Thursday, May 24, 2012

ಆತ್ಮಕಥಾನಕ ಅದು ಆತ್ಮಪ್ರಶಂಸೆಯಲ್ಲ

        ಆತ್ಮಕಥೆ ಮತ್ತು ವ್ಯಕ್ತಿ ಚಿತ್ರಣ ನನ್ನ ಓದಿನ ಮೊದಲ ಆದ್ಯತೆಗಳಲ್ಲೊಂದು. ಏಕೆಂದರೆ ಅಂಥ ಕೃತಿಗಳು ನನ್ನರ್ಥದಲ್ಲಿ ಬದುಕು ಬದಲಿಸುವ ಪುಸ್ತಕಗಳು. ಅಂಥದ್ದೆ ಒಂದು ಉತ್ತಮ ಆತ್ಮಕಥಾನಕ ಓದಲು ಮೊನ್ನೆ ಅವಕಾಶ ಸಿಕ್ಕಿತು. ಅದು ಗಿರೀಶ್ ಕಾರ್ನಾಡರು ಬರೆದ 'ಆಡಾಡತಾ ಆಯುಷ್ಯ' ಎನ್ನುವ ಪುಸ್ತಕ. ನಮಗೆಲ್ಲ ಗೊತ್ತಿರುವಂತೆ ಕಾರ್ನಾಡರದು ಮಲ್ಟಿ ಫೆಸೆಟೆಡ್ ಪರ್ಸನಾಲಿಟಿ. ಬರವಣಿಗೆ, ರಂಗಭೂಮಿ, ಸಿನಿಮಾ, ಅಭಿನಯ ತರಬೇತಿ ಹೀಗೆ ಹತ್ತು ಹಲವು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂದಿರುವಂಥ ವ್ಯಕ್ತಿ. ಅವರಲ್ಲಿನ ಪ್ರತಿಭೆ ಮತ್ತು ಅವರ ಅಗಾಧ ಬೆಳವಣಿಗೆ ನಮ್ಮನ್ನೆಲ್ಲ ಬೆರಗುಗೊಳಿಸುತ್ತದೆ. ತಮ್ಮ ಪ್ರತಿಭೆಯಿಂದ ಕನ್ನಡ ಸಾಹಿತ್ಯ, ಸಿನಿಮಾ ಮತ್ತು ರಂಗಭೂಮಿಗೆ ಸೃಜನಾತ್ಮಕ ಆಯಾಮವನ್ನು ದೊರಕಿಸಿಕೊಟ್ಟ ಕಾರ್ನಾಡರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹೌದು
      ಇನ್ನು ನಾನು ಆತ್ಮಕಥೆಯ ವಿಷಯಕ್ಕೆ ಬರುತ್ತೇನೆ. ಅನೇಕರು ತಿಳಿದಿರುವಂತೆ ಆತ್ಮಕಥಾನಕ ಎನ್ನುವುದು ಬರೀ ಆತ್ಮಪ್ರಶಂಸೆ ಮಾತ್ರವಲ್ಲ.ಕೆಲವರ ಈ ರೀತಿಯ ವಾದವನ್ನು ಪುಷ್ಟಿಕರಿಸುವಂತೆ ಕೆಲವೊಂದು ಆತ್ಮಪ್ರಶಂಸೆಯ ಆತ್ಮಕಥಾನಕಗಳು ಕನ್ನಡದಲ್ಲಿ ಪ್ರಕಟವಾಗಿರಬಹುದು. ಹಾಗೆಂದ ಮಾತ್ರಕ್ಕೆ ಎಲ್ಲ ಕೃತಿಗಳನ್ನು ಅದೇ ದೃಷ್ಟಿಯಿಂದ ನೋಡುವುದು ತಪ್ಪ. ಏಕೆಂದರೆ ಆತ್ಮಕಥಾನಕಗಳು ಕೃತಿಕಾರನ ಬದುಕಿನ ಜೊತೆ ಜೊತೆಗೆ ಅವನ ಕಾಲದ ಸಾಮಾಜಿಕ ಮತ್ತು ಸಾಂಸ್ಕೃತೀಕ ಬದುಕನ್ನು ಅನಾವರಣಗೊಳಿಸುವ ಮಹತ್ವದ ಕೃತಿಗಳು. ಉದಾಹರಣೆಯಾಗಿ ಹೇಳುವುದಾದರೆ ಎಚ್.ನರಸಿಂಹಯ್ಯನವರ 'ಹೋರಾಟದ ಹಾದಿ' ಆತ್ಮಕಥೆ ಅದು ಭಾರತೀಯ ಶಿಕ್ಷಣ ಪದ್ಧತಿ, ಪಾಶ್ಚಾತ್ಯ ಶಿಕ್ಷಣ ಪದ್ಧತಿ, ಶೈಕ್ಷಣಿಕ ಸಮಸ್ಯೆಗಳು ಹೀಗೆ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿ. ಆ ಕೃತಿಯ ಮುನ್ನುಡಿಯಲ್ಲಿ ಶ್ರೀ ಜಿ.ಎಸ್.ಶಿವರುದ್ರಪ್ಪನವರು ಹೇಳಿರುವಂತೆ 'ಹೋರಾಟದ ಹಾದಿ ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ. ಈ ಕೃತಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಚರಿತ್ರೆಯ ಒಂದಷ್ಟು ಭಾಗ, ಕ್ವಿಟ್ ಇಂಡಿಯಾ ಸ್ವಾತಂತ್ರ್ಯ ಚಳುವಳಿಯ ಇನ್ನೊಂದಷ್ಟು ಭಾಗ, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಬಹಳಷ್ಟು ಭಾಗ ಅವರ ವ್ಯಕ್ತಿತ್ವದಲ್ಲಿ ಅವಿನಾಭಾವದಿಂದ ಬೆಸೆದುಕೊಂಡಿವೆ'. ಹೀಗೆ ಆತ್ಮಕಥಾನಕ ಎನ್ನುವುದುಕೃತಿಕಾರನ ಬದುಕಿನ ಹೊರತಾಗಿಯೂ ಅನೇಕ ಸಂಗತಿಗಳನ್ನು ಕಟ್ಟಿಕೊಡುವ ಅನನ್ಯ ಕೃತಿ.
       'ಆಡಾಡತಾ ಆಯುಷ್ಯ' ಓದುಗನಿಗೆ ಹೊಸ ಅನುಭವ ಕೊಡುವ ಒಂದು ವಿಶಿಷ್ಟ ಆತ್ಮಕಥಾನಕ. ಕನ್ನಡದಲ್ಲಿ ಈ ಪ್ರಕಾರದ ಆತ್ಮಕಥೆ ರಚಿತವಾಗಿರುವುದು  ಅದೊಂದು   ಹೊಸ ಪ್ರಯೋಗ  ಎನ್ನಬಹುದು ಏಕೆಂದರೆ ಇಲ್ಲಿ ಕಾರ್ನಾಡರು ಏನನ್ನೂ ಮುಚ್ಚಿಡದೆ ಎಲ್ಲವನ್ನೂ ಬಹಿರಂಗಗೊಳಿಸಿದ ರೀತಿ ಓದುಗರನ್ನು ಅಚ್ಚರಿಗೊಳಿಸುತ್ತದೆ. ಪುಸ್ತಕ ಮೊದಲಿಗೆ ಆಪ್ತವಾಗುವುದು ಅದರಲ್ಲಿನ ಬರವಣಿಗೆಯ ಶೈಲಿಯಿಂದ.ಸರಳ ಭಾಷೆ,ಪುಟ್ಟ ವಾಕ್ಯಗಳ ಮೂಲಕ ತಮ್ಮ ಬದುಕಿನ ದಟ್ಟ ಅನುಭವಗಳನ್ನು ಕಟ್ಟಿಕೊಡುವ ಕಾರ್ನಾಡರ ಅಭಿವ್ಯಕ್ತಿಯ ಶೈಲಿ ತುಂಬ ಆಕರ್ಷಣಿಯವಾಗಿದೆ. ಕೃತಿಯ ಅರ್ಪಣೆಗೇ ಎರಡು ಪುಟಗಳನ್ನು ಮೀಸಲಿಟ್ಟದ್ದು ಪ್ರಾರಂಭದಲ್ಲೇ ಓದುಗನಲ್ಲಿ ಒಂದು ಸಣ್ಣ ಕುತೂಹಲಕ್ಕೆ ಕಾರಣವಾಗಿಅದುಪುಸ್ತಕದ ಕೊನೆಯ ಪುಟದವರೆಗೂ ಕೈಹಿಡಿದು ಕರೆದೊಯ್ಯುತ್ತದೆ. ಧಾರವಾಡದ ಕರ್ನಾಟಕ ಕಾಲೇಜು, ಆಕ್ಸ್ ಫರ್ಡ್ ಪ್ರೆಸ್, ಮುಂಬಯಿ ಜನಜೀವನ, ಸಿನಿಮಾ ನಿರ್ದೇಶನ, ಕಲಾತ್ಮಕ ಸಿನಿಮಾಗಳು, ಪುಣೆಯ ಫಿಲ್ಮ್ ಇನ್ ಸ್ಟಿಟ್ಯೂಟ್ , ತುರ್ತು ಪರಿಸ್ಥಿತಿ, ಜೊತೆಗೆ ಅಲ್ಲಲ್ಲಿ ಕಾಣಿಸಿಕೊಳ್ಳುವ ಸೃಜನಾತ್ಮಕ ವ್ಯಕ್ತಿತ್ವಗಳ ಪರಿಚಯ ಹೀಗೆ ಈ ಕೃತಿ ಕಾರ್ನಾಡರ ಸುತ್ತ ಸುತ್ತುತ್ತಲೇ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತ ಹೋಗುತ್ತದೆ. ಕಾರ್ನಾಡರು ತಮ್ಮ ಬದುಕಿನ ಜೊತೆಗೆ ತಾವು ಕಂಡ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತೀಕ ಬದುಕನ್ನೂ ಓದುಗನಿಗೆ  ಮೊಗೆ ಮೊಗೆದುಕೊಟ್ಟಿರುವರು.       
    ಕಾರ್ನಾಡರು ತಾವಿದ್ದ ಪರಿಸರದ ಕುರಿತು ಬರೆಯುವಾಗ ಅದನ್ನು ಸ್ಥೂಲವಾಗಿ ಹೇಳಿರುವುದು ಕೃತಿಯ ಮಹತ್ವವನ್ನು ಹೆಚ್ಚಿಸಿದೆ.ಉದಾಹರಣೆಗೆ ಆಕ್ಸ್ ಫರ್ಡ್  ಬಗ್ಗೆ ಬರೆಯುವಾಗ ಜೊತೆಗೆ ಬ್ರಿಟಿಷ್ ಸಮಾಜದ ಕುರಿತೂ ಹೇಳುತ್ತಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ 'ಹಿಂದೂ ಸಮಾಜಕ್ಕೆ ಜಾತಿ ವ್ಯವಸ್ಥೆ ತಳಹದಿಯಾಗಿರುವಂತೆ ಬ್ರಿಟಿಷ್ ಸಮಾಜಕ್ಕೊಂದು
 ಅದರದೇ ಆದ  ವರ್ಗ ವ್ಯವಸ್ಥೆ ಅಡಿಗಲ್ಲಾಗಿದೆ.ಈ ವ್ಯವಸ್ಥೆಯನ್ನು ಸ್ಥೂಲವಾಗಿ ಹೀಗೆ ಚಿತ್ರಿಸಬಹುದು ಸಮಾಜದ ಬುಡದಲ್ಲಿ  
ಆರ್ಥಿಕವಾಗಿ, ಸಾಮಾಜಿಕವಾಗಿ ಕೆಳಭಾಗದಲ್ಲಿ ಕಾರ್ಮಿಕ ವರ್ಗ. ಸಮಾಜದ ಮೇಲು ತುದಿಯಲ್ಲಿ ವಂಶಾನುಗತವಾಗಿ ಬಂದ    ಸಂಪತ್ತು-ಆಸ್ತಿಗಳಿದ್ದರೂ ಇಂದು ಬುರುಸಲು ಗಟ್ಟಿ ಸಾಮಾಜಿಕವಾಗಿ, ರಾಜಕೀಯವಾಗಿ ಅರ್ಥಹೀನವಾಗಿರುವ ಮೇಲುವರ್ಗ.
ಈ ಎರಡರ ನಡುವೆ ಮಧ್ಯಮ ವರ್ಗ'.ಹೀಗೆ ಹೇಳುವ ಲೇಖಕರು ಪ್ರತಿಯೊಂದು ವರ್ಗದ ಸಾಮಾಜಿಕ,ಶೈಕ್ಷ ಣಿಕ, ಆರ್ಥಿಕ 
 ಬದುಕನ್ನುವಿಶ್ಲೇಷಿಸುತ್ತಾರೆ.ಇಲ್ಲಿ ಕಾರ್ನಾಡರ ವೈಯಕ್ತಿಕ ಬದುಕನ್ನು ಓದುತ್ತಿದ್ದೇನೆ ಎನ್ನುವುದಕ್ಕಿಂತ ಒಂದು ರಾಷ್ಟ್ರದ ಜನ
 ಜೀವನವನ್ನು ಓದುತ್ತಿರುವ ಅನುಭವ ಓದುಗನಿಗಾಗುತ್ತದೆ. ಈ ಕಾರಣದಿಂದ ಕೃತಿ ಓದುಗನಿಗೆ ಮತ್ತಷ್ಟು ಆಪ್ತವಾಗುತ್ತದೆ.       ಆದರೆ ಕೃತಿಯ ಅಪೂರ್ಣತೆ ಓದುಗನಿಗೆ ನಿರಾಸೆಯನ್ನುಂಟು ಮಾಡುತ್ತದೆ.ಕಾರ್ನಾಡರೇ ಹೇಳಿರುವಂತೆ ಇದು ಅವರ   
ಬದುಕಿನ ಅರ್ಧ ಕಥಾನಕ.   ಕಾರ್ನಾಡರಿಗೀಗ ಎಪ್ಪತ್ಮೂರು ವರ್ಷ ಕೃತಿಯ ಕಥಾವಸ್ತು ಅವರ ಮೂವತ್ತೇಳನೇ ವಯಸ್ಸಿಗೆ
ಸೀಮಿತಗೊಂಡಿದೆ.ಮುಂದಿನ ದಿನಗಳಲ್ಲಿ ತಮ್ಮ ಬದುಕಿನ ಉತ್ತರಾರ್ಧ ಬರಬಹುದು ಎನ್ನುವ ಸುಳಿವನ್ನು ಅವರು
ಬಿಟ್ಟುಕೊಟ್ಟಿರುವರು.ಹಾಗೊಂದು ವೇಳೆ ಬಂದರೆ ಅದನ್ನು 'ನೋಡ ನೋಡುತ ದಿನಮಾನ' ಎಂದು ಕರೆಯಬಹುದು
ಎಂದಿರುವರು.     'ಆಡಾಡತ ಆಯುಷ್ಯ' ಓದುಗರ ಮನಸ್ಸನ್ನು ತುಂಬಿದೆ. ಈಗ ಅವರು ಕಾಯುತ್ತಿರುವುದು 'ನೋಡ ನೋಡುತ ದಿನಮಾನ' ಪುಸ್ತಕಕ್ಕಾಗಿ. ಎಲ್ಲರ ಆಶಯದಂತೆ ಉತ್ತರಾರ್ಧ ಬೇಗ ಪ್ರಕಟಗೊಂಡು ಓದುಗರ ಕೈ ಸೇರಲಿ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

1 comment:

  1. drshashidhar bannaleMay 29, 2012 at 3:26 PM

    kulkarni sir,

    Tumba chennagi sangrahavad mandisiddiri,subhashayagalu..
    neevu helida hage tamma atmakatanakdalli Karnadaru samakaalin saamajik vyavastheyannu odugara munde chennagi bidisittiddare ...

    ReplyDelete