ಲಕ್ಷಣವಂತ ಮಂಜಯ್ಯನದು ಜೀವನವಿರುವುದೇ ಸುಖ ಪಡಲು ಎನ್ನುವ ಮನೋಭಾವ. ಪ್ರಾಯ ಅರಳುವ ಹೊತ್ತಿನಲ್ಲೇ ಪರಮೇಶ್ವರಯ್ಯನವರಂಥ ಸಾತ್ವಿಕ ವ್ಯಕ್ತಿಯ ಐದು ಹೆತ್ತು ಮೂರನ್ನು ಉಳಿಸಿಕೊಂಡಿರುವ ಮೂವತ್ತೈದು ವರ್ಷದ ಪತ್ನಿ ಜಾನಕಿಯೊಂದಿಗೆ ಕಾಮ ಸಂಬಂಧವನ್ನು ಬೆಳೆಸುವ ಮಂಜಯ್ಯ ಮುಂದೊಂದುದಿನ ಅದೇ ಜಾನಕಿಯ ಮಗಳು ಸಾವಿತ್ರಿಯನ್ನು ಮದುವೆಯಾಗುತ್ತಾನೆ. ಪ್ರಾಯದ ಸೌಂದರ್ಯವತಿಯಾದ ಪತ್ನಿಯಿದ್ದೂ ಮಂಜಯ್ಯನಿಗೆ ಹೊರಗೆ ಮೇಯುವ ಖಯಾಲಿ. ಅವನ ಈ ಖಯಾಲಿಗೆ ಊರಿನ ಅನೇಕ ಹೆಣ್ಣು ಮಕ್ಕಳು ಬಲಿಯಾಗುತ್ತಾರೆ. ತೋಟದ ಮಧ್ಯದಲ್ಲಿರುವ ಗುಡಿಸಿಲಿನಲ್ಲಿ ನಾಗಿ, ಚಂದ್ರಿ, ರಂಗಿಯರಂಥ ನೂರಾರು ಹೆಣ್ಣುಗಳೊಂದಿಗೆ ಸುಖವನ್ನನುಭವಿಸುವ ಮಂಜಯ್ಯನಿಗೆ ತಾನಾಗಿಯೇ ಒಲಿಯದ ಸರೋಜಳಂಥ ಹೆಣ್ಣಿನ ಮೇಲೂ ಆಸೆ. ಗಂಡನ ಈ ದುರ್ಬುದ್ಧಿಯ ಅರಿವಾಗಿ ಸಾವಿತ್ರಿ ಮಂಜಯ್ಯನಿಂದ ದೂರಾಗುತ್ತಾಳೆ. ದಾಂಪತ್ಯವೆಂದರೆ ಅದು ಹೆಂಡತಿಯೊಂದಿಗೆ ಮಲಗುವುದು ಮಾತ್ರ ಎಂದು ನಿಶ್ಚಯಿಸಿದ್ದ ಮಂಜಯ್ಯ ಮುರಿದು ಹೋದ ಸಂಬಂಧವನ್ನು ಮತ್ತೆ ಬೆಸೆಯಲು ಮುಂದಾಗುವುದಿಲ್ಲ.

       ಈ ನಡುವೆ  ಕಂಡವರ ತೋಟಕ್ಕೆ ನುಗ್ಗಿ ತೆಂಗಿನ ಕಾಯಿ ಕದಿಯುವ ಕಳ್ಳ ಕಂಚಿಯ ಪತ್ನಿ ಲಕ್ಕುವಿನ ಮೇಲೆ ಮಂಜಯ್ಯನಿಗೆ ಮನಸಾಗುತ್ತದೆ. ಹೇಗಾದರೂ ಅವಳನ್ನು ಕೂಡಬೇಕೆಂಬ ಆಸೆಯಿಂದ ಕಂಚಿಯನ್ನು ತನ್ನ ತೋಟಕ್ಕೆ ಕದಿಯಲು ಬರುವಂತೆ ಪುಸುಲಾಯಿಸುತ್ತಾನೆ. ಅದೊಂದು ರಾತ್ರಿ ತೋಟಕ್ಕೆ ಕಾಲಿಡುವ ಕಂಚಿಯನ್ನು ಮಂಜಯ್ಯ ಹೊಂಚುಹಾಕಿ ಕೊಲೆ ಮಾಡುತ್ತಾನೆ. ಅದು ಕೊಲೆಯಲ್ಲ ಕಂಚಿ ಮರದಿಂದ ಬಿದ್ದು ಸತ್ತನೆಂಬ ಸುಳ್ಳನ್ನು ಅವನ ಹೆಂಡತಿ ಲಕ್ಕುವನ್ನು ನಂಬಿಸುವಲ್ಲಿ ಯಶಸ್ವಿಯಾಗುವ ಮಂಜಯ್ಯನಿಗೆ ಲಕ್ಕು ತನ್ನನ್ನೇ ಸಮರ್ಪಿಸಿಕೊಳ್ಳುತ್ತಾಳೆ. ಮಂಜಯ್ಯನಿಂದ ತಾಳಿ ಕಟ್ಟಿಸಿಕೊಂಡು ಹೊಸ ಬದುಕಿಗೆ ಕಾಲಿಡಬೇಕೆನ್ನುವ ಲಕ್ಕುವಿನ ಆಸೆ ಕೊನೆಗೂ ಆಸೆಯಾಗಿಯೇ ಉಳಿಯುತ್ತದೆ. ತೊರೆದು ಹೋದ ಪತ್ನಿಯನ್ನು ಎಷ್ಟೋ ವರ್ಷಗಳ ನಂತರ ಅವಳ  ಮನೆಗೆ ನುಗ್ಗಿ ಅತ್ಯಾಚಾರ ಮಾಡುವ ಮಂಜಯ್ಯನಿಗೆ ಹೆಣ್ಣೆಂದರೆ ಭೋಗದ ವಸ್ತು. ಲಕ್ಕುವಿನ ಮಗಳು ಲತಾಳನ್ನು ಅನುಭವಿಸಿ ಅವಳ ಹೊಟ್ಟೆ ತುಂಬಿಸುವ ಮಂಜಯ್ಯ ತನ್ನ ದುರಂತಕ್ಕೆ ತಾನೇ ನಾಂದಿ ಹಾಡುತ್ತಾನೆ. ಮಗಳು ಲತಾ ಮಂಜಯ್ಯನಿಂದ ಬಸಿರಾದ ಸುದ್ದಿ ತಿಳಿದು ಲಕ್ಕು ಕಂಗಾಲಾಗುತ್ತಾಳೆ. ಮಂಜಯ್ಯನಂಥ ಕ್ರಿಮಿಯಿಂದ ಸಮಾಜಕ್ಕೆ ಕೇಡು ಎಂದರಿತ ಲಕ್ಕು ಅವನ ತೋಟದ ಮನೆಗೆ ನುಗ್ಗಿ ಕಾಮಕೇಳಿಗೆ ಆಹ್ವಾನಿಸಿ ಅವನ ಜನನಾಂಗವನ್ನೇ ಕೊಯ್ದು ಪೋಲೀಸರಿಗೆ ಶರಣಾಗುತ್ತಾಳೆ. ಪೋಲೀಸರು ಬಂದು ನೋಡುವಷ್ಟರಲ್ಲಿ ಕೊಯ್ದ ಜಾಗದಿಂದ ರಕ್ತ ಸುರಿದು ಮಂಜಯ್ಯ ಹೆಣವಾಗಿರುತ್ತಾನೆ.

       ಹೆಣ್ಣುಗಳನ್ನು ಅನುಭವಿಸಿ ಬೀಸಾಕುವ ಮಂಜಯ್ಯನೊಳಗಿನ ಅನೈತಿಕತೆಗೆ ಪ್ರಾರಂಭದಲ್ಲಿ ಗೆಲುವು ದೊರೆತರೂ ಅವನ ಸಾವಿನೊಂದಿಗೆ ಕೊನೆಗೂ ನೈತಿಕತೆ ಮೇಲುಗೈ ಸಾಧಿಸುತ್ತದೆ. ಮಂಜಯ್ಯನ ಅನೈತಿಕತೆಯಲ್ಲಿ ಪಾಲುದಾರರಾದ ಜಾನಕಿ, ಲಕ್ಕು, ಲತಾರ ಬದುಕು ಸಹ ದುರಂತದಲ್ಲಿ ಕೊನೆಗೊಳ್ಳುತ್ತದೆ. ಉಚ್ಚ ಕುಲದ ಹಿನ್ನೆಲೆ, ಆಕರ್ಷಿಸುವ ರೂಪ, ಶ್ರೀಮಂತಿಕೆ, ಜಾಣತನ ಇದ್ದೂ ಅವನೊಳಗಿನ ಲಂಪಟತನದಿಂದ ಮಂಜಯ್ಯನ ಬದುಕು ದುರಂತದಲ್ಲಿ ಅಂತ್ಯಗೊಳ್ಳುತ್ತದೆ. ತನ್ನ ಲಂಪಟ ಗುಣವನ್ನು ಸಂಬಂಧದಲ್ಲಿ ಅಣ್ಣನಾಗುವ ಸತ್ಯಪ್ಪನಿಗೂ ಕಲಿಸಲು ಹೋಗುವ ಮಂಜಯ್ಯ ಒಂದು ಹಂತದಲ್ಲಿ ಗೆದ್ದೆನೆಂದು ಸಂಭ್ರಮಿಸಿದರೂ ಕೊನೆಗೂ ಸೋಲುತ್ತಾನೆ. ಸತ್ಯಪ್ಪನ ಪಾತ್ರದ ಮೂಲಕ ಲೇಖಕರು ನೈತಿಕತೆಯನ್ನು ಅನೈತಿಕತೆಯೊಂದಿಗೆ ಘರ್ಷಣೆಗಿಳಿಸುತ್ತಾರೆ.

      ಪ್ರಾಯದಲ್ಲಿ ಹೆಂಡತಿಯನ್ನು ಕಳೆದುಕೊಂಡು ಇದ್ದೊಬ್ಬ ಮಗನಿಗಾಗಿ ಬದುಕುತ್ತಿರುವ ಸತ್ಯಪ್ಪನದು ಬ್ರಹ್ಮಚರ್ಯದ ಬದುಕು. ಜೊತೆಗೆ ಗಾಂಧೀಜಿಯ ಅನುಯಾಯಿ ಆತ. ಸತ್ಯ, ಪ್ರಾಮಾಣಿಕತೆಯನ್ನೇ ಬದುಕಿನ ಬಹುಮುಖ್ಯ ಧ್ಯೇಯವಾಗಿಸಿಕೊಂಡು ಬದುಕುತ್ತಿರುವ ಸತ್ಯಪ್ಪನಿಗೆ ಡ್ರಾಮಾ ಆರ್ಟಿಸ್ಟ್ ಚಂದ್ರಿಕಾಳನ್ನು ಅನುಭವಿಸುವಂತೆ ಮಂಜಯ್ಯ ಪುಸುಲಾಯಿಸುತ್ತಾನೆ. ಮಂಜಯ್ಯನ ಆಹ್ವಾನವನ್ನು ನಿರಾಕರಿಸುವ ಸತ್ಯಪ್ಪನಿಗೆ ಊರಿಗೆ ಮರಳಿದ ಮೇಲೆ ಚಂದ್ರಿಕಾಳ ನೆನಪು ಕಾಡತೊಡಗುತ್ತದೆ. ಬಯಕೆ ಉತ್ಕಟವಾದಂತೆ ಮಂಜಯ್ಯನನ್ನು ಹುಡುಕಿಕೊಂಡು ಹೋಗುವ ಸತ್ಯಪ್ಪ ಅವನ ತೋಟದ ಮನೆಯಲ್ಲಿ ನಾಗಿಯನ್ನು ಕೂಡುತ್ತಾನೆ. ಯಾವ ಸುಖಕ್ಕಾಗಿ ಆತ ಮೂರು ತಿಂಗಳುಗಳಿಂದ ಹಂಬಲಿಸುತ್ತಿದ್ದನೋ ಯಾವ  ಹೆಣ್ಣಿನ ನಗ್ನ ಶರೀರ ಕಣ್ಣೆದುರು ಬಂದು ನಿಂತು ಕಾಡುತ್ತಿತ್ತೋ ಅದನ್ನು ಕಂಡು ಅನುಭವಿಸಿದ ಕ್ಷಣ ಸತ್ಯಪ್ಪನಿಗೆ ಸಂಪೂರ್ಣ ಶೂನ್ಯ ಕವಿದಂತಾಗುತ್ತದೆ. ಹುಚ್ಚಿನ ಮೂಲ ಕಳೆದು ನಿರ್ವೇದ ಸ್ಥಿತಿಯನ್ನು ಮುಟ್ಟಿದ ಭಾವ ಕವಿಯುತ್ತದೆ. ನಾಚಿಕೆಯಾಗಿ ಆ ಕ್ಷಣವೇ ಅಲ್ಲಿಂದ ಹೊರನಡೆಯುತ್ತಾನೆ. ತಾನು ಮಾಡಿದ್ದು ಹೀನ ಕೆಲಸ ಎಂದೆನಿಸಿ ನೇಣು ಹಾಕಿಕೊಳ್ಳಲು ನಿಶ್ಚಯಿಸುತ್ತಾನೆ. ಸಾವಿನ ಅಂಚನ್ನು ಮುಟ್ಟಿ ಹೊರಬರುವ ಸತ್ಯಪ್ಪ ಸಾವಿತ್ರಿಗೆ ನಡೆದದ್ದೆಲ್ಲವನ್ನು ಹೇಳಿ ಮನಸ್ಸನ್ನು ಹಗುರಾಗಿಸಿಕೊಳ್ಳುವನು. ಊರಿಗೆ ಮರಳುವ ಸತ್ಯಪ್ಪ ಭೂಮಿ ಇಲ್ಲದ ಕುಟುಂಬಗಳಿಗೆ ಆಸರೆಯಾಗುವ ಜೊತೆಗೆ ಮಂಜಯ್ಯನಿಂದ ಮೋಸ ಹೋದ ಸಾವಿತ್ರಿಯ ಬಾಳಿಗೂ ಬೆಳಕಾಗುವನು. ಮಂಜಯ್ಯನ ಮಾತುಗಳಿಂದ ಪ್ರೇರಿತನಾಗಿ ಸತ್ಯಪ್ಪ ಎಡವಿದರೂ ಅವನೊಳಗಿನ ಸಂಸ್ಕಾರ ಅವನನ್ನು ಎಚ್ಚರಿಸಿ ಆತ್ಮಾವಲೋಕನಕ್ಕೆ ಇಳಿಸುತ್ತದೆ. ಗಾಂಧಿ ಚಳುವಳಿ, ಗುರುಕುಲದಲ್ಲಿನ ವ್ಯಾಸಂಗ, ಗಾಂಧಿ ಪುಸ್ತಕಗಳ ಓದು, ಸಾಬರಮತಿ ಆಶ್ರಮದ ಭೇಟಿ, ಗ್ರಾಮೋದ್ಧಾರದ ಕನಸು ಈ ಎಲ್ಲ ಹಿನ್ನೆಲೆ ಸತ್ಯಪ್ಪನನ್ನು ಸಂಸ್ಕಾರವಂತನನ್ನಾಗಿಸಿ ನೈತಿಕತೆ ಮತ್ತು ಅನೈತಿಕತೆಯ ನಡುವಣ ವ್ಯತ್ಯಾಸದ ಅರಿವು ಮೂಡಿಸುತ್ತದೆ. ಶುದ್ಧ ಸಂಸ್ಕಾರದ ಹಿನ್ನೆಲೆ ಇಲ್ಲದ ಮಂಜಯ್ಯನಿಗೆ ತನ್ನ ಲಂಪಟತನವೇ ಸರಿ ಎನಿಸಿ ಅನೈತಿಕತೆ ಎನ್ನುವ ಪಾಪಕೂಪದೊಳಗೆ ಅವನ ಬದುಕು ಮುಳುಗುತ್ತದೆ. ಮಂಜಯ್ಯನ ಪಾತ್ರದ ಮೂಲಕ ಅನೈತಿಕತೆ ಅವಸಾನಗೊಂಡರೆ ಸತ್ಯಪ್ಪನ ಮೂಲಕ ನೈತಿಕತೆ ಗೆಲುವು ಸಾಧಿಸುತ್ತದೆ.

ಮಂದ್ರ: ಪಾಂಡಿತ್ಯ ಮತ್ತು ಸಂಸ್ಕಾರ 


 'ನನ್ನಲಿರುದನ್ನೆಲ್ಲ ನಿರ್ವಂಚನೆಯಿಂದ ಕೊಡ್ತಿದಿನಲ್ಲವೆ ನಾನು?'
 'ಸತ್ಯವಾಗಿಯೂ ಗುರೂಜಿ'
'ಹಾಗಾದರೆ ನೀನೂ ನಿನ್ನಲ್ಲಿರೂದ ನಿರ್ವಂಚನೆಯಿಂದ ಗುರೂಗೆ ಅರ್ಪಿಸಬೇಕು ತಾನೆ?'
'ಏನು ಬೇಕು ಕೇಳಿ ಅರ್ಪಿಸ್ತಿನಿ' ಎಂದು ಉತ್ಸಾಹದಿಂದ ಆಡಿದ ಮೇಲೆ ಅವರ ಮಾತಿನ ಅರ್ಥ  ಹೊಳೆದು ಸಿಕ್ಕಿ     ಹಾಕಿಕೊಂಡೆ   ಎಂಬ ಅರಿವಾಯಿತು.

ಅವರ ಮುಖದಲ್ಲಿ ಗೆಲುವು ಅರಳಿತು. ಕಣ್ಣುಗಳಲ್ಲಿ ಜಿನುಗುತ್ತಿದ್ದ  ಕಾಮನೆಯು ನನಗೆ ಕಾಣಿಸಿತು. ಅವರು ಮಾತನಾಡಿದರು 'ಸ್ಪಷ್ಟವಾಗಿ ತಿಳಕೋ ನಂದೇನೂ ಬಲವಂತವಿಲ್ಲ ನೀನು ಅನುಕೂಲಸ್ಥ ಮನೆಯೊಳು. ನಮ್ಮ ಹುಡುಗಿನ ಇವನು ಕೆಡಸಿದ ಅಂತ ನಾಳೆ ತಕರಾರು ಮಾಡಬಾರದು. ಇದು ನನಗೆ ನಿನಗೆ ಇಬ್ಬರಿಗೆ ಮಾತ್ರ ಗೊತ್ತಿರುವ ಗೊತ್ತಿರಬೇಕಾದ ವಿಷಯ. ನಾನು ನಿರ್ವಂಚನೆಯಿಂದ ನಿನಗೆ ಅರ್ಪಿಸುತ್ತಿರೂ ಹಾಗೆ ನೀನು ನಿನ್ನಲ್ಲಿರೂದ ಅರ್ಪಿಸಿದರೆ ನನಗೆ ಇನ್ನೂ ಉತ್ಸಾಹದಿಂದ ಹೇಳಿಕೊಡುವ ಮನಸ್ಸಾಗುತ್ತೆ. ಇದು ಯಾರಿಗೂ ತಿಳಿಯುಲ್ಲ. ಬೆಳಗ್ಗೆ ಹತ್ತು ಗಂಟೆ ಕಳೆದು ಬಿಟ್ಟರೆ ಸಂಜೆ ನಾಲ್ಕರವರೆಗೆ ಇಲ್ಲಿಗೆ ಯಾರೂ ಬರಲ್ಲ. ಬಂದರೂ ನೀನು ಒಳಗಿನ ಕೋಣೆಯಲ್ಲಿದ್ದರೆ ಯಾರಿಗೂ ಗೊತ್ತಾಗುಲ್ಲ. ಬಸರಿ ಗಿಸರಿ ಆಗುವ ಭಯವಿಲ್ಲ'.

  ಮದುವೆಯಾದರೆ ಸಂಗೀತ ಸತ್ತಂತೆಯೇ ಎಂದು ಭಾವಿಸಿ  ಜೀವನವೆಲ್ಲ ಸಂಗೀತ ಸಾಧನೆಗೆ ಮೀಸಲಾಗಿಡಬೇಕೆಂದು ಸಂಗೀತದ  ಮೇಲಿನ ಉತ್ಕಟ ಪ್ರೀತಿಯಿಂದ ಕಲಿಯಲು ಬಂದ ಮಧುಮಿತಾಳನ್ನು ಸಂಗೀತ ಪ್ರಪಂಚದ ಮೇರು ಚಕ್ರವರ್ತಿ ಎಂದೇ ಖ್ಯಾತನಾದ ಮೋಹನ ಲಾಲ ಆಕೆಯನ್ನು ತನಗೆ ಸಮರ್ಪಿಸಿ ಕೊಳ್ಳುವಂತೆ ಕೇಳುತ್ತಾನೆ. ಮೋಹನ ಲಾಲನ ಮಾತು ಮತ್ತು ಬಯಕೆ ಮುಧುಮಿತಾಳಲ್ಲಿ ಅಸಹ್ಯ ಹುಟ್ಟಿಸಿದರೂ ಬದುಕನ್ನೇ ಸಂಗೀತಕ್ಕೆ ಧಾರೆ ಎರೆಯಬೇಕೆಂದು ಹೊರಟವಳಿಗೆ ಅವನ ಷರತ್ತನ್ನು ಒಪ್ಪಿಕೊಳ್ಳದೆ ಬೇರೆ ದಾರಿ ಇಲ್ಲ. ಮೋಹನಲಾಲನೊಂದಿಗೆ ತನ್ನದು ಗಂಧರ್ವ ವಿವಾಹ ಎಂದೇ ಭಾವಿಸುವ ಮಧುಮಿತಾಳ ಸಂಗೀತ ಕಲಿಕೆ ಶುರುವಾಗುತ್ತದೆ.

    ಕಡು ಬಡತನದಲ್ಲಿ ಹುಟ್ಟಿ ಬೆಳೆದ ಮೋಹನಲಾಲನಿಗೆ ಸಂಗೀತ ಅತ್ಯಂತ ಶ್ರಮದಿಂದ ಒಲಿದ ವಿದ್ಯೆ. ಅವರಿವರ ಮನೆಯಲ್ಲಿ ಕಸಮುಸುರೆ ಮಾಡಿ ತೊಳೆಯುವ ಪಾತ್ರೆಯಲ್ಲಿ ಬಿಟ್ಟಿದ್ದ ಅನ್ನ ಪಲ್ಯೆಗಳನ್ನು ಬಳಿದು ತಂದು ಹತ್ತು  ವರ್ಷದ  ಮಗನ ಹೊಟ್ಟೆಗೆ ಹಾಕುವ ತಾಯಿ. ಚಿಕ್ಕಂದಿನಿಂದಲೇ  ಒಲಿದು ಬಂದ ಸಂಗೀತಾಸಕ್ತಿ ಹುಡುಗನಿಗೆ ದುಡ್ಡು ಗಳಿಸುವ ಕಸುಬು. ಸಂಗಿತದಲ್ಲೇ ಕೃಷಿ ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಗುರುಗಳನ್ನು ಹುಡುಕಿಕೊಂಡು ಊರೂರು ಅಲೆಯುವಂತೆ ಮಾಡುತ್ತದೆ. ಕೊನೆಗೂ ಆಶ್ರಯ ಸಿಕ್ಕು ಗುರು ತನ್ನದೆಲ್ಲವನ್ನೂ ಧಾರೆ ಎರೆಯುವ ವೇಳೆಗೆ ಮೋಹನಲಾಲನದು ಪ್ರಾಯದ ವಯಸ್ಸು. ಕಾಮದ ಬಯಕೆ ಉತ್ಕಟವಾದಾಗ ದಿನನಿತ್ಯ ಊಟ ತಂದು ಕೊಡುವ ಚುನ್ನಿ ಮೋಹನಲಾಲನ ಸುಡುವ ದೇಹಕ್ಕೆ ತಂಪನೆರೆಯುತ್ತಾಳೆ. ಚುನ್ನಿಯನ್ನು ಬಸಿರಾಗಿಸಿ ಊರು ಬಿಡುವ ಮೋಹನಲಾಲ ತಾನು ಕಲಿತ ಸಂಗೀತ ವಿದ್ಯೆಯಿಂದ ಹಣ ಮತ್ತು ಖ್ಯಾತಿಯನ್ನು ಗಳಿಸುತ್ತಾನೆ. ಹಣ ಮತ್ತು ಜನಪ್ರಿಯತೆಯ ನಶೆ ಮೋಹನಲಾಲನ ಬದುಕಿನ ದಿಕ್ಕನ್ನೇ ಬದಲಿಸಿ ಅವನನ್ನು ನೈತಿಕ ಅಧ:ಪತನಕ್ಕೆ ತಳ್ಳುತ್ತದೆ. ತನ್ನೊಳಗಿನ ವಿದ್ವತ್ತಿನಿಂದ ತನ್ನ ಪರಿಚಯದ ವ್ಯಾಪ್ತಿಗೆ ಬರುವ ಅನೇಕ ಹೆಣ್ಣುಗಳನ್ನು ಆತ ಅನುಭವಿಸುತ್ತಾನೆ. ಸಂಗೀತದೊಳಗಿನ ತನ್ನ ಏಕಾಗ್ರತೆಗೆ ಹೆಣ್ಣುಗಳೊಂದಿಗಿನ ಅಂಥದ್ದೊಂದು ಅನುಭೂತಿಯೇ ಕಾರಣ ಎಂದು ಭಾವಿಸುವ ಮೋಹನಲಾಲ ಭೂಪಾಲಿ, ಲಾರೆನ್, ಮನೋಹರಿದಾಸ, ಗಾನೇವಾಲಿ, ಚಂಪಾಳನ್ನು ಅನುಭವಿಸುತ್ತಾನೆ. ಹೆತ್ತ ಮಗಳೇ ಪ್ರಾಯದವಳಾಗಿ ಎದುರು ಬಂದು ನಿಂತಾಗ ಮೋಹನಲಾಲನ ಕಣ್ಣುಗಳು ಅವಳ ಶರೀರವನ್ನೇ ತಡಕಾಡುತ್ತವೆ.

    ಇನ್ನೊಂದೆಡೆ  ಸಂಗೀತವನ್ನು ಮಾರುಕಟ್ಟೆಯ ಸರಕಾಗಿಸುವ ಮೋಹನಲಾಲ ತಾನು ಕಲಿತ ವಿದ್ಯೆಯನ್ನು ನರ್ತನದ ಗಾಯನಕ್ಕಿಳಿಸುತ್ತಾನೆ. ಮನೋಹರಿದಾಸಳಿಂದ ಅವಮಾನಿತನಾಗಿ ಹೊರದಬ್ಬಿಸಿಕೊಳ್ಳುವ ಆತ ಹಣಗಳಿಕೆಗಾಗಿ ತನ್ನ ವಿದ್ಯೆಯನ್ನೇ ಬಿಕರಿಗಿಡುತ್ತಾನೆ. ಆರು ವರ್ಷಗಳ ಕಾಲ ತನ್ನನ್ನು ಸಮರ್ಪಿಸಿಕೊಂಡ ಮಧುಮಿತಾಳಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆದು ಅವಳ ಮದುವೆಯ ನಂತರವೂ ದೇಹ ಸುಖಕ್ಕಾಗಿ ಹಪಹಪಿಸುವ ಮೋಹನಲಾಲನಲ್ಲಿ ಕಿಂಚಿತ್ ನೈತಿಕ ಪ್ರಜ್ಞೆಯೂ ಇಲ್ಲ. ಒಂದು ಕಾಲದಲ್ಲಿ ಸಂಗೀತಕ್ಕಾಗಿ ತನ್ನನ್ನೇ ಸಮರ್ಪಿಸಿಕೊಂಡ ಶಿಷ್ಯೆ ಮದುವೆಯಾದ ಗಂಡನಿಂದ ದೂರಾದಾಗ ಮೋಹನಲಾಲ ಅವಳನ್ನು ಹುಡುಕಿಕೊಂಡು ಹೋಗಿ ತನ್ನ ಸಂಗೀತ ಪರಂಪರೆಯ ವಾರಸುದಾರಳಾಗುವಂತೆ ಕೇಳಿ ಕೊಳ್ಳುತ್ತಾನೆ. ಆ ವೇಳೆಗೆ ಮೋಹನಲಾಲನ ಅಸಹ್ಯ ವ್ಯಕ್ತಿತ್ವದ ಪ್ರಭಾವಳಿಯಿಂದ ಹೊರಬರಲು ಯತ್ನಿಸುತ್ತಿದ್ದ ಮಧುಮಿತಾ ಅವನ ಆಹ್ವಾನವನ್ನು ತಿರಸ್ಕರಿಸುತ್ತಾಳೆ. ಮಧುಮಿತಾಳ   ತಿರಸ್ಕಾರ ಮೋಹನಲಾಲನ  ಅಹಂಕಾರಕ್ಕೆ ದೊಡ್ಡ ಪೆಟ್ಟು ಕೊಡುತ್ತದೆ. ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲೇ ತಾನು ಕಲಿತ ವಿದ್ಯೆ ಅವನಿಗೆ ಕೈಕೊಡುತ್ತದೆ. ಐವತ್ತು ವರ್ಷಗಳಿಂದ ಹಾಡಿ ಮುಷ್ಟಿಗತವಾಗಿದ್ದ ರಾಗ ಭಾವ ಉದಿಸುತ್ತದೆಂಬ ಖಾತರಿ ಇಲ್ಲವಾಗುತ್ತದೆ. ಅದ್ಭುತವಾಗಿ ಹಾಡಬೇಕೆಂದು ಮಾಡಿಕೊಂಡಿದ್ದ ಸಂಕಲ್ಪ ಸೋಲತೊಡಗುತ್ತದೆ. 'ಇಲ್ಲ ನಾನು ಹಾಡೂದಿಲ್ಲ' ಎನ್ನುತ್ತ ವೇದಿಕೆಯಿಂದ ನಿರ್ಗಮಿಸುವುದರೊಂದಿಗೆ ಸಂಗೀತ ಲೋಕದಲ್ಲಿ ಮೋಹನಲಾಲನ ಪತನದ ಘಳಿಗೆ ಶುರುವಾಗುತ್ತದೆ. ಅದೇ ದಿನ ಶುದ್ಧ ಕಲ್ಯಾಣ ರಾಗದಲ್ಲಿ ಭಾವ ಉದಿಸುವ ಮಧುಮಿತಾ ದೊಡ್ಡ ಗಾಯಕಿಯಾಗಿ ಬೆಳೆಯುವ ಭರವಸೆ ಮೂಡಿಸುತ್ತಾಳೆ. ಅನೈತಿಕತೆ ಪತನಗೊಂಡು ನೈತಿಕತೆ ಕೊನೆಗೂ ಗೆಲುವು ಸಾಧಿಸುತ್ತದೆ.

    ಮೋಹನಲಾಲ ಮತ್ತು ಮಧುಮಿತಾ ಇಬ್ಬರೂ ತಪ್ಪು ದಾರಿಯ ಪಯಣಿಗರಾದರೂ ಮೋಹನಲಾಲನ ವ್ಯಕ್ತಿತ್ವ ಅನೈತಿಕತೆಯ ಪ್ರತೀಕವಾದರೆ ಮಧುಮಿತಾಳದು ನೈತಿಕತೆಯ ಪ್ರತೀಕವಾಗಿ ಕಾಣಿಸುತ್ತದೆ. ರೊಕ್ಕಕ್ಕಾಗಿ ರೈಲು, ಬಸ್ಸುಗಳಲ್ಲಿ ಹಾಡುವ ಹುಡುಗನೊಬ್ಬ ಮುಂದೆ ದೊಡ್ಡ ಸಂಗೀತಗಾರನಾಗಿ ಬೆಳೆದು ಕೂಡ ಅವನ ಮನಸ್ಥಿತಿ ಸಂಸ್ಕಾರ ರಹಿತ ಬಾಲ್ಯದ ಬದುಕಿನ ಪ್ರಭಾವಳಿಯಿಂದ ಹೊರಬರುವುದಿಲ್ಲ. ಸಂಗೀತ ವಿದ್ಯೆಯನ್ನು ಹಣ ಗಳಿಕೆ ಮತ್ತು ತನ್ನ ದೇಹದ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಾನೆ. ಪಾಂಡಿತ್ಯವಿದ್ದೂ ಮೋಹನಲಾಲನಲ್ಲಿ ಒಂದು ಶುದ್ಧ ಸಂಸ್ಕಾರದ ಕೊರತೆಯಿಂದಾಗಿ ಅವನೊಬ್ಬ ಲಂಪಟನಾಗಿಯೂ ಅನೈತಿಕ ಗುಣಗಳ ದುರ್ಗುಣಿಯಾಗಿಯೂ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಸಂಗೀತದಲ್ಲಿ ಉನ್ನತವಾದದ್ದನ್ನು ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಮಧುಮಿತ ಮೋಹನಲಾಲನಿಗೆ ತನ್ನ ದೇಹವನ್ನು ಸಮರ್ಪಿಸಿಯೂ ಪವಿತ್ರಳಾಗಿ ಉಳಿಯುತ್ತಾಳೆ. ಆರುವರ್ಷಗಳ ನಂತರ ತನ್ನದೇ ಒಂದು ಬದುಕನ್ನು ಕಟ್ಟಿಕೊಳ್ಳಲು ಮುಂದಾಗುವ ಆಕೆ ಮೋಹನಲಾಲನಿಂದ ಸಂಪೂರ್ಣವಾಗಿ ವಿಮುಖಳಾಗಿ ಪತಿ ವಿಕ್ರಮನ ಸಾಂಗತ್ಯದಲ್ಲಿ ಹೊಸದೊಂದು ಬದುಕಿಗಾಗಿ ಹಂಬಲಿಸುತ್ತಾಳೆ. ಮೋಹನಲಾಲ ಮತ್ತೊಮ್ಮೆ ಅವಳ ವೈವಾಹಿಕ ಜೀವನದಲ್ಲಿ ಪ್ರವೇಶಿಸಿದಾಗ ಮಧುಮಿತ ಗಂಡನಿಗೆ ಎಲ್ಲವನ್ನೂ ತಿಳಿಸಿ ವೈವಾಹಿಕ ಬದುಕಿನಿಂದಲೂ ಮತ್ತು ಮೋಹನಲಾಲನಿಂದಲೂ ದೂರಾಗಿ ಸಂಗೀತ ಸಾಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ. ಸಂಗೀತ ಮಧುಮಿತಾಳಿಗೆ ಹಣ ಮಾಡುವ ಕಸುಬಲ್ಲ. ಉದಾತ್ತ ಭಾವವನ್ನು ಉದ್ದೀಪನಗೊಳಿಸುವ ಶುದ್ಧ ರಾಗವದು. ಇಂಥದ್ದೊಂದು ಸಂಸ್ಕಾರದಿಂದಲೇ ಕಾದಂಬರಿಯ ಕೊನೆಯಲ್ಲಿ ಮಧುಮಿತಾಳ ಗೆಲುವು ಅದು ನೈತಿಕತೆಯ ಗೆಲುವಾಗಿ ಪರಿಣಮಿಸುತ್ತದೆ.

ಯಾನ: ವಿಜ್ಞಾನ ಮತ್ತು ಪಾರಂಪರಿಕ ಮೌಲ್ಯಗಳು 


    ' ನೋಡಿ ಈ ವಿಷಯ ಪ್ರಸ್ತಾಪಿಸುಕ್ಕೆ ನನಗೆ ತುಂಬ ಸಂಕೋಚವಾಗುತ್ತೆ. ಆದರೆ ಇದು ಸಂಶೋಧನೆಯ ವಿಷಯ ಮುಂದಿನ ಹಂತದ ಪ್ರಗತಿಯ ವಿಷಯ. ನೀವು ಅವಿವಾಹಿತೆ, ಭಾರತೀಯ ತರುಣಿ ಅಂತ ಗೊತ್ತಿದ್ದೂ ಪ್ರಸ್ತಾಪಿಸಬೇಕಾಗಿದೆ. ಗಂಡು ಹೆಣ್ಣುಗಳ ಶರೀರಕ್ಕೆ ಸಂಬಂಧಿಸಿದ ಹಲವಾರು ಸೂಕ್ಷ್ಮ ಸಂಶೋಧನೆಗಳನ್ನು ಮಾಡಬೇಕು. ಈ ಯಾನಕ್ಕೆ ಒಬ್ಬ ಮಹಿಳೆಯೂ ಬೇಕು ಅಂತ ನಿಶ್ಚಯಿಸಿದ್ದು ಈ ಕಾರಣದಿಂದ. ಇಲ್ಲಿ ನಡೆಯುದೆಲ್ಲ ಅತ್ಯಂತ ಗೋಪ್ಯವಾಗಿರುತ್ತೆ. ನಿಮ್ಮ ಜೊತೆ ಮೇಲೆ ಹೋಗುವ ಮೂವರು ಗಂಡಸರ ಹೆಸರನ್ನು ಈಗಲೇ ಹೇಳಿಬಿಡ್ತೀನಿ. ಅವರಲ್ಲಿ ಫ್ಲೈಯಿಂಗ್ ಆಫೀಸರ್ ಯಾದವ ಒಬ್ಬರು. ಡಾ. ವ್ಯಾಸ, ಡಾ. ಸಾಮಂತ್ ಇನ್ನಿಬ್ಬರು. ಅವರಲ್ಲಿ ಒಬ್ಬರನ್ನ ನೀವು ಸೂಚಿಸಿದರೆ ನಾನು ಅವರೊಡನೆ ಮಾತನಾಡ್ತೀನಿ. ಯಾನದಲ್ಲಿ ಮೇಲೆ ಹೋಗುವ ಎರಡು ತಿಂಗಳ ಮೊದಲೇ ನೀವಿಬ್ಬರೂ ಶರೀರ ಸಂಪರ್ಕ ಮಾಡುತ್ತಿರಬೇಕು. ಇದು ಸಂಶೋಧನೆಗೆ ಅನ್ನೂದನ್ನು ಮರೆತು ಸಹಜವಾಗಿ ಪ್ರೇಮಿಗಳು ಸೇರುವ ಹಾಗೆ ಕೂಡಬೇಕು. ಯಾನದಲ್ಲಂತೂ ಸಾಧ್ಯವಾದಷ್ಟು ಸಲ ಮೈಥುನ ಮಾಡಬೇಕು. ಕೋಪ ಮಾಡಿಕೊಳ್ಳಬೇಡಿ. ಈ ವಿನಂತಿಯನ್ನು ತಿರಸ್ಕರಿಸುವ ಆಯ್ಕೆಯೂ ನಿಮಗಿದೆ. ಆದರೆ ತಿರಸ್ಕರಿಸದಿರುವ ದೇಶಭಕ್ತಿ ನಿಮ್ಮದು ಅಂತ ನನಗೆ ಗೊತ್ತಿದೆ'. ಅಂತರಿಕ್ಷ ಕೇಂದ್ರದ ನಿರ್ದೇಶಕ ಡಾ.ವೆಂಕಟ್ ವಿವರಿಸುತ್ತಿದ್ದರೆ ಫೈಟರ್ ಪೈಲಟ್ ಉತ್ತರಾಳಲ್ಲಿ ಕೋಪ ಕುದಿಯುತ್ತಿತ್ತು. ರಕ್ಷಣಾ ಪಡೆಯ ಶಾಲೆಯಲ್ಲಿ ಓದಿ ಅದೇ ಪಡೆಯ ಕಾಲೇಜಿನ ಅನುಭವವಿದ್ದು ಕಂಟೋನ್ ಮೆಂಟ್ ಜೀವನಕ್ಕೆ ಒಗ್ಗಿದ್ದರೂ ಅವಳದು ಪಾರಂಪರಿಕ ಸಂಸ್ಕಾರವಾಗಿತ್ತು.

     ಕನ್ನಡ ಸಾಹಿತ್ಯದಲ್ಲಿ ಇದುವರೆಗೂ ಕಾಣದಿದ್ದ ಜಗತ್ತೊಂದು ಭೈರಪ್ಪನವರ 'ಯಾನ' ಕಾದಂಬರಿಯಲ್ಲಿ ಅನಾವರಣಗೊಂಡು ಜೀವ ಪಡೆದಿದೆ. ಅಂತರಿಕ್ಷ ಕೇಂದ್ರದವರು ೧೫೦ ಅಡಿ ಅಗಲ ೩೦೦ ಅಡಿ ಉದ್ದದ ಆಕಾಶ ನೌಕೆಯನ್ನು ಕಟ್ಟಿ ಅದರಲ್ಲಿ ಒಬ್ಬ ಗಂಡು ಒಬ್ಬಳು ಹೆಣ್ಣನ್ನು ಜೊತೆಗೂಡಿಸಿ ಅಂತರಿಕ್ಷಕ್ಕೆ ಕಳುಹಿಸುವ ಯೋಜನೆ ಸಿದ್ಧಪಡಿಸುತ್ತಾರೆ. ಇದಕ್ಕೆ ಪೂರ್ವಭಾವಿ ತಯ್ಯಾರಿಗಾಗಿ ನೂರು ದಿನಗಳ ಯೋಜನೆ ರೂಪಿಸಲಾಗುತ್ತದೆ. ಈ ನೂರು ದಿನಗಳ ಕಾಲ ಅಂತರಿಕ್ಷಕ್ಕೆ ಹೋಗುವ ಮೂರುಜನ ಗಂಡಸರಲ್ಲಿ ಒಬ್ಬರೊಡನೆ ಅಂತರಿಕ್ಷಕ್ಕೆ ಹೋಗುವ ಮೊದಲು ಮತ್ತು ನೌಕೆಯಲ್ಲಿ ನಿರಂತರವಾಗಿ ಮೈಥುನದಲ್ಲಿ ತೊಡಗಿಸಿಕೊಳ್ಳುವಂತೆ ಈ ಯೋಜನೆಗಾಗಿ ಆಯ್ಕೆಯಾದ ಪೈಲಟ್ ಉತ್ತರಾಳಲ್ಲಿ ಕೇಳಿ ಕೊಳ್ಳಲಾಗುತ್ತದೆ. ಉತ್ತರಾಳದು ಸಂದಿಗ್ಧ ಪರಿಸ್ಥಿತಿ. ಒಂದೆಡೆ ಪಾರಂಪರಿಕ ಮೌಲ್ಯಗಳು ಇನ್ನೊಂದೆಡೆ ದೇಶ ಸೇವೆಗೆ ದೊರೆತ ಸದಾವಕಾಶ. ಸಂದಿಗ್ಧದಲ್ಲೇ ಪೈಲಟ್ ಯಾದವನನ್ನು ಆಯ್ಕೆ ಮಾಡಿಕೊಳ್ಳುವ ಉತ್ತರಾ ಯಾನಕ್ಕೆ ಮೊದಲು ಅವನೊಡನೆ ವಿವಾಹವಾಗಬೇಕೆಂಬ ಷರತ್ತು ಹಾಕುತ್ತಾಳೆ. ಉತ್ತರಾಳ ಮಾತಿಗೆ ಸಮ್ಮತಿಸುವ ಯಾದವ ದೇವಾಲಯದಲ್ಲಿ ಗೌಪ್ಯವಾಗಿ ಅವಳೊಡನೆ ವಿವಾಹವಾಗುತ್ತಾನೆ. ನೂರು ದಿನಗಳ ಪೂರ್ವಭಾವಿ ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.  ಪೂರ್ವಭಾವಿ ಯೋಜನೆಯ  ಯಶಸ್ಸಿನ ನಂತರ  ಒಂದು ಗಂಡು ಮತ್ತು ಹೆಣ್ಣನ್ನು ನೌಕೆಯ ಮೂಲಕ ಶಾಶ್ವತವಾಗಿ ಅಂತರಿಕ್ಷಕ್ಕೆ ಕಳಿಸುವ ಯೋಜನೆ  ಡಾ.ವೆಂಕಟ್ ಅವರದು.
    ಸಂಶೋಧನಾ ಕೇಂದ್ರದಿಂದ ಬಂದು ಕಾಣುವಂತೆ ಪತ್ರ ಬಂದ ಘಳಿಗೆ ಉತ್ತರಾ ಮತ್ತೆ ತನ್ನನ್ನು ಸಂಶೋಧನೆಗೆ ನಿಯೋಜಿಸಲಾಗುತ್ತಿದೆ ಎಂದು ಉತ್ಸುಕಳಾಗಿದ್ದಾಳೆ. ಸಂಶೋಧನೆಯ ವಿವರಗಳನ್ನು ಹೇಳಿದ ಡಾ.ವೆಂಕಟ್ ಅವಳಿಗೆ ಅಂತರಿಕ್ಷಕ್ಕೆ ತೆರಳಲು  ಸಿದ್ಧಳಾಗಿರುವಂತೆ ಸೂಚಿಸಿ ಜೊತೆಗೆ ಉತ್ತರಾಳಿಗೆ ಆಘಾತವಾಗುವಂಥ  ಇನ್ನೊಂದು ಸಂಗತಿಯನ್ನು ತಿಳಿಸುತ್ತಾರೆ. ಅವರ ಪ್ರಕಾರ ಯಾದವ್ ಈ ಸಂಶೋಧನೆಗೆ ಸೂಕ್ತ ವ್ಯಕ್ತಿ ಅಲ್ಲವೆಂದು ಮತ್ತು ಅಂತರಿಕ್ಷದ ತಿಳುವಳಿಕೆ ಅವನಲ್ಲಿಲ್ಲವೆಂದು ಹೇಳುತ್ತಾರೆ. ಹೀಗಾಗಿ ಈ ಬಾರಿಯ ಶಾಶ್ವತ ಅಂತರಿಕ್ಷ ಪ್ರಯಾಣದಲ್ಲಿ ಉತ್ತರಾಳಿಗೆ ಜೊತೆಯಾಗಿ ಒಬ್ಬ ವಿಜ್ಞಾನಿಯ ಅವಶ್ಯಕತೆಯಿದೆ ಎಂದು ವಿವರಿಸುತ್ತಾರೆ. ಉತ್ತರಾ ಯಾದವನ ಹೊರತಾಗಿ ಬೇರೊಬ್ಬರೊಂದಿಗೆ ಹೋಗಲು ನಿರಾಕರಿಸುತ್ತಾಳೆ. ಈ ಮೊದಲು ಪೂರ್ವಭಾವಿ ಯೋಜನೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಮೊದಲು ಯಾದವನೊಂದಿಗೆ ಗೌಪ್ಯವಾಗಿ ವಿವಾಹವಾಗಿ ತಾನು ಅಂತರಿಕ್ಷಕ್ಕೆ ಹೋಗಿ ಬಂದಿರುವುದಾಗಿ ಡಾ.ವೆಂಕಟ್ ಅವರಿಗೆ ಹೇಳುತ್ತಾಳೆ. ಯಾದವನಿಗೆ ಒಬ್ಬ ಅಂತರಿಕ್ಷ ವಿಜ್ಞಾನಿಗೆ ಅಗತ್ಯವಾದ ಎಲ್ಲ ವಿಷಯ ಜ್ಞಾನವನ್ನು ಕಲಿಸಿಕೊಟ್ಟು ತನ್ನೊಡನೆ ಕಳುಹಿಸುವಂತೆ ಬೇಡಿಕೆ ಮುಂದಿಡುತ್ತಾಳೆ. ಇದು ಒಂದೆರಡು ವರ್ಷಗಳ ಕೆಲಸವಾದರೂ ಡಾ.ವೆಂಕಟ್ ಉತ್ತರಾಳ ಬೇಡಿಕೆಗೆ ಸ್ಪಂದಿಸುತ್ತಾರೆ. ಕಥೆ ತಿರುವು ಪಡೆಯುವುದೇ ಯಾದವ್ ಉತ್ತರಾಳ ಬೇಡಿಕೆಯನ್ನು ನಿರಾಕರಿಸುವುದರೊಂದಿಗೆ. ತಂದೆ, ತಾಯಿ ಮತ್ತು ತಂಗಿಯರ ಜವಾಬ್ದಾರಿಯ ಕಾರಣ ನೀಡಿ ಯಾದವ್ ಈ ಸಂಶೋಧನೆಯಿಂದ ನುಣುಚಿಕೊಳ್ಳುತ್ತಾನೆ. ಒಂದೆಡೆ ದೇಶ ಸೇವೆಗಾಗಿ ತುಡಿಯುತ್ತಿರುವ ಮನಸ್ಸು ಇನ್ನೊಂದೆಡೆ ಬೇರೆ ಗಂಡಸಿನೊಂದಿಗೆ ದೇಹ ಹಂಚಿಕೊಳ್ಳಬೇಕಲ್ಲ ಎನ್ನುವ ಆತಂಕ. ಉತ್ತರಾಳ ಮನಸ್ಸು ಸಂದಿಗ್ಧತೆಯಲ್ಲಿ ಹೊಯ್ದಾಡುತ್ತದೆ. ಯಾದವ್ ತನಗೆ ಮೋಸಮಾಡಿದನೆನ್ನುವ ಆಕ್ರೋಶ ಉತ್ತರಾಳನ್ನು ಅಂತರಿಕ್ಷಕ್ಕೆ ಹೋಗುವಂತೆ ಪ್ರೇರೇಪಿಸುತ್ತದೆ. ಈ ಶಾಶ್ವತ ಅಂತರಿಕ್ಷ ಪ್ರಯಾಣದಲ್ಲಿ ಈ ಸಾರಿ ಉತ್ತರಾಳಿಗೆ ಜೊತೆಯಾಗಿ ವಿಜ್ಞಾನಿ ಸುದರ್ಶನ್ ಆಯ್ಕೆಯಾಗುತ್ತಾನೆ.

     ಉತ್ತರಾ ಮತ್ತು ಸುದರ್ಶನ್ ಅವರನ್ನು ಹೊತ್ತು ನೌಕೆ ಅಂತರಿಕ್ಷದತ್ತ ಪಯಣ ಬೆಳೆಸುತ್ತದೆ. ಸಂಶೋಧನೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂತೃಪ್ತಿ ಡಾ.ವೆಂಕಟ್ ಅವರದು. ಆದರೆ ನೌಕೆಯಲ್ಲಿನ ಪರಿಸ್ಥಿತಿ ಡಾ.ವೆಂಕಟ್ ಅವರಂದುಕೊಂಡಷ್ಟು ಸರಳವಾಗಿಲ್ಲ. ಉತ್ತರಾ ತನ್ನ ಜೊತೆಗಾರ ಸುದರ್ಶನನೊಂದಿಗೆ ಯಾವ ವಿಷಯದಲ್ಲೂ ಸಹಕರಿಸುತ್ತಿಲ್ಲ. ಆ ನೌಕೆಯಲ್ಲಿ ಇಬ್ಬರದೂ ವಿರುದ್ಧ ದ್ರುವಗಳ ಬದುಕು. ಡಾ.ವೆಂಕಟ್ ಸಂಶೋಧನಾ ಕೇಂದ್ರದಿಂದ ಉತ್ತರಾಳನ್ನು ಸಂಪರ್ಕಿಸಿ ಎಷ್ಟು ಬೇಡಿಕೊಂಡರೂ ಅವರ ಮನವಿಗೆ ಆಕೆ ಸ್ಪಂದಿಸುತ್ತಿಲ್ಲ. ಯಾದವನಿಂದ ಹೇಳಿಸಿದರೂ ಅವಳದು ಅದೇ ನಿರಾಕಾರಭಾವ. ಅಂತರಿಕ್ಷದಲ್ಲಿ ಮನುಷ್ಯ ಸಂತಾನವನ್ನು ಸಾವಿರಾರು ವರ್ಷಗಳ ಕಾಲ ಬೆಳೆಸಬೇಕೆಂಬ ಸಂಶೋಧನೆ ಪೂರ್ಣಗೊಳ್ಳದೆ ಹೋಗುತ್ತಿದೆಯಲ್ಲ ಎನ್ನುವ ಹತಾಶೆ ಡಾ.ವೆಂಕಟ್ ಅವರದು. ಉತ್ತರಾಳ ತಣ್ಣನೆಯ ಪ್ರತಿಕ್ರಿಯೆಯಿಂದ ಸುದರ್ಶನನಲ್ಲೂ ಒಂದು ರೀತಿಯ ವೈರಾಗ್ಯ ಮೂಡಿದೆ. ಹೀಗೆ ನೌಕೆಯಲ್ಲಿ ಹತ್ತು ವರ್ಷಗಳನ್ನು ಕಳೆದ ಉತ್ತರಾಳಿಗೆ ಇದ್ದಕ್ಕಿದ್ದಂತೆ ಒಂದು ದಿನ ತಾನು ದೇಶಕ್ಕೆ ಮೋಸಮಾಡುತ್ತಿದ್ದೇನೆ ಎನ್ನುವ ಆತಂಕದಿಂದ ಸಂತಾನಭಿವೃದ್ಧಿಗೆ ಮುಂದಾಗುತ್ತಾಳೆ. ಆದರೆ ಆ ವೇಳೆಗಾಗಲೇ ಸುದರ್ಶನನ ಮನಸ್ಸು ದೈಹಿಕ ಕಾಮನೆಗಳಿಂದ ಬಹುದೂರ ಸಾಗಿ ಬಂದಿರುತ್ತದೆ. ಮುನ್ನೆಚ್ಚರಿಕೆಯ ಕ್ರಮವಾಗಿ ನೌಕೆಯಲ್ಲಿ ಸಾವಿರಾರು ಗಂಡು ಮತ್ತು ಹೆಣ್ಣುಗಳ ವಿರ್ಯಾಣು ಮತ್ತು ಅಂಡಾಣುಗಳನ್ನು ಸಂಸ್ಕರಿಸಿ ಇಡಲಾಗಿದೆ. ಹೀಗೆ ಸಂಸ್ಕರಿಸಿಟ್ಟ ಒಂದು ವಿರ್ಯಾಣು ಮತ್ತು ಅಂಡಾಣುವನ್ನು ಉತ್ತರಾಳ ಗರ್ಭಕೋಶದಲ್ಲಿ ಬೆಳೆಸಿ ಹೆಣ್ಣು ಮಗುವನು ಪಡೆಯಲಾಗುತ್ತದೆ. ಸಂತಾನಭಿವೃದ್ಧಿಗಾಗಿ ಗಂಡಿನ ಅವಶ್ಯಕತೆಯೂ ಇರುವುದರಿಂದ ಬೇರೆ ವಿರ್ಯಣು ಮತ್ತು ಅಂಡಾಣುವಿನಿಂದ ಉತ್ತರಾ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆಕಾಶ ಮತ್ತು ಮೇದಿನಿ ಒಂದೇ ಗರ್ಭಕೋಶದಿಂದ ಜನಿಸಿದರೂ ಅವರು ಬೇರೆ ಬೇರೆ ವಿರ್ಯಾಣು ಮತ್ತು  ಅಂಡಾಣುಗಳ ಸಂತಾನವಾಗುತ್ತಾರೆ. ಪ್ರಾಯಕ್ಕೆ ಬಂದಾಗ ಆಕಾಶ ಮತ್ತು ಮೇದಿನಿ ಮೊದಲ ಮಗುವನ್ನು ತಮ್ಮ ಸ್ವಂತದ ವಿರ್ಯಾಣು ಮತ್ತು ಅಂಡಾಣುವಿನಿಂದ ಪಡೆಯಬಹುದಾದರೂ ಎರಡನೇ ಮಗುವನ್ನು ನೌಕೆಯಲ್ಲಿ ಸಂಸ್ಕರಿಸಿಟ್ಟ ವಿರ್ಯಾಣು  ಮತ್ತು ಅಂಡಾಣುವಿನಿಂದಲೇ ಪಡೆಯಬೇಕು. ಕಾದಂಬರಿಕಾರರು ಸಂಶೋಧನೆಯಲ್ಲೂ ಪಾರಂಪರಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಕಥೆಗೊಂದು ತಾರ್ಕಿಕ ಅಂತ್ಯವನ್ನು ನೀಡುತ್ತಾರೆ. ಯಾನ ಕಾದಂಬರಿಯಲ್ಲಿನ ನೈತಿಕ ಪ್ರಜ್ಞೆಯನ್ನು ನಾವು ಗುರುತಿಸಲು ಈ ಕೆಳಗಿನ ಸಂಗತಿಗಳು ಆಧಾರವಾಗಿವೆ,

೧. ಉತ್ತರಾ ಪೂರ್ವಭಾವಿ ಯೋಜನೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಮೊದಲು ತನ್ನೊಡನೆ ಬರುವ ಯಾದವನನ್ನು ಮದುವೆಯಾಗಿ ಪಾರಂಪರಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾಳೆ. ಎರಡನೇ ಸಂದರ್ಭದಲ್ಲಿ ಸುದರ್ಶನನೊಂದಿಗೆ ಹೋಗುವ ಅನಿವಾರ್ಯತೆ ಎದುರಾದಾಗ ಉತ್ತರಾ ಆತನೊಂದಿಗೆ ದೈಹಿಕ ಸಂಪರ್ಕ ಹೊಂದದೆ ದೂರವೇ ಉಳಿಯುತ್ತಾಳೆ. ಹತ್ತು ವರ್ಷಗಳ ನಂತರ ಕರ್ತವ್ಯ ಪ್ರಜ್ಞೆ ಅವಳಲ್ಲಿ ಜಾಗೃತವಾಗಿ  ಸಂಸ್ಕರಿಸಿಟ್ಟ ವಿರ್ಯಾಣು ಮತ್ತು ಅಂಡಾಣುಗಳಿಂದ ಮಕ್ಕಳಿಗೆ ಜನ್ಮ ನೀಡುತ್ತಾಳೆ.

೨. ಮನುಷ್ಯ ಸಂತಾನವನ್ನು ಸಾವಿರಾರು ವರ್ಷಗಳ ಕಾಲ ಅಂತರಿಕ್ಷದಲ್ಲಿ ಬೆಳೆಸುವುದು ಸಂಶೋಧನೆಯ ಉದ್ದೇಶವಾಗಿರುವುದರಿಂದ ಜನಿಸುವ ಗಂಡು ಮತ್ತು ಹೆಣ್ಣಿನ ಮೇಲೆ  ತಮ್ಮ ಮುಂದಿನ ಸಂತಾನವನ್ನು ಬೆಳೆಸುವ ಜವಾಬ್ದಾರಿ ಇದೆ. ಒಂದೇ ಅಂಡಾಣು ಮತ್ತು ವಿರ್ಯಾಣುವಿನಿಂದ ಜನಿಸುವ ಮಕ್ಕಳು ಸಹೋದರ ಸಹೋದರಿಯಾಗುವುದರಿಂದ ಮೈಥುನದಲ್ಲಿ ತೊಡಗುವುದು ಅನೈತಿಕತೆಯಾಗುತ್ತದೆ. ಇದಕ್ಕೆ ಮೊದಲ ಮಗುವನ್ನು ತಮ್ಮ ಸ್ವಂತದ ವಿರ್ಯಾಣು ಮತ್ತು ಅಂಡಾಣುವಿನಿಂದ ಪಡೆಯಬಹುದಾದರೂ ಎರಡನೇ ಮಗುವನ್ನು ನೌಕೆಯಲ್ಲಿ ಸಂಸ್ಕರಿಸಿಟ್ಟ ವಿರ್ಯಾಣು ಮತ್ತು ಅಂಡಾಣುವಿನಿಂದಲೇ ಪಡೆಯಬೇಕೆನ್ನುವ ಪರಿಹಾರವಿದೆ.

ಕೊನೆಯ ಮಾತು 

    ಇತ್ತೀಚಿನ ದಿನಗಳಲ್ಲಿ ನಮ್ಮ ಎಡಪಂಥಿಯ ಲೇಖಕಿಯರು ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ಹೆಣ್ಣನ್ನು ಅತ್ಯಂತ ಕೀಳಾಗಿ ಚಿತ್ರಿಸುತ್ತಾರೆ ಎಂಬ ತಮ್ಮ ಧೋರಣೆಯನ್ನು ಕನ್ನಡದ ಓದುಗರ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿರುವರು. ಆದರೆ ಭೈರಪ್ಪನವರ ಕಾದಂಬರಿಗಳಲ್ಲಿ ವಿಶೇಷವಾಗಿ ಹೆಣ್ಣಿನ ಬದುಕನ್ನು ಚಿತ್ರಿಸುವಾಗ ಅಲ್ಲಿ ನೈತಿಕ ಪ್ರಜ್ಞೆ ಮಹತ್ವ ಪಡೆಯುತ್ತದೆ. ಈ ಕಾರಣದಿಂದಲೇ ಸಾಕ್ಷಿಯ ಸುಮಿತ್ರಾ, ಮಂದ್ರದ ಮಧುಮಿತ, ಯಾನದ ಉತ್ತರಾ ಈ ಪಾತ್ರಗಳನ್ನು ಓದುಗ  ನೈತಿಕ ಪ್ರಜ್ಞೆಯ ಭಾಗವಾಗಿ  ಪರಿಭಾವಿಸುತ್ತಾನೆ. ಸಾಕ್ಷಿಯ ಮಂಜಯ್ಯ ಹಾಗೂ ಮಂದ್ರದ ಮೋಹನಲಾಲ ಪತನಗೊಳ್ಳುವುದು ಅವರೊಳಗಿನ ಅನೈತಿಕ ಗುಣಗಳಿಂದ ಎನ್ನುವುದು ಇಲ್ಲಿ ಓದುಗ ಗಮನಿಸಬೇಕಾದ ಮುಖ್ಯ ಸಂಗತಿಗಳಲ್ಲೊಂದು. ಆದರೆ ಭೈರಪ್ಪನವರ ಈ ನೈತಿಕ ಪ್ರಜ್ಞೆ, ಪಾರಂಪರಿಕ ಮೌಲ್ಯಗಳ ಮೇಲಿನ ಗೌರವ, ರಾಷ್ಟ್ರ ಭಕ್ತಿಯ ಗುಣ ನಮ್ಮ ಎಡಪಂಥಿಯ ಬರಹಗಾರರಿಗೆ ತಪ್ಪಾಗಿ ಕಾಣಿಸುತ್ತಿರುವುದು ಅದು ಕನ್ನಡ ಸಾಹಿತ್ಯದ ದುರಂತಗಳಲ್ಲೊಂದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



       

Saturday, February 3, 2018

'ಭಾವ ಭಿತ್ತಿ' ಪುಸ್ತಕ ಬಿಡುಗಡೆ

(ದಿನಾಂಕ ೦೨.೦೨.೨೦೧೮ ರಂದು ಕಲಬುರಗಿಯಲ್ಲಿ ನನ್ನ 'ಭಾವ ಭಿತ್ತಿ' ಪುಸ್ತಕ ಬಿಡುಗಡೆಯಾಯಿತು.)



ಸಾಹಿತ್ಯವೆನ್ನುವುದು ಮನುಷ್ಯತ್ವವನ್ನು ಅರಳಿಸುವ ಒಂದು ಸೃಜನಶೀಲ ಸೃಷ್ಟಿ. ಓದು ಮತ್ತು ಬರವಣಿಗೆಯ ಮೂಲಕ ನಾನು ಬೇರೆಯವರಿಗೆ ಏನನ್ನು ಹೇಳುತ್ತಿದ್ದೇನೆ ಎನ್ನುವುದಕ್ಕಿಂತ ಈ ಒಂದು ಸೃಜನಶೀಲ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ನಾನು ಏನನ್ನು ಪಡೆಯುತ್ತಿರುವೆ ಎನ್ನುವ ಪ್ರಶ್ನೆ ನನ್ನಲ್ಲಿ ಸದಾಕಾಲ ಜಾಗೃತವಾಗಿರುತ್ತದೆ.


ನಾನೇಕೆ ಓದುತ್ತೇನೆ ಮತ್ತು ಬರೆಯುತ್ತೇನೆ ಎನ್ನುವ ಪ್ರಶ್ನೆಗಳಿಗೆ ನಾನು ಅನೇಕ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಮನುಷ್ಯನಾಗಲು, ಸೃಜನಶೀಲನಾಗಲು, ಭಾವ ಪರಿಶುದ್ಧತೆಗಾಗಿ, ಜೀವನಾನುಭವವನ್ನು ಹಿಗ್ಗಿಸಿಕೊಳ್ಳಲು, ಮನಸ್ಸು ಮತ್ತು ಬುದ್ಧಿಯನ್ನು ಮಾಗಿಸಿಕೊಳ್ಳಲು ಹೀಗೆ ನಾನು ಸಾಹಿತ್ಯದಂಥ ಸೃಜನಶೀಲ ಸೃಷ್ಟಿಯ ಭಾಗವಾಗಲು ಅನೇಕ ಕಾರಣಗಳಿವೆ. ಓದು ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡ ಆ ಘಳಿಗೆ ಸೃಷ್ಟಿಯಾಗುವ ಏಕಾಂತ ನನ್ನನ್ನು ನಾನು ಪ್ರಶ್ನಿಸಿಕೊಳ್ಳುವ ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳುವ ಪರಿಸರವನ್ನು ನಿರ್ಮಿಸಿ ಕೊಡುತ್ತದೆ. ಮನುಷ್ಯ ಹೀಗೆ ಏಕಾಂತದಲ್ಲಿದ್ದ ಘಳಿಗೆಯಲ್ಲೇ ತನಗೆ ಮಾತ್ರವಾದರೂ ಸತ್ಯವನ್ನು ಹೇಳಿಕೊಳ್ಳುವ ಸಾಮರ್ಥ್ಯ ದಕ್ಕಿಸಿಕೊಂಡಲ್ಲಿ ನಾವು ಮನುಷ್ಯರಾದಂತೆ ಎಂದು ಚಿಂತಕರೊಬ್ಬರು ನುಡಿಯುತ್ತಾರೆ. ಮತ್ತೆ ಮತ್ತೆ ಭಾವಪರಿಶುದ್ಧತೆಯನ್ನು ಸಾಧಿಸಿ ಮನುಷ್ಯನಾಗಲು ನಾನು ಅತ್ಯಂತ ಪ್ರೀತಿಯಿಂದಲೇ ಈ ಓದು ಮತ್ತು ಬರವಣಿಗೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ.


ಈ ಕೃತಿಯಲ್ಲಿನ ಲೇಖನಗಳಲ್ಲಿ ಕೆಲವು ‘ಸಮಾಚಾರ’ ಪತ್ರಿಕೆಯಲ್ಲಿ ಇನ್ನು ಕೆಲವು ‘ಮನದ ಮಾತು’, ‘ನಿಲುಮೆ’ ಬ್ಲಾಗುಗಳಲ್ಲಿ ಮತ್ತು ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಈ ಎಲ್ಲ ಲೇಖನಗಳನ್ನು ಸಂಕಲಿಸಿ ‘ಭಾವಭಿತ್ತಿ’ ಎಂದು ಹೆಸರಿಟ್ಟು ಸಿದ್ಧಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಶ್ರೀ ಬಸವರಾಜ ಕೊನೆಕ್ ಅವರಿಗೆ ತಲುಪಿಸಿದಾಗ ಅವರು ಅತ್ಯಾಕರ್ಷಕ ಮುಖಪುಟದೊಂದಿಗೆ ಸುಂದರವಾಗಿ ಪ್ರಕಟಿಸಿ ಹೊರತಂದಿರುವರು. 

ನನ್ನ ಬರವಣಿಗೆಯನ್ನು ಓದಿ ಮೆಚ್ಚುಗೆಯ ಮಾತನಾಡುವ ಜೊತೆಗೆ ವಿಮರ್ಶಿಸುವ ಅನೇಕ ಹಿರಿಯರು ಮತ್ತು ಗೆಳೆಯರು ನಾನು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸದಾ ಕಾಲ ಪ್ರೇರಣೆಯಾಗಿರುವರು. ನನ್ನ ‘ಭಾವಭಿತ್ತಿ’ ಕೃತಿ ಅಕ್ಷರಲೋಕದೊಳಗೆ ಅಡಿಯಿಡುವ ವೇಳೆ ನೆರವಿಗೆ ಬಂದವರು ಅನೇಕರು. ಪುಸ್ತಕ ಪರಿಶೀಲನಾ ಸಮಿತಿಯ ಸದಸ್ಯರು, ಮುಖಪುಟ ವಿನ್ಯಾಸಕಾರರು ಮತ್ತು ಮುದ್ರಣಾಲಯದವರು.


ಈ ಎಲ್ಲರನ್ನು ನಾನು ಈ ಸಂದರ್ಭ ಅತ್ಯಂತ ವಿನಮೃನಾಗಿ ಸ್ಮರಿಸಿಕೊಳ್ಳುತ್ತ ನನ್ನ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. ಜೊತೆಗೆ ಓದುಗರನ್ನು ಕೂಡ ಈ ಸಂದರ್ಭ ಕೃತಜ್ಞತೆಯಿಂದ ಸ್ಮರಿಸುತ್ತೇನೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 




Tuesday, January 2, 2018

ವಿದ್ಯುನ್ಮಾನ ವಾಹಿನಿಗಳಿಗೆ ಬೇಕಿದೆ ನೀತಿ ಸಂಹಿತೆ



      
     ಮೊನ್ನೆ ಮೊನ್ನೆಯಷ್ಟೆ ಇಂಥದ್ದೊಂದು ದುರ್ಘಟನೆ ನಡೆದು ಹೋಯಿತು. ಎಳು ವರ್ಷ ವಯಸ್ಸಿನ ಬಾಲಕಿ ಮೈಗೆ ಬೆಂಕಿ ಹಚ್ಚಿಕೊಂಡು ನೃತ್ಯ ಮಾಡಲು ಪ್ರಯತ್ನಿಸಿ ಆಸ್ಪತ್ರೆ ಸೇರಿ ಅಸುನೀಗಿದಳು. ಇನ್ನು ಬಾಳಿ ಬದುಕಬೇಕಾದ ಕಂದಮ್ಮ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದು ಅಪ್ಪ ಅಮ್ಮನನ್ನು ತೀವ್ರ ಸಂಕಟಕ್ಕೀಡು ಮಾಡಿದೆ. ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ದಾರಾವಾಹಿಯ ಸನ್ನಿವೇಶದಿಂದ ಪ್ರೇರಿತವಾದ ಆ ಮಗು ಮನೆಯಲ್ಲಿ ಅಪ್ಪ ಅಮ್ಮ ಇಲ್ಲದ ಸಂದರ್ಭ ಮೈಗೆ ಬೆಂಕಿ ಹಚ್ಚಿಕೊಂಡು ನೃತ್ಯ ಮಾಡಲೆತ್ನಿಸಿ ಅಕಾಲ ಮರಣಕ್ಕೆ ತುತ್ತಾಯಿತು. ಬ್ಲೂವೇಲ್‍ನಂಥ ದೂರ ದೇಶದ ಆಟ ಈಗಾಗಲೇ ಭಾರತದಲ್ಲಿ ನಾಲ್ಕಾರು ಸಾವುಗಳಿಗೆ ಕಾರಣವಾಗಿರುವಾಗ ನಮ್ಮದೇ ಭಾಷೆಯ ಮತ್ತು ನೆಲದ ಧಾರಾವಾಹಿ ಕಾರ್ಯಕ್ರಮವೊಂದು ಬಾಲಕಿಯ ಸಾವಿಗೆ ಪ್ರಚೋದನೆ ನೀಡಿದ್ದು ತುಂಬ ಆತಂಕದ ವಿಷಯವಾಗಿದೆ. ಮನೋವಿಜ್ಞಾನಿಗಳು ಬಹಳಷ್ಟು ಆತ್ಮಹತ್ಯೆ ಮತ್ತು ಅಪರಾಧ ಪ್ರಕರಣಗಳಿಗೆ ಇವತ್ತು ವಿದ್ಯುನ್ಮಾನ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳೇ ಬಹುಪಾಲು ಕಾರಣ ಎನ್ನುತ್ತಾರೆ. ಅದರಲ್ಲೂ ವಿದ್ಯುನ್ಮಾನ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಂದ ಪ್ರಚೋದಿತರಾಗಿ ಆತ್ಮಹತ್ಯೆಗೆ ಒಳಗಾಗುವ ಮತ್ತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರಲ್ಲಿ ಮಕ್ಕಳ ಮತ್ತು ಯುವಜನತೆಯ ಸಂಖ್ಯೆಯೇ ಬಹಳಷ್ಟಿದೆ. ಹೀಗೆ ರಾಷ್ಟ್ರವೊಂದರ ಮುಂದಿನ ಭಾವಿಪ್ರಜೆಗಳಾಗುವ ಮಕ್ಕಳು ಮತ್ತು ಯುವಜನತೆಯನ್ನು ನಮ್ಮ ವಿದ್ಯುನ್ಮಾನ ವಾಹಿನಿಗಳು ತಪ್ಪುದಾರಿಗೆಳೆಯುತ್ತಿವೆ ಎನ್ನುವ ಗುರುತರವಾದ ಅಪವಾದ ಈ ಮಾಧ್ಯಮದ ಮೇಲಿದೆ. 

ಭೂತ ಚೇಷ್ಟೆ ಮತ್ತು ಸರ್ಪ ಮತ್ಸರ

ವಿದ್ಯುನ್ಮಾನ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಬಹಳಷ್ಟು ಧಾರಾವಾಹಿಗಳಲ್ಲಿ ಭೂತ ಚೇಷ್ಟೆ ಇಲ್ಲವೆ ಸರ್ಪ ಮತ್ಸರದ ಕಥೆ ಪ್ರಧಾನ ಭೂಮಿಕೆಯಲ್ಲಿರುವುದು ಸತ್ಯಕ್ಕೆ ಹತ್ತಿರವಾದ ಸಂಗತಿ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಈ ಪ್ರಕಾರದ ಕಥೆಗಳು ಸಮ್ಮೋಹಿನಿಯಂತೆ ಸೆಳೆಯುತ್ತಿರುವುದು ಮತ್ತು ಈ ಪ್ರವಾಹದ ನಡುವೆ ವಾಸ್ತವಕ್ಕೆ ಹತ್ತಿರವಾದ ಕಥಾ ಹಿನ್ನೆಲೆಯ ಧಾರಾವಾಹಿಗಳು ಪ್ರೇಕ್ಷಕರ ಕೊರತೆಯನ್ನು ಅನುಭವಿಸುತ್ತಿರುವುದು ದುರಂತದ ವಿಷಯ. ಜೊತೆಗೆ ಇಂಥ ಕಥಾವಸ್ತುವನ್ನಿಟ್ಟುಕೊಂಡು ರೋಚಕ ದೃಶ್ಯಗಳನ್ನು ನಿರ್ಮಿಸಲು ಈ ಆಧುನಿಕ ತಂತ್ರಜ್ಞಾನ ನೆರವಿಗೆ ಬರುತ್ತಿರುವುದರಿಂದ ನಿರ್ದೇಶಕರಿಗೆ ಅವರ ಕೆಲಸ ಅತ್ಯಂತ ಸುಲಭವಾಗಿದೆ. ಆದ್ದರಿಂದ ಧಾರಾವಾಹಿಗಳಲ್ಲಿ ಹೆಣ್ಣೊಬ್ಬಳು ಇದ್ದಕ್ಕಿದ್ದಂತೆ ಹಾವಾಗಿ ರೂಪತಾಳುತ್ತಾಳೆ, ಸತ್ತ ಸೊಸೆ ಪ್ರೇತವಾಗಿ ಮನೆ ತುಂಬ ಓಡಾಡುತ್ತಾಳೆ, ಪ್ರೇತದ ಸಹಾಯದಿಂದ ಮಗುವೊಂದು ಭೂತ ಬಿಡಿಸುವವರನ್ನು ಆಟವಾಡಿಸುತ್ತದೆ ಹೀಗೆ ಬದುಕಿನ ವಾಸ್ತವಿಕತೆಗೆ ಸಂಬಂಧವೇ ಇಲ್ಲದ ಕಥೆಗಳು ಧಾರಾವಾಹಿಗಳಾಗಿ ನಮ್ಮ ನಮ್ಮ ಮನೆಯ ಪುಟ್ಟ ಪರದೆಯ ಮೇಲೆ ಪ್ರಸಾರವಾಗಿ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ತಮ್ಮತ್ತ ಸೆಳೆಯುತ್ತವೆ ಮತ್ತು ನೋಡುಗರು ಕೂಡ ಈ ಧಾರಾವಾಹಿಗಳನ್ನು ಯಶಸ್ಸಿನ ದಂಡೆಗೆ ಮುಟ್ಟಿಸುತ್ತಾರೆ. 

ಈ ಧಾರಾವಾಹಿಗಳಲ್ಲಿನ ಇನ್ನೊಂದು ಪ್ರಮುಖ ದೋಷ ಇಲ್ಲಿ ಗಟ್ಟಿಯಾದ ಕಥೆ ಇಲ್ಲದಿರುವುದು ಮತ್ತು ಇರುವ ಜಾಳುಜಾಳಾದ ಕಥೆ ಅದು ಯಾವ ಘಳಿಗೆಯಲ್ಲಾದರೂ ಹೊಸ ರೂಪ ತೊಟ್ಟು ಹಳೆಯದರಿಂದ ಸುಲಭವಾಗಿ ಕಳಚಿಕೊಂಡು ಹೊರಬರಬಹುದು. ಈ ಕಾರಣದಿಂದ ಇಲ್ಲಿ ಹಲವು ವರ್ಷಗಳಾದರೂ ಧಾರಾವಾಹಿಗಳಿಗೆ ಕೊನೆ ಎನ್ನುವುದಿರುವುದಿಲ್ಲ. ಕೆಲವು ವಾಹಿನಿಗಳಲ್ಲಿ ದಶಕಗಳ ಕಾಲ ಕೆಲವೊಂದು ಧಾರಾವಾಹಿಗಳು ಪ್ರಸಾರವಾಗಿ ದಾಖಲೆಯನ್ನೇ ನಿರ್ಮಿಸಿವೆ. ದೃಶ್ಯ ಮಾಧ್ಯಮ ತನ್ನ ಜನಪ್ರಿಯತೆಯ ಮಾನದಂಡಕ್ಕಾಗಿ ಕಟ್ಟಿಕೊಂಡ ಟಿ.ಆರ್.ಪಿ ಗೆ ಅನುಗುಣವಾಗಿ ಈ ಧಾರಾವಾಹಿಗಳ ಕಥೆಗಳು ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತವೆ. ಇಲ್ಲಿ ಕಥೆ ಬದಲಾಗುತ್ತದೆ, ಪಾತ್ರಗಳು ಬದಲಾಗುತ್ತವೆ, ಆತ್ಮ ಪ್ರೇತಾತ್ಮಗಳು ಮೈದಾಳುತ್ತವೆ, ಬೃಹದಾಕಾರದ ಹಾವೊಂದು ಪರದೆಯ ಮೇಲೆ ಕಾಣಿಸಿ ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡುತ್ತದೆ. ಒಟ್ಟಾರೆ ಈ ಧಾರಾವಾಹಿಗಳ ಮೂಲಕ ಭ್ರಾಮಕ ಜಗತ್ತನ್ನು ಸೃಷ್ಟಿಸಿ ಹೀಗೆ ಸೃಷ್ಟಿಯಾದ ಭ್ರಮೆಯ ಲೋಕವನ್ನು ನಿಜವೆಂದು ನಂಬಿ ಯುವ ಪೀಳಿಗೆ ಅದರಲ್ಲೂ ಚಿಕ್ಕ ವಯಸ್ಸಿನ ಮಕ್ಕಳು ಸಾವಿನ ಮನೆಯ ಕದ ಬಡಿಯುತ್ತಿರುವುದು ವಿದ್ಯುನ್ಮಾನ ವಾಹಿನಿಗಳು ಕೊಡ ಮಾಡುತ್ತಿರುವ ಬಹುದೊಡ್ಡ ದುರಂತಗಳಲ್ಲೊಂದು. 

ರಿಯಾಲಿಟಿ ಶೋಗಳು

ಹಲವು ದಶಕಗಳ ಹಿಂದೆ ಖಾಸಗಿ ವಿದ್ಯುನ್ಮಾನ ವಾಹಿನಿಯಲ್ಲಿ ‘ಕೋನ್ ಬನೇಗಾ ಕರೋಡಪತಿ’ ರಿಯಾಲಿಟಿ ಶೋ ಪ್ರಸಾರವಾದಾಗ ಅದು ಅತ್ಯಂತ ಜನಪ್ರಿಯತೆಯನ್ನು ಪಡೆಯಿತು. ಈ ಕಾರ್ಯಕ್ರಮದ ಜನಪ್ರಿಯತೆಯನ್ನೆ ಆಧಾರವಾಗಿಟ್ಟುಕೊಂಡು ನಂತರದ ದಿನಗಳಲ್ಲಿ ಅನೇಕ ರಿಯಾಲಿಟಿ ಶೋಗಳು ನಿರ್ಮಾಣಗೊಂಡು ಅದ್ಭುತ ಯಶಸ್ಸನ್ನು ಪಡೆಯುವುದರೊಂದಿಗೆ ಇವತ್ತು ಈ ಪ್ರಕಾರದ ಕಾರ್ಯಕ್ರಮದ ವೀಕ್ಷಣೆ ಪ್ರೇಕ್ಷಕರಿಗೆ ಗೀಳಾಗಿ ಪರಿಣಮಿಸಿದೆ. ಜೊತೆಗೆ ಇನ್ನೊಂದು ಆತಂಕದ ಸಂಗತಿ ಎಂದರೆ ಈ ರಿಯಾಲಿಟಿ ಶೋಗಳು ಕಡಿಮೆ ಅವಧಿಯಲ್ಲಿ ತಂದು ಕೊಡುವ ಜನಪ್ರಿಯತೆ ಸ್ಪರ್ಧಿಗಳ ಬದುಕನ್ನು ನರಕವಾಗಿಸುತ್ತಿದೆ. ಹಳ್ಳಿ ಹೈದ ಪ್ಯಾಟಿಗೆ ಬಂದ ರಿಯಾಲಿಟಿ ಶೋನ ಖ್ಯಾತಿಯ ರಾಜೇಶನ ಬದುಕು ಇದಕ್ಕೊಂದು ಜ್ವಲಂತ ನಿದರ್ಶನವಾಗಿದೆ. ಕಾಡಿನ ಮೂಲೆಯೊಂದರಲ್ಲಿ ತನ್ನ ಅಮಾಯಕ ಬದುಕು ಸಾಗಿಸುತ್ತಿದ್ದ ರಾಜೇಶನನ್ನು ವಾಹಿನಿಯವರು ಹಿಡಿದು ತಂದು ರಿಯಾಲಿಟಿ ಶೋನ ಸ್ಪರ್ಧಿಯಾಗಿಸಿದಾಗ ಆತನ ಬದುಕು ಹೊಸದೊಂದು ಬೆಳವಣಿಗೆಗೆ ತೆರೆದುಕೊಂಡಿತೆಂದು ಎಲ್ಲರೂ ಭಾವಿಸಿದ್ದರು. ಆದರೆ ದೊರೆತ ಯಶಸ್ಸು ಆ ಹುಡುಗನ ಬದುಕನ್ನೆ ಬಲಿ ತೆಗೆದುಕೊಂಡು ಬಿಟ್ಟಿತು. ಯಶಸ್ಸೆನ್ನುವುದು ಬದುಕಿನ ಒಂದು ಭಾಗವೆ ವಿನ: ಅದೇ ಬದುಕಲ್ಲ ಎಂದು ಅರಿಯುವಲ್ಲಿ ಎಡವಿದ ಆತ ತನ್ನ ಸುತ್ತ ಒಂದು ಭ್ರಮೆಯ ಬದುಕನ್ನು ಕಟ್ಟಿಕೊಂಡು ಮಾನಸಿಕ ರೋಗಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡ. ಬಿಗ್ ಬಾಸ್‍ನಂಥ ಕಾರ್ಯಕ್ರಮ ಸ್ಪರ್ಧಿಗಳನ್ನು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸೆಲೆಬ್ರಿಟಿಗಳನ್ನಾಗಿಸುತ್ತಿದೆ. ಪ್ರೇಕ್ಷಕರನ್ನು ಕಾರ್ಯಕ್ರಮದತ್ತ ಸೆಳೆಯಲು ಮತ್ತು ಟಿ.ಆರ್.ಪಿ ರೇಟನ್ನು ಹೆಚ್ಚಿಸಲು ಸ್ಪರ್ಧಿಗಳು ಅಸಹಜ ಆಟಕ್ಕೆ ಮೊರೆ ಹೋಗುತ್ತಾರೆ. ‘ಸನ್ನಿವೇಶಗಳಾಗಲಿ, ಸಂದರ್ಭ ಕ್ರಿಯೆಗಳಾಗಲಿ ಪೂರ್ವನಿಯೋಜಿತವಲ್ಲವೆಂದೂ ಇಡೀ ಕಾರ್ಯಕ್ರಮಕ್ಕೆ ನಿರ್ಧಿಷ್ಟವಾದ ಸ್ಕ್ರಿಪ್ಟ್ ಇಲ್ಲವೆಂದೂ ಸಾರುವ ಇಂಥ ಕಾರ್ಯಕ್ರಮಗಳು ತಮ್ಮ ವಾಸ್ತವಿಕತೆಯ ಸ್ವರೂಪದಿಂದಲೇ ವೀಕ್ಷಕರನ್ನು ಸೆಳೆಯುತ್ತವೆ’ ಎನ್ನುತ್ತಾರೆ ಕಥೆಗಾರ ದಿವಾಕರ್. ಅಲ್ಪ ಸಮಯದಲ್ಲೇ ದೊರೆಯುವ ಯಶಸ್ಸು ಸ್ಪರ್ಧಿಗಳನ್ನು ಉನ್ಮತ್ತಗೊಳಿಸಿ ಅವರ ಸುತ್ತ ಒಂದು ಭ್ರಾಮಕ ಜಗತ್ತನ್ನು ಸೃಷ್ಟಿಸುತ್ತದೆ.  ಬಿಗ್ ಬಾಸ್‍ನಂಥ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಪರಸ್ಪರ ಅವಮಾನಿಸುವ ಮತ್ತು ನೋಯಿಸುವ ಕ್ರಿಯೆಯೇ  ಮುಖ್ಯವಾಗಿದ್ದು ಕಾರ್ಯಕ್ರಮದ ಸಂಯೋಜಕರು ಇಂಥ ಕ್ರಿಯೆಗಾಗಿಯೇ ಪ್ರತಿವಾರ ಟಾಸ್ಕ್ ಗಳನ್ನು  ನೀಡುತ್ತ ಹೋಗುತ್ತಾರೆ. ಪ್ರಖ್ಯಾತ ಮನೋವಿಜ್ಞಾನಿ ಎರಿಕ್ ಪ್ರಾಮ್ ‘ಇತರರನ್ನು ಹಂಗಿಸುವ, ಅವರ ಭಾವನೆಗಳ ಮೇಲೆ ಹಲ್ಲೆ ಮಾಡುವ ಮಾನಸಿಕ ಕ್ರೌರ್ಯವಿದೆಯಲ್ಲ ಅದು ದೈಹಿಕ ಕ್ರೌರ್ಯಕ್ಕಿಂತ ಹೆಚ್ಚು ವ್ಯಾಪಕ’ ಎಂದು ಅಭಿಪ್ರಾಯಪಡುತ್ತಾನೆ. ಜೊತೆಗೆ ಆಧುನಿಕ ಮನುಷ್ಯರಲ್ಲಿ ಇತರರ ನೋವನ್ನು, ಅವಮಾನವನ್ನು ನೋಡಿ ಸಂತೋಷಪಡುವ ಪ್ರವೃತ್ತಿ ಹೆಚ್ಚುತ್ತಿದೆಯೆಂದು ಆತಂಕ ವ್ಯಕ್ತಪಡಿಸುತ್ತಾನೆ. ವೀಕ್ಷಕರಲ್ಲಿನ ಇಂಥ ಪ್ರವೃತ್ತಿಯೇ ಬಿಗ್ ಬಾಸ್‍ನಂಥ ರಿಯಾಲಿಟಿ ಶೋಗಳು ಜನಪ್ರಿಯವಾಗಲು ಕಾರಣವಾಗುತ್ತಿದೆ. 

ಇವತ್ತು ವಿದ್ಯುನ್ಮಾನ ವಾಹಿನಿಗಳು ಚಿಕ್ಕ ಮಕ್ಕಳನ್ನು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳಾಗಿ ಬಳಸಿಕೊಳ್ಳುತ್ತಿರುವುದು ಮತ್ತು ಪೋಷಕರು  ಕೂಡ ಸಹಕರಿಸುತ್ತಿರುವುದು ರಿಯಾಲಿಟಿ ಶೋಗಳ ಜನಪ್ರಿಯತೆ ಮತ್ತು ಜನಾಕರ್ಷಣೆಗೆ ಸಾಕ್ಷಿಯಾಗಿದೆ. ನಾಲ್ಕು ವರ್ಷದ ಮಗುವೊಂದು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಶೋನ ಕೊನೆಯವರೆಗೂ ಸ್ಪರ್ಧಿಯಾಗಿ ಉಳಿಯುವುದು ಮತ್ತು ಆ ಮಗು ತನ್ನ ವಯಸ್ಸಿಗೂ ಮೀರಿದ ಗಾಂಭೀರ್ಯವನ್ನು ಪ್ರದರ್ಶಿಸುವುದು ಅತ್ಯಂತ ಬಾಲೀಶವಾಗಿ ಕಾಣಿಸುತ್ತದೆ. ಹೀಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಒಂದೆಡೆ ಪೋಷಕರಿಂದ ಇನ್ನೊಂದೆಡೆ ತರಬೇತಿದಾರರಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಇಲ್ಲಿ ಸ್ಪರ್ಧೆಯ ಹೆಸರಿನಲ್ಲಿ ಮಕ್ಕಳನ್ನು ಯಂತ್ರಗಳಂತೆ ಬಳಸಿಕೊಳ್ಳುತ್ತಿರುವುದು ಮತ್ತು ರಿಯಾಲಿಟಿ ಶೋ ತಂದುಕೊಂಡುವ ಅಲ್ಪಕಾಲದ ಜನಪ್ರಿಯತೆ ಮತ್ತು ಯಶಸ್ಸನ್ನು ಇನ್ನು ಅರಗಿಸಿಕೊಳ್ಳದ ವಯಸ್ಸಿನ ಪರಿಣಾಮ ಮಕ್ಕಳು ತಮ್ಮ ಸಹಜ ಬಾಲ್ಯದಿಂದ ವಂಚಿತರಾಗುತ್ತಿರುವರು. 

ರೋಚಕ ಸುದ್ದಿ

1984 ರಲ್ಲಿ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಹತ್ಯೆಯಾದಾಗ ಬೆಳಿಗ್ಗೆ ನಡೆದ ಈ ದುರ್ಘಟನೆ ದೇಶದ ಸಾರ್ವಜನಿಕರನ್ನು ತಲುಪಲು ಮಧ್ಯಾಹ್ನ ಮೂರುಗಂಟೆಯಾಗಿತ್ತು. ಪತ್ರಿಕೆಗಳು ಪ್ರಕಟವಾಗಿ ಓದುಗರ ಕೈಸೇರಿದ ನಂತರ ಘಟಿಸುವ ಘಟನೆಗಳನ್ನು ಓದುಗರಿಗೆ/ಜನರಿಗೆ ತಲುಪಿಸಲು ನಾಲ್ಕೈದು ಪುಟಗಳ ಸಂಜೆ ಪತ್ರಿಕೆಗಳನ್ನು ಮುದ್ರಿಸುವ ವ್ಯವಸ್ಥೆ ಆಗೆಲ್ಲ ಜಾರಿಯಲ್ಲಿತ್ತು. ಆದರೆ ಇವತ್ತು ಆಧುನಿಕ ತಂತ್ರಜ್ಞಾನದ ಪರಿಣಾಮ ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆದ ಸುದ್ದಿಯನ್ನು ಕ್ಷಣಮಾತ್ರದಲ್ಲಿ ಬಿತ್ತರಿಸುವ ಅನುಕೂಲ ಈ ವಿದ್ಯುನ್ಮಾನ ವಾಹಿನಿಗಳಿಗೆ ಪ್ರಾಪ್ತವಾಗಿದೆ. ಅದಕ್ಕೆಂದೆ ಕನ್ನಡ ಭಾಷೆಯಲ್ಲೇ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸುದ್ದಿ ವಾಹಿನಿಗಳು ಚಲಾವಣೆಯಲ್ಲಿವೆ. ರಸ್ತೆ ಅಪಘಾತ, ಹೊಡೆದಾಟದಂಥ ಸುದ್ದಿಗಳನ್ನು ಲೈವ್ ಆಗಿ ತೋರಿಸುವ ಸುದ್ದಿ ವಾಹಿನಿಗಳು ಪೈಪೋಟಿಯಂತೆ ರೋಚಕ ಸುದ್ದಿಗಳ ಬೆನ್ನುಹತ್ತಿ ಹಸಿಬಿಸಿ ದೃಶ್ಯಗಳನ್ನು ಬಿತ್ತರಿಸುವುದರ ಮೂಲಕ ಸಮಾಜದಲ್ಲಿನ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ರಸ್ತೆ ಅಪಘಾತದಂಥ ದೃಶ್ಯಗಳನ್ನು ದಿನವಿಡೀ ಪ್ರದರ್ಶಿಸುವುದರಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತಿವೆ. ಪ್ರತಿಯೊಂದು ಸುದ್ದಿಗೂ ಬ್ರೇಕಿಂಗ್ ನ್ಯೂಸ್ ಎನ್ನುವ ಹಣೆಪಟ್ಟಿ ಅಂಟಿಸಿ ಬಿತ್ತರಿಸುವುದು ನಮ್ಮ ವಿದ್ಯುನ್ಮಾನ ಸುದ್ದಿ ವಾಹಿನಿಗಳಿಗೆ ಅದೊಂದು ಗೀಳಾಗಿ ಪರಿಣಮಿಸಿದೆ. ಅಪರಾಧ ಲೋಕವೇ ಈ ಸುದ್ದಿ ವಾಹಿನಿಗಳಿಂದ ನಮ್ಮ ಕಣ್ಣೆದುರು ಅನಾವರಣಗೊಳ್ಳುತ್ತಿದೆ. ಕ್ರೈಮ್ ಸುದ್ದಿಗಳನ್ನು ಬಿತ್ತರಿಸಲು ನಡೆದ ಅಪರಾಧ ಪ್ರಕರಣಗಳ ನಕಲು ಛಾಯೆಯನ್ನು ಅತ್ಯಂತ ರೋಚಕವಾಗಿ ರೂಪಿಸಿ ನೋಡುಗರ ಮುಂದಿಡುತ್ತಿರುವ ವಾಹಿನಿಗಳು ಒಂದರ್ಥದಲ್ಲಿ ಅಪರಾಧ ಪ್ರಕರಣಗಳು ಸಮಾಜದಲ್ಲಿ ಹೆಚ್ಚಲು ಕಾರಣವಾಗುತ್ತಿವೆ.  

ಕಾಡುತ್ತಿರುವ ಭವಿಷ್ಯದ ಚಿಂತೆ

ಜನರ ಭಾವನೆಗಳನ್ನೆ ಬಂಡವಾಳವಾಗಿಸಿಕೊಂಡು ಇವತ್ತು ಜ್ಯೋತಿಷಿಗಳು ವಾಹಿನಿಗಳ ಮೂಲಕ ಸೆಲೆಬ್ರಿಟಿಗಳಾಗುತ್ತಿರುವರು. ಜನಪ್ರಿಯತೆಗಾಗಿ ಪ್ರತಿಯೊಂದು ವಾಹಿನಿಗಳು ಜ್ಯೋತಿಷ್ಯ ಶಾಸ್ತ್ರದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿರುವರು. ಹೋಮ, ಹವನ, ವಾಸ್ತು, ಸಂಖ್ಯಾಶಾಸ್ತ್ರದಂಥ ಕಾರ್ಯಕ್ರಮಗಳಿಗೆ ವಾಹಿನಿಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ. ಈ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜನರೇಕೆ ಇಂಥ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವರು ಎನ್ನುವ ಪ್ರಶ್ನೆಗೆ ಮನೋವಿಜ್ಞಾನಿಗಳು ಇವತ್ತಿನ ಒತ್ತಡದ ಬದುಕೇ ಇದಕ್ಕೆಲ್ಲ ಕಾರಣ ಎಂದು ಉತ್ತರಿಸುತ್ತಾರೆ. ಓದು, ಉದ್ಯೋಗ ಹೀಗೆ ಪ್ರತಿ ಸಂದರ್ಭದಲ್ಲೂ ಮನುಷ್ಯ ಒತ್ತಡಕ್ಕೆ ಒಳಗಾಗುತ್ತಿರುವನು. ಉದ್ಯೋಗ ಕ್ಷೇತ್ರದಲ್ಲಿನ ಸ್ಪರ್ಧೆ ಮತ್ತು ಒತ್ತಡ ಕುಟುಂಬ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪರಿಣಾಮವಾಗಿ ಮನೋಕ್ಲೇಶಕ್ಕೆ ಒಳಗಾಗುವವರಿಗೆ ಹುಲ್ಲು ಕಡ್ಡಿಯೂ ಆಸರೆ ಎನ್ನುವಂತೆ ಜೋತಿಷ್ಯಶಾಸ್ತ್ರ ತಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವ ಪರ್ಯಾಯ ಮಾರ್ಗವಾಗಿ ಕಾಣಿಸುತ್ತಿದೆ. ಇಲ್ಲಿ ಜನರ ಇಂಥ ಮನಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಜ್ಯೋತಿಷಿಗಳು ಜ್ಯೋತಿಷ್ಯಶಾಸ್ತ್ರವನ್ನು ಹಣ ಮಾಡುವ ದಂಧೆಯಾಗಿ ಪರಿವರ್ತಿಸಿದರೆ ವಾಹಿನಿಗಳು ತಮ್ಮ ಟಿಆರ್‍ಪಿ ರೇಟನ್ನು ಹೆಚ್ಚಿಸಿಕೊಳ್ಳಲು ಇಂಥ ಕಾರ್ಯಕ್ರಮಗಳ ಮೊರೆ ಹೋಗುತ್ತಿವೆ. 

ಕಥೆಯೇ ಇಲ್ಲದ ಮತ್ತು ವಾಸ್ತವಿಕತೆಗೆ ದೂರವಿರುವ ಧಾರಾವಾಹಿಗಳು, ಕ್ರೈಮ್ ಪ್ರಕರಣಗಳು, ಜ್ಯೋತಿಷ್ಯಶಾಸ್ತ್ರ, ಬ್ರೇಕಿಂಗ್ ನ್ಯೂಸ್ ಎನ್ನುವ ರೋಚಕ ಸುದ್ದಿ, ರಿಯಾಲಿಟಿ ಶೋಗಳೆನ್ನುವ ಅಸಹಜ ಆಟದ ಬೆನ್ನುಹತ್ತಿರುವ ವಾಹಿನಿಗಳು ಒಂದರ್ಥದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ಪ್ರೇಕ್ಷಕರೂ ಕೂಡ ಇಂಥ ಅಸಹಜ ಮತ್ತು ರೋಚಕ ಕಾರ್ಯಕ್ರಮಗಳನ್ನು ವೀಕ್ಷಿಸುವುದರ ಮೂಲಕ ವಿದ್ಯುನ್ಮಾನ ವಾಹಿನಿಗಳಲ್ಲಿನ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸುತ್ತಿರುವರು. ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಒಂದಿಷ್ಟು ಗುಣಾತ್ಮಕ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದರೂ ಈ ಖಾಸಗಿ ವಾಹಿನಿಗಳು ಕೊಡುವ ರೋಚಕತೆ ಮತ್ತು ಭ್ರಾಮಕತೆಯ ಎದುರು ದೂರದರ್ಶನದ ಕಾರ್ಯಕ್ರಮಗಳು ತೀರ ಸಪ್ಪೆಯಾಗಿ ಕಾಣಿಸುತ್ತಿವೆ. ಪರಿಣಾಮವಾಗಿ ದೂರದರ್ಶನದಲ್ಲಿನ ಅತ್ಯುತ್ತಮ ಕಾರ್ಯಕ್ರಮಗಳು ವೀಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಇಡೀ ಸಮಾಜವೇ ಅದೊಂದು ಅನಾರೋಗ್ಯಕರ ವ್ಯವಸ್ಥೆಯಾಗಿ ಬೆಳೆಯುವ ದಿನಗಳು ದೂರವಿಲ್ಲ. ಆದ್ದರಿಂದ ಖಾಸಗಿ ವಿದ್ಯುನ್ಮಾನ ವಾಹಿನಿಗಳಲ್ಲಿನ ಅಸಹಜ ಮತ್ತು ಅನಾರೋಗ್ಯಕರ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವುದು ಇವತ್ತಿನ ತುರ್ತು ಅಗತ್ಯವಾಗಿದೆ.   
(ಲೇಖನ ೧೭.೧೨.೨೦೧೭ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾಗಿದೆ)

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, November 28, 2017

ಸಾಂಗತ್ಯ (ಕಥೆ)

             



(ಎಪ್ರಿಲ್ ೨೦೧೮ ರ 'ತುಷಾರ' ಪತ್ರಿಕೆಯಲ್ಲಿ ಪ್ರಕಟವಾಗಿದೆ)

       ‘ಮನಸ್ವಿನಿ ಮೇಡಂ ಷಾರ್ಪ್ 10 ಗಂಟೆಗೆ ಬಸವೇಶ್ವರ ಸರ್ಕಲ್‍ನಲ್ಲಿರೊ ಸಾಹಿತ್ಯ ಪ್ರಕಾಶನಕ್ಕೆ ಬನ್ನಿ. ಇವತ್ತು ನನ್ನ ‘ಭಾವನೆಗಳು’ ಪುಸ್ತಕ ಬಿಡುಗಡೆ ಆಗ್ತಿದೆ. ಆ ಪುಸ್ತಕದ ಮೊದಲನೆ ಓದುಗರು ನೀವೇ ಆಗ್ಬೇಕು. ಪ್ಲೀಜ್ ತಪ್ಪಿಸಬೇಡಿ ದಯವಿಟ್ಟು ಬನ್ನಿ ಸಭಾಂಗಣದ ಬಾಗಿಲಲ್ಲೆ ನಿಮಗಾಗಿ ಕಾಯ್ತಿರ್ತಿನಿ’ ರಾಘವ ಫೋನ್  ಮಾಡಿದಾಗ ಗಡಿಯಾರ ಬೆಳಗಿನ 9 ಗಂಟೆ ತೋರಿಸುತ್ತಿತ್ತು. ರವಿವಾರವಾದ್ರೂ ಮಕ್ಕಳಿಬ್ಬರು ಸ್ಪೆಷಲ್ ಕ್ಲಾಸ್ ಅಂತ ಸ್ಕೂಲಿಗೆ ರೆಡಿ ಆಗ್ತಿದ್ರು. ಪ್ರದೀಪ ಬಿಜಿನೆಸ್ ಅಂತ ಹೈದರಾಬಾದಿಗೆ ಹೋಗಿ ಎರಡು ದಿನಗಳಾಗಿತ್ತು. ಹೇಗೂ ಭಾನುವಾರ ಕಾಲೇಜಿಗೆ ರಜೆ ಬೇರೆ, ಮೇಲೆ ರಾಘವ ಸರ್ ಅವರ ಆತ್ಮೀಯ ಒತ್ತಾಯ. ಮಕ್ಕಳಿಬ್ಬರನ್ನೂ ಸ್ಕೂಲ್ ವ್ಯಾನಿಗೆ ಹತ್ತಿಸಿ ಗಡಿಯಾರ ನೋಡಿಕೊಂಡಾಗ ಕಾರ್ಯಕ್ರಮಕ್ಕೆ ಇನ್ನೂ ಅರ್ಧಗಂಟೆ ಸಮಯವಿತ್ತು. ಕಾರಿನಲ್ಲಿ ಮನೆಯಿಂದ ಸಾಹಿತ್ಯ ಪ್ರಕಾಶನಕ್ಕೆ ಹದಿನೈದು ನಿಮಿಷಗಳ ದಾರಿ. ಮಕ್ಕಳಿಗೆಂದು ಮಾಡಿಟ್ಟಿದ್ದ ಟಿಫಿನ್‍ನಲ್ಲೆ ಒಂದಿಷ್ಟನ್ನು ತಿಂದು ಅಡುಗೆ ಮನೆಯಲ್ಲಿದ್ದ ಶಾರದಮ್ಮನವರಿಗೆ ಹೇಳಿ ಹೊರಬಂದಾಗ ಫೋನ್  ರಿಂಗಣಿಸಿತು. ಆ ಕಡೆಯಿಂದ ‘ಮೇಡಂ ಎಲ್ಲಿದ್ದಿರಾ?’ ಎನ್ನುವ ರಾಘವ ಮಾತಿಗೆ ಇಲ್ಲೆ ಹತ್ತಿರದಲ್ಲಿದ್ದೇನೆಂದು ಹೇಳಿ ಕಾರನ್ನು ಬಸವೇಶ್ವರ ಸರ್ಕಲ್ ಕಡೆ ತಿರುಗಿಸಿದೆ.  

   ರಾಘವ ಇತಿಹಾಸದ ಪ್ರಾಧ್ಯಾಪಕರಾಗಿ ನಾನು ಉಪನ್ಯಾಸಕಿಯಾಗಿರುವ ಕಾಲೇಜಿಗೆ ಬಂದು ಎಂಟು ತಿಂಗಳುಗಳಾಯ್ತು. ಇತಿಹಾಸದ ಪ್ರಾಧ್ಯಾಪಕರಾದರೂ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಅವರಿಗೆ. ಅನಂತಮೂರ್ತಿ, ಭೈರಪ್ಪ, ಯಶವಂತ ಚಿತ್ತಾಲ, ಲಂಕೇಶ್ ಅವರ ಹೆಚ್ಚಿನ ಕೃತಿಗಳನ್ನು ಓದಿಕೊಂಡವರು. ಕಿಟ್ಸ್, ಬೊದಿಲೇರ್, ಕಮೂ, ಕಾಫ್ಕಾ ಬಗ್ಗೆ ಅವರು ಆಸಕ್ತಿಯಿಂದ ಮಾತನಾಡುವುದನ್ನು ಕೇಳುವುದೆ ಚೆಂದ. ಜೊತೆಗೆ ನಾಲ್ಕಾರು ಪುಸ್ತಕಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಒಂದಿಷ್ಟು ಗುರುತಿಸಿಕೊಂಡಿರುವರು ಬೇರೆ. ಸಂಕೋಚ ಸ್ವಭಾವದ ರಾಘವ ಇತರರೊಂದಿಗೆ ಬೆರೆಯುವುದು ಅತಿ ಕಡಿಮೆ. ತಮ್ಮ ಬರವಣಿಗೆ ಬಗ್ಗೆ ಕಾಲೇಜಿನ ಸ್ಟಾಪ್ ರೂಮಿನಲ್ಲಿ ಇತರ ಉಪನ್ಯಾಸಕರೊಂದಿಗೆ ಅವರು ಮಾತಾಡಿದ್ದನ್ನು ನಾನು ಕೇಳಿಯೇ ಇಲ್ಲ. ಆದರೆ ಕಾಲೇಜಿನಲ್ಲಿನ ಸಾಹಿತ್ಯಕ್ಕೆ ಸಂಬಂಧಿಸಿದ ಯಾವ ಸಮಾರಂಭಗಳನ್ನು ತಪ್ಪಿಸಿಕೊಂಡವರಲ್ಲ. ಕಾಲೇಜಿನಲ್ಲಿದ್ದಾಗ ರಾಘವ ಸರ್ ಒಂದು ಕ್ಲಾಸ್ ರೂಮಿನಲ್ಲಿ ಪಾಠ ಮಾಡ್ತಿರಬಹುದು ಅಥವಾ ಸ್ಟಾಪ್ ರೂಮಿನಲ್ಲಿ ಪುಸ್ತಕ ಓದುತ್ತ ಕುಳಿತಿರಬಹುದು ಎಂದು ಇಡೀ ಕಾಲೇಜು ಹಾಸ್ಯ ಮಾಡುತ್ತಿತ್ತು. ರಾಘವ ಮಾತ್ರ ಯಾವದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ನೆಚ್ಚಿನ ಲೇಖಕರ ಪುಸ್ತಕಗಳ ಓದಿನಲ್ಲಿ ಮಗ್ನರಾಗಿ ಸುತ್ತಲಿನ ಜಗತ್ತನ್ನೆ ಮರೆಯುತ್ತಿದ್ದರು. 

    ಕಾರು ಬಸವೇಶ್ವರ ಸರ್ಕಲ್ ಸುತ್ತುಹಾಕಿ ಎಡಕ್ಕೆ ತಿರುಗಿ ಸಾಹಿತ್ಯ ಪ್ರಕಾಶನದ ಆವರಣವನ್ನು ಪ್ರವೇಶಿಸಿದಾಗ ದೂರದಿಂದಲೆ ಬಾಗಿಲಲ್ಲಿ ರಾಘವ ನಿಂತಿರುವುದು ಕಾಣಿಸಿತು. ನನ್ನನ್ನು ನೋಡುತ್ತಲೆ ಕಾರಿನ ಸಮೀಪ ಬಂದರು. ಬಿಳಿ ಪಾಯಿಜಾಮ ಜುಬ್ಬಾದಲ್ಲಿ ಎಂದಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದ್ದರು. ಸಾಹಿತ್ಯ ಪ್ರಕಾಶನದ ಕಟ್ಟಡ ಮಾವಿನ ತೋರಣ ಮತ್ತು ಹೂಗಳಿಂದ ಶೃಂಗಾರಗೊಂಡಿತ್ತು. ಪ್ರವೇಶ ದ್ವಾರದ ಬಳಿ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದ ರಂಗೋಲಿ ಅತಿಥಿಗಳನ್ನು ಸ್ವಾಗತಿಸುತ್ತಿತ್ತು. ‘ಮೇಡಂ ಇನ್ನೇನು ಕಾರ್ಯಕ್ರಮ ಶುರುವಾಗುತ್ತೆ ನಿಮಗಾಗಿ ಫ್ರಂಟ್ ಸೀಟ್ ಕಾಯ್ದಿರಿಸಿದ್ದಿನಿ ಬನ್ನಿ’ ರಾಘವ ಅವಸರಿಸುತ್ತ ನನ್ನನ್ನು ವೇದಿಕೆಯ ಮುಂಭಾಗಕ್ಕೆ ಕರೆದೊಯ್ದು ಕೂರಿಸಿದರು. ‘ಸರ್ ನಿಮ್ಮ ಹೆಂಡತಿ ಎಲ್ಲಿ’ ನನ್ನ ಮಾತಿನಿಂದ ಕಳೆಗುಂದಿದ ರಾಘವ ಮುಖ ನೋಡಿ ಪ್ರಶ್ನೆ ಕೇಳಬಾರದಿತ್ತೇನೋ ಅನಿಸಿತು. 

     ಅತಿಥಿಗಳ ಭಾಷಣ ಮುಗಿದು ಪುಸ್ತಕ ಬಿಡುಗಡೆಯಾಗಿ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ‘ಮೇಡಂ ನಿಮಗೆ’ ರಾಘವ ಕೊಟ್ಟ ಪುಸ್ತಕ ತೆರೆದು ನೋಡಿದೆ ‘ಆತ್ಮೀಯ ಮನಸ್ವಿನಿ ಮೇಡಮ್‍ಗೆ ಪ್ರೀತಿಯಿಂದ’ ಎನ್ನುವ ಮುದ್ದಾದ ಅಕ್ಷರಗಳ ಕೆಳಗೆ ‘ನಿಮ್ಮ ರಾಘವ’ ಎಂದಿತ್ತು. ಮನಸ್ಸು ತುಂಬಿ ಬಂದು ಮಾತಿಗಾಗಿ ತಡವರಿಸಿದೆ. ರಾಘವ ಕಣ್ಣಲ್ಲೂ ಹೊಳಪು. ಊಟ ಮಾಡಿಕೊಂಡೆ ಹೋಗಬೇಕೆಂದು ರಾಘವ ಒತ್ತಾಯಿಸಿದಾಗ ‘ಇಲ್ಲ ಸರ್ ಸ್ಕೂಲಿಂದ ಮಕ್ಕಳು ಬರೊ ಹೊತ್ತು. ನನಗಾಗಿ ಕಾಯ್ತಿರ್ತಾರೆ ನಾನು ಹೋಗ್ಬೇಕು’ ಗಡಿಬಿಡಿಸಿ ಕಾರಿನಕಡೆ ನಡೆದೆ. ಕಾರಿನವರೆಗೂ ಬಿಳ್ಕೊಡಲು ಬಂದ ರಾಘವ ‘ಮೇಡಂ ನಿಧಾನವಾದರೂ ಪರ್ವಾಗಿಲ್ಲ ಪುಸ್ತಕ ಓದಿ ನಿಮ್ಮ ಅಭಿಪ್ರಾಯ ಹೇಳಿ ಕಾಯ್ತಿರ್ತಿನಿ’ ಎಂದಾಗ ಪುಸ್ತಕದ ಮೇಲೆ ಮೃದುವಾಗಿ ಕೈಯಾಡಿಸಿ ಕಣ್ಣಲ್ಲೆ ಮೆಚ್ಚುಗೆ ಸೂಚಿಸಿದೆ. ರಾಘವ ಕಣ್ಣೊಳಗಿನ ಹೊಳಪು ಇನ್ನಷ್ಟು ಹೆಚ್ಚಿದಂತೆ ಕಾಣಿಸಿತು. ಕಾರು ಸಾಹಿತ್ಯ ಪ್ರಕಾಶನ ಆವರಣದ ಮೇನ್ ಗೇಟ್ ದಾಟಿ ಮುಖ್ಯರಸ್ತೆಗೆ ಬರುವವರೆಗೂ ರಾಘವ ಅಲ್ಲೇ ನಿಂತಿರುವುದು ಕಾರಿನ ಸೈಡ್ ಮಿರರ್‍ನಲ್ಲಿ ಕಾಣಿಸಿ ಕಣ್ಣುಗಳು ಹನಿಗೂಡಿದವು. 

    ಮನೆ ಒಳಗಡೆ ಕಾಲಿಡುತ್ತಿದ್ದಂತೆ ಪ್ರದೀಪ ಮತ್ತು ಮಕ್ಕಳ ಗಲಾಟೆ ನನ್ನನ್ನು ಸ್ವಾಗತಿಸಿತು. ‘ಅರೇ ಒಂದುವಾರ ಅಂತಹೇಳಿ ಮೂರೇ ದಿನಗಳಲ್ಲಿ ಹೈದರಾಬಾದಿನಿಂದ ಹಿಂದಿರುಗಿದ್ದಿರಿ’ ಎನ್ನುತ್ತ ವ್ಯಾನಿಟಿ ಬ್ಯಾಗನ್ನು ಟೀಪಾಯ್ ಮೇಲಿಟ್ಟು ಸೋಫಾಕ್ಕೆ ಒರಗಿದೆ. ‘ಕೆಲಸ ಬೇಗ ಮುಗೀತು. ಬೇರೆ ಇನ್ನೇನೂ ಕೆಲಸ ಇರ್ಲಿಲ್ಲ ಅಲ್ಲಿ. ಅದಕ್ಕೆ ಇವತ್ತೇ ಹೊರಟು ಬಂದೆ’ ಎಂದು ಉತ್ತರಿಸಿದ ಪ್ರದೀಪ ವ್ಯಾನಿಟಿ ಬ್ಯಾಗಿನಿಂದ ಅರ್ಧ ಹೊರಕ್ಕೆ ಕಾಣಿಸುತ್ತಿದ್ದ ಪುಸ್ತಕವನ್ನು ಕೈಗೆತ್ತಿಕೊಂಡು ಒಳಪುಟದ ಮೇಲೆ ಕಣ್ಣಾಡಿಸಿದರು. ನನ್ನೆದೆ ಢವಢವ ಎಂದು ಹೊಡೆದುಕೊಳ್ಳಲಾರಂಭಿಸಿತು. ‘ಏ ಮನು ರಾಘವ ನಿನ್ನನ್ನು ಲವ್ ಮಾಡ್ತಿರಬಹುದು ಅಂತ ಅನಿಸುತ್ತೆ’ ಪ್ರದೀಪ ಮಾತಿನಲ್ಲಿ ಛೇಡಿಸುವಿಕೆ ಇತ್ತೆ ವಿನ: ಯಾವುದೇ ಕೊಂಕಿರಲಿಲ್ಲ. ಪ್ರದೀಪ ಬೆನ್ನ ಮೇಲೊಂದು ಹುಸಿಎಟು ಹಾಕಿ ತೋಳಿಗೆ ಮುಖ ಉಜ್ಜಿದಾಗ ಇವತ್ತು ನಾನೇಕೋ ಎಂದಿನಂತಿಲ್ಲ ಎನ್ನುವ ಭಾವ ಉದಿಸಿ ಕಾಡಿದಂತಾಯಿತು. 

     ಕಳೆದ ಮೂರ್ನಾಲ್ಕು ತಿಂಗಳಿಂದ ರಾಘವ ಅವರು ನನ್ನನ್ನು ನೋಡುವ ರೀತಿಯಲ್ಲಿ ಏನೋ ಬದಲಾವಣೆ ಕಾಣಿಸುತ್ತಿದೆ. ಕಾಲೇಜಿನಲ್ಲಿ ನನ್ನನ್ನು ಹುಡುಕಿಕೊಂಡು ಬಂದು ಸಾಹಿತ್ಯದ ಕುರಿತು ಮಾತನಾಡುವುದು, ತಾವು ಓದಿದ ಪುಸ್ತಕಗಳನ್ನು ನನಗೆ ಓದಲು ಕೊಡುವುದು, ನಾನು ರಜೆ ಹಾಕಿ ಮರುದಿನ ಕಾಲೇಜಿಗೆ ಹೋದಾಗ ನನಗಾಗಿಯೇ ಕಾಯುತ್ತಿರುವರೇನೋ ಎನ್ನುವಷ್ಟು ಭಾವಪರವಶರಾಗುವುದು ಅವರ ಈ ವರ್ತನೆ ಕೆಲವೊಮ್ಮೆ ಅತಿ ಎನಿಸಿ ಮನಸ್ಸಿಗೆ ಕಿರಿಕಿರಿಯಾದರೂ ರಾಘವ ಅವರ ಜೊತೆಗಿನ ಈ ಒಡನಾಟ ನನ್ನಲ್ಲೂ ಒಂದಿಷ್ಟು ಲವಲವಿಕೆಗೆ ಕಾರಣವಾಗಿದೆ. ಸಂಕೋಚ ಸ್ವಭಾವದ ರಾಘವ ಅವರೇನೂ ನೇರವಾಗಿ ನನ್ನ ಗೆಳೆತನ ಬಯಸಿರಲಿಲ್ಲ. ಸ್ಟಾಫ್ ರೂಮಿನಲ್ಲಿ ಭೇಟಿಯಾದಾಗ ಹಾಯ್ ಹಲೋಗಳಿಗಷ್ಟೆ ನಮ್ಮ ಮಾತುಕತೆ ಸೀಮಿತವಾಗಿರುತಿತ್ತು. ವಾಟ್ಸಪ್ಪಿನಲ್ಲೊಮ್ಮೆ  ಕುವೆಂಪು ಅವರ ‘ತನವು ನಿನ್ನದು ಮನವು ನಿನ್ನದು’ ಕವಿತೆಯನ್ನು ರಾಘವ ಮೆಸೆಜಿಸಿದಾಗ ನಾನು ಮೆಚ್ಚಿ ಅವರ ಪರ್ಸನಲ್ ನಂಬರಿಗೆ ಅಭಿಪ್ರಾಯ ಕಳುಹಿಸಿದ್ದೆ. ಅವತ್ತಿನಿಂದ ರಾಘವ ಅವರಿಗೆ ನನಗೂ ಸಾಹಿತ್ಯದ ಕುರಿತು ಅಭಿರುಚಿಯಿದೆ ಎಂದು ಗೊತ್ತಾಗಿ ಸಮಯ ಸಿಕ್ಕಾಗಲೆಲ್ಲ ನನ್ನೊಡನೆ ಸಾಹಿತ್ಯದ ಕುರಿತು ಚರ್ಚಿಸುತ್ತಿದ್ದರು. ಕನ್ನಡ ಸಾಹಿತ್ಯವನ್ನು ತುಂಬ ಓದಿಕೊಂಡಿರುವ ರಾಘವ ಅವರೊಂದಿಗೆ ಮಾತನಾಡುವುದು ಮತ್ತು ಚರ್ಚಿಸುವುದು ನನ್ನಲ್ಲಿಯೂ ಕನ್ನಡ ಕಥೆ, ಕಾದಂಬರಿಗಳನ್ನು ಓದುವ ಆಸಕ್ತಿಯನ್ನು ಮೂಡಿಸಿತ್ತು. ನಿದ್ದೆ ಬಾರದೆ ಮಗ್ಗುಲು ಬದಲಿಸಿದಾಗ ‘ಮನು ಯಾಕೆ ನಿದ್ದೆ ಬರ್ತಿಲ್ವಾ’ ಪ್ರದೀಪ ಕೈನ ಬೆಚ್ಚನೆ ಸ್ಪರ್ಷದಿಂದ ವಾಸ್ತವಕ್ಕೆ ಮರಳಿದೆ. ‘ನನ್ಗೊತ್ತು ನೀನು ಏನನ್ನು ಚಿಂತಿಸ್ತಿದ್ದಿಯಾ ಅಂತ’ ಪ್ರದೀಪ ನುಡಿದಾಗ ಎದೆ ಝಲ್ ಎಂದು ಆ ಚಳಿಯಲ್ಲೂ ಮುಖದ ಮೇಲೆ ಬೆವರೊಡೆಯಿತು. ‘ಕಾಲೇಜಿನ ರಾಜಕೀಯವನ್ನ ತೀರ ತಲೆಗೆ ಹಚ್ಕೊಬೇಡ. ನೀನು ಕೊರ್ಗೊದಲ್ಲದೆ ಮನೆಯಲ್ಲಿ ಎಲ್ಲರನ್ನೂ ಕೊರಗಸ್ತಿಯಾ’ ಭಾರವೊಂದು ಇಳಿದಂತಾಗಿ ದೀರ್ಘವಾಗಿ ಉಸಿರೆಳೆದುಕೊಂಡೆ. ಪ್ರದೀಪ ಮತ್ತೆ ನಿದ್ದೆಗೆ ಜಾರಿದ್ದರು. ಯಾವ ಚಿಂತೆಯನ್ನು ತಲೆಗೆ ಹಚ್ಚಿಕೊಳ್ಳದೆ ತಾನಾಯ್ತು ತನ್ನ ಬಿಜಿನೆಸ್ ಆಯ್ತು ಎನ್ನುವ ಪ್ರದೀಪ ನಿಜಕ್ಕೂ ಸುಖ ಪುರುಷ. ರಾತ್ರಿ ನಿದ್ದೆ ಬರುವವರೆಗೂ ಕಥೆ ಇಲ್ಲವೆ ಕಾದಂಬರಿಯನ್ನು ಓದುತ್ತ ಕುಳಿತಾಗಲೆಲ್ಲ ಪ್ರದೀಪ ‘ಈ ಸಾಹಿತ್ಯ ಮನುಷ್ಯನನ್ನು ಸೆಂಟಿಮೆಂಟಲ್ ಫೂಲ್ ಆಗಿಸುತ್ತೆ. ತೀರ ಓದ್ಬೇಡ ಸ್ವಲ್ಪ ವ್ಯವಹಾರ ಜ್ಞಾನ ಇರಲಿ’ ಎಂದು ರೇಗಿಸುತ್ತಿದ್ದರು. ಈ ಸಾಹಿತ್ಯ, ನಾಟಕ, ಸಂಗೀತ ಇವುಗಳಿಂದ ಪ್ರದೀಪ ಬಲುದೂರ. ಆದರೆ ನನಗೆ ಚಿಕ್ಕಂದಿನಿಂದ ಈ ಸಂಗೀತ ಮತ್ತು ನೃತ್ಯದಲ್ಲಿ ಬಹಳ ಆಸಕ್ತಿ. ನನ್ನ ಆಸಕ್ತಿಯನ್ನು ಅರಿತ ಅಪ್ಪ ಚಿಕ್ಕಂದಿನಲ್ಲೆ ನನ್ನನ್ನ ಡ್ಯಾನ್ಸ್ ಕ್ಲಾಸಿಗೆ ಸೇರಿಸಿದ್ದರು. ಕಾಲೇಜಿಗೆ ಸೇರಿದ ಮೇಲೆ ಅಲ್ಲಿ ನಡೆಯುತ್ತಿದ್ದ ಸಾಹಿತ್ಯದ ಕಾರ್ಯಕ್ರಮಗಳಿಂದ ಕಥೆ ಕಾದಂಬರಿಗಳ ಓದಿನ ಹವ್ಯಾಸವೂ ಮೊಳಕೆಯೊಡೆದು ಬೆಳೆಯಿತು. ಈ ಕೆಲವು ತಿಂಗಳುಗಳಿಂದ ರಾಘವ ಸ್ನೇಹದಿಂದಾಗಿ ಸಾಹಿತ್ಯದ ಅಭಿರುಚಿ ಮತ್ತಷ್ಟು ಹೆಚ್ಚಿದೆ. 

     ರಾಘವ ನನಗೆ ತೀರ ಹತ್ತಿರವಾಗಲು ಇದರಲ್ಲಿ ಅವರಷ್ಟೇ ನನ್ನ ಪಾಲೂ ಇದೆ. ಇಡೀ ಮನೆಯಲ್ಲಿ ಪ್ರದೀಪಗಾಗಲಿ ಅಥವಾ ಮಕ್ಕಳಿಗಾಗಲಿ ಹಾಡು, ಡ್ಯಾನ್ಸ್, ಸಾಹಿತ್ಯದ ಅಭಿರುಚಿಯಿಲ್ಲ. ಪ್ರದೀಪ್‍ಗೆ ಆಫೀಸು ಮನೆ ಒಂದೇ ಎನ್ನುವಂತೆ ದಿನದ ಹೆಚ್ಚಿನ ಸಮಯ ಕಳೆಯೊದು ತಮ್ಮ ಬಿಜಿನೆಸ್‍ನಲ್ಲೆ. ಮಕ್ಕಳು ಸ್ಕೂಲಿಂದ ಮನೆಗೆ ಬಂದವರೆ ಹೋಂವರ್ಕ್, ಟ್ಯೂಷನ್, ಪಕ್ಕದ ಮನೆಯ ಮಕ್ಕಳೊಂದಿಗೆ ಆಟ, ಕಾರ್ಟೂನ್ ನೋಡೊದು ಹೀಗೆ ಅವರಿಗೆ ನನ್ನೊಂದಿಗೆ ಮಾತಾಡೊದಕ್ಕೂ ಟೈಮ್ ಸಿಗೊಲ್ಲ. ಒಮ್ಮೊಮ್ಮೆ ಕಥೆ ಹೇಳ್ತಿನಿ ಬನ್ನಿ ಎಂದು ಕರೆದರೆ ‘ಹೋಗಮ್ಮಾ ನಿನ್ನ ಓಬೆರಾಯನ ಕಾಲದ ಕಥೆಗಳನ್ನ ಯಾರ ಕೇಳ್ತಾರೆ’ ಎಂದು ಸಿಡಿಮಿಡಿ ಗುಟ್ಟುತ್ತಾರೆ. ಸಹಜವಾಗಿಯೇ ನನಗೂ ನನ್ನ ಅಭಿರುಚಿಗಳನ್ನ ಹಂಚಿಕೊಳ್ಳಲು ಒಂದು ಗೆಳೆತನ ಬೇಕಾಗಿತ್ತು. ನನ್ನದೆ ಅಭಿರುಚಿ ಇರುವವರನ್ನು ಮನಸ್ಸು ಹುಡುಕುತ್ತಿತ್ತು ಅಂತ ಕಾಣುತ್ತೆ. ಹೀಗೆ ಹುಡುಕಾಟದಲ್ಲಿ ರಾಘವ ಪರಿಚಯವಾಯಿತು. ಅಭಿರುಚಿ ಒಂದೇ ಇರುವುದರಿಂದ ಇಬ್ಬರ ನಡುವೆ ಸಹಜವಾಗಿಯೆ ಆತ್ಮೀಯತೆ ಬೆಳೆಯಿತು. ಆದರೆ ಈ ಆತ್ಮೀಯತೆಯನ್ನು ರಾಘವ ತಪ್ಪಾಗಿ ತಿಳಿದುಕೊಂಡರೇನೋ ಎನ್ನುವ ಭಾವ ಕಳೆದ ಕೆಲವು ದಿನಗಳಿಂದ ನನ್ನನ್ನು ಕಾಡುತ್ತಿದೆ. ಎರಡು ಮಕ್ಕಳ ತಾಯಿಯಾದರು ನನ್ನ ದೈಹಿಕ ಸೌಂದರ್ಯ ಇನ್ನು ಮಾಸಿಲ್ಲ. ಮದುವೆಯಾಗುವವರೆಗೂ ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದ ಕಾರಣ ಬೊಜ್ಜಿಲ್ಲದೆ ಶರೀರ ನೀಳವಾಗಿದೆ. ಅಂದರೆ ರಾಘವ ಅವರದು ನನ್ನ ಮೇಲೆ ಇನ್‍ಫ್ಯಾಚುಯೇಷನ್ ಅನ್ಬಹುದಾ. ಛೀ ರಾಘವ ಅವರಂಥ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿಯನ್ನು ಆ ದೃಷ್ಟಿಯಲ್ಲಿ ನೋಡೊದಕ್ಕೂ ಮನಸ್ಸು ಬರಲ್ಲ. ಕಳೆದ  ಗಣೇಶ ಚತುರ್ಥಿಗೆ ನಲ್ವತ್ಮೂರು ತುಂಬಿದ  ನನಗಿಂತ ರಾಘವ ನಾಲ್ಕು ವರ್ಷ ದೊಡ್ಡವರು. ಇಂಥ ವಯಸ್ಸಿನಲ್ಲಿ ಅದೆಂಥ ದೈಹಿಕ ಆಕರ್ಷಣೆ ಇರುತ್ತೆ. ಕಳೆದ ವಾರದ ಘಟನೆಯನ್ನು ನೆನಪಿಸಿಕೊಂಡರೆ ರಾಘವ ಅವರ ಬಗೆಗಿನ ನನ್ನ ಕಲ್ಪನೆಯೇ ತಪ್ಪು ಅನಿಸುತ್ತೆ. ಆ ದಿನ ಕಾಲೇಜಿನಲ್ಲಿ ಸೇಮಿನಾರ ಮುಗಿಸಿಕೊಂಡು ಮನೆಗೆ ಹೊರಟಾಗ ಆಕಾಶದ ತುಂಬೆಲ್ಲ ಮೋಡಗಳು ದಟ್ಟವಾಗಿ ಕವಿದು ಆಗಲೋ ಈಗಲೋ ಮಳೆ ಸುರಿಯುವಂತ ವಾತಾವರಣವಿತ್ತು. ಕಾಲೇಜಿನಿಂದ ಒಂದಿಷ್ಟು ದೂರ ಬಂದದ್ದೆ ಕಾರು ಕೆಟ್ಟು ನಿಂತು ಮಳೆ ಧೋ ಎಂದು ಸುರಿಯಲಾರಂಭಿಸಿತು. ಸುತ್ತಲೂ ಕತ್ತಲು ಗಂವ್ ಎಂದು ಕವಿದ ನಿರ್ಜನ ಪ್ರದೇಶವದು. ಮನೆಗೆ ಫೋನ್ ಮಾಡಬೇಕೆಂದರೆ ಅಂದು ಪ್ರದೀಪ್ ಬೇರೆ ಊರಲ್ಲಿರಲಿಲ್ಲ. ಸ್ವಲ್ಪ ಹೊತ್ತು ಕಾರಿನಲ್ಲೆ ಕುಳಿತವಳಿಗೆ ಎರಿಸಿದ ಗ್ಲಾಸಿನಿಂದ ಆಕೃತಿಯೊಂದು ನಿಧಾನವಾಗಿ ಬರುತ್ತಿರುವುದು ಅಸ್ಪಷ್ಟವಾಗಿ ಕಾಣಿಸಿ ಹೆದರಿಕೆಯಿಂದ ಇಡೀ ಮೈಯೆಲ್ಲ ಬೆವತು ಒದ್ದೆಯಾಯಿತು. ಹತ್ತಿರ ಬಂದ ವ್ಯಕ್ತಿ ಗ್ಲಾಸಿಗೆ ಬಡಿದು ಬಾಗಿಲು ತೆರೆಯುವಂತೆ ಹೇಳಿದಾಗ ಆದದ್ದಾಗಲಿ ಎಂದು ಬಾಗಿಲು ನೂಕಿದೆ. ಮೊಬೈಲ್ ಬೆಳಕಲ್ಲಿ ರಾಘವ ನಿಂತಿರುವುದು ಕಾಣಿಸಿ ಹೋದ ಜೀವ ಮತ್ತೆ ಮರಳಿ ಬಂದಂತಾಯಿತು. ‘ಯಾಕೆ ಮೇಡಂ ಕಾರು ರಿಪೇರಿನಾ. ಮನೆಗೆ ಹೋಗ್ತಿದ್ದೆ ನಿಮ್ಮದೆ ಕಾರು ಅಂತ ಅನುಮಾನ ಬಂದು ನೋಡಿದ್ರೆ ಒಳಗಡೆ ನೀವೆ ಇದ್ದಿರಾ. ಇಂಥ ಮಳೆನಲ್ಲಿ  ಮೆಕ್ಯಾನಿಕ್ ಸಿಗೊಲ್ಲ. ನೋಡಿ ಆಟೋ ಬರ್ತಿದೆ ನಿಮ್ಮನ್ನ ಮನೆವರೆಗೂ ತಲುಪಿಸಿ ನಾನು ಹೋಗ್ತಿನಿ. ನನ್ನ ಕೊಡೆ ಹಿಡ್ಕೊಳ್ಳಿ’ ಎಂದವರೆ ರಾಘವ ಬರುತ್ತಿದ್ದ ಆಟೋ ನಿಲ್ಲಿಸಿ ನನ್ನನ್ನು ಕೂಡಲು ಹೇಳಿದರು. ನನ್ನ ಪಕ್ಕ ಇನ್ನೊಬ್ಬರು ಕೂಡುವಷ್ಟು ಜಾಗವಿದ್ದರೂ ಸಂಕೋಚದಿಂದ ರಾಘವ ಮಳೆಯಲ್ಲಿ ನೆನೆಯುತ್ತಲೆ ಚಾಲಕನ ಹತ್ತಿರ ಕೂತು ಮನೆ ಅಡ್ರೆಸ್ ಹೇಳಿದರು. ಅಂದು ರಾಘವ ಸಮೀಪ ನಿಂತಿದ್ದಾಗ ಫಳ್ಳೆಂದು ಹೊಳೆದ ಮಿಂಚಿನ ಬೆಳಕಲ್ಲಿ ಅವರ ಕಣ್ಣಲ್ಲಿ ಕಂಡದ್ದು ಅದೆ ನಿಷ್ಕಲ್ಮಶ ನೋಟವನ್ನು. ಕಾಮನೆಯಾಗಲಿ ಪರಿಸ್ಥಿತಿಯ ಉಪಯೋಗವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬೇಕೆಂಬ ವಾಂಛೆಯಾಗಲಿ ಅಲ್ಲಿ ಇರಲಿಲ್ಲ. ಆದರೂ ಬೆಲ್ಲಕ್ಕೆ ಮುತ್ತುವ ಇರುವೆಗಳಂತೆ  ಮನಸ್ಸು ರಾಘವ ಸುತ್ತಲೆ ಸುತ್ತುತ್ತಿದೆ.  ಸರಿ ತಪ್ಪುಗಳ ಲೆಕ್ಕಾಚಾರದಲ್ಲಿ ಇಡೀ ರಾತ್ರಿ ನಿದ್ರೆ ಕೂಡ ಹತ್ತಿರ ಸುಳಿಯದೆ ಇನ್ನೇನು ಒಂದಿಷ್ಟು ಜೊಂಪು ಹತ್ತುವ ವೇಳೆಗೆ ಪೂರ್ವ ಕೆಂಪಾಗುತ್ತಿತ್ತು. 

          ಬೆಳೆಗ್ಗೆ ಕಾಲೇಜಿಗೆ ಹೋದಾಗ ಸ್ಟಾಫ್ ರೂಮಿನಲ್ಲಿ ಶಾಲಿನಿ ಹೇಳಿದ ವಿಷಯ ಕೇಳಿ ನನಗೆ ನಂಬಲೆ ಆಗಲಿಲ್ಲ. ರಾಘವ ಅವರಿಗೆ ಮೈಸೂರಿಗೆ ವರ್ಗವಾಗಿ ಅವರು ಎರಡು ದಿನಗಳ ಹಿಂದೆಯೆ ಮನೆಯ ಸಾಮಾನುಗಳನ್ನೆಲ್ಲ ಸಾಗಿಸಿ ಹೆಂಡತಿಯನ್ನು ತವರಿಗೆ ಕಳಿಸಿದ್ದರು. ಕಾಲೇಜಿನಲ್ಲಿನ ಕೆಲವು ಕೆಲಸಗಳನ್ನು ಪೂರ್ಣಗೊಳಿಸಿ ಇವತ್ತೆ ಸಾಯಂಕಾಲ ಮೈಸೂರಿಗೆ ಹೊರಟು ನಾಳೆಯೆ ಡ್ಯೂಟಿಗೆ ರಿಪೋರ್ಟ್ ಮಾಡ್ಕೊಬೇಕಂತೆ. ವಿಷಯ ತಿಳಿದು ನನಗೆ ಒಂದು ರೀತಿಯ ಅನಾಥ ಭಾವ ಕಾಡಲಾರಂಭಿಸಿತು. ಹಾಗಾದರೆ ನಿನ್ನೆ ಭೇಟಿಯಾದಾಗಲೇ ನನಗೇಕೆ ಈ ವಿಷಯ ತಿಳಿಸಲಿಲ್ಲ ಎಂದು ರಾಘವ ಮೇಲೆ ಕೋಪಬಂತು. ಅಷ್ಟರಲ್ಲಿ ರಾಘವ ನಾನಿದ್ದ ಕಡೆಯೆ ಬರುವುದು ಕಾಣಿಸಿ ಏನೂ ಗೊತ್ತಿಲ್ಲದವಳಂತೆ ಅವತ್ತಿನ ಪಾಠದ ತಯ್ಯಾರಿ ಕಡೆ ಗಮನಹರಿಸಿದೆ. ‘ಮೇಡಂ ನಿಮಗೂ ವಿಷಯ ಗೊತ್ತಾಗಿರಬಹುದು. ನಿನ್ನೆ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಗಡಿಬಿಡಿಯಲ್ಲಿ ನಿಮಗೆ ಹೇಳೊದಕ್ಕೆ ಆಗ್ಲಿಲ್ಲ. ಇವತ್ತು ಸಂಜೆ ಆರು ಗಂಟೆ ಟ್ರೇನ್‍ಗೆ ನಾನು ಮೈಸೂರಿಗೆ ಹೋಗ್ತಿದ್ದಿನಿ. ಅದಕ್ಕೆ ಮುಂಚೆ ಐದು ಗಂಟೆಗೆ ಪಾರ್ಕ್ ಹತ್ತಿರ ಸ್ವಲ್ಪ ಬಿಡುವು ಮಾಡ್ಕೊಂಡು ಬಂದ್ರೆ ನಿಮ್ಮ ಜೊತೆ ಒಂದಿಷ್ಟು ಮಾತನಾಡೊದಿದೆ. ಮೇಡಂ ದಯವಿಟ್ಟು ಬನ್ನಿ’ ಎಂದವರೆ ರಾಘವ ಬಿ.ಎ ಫೈನಲ್ ಇಯರ್ ಕ್ಲಾಸಿನ ಕಡೆ ಹೆಜ್ಜೆ ಹಾಕಿದರು. ಮನಸ್ಸು ನನ್ನ ನಿಯಂತ್ರಣದಲ್ಲಿಲ್ಲ ಎನ್ನುವ ಭಾವ ಮೂಡಿ ಕ್ಲಾಸಿನಲ್ಲಿ ಪಾಠ ಮಾಡಲು ಕೂಡ ಆಸಕ್ತಿಯಿಲ್ಲದೆ ಪ್ರಿನ್ಸಿಪಾಲರಿಗೆ ಹೇಳಿ ಮನೆಗೆ ಹೊರಟು ಬಂದೆ. ಪ್ರದೀಪ್ ಬಿಜಿನೆಸ್‍ಗೆಂದು ಚೆನ್ನೈಗೆ ಹೋಗಿದ್ದರು. ಸ್ಕೂಲಿನಿಂದ ಮಕ್ಕಳು ಬರಲು ಇನ್ನು ಸಮಯವಿತ್ತು. ಶಾರದಮ್ಮ ಮನೆಕೆಲಸ ಮುಗಿಸಿ ಹೊರಟು ಹೋಗಿದ್ದರು. ಇಡೀ ಮನೆ ಬಿಕೋ ಎನ್ನುತ್ತಿತ್ತು. ಅಳು ಒತ್ತರಿಸಿಬಂದು ದಿಂಬಿಗೆ ಮುಖ ಕೊಟ್ಟು ಮನಸ್ಸು ಹಗುರಾಗುವವರೆಗೂ ಅತ್ತೆ. ಹಾಗೆ ನಿದ್ದೆ ಹೋದವಳಿಗೆ ಶಾಲೆಯಿಂದ ಬಂದ ಮಕ್ಕಳ ಗಲಾಟೆಯಿಂದ ಎಚ್ಚರವಾಯಿತು. ಮಕ್ಕಳಿಬ್ಬರು ಸಾಯಂಕಾಲದ ತಿಂಡಿ ತಿಂದು ಟ್ಯೂಷನ್‍ಗೆ ಹೊರಟು ಹೋದರು. ಶಾರದಮ್ಮ ರಾತ್ರಿ ಅಡುಗೆಯ ಸಿದ್ಧತೆಯಲ್ಲಿದ್ದರು. ಗಡಿಯಾರ ನೋಡಿಕೊಂಡೆ ಸಮಯ ನಾಲ್ಕೂವರೆ. ರಾಘವ ಭೇಟಿಗೆ ಹೋಗಲೊ ಬೇಡವೊ ಎಂದು ಮನಸ್ಸು ಹೊಯ್ದಾಡಿತು. ಕೊನೆಪಕ್ಷ ರಾಘವ ಮನಸ್ಸಲ್ಲೇನಿದೆ ಎಂದಾದರು ತಿಳಿಯುತ್ತದೆ ಎಂದು ಎದ್ದು ಮುಖ ತೊಳೆದು ಸೀರೆ ಬದಲಿಸಿ ತೆಳುವಾಗಿ ಮೇಕಪ್ ಮಾಡಿಕೊಂಡು ಶಾರದಮ್ಮನವರಿಗೆ ಹೇಳಿ ಹೊರಬಂದೆ. 

         ರಾಘವ ನನಗಾಗಿ ಕಾಯುತ್ತ ನಿಂತಿದ್ದರು. ಇವತ್ತು ಅವರನ್ನು ನೇರವಾಗಿ ನೋಡಲು ಆಗದೆ ತುಂಬ ನರ್ವಸ್‍ನೆಸ್ ಅನ್ನಿಸತೊಡಗಿತು. ‘ಥ್ಯಾಂಕ್ಯು ಮೇಡಂ. ಎಲ್ಲಿ ಬರಲ್ವೇನೊ ಅಂದ್ಕೊಂಡಿದ್ದೆ’ ರಾಘವ ಧ್ವನಿ ಕಂಪಿಸುತ್ತಿತ್ತು. ಇಬ್ಬರು ಮರದ ನೆರಳಿನಲ್ಲಿ ಕುಳಿತುಕೊಂಡೆವು. ಅಲ್ಲಿ ನೆಲೆಸಿದ ಮೌನ ಅಸಹನೀಯವೆನಿಸಿ ನಾನೆ ಮಾತಿಗಾರಂಭಿಸಿದೆ ‘ಏನು ರಾಘವ ಸರ್ ಹೀಗೆ ಇದ್ದಕ್ಕಿದ್ದಂತೆ ಊರು ಬಿಟ್ಟು ಹೋಗ್ತಿರೊದು’ ಧ್ವನಿಯಲ್ಲಿನ ಕೋಪ ರಾಘವಗೆ ಅರ್ಥವಾಗಿ ಮಾತು ಹೇಗೆ ಆರಂಭಿಸಬೇಕೆಂದು ತೊಚದೆ ತಲೆ ತಗ್ಗಿಸಿದರು. ‘ಪ್ಲೀಜ್ ಏನಾದರು ಮಾತಾಡಿ ಹೀಗೆ ಸುಮ್ನೆ ಕುಳಿತರೆ ನನಗೇನು ಅರ್ಥವಾಗುತ್ತೆ’ ಒತ್ತಾಯಿಸಿದೆ. ರಾಘವ ಅವರ ಕಣ್ಣುಗಳು ಹನಿಗೂಡಿದ್ದು ನೋಡಿ ಹೊಟ್ಟೆಯಲ್ಲಿ ಸಂಕಟವಾಯಿತು. ‘ಮೇಡಂ ಚಿಕ್ಕ ವಯಸ್ಸಿನಿಂದ ಕಥೆ ಕಾದಂಬರಿಗಳನ್ನು ಓದುತ್ತ ಬೆಳೆದ ನಾನು ಭಾವಜೀವಿ. ಓದು, ನೌಕರಿ, ಕುಟುಂಬದ ಜವಾಬ್ದಾರಿ, ಮದುವೆ, ಸಂಸಾರ ಈ ಎಲ್ಲದರ ನಡುವೆಯೂ ಬದುಕನ್ನು ಸಹನೀಯವಾಗಿಸಿದ್ದು ನನ್ನೊಳಗಿನ ಈ ಸಾಹಿತ್ಯದ ಅಭಿರುಚಿ. ಆದರೆ ಈ ಸಮಾನ ಅಭಿರುಚಿ ಇರುವಂಥವರ ಸಂಪರ್ಕ ನನಗೆ ಸಿಕ್ಕಿದ್ದು ತುಂಬ ಕಡಿಮೆ ಮೇಡಂ. ಆಗಾಗ ಮನಸ್ಸು ಬೌದ್ಧಿಕ ಸಾಂಗತ್ಯ ಬಯಸುತ್ತಿತ್ತು. ಈ ಊರಿಗೆ ಬಂದಮೇಲೆ ನಿಮ್ಮೊಂದಿಗೆ ಆತ್ಮೀಯತೆ ಬೆಳೆದು ಮನಸ್ಸು ಬಯಸುತ್ತಿದ್ದ ಬೌದ್ಧಿಕ ಸಾಂಗತ್ಯ ನನಗೆ ನಿಮ್ಮಿಂದ ದೊರೆಯಿತು. ಕೆಲವೊಮ್ಮೆ ಅನಿಸುತ್ತಿತ್ತು ನಿಮ್ಮೊಂದಿಗೆ ಅತಿಯಾದ ಸಲುಗೆಯಿಂದ ನಡ್ಕೊಳ್ತಿದ್ದಿನಿ ಅಂತ. ನನ್ನ ನಡುವಳಿಕೆಯಿಂದ ನಿಮಗೆ ಹರ್ಟ್ ಆಗ್ಬಹುದು ಅಂತ ವಿವೇಕ ಎಚ್ಚರಿಸುತ್ತಿತ್ತು. ಆದರೆ ತೀರ ಭಾವಜೀವಿಯಾದ ನನಗೆ ನಿಮ್ಮೊಂದಿಗಿನ ಒಡನಾಟದಿಂದ ಹೊರಬರ್ಬೇಕು ಅಂದಷ್ಟು ಮತ್ತೆ ಮತ್ತೆ ನಿಮಗೆ ಹತ್ತಿರವಾಗುತ್ತಿದ್ದೆ. ಮೇಡಂ ನಿಮ್ಮೊಂದಿಗೆ ಕಳೆದ ಈ ಎಂಟು ತಿಂಗಳುಗಳು ನನ್ನ ಬದುಕಿನ ಅತಿ ಮಹತ್ವದ ಘಳಿಗೆಗಳು. ಇಷ್ಟು ಸಾಕು ಮೇಡಂ ಉಳಿದಿರುವ ಬದುಕನ್ನು ಅತ್ಯಂತ ಅರ್ಥಪೂರ್ಣವಾಗಿ ಕಳೆಯಲು. ನನ್ನಿಂದ ನಿಮಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಹೀಗೆ ಪರಸ್ಪರ  ಗೌರವಿಸುತ್ತ, ಅಭಿಮಾನಿಸುತ್ತ ನಮ್ಮ ನಡುವಿನ ಸ್ನೇಹ ಪರಿಶುದ್ಧವಾಗಿ ಇರಲಿ ಮೇಡಂ.  ಹಾಂ ಮೇಡಂ ನನ್ನ ಪುಸ್ತಕ ಬಿಡುಗಡೆಯಾಗುವ ಸಂದರ್ಭದಲ್ಲೆಲ್ಲ ನಿಮ್ಮನ್ನ ನೆನಪಿಸಿಕೊಂಡು ಕಾಗದ ಬರಿತೀನಿ. ಬರೊದಕ್ಕೆ ಆಗದೆ ಇದ್ದರೂ ಶುಭಾಷಯ ಹೇಳೊದನ್ನ ಮಾತ್ರ ಮರಿಬೇಡಿ. ಮೇಡಂ ಬರ್ತಿನಿ’ ಎಂದು ರಾಘವ ಕೈಮುಗಿದಾಗ ಅವರ ಕೈಗಳನ್ನು ಮೃದುವಾಗಿ ಸ್ಪರ್ಷಿಸಿದೆ. ಆ ಸ್ಪರ್ಷದಲ್ಲಿ ನೂರೆಂಟು ಭಾವಗಳು ಮಿಳಿತಗೊಂಡು ಮನಸ್ಸು ಆರ್ದ್ರವಾಯಿತು. ಕಣ್ಣುಗಳು ಹನಿಗೂಡಿ ದೂರದಲ್ಲಿ ನಡೆದು ಹೋಗುತ್ತಿದ್ದ ರಾಘವ ಆಕೃತಿ ಮುಸುಕು ಮುಸುಕಾಗಿ ಕಾಣಿಸಿ ನನ್ನಿಂದ ಶಾಶ್ವತವಾಗಿ ದೂರಾದಂತೆ ಭಾಸವಾಯಿತು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Thursday, November 2, 2017

ಬರಹಗಾರರಿಗೊಂದು ಬಹಿರಂಗ ಪತ್ರ

ಕನ್ನಡದ ಎಲ್ಲ ಲೇಖಕರಿಗೆ ವಂದನೆಗಳು,
ಇದಕ್ಕಿಂದ್ದಂತೆ ಇಂಥದ್ದೊಂದು ಪತ್ರ ನೋಡಿ ದಯವಿಟ್ಟು ಬೆರಗಾಗದಿರಿ ಎಂದು ಮೊದಲೇ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಕನ್ನಡ ಸಾಹಿತ್ಯದ ಒಬ್ಬ ಓದುಗನಾಗಿ ಇವತ್ತು ಸಾಹಿತ್ಯ ಕ್ಷೇತ್ರದಲ್ಲಿನ ಗುಂಪುಗಾರಿಕೆ, ಜಾತಿಪ್ರೇಮ, ಪ್ರಶಸ್ತಿ ಗೌರವಗಳಿಗಾಗಿ ಮಾಡುತ್ತಿರುವ ಲಾಭಿ, ಶಕ್ತಿ ರಾಜಕಾರಣದ ಓಲೈಕೆ, ಚಳವಳಿಗಳಿಗೆ ವಿಮುಖರಾಗುತ್ತಿರುವುದು, ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಪ್ರಾಪ್ತವಾಗಿರುವ ರಾಜಕೀಯದ ಖದರು ಈ ಎಲ್ಲವುಗಳು ನಾನು ಅತಿ ಹತ್ತಿರದಿಂದ ನೋಡಿ ಅನುಭವಕ್ಕೆ ಬಂದ ಸಂಗತಿಗಳು. ಬರವಣಿಗೆಯೊಂದನ್ನು ಬಿಟ್ಟು ನಮ್ಮ ಬರಹಗಾರರು ಈ ಮೇಲೆ ಹೇಳಿದ ವಿಭಿನ್ನ ದಾರಿಗಳನ್ನು ಹಿಡಿದಿರುವುದರಿಂದ ಕನ್ನಡ ಸಾಹಿತ್ಯ ತನ್ನ ಮೊದಲಿನ ಪ್ರಖರತೆಯನ್ನು ಕಳೆದುಕೊಂಡಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಈ ಸಂದರ್ಭ ನಮ್ಮ ಬರಹಗಾರರಿಗೆ ನಾನು ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಮಾರಿಯೋ ವರ್ಗಾಸ್ ಯೋಸಾನ ಸಾಹಿತ್ಯದ ಕುರಿತಾದ ಅಭಿಪ್ರಾಯವನ್ನು ನೆನಪಿಸಲು ಬಯಸುತ್ತೇನೆ. ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನನ್ನ ಅಂತ:ಸಾಕ್ಷಿ ತುಂಬಾ ಗಡಸಾದದ್ದು. ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಅನ್ನೊದು ನನಗೆ ಗೊತ್ತು. ಬರವಣಿಗೆಯೇ  ನನ್ನ ಧರ್ಮ ಬರವಣಿಗೆಯೇ  ನನ್ನ ಬದುಕು”. 

ಈಗ ನಾನು ಮತ್ತೆ ನಮ್ಮ ಲೇಖಕರ ವಿಷಯಕ್ಕೆ ಬರುತ್ತೇನೆ. ಯೋಸಾನಂತೆ ಬರವಣಿಗೆಯೇ  ಧರ್ಮ ಮತ್ತು ಬರವಣಿಗೆಯೇ  ಬದುಕು ಎಂದು ಭಾವಿಸಿರುವ ಲೇಖಕರ ಸಂಖ್ಯೆ ಕನ್ನಡ ಭಾಷೆಯಲ್ಲಿ ಎಷ್ಟಿದೆ?. ಜೊತೆಗೆ ತಮ್ಮ ಸ್ವಾತಂತ್ರ್ಯ ಮತ್ತು ಸ್ವಂತದ ಅಭಿಪ್ರಾಯವನ್ನು ಕಾಪಾಡಿಕೊಂಡಿರುವ ಬರಹಗಾರರು ನಮ್ಮಲ್ಲಿರುವರೇ ಎನ್ನುವ ಪ್ರಶ್ನೆ ನನ್ನದು. ಈ ಮಾತನ್ನು ನಾನು ಹೇಳಲು ಕಾರಣ ಇವತ್ತಿನ ಬಹುಪಾಲು ಯುವ ಲೇಖಕರಿಗೆ ತಮ್ಮ ಸ್ವಂತದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿಲ್ಲದಂತೆ ಕನ್ನಡ ಸಾಹಿತ್ಯ ಕ್ಷೇತ್ರ ಎಡಪಂಥೀಯ ಮತ್ತು ಬಲಪಂಥೀಯ ಎಂದು ಎರಡು ಗುಂಪುಗಳಾಗಿ ವಿಭಜನೆಗೊಂಡಿದೆ. ಹೀಗಾಗಿ ಲೇಖಕನಾದವನು ಯಾವುದಾದರೂ ಒಂದು ಗುಂಪಿನೊಂದಿಗೆ ಗುರುತಿಸಿಕೊಳ್ಳಬೇಕಾದ ಮತ್ತು ಆ ಗುಂಪಿನ ವಿಚಾರಗಳಲ್ಲೇ ತನ್ನ ಬರವಣಿಗೆಯನ್ನು ರೂಪಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿರುವನು. ಹೀಗಾಗಿ ಇವತ್ತಿನ ಈ ವಾತಾವರಣದಲ್ಲಿ ಲೇಖಕನಾದವನು ನಿರ್ಧಿಷ್ಟ ಸಿದ್ಧಾಂತಗಳ ಕೈಗೊಂಬೆಯಾಗಿರುವನು. ಆತನಿಗೆ ತನ್ನ ಸ್ವಂತದ ಅಭಿಪ್ರಾಯವನ್ನಾಗಲಿ ಇಲ್ಲವೇ ಅನಿಸಿಕೆಯಾಗಲಿ ವ್ಯಕ್ತಪಡಿಸುವ ಸ್ವಾತಂತ್ರ್ಯ ಇಲ್ಲವಾಗಿದೆ. ನಮ್ಮ ವಿಶ್ವವಿದ್ಯಾಲಯಗಳಂತೂ ಮುಕ್ತ ಮನಸ್ಸಿನ ಬರಹಗಾರರನ್ನು ರೂಪಿಸುವುದಕ್ಕಿಂತ ಇಂಥದ್ದೆ ತತ್ವ ಮತ್ತು ಸಿದ್ಧಾಂತಗಳಿಗೆ ಬದ್ಧರಾಗಿ ಬರೆಯುವ ಲೇಖಕರನ್ನು ಹುಟ್ಟಿಸುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ಮೊಳಕೆಯೊಡೆಯುತ್ತಿರುವ ಇಂಥ ಲೇಖಕರನ್ನು ರಾಜಕೀಯ ಪಕ್ಷಗಳು ತಮ್ಮ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದರಿಂದ ನಮ್ಮ ಯುವ ಲೇಖಕರು ಬಹುಬೇಗ ಬುದ್ಧಿಜೀವಿಗಳಾಗಿಯೋ ಅಥವಾ ರಾಜಕಾರಣಿಗಳಾಗಿಯೋ ಪರಿವರ್ತನೆ ಹೊಂದುತ್ತಿರುವರು. ಕಮೂ, ಕಾಫ್ಕಾ, ಮಾರ್ಕ್ಸನನ್ನು  ಓದಿಕೊಂಡವರೆಲ್ಲ ಕ್ರಮೇಣ ತಮ್ಮ ಸಾಹಿತ್ಯಕ ಬದುಕಿಗೆ ವಿಮುಖರಾಗಿ ಜನನಾಯಕರ ಪರಿವೇಷದಲ್ಲಿ ಕಾಣಿಸಿಕೊಳ್ಳುತ್ತಿರುವರು. ಅಚ್ಚರಿಯ ಸಂಗತಿ ಎಂದರೆ ತನ್ನ ಬರವಣಿಗೆಯನ್ನು ತಾನು ಬದುಕುತ್ತಿರುವ ವ್ಯವಸ್ಥೆಯ ವಿರುದ್ಧದ ಹೋರಾಟವೆಂದು ನಂಬಿದ್ದ ಕಮೂನನ್ನು ಆದರ್ಶವಾಗಿಟ್ಟುಕೊಂಡು ಬರವಣಿಗೆಯನ್ನು ರೂಢಿಸಿಕೊಂಡ ನಮ್ಮ ಬಹುಪಾಲು ಲೇಖಕರು ಅದೇ ವ್ಯವಸ್ಥೆಯ ಒಂದು ಭಾಗವಾದದ್ದು ಮತ್ತು ಆಸ್ಥಾನಕವಿಗಳಾಗಿ ರೂಪಾಂತರ ಹೊಂದಿದ್ದು. ಬರವಣಿಗೆಯನ್ನುವುದು ಒಂದರ್ಥದಲ್ಲಿ ನಮ್ಮ ಲೇಖಕರಿಗೆ ಒಂದು ಹಸನಾದ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಾಗಿದೆ.

ಇನ್ನು ನನ್ನನ್ನು ಕಾಡುತ್ತಿರುವ ಇನ್ನೊಂದು ಮಹತ್ವದ ಪ್ರಶ್ನೆ ಅದು ಬರವಣಿಗೆಯ ಶ್ರೇಷ್ಠತೆಯ ಮಾನದಂಡವೇನು ಎನ್ನುವುದು. ಕೃತಿಯೊಂದರ ಶ್ರೇಷ್ಠತೆ ಅದನ್ನು ಓದುಗವರ್ಗ ಹೇಗೆ ಸ್ವೀಕರಿಸಿದೆ ಎನ್ನುವುದೋ ಅಥವಾ ಕೃತಿಗೆ ದೊರೆತ ಪ್ರಶಸ್ತಿ ಪುರಸ್ಕಾರವೋ ಎನ್ನುವ ಜಿಜ್ಞಾಸೆ ಅನೇಕರದು. ಜೊತೆಗೆ ವಿಮರ್ಶಾಲೋಕ ಕೃತಿಯೊಂದನ್ನು ಮೆಚ್ಚಿಕೊಂಡಲ್ಲಿ ಅದನ್ನು ಶ್ರೇಷ್ಠ ಅಥವಾ ಜನಪ್ರಿಯ ಕೃತಿ ಎಂದು ಪರಿಗಣಿಸಬೇಕೇ ಎನ್ನುವ ಪ್ರಶ್ನೆ ಕೂಡ ಈ ಸಂದರ್ಭ ಎದುರಾಗುತ್ತದೆ. ಇನ್ನು ಪ್ರಶಸ್ತಿ ಮತ್ತು ವಿಮರ್ಶೆ ಕುರಿತು ಚರ್ಚಿಸುವುದಾದರೆ ಪ್ರತಿವರ್ಷ ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಎಷ್ಟು ಪುಸ್ತಕಗಳು ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗುತ್ತಿವೆ ಮತ್ತು ವಿಮರ್ಶಕರ ಕಣ್ಣಿಗೆ ಗೋಚರಿಸುತ್ತಿವೆ ಎನ್ನುವ ಮತ್ತೊಂದು ಪ್ರಶ್ನೆ ದುತ್ತನೆ ಎದುರಾಗುತ್ತದೆ. ಲೇಖಕ ತಿರುಮಲೇಶ ಅವರು ಹೇಳುವಂತೆ ಓದಲು ಯೋಗ್ಯವಾದದ್ದೆಲ್ಲವೂ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳದೆ ಹೋಗಬಹುದು.  ಹಾಗಾದರೆ ಪ್ರಶಸ್ತಿ ಪಡೆಯದ ಮತ್ತು ವಿಮರ್ಶೆಗೆ ಒಳಗಾಗದ ಇನ್ನು ಮುಂದುವರೆದು ಹೇಳುವುದಾದರೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದೇ ಹೋದ ಕೃತಿಗಳೆಲ್ಲವೂ ಓದಲು ಯೋಗ್ಯವಲ್ಲ ಎನ್ನುವ ನಿರ್ಧಾರವನ್ನು ಓದುಗವರ್ಗ ತಳೆಯುವುದು ಎಷ್ಟು ಸಮಂಜಸ. ಕೃತಿಯೊಂದಕ್ಕೆ ದೊರೆಯುವ ಪ್ರಶಸ್ತಿಯಾಗಲಿ ಅಥವಾ ಪುಸ್ತಕದ ಕುರಿತು ಮೂಡಿ ಬರುವ ವಿಮರ್ಶೆಯಾಗಲಿ ಅವು ಅನೇಕ ಸಂದರ್ಭಗಳಲ್ಲಿ ಅನುಮಾನಗಳಿಗೆ ಒಳಗಾಗಿವೆ. ರಾಜಕಾರಣಿಗಳ ಮತ್ತು ಅಧಿಕಾರಿ ವರ್ಗದ ಬೆನ್ನು ಬಿದ್ದು ತಮ್ಮ ಕೃತಿಗಳಿಗೆ ಪ್ರಶಸ್ತಿ ಪಡೆದು ಧನ್ಯತಾಭಾವ ಅನುಭವಿಸುವ ಲೇಖಕರ ದಂಡೆ ನಮ್ಮಲ್ಲಿದೆ. ಜೊತೆಗೆ ಇವತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶೆ ಎನ್ನುವುದು ಕೊಟ್ಟು ತೆಗೆದುಕೊಳ್ಳುವ ವಹಿವಾಟಾಗಿದೆ. ಅದೆಷ್ಟೋ ಲೇಖಕರು ವಿಮರ್ಶಕರಿಂದ ತಮ್ಮ ಪುಸ್ತಕಕ್ಕೆ ಅನುಕೂಲವಾಗುವಂತೆ ವಿಮರ್ಶೆಯನ್ನು ಬರಿಸಿಕೊಂಡು ಅದನ್ನೇ ಪುಸ್ತಕ ಮಾರಾಟದ ಮತ್ತು ಪ್ರಶಸ್ತಿಯ ಬಂಡವಾಳ ಮಾಡಿಕೊಳ್ಳುವುದು ಗುಟ್ಟಿನ ವಿಷಯವೇನಲ್ಲ. ವಿಮರ್ಶಕರು ಕೂಡ ಎಡ ಮತ್ತು ಬಲ ಎಂದು ಪ್ರತ್ಯೇಕ ಗುಂಪುಗಳಾಗಿ ಒಡೆದುಹೋಗಿರುವುದರಿಂದ ಆಯಾ ವರ್ಗದ ವಿಮರ್ಶಕರು ತಮ್ಮ ವರ್ಗದ ಲೇಖಕರ ಕೃತಿಗಳನ್ನು ಹಾಡಿ ಹೊಗಳುವುದು ಮತ್ತು ವಿರುದ್ಧ ವರ್ಗದ ಲೇಖಕರ ಕೃತಿಗಳನ್ನು ವಿನಾಕಾರಣ ಟೀಕಿಸುವುದು ಸಾಮಾನ್ಯ ಸಂಗತಿಯಾಗಿದೆ. ಕೆಲವೊಮ್ಮೆ ವಿಮರ್ಶಕರಿಂದಲೇ ಸಾಮಾನ್ಯವೆನ್ನುವಂಥ ಕೃತಿಗಳು ಸಹ ಶ್ರೇಷ್ಠ ಕೃತಿಗಳೆಂಬ ಮನ್ನಣೆಗೆ ಪಾತ್ರವಾಗಿ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾದ ಅನೇಕ ಉದಾಹರಣೆಗಳಿವೆ. ಪರಿಸ್ಥಿತಿ ಹೀಗಿರುವಾಗ ಸಾಹಿತ್ಯ ಕೃತಿಯೊಂದರ ಗುಣಾವಗುಣಗಳನ್ನು ನಿರ್ಧರಿಸುವಲ್ಲಿ ಓದುಗರ ಪಾತ್ರವೇನು ಎನ್ನುವ ಪ್ರಶ್ನೆ ಮೂಡುವುದು ಸಹಜವಾಗಿದೆ. ಲೇಖಕ ಕೆ.ಸತ್ಯನಾರಾಯಣ ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳುತ್ತಾರೆ ‘ಮನುಷ್ಯರಾದ ನಮ್ಮೆಲ್ಲರೂ ನಮ್ಮ ಕಾಲದ ಸಾಮಾಜಿಕ ವ್ಯಕ್ತಿತ್ವವಿರುವಂತೆ ಎಲ್ಲ ಕಾಲಕ್ಕೂ ಸೇರಿದ ಸಾಮಾಜಿಕ-ರಾಜಕೀಯ ಪ್ರಭಾವಗಳಿಂದ ದೂರವಾದ ಪುಟ್ಟದಾದ ಆದರೆ ಅನೂಹ್ಯವಾದ ಒಂದು ಸಣ್ಣ ಜಾಗವೂ ಇರುತ್ತದೆ. ಇದನ್ನು ಓದುಗನ solitude ಎಂದು ಗುರುತಿಸುತ್ತಾರೆ. ಈ ಅನೂಹ್ಯ ಜಾಗದಲ್ಲಿ ಪುಳಕ ಹುಟ್ಟಿಸುವ ಕೃತಿಗಳು ಮಾತ್ರ ನಿಜವಾದ ಕಲಾಕೃತಿಗಳು’. ಹೀಗೆ ಓದುಗನ ಏಕಾಂತವನ್ನು ಪ್ರವೇಶಿಸಬಲ್ಲ ಕೃತಿಗಳು ಮಾತ್ರ ದೊಡ್ಡ ಪಲ್ಲಟಗಳಿಗೆ ಮತ್ತು ಜಿಗಿತಕ್ಕೆ ಕಾರಣವಾಗುತ್ತವೆ ಎಂದು ಅವರು ನುಡಿಯುತ್ತಾರೆ. ಹಾಗಾದರೆ ಕೃತಿಯೊಂದರ ಶ್ರೇಷ್ಠತೆಯ ಮಾನದಂಡ ಅದು ಓದುಗನಿಂದ ಪಡೆಯುವ ಮೆಚ್ಚುಗೆ ಎನ್ನುವ ಸತ್ಯವನ್ನು ನಮ್ಮ ಲೇಖಕರು ಮರೆಯುತ್ತಿರುವುದೇಕೆ?.

ಕನ್ನಡ ಭಾಷೆಯಲ್ಲಿ ಆತ್ಮಕಥನಗಳು ಮತ್ತು ಅಭಿನಂದನಾ ಗ್ರಂಥಗಳು ಪ್ರತಿವರ್ಷ ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಆತ್ಮಕಥನಗಳು ಮತ್ತು ಅಭಿನಂದನಾ ಗ್ರಂಥಗಳು ಓಂದು ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕನ್ನು ಕಟ್ಟಿಕೊಡಬೇಕು. ಒಂದುರೀತಿಯಲ್ಲಿ ಈ ಪ್ರಕಾರದ ಸಾಹಿತ್ಯ ಕೃತಿಗಳು ಮುಂದಿನ ಜನಾಂಗಕ್ಕೆ ಅಧ್ಯಯನಕ್ಕೆ ಅಗತ್ಯವಾದ ಮಾಹಿತಿಯನ್ನೊದಗಿಸುವ ಆಕರ ಗ್ರಂಥಗಳಾಗಬೇಕು. ಆದರೆ ಸಧ್ಯ ಪ್ರಕಟವಾಗುತ್ತಿರುವ ಆತ್ಮಕಥನಗಳು ಮತ್ತು ಅಭಿನಂದನಾ ಗ್ರಂಥಗಳು ವ್ಯಕ್ತಿಕೇಂದ್ರಿತವಾಗಿ, ಹೊಗಳಿಕೆ ಹಾಗೂ ಸ್ವಹೊಗಳಿಕೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿವೆ. ಸಾಮಾನ್ಯವಾಗಿ ಆತ್ಮಕಥನವನ್ನು ಬರೆದುಕೊಳ್ಳುವ ವ್ಯಕ್ತಿಗೆ ತನ್ನ ಗುಣಾವಗುಣಗಳನ್ನು ಹೇಳುವ ಧೈರ್ಯ ಮತ್ತು ಸ್ವವಿಮರ್ಶೆಗೆ ಒಳಗಾಗುವ ಮನೋಭಾವಬೇಕು. ಶಿವರುದ್ರಪ್ಪನವರು ಆತ್ಮಕಥನವನ್ನು ಕುರಿತು ಒಂದು ಕಡೆ ಹೀಗೆ ಹೇಳುತ್ತಾರೆ `ತನ್ನ ಬದುಕಿನ ಒಂದು ಹಂತದಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನವನ್ನು ತಾನೇ ಅವಲೋಕಿಸಿಕೊಂಡು, ನೇರವಾಗಿ ಬರೆದುಕೊಳ್ಳುವ ಆತ್ಮ ಕಥನ ಎಂಬ ಈ ಪ್ರಕಾರ ಕನ್ನಡಕ್ಕೆ ಹೊಸತು. ಆತ್ಮ ಕಥನವನ್ನು ಬರೆಯುವುದು ತೀರಾ ಕಷ್ಟದ ಕೆಲಸ. ಆತ್ಮ ಕಥೆಯನ್ನು ಬರೆಯಲು ಮುಖ್ಯವಾಗಿ ನೈತಿಕ ಧೈರ್ಯ ಬೇಕು. ತನ್ನ ಬದುಕನ್ನು ತಾನೇ ಪರೀಕ್ಷಿಸಿಕೊಳ್ಳುವ ಧೈರ್ಯ ಬೇಕು. ತನ್ನ ಇತಿ ಮಿತಿಗಳನ್ನು ಕುರಿತ ವಿವೇಚನೆ ಬೇಕು. ಮುಚ್ಚು ಮರೆಯ ಮನಸ್ಸು ನಿಜವಾದ ಆತ್ಮಕಥೆಯನ್ನು ಬರೆದುಕೊಳ್ಳಲಾರದು’. ನನ್ನ ಓದಿನ ಅನುಭವವನ್ನು ಆಧರಿಸಿ ಹೇಳುವುದಾದರೆ ಕನ್ನಡದಲ್ಲಿ ಪ್ರಕಟವಾದ ಬಹಳಷ್ಟು ಆತ್ಮಕಥೆಗಳಲ್ಲಿ ವಾಸ್ತವಿಕೆತೆ ಎನ್ನುವುದು ಮರೆಯಾಗಿ ಅಲ್ಲೆಲ್ಲ ಕಲ್ಪನೆ ಮತ್ತು ಸ್ವಹೊಗಳಿಕೆಯೇ  ಮುನ್ನೆಲೆಗೆ ಬಂದಿರುವುದು. ಕೆಲವೊಮ್ಮೆ ಆತ್ಮಕಥೆಯ ಕಥಾನಾಯಕ ತನ್ನ ಸಾಮಾಜಿಕ ಮತ್ತು ವೈಯಕ್ತಿಕ ಬದುಕಿಗೆ ಎರವಾಗಬಲ್ಲ ಘಟನೆಗಳನ್ನು ಹೇಳುವಾಗ ಅಲ್ಲೆಲ್ಲ ಸತ್ಯವನ್ನು ಮರೆಮಾಚಿ ತಾನು ಆತ್ಮವಂಚನೆಗೆ ಒಳಗಾಗುವುದರೊಂದಿಗೆ ಓದುಗರನ್ನು ಕೂಡ ವಂಚಿಸುತ್ತಾನೆ. ಹೀಗಾಗಿ ಆತ್ಮಕಥೆಗಳಲ್ಲಿ ಅವುಗಳ ನಾಯಕರು ಅತ್ಯಂತ ವರ್ಣರಂಜಿತ ವ್ಯಕ್ತಿಗಳಾಗಿ ಬೆಳ್ಳಿತೆರೆಯ ನಾಯಕರುಗಳಂತೆ ಕಾಣಿಸಿಕೊಳ್ಳುವುದೇ ಹೆಚ್ಚು. ಈಗೀಗ ಪ್ರತಿಯೊಬ್ಬ ಲೇಖಕರಿಗೂ ಒಂದಲ್ಲ ಒಂದುಹಂತದಲ್ಲಿ ತಮ್ಮ ಬದುಕಿನ ಕುರಿತು ಆತ್ಮಕಥೆಯನ್ನು ಬರೆದುಕೊಳ್ಳುವ ವಾಂಛೆ ಹೆಚ್ಚುತ್ತಿದೆ. ಪರಿಣಾಮವಾಗಿ ಪ್ರತಿವರ್ಷ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡ ಭಾಷೆಯಲ್ಲಿ ಆತ್ಮಕಥೆಗಳು ಪ್ರಕಟವಾಗುತ್ತಿವೆ. ಹಾಗೆಂದು ಎಲ್ಲ ಆತ್ಮಕಥೆಗಳನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಕೂಡ ಸರಿಯಲ್ಲ. ಹೋರಾಟದ ಹಾದಿ, ಸುರಗಿಯಂಥ ಕೆಲವು ಆತ್ಮಕಥೆಗಳು ಒಂದು ಕಾಲದ ಬದುಕನ್ನು ಅತ್ಯಂತ ಅರ್ಥಪೂರ್ಣವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಇನ್ನು ಅಭಿನಂದನಾ ಗ್ರಂಥಗಳ ವಿಷಯಕ್ಕೆ ಬಂದರೆ ಪ್ರತಿ ವರ್ಷ ರಾಶಿ ರಾಶಿ ಅಭಿನಂದನಾ ಗ್ರಂಥಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗುತ್ತಿದ್ದು ಅವುಗಳಲ್ಲಿ ಜೊಳ್ಳೆ ಹೆಚ್ಚು. ದೈಹಿಕ ವಯೋಮಾನವನ್ನೇ ಮಾನದಂಡವಾಗಿಟ್ಟುಕೊಂಡು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸುತ್ತಿರುವುದರಿಂದ ಅವುಗಳಿಂದ ಒಂದು ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರವನ್ನು ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ. ನೀನು ನನ್ನ ಅಭಿನಂದನಾ ಗ್ರಂಥಕ್ಕೆ ಸಂಪಾದಕ ನಾನು ನಿನ್ನ ಅಭಿನಂದನಾ ಗ್ರಂಥಕ್ಕೆ ಸಂಪಾದಕ ಎನ್ನುವ ಈ ಕೊಟ್ಟು-ಕೊಳ್ಳುವ ಸಂಪ್ರದಾಯ ಇಲ್ಲಿಯೂ ಇದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ರಾಜಕೀಯ ನಾಯಕರುಗಳ ಮತ್ತು ಕೈಗಾರಿಕೋದ್ಯಮಿಗಳ ಅಭಿನಂದನಾ ಗ್ರಂಥಗಳಿಗೆ ಸಂಪಾದಕರಾಗಲು ಬರಹಗಾರರ ನಡುವೆಯೇ  ಒಂದು ರೀತಿಯ ಸ್ಪರ್ಧೆ ಮತ್ತು ಪೈಪೋಟಿ ಏರ್ಪಡುತ್ತದೆ. ಕೆಲವರು ಸಾಹಿತ್ಯಲೋಕದಲ್ಲಿ ಲೇಖಕರೆಂದು ಪ್ರವರ್ಧಮಾನಕ್ಕೆ ಬರುವುದು ಈ ಅಭಿನಂದನಾ ಗ್ರಂಥಗಳ ಸಂಪಾದಕರಾಗಿ ಎನ್ನುವುದು ಇನ್ನೂ ವಿಚಿತ್ರವಾದ ಸಂಗತಿ. ಅಭಿನಂದನಾ ಗ್ರಂಥಗಳ ಕಥಾನಾಯಕರುಗಳನ್ನು ಸಕಲ ಕಲಾವಲ್ಲಭರಂತೆ ಚಿತ್ರಿಸುವಲ್ಲೇ ನಮ್ಮ ಬಹಳಷ್ಟು ಬರಹಗಾರರ ಸೃಜನಶೀಲತೆ ವ್ಯಯವಾಗುತ್ತಿರುವುದು ಕನ್ನಡ ಸಾಹಿತ್ಯದ ದುರಂತಗಳಲ್ಲೊಂದು. 

ಇನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವಿಷಯಕ್ಕೆ ಬಂದರೆ ನಮ್ಮ ಬರಹಗಾರರು ಪರಿಷತ್ತಿನ ಚುನಾವಣೆಗೆ ರಾಜಕೀಯದ ಖದರು ತಂದುಕೊಟ್ಟಿರುವರು. ಚುನಾವಣೆಯ ಸಂದರ್ಭ ಸಾಹಿತಿಗಳು ಮಾಡುವ ಆರೋಪ ಮತ್ತು ಪ್ರತ್ಯಾರೋಪಗಳು ಯಾವ ರಾಜಕಾರಣಿಗಳಿಗೂ ಕಮ್ಮಿಯಿಲ್ಲ. ಸುಮಾರು ನೂರುವರ್ಷಗಳಷ್ಟು ಹಳೆಯದಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಒಂದು ಉನ್ನತ ಸಂಸ್ಥೆಯಾಗಿ ರೂಪಿಸುವ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುವ ನಮ್ಮ ಬರಹಗಾರರು ಪರಿಷತ್ತಿನಿಂದ ಮಾತ್ರ ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುತ್ತಿರುವುದು ಸುಳ್ಳಲ್ಲ. ಪರಿಷತ್ತಿನಿಂದ ಜರುಗುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ, ಪರಿಷತ್ತಿನಿಂದ ತಮ್ಮ ಪುಸ್ತಕಗಳ ಪ್ರಕಟಣೆ ಹೀಗೆ ಫಲಾನುಭವಿಗಳಾಗುತ್ತಿರುವ ಬಹುತೇಕ ಸಾಹಿತಿಗಳು ಪರಿಷತ್ತಿನ ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಓಲೈಸುತ್ತ ಆಸ್ಥಾನದ ಭಟ್ಟಂಗಿಗಳಂತೆ ವರ್ತಿಸುತ್ತಿರುವರು. ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಜಡವಾಗಿದ್ದು ಈ ನೂರು ವರ್ಷಗಳಲ್ಲಿ ಪರಿಷತ್ತಿನಿಂದ ಕನ್ನಡ ನಾಡು ನುಡಿಯ ಕುರಿತಾಗಿ ಆಗಬೇಕಾದ ಕೆಲಸ ಕಾರ್ಯಗಳು ಸಾಕಷ್ಟು ಪ್ರಮಾಣದಲ್ಲಿ ಆಗಿಲ್ಲವೆನ್ನುವ ಕೂಗು ಎಲ್ಲ ಕಡೆಯಿಂದ ಕೇಳಿಬರುತ್ತಿದೆ. ಕೆಲವೊಮ್ಮೆ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ನಾಡು ನುಡಿಯ ಕಾಳಜಿ ಇಲ್ಲದ ವ್ಯಕ್ತಿಗಳು ಪರಿಷತ್ತಿನ ಅಧ್ಯಕ್ಷರಾದ ಉದಾಹರಣೆಗಳಿವೆ. ಪರಿಷತ್ತು ಕೇವಲ ಕೆಲವೇ ವ್ಯಕ್ತಿಗಳ ವೈಯಕ್ತಿಕ ಹಿತಾಸಕ್ತಿಯನ್ನು ಪೂರೈಸುವ ತಾಣವಾಗಬಾರದು ಎನ್ನುವ ಕಾಳಜಿಯಿಂದ ನಾನು ಈ ಮಾತನ್ನು ಉಲ್ಲೇಖಿಸುತ್ತಿದ್ದೇನೆ. 

ಮೊನ್ನೆ ಸಾಹಿತ್ಯ ಸಮಾರಂಭವೊಂದರಲ್ಲಿ ಪ್ರೇಕ್ಷಕರೊಬ್ಬರು ಲೇಖಕರು ಚಳವಳಿ ಮತ್ತು ಹೋರಾಟಗಳಲ್ಲಿ ಏಕೆ ಭಾಗವಹಿಸುತ್ತಿಲ್ಲ ಎನ್ನುವ ಅತಿ ಮಹತ್ವದ ಪ್ರಶ್ನೆಯೊಂದನ್ನು ಎತ್ತಿದರು. ಸಮಾರಂಭದಲ್ಲಿ ಹೋರಾಟದ ಕುರಿತು ಒಂದು ಗೋಷ್ಠಿಯನ್ನು ಕೂಡ ಏರ್ಪಡಿಸಲಾಗಿತ್ತು ಮತ್ತು ಆ ಗೋಷ್ಠಿಯಲ್ಲಿ ಮಾತನಾಡಲು ಆಹ್ವಾನಿತರಾಗಿದ್ದವರು ಲೇಖಕರಾಗಿರದೆ ಅವರು ಹೋರಾಟಗಾರರಾಗಿದ್ದು ಗಮನಿಸಬೇಕಾದ ಸಂಗತಿಯಾಗಿತ್ತು. ಚಳವಳಿ ಮತ್ತು ಹೋರಾಟದ ಕುರಿತು ಮಾತನಾಡಲು ನಮ್ಮ ಬರಹಗಾರರಿಗೆ ಸಾಧ್ಯವಾಗದೇ ಇರಲು ಬಹುಮುಖ್ಯ ಕಾರಣ ಅವರು ಆ ಒಂದು ಪ್ರಕ್ರಿಯೆಯ ಭಾಗವಾಗದೇ ಇರುವುದು. ನದಿ ನೀರಿನ ಸಮಸ್ಯೆ ಅದು ರೈತರದು, ಪರಭಾಷಾ ಸಿನಿಮಾಗಳ ಹಾವಳಿ ಅದು ಸಿನಿಮಾದವರ ಸಮಸ್ಯೆ, ಇಂಗ್ಲಿಷ್ ಮಾಧ್ಯಮದ ಶಾಲೆಗಳು ಅದು ಪಾಲಕರ ಸಂಕಟ, ಅನ್ಯಭಾಷೆಗಳ ಪ್ರಭಾವ ಗಡಿನಾಡಿನವರ ಆತಂಕ ಹೀಗೆ ನಾಡು ನುಡಿಗೆ ಸಂಬಂಧಿಸಿದ ಸಮಸ್ಯೆಗಳೆಲ್ಲ ಹೀಗೆ ವಿಭಜನೆಗೊಂಡಿರುವುದರಿಂದ ನಮ್ಮ ಸಾಹಿತಿಗಳು ಯಾವ ಚಳವಳಿ ಮತ್ತು ಹೋರಾಟಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿಲ್ಲ. ಮೂರು ದಶಕಗಳ ಹಿಂದೆ ಭಾಷೆಯ ಉಳಿವಿಗಾಗಿ ಗೋಕಾಕ ಚಳವಳಿಯಲ್ಲಿ ಒಂದಾಗಿ ಬೀದಿಗಿಳಿದ ನಮ್ಮ ಬರಹಗಾರರು ಇವತ್ತು ಭಾಷೆಯ ಅಸ್ತಿತ್ವಕ್ಕಾಗಿ ಒಗ್ಗಟ್ಟನ್ನು ತೋರಿಸುತ್ತಿಲ್ಲದಿರುವುದು ಖಂಡನಾರ್ಹ. ಯೇಟ್ಸ್ ತನ್ನ ಸುಪ್ರಸಿದ್ಧ ಕವಿತೆ ‘ದ’ಸೆಕೆಂಡ್ ಕಮಿಂಗ್’ನಲ್ಲಿ ಯುರೋಪಿನ ಸನ್ನಿವೇಶವನ್ನು ವರ್ಣಿಸುತ್ತ the best lack conviction and the worst are full of passionate intensity  ಎಂದು ಆತಂಕದಿಂದ ಬರೆಯುತ್ತಾನೆ. ಯೇಟ್ಸ್ ನ  ಈ ಹೇಳಿಕೆಯನ್ನು ಆಧರಿಸಿ ಹೇಳುವುದಾದರೆ ಬರಹಗಾರರು ಮೌನವಾಗಿರದೆ ಮಾತನಾಡುವುದನ್ನು ಮತ್ತು ಪ್ರತಿಭಟಿಸುವುದನ್ನು ಕಲಿಯಬೇಕು. ಅಧಿಕಾರದ  ಶಕ್ತಿಕೇಂದ್ರ ಮತ್ತು ರಾಜಕಾರಣವನ್ನು ಓಲೈಸದೆ ಬರಹಗಾರರು ಹೋರಾಟ ಮತ್ತು ಚಳವಳಿಯಂಥ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಮಾಜದ ಹಿತದ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. 

ಇನ್ನು ಬರವಣಿಗೆ ಕುರಿತು ರಷ್ಯನ್ ಲೇಕಕಿ ಲ್ಯೂಮಿಡಿಲಾ ಅವರ ಮಾತುಗಳೊಂದಿಗೆ ನಾನು ಈ ಲೇಖನವನ್ನು/ಪತ್ರವನ್ನು ಪೂರ್ಣಗೊಳಿಸುತ್ತಿದ್ದೇನೆ ‘ಬದುಕಿನ ಹಾದಿಯಲ್ಲಿ ನಮಗೇ ಅರಿವಿಲ್ಲದಂತೆ ಅನುಭವಗಳ ಮೂಲಕ ಹಾದು ಬಂದಿರುತ್ತೇವೆ. ಹೀಗೆ ಪಯಣಿಸುವಾಗ ಎದುರಾಗುವ ಅನುಭವಗಳ ಅರಿವು ನಮಗಾಗುವುದಿಲ್ಲ. ಆದರೆ ಬರವಣಿಗೆಗೆ ಕೂತಾಗ ಆ ಅನುಭವಗಳನ್ನು ಅವುಗಳಿಂದ ಹೊರನಿಂತು ನೋಡುವುದು ಸಾಧ್ಯವಾಗುತ್ತದೆ. ಆ ಮೂಲಕ ಒಂದು ಕಾಲಘಟ್ಟದ ಬದುಕನ್ನು ನಾನು ಮತ್ತೆ ಕಟ್ಟುತ್ತಿರುತ್ತೇನೆ. ಹಾಗಾಗಿ ಬರವಣಿಗೆ ಬಗ್ಗೆ ಎಲ್ಲ ಬರಹಗಾರರಿಗೂ ಸತ್ಯಕ್ಕೆ ಎದುರಾಗುವ ಭೀತಿ ಇರುತ್ತದೆ’. ನಿಜಕ್ಕೂ ಬರವಣಿಗೆಯ ಸಾರ್ಥಕೆ ಇರುವುದು ಅದು ಸತ್ಯಕ್ಕೆ ಎದುರಾದಾಗ.

ಹೀಗೊಬ್ಬ ಕನ್ನಡ ಸಾಹಿತ್ಯದ ಓದುಗ


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ