Saturday, May 19, 2012

ಅವರು ಕನಸು ಕಟ್ಟುತ್ತಿದ್ದ ಸಮಯ ಇವರೆಲ್ಲಿದ್ದರು

      'ಆಕೆಗೆ ಈಗಿನ್ನೂ ಹದಿನೆಂಟರ ಹರೆಯ. ಅವನಿಗೂ ಅಷ್ಟೇ. ಕಾಲೇಜಿನಲ್ಲಿ ಒಬ್ಬರನ್ನೊಬ್ಬರು ನೋಡಿದರು. ಪರಸ್ಪರ ಪ್ರೀತಿಸಲಾರಂಭಿಸಿದರು. ವಿಷಯ ಕಾಲೇಜಿನ ಕಾರಿಡಾರಿನಲ್ಲಿ ಹರಿದಾಡಿ ಮನೆಯವರ ಕಿವಿ ತಲುಪಿತು. ರೋಷಗೊಂಡ ಅಪ್ಪ ಅವಳನ್ನು ದೂರದ ತಂಗಿಯ ಮನೆಗೆ ಕರೆದೊಯ್ದು ಬಿಟ್ಟ. ಅವಳ ಅನುಪಸ್ಥಿತಿ ಹುಡುಗನನ್ನು ತೀವ್ರ ನಿರಾಸೆಗೆ ದೂಡಿತು. ಓದು, ಊಟ, ಆಟ ಎಲ್ಲದರಲ್ಲೂ ನಿರಾಸಕ್ತಿ. ಬದುಕೇ ಬೇಡವಾಯಿತು. ಕೊನೆಗೆ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾದ. ಮಗನ ಭವಿಷ್ಯದ ಕುರಿತು ಸುಂದರ ಕನಸುಗಳನ್ನು ಕಟ್ಟುತ್ತಿದ್ದ ತಂದೆ ತಾಯಿಯ ಬದುಕಿನಲ್ಲಿ ಆತನ ಸಾವಿನಿಂದ ಕಾರ್ಮೋಡ ಕವಿಯಿತು. ಬದುಕು ಬರಡಾಯಿತು'.
       ಈ ಮೇಲೆ ಉಲ್ಲೇಖಿಸಿದ ಘಟನೆ ನನ್ನ ಕಲ್ಪನೆಯಲ್ಲಿ ಮೂಡಿ ಬಂದಿದ್ದರೂ ಈ ದಿನಗಳಲ್ಲಿ ಇದು ಪ್ರತಿ ಮನೆಗಳಲ್ಲಿ ಮರುಕಳಿಸುತ್ತಿದೆ. 'ಹುಚ್ಚು ಖೋಡಿ ಮನಸ್ಸು ಅದು ಹದಿನಾರರ ವಯಸ್ಸು' ಎಂದು ನಮ್ಮ ಜಾನಪದ ಕವಿ ಹಾಡಿರುವಂತೆ ಹರೆಯ ಬಹುಪಾಲು ಹುಡುಗ/ಹುಡುಗಿಯರ ಬದುಕನ್ನು ದುರಂತದ ಕಡೆಗೆ ಮುಖ ಮಾಡಿ ನಿಲ್ಲಿಸುತ್ತಿದೆ. ಕಾಲೇಜಿನ ಅಂಗಳಕ್ಕೆ ಕಾಲಿಟ್ಟಿದ್ದೆ ತಡ ನಮ್ಮ ಯುವಕ/ಯುವತಿಯರಲ್ಲಿ ಈ ಪ್ರೀತಿ, ಪ್ರೇಮಗಳು ಮೊಳಕೆಯೊಡೆಯಾಲಾರಂಭಿಸುತ್ತವೆ.ಅದಕ್ಕೆ ಪೂರಕವಾಗಿ ನಮ್ಮ ಮನೋರಂಜನಾ ಮಾಧ್ಯಮವಾದ ಸಿನಿಮಾ ಹರೆಯದ ಹಸಿ ಹಸಿ ಪ್ರೇಮವನ್ನೇ ಬೆಳ್ಳಿ ತೆರೆಗೆ ತಂದು ಯುವಜನತೆಯನ್ನು ಉತ್ತೇಜಿಸುತ್ತಿದೆ. ಕೆಲವು ದಶಕಗಳ ಹಿಂದೆ ತೆರೆಗೆ ಬಂದ ಹಿಂದಿ ಸಿನಿಮಾವೊಂದರ ಕೊನೆಯ ದೃಶ್ಯದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಡುವ ಜಾಗ ಅನೇಕ ವರ್ಷಗಳವರೆಗೆ ಯುವ ಪ್ರೇಮಿಗಳ ಪಿಕ್ ನಿಕ್ ತಾಣವಾಗಿತ್ತು. ಇದು ಸಿನಿಮಾ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ. ಪ್ರೌಢಶಾಲಾ ಶಿಕ್ಷಣದ ನಂತರ ದೊರೆಯುವ ಸ್ವಚ್ಚಂದವಾದ ಬದುಕು, ಮುಕ್ತ ಸ್ವಾತಂತ್ರ್ಯ, ದೈಹಿಕ ಆಕರ್ಷಣೆ, ಸಿನಿಮಾದಂಥ ಪರಿಣಾಮಕಾರಿ ಮಾಧ್ಯಮದ ಪ್ರಭಾವದಿಂದಾಗಿ ಯುವಕ/ಯುವತಿಯರು ಬದುಕು ಕಟ್ಟಿಕೊಳ್ಳಬೇಕಾದ ಹೊತ್ತಿನಲ್ಲಿ ಪ್ರೀತಿ, ಪ್ರೇಮದ ಬಲೆಗೆ ಬಿದ್ದು ಬದುಕನ್ನು ದುರಂತದಲ್ಲಿ ಅಂತ್ಯಗೊಳಿಸಿಕೊಳ್ಳುತ್ತಿರುವರು. ಪ್ರೀತಿ ಬದುಕಿಗೆ ಜೀವಸೆಲೆಯಾಗಬೇಕು, ಸಾಧನೆಗೆ ಸ್ಫೂರ್ತಿಯಾಗಬೇಕು, ಯಶಸ್ಸಿನ ಮೆಟ್ಟಿಲಾಗಬೇಕು, ನಾಳೆಯ ಭವಿಷ್ಯಕ್ಕೆ ಅಡಿಪಾಯವಾಗಬೇಕು, ನಿನ್ನೆಯ ದಿನಗಳ ಮಧುರ ಕನವರಿಕೆಯಾಗಬೇಕು. ಆದರೆ ಪ್ರೀತಿಯೇ ಬದುಕನ್ನು ಘೋರವಾಗಿಸುತ್ತಿರುವುದು ದುರಂತದ ಸಂಗತಿ.
         ಈ ನಡುವೆ ನಮಗೆ ಅವರುಗಳ ಬಗ್ಗೆ ಕಿಂಚಿತ್ ಚಿಂತೆಯೂ ಇಲ್ಲ. ಮಕ್ಕಳ ಬದುಕಿನ ಕನಸು ಕಟ್ಟುತ್ತ ನಾಳೆ ಬರಲಿರುವ ಸುಂದರ ದಿನಗಳನ್ನು ಎದುರು ನೋಡುತ್ತ ಬದುಕು ನೂಕುತ್ತಿರುವ ಪಾಲಕರಿಗೆ ಮಕ್ಕಳ ಈ ವರ್ತನೆ ಆಘಾತವನ್ನುಂಟು ಮಾಡುತ್ತಿದೆ. ಬಾಳ ಸಂಜೆಯಲ್ಲಿ ಆಸರೆಯಾಗಿರಬೇಕಿದ್ದ ಮಕ್ಕಳು ಪ್ರೀತಿ, ಪ್ರೇಮದ ಬಲೆಗೆ ಬಿದ್ದು ತಾರುಣ್ಯದಲ್ಲೇ ಬದುಕನ್ನು ಕೊನೆಗೊಳಿಸಿಕೊಳ್ಳುತ್ತಿರುವುದು ಅನೇಕ ತಂದೆ ತಾಯಿಗಳನ್ನು ಅನಾಥರನ್ನಾಗಿಸುತ್ತಿದೆ.
        ಈ ಪಾಲಕರು ಮಕ್ಕಳ ಸುಂದರ ಬದುಕಿನ ಕನಸು ಕಟ್ಟುತ್ತಿದ್ದ ಸಮಯದಲ್ಲಿ ಆ ಮಕ್ಕಳು ಪ್ರೇಮದ ಉನ್ಮಾದಕ್ಕೊಳಗಾಗಿ ರೈಲು ಕಂಬಿಗಳ ಮೇಲೆ, ನೇಣಿನ ಕುಣಿಕೆಯೊಳಗೆ, ಭಾವಿ/ನದಿ/ಸಾಗರಗಳ ಗರ್ಭದೊಳಗೆ ಹೆಣವಾಗಿ ಬಿದ್ದಿದ್ದರು.

-ರಾಜಕುಮಾರ. ವಿ. ಕುಲಕರ್ಣಿ, ಬಾಗಲಕೋಟೆ

No comments:

Post a Comment