Friday, February 24, 2023

ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ನನ್ನ ಲೇಖನ 'ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ' ಕೇಳಿ

ಪ್ರಜಾವಾಣಿಯ ಸಂಗತ ಅಂಕಣದಲ್ಲಿ ಫೆಬ್ರುವರಿ ೨೪, ೨೦೨೩ ರಂದು ಪ್ರಕಟವಾದ ನನ್ನ ಲೇಖನ 'ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ' ಲೇಖನವನ್ನು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಕೇಳಿ (ಲೇಖನ ಪ್ರಕಟವಾದ ದಿನದಂದೇ ಪ್ರಜಾವಾಣಿ ವಾರ್ತೆಯಲ್ಲಿ ಬಿತ್ತರವಾಯಿತು)

Wednesday, February 1, 2023

ಹೊತ್ತಿಗೆ ಪ್ರಕಟಣೆಯ ಈ ಹೊತ್ತು

 




 (೭.೧೨.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

ಕನ್ನಡದಲ್ಲಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಈ ಮಾತಿಗೆ ಪತ್ರಿಕೆಗಳ ಪುರವಣಿಗಳಲ್ಲಿ ಪ್ರತಿವಾರ ಪ್ರಕಟವಾಗುವ ಹೊಸ ಪುಸ್ತಕಗಳ ಪಟ್ಟಿಯೇ ಪುರಾವೆ ಒದಗಿಸುತ್ತದೆ. ಪುಸ್ತಕಗಳ ಪ್ರಕಟಣೆ ಹೆಚ್ಚುತ್ತಿರುವುದಕ್ಕೆ ಪ್ರಕಾಶಕರ ಸಂಖ್ಯೆ ಹೆಚ್ಚುತ್ತಿರುವುದೇ ಮೂಲ ಕಾರಣವಾಗಿದೆ. ಪ್ರತಿವರ್ಷ ಹೊಸಬರು ಪ್ರಕಾಶನ ಕ್ಷೇತ್ರಕ್ಕೆ ಕಾಲಿಡುತ್ತಿರುವರು. ಪುಸ್ತಕಗಳ ಪ್ರಕಟಣೆಯಲ್ಲಿ ಆಶಾದಾಯಕ ಬೆಳವಣಿಗೆ ಗೋಚರಿಸುತ್ತಿರುವ ಈ ಹೊತ್ತಿನಲ್ಲಿ ಲೇಖಕರ ಸಮಸ್ಯೆಗಳತ್ತಲ್ಲೂ ಗಮನ ಹರಿಸಬೇಕಾಗಿದೆ. ಪ್ರಕಾಶಕರಿಂದ ಲೇಖಕರ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿದೆಯೇ ಎನ್ನುವುದೇ ಈ ಸಂದರ್ಭದ ಮೂಲಭೂತ ಪ್ರಶ್ನೆಯಾಗಿದೆ.

ಹೊಸ ಲೇಖಕನಾಗಿ ಸಾಹಿತ್ಯಲೋಕಕ್ಕೆ ಕಾಲಿಟ್ಟಿರುವ ಮಿತ್ರ ಇತ್ತೀಚಿಗೆ ನನ್ನನ್ನು ಪುಸ್ತಕ ಮಳಿಗೆಗೆ ಕರೆದೊಯ್ದಿದ್ದ. ಕೆಲವು ತಿಂಗಳುಗಳ ಹಿಂದೆ ಮಿತ್ರನ ಪುಸ್ತಕವನ್ನು ಪ್ರಕಟಿಸಿ ಬಿಡುಗಡೆಗೊಳಿಸಿದ್ದ ಪ್ರಕಾಶಕರ ಪುಸ್ತಕದಂಗಡಿ ಅದಾಗಿತ್ತು. ಆ ಅಂಗಡಿಯಲ್ಲಿ ತನ್ನ ಪ್ರಕಟಿತ ಪುಸ್ತಕವನ್ನು ನನಗೆ ತೋರಿಸಬೇಕೆಂಬ ಉಮೇದಿಯಿಂದ ಕರೆದೊಯ್ದ ಮಿತ್ರನಿಗೆ ಅಲ್ಲಿ ಅವನ ಪುಸ್ತಕ ಕಾಣಿಸದೆ ನಿರಾಸೆಯಾಯಿತು. ಪ್ರಖ್ಯಾತ ಸಾಹಿತಿಗಳ ಪುಸ್ತಕಗಳ ಸಾಲಿನಲ್ಲಿ ತನ್ನ ಪುಸ್ತಕ ಗೋಚರಿಸಬಹುದೆನ್ನುವ ಆತನ ನಿರೀಕ್ಷೆ ಹುಸಿಯಾಗಿ ಅವನ ಉತ್ಸಾಹಕ್ಕೆ ತಣ್ಣೀರೆರೆಚಿದಂತಾಯಿತು. ಮಳಿಗೆಯಲ್ಲಿದ್ದ ಕೆಲಸಗಾರರನ್ನು ಪ್ರಶ್ನಿಸಿದಾಗ ಅವರು ಮಾಲೀಕರ ಕಡೆ ಕೈತೋರಿಸಿದರು. ಮಾಲೀಕರು ಸಾರ್ವಜನಿಕ ಗ್ರಂಥಾಲಯಗಳಿಗೆ ಮತ್ತು ಕಾಲೇಜು ಗ್ರಂಥಾಲಯಗಳಿಗೆ ಪೂರೈಸಲೆಂದು ಪುಸ್ತಕ ಪ್ರಕಟಿಸಿದ್ದೆ ವಿನಾ ಮಳಿಗೆಯಲ್ಲಿಟ್ಟು ಮಾರಾಟಮಾಡಲಿಕ್ಕಲ್ಲ ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿದರು. ತಾನು ಪ್ರಕಟಿಸಿದ ಪುಸ್ತಕಕ್ಕೆ ತನ್ನದೇ ಪುಸ್ತಕ ಮಳಿಗೆಯಲ್ಲಿ ಜಾಗ ಕೊಡದ ಪ್ರಕಾಶಕ ಅದು ಹೇಗೆ ನನ್ನ ಪುಸ್ತಕವನ್ನು ಅನೇಕ ಓದುಗರಿಗೆ ಮುಟ್ಟಿಸುತ್ತಾನೆ ಎನ್ನುವುದು ಬರಹಗಾರ ಮಿತ್ರನ ಪ್ರಶ್ನೆಯಾಗಿತ್ತು. 

ಪ್ರಕಾಶಕರ ಗೊಡವೆಯೇ ಬೇಡವೆಂದು ನನ್ನ ಇನ್ನೊರ್ವ ಮಿತ್ರ ಸ್ವತ: ಪ್ರಕಾಶಕರಾಗಿ ಪುಸ್ತಕ ಪ್ರಕಟಿಸಿರುವರು.  ನಲವತ್ತು ಸಾವಿರ ರೂಪಾಯಿಗಳನ್ನು ಮುದ್ರಕರಿಗೆ ಪಾವತಿಸಿ ಒಂದು ಸಾವಿರ ಪ್ರತಿಗಳನ್ನು ಪ್ರಕಟಿಸಿದರು. ಹತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಆಯೋಜಿಸಿದ್ದ ಪುಸ್ತಕ ಬಿಡುಗಡೆಯ ದಿನ ನೂರು ಪ್ರತಿಗಳು ಗೌರವ ಪ್ರತಿಯ ರೂಪದಲ್ಲಿ ಉಚಿತವಾಗಿ ವಿತರಣೆಯಾದವು. ಪರಿಚಯದ ಪುಸ್ತಕ ಮಾರಾಟಗಾರರನ್ನು ಸಂಪರ್ಕಿಸಿದಾಗ ಎರಡು ನೂರು ಪ್ರತಿಗಳು ಶೇಕಡಾ 20ರ ರಿಯಾಯಿತಿ ದರದಲ್ಲಿ ಮಾರಾಟವಾದವು. ಮೂರು ನೂರು ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟ ಮಾಡಿದರೂ ಆ ಹಣ ಇನ್ನೂ ಅವರ ಕೈಸೇರಿಲ್ಲ. ಈಗ ಸುಮಾರು ನಾಲ್ಕು ನೂರು ಪ್ರತಿಗಳು ಮಾರಾಟವಾಗದೆ ಅವರ ಬಳಿ ಉಳಿದುಕೊಂಡಿವೆ. ಒಂದು ಅಂದಾಜಿನ ಪ್ರಕಾರ ಈ ಪುಸ್ತಕ ಪ್ರಕಟಣೆಯಿಂದ ಅವರಿಗೆ 20,000 ರೂಪಾಯಿಗಳ ನಷ್ಟವಾಗಿದೆ. ಒಂದಿಷ್ಟು ಉತ್ತೇಜನ ದೊರೆತಿದ್ದರೆ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಎದುರಾದ ನಿರುತ್ಸಾಹ ಅವರನ್ನು ಶಾಶ್ವತವಾಗಿ ಪುಸ್ತಕ ಪ್ರಕಾಶನದಿಂದ ದೂರಾಗುವಂತೆ ಮಾಡಿತು. 

ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಸ್ಥಾಪಿತ ಲೇಖಕರಿಗೆ ಮಣೆ ಹಾಕುತ್ತಿವೆಯೇ ವಿನಾ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗುತ್ತಿಲ್ಲ. ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಿ ಆರ್ಥಿಕವಾಗಿ ಕೈಸುಟ್ಟುಕೊಳ್ಳುವುದೇಕೆ ಎನ್ನುವ ಮನೋಭಾವ ಅವರದಾಗಿರಬಹುದು. ಕೆಲವು ಪ್ರಕಾಶಕರು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾದ ಬರಹ ಅಥವಾ ಕಥೆಗಳಾಗಿದ್ದರೆ ಪುಸ್ತಕ ಪ್ರಕಟಿಸಲು ಆಸಕ್ತಿ ತೋರಿಸುವುದಿಲ್ಲ. ಇನ್ನು ಕೆಲವು ಪ್ರಕಾಶಕರು ಪ್ರತಿವರ್ಷ ಅವರು ಆಯೋಜಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗುವ ಹಸ್ತಪ್ರತಿಗಳನ್ನು ಮಾತ್ರ ಪ್ರಕಟಿಸುವ ಯೋಜನೆ ಹಾಕಿಕೊಂಡಿರುತ್ತಾರೆ. ಮೂರ್ನಾಲ್ಕು ವರ್ಷಗಳಿಗಾಗುವಷ್ಟು ಕೆಲಸವಿದೆಯೆಂದು ಹೊಸ ಲೇಖಕರತ್ತ ಕಣ್ಣೆತ್ತಿಯೂ ನೋಡದ ಪ್ರಕಾಶಕರೂ ಇರುವರು. ಕೆಲವರಂತೂ ಹೊಸ ಲೇಖಕರಿಗೆ ಪ್ರತಿಕ್ರಿಯಿಸುವ ಗೋಜಿಗೇ ಹೋಗುವುದಿಲ್ಲ.  

ಇನ್ನು ಕೊಟ್ಟಿದ್ದನ್ನೆಲ್ಲ ಪ್ರಕಟಿಸುವ ಪ್ರಕಾಶಕರ ಸಂಖ್ಯೆಯೂ ಬಹಳಷ್ಟಿದೆ. ಇಂಥ ಪ್ರಕಾಶಕರ ದೃಷ್ಟಿಯಲ್ಲಿ ಪುಸ್ತಕ ಪ್ರಕಟಣೆ ಎನ್ನುವುದು ಸಂಖ್ಯಾತ್ಮಕ ಪ್ರಗತಿಯೇ ವಿನಾ ಗುಣಾತ್ಮಕ ಬೆಳವಣಿಗೆಯಲ್ಲ. ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಒಂದೇ ದಿನ ಒಂದೇ ವೇದಿಕೆಯಲ್ಲಿ 100 ರಿಂದ 200 ಶೀರ್ಷಿಕೆಗಳ ಪುಸ್ತಕಗಳು ಬಿಡುಗಡೆಯಾಗುತ್ತವೆ. ಅದೆಷ್ಟೋ ಸಂದರ್ಭಗಳಲ್ಲಿ ಅತಿಥಿಗಳಾಗಿ ಆಗಮಿಸಿದ ವಿದ್ವಾಂಸರು ಸಂಖ್ಯೆಗಲ್ಲ ಗುಣಾತ್ಮಕತೆಗೆ ಆದ್ಯತೆ ನೀಡಿ ಎಂದು ವೇದಿಕೆಯಲ್ಲೆ ಕಿವಿಮಾತು ಹೇಳಿದ್ದುಂಟು. ಇಂಥ ಪ್ರಕಾಶಕರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳೇ ಕೃಪಾಪೋಷಿತ  ಮಂಡಳಿಗಳಾಗಿವೆ. ಒಬ್ಬರೆ ಪ್ರಕಾಶಕರು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಹೆಸರುಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಮಾರಾಟ ಮಾಡಿ ಧನ್ಯರಾಗುತ್ತಾರೆ. ಲೇಖಕರ ಪುಸ್ತಕಗಳು ಗ್ರಂಥಾಲಯಗಳಲ್ಲಿನ ಅಲ್ಮೆರಾಗಳಿಗೆ ಶೋಭೆ ತರುವ ಅಲಂಕಾರಿಕ ವಸ್ತುಗಳಾಗುತ್ತಿವೆ. ಇಲ್ಲಿ ನಿಜವಾದ ನಷ್ಟವಾಗುವುದು ಗುಣಾತ್ಮಕ ಪುಸ್ತಕಗಳ ಲೇಖಕರಿಗೆ.

ಇನ್ನೊಂದೆಡೆ ಓದುಗರು ಕನ್ನಡ ಪುಸ್ತಕಗಳ ಖರೀದಿಯಲ್ಲಿ ಧಾರಾಳತನ ತೋರಿಸುತ್ತಿಲ್ಲ. ಓದುಗರು ಅಪೇಕ್ಷಿಸುತ್ತಿರುವ ಅಧಿಕ ಪ್ರಮಾಣದ ರಿಯಾಯಿತಿ ಹೊಸ ಲೇಖಕರ ಪುಸ್ತಕಗಳ ಪ್ರಕಟಣೆಯ ಹಿನ್ನೆಡೆಗೆ ಕಾರಣವಾಗಿದೆ. ಹೆಚ್ಚಿನ ಓದುಗರು ಪುಸ್ತಕವನ್ನು ಅದರ ಪ್ರಕಟಿತ ಬೆಲೆಗೆ ಖರೀದಿಸುವ ಔದಾರ್ಯ ತೋರುತ್ತಿಲ್ಲ. ಇಂಗ್ಲಿಷ್ ಭಾಷೆಯ ಪುಸ್ತಕಗಳ ಮಾರಾಟದಲ್ಲಿನ ರಿಯಾಯಿತಿಯ ಧಾರಾಳತನವೇ ಕನ್ನಡ ಪುಸ್ತಕಗಳ ಮಾರಾಟಕ್ಕೆ ಉರುಳಾಗಿ ಪರಿಣಮಿಸಿದೆ. ಇಂಗ್ಲಿಷ್ ಭಾಷೆಯ ಪುಸ್ತಕಗಳನ್ನು ಖರೀದಿಸುವಾಗ ಸಿಗುತ್ತಿರುವ ಹೆಚ್ಚಿನ ರಿಯಾಯಿತಿಯನ್ನು ಓದುಗರು ಕನ್ನಡ ಪುಸ್ತಕಗಳನ್ನು ಖರೀದಿಸುವಾಗಲೂ ನಿರೀಕ್ಷಿಸುತ್ತಿರುವರು. ಈ ಕಾರಣದಿಂದಾಗಿ ಜನಪ್ರಿಯ ಲೇಖಕರ ಪುಸ್ತಕ ಪ್ರಕಟಣೆಯಲ್ಲಿನ ಪ್ರಕಾಶಕರ ಆಸಕ್ತಿ ಹೊಸ ಲೇಖಕರ ಪುಸ್ತಕಗಳ ಪ್ರಕಟಣೆಯಲ್ಲಿ ಕಾಣಿಸುತ್ತಿಲ್ಲ.

ಇಂಥ ಸನ್ನಿವೇಶದಲ್ಲಿ ಓದುಗರು ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಮರ್ಶೆಗಳನ್ನು ಓದಿ ಹೊಸ ಲೇಖಕರ ಪುಸ್ತಕಗಳನ್ನು ಖರೀದಿಸುತ್ತಿರುವರು. ಪ್ರತಿವರ್ಷ ಪ್ರಕಟವಾಗುತ್ತಿರುವ ಎಲ್ಲ ಪುಸ್ತಕಗಳ ವಿಮರ್ಶೆಯಾಗುತ್ತಿದೆಯೇ ಎನ್ನುವ ಪ್ರಶ್ನೆ ಈ ಸಂದರ್ಭ ಎದುರಾಗುತ್ತದೆ. ಹಿರಿಯ ಸಾಹಿತಿ ಕೆ.ವಿ.ತಿರುಮಲೇಶ ಅವರು ಹೇಳಿದಂತೆ ಕೆಲವೇ ಪುಸ್ತಕಗಳ ವಿಮರ್ಶೆಯು ಅದು ಇಡೀ ಸಾಹಿತ್ಯ ಲೋಕದ ವಿಮರ್ಶೆಯಾಗಲಾರದು ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಪರಿಸ್ಥಿತಿ ಹೀಗಿರುವಾಗ ಹೊಸ ಲೇಖಕರು ಬರವಣಿಗೆಯ ಕ್ಷೇತ್ರದಲ್ಲಿ ಕಾಲೂರಿ ನಿಲ್ಲಲು ಅಗತ್ಯವಾದ ಆಶಾದಾಯಕ ವಾತಾವರಣ ಕಾಣಿಸುತ್ತಿಲ್ಲ ಎನ್ನುವ ಮಾತನ್ನು ಬೇಸರದಿಂದ ಹೇಳಬೇಕಾಗಿದೆ.

-ರಾಜಕುಮಾರ ಕುಲಕರ್ಣಿ

Wednesday, January 4, 2023

ನನ್ನ ಲೇಖನ 'ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ' ಲೇಖನವನ್ನು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಕೇಳಿ

ಪ್ರಜಾವಾಣಿಯ ಸಂಗತ ಅಂಕಣದಲ್ಲಿ ಜನವರಿ ೪, ೨೦೨೩ ರಂದು ಪ್ರಕಟವಾದ ನನ್ನ ಲೇಖನ 'ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ' ಲೇಖನವನ್ನು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಕೇಳಿ (ಲೇಖನ ಪ್ರಕಟವಾದ ದಿನದಂದೇ ಪ್ರಜಾವಾಣಿ ವಾರ್ತೆಯಲ್ಲಿ ಬಿತ್ತರವಾಯಿತು) 

Monday, January 2, 2023

ಗ್ರಂಥಾಲಯ: ಓದುಗರ ಕೊರತೆಯೇಕೆ?




      (೭.೧೧.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

     ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಗ್ರಂಥಾಲಯ ಸಪ್ತಾಹವನ್ನು ಆಚರಿಸಲಾಗುವುದು. ವಾರಪೂರ್ತಿ ಪುಸ್ತಕ ಪ್ರದರ್ಶನ, ಪರಿಣತರಿಂದ ವಿಶೇಷ ಉಪನ್ಯಾಸಗಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇಂಥ ಕಾರ್ಯಕ್ರಮಗಳಿಂದ ಗ್ರಂಥಾಲಯದತ್ತ ಓದುಗರನ್ನು ಆಕರ್ಷಿಸುವ ಪ್ರಯತ್ನ ಸಾರ್ವಜನಿಕ ಗ್ರಂಥಾಲಯ ಇಲಾಖೆಯದ್ದು.  

    ಇದೇ ಸಂದರ್ಭ ಸಾರ್ವಜನಿಕ ಗ್ರಂಥಾಲಯಗಳಿಗೆ ಬರುವ ಓದುಗರ ಸಂಖ್ಯೆ ಏಕೆ ಇಳಿಮುಖವಾಗುತ್ತಿದೆ ಎಂದು ಯೋಚಿಸಬೇಕಿದೆ. ಸಾರ್ವಜನಿಕರಲ್ಲಿ ಓದುವ ಅಭಿರುಚಿ ಮತ್ತು ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಆರೋಪಿಸುವುದರಲ್ಲಿ ಯಾವುದೇ ಹುರುಳಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸರತಿಸಾಲಿನಲ್ಲಿ ನಿಂತು ಪುಸ್ತಕಗಳನ್ನು ಖರೀದಿಸುವ ಚಿತ್ರಣ ನಮ್ಮ ಕಣ್ಣೆದುರಿಗಿದೆ. ಅನೇಕ ಪ್ರಕಾಶನ ಸಂಸ್ಥೆಗಳು ಆನ್‍ಲೈನ್ ಮೂಲಕವೇ ಪುಸ್ತಕಗಳ ಮಾರಾಟದಿಂದ ಲಕ್ಷಾಂತರ ರೂಪಾಯಿಗಳ ವಹಿವಾಟು ಮಾಡುತ್ತಿವೆ. ಅದೆಷ್ಟೋ ಪ್ರಕಾಶನ ಸಂಸ್ಥೆಗಳು ತಮ್ಮ ಪುಸ್ತಕಗಳ ಮಾರಾಟಕ್ಕಾಗಿ ಪ್ರಜ್ಞಾವಂತ ಓದುಗರನ್ನು ನೆಚ್ಚಿಕೊಂಡಿವೆಯೇ ವಿನಾ ಸಾರ್ವಜನಿಕ ಗ್ರಂಥಾಲಯಗಳನ್ನಲ್ಲ. 

    ಸನ್ನಿವೇಶ ಹೀಗಿರುವಾಗ ಸಾರ್ವಜನಿಕ ಗ್ರಂಥಾಲಗಳಲ್ಲೇಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಓದುಗರಿಗೆ ಗುಣಮಟ್ಟದ ಪುಸ್ತಕಗಳು ಗ್ರಂಥಾಲಯಗಳಲ್ಲಿ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಆರೋಪ ಸತ್ಯಕ್ಕೆ ಹತ್ತಿರವಾಗಿದೆ. ಏಕೆಂದರೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳ ಖರೀದಿಯ ಒಟ್ಟು ವಿಧಾನವೇ ಅವೈಜ್ಞಾನಿಕವಾಗಿದೆ. ಪ್ರಕಾಶಕರಿಂದ ಇಂತಿಷ್ಟು ಪ್ರಮಾಣದಲ್ಲಿ ಪುಸ್ತಕಗಳ ಪ್ರತಿಗಳನ್ನು ಖರೀದಿಸಬೇಕೆಂಬ ನಿಯಮ ಚಾಲ್ತಿಯಲ್ಲಿದೆ. ಪ್ರತಿಪುಟಕ್ಕೆ ನಿರ್ಧಿಷ್ಟ ಬೆಲೆಯನ್ನು ನಿಗದಿಪಡಿಸಲಾಗಿದೆ. ಪ್ರಕಾಶಕರಿಗೆ ಉತ್ತೇಜನ ಕೊಡಲು ಜಾರಿಯಲ್ಲಿರುವ ಈ ವಿಧಾನದಿಂದಾಗಿ ಗುಣಮಟ್ಟದ ಪುಸ್ತಕಗಳ ಕೊರತೆ ಗ್ರಂಥಾಲಯಗಳಲ್ಲಿ ಎದ್ದುಕಾಣುತ್ತಿದೆ. 

    ಅದೆಷ್ಟೋ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯಗಳಿಗೆಂದೇ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಒಬ್ಬರೇ ಪ್ರಕಾಶಕರು ಬೇರೆ ಬೇರೆ ಹೆಸರುಗಳ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಾಶನ ಸಂಸ್ಥೆಗಳನ್ನು ಹುಟ್ಟುಹಾಕಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಕೆಲವು ವರ್ಷಗಳ ಹಿಂದೆ ಹಿಂದುಳಿದ ಭಾಗವೆಂಬ ಕಾರಣದಿಂದ ಹೈದರಾಬಾದ ಕರ್ನಾಟಕ ಭಾಗದ (ಈಗಿನ ಕಲ್ಯಾಣ ಕರ್ನಾಟಕ) ಪ್ರಕಾಶಕರಿಂದ ಪ್ರತಿ ಪುಸ್ತಕದ 1500 ಪ್ರತಿಗಳನ್ನು ಖರೀದಿಸಬೇಕೆನ್ನುವ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಇದಕ್ಕಾಗಿ ಪ್ರಕಟಣಾ ವರ್ಷದ ನಿರ್ಬಂಧವನ್ನು ಕೂಡ ತೆಗೆದುಹಾಕಲಾಗಿತ್ತು. ಪರಿಣಾಮವಾಗಿ ಆ ಭಾಗದ ಪ್ರಕಾಶಕರು ತಮ್ಮ ಪ್ರಕಟಣೆಯ ಅಳಿದುಳಿದ ಸರಕನ್ನೆಲ್ಲ ಮಾರಾಟಮಾಡಿ ಧನ್ಯರಾದರು. 

    ಪರಿಸ್ಥಿತಿ ಹೀಗಿರುವಾಗ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಅದೆಷ್ಟೋ ಪ್ರಕಾಶನ ಸಂಸ್ಥೆಗಳು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಸುವ ಪ್ರಕಾಶಕರ ಪಟ್ಟಿಯಿಂದ ಹೊರಗೇ ಉಳಿದಿವೆ. ಪುಸ್ತಕದಂತಹ ಸಂಸ್ಕೃತಿಗೆ ಈ ರೀತಿಯ ವಿನಾಯಿತಿ ಮತ್ತು ಔದಾರ್ಯವನ್ನು ತೋರಿಸುವ ಅಗತ್ಯವಿತ್ತೆ ಎನ್ನುವ ಸಂದೇಹ ಕಾಡದೆ ಇರದು. ಪುಸ್ತಕ ಪ್ರಕಟಣೆ ಎನ್ನುವುದು ಉದ್ಯಮವಲ್ಲ, ಅದೊಂದು ಮಾಧ್ಯಮ. ಪುಸ್ತಕ ಪ್ರಕಟಣೆಯ ಕೆಲಸವನ್ನು ಮಾಧ್ಯಮ ಎಂದು ಭಾವಿಸಿದವರು ಒಂದು ನೀತಿಯ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ಪುಸ್ತಕ ಪ್ರಕಟಣೆಯನ್ನು ಪುಸ್ತಕೋದ್ಯಮವಾಗಿಸಿದವರು ನೀತಿಯ ಚೌಕಟ್ಟಿನಿಂದ ಹೊರಗುಳಿಯುತ್ತಾರೆ. ನೀತಿಯ ಚೌಕಟ್ಟಿನಲ್ಲಿರುವ ಪ್ರಕಾಶಕರಿಗೆ ಓದುಗರೇ ಅನ್ನದಾತರು. ಚೌಕಟ್ಟನ್ನು ಮೀರಿ ನಿಂತವರು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಸಿ ಕುಬೇರರಾಗುತ್ತಿರುವರು. 

    ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೇ ಗ್ರಂಥಾಲಯಗಳು ಅವ್ಯವಸ್ಥೆಗಳ ಆಗರವಾಗಿರುವಾಗ ಇನ್ನು ಗ್ರಾಮೀಣ ಭಾಗದಲ್ಲಿನ ಗ್ರಂಥಾಲಯಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಸ್ಥಳೀಯರನ್ನೆ ಗ್ರಂಥಾಲಯ ಮೇಲ್ವಿಚಾರಕರೆಂದು ನೇಮಕಮಾಡಿಕೊಳ್ಳುತ್ತಿರುವುದರಿಂದ ಅಲ್ಲಿನ ಗ್ರಂಥಾಲಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸ್ಥಳೀಯರ ಬೆಂಬಲವಿರುವುದರಿಂದ ಮೇಲ್ವಿಚಾರಕರು ಗ್ರಂಥಾಲಗಳಿಗೆ ಬೀಗಹಾಕಿ ತಮ್ಮ ಖಾಸಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವರು. ಈ ಮೊದಲು ಗ್ರಾಮೀಣ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರಿಗಾಗಿ ಪುನಶ್ಚೇತನ ಶಿಬಿರಗಳನ್ನು ಆಯೋಜಿಸಲಾಗುತ್ತಿತ್ತು. ನಾನು ಕೆಲವು ಶಿಬಿರಗಳಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದಿದೆ. ಮೇಲ್ವಿಚಾರಕರಲ್ಲಿ ವಿಷಯಜ್ಞಾನ ಮತ್ತು ತರಬೇತಿಯ ಕೊರತೆ ಎದ್ದು ಕಾಣುತ್ತಿತ್ತು. ಈಗ ಶಿಬಿರಗಳನ್ನು ಆಯೋಜಿಸುತ್ತಿಲ್ಲವೋ ಅಥವಾ ಸರ್ಕಾರದ ದಸ್ತಾವೇಜುಗಳ ಮಟ್ಟದಲ್ಲಿ ಮಾತ್ರ ದಾಖಲಾಗುತ್ತಿದೆಯೋ ತಿಳಿಯುತ್ತಿಲ್ಲ. 

    ಪುಸ್ತಕಗಳ ಓದಿನ ಸಂಸ್ಕೃತಿಯನ್ನು ಬಿತ್ತುವ ಕೆಲಸ ಆರೋಗ್ಯಕರ ಸಮಾಜದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಪುಸ್ತಕಗಳ ಮಹತ್ವವನ್ನು ನೊಬೆಲ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್‍ಸ್ಕಿ ಹೀಗೆ ಹೇಳಿರುವರು-‘ನಾವು ನಮ್ಮ ನಾಯಕರುಗಳನ್ನು ರಾಜಕೀಯ ಕಾರ್ಯತಂತ್ರಕ್ಕಿಂತ ಅವರ ಓದಿನ ಅನುಭವವನ್ನಾಧರಿಸಿ ಆಯ್ಕೆ ಮಾಡಿದ್ದೆ ಆಗಿದ್ದಲ್ಲಿ ಈಗ ಭೂಮಿಯ ಮೇಲಿರುವ ದು:ಖಕ್ಕಿಂತ ಅತ್ಯಂತ ಕಡಿಮೆ ದು:ಖವಿರುತ್ತಿತ್ತು’. ಈ ಮಾತನ್ನು ಅವರು ನೊಬೆಲ್ ಪ್ರಶಸ್ತಿ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಹೇಳಿರುವರು. ಈ ನಡುವೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪುಸ್ತಕಗಳ ಡಿಜಿಟಲೀಕರಣಕ್ಕೆ ಮುಂದಾಗಿದೆ. ಡಿಜಿಟಲೀಕರಣದಿಂದ ಪುಸ್ತಕಗಳನ್ನು ಅಸಂಖ್ಯಾತ ಓದುಗರಿಗೆ ತಲುಪಿಸಬಹುದು ಎನ್ನುವ ನಿರ್ಧಾರಕ್ಕೆ ಬರುವುದು ತಪ್ಪು ನಿರ್ಣಯವಾಗುತ್ತದೆ. ಜೊತೆಗೆ ಡಿಜಿಟಲೀಕರಣಗೊಳ್ಳುತ್ತಿರುವ ಪುಸ್ತಕಗಳು ಯಾವುವು ಮತ್ತು ಯಾವ ವಯೋಮಾನದ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಯೋಚನೆಮಾಡಬೇಕಾಗಿದೆ. ಇಲಾಖೆಯ ಜಾಲತಾಣದ ಮುಖಪುಟವನ್ನು ಆಕರ್ಷಣೀಯಗೊಳಿಸಿದ ಮಾತ್ರಕ್ಕೆ ಡಿಜಿಟಲೀಕರಣದ ಕಾರ್ಯವನ್ನು ಸಮರ್ಥಿಸಿಕೊಂಡಂತಾಗುವುದಿಲ್ಲ. ಒಟ್ಟಾರೆ ಇಲಾಖೆಯ ಪ್ರಯತ್ನ ‘ಟೊಳ್ಳುಗಟ್ಟಿ’ಯಂತಾಗಬಾರದು. ಡಿಜಿಟಲೀಕರಣಕ್ಕೆ ಖರ್ಚಾಗುವ ಹಣವನ್ನೇ ಯೋಗ್ಯ ಗುಣಮಟ್ಟದ ಪುಸ್ತಕಗಳ ಖರೀದಿಗಾಗಿ ವಿನಿಯೋಗಿಸಿದರೆ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸಿದಂತಾಗುತ್ತಿತ್ತು. 

    ಒಂದುಕಡೆ ಅತಿಯಾದ ಮೊಬೈಲ್ ಬಳಕೆಯಿಂದ ಪುಸ್ತಕಗಳ ಓದಿನಿಂದ ವಿಮುಖರಾಗುತ್ತಿರುವ ಯುವಜನಾಂಗ. ಇನ್ನೊಂದುಕಡೆ ಗ್ರಂಥಾಲಯಗಳನ್ನು ತಮ್ಮ ಹೊತ್ತುಗಳೆಯುವ ತಾಣಗಳೆಂದು ಭಾವಿಸಿರುವ ವಯೋವೃದ್ಧರು. ಮತ್ತೊಂದುಕಡೆ ಸಂಚಾರಿ ಗ್ರಂಥಾಲಯ ಸೇವೆ ಸ್ಥಗಿತಗೊಂಡು ಧಾರಾವಾಹಿಗಳ ವೀಕ್ಷಕರಾಗಿ ಬದಲಾಗಿರುವ ಮನೆಯ ಗೃಹಿಣಿಯರು. ಈ ಎಲ್ಲರ ನಡುವೆ ಪುಸ್ತಕ ಮಳಿಗೆಗಳೇ ತಮ್ಮ ಓದಿನ ಶಮನಕ್ಕಿರುವ ಏಕೈಕ ಪರ್ಯಾಯಮಾರ್ಗವೆಂದು ಪುಸ್ತಕಗಳನ್ನು ಖರೀದಿಸಿ ಓದುತ್ತಿರುವ ಓದುಗರು. ಹೀಗೆ ಸಾರ್ವಜನಿಕ ಗ್ರಂಥಾಲಯಗಳ ಓದುಗ ವರ್ಗ ವಿಭಿನ್ನ ಕವಲುಗಳಾಗಿ ಒಡೆದುಹೋಗಿದೆ. ಇಂಥ ಸನ್ನಿವೇಶದಲ್ಲಿ ಪುಸ್ತಕಗಳ ಓದಿನ ಸಂಸ್ಕೃತಿಯನ್ನು ಬಿತ್ತಿ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಗ್ರಂಥಾಲಯ ಇಲಾಖೆ ಮಹತ್ವದ ಪಾತ್ರ ನಿರ್ವಹಿಸಬೇಕಿದೆ. ಕೊನೆಗೂ ಇಲಾಖೆ ಉತ್ತರದಾಯಿಯಾಗಿರಬೇಕಾದದ್ದು ತೆರಿಗೆ ಕಟ್ಟುತ್ತಿರುವ ಸಾರ್ವಜನಿಕರಿಗೆ ಎನ್ನುವ ಸತ್ಯ ಅರಿವಾಗಬೇಕು. 

-ರಾಜಕುಮಾರ ಕುಲಕರ್ಣಿ

Thursday, December 22, 2022

ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ವೃತ್ತಿಗೌರವ ಮತ್ತು ಅನುಚಿತ ವರ್ತನೆ' ಕೇಳಿ

ಪ್ರಜಾವಾಣಿ ಪತ್ರಿಕೆಯಲ್ಲಿ ದಿನಾಂಕ ೨೨.೧೨.೨೦೨೨ ರಂದು ಪ್ರಕಟವಾದ ನನ್ನ ಲೇಖನ 'ವೃತ್ತಿಗೌರವ ಮತ್ತು ಅನುಚಿತ ವರ್ತನೆ' ಅದೇ ದಿನ ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ (ಪ್ರಜಾವಾಣಿ ವಾರ್ತೆ) ಬಿತ್ತರವಾಯಿತು. -ರಾಜಕುಮಾರ ಕುಲಕರ್ಣಿ

Tuesday, December 13, 2022

ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಪಯಣ ಪಥದ ಪಥಿಕರಾಗಿ' ಕೇಳಿ

 ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಪಯಣ ಪಥದ ಪಥಿಕರಾಗಿ' 

-ರಾಜಕುಮಾರ ಕುಲಕರ್ಣಿ 



ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಗಾಳಕ್ಕೆ ಸಿಲುಕುವುದು ಬೇಡ' ಕೇಳಿ

 

ಪ್ರಜಾವಾಣಿ ವಾರ್ತೆಯಲ್ಲಿ ನನ್ನ ಲೇಖನ 'ಗಾಳಕ್ಕೆ ಸಿಲುಕುವುದು ಬೇಡ'