Monday, August 10, 2015

ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಗೊಂದಲಗಳು

       






         








                ಕೆಲವು ದಿನಗಳಿಂದ ಶಿಕ್ಷಣ ಕ್ಷೇತ್ರ ಬಹು ಚರ್ಚಿತ ವಿಷಯವಾಗಿ ರೂಪಾಂತರಗೊಂಡಿದೆ. ಅದಕ್ಕೆ ಸಾಕಷ್ಟು ಕಾರಣಗಳಿವೆ. ಹೀಗೆ ಚರ್ಚೆಗೆ ಎತ್ತಿಕೊಂಡ ಬಹುಮುಖ್ಯ ವಿಷಯಗಳಲ್ಲಿ ಹತ್ತನೇ ತರಗತಿಯ ಫಲಿತಾಂಶದಲ್ಲಾದ ಇಳಿಕೆ, ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಮತ್ತು ಫಲಿತಾಂಶದಲ್ಲಾದ ನ್ಯೂನ್ಯತೆ, ಸಿ ಇ ಟಿ ಫಲಿತಾಂಶದಲ್ಲಿನ ಗೊಂದಲಗಳು, ಉನ್ನತ ಶಿಕ್ಷಣದಲ್ಲಿನ ಸಂಶೋಧನಾ ವಿದ್ಯಾರ್ಥಿಗಳ ಗೋಳು, ಉಪಕುಲಪತಿಗಳ ನೇಮಕಾತಿಯಲ್ಲಿನ ವಿಳಂಬ ಹೀಗೆ ನೂರೆಂಟು ಸಮಸ್ಯೆಗಳು ಚರ್ಚೆಗೆ ಗ್ರಾಸವಾಗುತ್ತಿವೆ. ಹೀಗೆ ಮಾಧ್ಯಮಗಳು ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಕುರಿತು ಚರ್ಚಿಸುತ್ತಿರುವ ಹೊತ್ತಿನಲ್ಲೇ ವಿದ್ಯಾರ್ಥಿಗಳು ಮತ್ತು ಪಾಲಕರು ಈ ಎಲ್ಲ ಗೊಂದಲಗಳಿಂದ ಆತಂಕ ಪಡುತ್ತಿರುವರು. ಕೆಲವು ದಿನಗಳ ಹಿಂದೆ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾದ ಸಂದರ್ಭ ನನ್ನ ಪರಿಚಯದ ಹುಡುಗ ತಾನು ನಿರೀಕ್ಷಿಸಿದ ಫಲಿತಾಂಶ ಬರಲಿಲ್ಲವೆನ್ನುವ ಕಾರಣಕ್ಕೆ ತೀರ ಖಿನ್ನತೆಗೆ ಒಳಗಾದ. ಮಗನ ವರ್ತನೆ ಪಾಲಕರಿಗೆ ಚಿಂತೆಯನ್ನುಂಟು ಮಾಡಿತು. ದುಬಾರಿ ಫೀಜು ಕೊಟ್ಟು ಖಾಸಗಿ ಶಾಲೆಯಲ್ಲಿ ಪ್ರವೇಶ ದೊರಕಿಸಿ ಕೊಡುವಷ್ಟು ಅವರು ಆರ್ಥಿಕವಾಗಿ ಸ್ಥಿತಿವಂತರಲ್ಲದ ಕಾರಣ ತಮ್ಮ ಮಗನನ್ನು ಸರ್ಕಾರಿ ಶಾಲೆಗೇ ಸೇರಿಸಿದ್ದರು. ಓದಿನಲ್ಲಿ ಜಾಣನಾದ ಹುಡುಗ ಸರ್ಕಾರಿ ಶಾಲೆಯಾದರೂ ಪ್ರತಿವರ್ಷ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದ. ಆದರೆ ಆತ ಹತ್ತನೇ ತರಗತಿಗೆ ಪ್ರವೇಶ ಪಡೆಯುವ ವೇಳೆಗೆ ಅಲ್ಲಿದ್ದ ಕೆಲವು ಶಿಕ್ಷಕರನ್ನು ಹಠಾತ್ತನೆ ವರ್ಗಾವಣೆ ಮಾಡಿದ್ದು ವಿದ್ಯಾರ್ಥಿಗಳ ಓದಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಹೊಸ ಶಿಕ್ಷಕರು ಬರುವಲ್ಲಿನ ವಿಳಂಬ, ತರಗತಿಗಳನ್ನು ನಡೆಸುವಲ್ಲಿ ಆದ ಅವ್ಯವಸ್ಥೆ ಇತ್ಯಾದಿ ಕಾರಣಗಳಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ವಾರ್ಷಿಕ ಪ್ರಶ್ನೆ ಪತ್ರಿಕೆಗಳಿಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗದೆ ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾದರು. ಕೆಲವು ಸರ್ಕಾರಿ ಶಾಲೆಗಳಲ್ಲಿ ಪರೀಕ್ಷಾ ಫಲಿತಾಂಶದ ಶೇಕಡಾವಾರು ಪ್ರಮಾಣ ತೀರ ಕುಸಿಯಿತು. ಈಗಾಲೇ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ತಮ್ಮ ಭವಿಷ್ಯದ ಬಗ್ಗೆ ಆತಂಕವಾಗಬಹುದು. ಪರಿಣಾಮವಾಗಿ ಕೆಲವು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಕರೆದೊಯ್ಯುವ ಸಾಧ್ಯತೆ ಹೆಚ್ಚುತ್ತದೆ. ಇನ್ನು ಆರ್ಥಿಕವಾಗಿ ಸ್ಥಿತಿವಂತರಲ್ಲದ ಪಾಲಕರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸುವ ಅನಿವಾರ್ಯತೆ ಎದುರಾಗುತ್ತದೆ. ಇಂಥದ್ದೊಂದು ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರದ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಕಡಿಮೆ ಫಲಿತಾಂಶ ಹೊಂದಿದ ಶಾಲೆಗಳಿಗೆ ಫಲಿತಾಂಶ ಸುಧಾರಣೆಗೆ ನೋಟಿಸ್ ಜಾರಿ ಮಾಡುತ್ತದೆ. ಜೊತೆಗೆ ಫಲಿತಾಂಶದಲ್ಲಿ ಸುಧಾರಣೆ ಆಗದೆ ಇದ್ದಲ್ಲಿ ಅಂಥ ಶಾಲೆಗಳನ್ನು ಮುಚ್ಚುವ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುತ್ತದೆ. ಹೀಗೊಂದು ವೇಳೆ ಶಾಲೆಯನ್ನು ಮುಚ್ಚುವುದಾದರೆ ಅಲ್ಲಿ ಈಗಾಗಲೇ ಓದುತ್ತಿರುವ ಮಕ್ಕಳ ಶಿಕ್ಷಣದ ಗತಿ ಏನು ? ಅವರು ಯಾವ ಶಾಲೆಯಲ್ಲಿ ಪ್ರವೇಶ ಪಡೆಯಬೇಕು ? ಈ ಪ್ರಶ್ನೆಗಳಿಗೆ ಶಿಕ್ಷಣ ಇಲಾಖೆ ಉತ್ತರಿಸಬೇಕು.

                 ಇನ್ನು ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತದರ ಫಲಿತಾಂಶದಲ್ಲಿ ಅನೇಕ ಗೊಂದಲಗಳು ಕಾಣಿಸಿಕೊಂಡವು. ಹೀಗೆ ೨೦೧೫ ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ಅನೇಕ ಗೊಜಲುಗಳು ನಮ್ಮ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡಿದವು. ಪ್ರಶ್ನೆ ಪತ್ರಿಕೆಯಲ್ಲಿನ ಕೆಲವು ತಪ್ಪುಗಳಿಂದಾಗಿ ಪ್ರಶ್ನೆ ಪತ್ರಿಕೆಗಳನ್ನು ತಯಾರು ಮಾಡುವ ಉಪನ್ಯಾಸಕರ ವಿದ್ಯಾರ್ಹತೆಯನ್ನೇ ಪ್ರಶ್ನಿಸುವಂತಾಯಿತು. ಜೊತೆಗೆ ಹೀಗೆ ತಪ್ಪುಗಳಿಂದ ಕೂಡಿದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಮಂಡಳಿಯು ಆಯ್ಕೆ ಮಾಡಿದ್ದು ಕೂಡ ಪರೀಕ್ಷಾ ಮಂಡಳಿಯ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಪಾಲಕರು ಹಾಗೂ ವಿದ್ಯಾರ್ಥಿಗಳು ಸಂಶಯದಿಂದ ನೋಡುವಂತಾಯಿತು. ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳು ಮಂಡಳಿಯು ನಿರ್ಧಿಷ್ಟ ಪಡಿಸಿರುವ ಪಠ್ಯಕ್ರಮಕ್ಕೆ ಸೀಮಿತವಾಗಿರಬೇಕು. ಪಠ್ಯಕ್ರಮದ ವ್ಯಾಪ್ತಿಯನ್ನು ಮೀರಿದ ಪ್ರಶ್ನೆಗಳು ಎದುರಾದಾಗ ವರ್ಷಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಸಹಜವಾಗಿಯೇ ಆತಂಕಕ್ಕೆ ಒಳಗಾಗುವರು. ಹೀಗೆ ಪರೀಕ್ಷೆಯ ಒಂದು ಹಂತದಲ್ಲಿ ಎದುರಾಗುವ ಸಮಸ್ಯೆ ಮತ್ತು ಆತಂಕ ಅದು ವಿದ್ಯಾರ್ಥಿಗಳ ಮಾನಸಿಕ ಧೃಡತೆಯನ್ನು ಕುಗ್ಗಿಸಿ ಮುಂದಿನ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ಅವರಿಗೆ ಸಾಧ್ಯವಾಗದೇ ಹೋಗಬಹುದು. ನಿಜಕ್ಕೂ ಸರ್ಕಾರದ ಶಿಕ್ಷಣ ಇಲಾಖೆ ಇಲ್ಲಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ. ಪರೀಕ್ಷಾ ವೇಳೆಯಲ್ಲಿ ಕಾಣಿಸಿಕೊಂಡ ಗೊಂದಲ ಫಲಿತಾಂಶದ ಸಂದರ್ಭದಲ್ಲೂ ಕಾಣಿಸಿಕೊಂಡಿದ್ದು ವಿಪರ್ಯಾಸದ ಸಂಗತಿ. ಪದವಿಪೂರ್ವ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಣೆಗೆ ಹೊರಗುತ್ತಿಗೆ ನೀಡಿದ್ದರಿಂದ ಫಲಿತಾಂಶವನ್ನು ಅನೇಕ ವೆಬ್ ತಾಣಗಳು ಪ್ರಕಟಿಸಿದವು. ಆದರೆ ಸಮಸ್ಯೆ ಎದುರಾದದ್ದು ಒಂದು ವೆಬ್ ತಾಣದಲ್ಲಿ ಉತ್ತೀರ್ಣನಾದ ವಿದ್ಯಾರ್ಥಿ ಇನ್ನೊಂದು ವೆಬ್ ತಾಣದಲ್ಲಿ ಅನುತ್ತೀರ್ಣನಾಗಿದ್ದ. ಈ ಖಾಸಗಿ ವೆಬ್ ತಾಣಗಳಲ್ಲಿ ಫಲಿತಾಂಶವನ್ನು ಸರಿಯಾಗಿ ಹೊಂದಿಸದೆ ಇದ್ದುದ್ದರಿಂದ ಇಂಥ ಅಚಾತುರ್ಯ ಸಂಭವಿಸಿತು. ಈ ಅಚಾತುರ್ಯದಿಂದಾಗಿ ಉತ್ತೀರ್ಣರಾದ ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದೆವೆನ್ನುವ ಅಪಮಾನದಿಂದ ಆತ್ಮಹತ್ಯೆಗೆ ಯತ್ನಿಸಿದರು. ಫಲಿತಾಂಶ ವಿದ್ಯಾರ್ಥಿಗಳಿಗೆ ಬೇಗ ತಲುಪಲಿ ಎನ್ನುವ ಕಾರಣಕ್ಕೆ ಪದವಿ ಪೂರ್ವ ಶಿಕ್ಷಣ ಮಂಡಳಿಯು ಅನೇಕ ಖಾಸಗಿ ವೆಬ್ ತಾಣಗಳಿಗೆ ಫಲಿತಾಂಶವನ್ನು ಪ್ರಕಟಿಸುವ ಕೆಲಸ ನೀಡಿದ್ದು ಸ್ವಾಗತಾರ್ಹ ನಡೆ. ಆದರೆ ಯಾವ ಪೂರ್ವಭಾವಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸದೆ ಏಕಾಏಕಿ ಹೀಗೆ ನಿರ್ಧಾರ ತೆಗೆದುಕೊಂಡಿದ್ದು ಅನೇಕ ವಿದ್ಯಾರ್ಥಿಗಳ ಬದುಕಿಗೆ ಕಂಟಕವಾಯಿತು. ಮಂಡಳಿಯು ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳುವ ಪೂರ್ವದಲ್ಲಿ ಅದರ ಸಾಧಕ ಬಾಧಕಗಳನ್ನು ಕುರಿತು ಯೋಚಿಸಬೇಕಿತ್ತು. ಆದರೆ ನಿರ್ಧಾರ ತೆಗೆದುಕೊಳ್ಳುವವರು ಅಸಮರ್ಥರೂ  ಮತ್ತು ಅದಕ್ಷರೂ ಆದಾಗ ಇಂಥ ಸಮಸ್ಯೆಗಳು ಎದುರಾಗುತ್ತವೆ. ಇದೆ ಸಂದರ್ಭ ಪ್ರಶ್ನೆ ಪತ್ರಿಕೆಯಲ್ಲಿ ನುಸುಳಿದ ತಪ್ಪುಗಳನ್ನು ಕುರಿತು ಮಂಡಳಿಯು ಯಾವ ನಿರ್ಧಾರ ತೆಗೆದುಕೊಂಡಿತು ಎನ್ನುವ ಪ್ರಶ್ನೆ ಎದುರಾಗುತ್ತದೆ. ಹೀಗೆ ತನ್ನಿಂದಾದ ತಪ್ಪುಗಳನ್ನು ಸರಿಪಡಿಸಲು ಮಂಡಳಿಯು ವಿದ್ಯಾರ್ಥಿಗಳಿಗೆ ಆದ ತಪ್ಪುಗಳ ಸಂಖ್ಯೆಯನ್ನಾಧರಿಸಿ ಹೆಚ್ಚುವರಿ ಅಂಕಗಳನ್ನು (ಗ್ರೇಸ್) ಕೊಡಲು ನಿರ್ಧರಿಸಿತು. ಇಲ್ಲಿ ಮತ್ತೆ ಮಂಡಳಿ ವಿದ್ಯಾರ್ಥಿಗಳ ಮತ್ತು ಪಾಲಕರ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಏಕೆಂದರೆ ಯಾವ ವಿದ್ಯಾರ್ಥಿ ಪಠ್ಯಕ್ರಮಕ್ಕೆ ಸೇರದೆ ಇದ್ದ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಿದ್ದಲ್ಲಿ ಅಂಥ ವಿದ್ಯಾರ್ಥಿಗಳಿಗೆ ಮಾತ್ರ ಹೆಚ್ಚುವರಿ ಅಂಕಗಳನ್ನು ನೀಡಲಾಯಿತು. ಯಾವ ವಿದ್ಯಾರ್ಥಿ ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸದೆ ಕೈ ಬಿಟ್ಟಲ್ಲಿ ಅಂಥವರು ಈ ಹೆಚ್ಚುವರಿ ಅಂಕಗಳನ್ನು ಪಡೆಯುವ ಸೌಲಭ್ಯದಿಂದ ವಂಚಿತರಾಗಬೇಕಾಯಿತು. ತಪ್ಪು ಪ್ರಶ್ನೆಗಳನ್ನು (ಪಠ್ಯಕ್ರಮಕ್ಕೆ ಸೇರದ) ಆಯ್ಕೆ ಮಾಡಿದ್ದೆ ಮಂಡಳಿಯ ಹಾಸ್ಯಾಸ್ಪದ ನಡೆಯಾಗಿರುವಾಗ ಹೆಚ್ಚುವರಿ ಅಂಕಗಳ ಫಲಾನುಭವಿಗಳನ್ನು ನಿರ್ಧರಿಸಲು ಉಪಯೋಗಿಸಿದ ಮಾನದಂಡ ಮಂಡಳಿಯ ಅಧಿಕಾರಿಗಳ ಅನರ್ಹತೆಗೆ ಕನ್ನಡಿ ಹಿಡಿಯಿತು. ಈ ವಿಷಯವಾಗಿ ಮಂಡಳಿಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲು ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರಯತ್ನಿಸಿದಾಗ ಅಧಿಕಾರಿಗಳ ಭೇಟಿ ಲಭ್ಯವಾಗದೆ ಅನಿವಾರ್ಯವಾಗಿ ಪ್ರತಿಭಟನೆಗಿಳಿಯಬೇಕಾಯಿತು. ಉನ್ನತ ಅಧಿಕಾರಿಗಳು ಪ್ರತಿಭಟನೆ ಕಾಣಿಸಿಕೊಂಡ ಎರಡು ದಿನಗಳ ನಂತರ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಭೇಟಿಯಾದದ್ದು ಹಾಗೂ ಶಿಕ್ಷಣ ಸಚಿವರು ಪತ್ರಿಕಾಗೊಷ್ಠಿಯನ್ನು ವಿಳಂಬವಾಗಿ ಕರೆದ ಆ ನಡೆಯನ್ನು ಗಮನಿಸಿದಾಗ ಸರ್ಕಾರ ಮಕ್ಕಳ ಶಿಕ್ಷಣದಂಥ ಗಂಭೀರ ವಿಷಯವನ್ನು ಎಷ್ಟು ಲಘುವಾಗಿ ಪರಿಗಣಿಸಿದೆ ಎಂದು ಗೊತ್ತಾಗುತ್ತದೆ. ಈ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಅದರ ಫಲಿತಾಂಶದಲ್ಲಿ ಕಾಣಿಸಿಕೊಂಡ ಸಮಸ್ಯೆಗಳಿಂದಾಗಿ ಸಿ ಇ ಟಿ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಕೆಲವು ದಿನಗಳವರೆಗೆ ಮುಂದೂಡಬೇಕಾದ ಅನಿವಾರ್ಯತೆ ಎದುರಾಯಿತು. ತಾವು ಬರೆದ ಪ್ರವೇಶ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಂಡಳಿಯ ಈ ನಿರ್ಧಾರದಿಂದ ಮತ್ತಷ್ಟು ಆಘಾತವಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಣಿಸಿಕೊಂಡ ತಪ್ಪುಗಳಂತೆ ಸಿ ಇ ಟಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲೂ ಕೆಲವೊಂದು ತಪ್ಪುಗಳು ನುಸುಳಿದವು. ಇದು ನಮ್ಮ ಮಕ್ಕಳಿಗೆ ಪಾಠ ಮಾಡುವ ಉಪನ್ಯಾಸಕರ ಯೋಗ್ಯತೆ ಮತ್ತು ಅರ್ಹತೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು. ಆದ ತಪ್ಪನ್ನು ಮುಚ್ಚಿಕೊಳ್ಳಲು ಸರ್ಕಾರ ಮತ್ತದರ ಭಾಗವಾದ ಶಿಕ್ಷಣ ಮಂಡಳಿ ಜೊತೆಗೂಡಿ ಮತ್ತೆ ಹೆಚ್ಚುವರಿ ಅಂಕಗಳ ಮೊರೆ ಹೋದವು. ಅತಿ ಕಡಿಮೆ ಅಂಕಗಳ ಅಂತರದಲ್ಲಿ ಸಿ ಇ ಟಿ ಪ್ರವೇಶ ಪರೀಕ್ಷೆಯ Rank ನಿರ್ಧಾರವಾಗುವುದರಿಂದ ಮಂಡಳಿಯ ಹೆಚ್ಚುವರಿ ಅಂಕಗಳನ್ನು ನೀಡುವ ನಡೆ ಮೆರಿಟ್ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಒಟ್ಟಿನಲ್ಲಿ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಶಿಕ್ಷಣ ಮಂಡಳಿಯು ಮಾಡಿದ ತಪ್ಪುಗಳಿಂದಾಗಿ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕ ಹಾಗೂ ಒತ್ತಡದಲ್ಲಿ ಅನೇಕ ದಿನಗಳನ್ನು ಕಳೆಯಬೇಕಾಯಿತು.

                 ಶಿಕ್ಷಣದ ವಿಷಯವಾಗಿ ಇನ್ನೊಂದು ಬಹು ಚರ್ಚಿತ ಸಂಗತಿ ಎಂದರೆ ಅದು ಏಕರೂಪ ಪಠ್ಯಕ್ರಮಕ್ಕೆ ಸಂಬಂಧಿಸಿದ್ದು. ಕೇಂದ್ರ ಸರ್ಕಾರ ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತರುವ ಪ್ರಯತ್ನ ಮಾಡಿದಾಗ ಆಗ ಎಲ್ಲ ರಾಜ್ಯಗಳಲ್ಲಿ ಏಕರೂಪ ಪಠ್ಯಕ್ರಮದ ಮೂಲಕ ಬೋಧಿಸುವ ಸಿದ್ಧತೆ ಪ್ರಾರಂಭವಾಯಿತು. ಪರಿಣಾಮವಾಗಿ ಪಠ್ಯ ಪುಸ್ತಕಗಳಲ್ಲಿ ಪ್ರಾದೇಶಿಕತೆ ಮಾಯವಾಗಿ ಮಕ್ಕಳ ಮೇಲೆ ರಾಷ್ಟ್ರೀಯ ಸಂಗತಿಗಳನ್ನು ಬಲವಂತವಾಗಿ ಹೇರಿದಂತಾಗುತ್ತದೆ. ತನ್ನ ಪರಿಸರದಲ್ಲಿನ ಪರಿಚಿತ ಸಂಗತಿಗಳನ್ನು ಓದುತ್ತಿದ್ದ ಮಗು ತನ್ನದಲ್ಲದ ಅಪರಿಚಿತ ವಿಷಯಗಳನ್ನು ಅಭ್ಯಾಸ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಇದು ಭಾಷಾ ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ ಗಣಿತ ಮತ್ತು ವಿಜ್ಞಾನದ ವಿಷಯಗಳು ಅತ್ಯಂತ ಜಟಿಲವಾಗಿವೆ. ಏನೆಲ್ಲ ಸಮಸ್ಯೆಗಳ ನಡುವೆಯೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕೇಂದ್ರೀಯ ಪಠ್ಯಕ್ರಮವನ್ನು ಪರಿಚಯಿಸುವ ಯೋಜನೆಗೆ ಚಾಲನೆ ದೊರೆತಿದೆ. ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಪ್ರಾದೇಶಿಕ ಅಸಮಾನತೆ ಇಲ್ಲದೆ ಎಲ್ಲ ಮಕ್ಕಳೂ ಜೊತೆಯಾಗಿ ಸ್ಪರ್ಧಿಸಲಿ ಎನ್ನುವ ಸರ್ಕಾರದ ಕ್ರಮವೇನೋ ಸ್ವಾಗತಾರ್ಹ. ಆದರೆ ಹೀಗೆ ಮಾಡುವಾಗ ಇಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪ್ರಶ್ನೆ ಎದುರಾಗುತ್ತದೆ. ಏಕರೂಪ ಪಠ್ಯಕ್ರಮದ ವ್ಯಾಪ್ತಿಗೆ ಕನ್ನಡ ಮಾಧ್ಯಮದ ಪಠ್ಯಕ್ರಮವನ್ನು ಸೇರಿಸುವುದಾದರೂ ಹೇಗೆ. ಪಿಯುಸಿ ಹಂತದಲ್ಲಿ ಗಣಿತ ಮತ್ತು ವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಕಲಿಯಲು ಅನುಕೂಲ ಮತ್ತು ಅವಕಾಶವಿಲ್ಲದಂತ ಹೊತ್ತಿನಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ಕೇಂದ್ರೀಯ ಪಠ್ಯಕ್ರಮಕ್ಕನುಗುಣವಾಗಿ ಅಣಿಗೊಳಿಸಲು ಸಾಧ್ಯವೇ? ಸಾಧ್ಯವಿಲ್ಲ ಎನ್ನುವುದಾದರೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಇಂಗ್ಲಿಷ್ ಮಾಧ್ಯಮದ ಏಕರೂಪ ಪಠ್ಯಕ್ರಮವನ್ನು ಅಭ್ಯಸಿಸುತ್ತಿರುವ ಮಕ್ಕಳ ಪ್ರಬಲ ಸ್ಪರ್ಧೆಯ ಎದುರು ಅವರುಗಳೆಂದು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಬೇಕು? ಅಂಥದ್ದೊಂದು ಸಾಧ್ಯತೆ ಅಸಾಧ್ಯವಾಗಿರುವುದರಿಂದ ಕನ್ನಡ ಭಾಷೆಯಲ್ಲಿ ಓದುತ್ತಿರುವ ಬಡ ಮಕ್ಕಳು ಹೋಟೆಲ್ಲುಗಳಲ್ಲೋ, ಕಿರಾಣಿ ಅಂಗಡಿಗಳಲ್ಲೋ ಕೆಲಸ ಮಾಡುತ್ತ ತಮ್ಮ ಬದುಕು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗುತ್ತದೆ.

               ಶಿಕ್ಷಣದ ವಿಷಯವಾಗಿ ಯಾವುದೇ ಕಾಯ್ದೆ ಕಾನೂನು ರೂಪಿಸುವುದಕ್ಕಿಂತ ಮೊದಲು ಸರ್ಕಾರ ಅದರ ಸಾಧಕ ಬಾಧಕಗಳನ್ನು ಕುರಿತು ವಿವೇಚಿಸುವುದೊಳಿತು. ಸ್ಥಿತಿವಂತರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳುಹಿಸಿದರೆ ಬಡ ಮಕ್ಕಳಿಗಾಗಿ ಸರ್ಕಾರದ ಕನ್ನಡ ಶಾಲೆಗಳಿವೆ ಎನ್ನುವ ವಿತಂಡವಾದ ಸರಿಯಲ್ಲ. ಶಿಕ್ಷಣದ ಮಾಧ್ಯಮವನ್ನು ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಅದನ್ನು ಆಸಕ್ತಿಗನುಗುಣವಾಗಿ ಆಯ್ಕೆ ಮಾಡಿಕೊಳ್ಳುವಂತ ವಾತಾವರಣ ನಿರ್ಮಾಣವಾಗಬೇಕು. ಬಡವರ ಮತ್ತು ಶ್ರೀಮಂತರ ಮಕ್ಕಳು ಕೂಡಿಯೇ ಕನ್ನಡ ಶಾಲೆಗಳಲ್ಲೂ ಮತ್ತು ಇಂಗ್ಲಿಷ್ ಶಾಲೆಗಳಲ್ಲೂ ಕಲಿಯುವಂತಹ ದಿನಗಳು ಬರಬೇಕು.

                 ಇದೇ ಸಂದರ್ಭ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಗೊಜಲುಗಳು ನಮ್ಮ ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿವೆ. ಕೆಲವು ದಿನಗಳ ಹಿಂದೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಾವು ಕೇಳಿದಷ್ಟು ಹಣ ನೀಡಿದಲ್ಲಿ ಸಂಶೋಧನೆಗೆ ಸಹಕರಿಸುವುದಾಗಿ ತಮ್ಮ ಸಂಶೋಧನಾ ವಿದ್ಯಾರ್ಥಿಗಳಿಗೆ ಬೆದರಿಸಿದ ಪ್ರಸಂಗ ಮಾಧ್ಯಮಗಳಲ್ಲಿ ವರದಿಯಾಯಿತು. ನಿಜಕ್ಕೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಈ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುದೊಡ್ಡ ಸಮಸ್ಯೆ ಇದು. ಜೊತೆಗೆ ಸಂಶೋಧನೆಯಲ್ಲಿ ಮಾರ್ಗದರ್ಶನ ಮಾಡುತ್ತಿರುವ ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿರುವ ಸತ್ಯ. ಈಗಾಗಲೇ ಈ ವಿಷಯವಾಗಿ ವಿಶ್ವವಿದ್ಯಾಲಯಗಳಲ್ಲಿನ ಅನೇಕ ಪ್ರಾಧ್ಯಾಪಕರ ಮೇಲೆ ದೂರುಗಳನ್ನು ದಾಖಲಿಸಲಾಗಿದೆ. ಆದರೂ ಸರ್ಕಾರ ಈ ವಿಷಯವಾಗಿ ಯಾವ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡ ಉದಾಹರಣೆಗಳಿಲ್ಲ. ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರಿಗೆ ಸಂಶೋಧನಾ ಮಾರ್ಗದರ್ಶನವೆನ್ನುವುದು ಹಣ ಮಾಡುವ ದಂಧೆಯಾದಾಗ ಆಗ ಸಹಜವಾಗಿಯೇ ಸಂಶೋಧನಾ ಶಿಕ್ಷಣದಲ್ಲಿನ ಗುಣಮಟ್ಟ ಕುಸಿಯುತ್ತದೆ.

                  ಕೆಲವು ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಕರ್ನಾಟಕದ ಆರು ಜಿಲ್ಲೆಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಸೌಲಭ್ಯವನ್ನು ಒದಗಿಸಿದೆ. ಶಿಕ್ಷಣದ ವಿಷಯವಾಗಿ ಈ ಆರು ಜಿಲ್ಲೆಗಳಲ್ಲಿನ ಒಟ್ಟು ಕೋರ್ಸುಗಳಲ್ಲಿನ ಶೇಕಡಾ ೭೫ ರಷ್ಟು ಸೀಟುಗಳನ್ನು ಹೈದರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಮೀಸಲಿಡಲಾಗಿದೆ. ಹೈದರಾಬಾದ ಕರ್ನಾಟಕದ ವ್ಯಾಪ್ತಿಯಲ್ಲಿನ ಆರು ಜಿಲ್ಲೆಗಳು ಮಾತ್ರವಲ್ಲದೆ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿನ ಕಾಲೇಜುಗಳಲ್ಲಿಯೂ ಶೇಕಡಾ ೮ ರಷ್ಟು ಮೀಸಲಾತಿ ಸೌಲಭ್ಯ ಆ ಆರು ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗೆ ದೊರೆಯಲಿದೆ. ವಿಶೇಷವಾಗಿ ಈ ಒಂದು ವ್ಯವಸ್ಥೆ ವೈದ್ಯಕೀಯ ಕೋರ್ಸಿನಲ್ಲಿ ಪ್ರವೇಶ ಪಡೆಯಲಿಚ್ಚಿಸುವ ರಾಜ್ಯದ ಉಳಿದ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ಸೀಮಿತವಾಗಿದ್ದು ಜೊತೆಗೆ ಪ್ರತಿ ಕಾಲೇಜಿನಲ್ಲಿ ಮೆರಿಟ್ ಆಧಾರಿತ ಸೀಟುಗಳ ಸಂಖ್ಯೆ ಪ್ರತಿಶತ ೪೦ ರಷ್ಟು ಮಾತ್ರವಿರುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇಂಥದ್ದೊಂದು ಮೀಸಲಾತಿ ಸೌಲಭ್ಯ ರಾಜ್ಯದ ಬೇರೆ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡಿದೆ. ಈ ಸಮಸ್ಯೆಯನ್ನು ನಾನು ಉದಾಹರಣೆಯೊಂದಿಗೆ ಹೀಗೆ ವಿವರಿಸುತ್ತೇನೆ, ವಿಜಯಪುರದ ಮೋಹನ ಮತ್ತು ಕಲಬುರಗಿಯ ಶ್ರೀನಿವಾಸ ಇವರಿಬ್ಬರೂ ಪಿಯುಸಿ ವಿಜ್ಞಾನದ ವಿದ್ಯಾರ್ಥಿಗಳಾಗಿದ್ದು ಈ ವರ್ಷದ ಸಿ ಇ ಟಿ ಪ್ರವೇಶ ಪರೀಕ್ಷೆಯಲ್ಲಿ ಅನುಕ್ರಮವಾಗಿ ೧೯೧೦ ಮತ್ತು ೫೬೦೦ Rank ನೊಂದಿಗೆ ತೇರ್ಗಡೆಯಾಗಿರುವರು. ವಿಜಯಪುರದ ಮೋಹನ ೧೯೧೦ Rank ನೊಂದಿಗೆ ತೇರ್ಗಡೆಯಾಗಿದ್ದರೂ ಅವನು ವೈದ್ಯಕೀಯ ಕಾಲೇಜಿನಲ್ಲಿ ತನ್ನ ಫಲಿತಾಂಶದಡಿ ಪ್ರವೇಶ ಪಡೆಯಲು ವಿಫಲನಾದ. ಆದರೆ ೫೬೦೦ Rank ನೊಂದಿಗೆ ತೇರ್ಗಡೆಯಾದ ಕಲಬುರಗಿಯ ಶ್ರೀನಿವಾಸ ಹೈದರಾಬಾದ ಕರ್ನಾಟಕದ ಮೀಸಲಾತಿಯಡಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದ. ಅಚ್ಚರಿಯ ಸಂಗತಿ ಎಂದರೆ ಶ್ರೀನಿವಾಸ ಓದಿದ್ದು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ. ಹೀಗಿದ್ದೂ ಅವನ ಪಾಲಕರು ಕಲಬುರಗಿ ಜಿಲ್ಲೆಯ ನಿವಾಸಿಗಳೆಂಬ ಕಾರಣಕ್ಕೆ ಅವನಿಗೆ ಪ್ರವೇಶ ದೊರೆಯುವಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ. ವಿಜಯಪುರ ಜಿಲ್ಲೆ ಸಹ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು ಆದರೆ ಮೋಹನನಿಗೆ ಅಂಥ ಯಾವ ಮೀಸಲಾತಿ ಸೌಲಭ್ಯ ದೊರೆಯದೆ ಇರುವುದರಿಂದ ಸಹಜವಾಗಿಯೇ ಆತ ವೈದ್ಯಕೀಯ ಕೋರ್ಸಿನ ಪ್ರವೇಶದಿಂದ ವಂಚಿತನಾದ. ಇದು ಒಬ್ಬ ಮೋಹನನ ಕಥೆಯಲ್ಲ. ಇಂಥ ಸಾವಿರಾರು ವಿದ್ಯಾರ್ಥಿಗಳು ಸರ್ಕಾರ ಕೊಡಮಾಡುತ್ತಿರುವ ಮೀಸಲಾತಿ ಸೌಲಭ್ಯಗಳಿಂದ ಸಮಸ್ಯೆಗಳನ್ನೆದುರಿಸುತ್ತಿರುವರು. ಹೀಗೆ ಹೈದರಾಬಾದ ಕರ್ನಾಟಕಕ್ಕೆ ಸೇರಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕೊಡುವಾಗ ಅವರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಆರ್ಥಿಕವಾಗಿ ದುರ್ಬಲರಾದವರಿಗೆ ಸೌಲಭ್ಯ ನೀಡಿದ್ದಲ್ಲಿ ಇಂಥದ್ದೊಂದು ಪ್ರಯತ್ನವನ್ನು ಎಲ್ಲರೂ ಸ್ವಾಗತಿಸುತ್ತಿದ್ದರು. ಆದರೆ ಸೌಲಭ್ಯಗಳು ತಮ್ಮ ಮೌಲ್ಯಗಳನ್ನು ಕಳೆದುಕೊಂಡಾಗ ಸಹಜವಾಗಿಯೇ ವಂಚಿತರಾದ ವಿದ್ಯಾರ್ಥಿಗಳು ಅಂಥ ಸೌಲಭ್ಯಗಳನ್ನು ವಿರೋಧಿಸುತ್ತಾರೆ.

ಕೊನೆಯ ಮಾತು 


                 ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ವೇಳೆ ನನ್ನನ್ನು ತೀರ ಕಾಡಿದ ಸಂಗತಿ ಎಂದರೆ ಪರೀಕ್ಷಾ ಫಲಿತಾಂಶಕ್ಕಿಂತ ಮೊದಲು ಸಾವನ್ನಪ್ಪಿದ ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದ ತುಮಕೂರು ಮೂಲದ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದದ್ದು. ಬದುಕಿದ್ದರೆ ವೃತ್ತಿಪರ ಕೋರ್ಸಿಗೆ ಇಲ್ಲವೇ ತನ್ನ ಇಷ್ಟದ ಕೋರ್ಸಿಗೆ ಪ್ರವೇಶ ಪಡೆದು ತನ್ನ ಬದುಕು ಮತ್ತು ಭವಿಷ್ಯವನ್ನು ಆಕೆ ಉತ್ತಮವಾಗಿ ರೂಪಿಸಿಕೊಳ್ಳುತ್ತಿದ್ದಳು. ಆದರೆ ಕ್ರೂರ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಈ ಘಟನೆಯ ನಂತರ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಮತ್ತು ಕಾಲೇಜುಗಳ ವಸತಿ ನಿಲಯದಲ್ಲಿಡಲು ಯೋಚಿಸುವಂತಾಗಿದೆ. ಒಂದೆಡೆ ಶಿಕ್ಷಣದ ಕುರಿತಾದ ಸರ್ಕಾರದ ಬದಲಾಗುತ್ತಿರುವ ನೀತಿ ನಿಯಮಗಳು. ಇನ್ನೊಂದೆಡೆ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ಒಟ್ಟಾರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಗೊಜಲು ಮತ್ತು ಗೊಂದಲಗಳು ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಚಿಂತೆಗೀಡುಮಾಡುತ್ತಿವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


   

Tuesday, July 28, 2015

ನಮ್ಮ ಮೇಷ್ಟ್ರು ಕಲಾಂ







             ನಿನ್ನೆ ಡಾ. ಅಬ್ದುಲ್ ಕಲಾಂ ನಿಧನರಾದರು. ದೇಶಕ್ಕೆ ತುಂಬಲಾರದ ನಷ್ಟವಿದು. ಕಲಾಂ ಅವರು ಬದುಕಿದ್ದರೆ ಇನ್ನು ಅದೆಷ್ಟೋ ಯುವಕರ ಕನಸುಗಳಿಗೆ ನೀರೆರೆಯುತ್ತಿದ್ದರು. ನಾವುಗಳೆಲ್ಲ ಕನಸಿಸುವಂತೆ ಮತ್ತು ಕಂಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸುವಂತೆ ಸದಾ ಕಾಲ ಪ್ರೇರಣೆಯಾಗಿದ್ದ ಹಾಗೂ ಸ್ಪೂರ್ತಿ ನೀಡುತ್ತಿದ್ದ ವ್ಯಕ್ತಿತ್ವ ಅವರದು. ಅಬ್ದುಲ್ ಕಲಾಂ ಭಾರತದ ರಾಷ್ಟ್ರಪತಿಯಾದ ಘಳಿಗೆ ರಾಜಕಾರಣಿಯಲ್ಲದ ವ್ಯಕ್ತಿ ಅದುಹೇಗೆ ಅಂಥದ್ದೊಂದು ಹುದ್ದೆಯನ್ನು ನಿಭಾಯಿಸ ಬಲ್ಲರು ಎನ್ನುವುದು ಅನೇಕರ ಆತಂಕವಾಗಿತ್ತು. ಒಂದರ್ಥದಲ್ಲಿ ಈ ಹುದ್ದೆ ಮತ್ತು ಅದನ್ನು ನಿರ್ವಹಿಸಿದ ಹಿಂದಿನವರ ನಿಷ್ಕ್ರಿಯತೆ ಕಲಾಂ ಅವರನ್ನು ಕೂಡ ನಿಷ್ಕ್ರಿಯಗೊಳಿಸಬಹುದೆನ್ನುವ ಆತಂಕ ಎಲ್ಲರದಾಗಿತ್ತು. ಆದರೆ ಅಬ್ದುಲ್ ಕಲಾಂ ತಮ್ಮ ಕಾರ್ಯನಿರ್ವಹಣೆ, ಘನ ವ್ಯಕ್ತಿತ್ವ, ಸರಳ ಜೀವನ, ಪ್ರಾಮಾಣಿಕತೆ, ಹೃದಯವಂತಿಕೆ, ವಿಶಾಲ ಮನೋಭಾವ, ರಾಷ್ಟ್ರ ಪ್ರೇಮ ಈ ಎಲ್ಲ ಗುಣಗಳಿಂದ ರಾಷ್ಟ್ರಪತಿ ಹುದ್ದೆಗೊಂದು ಘನತೆ ಮತ್ತು ಗೌರವ ತಂದುಕೊಟ್ಟರು. ಅವರು ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಜನಸಾಮಾನ್ಯರ ರಾಷ್ಟ್ರಪತಿ ಎನ್ನುವ ಮನ್ನೆಣೆಗೆ ಪಾತ್ರರಾದರು. ರಾಷ್ಟ್ರಪತಿ ಭವನ  ಅದೊಂದು ರಾಜಕಾರಣಿಗಳ ಬದುಕಿನ ಕೊನೆಯ ದಿನಗಳ ವಿಶ್ರಾಂತಿ ತಾಣ ಎನ್ನುವ ಕಲ್ಪನೆಯನ್ನು ದೂರವಾಗಿಸಿದರು. ಜನಸಾಮಾನ್ಯರ ಸಮಸ್ಯೆಗಳು ರಾಷ್ಟ್ರಪತಿ ಭವನವನ್ನು ಪ್ರವೇಶಿಸಲು ಮುಕ್ತ ಅವಕಾಶ ಮಾಡಿಕೊಟ್ಟರು. ದೂರದಲ್ಲೆಲ್ಲೋ ಮರಗಳು ಉರುಳಿದಾಗ, ಹಳ್ಳಿಯ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರು ಇಲ್ಲದಿದ್ದಾಗ, ಸಾರ್ವಜನಿಕರಿಗೆ ಓಡಾಡಲು ರಸ್ತೆ ಇಲ್ಲದಿದ್ದರೆ, ಅನಾರೋಗ್ಯದಿಂದ ಬಳಲುವವರಿಗೆ ವೈದ್ಯಕೀಯ ನೆರವು ದೊರೆಯದಿದ್ದಾಗ  ಕಲಾಂ ರಾಷ್ಟ್ರಪತಿ ಭವನದಿಂದಲೇ ಆ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಬದುಕಿನುದ್ದಕ್ಕೂ ಪಾಠ ಮಾಡುವುದನ್ನು ಪ್ರೀತಿಸುತ್ತಿದ್ದ ಕಲಾಂ ತಾವೊಬ್ಬ ಆದರ್ಶ ಶಿಕ್ಷಕನೆಂಬ ಗೌರವಕ್ಕೆ ಪಾತ್ರರಾಗಿದ್ದರು. ಶಿಕ್ಷಕ ವೃತ್ತಿ ಅವರ ಬದುಕಿನ ಮಹೋನ್ನತ ಸಾಧನೆಗಳಲ್ಲೊಂದು. ಪಾಠ ಮಾಡುತ್ತಲೇ ಕೊನೆಯುಸಿರೆಳೆದದ್ದು ಅವರು ಶಿಕ್ಷಕ ವೃತ್ತಿಯನ್ನು ಎಷ್ಟೊಂದು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ನಿದರ್ಶನ.

ಕಲಾಂ ಮತ್ತು ಕರ್ನಾಟಕ 

   
      ನವೆಂಬರ್ ೨೦, ೨೦೦೫ ಕರ್ನಾಟಕದ ಇತಿಹಾಸದಲ್ಲಿ ಇದೊಂದು ಮಹತ್ವದ ದಿನ. ಆ ದಿನ ಡಾ. ಅಬ್ದುಲ್ ಕಲಾಂ ಕರ್ನಾಟಕದ ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಸುವರ್ಣ ಕರ್ನಾಟಕದ ಆಚರಣೆಯ ಆ ಸಂದರ್ಭದಲ್ಲಿ ಡಾ. ಅಬ್ದುಲ್ ಕಲಾಂ ಅವರು ಮಾಡಿದ ಭಾಷಣ ಅತ್ಯಂತ ಮಹತ್ವ ಪಡೆದುಕೊಂಡಿತು. ೨೦೧೫ ರ ವೇಳೆಗೆ ಕರ್ನಾಟಕವನ್ನು ಹೇಗೆ ಮಾದರಿ ರಾಜ್ಯವಾಗಿ ಮಾಡಬಹುದೆಂದು ಕಲಾಂ ಮಾತನಾಡಿದರು. ತಮ್ಮ ಭಾಷಣದ ಪ್ರಾರಂಭದಲ್ಲಿ ಕಲಾಂ ತಮಗೂ ಹಾಗೂ ಕರ್ನಾಟಕಕ್ಕಿರುವ ಸಂಬಂಧವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ೧೯೫೮ ರಲ್ಲಿ ತಮ್ಮ ವೃತ್ತಿ ಜೀವನವನ್ನು ಕರ್ನಾಟಕದಿಂದಲೇ ಪ್ರಾರಂಭಿಸಿದ್ದಾಗಿ ತಿಳಿಸಿದ ಕಲಾಂ ಅವರು ಆ ದಿನಗಳಲ್ಲಿ ತಮಗೆ ಸಹಕಾರ ನೀಡಿದ ಅಂದಿನ ಮುಖ್ಯಮಂತ್ರಿ ಶ್ರೀ ಎಸ್ ನಿಜಲಿಂಗಪ್ಪನವರನ್ನು ನೆನೆದರು. ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ವಿಶಿಷ್ಠ ಮೆರುಗು ನೀಡಿದ ತಮ್ಮ ಗುರುಗಳಾದ ಪ್ರೊ ಸತೀಶ್ ಧವನ್ ಅವರನ್ನು ತಾವು ಮೊದಲು ಭೇಟಿ ಮಾಡಿದ್ದು ಇದೆ ಬೆಂಗಳೂರಿನಲ್ಲಿ ಎಂದು ಹೇಳಿ ಇಡೀ ಸಭಾಂಗಣವನ್ನು ಭಾವಾವೇಶದಲ್ಲಿ ಮುಳುಗಿಸಿದರು. ಮಧ್ಯವತಿ ರಾಗದಲ್ಲಿರುವ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಇವತ್ತಿಗೂ ತಮ್ಮ ಕಿವಿಯಲ್ಲಿ ಗುಂಯಿಗುಡುತ್ತಿದ್ದೆ ಎಂದು ಹೇಳಿದಾಗ ಇಡೀ ಸಭೆ ಮೂಕವಿಸ್ಮಯವಾಯಿತು. ಕರ್ನಾಟಕದ ಸಂಸ್ಕೃತಿ, ಗಡಿ ಪ್ರದೇಶಗಳು, ಹರಿಯವ ನದಿಗಳು, ಕೃಷಿ, ಮುಖ್ಯ ಬೆಳೆಗಳು, ಶೈಕ್ಷಣಿಕ ಸೌಲಭ್ಯ, ಶಿಲ್ಪಕಲೆ, ಪ್ರಮುಖ ಪ್ರವಾಸಿ ತಾಣಗಳು ಹೀಗೆ ಕರ್ನಾಟಕದ  ಸಂಪೂರ್ಣ ಮಾಹಿತಿ   ಅವರ ಭಾಷಣದಲ್ಲಿತ್ತು. ಜೊತೆಗೆ ಇಲ್ಲಿ ದೊರೆಯುವ ರುಚಿ ರುಚಿಯಾದ ಬಿಸಿಬೇಳೆ ಭಾತ್, ಹೋಳಿಗೆ, ಮೈಸೂರು ಬೊಂಡ, ಮದ್ದೂರು ವಡೆ ಕುರಿತು ಮಾತನಾಡಿ ಸಭಿಕರ ಬಾಯಿಯಲ್ಲಿ ನೀರೂರಿಸಿದರು. ತಮ್ಮ ವೃತ್ತಿ ಬದುಕಿಗೊಂದು ವೇದಿಕೆ ನೀಡಿದ ಕರ್ನಾಟಕ ರಾಜ್ಯದ ಕುರಿತು ಡಾ ಅಬ್ದುಲ್ ಕಲಾಂ ಭಾವುಕರಾಗಿ ಮಾತನಾಡಿದರು.

 
          ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಅವರ ಕಾರ್ಯದರ್ಶಿಯಾಗಿದ್ದ ಪಿ ಎಂ ನಾಯರ್ ಅವರು ಬರೆದು ಅದನ್ನು ಶ್ರೀ ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಿರುವ 'ಕಲಾಮ್ ಕಮಾಲ್' ಪುಸ್ತಕದಲ್ಲಿನ ಒಂದಿಷ್ಟು ಪ್ರಸಂಗಗಳು ನಿಮಗಾಗಿ........

            ನಾನು ರಾಷ್ಟ್ರಪತಿಯೆಂದು ತೋರಿಸಿಕೊಳ್ಳಬೇಕೆಂಬ  ಹುಸಿ ಆಡಂಬರ ಕಲಾಂ ಅವರಿಗಿರಲಿಲ್ಲ. ಅದಕ್ಕೊಂದು ಸರಳ ನಿದರ್ಶನ. ರಾಷ್ಟ್ರಪತಿ ಅವರ ಅಧಿಕೃತ ಚಿತ್ರವೊಂದಿರುತ್ತದೆ. ಅದರ ಒಂದು ಮೂಲೆಯಲ್ಲಿ ಅವರ ಸಹಿ ಇರುತ್ತದೆ. ಈ ಫೋಟೋವನ್ನು ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ತಾಣಗಳಲ್ಲಿ ತೂಗು ಹಾಕಬೇಕು. ಕಲಾಂ ರಾಷ್ಟ್ರಪತಿಯಾದಾಗ ಸಂಗತಿಯನ್ನು ಅವರಿಗೆ ತಿಳಿಸಲಾಯಿತು. ಕಲಾಂ ಒಲ್ಲದ ಮನಸ್ಸಿನಿಂದ ಒಪ್ಪಿದರು. ಶಿಷ್ಟಾಚಾರದ ಸೂಕ್ಷ್ಮ ವಿಷಯಗಳ ಬಗ್ಗೆ ಅವರೆಂದೂ ತಲೆ ಕೆಡಿಸಿಕೊಂಡವರಲ್ಲ. ರಾಷ್ಟ್ರಪತಿ ಭವನದ ಒಳಗಿರಬಹುದು, ಹೊರಗಿರಬಹುದು ಅಥವಾ ವಿದೇಶಗಳಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭವಿರಬಹುದು ಕಲಾಂ ಶಿಷ್ಟಾಚಾರಕ್ಕೆ ಒತ್ತು ನೀಡುತ್ತಿರಲಿಲ್ಲ. ಶಿಷ್ಟಾಚಾರದ ಆಡಂಬರ, ವೈಭವ, ಅಟ್ಟಹಾಸಗಳೆಂದರೆ ಅವರಿಗೆ ಆಗುತ್ತಿರಲಿಲ್ಲ. ರಾಷ್ಟ್ರಪತಿ ಭವನದಲ್ಲಿರುವ ನಾವು ಹೆಚ್ಚಾಗಿ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳು ರಾಷ್ಟ್ರಪತಿಯವರು ಕನಿಷ್ಠ ಅನುಸರಿಸಲೇ ಬೇಕಾದ ಶಿಷ್ಟಾಚಾರದ ಬಗ್ಗೆ ಮನವರಿಕೆ ಮಾಡಿಕೊಡುವ ಹೊತ್ತಿಗೆ ಸುಸ್ತಾಗಿ ಹೋಗುತ್ತಿದ್ದೆವು. ಅದರಲ್ಲೂ ಮುಖ್ಯವಾಗಿ ವಿದೇಶ ಪ್ರವಾಸದಲ್ಲಿ ಶಿಷ್ಟಾಚಾರದ ಅಗತ್ಯದ ಬಗ್ಗೆ ಕಲಾಂ ಅವರಿಗೆ ಒತ್ತಿ ಹೇಳಿ ಅವರ ಮನವೊಲಿಸುವುದು ಕಷ್ಟವಾಗುತ್ತಿತ್ತು.

---೦೦೦---

        "ಮಿಸ್ಟರ್ ನಾಯರ್ ನನ್ನ ಬಂಧುಗಳು ವಾರ ಅಥವಾ ಹತ್ತು ದಿನಗಳಮಟ್ಟಿಗೆ ಬರುತ್ತಾರೆ. ಅವರು ಬರುವುದು ಪಕ್ಕಾ ಖಾಸಗಿ ಉದ್ದೇಶಕ್ಕಾಗಿ ಇದರಲ್ಲಿ ಅಧಿಕೃತ ಎಂಬುದೇನೂ ಇರುವುದಿಲ್ಲ" ಎಂದರು ಕಲಾಂ. ಕೆಲದಿನಗಳಲ್ಲಿ ಕಲಾಂ ಅವರ ೫೨ ಮಂದಿ ಬಂಧು ಬಳಗದವರು ರಾಷ್ಟ್ರಪತಿ ಭವನಕ್ಕೆ ಬರುವವರಿದ್ದರು. ಅವರಲ್ಲಿ ತೊಬತ್ತು ವರ್ಷದ ಕಲಾಂ ಹಿರಿಯಣ್ಣನಿಂದ ಹಿಡಿದು ಒಂದೂವರೆ ವರ್ಷದ ಪುಟ್ಟು ಮಗು ಸಹ ಸೇರಿತ್ತು. ಕಲಾಂ ಅವರು ಹೇಳಿದ ಪ್ರತಿ ಪದ ನನಗೆ ಅರ್ಥವಾಗಿತ್ತು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ಗೊತ್ತಿತ್ತು.

           ಅವರೆಲ್ಲ ಆಗಮಿಸಿದರು. ಎಂಟು ದಿನಗಳ ಕಾಲ ಉಳಿದರು. ಅವರೆಲ್ಲ ಅಜ್ಮೀರ್ ಶರಿಫ್ ಗೆ ಹೋದರು. ಕೆಲವು ಕಿರಿಯರು ದಿಲ್ಲಿಯಲ್ಲಿ ಶಾಪಿಂಗ್ ಮಾಡಿದರು. ಅನಂತರ ಅವರೆಲ್ಲ ಊರಿಗೆ ವಾಪಸ್ ಹೋದರು. ಅಚ್ಚರಿಯ ಸಂಗತಿ ಎಂದರೆ ಒಂದೇ ಒಂದು ಸಲವೂ ಆಫೀಸಿನ ವಾಹನ ಬಳಸಲಿಲ್ಲ. ರಾಷ್ಟ್ರಪತಿ ಭವನದಲ್ಲಿ ಅವರೆಲ್ಲ ಉಳಿದುದಕ್ಕಾಗಿ ಕಲಾಂ ತಮ್ಮ ಕೈಯಿಂದ ಬಾಡಿಗೆ ಕಟ್ಟಿದರು. ಅವರೆಲ್ಲ ಕುಡಿದ ಸಿಂಗಲ್ ಚಹದ ಹಣವನ್ನೂ ಕಲಾಂ ಭರಿಸಿದರು. ಅವರೆಲ್ಲ ಅಷ್ಟು ದಿನ ಉಳಿದುದಕ್ಕೆ ೩.೫೨ ಲಕ್ಷ ರೂಪಾಯಿಗಳ ಬಿಲ್ ಬಂತು. ಕಲಾಂ ತಮ್ಮ ಕಿಸೆಯಿಂದ ಹಣ ಎಣಿಸಿದರು. ಇದನ್ನು ಕಲಾಂ ಯಾರ ಮುಂದೆಯೂ ಹೇಳಿಕೊಳ್ಳಲಿಲ್ಲ. ಪತ್ರಿಕೆಗಳಿಗೆ ತಿಳಿಯುವಂತೆ ಮಾಡಿ ಪ್ರಚಾರವನ್ನೂ ಗಿಟ್ಟಿಸಿಕೊಳ್ಳಲಿಲ.

---೦೦೦---

       ದೇವರು ಹಾಗೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆಯುಳ್ಳವರಾದ ಕಲಾಂ 'ಮಿಸ್ಟರ್ ನಾಯರ್ ಈ ಇಫ್ತಾರ್ ಕೂಟಗಳನ್ನೇಕೆ ಏರ್ಪಡಿಸಬೇಕು? ಈ ಕೂಟಗಳಿಗೆ ಆಹ್ವಾನಿಸುವ ವ್ಯಕ್ತಿಗಳು ಹೇಗಿದ್ದರೂ ಚೆನ್ನಾಗಿ ಬದುಕಿರುವವರೆ. ಹೀಗಿರುವಾಗ ಹಣವನ್ನೇಕೆ ವೃಥಾ ವ್ಯಯಿಸಬೇಕು? ಈ ಕೂಟಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಿರಿ?' ಎಂದು ಪ್ರಶ್ನಿಸಿದರು. ರಾಷ್ಟ್ರಪತಿ ಭವನದ ವಸತಿ ನಿಯಂತ್ರಣ ಅಧಿಕಾರಿಯನ್ನು ಕರೆದು ಖರ್ಚಿನ ವಿವರ ಕೇಳಿದೆ. ಒಂದು ಕೂಟಕ್ಕೆ ಭೋಜನದ ಖರ್ಚಿಗೆ ಕನಿಷ್ಠ ಎರಡೂವರೆ ಲಕ್ಷ ರೂಪಾಯಿಗಳು ತಗಲುವುದೆಂದು ಅವರು ಹೇಳಿದರು. ಇದನ್ನು ನಾನು ರಾಷ್ಟ್ರಪತಿಯವರಿಗೆ ತಿಳಿಸಿದೆ. ಒಂದು ಕ್ಷಣ ಅವರು ಯೋಚಿಸಿದರು 'ಈ ಹಣವನ್ನೇಕೆ ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ನೀಡಬಾರದು? ನಿಮ್ಮ ಅಭಿಪ್ರಾಯವೇನು?' ಎಂದು ಕೇಳಿದರು.

      'ಯಾವ ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ಹಣ ನೀಡಬೇಕೆಂಬುದನ್ನು ನೀವು ನಿರ್ಧರಿಸಿ' ಎಂದು ಕಲಾಂ ನನಗೆ ಸೂಚಿಸಿದರು. 'ಈ ಹಣ ಪೋಲಾಗದಂತೆ ಖಾತ್ರಿ ಪಡಿಸಿಕೊಳ್ಳಿ' ಎಂದೂ ಹೇಳಿದರು. ಕಲಾಂರ ಇಚ್ಛೆಯಂತೆ ಇಪ್ಪತ್ತೆಂಟು ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ನಮ್ಮ ತಂಡದ ಕಾರ್ಯಕರ್ತರು ಅಕ್ಕಿ, ಹಿಟ್ಟು, ಬೇಳೆ, ಬ್ಲಾಂಕೆಟ್ ಹಾಗೂ ಸ್ವೆಟರ್ ಗಳನ್ನು ವಿತರಿಸಿ ಬಂದರು. ಮಕ್ಕಳೆಲ್ಲ ಬಹಳ ಆನಂದ ಪಟ್ಟರು. ಈ ವಿವರಗಳನ್ನು ನಾನು ಕಲಾಂ ಅವರಿಗೆ ತಿಳಿಸಿದೆ.

            ಆದರೆ ನನಗೆ ಮತ್ತೊಂದು ಅಚ್ಚರಿ ಕಾದಿತ್ತು. ಕಲಾಂ ಪುನ: ನನ್ನನ್ನು ಕರೆದರು. ರೂಮಿನಲ್ಲಿ ನಾವಿಬ್ಬರೇ ಇದ್ದೆವು. ಅವರು ಸುತ್ತ ನೋಡಿ ಹೇಳಿದರು 'ನೀವು ಆ ಎಲ್ಲ ಸಾಮಾನು ಸರಂಜಾಮುಗಳನ್ನು ಸರಕಾರಿ ಹಣದಲ್ಲಿ ಖರೀದಿಸಿ ವಿತರಿಸಿದ್ದಿರಿ. ಇಫ್ತಾರ್ ಗೆ ನಾನು ನನ್ನ ಸ್ವಂತ ಹಣವನ್ನು ನೀಡುವವನಿದ್ದೆ. ನನ್ನ ವೈಯಕ್ತಿಕ ಖಾತೆಯಿಂದ ಒಂದು ಲಕ್ಷ ರೂ. ಚೆಕ್ ನೀಡುತ್ತೇನೆ. ಸರ್ಕಾರಿ ಹಣವನ್ನು ಬಳಸದಂತೆ ಈ ಹಣವನ್ನು ಉಪಯೋಗಿಸಿ. ಆದರೆ ನಾನು ಹಣ ಕೊಟ್ಟಿದ್ದನ್ನು ಮಾತ್ರ ಯಾರಿಗೂ ಹೇಳಬೇಡಿ'.

---೦೦೦---

          ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ ಕಲಾಂ ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಸೇರಿದಂತೆ ಹಲವು ಕಾನೂನು ಪರಿಣಿತರೊಂದಿಗೆ ಸಮಾಲೋಚನೆ ನಡೆಸಿದ್ದರು. ಪಕ್ಕದ ರೂಮಿನಲ್ಲಿ ಕುಳಿತಿರುವಂತೆ ನನಗೆ ಸೂಚಿಸಲಾಗಿತ್ತು. ಹದಿನೈದು ನಿಮಿಷಗಳ ನಂತರ ಬೆಲ್ ಸದ್ದಾಯಿತು ಸಹಾಯಕ ಬಂದು 'ಸರ್  ನಿಮ್ಮನ್ನು ಕರೆಯುತ್ತಿದ್ದಾರೆ ಬರಬೇಕಂತೆ' ಎಂದ.

           ನಾನು ಒಳ ಹೋದೆ. ರಾಷ್ಟ್ರಪತಿ ಹಾಗೂ ಅವರ ಗೆಸ್ಟ್ ಸೋಫಾದಲ್ಲಿ ಕುಳಿತಿದ್ದರು. ನಾನು ಅವರ ಮುಂದಿನ ಆಸನದಲ್ಲಿ ಕುಳಿತೆ. ಗೆಸ್ಟ್ ಹೇಳಿದರು 'ಮಿಸ್ಟರ್ ನಾಯರ್ ಗಲ್ಲು ಶಿಕ್ಷೆ ಬಗ್ಗೆ  ಚರ್ಚಿಸುತ್ತಿದ್ದೇವೆ.  ರಾಷ್ಟ್ರಪತಿಯವರು ಈ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ ಹಾಗೂ ಅದೆನೆಂಬುದು ನಿಮಗೂ ಗೊತ್ತಿದೆ. ರಾಷ್ಟ್ರಪತಿಯವರ ನಿಲುವಿಗೆ ನಾನು ಸಮ್ಮತಿ ಸೂಚಿಸುತ್ತೇನೆ. ನಿಮ್ಮ ಅನಿಸಿಕೆ ಏನು?'

            ನಾನು ಕಲಾಂ ಅವರನ್ನು ನೋಡಿದೆ. ನಾನೇನು ಹೇಳುತ್ತೆನೆಂಬುದು ಅವರಿಗೆ ಗೊತ್ತಿತ್ತು. ಅವರು ಮುಗುಳ್ನಕ್ಕರು. 'ಸರ್ ನಾನು ನನ್ನ ಅನಿಸಿಕೆ ಹೇಳಬಹುದೇ?' ಎಂದೆ. ಕಲಾಂ ತಲೆಯಾಡಿಸಿದರು. ಗೌರವಯುತವಾಗಿ ನಾನು ನನ್ನ ಅಭಿಪ್ರಾಯ ತಿಳಿಸಿದೆ. ನನ್ನ ಮಾತು ಕೇಳಿ ಆ ಕಾನೂನು ಪರಿಣಿತರಿಗೆ ಬಹಳ ಅಚ್ಚರಿಯಾಯಿತು. ಆ  ಚರ್ಚೆ ಅಲ್ಲಿಗೇ ಮುಗಿಯಿತು. ನಾನು ಅವರನ್ನು ಕಳಿಸಲು  ಹೊರಟೆ. ಕಾರನ್ನೇರುವ ಮೊದಲು ಕಾನೂನು ಪರಿಣಿತರು ನನ್ನನ್ನು ನೋಡಿ 'ಭಾರತದ ರಾಷ್ಟ್ರಪತಿಯವರೊಂದಿಗೆ ನೀವು ಈ ರೀತಿ ಮಾತನಾಡಬಹುದಾ?' ಎಂದು ಕೇಳಿದರು.
'ಹೌದು ಸರ್ ಅದರಲ್ಲೇನು ಬಂತು? ಅದು ಅವರ ತಾಕತ್ತು ಹಾಗೂ ನನ್ನ ತಾಕತ್ತೂ ಹೌದು' ಎಂದೆ. ಕಾರು ಹೊರಟಿತು.

          ಒಬ್ಬ ಅಧಿಕಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲಾಂ ದೊರಕಿಸಿಕೊಟ್ಟಿದ್ದರು.

ಕೊನೆಯ ಮಾತು 


           ಹೀಗೆ ಹೇಳುತ್ತ ಹೋದರೆ ಕಲಾಂ ಅವರ ಸರಳ ಮತ್ತು ಪ್ರಾಮಾಣಿಕ ಬದುಕಿನ ಅನೇಕ ಘಟನೆಗಳು  ಮನಸ್ಸನ್ನು ಆರ್ದ್ರಗೊಳಿಸುತ್ತವೆ. ಹೃದಯ ಆತ್ಮಿಯರೊಬ್ಬರನ್ನು ಕಳೆದುಕೊಂಡ ಅನಾಥ ಪ್ರಜ್ಞೆಯಿಂದ ಹೊಯ್ದಾಡುತ್ತದೆ. ಕಲಾಂ ಅವರ ಇರುವಿಕೆ ಮತ್ತು ಅವರ ಬದುಕು ಅನೇಕರಿಗೆ ಸ್ಪೂರ್ತಿಯ ಸೆಲೆಯಾಗಿತ್ತು. ನಿಜಕ್ಕೂ ಕಲಾಂ ನಮ್ಮ ನಡುವಿನ ಅದ್ಭುತ ಮತ್ತು ಅಚ್ಚರಿಗಳಲ್ಲೊಂದಾಗಿದ್ದರು. ಕಡುಬಡತನದಲ್ಲಿ ಹುಟ್ಟಿದ ಪೇಪರ್ ಮಾರುವ ಹುಡುಗನೊಬ್ಬ ತನ್ನಲ್ಲಿನ ಪ್ರತಿಭೆ ಮತ್ತು ಪ್ರಯತ್ನದಿಂದ ರಾಷ್ಟ್ರಪತಿ ಭವನದವರೆಗೆ ಪಯಣಿಸಿದ ಅವರ ಬದುಕಿನ ಆ ಪಯಣ ಸಣ್ಣ ಸಾಧನೆಯಲ್ಲ. ಅವರ ಆ ಪಯಣದ ದಾರಿಯಲ್ಲಿ ಹೂವುಗಳಿಗಿಂತ ಕಲ್ಲು ಮುಳ್ಳುಗಳೇ ತುಂಬಿದ್ದವು. ತನ್ನ ಸಾಧನೆಯ ದಾರಿಗೆ ಎದುರಾದ ಎಲ್ಲ ಅಡೆತಡೆಗಳನ್ನು ಬದಿಗೆ ಸರಿಸಿ ತಾನು ನಡೆಯಬೇಕಾದ ಪಥವನ್ನು ಸ್ವತ: ನಿರ್ಮಿಸಿಕೊಂಡ ಪಥಿಕರವರು. ಅವರ ಬದುಕಿನ ಯಶೋಗಾಥೆ ಅವರ ನಂತರದ ಪೀಳಿಗೆಗೆ ಅದು ಯಾವತ್ತಿಗೂ ದಾರಿದೀಪ. ಇಂಥ ಸಾಧಕ ಸಾಧನೆ ಮಾಡುತ್ತಿರುವ ಕಾಲದಲ್ಲಿ ನಾವು ಬದುಕಿರುವುದು ನಿಜಕ್ಕೂ ಅದು ನಮ್ಮ ಬದುಕಿನ ಬಹುದೊಡ್ಡ ಅದೃಷ್ಟ. ಅವರನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸು ಹೇಳುತ್ತದೆ 'ಮೇಷ್ಟ್ರೆ ನೀವು ಇನ್ನೊಂದಿಷ್ಟು ಕಾಲ ಬದುಕಿರಬೇಕಿತ್ತು'.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Wednesday, July 1, 2015

ಮಹಿಳಾ ಅಸ್ತಿತ್ವದ ವಿವಿಧ ನೆಲೆಗಳು






            ರಾಮಾಯಣದಲ್ಲಿ ಊರ್ಮಿಳೆ ಎನ್ನುವ ಪಾತ್ರವೊಂದಿದೆ. ಈಕೆ ಲಕ್ಷ್ಮಣನ ಹೆಂಡತಿ. ರಾಮ ಕಾಡಿಗೆ ಹೋಗುವ ಸಂದರ್ಭ ಅಣ್ಣನನ್ನು ಅನುಸರಿಸಿ ಲಕ್ಷ್ಮಣ ಸಹ ಕಾಡಿಗೆ ತೆರಳುತ್ತಾನೆ. ಕಾಡಿಗೆ ಹೋಗುತ್ತಿರುವ ಲಕ್ಷ್ಮಣನಿಗೆ ತನ್ನನ್ನೇ ನಂಬಿಕೊಂಡ ಜೀವವೊಂದಿದೆ ಎನ್ನುವ ನೆನಪಾಗುವುದಿಲ್ಲ. ಹೆಂಡತಿ ಸೀತೆಯನ್ನೂ ತನ್ನೊಂದಿಗೆ ಕಾಡಿಗೆ ಕರೆದೊಯ್ಯುತ್ತಿರುವ ರಾಮನಿಗೂ ತನ್ನ ತಮ್ಮ ಲಕ್ಷ್ಮಣನಿಗೂ ಪತ್ನಿ ಇರುವ ಸತ್ಯ ಗೋಚರವಾಗುವುದಿಲ್ಲ. ರಾವಣ ಕಾಡಿನಲ್ಲಿ ಸೀತೆಯನ್ನು ಅಪಹರಿಸಿದಾಗ ವಿರಹ ವೇದನೆಯಿಂದ ಬಳಲುವ ರಾಮ ತಮ್ಮ ಲಕ್ಷ್ಮಣನೆದುರು ಸೀತೆಯ ಅಗಲುವಿಕೆಯಿಂದಾದ ದು:ಖವನ್ನು ತೋಡಿಕೊಳ್ಳುತ್ತಾನೆ. ದಾರಿಯಲ್ಲಿ ಎದುರಾಗುವ ಮರ, ಗಿಡ, ಬಳ್ಳಿ, ನದಿ, ಬೆಟ್ಟಗಳನ್ನು ಮಾತನಾಡಿಸಿ ನನ್ನ ಸೀತೆಯನ್ನು ಕಂಡಿರಾ ಎಂದು ಪ್ರಲಾಪಿಸುತ್ತಾನೆ. ಹೀಗೆ ದು:ಖಿಸುತ್ತಿರುವ ರಾಮನಿಗೆ ಲಕ್ಷ್ಮಣನೂ ವಿರಹಾಗ್ನಿಯಿಂದ ಬಳಲುತ್ತಿರಬಹುದೆನ್ನುವ ಕಿಂಚಿತ್ ಸಂದೇಹವೂ ಮನಸ್ಸಿನಲ್ಲಿ ಸುಳಿಯದೇ ಹೋಗುತ್ತದೆ. ರಾಮ ರಾವಣನನ್ನು ಜಯಿಸಿ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳುತ್ತಾನೆ. ಹಾಗಾದರೆ ಆ ಹದಿನಾಲ್ಕು ವರ್ಷಗಳ ಕಾಲ ಪತಿಯಿಂದ ದೂರಾಗಿ ಊರ್ಮಿಳೆ ಅನುಭವಿಸಿದ ವೇದನೆ ಮತ್ತು ಸಂಕಟಗಳ ಕಥೆ ಏನಾಯಿತು? ರಾಮಾಯಣವನ್ನು ಓದುತ್ತಿರುವ ಘಳಿಗೆ ಓದುಗ ಊರ್ಮಿಳೆಯ ಪಾತ್ರದೊಂದಿಗೆ ಮುಖಾಮುಖಿಯಾಗುವುದೇ ಇಲ್ಲ. ಭಾತೃತ್ವದ   ಪ್ರಶ್ನೆ  ಎದುರಾದಾಗ ಅದಕ್ಕೆ ಶ್ರೇಷ್ಠ ಉದಾಹರಣೆಯಾಗಿ ಲಕ್ಷ್ಮಣನ ಹೆಸರನ್ನು ಹೇಳುವ ನಾವು ಊರ್ಮಿಳೆಯನ್ನು ಮರೆತು ಬಿಡುತ್ತೇವೆ. ಹಾಗಾದರೆ ಊರ್ಮಿಳೆಯದು ಶ್ರೇಷ್ಠ ತ್ಯಾಗವಲ್ಲವೇ? ಹದಿನಾಲ್ಕು ವರ್ಷಗಳ ಕಾಲ ಗಂಡನಿಂದ ದೂರವೇ ಉಳಿದು ಆತನನ್ನು ಅಣ್ಣನ ಸೇವೆಗಾಗಿ ಪ್ರಾಂಜಲ ಮನಸ್ಸಿನಿಂದ ಕಳಿಸಿಕೊಟ್ಟ ಊರ್ಮಿಳೆಯ ವ್ಯಕ್ತಿತ್ವಕ್ಕೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದೊರೆಯಬೇಕಾದ ಮನ್ನಣೆ ಸಿಗಲೇ ಇಲ್ಲ. ಅಂದರೆ ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಲ್ಲಿ ಶೋಷಣೆಗೊಳಪಡಿಸುತ್ತ ಬಂದಿರುವುದಕ್ಕೆ ನಮ್ಮ ಪ್ರಾಚೀನ ಪರಂಪರೆಯ ಒತ್ತಾಸೆಯಿದೆ ಎಂದರ್ಥ. ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಸ್ತ್ರೀ ಶೋಷಣೆಯ ವಸ್ತುವಾಗಿಯೇ ಬಿಂಬಿತವಾಗುತ್ತ ಬಂದಿರುವಳು.

             ಇತಿಹಾಸದ ಪಾತ್ರವೊಂದು ಸ್ತ್ರೀ ಶೋಷಣೆಯ ವಸ್ತುವಾಗಿ ಪುರುಷ ಪ್ರಧಾನ ವ್ಯವಸ್ಥೆಗೆ ಒತ್ತಾಸೆಯಾಗಿ ನಿಂತಾಗ ಇತಿಹಾಸದ ಮತ್ತೊಂದು ಪಾತ್ರವಾದ ಅಕ್ಕ ಮಹಾದೇವಿಯದು ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ ಹೊಸ ವ್ಯವಸ್ಥೆಯನ್ನು ಕಟ್ಟುವ ತಹತಹಿಕೆ. ಚೆನ್ನಮಲ್ಲಿಕಾರ್ಜುನನನ್ನೇ ತನ್ನ ಪತಿಯೆಂದು ಮಾನಸಿಕವಾಗಿ ಪರಿಭಾವಿಸಿದ ಅಕ್ಕ ಕೌಶಿಕ ರಾಜನ ಕಾಮನೆಗಳನ್ನು ಮೆಟ್ಟಿನಿಂತು ಮಹಿಳಾ ವಿಮೋಚನೆಗೆ ಹೊಸ ದಾರಿ ತೋರುತ್ತಾಳೆ. ಒಂದು ಪಾತ್ರದ ಮೂಲಕ ಸ್ತ್ರೀ ಶೋಷಣೆಗೆ ಸಾಕ್ಷಿಯಾದ ಇತಿಹಾಸ ಮತ್ತೊಂದು ಪಾತ್ರದ ಮೂಲಕ ಸ್ತ್ರೀ ವಿಮೋಚನೆಗೂ ಸಾಕ್ಷಿಯಾದದ್ದು ಇತಿಹಾಸದ ಮಹತ್ವಗಳಲ್ಲೊಂದು.  ಇತಿಹಾಸದಿಂದ ಬಿಡುವಷ್ಟೇ ಪಡೆಯುವುದು ಕೂಡ ಬಹುಮುಖ್ಯವಾದದ್ದು. ನಮ್ಮ ನೆಲದ ಮಹಿಳೆಯರು ಅಕ್ಕ ಮಹಾದೇವಿಯ ಧೋರಣೆ ಹಾಗೂ ಪುರುಷ ಸಮಾಜವನ್ನು ಧಿಕ್ಕರಿಸಿ ನಿಂತ ಆಕೆಯ ಮನೋಸ್ಥೈರ್ಯವನ್ನು ಬಳುವಳಿಯಾಗಿ ಪಡೆದು ಸ್ತ್ರೀ ವಿಮೋಚನೆಯ ಅನೇಕ ಸ್ಥಿತ್ಯಂತರಗಳಿಗೆ ಪ್ರಯತ್ನಿಸಿದರು. ಒಂದು ರೀತಿಯಲ್ಲಿ ಮಹಿಳೆ ತನ್ನ ಅಸ್ಮಿತೆಯನ್ನು ವಿವಿಧ ನೆಲೆಗಳಲ್ಲಿ ಗುರುತಿಸಿಕೊಳ್ಳಲು ಮಾಡಿದ ಪ್ರಯತ್ನವೂ ಅದಾಗಿತ್ತು.

          ಮಹಿಳೆ ಪುರುಷ ಪ್ರಧಾನ ವ್ಯವಸ್ಥೆಯ ನೆರಳಿನಿಂದ  ಹೊರಬಂದು  ತನ್ನದೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾಡಿದ ಪ್ರಯತ್ನಗಳಲ್ಲಿ ಆಕೆ ಅತ್ಯಂತ ಸಮರ್ಥನಿಯವಾಗಿ ಬಳಸಿಕೊಂಡಿದ್ದು  ಬರವಣಿಗೆಯನ್ನು ಎನ್ನುವ ನಂಬಿಕೆ ನನ್ನದು. ಅಕ್ಕ ಮಹಾದೇವಿಯ ಜೊತೆಗೆ ಅನೇಕ ವಚನಕಾರ್ತಿಯರು ೧೨ನೇ ಶತಮಾನದಲ್ಲಿ ಬರವಣಿಗೆಯನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡು ಸಾವಿರಾರು ವಚನಗಳನ್ನು ಬರೆದು ಆ ಮೂಲಕ ಹೆಣ್ಣಿನ ತುಮುಲ ಹಾಗೂ ಒಳತೋಟಿಗಳನ್ನು ತೆರೆದಿಡುವ ಪ್ರಯತ್ನ ಮಾಡಿದರು. ವಚನಕಾರ್ತಿಯರ ಆ ಒಂದು ಪ್ರಯತ್ನವನ್ನೇ ಆಧಾರವಾಗಿಟ್ಟುಕೊಂಡು ೧೯ನೇ ಶತಮಾನದಲ್ಲಿ ಅನೇಕ ಮಹಿಳೆಯರು ಬರವಣಿಗೆಯ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಯತ್ನಿಸಿದರು. ಪ್ರಾರಂಭದಲ್ಲಿ ಮಹಿಳೆ ತನ್ನ ಗೃಹ ಕೃತ್ಯಗಳ ನಡುವೆ ದೊರೆಯುವ ಬಿಡುವಿನ ಸಮಯವನ್ನು ದೇವರ ಹಾಡು, ಕೀರ್ತನೆ, ಭಜನೆಯಂಥ ಬರವಣಿಗೆಗೆ ವಿನಿಯೋಗಿಸಿಕೊಂಡು ಪುರುಷ ದಬ್ಬಾಳಿಕೆಯಿಂದ ಯಾತನೆಗೊಂಡ ಮನಸ್ಸಿಗೆ ಒಂದಿಷ್ಟು ಸಾಂತ್ವನದ ಸಿಂಚನ ಗೈದಳು. ನಂತರದ ದಿನಗಳಲ್ಲಿ ದೇವರ ಕೋಣೆಯಿಂದ ನಡುಮನೆ ಹಾಗೂ ಹಿತ್ತಲನ್ನು ಪ್ರವೇಶಿಸಿದ ಮಹಿಳಾ ಬರವಣಿಗೆ ದೇವರ ನಾಮ, ಕೀರ್ತನೆಗಳಿಂದ ಕಥೆ ಕವಿತೆಗಳಿಗೆ ವಿಸ್ತರಿಸತೊಡಗಿತು. ಆದರೂ ಮಹಿಳಾ ಸಾಹಿತ್ಯವೆಂದರೆ ಅದು ಅಡುಗೆ ಮನೆಯ ಸಾಹಿತ್ಯ ಎನ್ನುವ ಗೇಲಿಗೆ ಒಳಗಾಗಬೇಕಾಯಿತು. ಅಂಥದ್ದೊಂದು ಗೇಲಿಗೆ ಪುರಾವೆಯಾಗಿ ಕೆಲವು ಬರಹಗಾರ್ತಿಯರ ಬರವಣಿಗೆ ಅಡುಗೆ, ಶೃಂಗಾರ, ಗಂಡ, ಮಕ್ಕಳ ಪಾಲನೆಗೆ ಮಾತ್ರ ಸೀಮಿತವಾಗಿರುತ್ತಿತ್ತು. ಇಂಥದ್ದೊಂದು ಆರೋಪದಿಂದ ಹೊರಬರುವುದು ಆ ದಿನಗಳಲ್ಲಿನ ಮಹಿಳಾ ಸಾಹಿತ್ಯದ ತುರ್ತು ಅಗತ್ಯವಾಗಿತ್ತು. ಅದಕ್ಕೆಂದೇ ಅನೇಕ ಲೇಖಕಿಯರು ತಮ್ಮದೇ ಮನೆಯ ಮಹಿಳೆಯರ ಸಮಸ್ಯೆಗಳನ್ನು ಬರವಣಿಗೆಯ ಮೂಲಕ ತೆರೆದಿಡಲಾರಂಭಿಸಿದರು. ನಡುಮನೆ ಮತ್ತು ಹಿತ್ತಲಿಗೆ ಸೀಮಿತವಾಗಿದ್ದ ಮಹಿಳಾ ಸಾಹಿತ್ಯದ ಬಿಕ್ಕಳಿಕೆ ಮನೆಯ ಅಂಗಳ ಹಾಗೂ ಜಗುಲಿಯನ್ನು ಹೋಗಿ ತಲುಪಿದಾಗಲೇ ಬರವಣಿಗೆ ಮಹಿಳೆಯರ ದು:ಖ ಮತ್ತು ಸಂಕಟಗಳಿಗೆ ವೇದಿಕೆಯಾಗುತ್ತಿದೆ ಎನ್ನುವ ಅನುಮಾನ ಮೊಳಕೆಯೊಡೆಯಲಾರಂಭಿಸಿತು. ಪ್ರಾರಂಭದ ದಿನಗಳಲ್ಲಿನ ಮಹಿಳಾ ಸಾಹಿತ್ಯದ ವಿಷಯವಸ್ತು ಅಡುಗೆ ಕೋಣೆ ಹಾಗೂ ಮಲಗುವ ಕೋಣೆಗಳ ನಾಲ್ಕು ಗೋಡೆಗಳ ನಡುವಿನ ಆಕೆಯ ಬಿಸಿಯುಸಿರು ಮತ್ತು ಬಿಕ್ಕಳಿಕೆಗೆ ಸೀಮಿತವಾಗಿದ್ದರೂ ಒಂದಿಷ್ಟಾದರೂ ಸ್ತ್ರೀ ಸಮಸ್ಯೆಗಳು ಸಮಾಜದ ಮುಖ್ಯಸ್ತರಕ್ಕೆ ಹೋಗಿ ತಲುಪಲು ಸಾಧ್ಯವಾಯಿತು. ಇಂಥದ್ದೊಂದು ಪ್ರಯತ್ನದ ಪರಿಣಾಮ ಮಹಿಳೆ ತನ್ನ ಸುತ್ತಲಿನ ನಿರ್ಬಂಧನೆಗಳಿಂದ ಬಿಡಿಸಿಕೊಂಡು ಹೊರಬಂದು ತನ್ನದಲ್ಲದೆ ಬೇರೆ ಸ್ತ್ರೀಯರ ಬದುಕಿನ ಬವಣೆಗಳನ್ನೂ ಬರಹಕ್ಕಿಳಿಸಲು ಯತ್ನಿಸತೊಡಗಿದಳು.

            ನಂತರದ ದಿನಗಳಲ್ಲಿ ಬರವಣಿಗೆಯ ಮೂಲಕ ಇಂದಿರಾ, ತ್ರಿವೇಣಿ, ಪ್ರೇಮಾ ಭಟ್ಟ, ಉಷಾನವರತ್ನ ರಾಮ್, ಅನುಪಮಾ ಇತ್ಯಾದಿ ಲೇಖಕಿಯರು ಸ್ತ್ರೀ ಸಮಸ್ಯೆಗಳನ್ನು ಅತ್ಯಂತ ಸಮರ್ಥವಾಗಿ ಸಮಾಜದ ಮುಖ್ಯವಾಹಿನಿಗೆ ಒಯ್ದು ಮುಟ್ಟಿಸುವಲ್ಲಿ ಯಶಸ್ವಿಯಾದರು. ಮಹಿಳಾ ಸಂವೇದನೆಯ ಅನೇಕ ಮುಖಗಳು ಈ ಲೇಖಕಿಯರ ಬರಹಗಳಿಂದ ಅನಾವರಣಗೊಂಡವು. ತ್ರಿವೇಣಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯ ಮನಸ್ಸಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದರು. ಕನ್ನಡ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯಿಂದಾದ ಬಹುದೊಡ್ಡ ಬದಲಾವಣೆ ಇದು. ಮಹಿಳಾ ಲೇಖಕಿಯರದು ಅಡುಗೆ ಮನೆಯ ಸಾಹಿತ್ಯ ಎಂದು ಗೇಲಿ ಮಾಡುತ್ತಿದ್ದ ಪುರುಷ ಲೇಖಕ ಬಣದ ಅಹಂಕಾರಕ್ಕೆ ತ್ರಿವೇಣಿ ತಮ್ಮ ಕಾದಂಬರಿಗಳ ಕಥಾವಸ್ತುವಿನ ಮೂಲಕವೇ ದೊಡ್ಡ ಪೆಟ್ಟು ನೀಡಿದರು. ಅವರ ಬೆಕ್ಕಿನ ಕಣ್ಣು, ಶರಪಂಜರ, ಬೆಳ್ಳಿ ಮೋಡ ಕಾದಂಬರಿಗಳು ಹೆಣ್ಣಿನ ಸಂಕಟ ಹಾಗೂ ಸಂವೇದನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟವು. ಆದರೆ ಈ ಮೇಲೆ ಹೆಸರಿಸಿದ ಮಹಿಳಾ ಲೇಖಕಿಯರ ಬಹುತೇಕ ಕಥೆ ಕಾದಂಬರಿಗಳಲ್ಲಿ ಹೆಣ್ಣಿನ ಬದುಕು ಒಂದೋ ಪುರುಷ ಪ್ರಧಾನ ವ್ಯವಸ್ಥೆ ಎದುರು ಸೋಲೊಪ್ಪಿಕೊಳ್ಳುವುದು ಇಲ್ಲವೇ ಆತ್ಮಹತ್ಯೆಯಂಥ ದುರಂತದಲ್ಲಿ ಕೊನೆಗೊಳ್ಳುತ್ತಿತ್ತು. ಅವರ ಕಥೆಯ ನಾಯಕಿಯರು ಶೋಷಣೆಯನ್ನು ವಿರೋಧಿಸಿ ಹೊರಬರುವ ಪ್ರಯತ್ನ ಮಾಡಲಿಲ್ಲವಾದರೂ ಸ್ತ್ರೀ ಶೋಷಿತಳು ಎನ್ನುವುದನ್ನು ತೋರಿಸಿಕೊಟ್ಟಿದ್ದು ನಿಜಕ್ಕೂ ಬಹುದೊಡ್ಡ ಸಾಮಾಜಿಕ ಪಲ್ಲಟಕ್ಕೆ ಕಾರಣವಾಯಿತು. ಇಂಥದ್ದೊಂದು ಪ್ರಯತ್ನದ ಪರಿಣಾಮ ಮಹಿಳಾ ಸಾಹಿತ್ಯಕ್ಕೆ ಮಹತ್ವದ ತಿರುವು ಸಿಕ್ಕು ಶೋಷಣೆಯನ್ನು ವಿರೋಧಿಸಿ ಹೊರಬರುವ ನಾಯಕಿಯರು ನಂತರದ ತಲೆಮಾರಿನ ಲೇಖಕಿಯರ ಬರಹಗಳಲ್ಲಿ ರೂಪುಗೊಳ್ಳತೊಡಗಿದರು.

         ಹೀಗೆ ಮಹಿಳಾ ಸಾಹಿತ್ಯದ ಪರಂಪರೆಯನ್ನೇ ಮುರಿದು ಕಟ್ಟುವ ಪ್ರಯತ್ನಕ್ಕೆ ಮುಂದಾದ ಲೇಖಕಿಯರಲ್ಲಿ ಬಹುಮುಖ್ಯವಾಗಿ ಕೇಳಿಬರುವ ಹೆಸರುಗಳಲ್ಲಿ ಗೀತಾ ನಾಗಭೂಷಣ, ಸಾರಾ ಅಬೂಬಕ್ಕರ, ವೈದೇಹಿ, ಲಲಿತಾ ನಾಯಕ್, ವೀಣಾ ಶಾಂತೇಶ್ವರ ಪ್ರಮುಖವಾದವುಗಳು. ಈ ಲೇಖಕಿಯರು ತಮ್ಮ ಕಥೆ ಕಾದಂಬರಿಗಳ ನಾಯಕಿಯ ಪಾತ್ರದ ಮೂಲಕ ಸಮಾಜದಲ್ಲಿ ಮನೆಮಾಡಿಕೊಂಡಿರುವ ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸತೊಡಗಿದರು. ಇವರು ಸೃಷ್ಟಿಸಿದ ನಾಯಕಿಯರು ಶೋಷಣೆಯನ್ನು ಧಿಕ್ಕರಿಸಿ ಹೊರಬಂದು ಹೊಸಬದುಕನ್ನು ಕಟ್ಟಿಕೊಳ್ಳುವಷ್ಟು ಸಮರ್ಥರು. ಇದುವರೆಗೂ ಮನೆಯ ಹಿತ್ತಲು ಮತ್ತು ಜಗುಲಿಯವರೆಗೆ ಮಾತ್ರ ಓಡಾಡಿಕೊಂಡಿದ್ದ ಮಹಿಳಾ ಸಮಸ್ಯೆಗಳಿಗೆ ರಸ್ತೆಯ ಮುಖ ಕಾಣುವ ಅವಕಾಶ ದೊರೆಯಿತು. ಗೀತಾ ನಾಗಭೂಷಣ ಅವರ ಅನೇಕ ಕಾದಂಬರಿಗಳ ನಾಯಕಿಯರು ರಸ್ತೆಯ ಮೇಲೆ ನಿಂತು ಗಂಡಸಿನ ಕೊರಳುಪಟ್ಟಿ ಹಿಡಿದು ಜಗಳವಾಡುವಷ್ಟು ಗಟ್ಟಿಗರು. ಜೊತೆಗೆ ಗಮನಿಸಬೇಕಾದ ಇನ್ನೊಂದು ಗಮನಾರ್ಹವಾದ ಬೆಳವಣಿಗೆ ಎಂದರೆ ಇದುವರೆಗೂ ಮಧ್ಯಮ ವರ್ಗದ ಮಹಿಳೆಯರ ಸಮಸ್ಯೆಗಳನ್ನು ಮಾತ್ರ ತಮ್ಮ ಬರವಣಿಗೆಯ ವಸ್ತುವಾಗಿಸಿಕೊಳ್ಳುತ್ತಿದ್ದ ಲೇಖಕಿಯರು ಈ ಬಂಡಾಯ ಲೇಖಕಿಯರ ಆಗಮನದ ನಂತರ ಕೆಳವರ್ಗದ ಮಹಿಳೆಯರ ಸಮಸ್ಯೆಗಳನ್ನೂ ತಮ್ಮ ಬರವಣಿಗೆಗೆ ದಕ್ಕಿಸಕೊಳ್ಳತೊಡಗಿದರು. ಇನ್ನು ಕಾರ್ಪೊರೇಟ್ ಸಂಸ್ಕೃತಿಗೆ ಸೇರಿದ ಮಹಿಳೆಯರ ಸಮಸ್ಯೆಗಳನ್ನು ನೇಮಿಚಂದ್ರ, ಸುನಂದಾ ಅವರಂಥ ಉದಯೋನ್ಮುಖ ಬರಹಗಾರ್ತಿಯರು ಸಮರ್ಥವಾಗಿ ಕನ್ನಡ ಸಾಹಿತ್ಯಕ್ಕೆ ಎಳೆದುತಂದರು. ಅಕ್ಷಿತಾ ಹುಂಚನಕಟ್ಟೆ, ಸಬೀಹಾ ಭೂಮಿಗೌಡ, ರೂಪ ಹಾಸನ, ಶಶಿಕಲಾ, ನಾಗವೇಣಿ ಇತ್ಯಾದಿ ಈ ದಿನಗಳಲ್ಲಿನ ಲೇಖಕಿಯರು ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಿಂದ ಸಂಪೂರ್ಣವಾಗಿ ಹೊರತಂದು ಅವಳದೇ ಒಂದು ಅಸ್ಮಿತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿರುವುದು ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದಲ್ಲಾಗುತ್ತಿರುವ ಪ್ರಮುಖ ಬೆಳವಣಿಗೆಗಳಲ್ಲೊಂದು. ಅಕ್ಷತಾ ಹುಂಚನಕಟ್ಟೆ ಬರವಣಿಗೆಯೊಂದಿಗೆ ಪುಸ್ತಕ ಪ್ರಕಾಶನಕ್ಕೂ ಕೈಹಾಕಿ ಪ್ರತ್ಯೇಕ ಅಸ್ತಿತ್ವದಿಂದ ಗುರುತಿಸಿಕೊಂಡಿರುವರು.

                ಸ್ತ್ರೀ ತನ್ನ ಅಸ್ಮಿತೆಯ ಹುಡುಕಾಟದಲ್ಲಿ ಸಿನಿಮಾ ಮಾಧ್ಯಮವನ್ನೂ ಒಂದು ನೆಲೆಯಾಗಿ ರೂಪಿಸಿಕೊಂಡಿದ್ದುಂಟು. ಆದರೆ ಸಿನಿಮಾ ಮಾಧ್ಯಮಕ್ಕೆ ಕಾಲಿಡುವುದಕ್ಕಿಂತ ಪೂರ್ವದಲ್ಲಿ ಆಕೆ ಅಭಿನಯದ ಒಂದಿಷ್ಟು ತಾಲೀಮು ಮಾಡಿ ತರಬೇತಿ ಪಡೆದದ್ದು ರಂಗಭೂಮಿಯಲ್ಲಿ. ಆದರೆ ಮಹಿಳೆ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ರಂಗಭೂಮಿಯನ್ನು ಪ್ರವೇಶಿಸಲು ಸಾಕಷ್ಟು ಕಾಲಾವಕಾಶ ಬೇಕಾಯಿತು. ಜೊತೆಗೆ ಗಮನಿಸಬೇಕಾದ ಸಂಗತಿ ಎಂದರೆ ಮಹಿಳೆ ರಂಗಭೂಮಿಗೆ ಕಲಾವಿದೆಯಾಗಿ ಬಂದದ್ದು ನಟನೆಯನ್ನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಳ್ಳಲು ಅಲ್ಲ. ಹೊಟ್ಟೆಪಾಡಿನ ಸಮಸ್ಯೆಗೆ ಪರಿಹಾರವಾಗಿ ಆಕೆ ರಂಗಭೂಮಿಯನ್ನು ಆಶ್ರಯಿಸಿದಳೇ ವಿನ: ಅದನ್ನು ತನ್ನ ಸಮಸ್ಯೆಗಳ ಹಾಗೂ ಸಂವೇದನೆಯ ಅನಾವರಣಕ್ಕಾಗಿ ಉಪಯೋಗಿಸಿಕೊಳ್ಳಬೇಕೆನ್ನುವ ಘನ ಉದ್ದೇಶ ಅವಳದಾಗಿರಲಿಲ್ಲ. ಈ ಕಾರಣದಿಂದಾಗಿ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಹಾಗೂ ಕೆಳಸಮುದಾಯಗಳ ಮಹಿಳೆಯರೇ ಪ್ರಾರಂಭದ ದಿನಗಳಲ್ಲಿ ರಂಗಭೂಮಿಯನ್ನು ಪ್ರವೇಶಿಸಿದರು. ಈ ಕಾರಣದಿಂದಾಗಿ ಆ ದಿನಗಳಲ್ಲಿನ ಮಹಿಳಾ ಕಲಾವಿದೆಯರ ಅಭಿನಯ ನಾಟಕದ ಮಧ್ಯದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹಾಡು ಮತ್ತು ಕುಣಿತಕ್ಕಷ್ಟೇ ಸೀಮಿತವಾಗಿತ್ತು. ಇದು ಪ್ರೇಕ್ಷಕರನ್ನು ರಂಗಭೂಮಿಯತ್ತ ಸೆಳೆಯುವ ನಾಟಕ ಕಂಪನಿಗಳ ಮಾಲೀಕರ ತಂತ್ರವೂ ಆಗಿತ್ತು. ಪುರುಷ ಕಲಾವಿದರೇ ಸ್ತ್ರೀ ಪಾತ್ರಗಳಲ್ಲೂ ಅಭಿನಯಿಸುತ್ತಿದ್ದುದ್ದರಿಂದ ಮಹಿಳಾ ಕಲಾವಿದರ ಅಭಿನಯವನ್ನು ರಂಗಭೂಮಿ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಹಾಡು, ಕುಣಿತದಿಂದ ನಾಟಕದ ಮುಖ್ಯ ಪಾತ್ರಗಳಿಗೆ ಮಹಿಳಾ ಕಲಾವಿದರು ಬಡ್ತಿ ಪಡೆದರಾದರೂ ಅವರು ಪುರುಷ ಪ್ರಧಾನ ನಾಟಕಗಳಲ್ಲೇ ಅಭಿನಯಿಸಬೇಕಾಯಿತು. ಇಂಥ ವೈಪರಿತ್ಯಗಳ ನಡುವೆಯೂ ಚಿಂದೋಡಿ ಲೀಲಾ, ಮಾಲತಿ ಸುಧೀರ ಅವರಂಥ ಕೆಲ ನಟಿಯರು ಅಭಿನಯದೊಂದಿಗೆ ನಾಟಕ ಕಂಪನಿಗಳ ಮಾಲೀಕರಾಗುವಷ್ಟು ಎತ್ತರಕ್ಕೆರಿದ್ದೇ ಬಹುದೊಡ್ಡ ಸಾಧನೆ ಎನ್ನಬಹುದು. ಮಹಿಳಾ ಕಲಾವಿದೆಯರನ್ನು ರಂಗಭೂಮಿಯಲ್ಲಿ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದೆ ವಿದ್ಯಾವಂತ ಮಹಿಳೆಯರು ರಂಗಭೂಮಿಯನ್ನು ಪ್ರವೇಶಿಸಲು ತೊಡಕಾಗಿ ಪರಿಣಮಿಸಿತು. ನಂತರದ ದಿನಗಳಲ್ಲಿ ಹವ್ಯಾಸಿ ನಾಟಕಗಳ ಮೂಲಕ ವಿದ್ಯಾವಂತ ಮಹಿಳೆಯರು ಅಭಿನಯದಲ್ಲಿ ತಮ್ಮ ಅಸ್ಮಿತೆಯ ಹುಡುಕಾಟಕ್ಕೆ ತೊಡಗಿ ಯಶಸ್ವಿಯಾದರು.

            ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ನಾಟಕಗಳಲ್ಲಿ ಅಭಿನಯದ ತರಬೇತಿ ಪಡೆದ ಮಹಿಳಾ ಕಲಾವಿದೆಯರು ಸಿನಿಮಾ ಮಾಧ್ಯಮಕ್ಕೂ ಕಾಲಿಟ್ಟು ಹೆಸರು ಮತ್ತು  ಹಣ  ಸಂಪಾದಿಸಿದರು. ಸಿನಿಮಾ ನಿರ್ಮಾಣದ ಪ್ರಾರಂಭದ ದಿನಗಳಲ್ಲಿ ನಾಯಕ ಪ್ರಧಾನ ಸಿನಿಮಾಗಳಿಗೆ ಮಾತ್ರ ಮಹಿಳಾ ಕಲಾವಿದರ ಅಭಿನಯ ಸೀಮಿತವಾಗಿದ್ದರೂ ನಂತರದ ದಿನಗಳಲ್ಲಿ ನಾಯಕಿ ಪ್ರಧಾನ ಸಿನಿಮಾಗಳೂ ನಿರ್ಮಾಣಗೊಳ್ಳತೊಡಗಿದವು. ಅನೇಕ ಕಲಾವಿದೆಯರು ಮಹಿಳಾ ಪ್ರಧಾನ ಸಿನಿಮಾಗಳಿಗೆ ತಮ್ಮ ಅಭಿನಯದ ಮೂಲಕ ಜೀವತುಂಬಿದರು. ಮಲ್ಲಮ್ಮನ ಪವಾಡ, ಕಿತ್ತೂರು ರಾಣಿ ಚೆನ್ನಮ್ಮ, ಶರಪಂಜರ, ಇಬ್ಬನಿ ಕರಗಿತು, ಗೆಜ್ಜೆಪೂಜೆ ಯಂಥ ಸಿನಿಮಾಗಳ ಮೂಲಕ ಹೆಣ್ಣಿನ ಸಂಕಟ ಹಾಗೂ ಒಳತೋಟಿಗಳು ಸಶಕ್ತವಾಗಿ ಬೆಳ್ಳಿಪರದೆಯ ಮೇಲೆ ಮೂಡಿ ಪ್ರೇಕ್ಷಕ ವರ್ಗವನ್ನು ತಲುಪಲು ಸಾಧ್ಯವಾಯಿತು. ಮಹಿಳಾ ಪ್ರಧಾನ ಸಿನಿಮಾಗಳನ್ನು ಕನ್ನಡ ಸಿನಿಮಾ ರಂಗದಲ್ಲಿ ತಯ್ಯಾರಿಸಿದ್ದು ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್, ಕೆ ವಿ ಜಯರಾಂ ಅವರಂಥ ಪುರುಷ ನಿರ್ದೇಶಕರು ಎನ್ನುವುದು ಗಮನಾರ್ಹವಾದ ಸಂಗತಿ. ಮಹಿಳೆಯರೇ ನಿರ್ದೇಶಕಿಯಾಗಿ ಮಹಿಳಾ ಪ್ರಧಾನ ಸಿನಿಮಾಗಳನ್ನು ತಯ್ಯಾರಿಸಿದಲ್ಲಿ ಸ್ತ್ರೀ ಸಂವೇದನೆಯನ್ನು ಇನ್ನಷ್ಟು ಸಶಕ್ತವಾಗಿ ಅನಾವರಣಗೊಳಿಸಲು ಸಾಧ್ಯವಾಗುತ್ತಿತ್ತು. ಆದರೆ ನೂರು ವರ್ಷಗಳ ಇತಿಹಾಸವಿರುವ ಸಾವಿರಾರು ಸಿನಿಮಾಗಳು ನಿರ್ಮಾಣಗೊಂಡಿರುವ ಇಲ್ಲಿ ಮಹಿಳೆ ಸಿನಿಮಾ ನಿರ್ದೇಶನವನ್ನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡಿದ್ದು ತೀರ ಕಡಿಮೆ.

          ಇನ್ನೊಂದು ಚರ್ಚಿಸಲೇ ಬೇಕಾದ ಮುಖ್ಯ ಸಂಗತಿ ಎಂದರೆ ನಮ್ಮ ಕನ್ನಡ ಸಿನಿಮಾಗಳಲ್ಲಿ ಮುಸ್ಲಿಂ ಮತ್ತು ದಲಿತ ಮಹಿಳೆ ಅವಳು ಅನುಭವಿಸುತ್ತಿರುವ ಸಮಸ್ಯೆಗಳೊಂದಿಗೆ ಚಿತ್ರಿತವಾಗಿರುವುದು ತೀರ ಕಡಿಮೆ. ಈ ಮಾತನ್ನು ನಾವು ಇತರ ವರ್ಗಗಳ ಮಹಿಳೆಯರ ಸಮಸ್ಯೆಗಳಿಗೂ ಅನ್ವಯಿಸಿ ಹೇಳಬಹುದು. ಹೀಗೆ ಹೇಳುವಾಗ ಮಹಿಳೆ ಅನುಭವಿಸುತ್ತಿರುವ ಸಮಸ್ಯೆಗಳು ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಬೇರೆ ಬೇರೆಯಾಗಿವೆ ಎನ್ನುವುದನ್ನೂ ನಾವು ಗಮನಿಸಬೇಕು. ಫಣಿಯಮ್ಮ ಸಿನಿಮಾವೊಂದೇ ಎಲ್ಲ ವರ್ಗದ ಮಹಿಳೆಯರನ್ನು ಪ್ರತಿನಿಧಿಸಲಾರದು. ನಮ್ಮದು ವಿಭಿನ್ನ ಜಾತಿ ಸಮುದಾಯಗಳ ಸಮಾಜವಾಗಿರುವುದರಿಂದ ಇಡೀ ಮಹಿಳಾ ಸಮುದಾಯದ ಸಮಸ್ಯೆಗಳನ್ನು ಚಿತ್ರಿಸುವಲ್ಲಿ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸೋತಿದೆ ಎನ್ನುವ ಸಂಗತಿಯನ್ನು ನಮ್ಮ ಮಹಿಳಾ ಕಲಾವಿದರು ಅರ್ಥಮಾಡಿಕೊಂಡಿಲ್ಲ.

            ಆಗಾಗ ಮಹಿಳೆಯರು ರಾಜಕಾರಣ ಮತ್ತು ಹೋರಾಟಗಳಲ್ಲೂ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಪ್ರಯತ್ನ ಮಾಡಿದ ಅನೇಕ ಉದಾಹರಣೆಗಳಿವೆ. ರಾಜಕಾರಣದ ವಿಷಯ ಬಂದಾಗ ನಾಗರತ್ನಮ್ಮ, ಬಸವರಾಜೇಶ್ವರಿ, ಚಂದ್ರಪ್ರಭ ಅರಸು ಲೀಲಾದೇವಿ ಪ್ರಸಾದ  ಇತ್ಯಾದಿ ಮಹಿಳಾ ನಾಯಕಿಯರು ರಾಜ್ಯದ ಮಂತ್ರಿಗಳಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಆದರೂ ಕರ್ನಾಟಕದಲ್ಲಿ ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ ಅವರಂಥ ಇಡೀ ಪಕ್ಷ   ಹಾಗೂ ಸರ್ಕಾರವನ್ನು ನಿಯಂತ್ರಿಸುವ ಧಾಡಸೀತನದ ಮಹಿಳಾ ರಾಜಕಾರಣಿಗಳು ಕಾಣಿಸಿಕೊಳ್ಳಲೇ ಇಲ್ಲ. ಮಹಿಳಾ ಮೀಸಲಾತಿಯ ಮೂಲಕ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡಲಾಗಿದೆಯಾದರೂ ಅಲ್ಲಿ ಅಧಿಕಾರ ನಡೆಸುವವರೆಲ್ಲ ಪುರುಷರೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇನ್ನು ಹೋರಾಟದ ವಿಷಯಕ್ಕೆ ಬಂದರೆ ಇಲ್ಲಿ ಮೇಧಾ ಪಾಟ್ಕರ್ ಅವರಂಥ ಹೋರಾಟಗಾರ್ತಿ ರೂಪುಗೊಳ್ಳಲೇ ಇಲ್ಲ. ಹೋರಾಟ ಮತ್ತು ಚಳವಳಿಯ ಇತಿಹಾಸವನ್ನು ಬಗೆದು ನೋಡಿದಾಗ ಶಾಂತವೇರಿ ಗೋಪಾಲಗೌಡರು, ಗಣಪತಿಯಪ್ಪನವರು, ನಂಜುಂಡ ಸ್ವಾಮಿ, ಕಡಿದಾಳು ಶಾಮಣ್ಣ ಅವರ ಹೆಸರುಗಳ ಸಾಲಿನಲ್ಲಿ ನಿಲ್ಲುವಂಥ ಒಬ್ಬ ಮಹಿಳಾ ಹೋರಾಟಗಾರ್ತಿಯ ಹೆಸರೂ ಸಿಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವು ಲೇಖಕಿಯರು ಹೋರಾಟದ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿರುವರಾದರೂ ಎಡ ಬಲ ಎನ್ನುವ ಸಿದ್ಧಾಂತಗಳು ಅವರನ್ನು ತಪ್ಪು ದಾರಿಗೆ ಎಳೆಯುತ್ತಿವೆ.

           ಒಟ್ಟಿನಲ್ಲಿ ಮಹಿಳೆ ತನ್ನೊಳಗಿನ ಸಂವೇದನೆಯನ್ನು ಅಭಿವ್ಯಕ್ತಗೊಳಿಸಲು ವಿವಿಧ ನೆಲೆಗಳಲ್ಲಿ ಪ್ರಯತ್ನಿಸಿದಳಾದರೂ ಆಕೆ ಬರವಣಿಗೆ ಮಾಧ್ಯಮವನ್ನು ಸಶಕ್ತವಾಗಿ ಮತ್ತು ಸಮರ್ಥವಾಗಿ ಬಳಸಿಕೊಂಡಷ್ಟು ಬೇರೆ ಮಾಧ್ಯಮಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವಲ್ಲಿ ವಿಫಲಳಾಗಿರುವಳು. ಇದಕ್ಕೆಲ್ಲ ಪುರುಷ ಪ್ರಧಾನ ವ್ಯವಸ್ಥೆ ಸೂಕ್ತ ಅವಕಾಶ ನೀಡದೆ ಇರುವುದು ಒಂದು ಕಾರಣವಾದರೆ ಇನ್ನೊಂದು ಬರವಣಿಗೆ ಹೊರತಾಗಿ ಬೇರೆ ನೆಲೆಗಳಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಲು ತಾನು ದುರ್ಬಲಳು ಎನ್ನುವ ಭಾವನೆ ಅವಳದಾಗಿರಬಹುದು.

            ಸಿಂಡ್ರೆಲಾ ಇದು ನಮಗೆಲ್ಲ ಗೊತ್ತಿರುವ ಕಥೆ. ಸುಂದರಿಯೂ ಮತ್ತು ಮುಗ್ಧಳೂ ಆದ ಸಿಂಡ್ರೆಲಾಳದು ಅತ್ಯಂತ ಸಂಕಷ್ಟದ ಬದುಕು. ಅವಳಿಗೆ ಕಷ್ಟಕೊಡಲೆಂದೇ ಮನೆಯಲ್ಲಿ ರಾಕ್ಷಸ ರೂಪದ ಮಲತಾಯಿ ಹಾಗೂ ಮಲ ಸಹೋದರಿಯರಿದ್ದಾರೆ. ಮನೆಯ ಮಗಳಾದರೂ ಅವಳದು ಆಳಿನ ದುಡಿಮೆ. ಅದೊಂದು ದಿನ ರಾಜಕುಮಾರ ಊರಿನವರಿಗಾಗಿ ಔತಣಕೂಟವನ್ನು ಏರ್ಪಡಿಸಿದ್ದಾನೆ. ತನ್ನಿಬ್ಬರು ಮಕ್ಕಳೊಂದಿಗೆ ಔತಣಕೂಟಕ್ಕೆ ಹೊರಡುವ ಮಲತಾಯಿ ಸಿಂಡ್ರೆಲಾಳನ್ನು ಜೊತೆಗೆ ಕರೆದೊಯ್ಯುವುದಿಲ್ಲ. ಸಿಂಡ್ರೆಲಾಳ ಪ್ರಾರ್ಥನೆಗೆ ಪ್ರತ್ಯಕ್ಷನಾಗುವ ದೇವರು ಆಕೆಯನ್ನು ಶೃಂಗರಿಸಿ ಪುಷ್ಪಕ ವಿಮಾನದಲ್ಲಿ ರಾಜಕುಮಾರನ ಅರಮನೆಗೆ ಕರೆದೊಯ್ಯುತ್ತಾನೆ. ಸಿಂಡ್ರೆಲಾಳ ಸೌಂದರ್ಯ ಹಾಗೂ ಮುಗ್ಧತೆಗೆ ಮಾರುಹೋಗುವ ರಾಜಕುಮಾರ ಅವಳನ್ನು ಎಲ್ಲ ಸಂಕಷ್ಟಗಳಿಂದ ಪಾರುಮಾಡಿ ಮದುವೆಯಾಗುವುದರೊಂದಿಗೆ ಆಕೆಯ ಬದುಕಿನ ಕಥೆ ಸುಖಾಂತ್ಯಗೊಳ್ಳುತ್ತದೆ. ಸಿಂಡ್ರೆಲಾಳದು ಮಹಿಳೆಯರಿಂದ ಶೋಷಣೆಗೆ ಒಳಗಾಗುವ ಪಾತ್ರ ಮತ್ತು ಆಕೆಯನ್ನು ಶೋಷಣೆಯಿಂದ ಮುಕ್ತಿಗೊಳಿಸಿ ಅವಳಿಗೊಂದು ಸುಖದ ಬಾಳು ನೀಡುವವನು ಪುರುಷನಾದ ರಾಜಕುಮಾರ. ಮಹಿಳೆ ಮಹಿಳೆಯಿಂದಲೇ ಶೋಷಣೆಗೆ ಒಳಗಾಗುತ್ತಿರುವುದು ಮತ್ತು ಆ ಒಂದು ಶೋಷಣೆಯಿಂದ ಹೊರಬರಲು ಪುರುಷನನ್ನಾಶ್ರಯಿಸುತ್ತಿರುವುದು ವ್ಯಂಗ್ಯವಾದರೂ ಸತ್ಯ. ಆದರೆ ಮಹಿಳೆ ಪರಾವಲಂಬನೆಯಿಂದ ಹೊರಬಂದು ತನ್ನ ಅಸ್ತಿತ್ವದ ನೆಲೆಯನ್ನು ಇನ್ನೂ ವಿಸ್ತರಿಸಿಕೊಳ್ಳಬೇಕಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

    

Monday, June 1, 2015

ಪೀಕೂ: ಅಪ್ಪ ಮಗಳ ಬಾಂಧವ್ಯದ ಕಥನ





          ಪೀಕೂ ಸಿನಿಮಾ ವೀಕ್ಷಣೆಯಿಂದ ಬಹಳ  ದಿನಗಳ ನಂತರ ಒಂದು ಒಳ್ಳೆಯ ಸಿನಿಮಾ ನೋಡಿದ ಅನುಭವವಾಯಿತು. ಹಾಡು ಹೊಡೆದಾಟಗಳಿಗೆ  ಸೀಮಿತವಾಗುತ್ತಿರುವ   ಇತ್ತೀಚಿನ ಸಿನಿಮಾಗಳ ನಡುವೆ ಪೀಕೂ ವಿಶಿಷ್ಠ ಕತೆಯಿಂದ ಒಂದು ಸದಭಿರುಚಿಯ ಸಿನಿಮಾ ಎನ್ನಬಹುದು. ಹಾಡು ಮತ್ತು ಹೊಡೆದಾಟಗಳಿಲ್ಲದೆ ಸಿನಿಮಾ ನಿರ್ಮಾಣ ಮಾಡುವುದು ಅಸಾಧ್ಯ ಎನ್ನುವ ವಾತಾವರಣ ಸ್ಥಾಪಿತವಾಗಿರುವ ಹಿನ್ನೆಲೆಯಲ್ಲಿ ಕೇವಲ ಕಥೆ ಮತ್ತು ಕಲಾವಿದರ ಅಭಿನಯವನ್ನೇ ನೆಚ್ಚಿಕೊಂಡು ಸಿನಿಮಾ ಮಾಡುವುದು ಅದು ನಿರ್ದೆಶಕನಿಗೂ ನಿಜಕ್ಕೂ ಸವಾಲಿನ ಕೆಲಸ. ಜೊತೆಗೆ ಪೀಕೂ ಸಿನಿಮಾದ ಕಥಾವಸ್ತು ಸಹ ಅಷ್ಟೇನೂ ಸಂಕೀರ್ಣವಾದದ್ದಲ್ಲ. ಮಲಬದ್ಧತೆಯಂಥ ಸಣ್ಣ ಮತ್ತು ಈ ವಿಷಯವಾಗಿ ಬೇರೆಯವರೊಂದಿಗೆ ಮಾತನಾಡಲು ಹಿಂಜರಿಯುವಂಥ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆದ ನಿರ್ದೇಶಕನ ಜಾಣ್ಮೆ ಮೆಚ್ಚಲೇ ಬೇಕು. ಆದರೆ ದೈಹಿಕ ಸಮಸ್ಯೆಯನ್ನು ಮನುಷ್ಯ ಸಂಬಂಧಗಳಿಗೆ ತಳುಕು ಹಾಕುವ ನಿರ್ದೇಶಕ ನೇರವಾಗಿ ಕೈಹಾಕುವುದು ಪ್ರೇಕ್ಷಕರ ಮನಸ್ಸುಗಳಿಗೆ. ಇಲ್ಲೇ ನಿರ್ದೇಶಕ ಗೆಲುವು ಸಾಧಿಸುವುದು. ಒಂದರ್ಥದಲ್ಲಿ ಇದು ಹೀರೋ ಹೀರೋಯಿನ್ ಗಳ ಸಿನಿಮಾ ಎನ್ನುವುದಕ್ಕಿಂತ ಇದೊಂದು ನಿರ್ದೇಶಕನ ಸಿನಿಮಾ. ನಾಯಕ ಪ್ರಧಾನ ಸಿನಿಮಾಗಳೇ ಹೆಚ್ಚು ಹೆಚ್ಚು ನಿರ್ಮಾಣವಾಗುತ್ತಿರುವ ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕನ ಸಿನಿಮಾವೊಂದು ನಿರ್ಮಾಣಗೊಂಡಿರುವುದು ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. 

           ಇನ್ನು ಪೀಕೂ ಸಿನಿಮಾದ ಕಥೆಯ ಕುರಿತು ಹೇಳುವುದಾದರೆ ಅದು ಹೀಗಿದೆ, ತನ್ನ ಮಗಳು ಪೀಕೂವಿನೊಂದಿಗೆ ವಾಸಿಸುತ್ತಿರುವ ಭಾಸ್ಕೊರ್ ಬ್ಯಾನರ್ಜಿಗೆ (ಆತ ಕೊಲಕತ್ತಾ ಮೂಲದವನು) ಚಿಕ್ಕ ವಯಸ್ಸಿನಿಂದಲೇ ಮಲಬದ್ಧತೆಯ ಸಮಸ್ಯೆ ಇದೆ. ಆ ಒಂದು ಸಮಸ್ಯೆಯನ್ನೇ ಕುರಿತು ಯಾವ ಸಂಕೋಚವೂ ಇಲ್ಲದೆ ಆತ ಎಲ್ಲರೊಡನೆ ಚರ್ಚಿಸಬಲ್ಲ . ದಿನಕ್ಕೆ ಎಷ್ಟು ಸಲ ಮಲವಿಸರ್ಜನೆಗೆ ಹೋದೆ, ಪ್ರತಿಸಾರಿ ಹೇಗಾಯಿತು ಎನ್ನುವುದನ್ನು ಆತ ವಿವರವಾಗಿ ತನ್ನ ಮಗಳಿಗೆ ಮತ್ತು ಕುಟುಂಬದ ವೈದ್ಯರಿಗೆ ಹೇಳುತ್ತಿರುತ್ತಾನೆ. ತನ್ನ ಆರೋಗ್ಯದ ಏರು ಪೇರುಗಳ ಬಗ್ಗೆ ಆತನಿಗೆ ಸದಾ ಎಚ್ಚರಿಕೆ. ಇದೇ ವಿಷಯವಾಗಿ ಅಪ್ಪ ಮತ್ತು ಮಗಳ ನಡುವೆ ಭಾರೀ ಜಗಳ. ದಿನಕ್ಕೆ ಏನಿಲ್ಲವೆಂದರೂ ಹತ್ತಾರು ಬಾರಿ ಅವರು ಜಗಳವಾಡುತ್ತಾರೆ. ಮಗಳು ತನ್ನನ್ನು ನಿರ್ಲಕ್ಷಿಸಬಾರದು ಎನ್ನುವುದು ಅಪ್ಪನ ಇರಾದೆಯಾದರೆ ಅಪ್ಪನಿಗಾಗಿ ತಾನು ತ್ಯಾಗ ಮಾಡುತ್ತಿದ್ದೇನೆ ಎನ್ನುವ ಭಾವನೆ ಮಗಳದು. ಕಣ್ಣೀರು ತರಿಸುವ ತೀರ ಭಾವನಾತ್ಮಕ ಸನ್ನಿವೇಶಗಳೇನೂ ಈ ಸಿನಿಮಾದಲ್ಲಿಲ್ಲ. ಆದರೆ ಅಪ್ಪ ಮತ್ತು ಮಗಳ ನಡುವಣ ಬಾಂಧವ್ಯವೇ ಸಿನಿಮಾದ ಹೈಲೇಟ್. 

         ಮಲಬದ್ಧತೆಯ ಸಮಸ್ಯೆಯ ಜೊತೆಗೆ ಆತನಿಗಿರುವ ಇನ್ನೊಂದು ಸಮಸ್ಯೆ ಎಂದರೆ ಭಾಸ್ಕೊರ್ ಬ್ಯಾನರ್ಜಿ ತೀರ ವಾಚಾಳಿ. ಯಾವದಾದರೊಂದು ವಿಷಯದ ಕುರಿತು ಆತ ಮಾತನಾಡತೊಡಗಿದರೆ ಎದುರಿನವರಿಗೆ ತಲೆ ಚಿಟ್ಟು ಹಿಡಿಯುತ್ತದೆ. ವಾಚಾಳಿತನದೊಂದಿಗೆ ಆತ ಮಹಾ ಜಗಳಗಂಟ. ಬಾತ್ ರೂಮ್ ಸ್ವಚ್ಛಗೊಳಿಸಲಿಲ್ಲವೆಂದು ಆತ ಮನೆಯ ಕೆಲಸದಾಕೆಯೊಂದಿಗೂ ಜಗಳಕ್ಕೆ ನಿಲ್ಲಬಲ್ಲ. ಅಕ್ಕಪಕ್ಕದ ಮನೆಯವರ ಪ್ರಶ್ನೆಗಳಿಗೂ  ವ್ಯಂಗ್ಯವೇ ಅವನ ಉತ್ತರ. ತಾನು ಸಾಯುವವರೆಗೂ ಮಗಳು ತನ್ನ ಸೇವೆ ಮಾಡಬೇಕೆನ್ನುವ ಹಠಮಾರಿ ಆತ. ಅದಕ್ಕೆಂದೇ ಮಗಳನ್ನು  ಮದುವೆ ಮಾಡಿ  ಕಳುಹಿಸಲು ಆತನಿಗೆ ಸುತಾರಾಂ ಇಷ್ಟವಿಲ್ಲ. ಮದುವೆಯನ್ನು ತಪ್ಪಿಸಲು ತನ್ನ ಮಗಳು ಕನ್ಯೆಯಾಗಿ ಉಳಿದಿಲ್ಲ ಎಂದು ಹೇಳಲೂ ಆತ ಹಿಂಜರಿಯಲಾರ. ಮಗಳು ಮಗುವಾಗಿದ್ದಾಗ ಅವಳನ್ನು ನೋಡಿಕೊಂಡ ಆಕೆಗೆ ಈಗ ನಾನೇ ಮಗು ಎನ್ನುವ ಭಾವನೆ ಅವನದು.

             ಕೆಲಸ ಮಾಡುತ್ತ ಅಪ್ಪನನ್ನು ನೋಡಿಕೊಳ್ಳುತ್ತಿರುವ ಪೀಕೂಗೆ ಕೆಲಸದ ಸ್ಥಳದಲ್ಲೂ ಅಪ್ಪನ ವರ್ತನೆಯಿಂದ ಮುಜುಗರ ಪಡುವ ಸ್ಥಿತಿ. ಅಪ್ಪನ ಮಲಬದ್ಧತೆಯ ವಿಷಯ ಪೀಕೂ ಕೆಲಸ ಮಾಡುತ್ತಿರುವ ಕಂಪನಿಯಲ್ಲೂ ಚರ್ಚೆಯ ವಿಷಯ. ಒಮ್ಮೊಮ್ಮೆ ತಾನು ಮಾಡುತ್ತಿರುವ ಕೆಲಸವನ್ನು ಅರ್ಧಕ್ಕೆ ಬಿಟ್ಟು ಮಗಳು ತನ್ನ ಆರೋಗ್ಯ ವಿಚಾರಿಸಲು ಬರಬೇಕೆನ್ನುವ ಅಪ್ಪನ ಸ್ವಾರ್ಥ ಪೀಕೂಗೆ ಅನೇಕ ಸಂದರ್ಭಗಳಲ್ಲಿ ಪೇಚಿಗೆ ಸಿಲುಕಿಸುತ್ತದೆ. ಅದೊಂದು ದಿನ ಕೊಲಕತ್ತಾಗೆ ಹೊರಟು ನಿಲ್ಲುವ ಅಪ್ಪನಿಗಾಗಿ ಮಗಳು ಪೀಕೂ ತನ್ನ ಕೆಲಸವನ್ನು ಬಿಟ್ಟು ಅಪ್ಪನೊಂದಿಗೆ ಜೊತೆಯಾಗುತ್ತಾಳೆ. ಕಾರ್ ಬಾಡಿಗೆ ಪಡೆದು ಹೋಗಬೇಕೆನ್ನುವ ಅಪ್ಪನ ಹಟದ ಎದುರು ಸೋಲುವ ಮಗಳು ಕಾರ್ ಬಾಡಿಗೆಗೆ ಗೊತ್ತು ಮಾಡುತ್ತಾಳೆ. ಡ್ರೈವರ್ ಗಳಿಲ್ಲದೆ ಟ್ಯಾಕ್ಸಿ ಮಾಲೀಕ ರಾಣಾ ಚೌಧರಿ ತಾನೇ ಡ್ರೈವರ್ ಆಗಿ ಬರುವುದುರೊಂದಿಗೆ ಕಥೆ ಮತ್ತಷ್ಟು ರಂಜನೀಯವಾಗುತ್ತದೆ. ಸಿನಿಮಾದ ಕಥೆ ಬಹುಮುಖ್ಯ ತಿರುವು ಪಡೆಯುವುದು ಇಲ್ಲಿಂದಲೇ.  ರಾಣಾ ಚೌಧರಿಗೆ ಅಪ್ಪ ಮಗಳ ಈ ಸಂಬಂಧ ವಿಚಿತ್ರವಾಗಿ ಕಾಣಿಸುತ್ತದೆ. ಒಮ್ಮೊಮ್ಮೆ ಪೀಕೂ ಬ್ಯಾನರ್ಜಿಯ ಮಗಳಲ್ಲವೇನೋ ಎನ್ನುವ ಅನುಮಾನ ಆತನನ್ನು ಕಾಡುತ್ತದೆ. ಅದನ್ನು ಆತ ನೇರವಾಗಿ ಪೀಕೂಗೆ ಕೇಳಿ ತನ್ನ ಅನುಮಾನವನ್ನು ಪರಿಹರಿಸಿಕೊಳ್ಳುತ್ತಾನೆ. ಜೊತೆಗೆ ಬ್ಯಾನರ್ಜಿಯ ಮಲಬದ್ಧತೆಯ ಸಮಸ್ಯೆಗೆ ರಾಣಾ ಹಲವು ಸಲಹೆಗಳನ್ನು ಕೂಡ ನೀಡುತ್ತಾನೆ. ರಸ್ತೆಯ ಮೇಲೆ ಅಪ್ಪ ಮಗಳು ಮತ್ತು ರಾಣಾ ಜಗಳವಾಡುತ್ತಲೇ ಕೊಲಕತ್ತಾ ತಲಪುತ್ತಾರೆ. ಅಲ್ಲಿ ಹೋದ ಕೆಲ ದಿನಗಳಲ್ಲೇ ಒಂದು ದಿನ ತನ್ನ ಮಲಬದ್ಧತೆಯ ಸಮಸ್ಯೆಯಿಂದ ಹೊರಬರುವ ರಾಣಾ ಅದೇ ರಾತ್ರಿ ಸುಖದ ಸಾವನ್ನು ಕಾಣುತ್ತಾನೆ. ಪೀಕೂಗೆ ಅಪ್ಪನ ಸಾವು ಆಘಾತ ತಂದರೂ ಆತ ಬದುಕಿನ ಕೊನೆಯ ದಿನವಾದರೂ ನೆಮ್ಮದಿ ಕಂಡ ಎನ್ನುವ ಸಂತಸ ಅವಳಲ್ಲಿದೆ. ಇಲ್ಲಿ ಸ್ವಾರ್ಥವಿದೆ, ಸಣ್ಣತನವಿದೆ, ಜಗಳ ಕಾಯುವ ಮನಸ್ಸುಗಳಿವೆ, ಬೇಸರದಿಂದ ಸಿಡಿಮಿಡಿ ಗುಟ್ಟುವ ನಿಟ್ಟುಸಿರಿದೆ, ಹಠಮಾರಿತನವಿದೆ ಒಟ್ಟಾರೆ ನಮ್ಮಗಳ ಬದುಕಿನ ಅನೇಕ ಸಣ್ಣ ಸಣ್ಣ ಸಂಗತಿಗಳು ಇಲ್ಲಿವೆ. ಆದರೆ ಅವೆಲ್ಲವನ್ನೂ ಮೀರಿದ ಮನುಷ್ಯ ಸಂಬಂಧ ಇಲ್ಲಿದೆ.

                ಅಪ್ಪ- ಮಗಳು, ತಾಯಿ-ಮಗ, ಪತಿ-ಪತ್ನಿ, ಅಣ್ಣ-ತಂಗಿ ಇಂಥ ಸಂಬಂಧಗಳ ಅನೇಕ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ನಿರ್ಮಾಣಗೊಂಡಿವೆಯಾದರೂ ಅಲ್ಲಿ ವಾಸ್ತವಿಕತೆ ಮರೆಯಾಗಿ ಒಣ ಆದರ್ಶವೇ ಮೇಲುಗೈ ಸಾಧಿಸಿದೆ. ಕರಳು ಹಿಂಡುವ, ಕಣ್ಣೀರು ಸುರಿಸುವ ಸನ್ನಿವೇಶಗಳಿಗೆ ಹೆಚ್ಚಿನ ಒತ್ತು ನೀಡಿ ಜನರ ಭಾವಾನೆಗಳನ್ನೇ ಬಂಡವಾಳವಾಗಿಸಿಕೊಂಡು ಕೋಟಿ ಕೋಟಿ ಹಣ ಮಾಡುತ್ತಿರುವ ಸಿನಿಮಾ ರಂಗದಲ್ಲಿ ಪೀಕೂ ಆ ಯಾವ ಗಿಮಿಕ್ ಗಳಿಗೆ ಆಸ್ಪದೆ ಕೊಡದೆ ತನ್ನ ನೇರ ಮತ್ತು ಸರಳ ಕಥಾ ಹಂದರದಿಂದ ಗಮನ ಸೆಳೆಯುತ್ತದೆ.   ಮನುಷ್ಯ   ಸಂಬಂಧಗಳನ್ನು ವ್ಯಾಪಾರಿ ಮನೋಭಾವದಿಂದ ನೋಡುತ್ತಿರುವ ಅವಕಾಶವಾದಿಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಪೀಕೂ ಸಿನಿಮಾದ   ನಿರ್ದೇಶಕ ನಮ್ಮ ಮನಸ್ಸುಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದಾರೆ. ಮನುಷ್ಯ ಸಂಬಂಧವನ್ನು ತೀರ ಆದರ್ಶದ ನೆಲೆಯಲ್ಲಿ ತೋರಿಸಿ ಮನುಷ್ಯರನ್ನು ದೇವತಾ ಸ್ವರೂಪಿಯಾಗಿ ಚಿತ್ರಿಸದೆ ಆ ಎಲ್ಲ ಸಂಬಂಧಗಳನ್ನು ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ತೋರಿಸುವುದರ ಮೂಲಕ ಇಲ್ಲಿ ಮನುಷ್ಯ ಮನುಷ್ಯನಾಗಿಯೇ ಚಿತ್ರಿತವಾಗಿರುವನು. ಕೋಪ ತಾಪ ಜಗಳ ಪ್ರೀತಿ ಪ್ರೇಮ ವಾತ್ಸಲ್ಯಗಳೆಲ್ಲ ಮನುಷ್ಯನ ಸಹಜ ಗುಣಗಳೆನ್ನುವ   ಸಿನಿಮಾ ದ ಮೂಲ ಉದ್ದೇಶ ಜನರನ್ನು ಹೋಗಿ ತಲುಪಬೇಕು ಆಗ ನಿರ್ದೇಶಕನ ಪ್ರಯತ್ನ ಸಾರ್ಥಕವಾದಂತೆ.

      ಇಲ್ಲಿ ವಾಸ್ತವಿಕತೆಗೆ ಒತ್ತು ಕೊಟ್ಟರೂ ನಿರ್ದೇಶಕ ಸಂಬಂಧಗಳ ಮಹತ್ವ ಮತ್ತು ಮಕ್ಕಳ ಜವಾಬ್ದಾರಿಯನ್ನು ಕುರಿತು ಪ್ರೇಕ್ಷಕರನ್ನು ವಿವೇಚಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುವರು. ತ್ಯಾಗದಿಂದಲೇ ಸಂಬಂಧಕ್ಕೊಂದು ಅರ್ಥವಿದೆ ಎನ್ನುವ ಒಣ ವೇದಾಂತ ಇಲ್ಲಿಲ್ಲ. ಸಂಬಂಧಗಳ ನಡುವೆಯೂ ಅಲ್ಲಿ ಸ್ವಾರ್ಥವಿದೆ ಮನಸ್ಸುಗಳನ್ನು ನೋಯಿಸುವ ಕೋಪ ತಾಪಗಳಿವೆ. ಆದರೆ ಅದೆಲ್ಲವನ್ನೂ ಮೀರಿ ಕೊನೆಗೆ ಉಳಿಯುವುದು ಮನುಷ್ಯ ಮನುಷ್ಯರ  ನಡುವಿನ ಸಂಬಂಧ ಮಾತ್ರ ಎನ್ನುವ ಅರಿವು ಪ್ರೇಕ್ಷಕನಿಗಾಗುತ್ತದೆ. ನಿರ್ದೇಶಕರ ಉದ್ದೇಶವೇ ಅದು ಸಂಬಂಧಗಳನ್ನು ವಾಸ್ತವಿಕತೆಯ ಮೂಲಕ ಬೆಸುಗೆ ಹಾಕುವ ಪ್ರಯತ್ನ ಅವರದು. ಭಾವನೆಗಳೇ ಮೇಲುಗೈ ಸಾಧಿಸಿದಾಗ ಅಲ್ಲಿ ಮನುಷ್ಯ ದೇವತಾ ಸ್ವರೂಪಿಯಾಗುತ್ತಾನೆ. ಮನುಷ್ಯ ದೇವರಾದಾಗ ಆತ ಕೋಪ ತಾಪ ಸಿಟ್ಟು ರೋಷಗಳಿಂದ ಮುಕ್ತನಾಗಿ ವರ ಕೊಡುವ ಕಾಮಧೇನುವಾಗುತ್ತಾನೆ. ಹೀಗೆ ಮನುಷ್ಯ ದೇವತಾ ಸ್ವರೂಪಿಯಾದಾಗ ಅಲ್ಲಿ ಸಂಬಂಧಗಳ ನಡುವೆ ಬಹುದೊಡ್ಡ ಕಂದಕ ನಿರ್ಮಾಣವಾಗಿ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಮನುಷ್ಯ ಸ್ವಾರ್ಥಿಯಾದಾಗ ಮಾತ್ರ ಸಂಬಂಧಗಳನ್ನು ಹುಡುಕಿ ಹೊರಡುತ್ತಾನೆ. ಹೀಗೆ ಸಂಬಂಧಗಳನ್ನು ಹುಡುಕಿ ಹೊರಟಾಗಲೇ ಆತನಿಗೆ ಸಂಬಂಧಗಳ ಮಹತ್ವದ ಅರಿವಾಗಿ ಆತ ಅವುಗಳೆದುರು ಸೋಲುತ್ತಾನೆ. ಮನುಷ್ಯನ ಸೋಲೇ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲು ಕಾರಣವಾಗುತ್ತದೆ.

    ಸಿನಿಮಾವೊಂದರ ಸಂದೇಶ ಹೆಚ್ಚು ಜನರನ್ನು ಹೋಗಿ ತಲುಪುವುದು ಮತ್ತು ಅದು ಅನೇಕ ದಿನಗಳವರೆಗೆ ನೆನಪಿನಲ್ಲುಳಿಯುವುದು ಪೀಕೂ ವಿನಂಥ ಸಿನಿಮಾಗಳಿಂದ ಮಾತ್ರ ಸಾಧ್ಯ. ಒಂದೆಡೆ ಹೊಡೆದಾಟ ರಕ್ತಪಾತಗಳಂಥ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದರೆ ಇನ್ನೊಂದೆಡೆ ಮನುಷ್ಯ ಸಂಬಂಧಗಳನ್ನು ತೀರ ವೈಭವಿಕರಿಸುತ್ತಿರುವ ಸಿನಿಮಾಗಳು. ಈ ನಡುವೆ ಕೆಲ ನಾಯಕ ನಟರು ಹಾಸ್ಯಪ್ರಧಾನ ಕಥಾವಸ್ತುವಿನ ಸಿನಿಮಾಗಳಲ್ಲಿ ನಟಿಸುತ್ತ ಜನರಿಗೆ ಮನರಂಜನೆ ನೀಡುತ್ತಿರುವರು. ಹೀಗಾಗಿ ಇಲ್ಲಿ ಕಥೆಯೇ ಇಲ್ಲದ ಸಿನಿಮಾಗಳು ಮತ್ತು ಕಥೆಯಿದ್ದೂ ತೀರ ಡ್ರಾಮಾಟಿಕ್ ಆಗಿ ಚಿತ್ರಿತವಾಗುತ್ತಿರುವ ಸಿನಿಮಾಗಳು ಎನ್ನುವ ಎರಡು ವರ್ಗಗಳಿವೆ. ಈ ಎರಡೂ ವರ್ಗದ ಸಿನಿಮಾಗಳು ಪ್ರೇಕ್ಷಕರ ಮನ್ನಣೆ ಮತ್ತು ಜನಾದಾರಕ್ಕೆ ಪಾತ್ರವಾಗುತ್ತಿದ್ದರೂ ಅವುಗಳು  ಸಮಾಜಕ್ಕೊಂದು ಸಂದೇಶ ನೀಡುವಲ್ಲಿ ಎಡುವುತ್ತಿವೆ. ಈ ದೃಷ್ಟಿಯಿಂದ ಪೀಕೂ ಸಿನಿಮಾವನ್ನು ಮೂರನೆಯ ವರ್ಗಕ್ಕೆ ಸೇರಿದ ಸಿನಿಮಾ ಎಂದು ಪರಿಗಣಿಸಬಹುದು. ಆ ಮೂರನೆ ವರ್ಗದ ಸಿನಿಮಾವನ್ನೇ  ನಾವೆಲ್ಲ ಕಲಾತ್ಮಕ ಸಿನಿಮಾ ಎನ್ನುವ ಹಣೆಪಟ್ಟಿ ಕಟ್ಟಿ ನಿರ್ಲಕ್ಷಿಸುತ್ತಿದ್ದೇವೆ. ಒಂದು ವೇಳೆ ಅಮಿತಾಭ್, ದೀಪಿಕಾ ರಂಥ ಜನಪ್ರಿಯ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸದೇ ಹೋಗಿದ್ದರೆ ಪೀಕೂ ಕೂಡ ಕಲಾತ್ಮಕ ಸಿನಿಮಾ ಎನ್ನುವ ನಿರ್ಲಕ್ಷಕ್ಕೆ ಒಳಗಾಗುವ ಅಪಾಯವಿತ್ತು.

                ಇಲ್ಲಿ ಅಮಿತಾಭ್ ಬಚ್ಚನ್ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕು. ನಾಯಕ ನಟನಿಂದ ಆತ ನಿವೃತ್ತಿ ಪಡೆದು ಪೋಷಕ ಪಾತ್ರಗಳ ನಟನೆಯತ್ತ ಹೊರಳಿದ ನಂತರ ಈ ಕಲಾವಿದನಿಗೆ  ಅನೇಕ ಚಾರಿತ್ರಿಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ನಟನೋರ್ವ ಕಲಾವಿದನಾಗಿ ರೂಪುಗೊಳ್ಳುವುದೇ ಆತ ವಿಭಿನ್ನ ಪಾತ್ರಗಳಲ್ಲಿ ನಟಿಸಿದಾಗ. ಈ ದೃಷ್ಟಿಯಿಂದ ಅಮಿತಾಭ್ ಕೇವಲ ನಟನಲ್ಲ ಅವನೊಬ್ಬ ಪರಿಪೂರ್ಣ ಕಲಾವಿದ. ಹಟಕ್ಕೆ  ಬಿದ್ದಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಅಮಿತಾಭ್ ಇನ್ನಷ್ಟು ಚಾರಿತ್ರಿಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಹೇರಳವಾಗಿವೆ. ಆತನ ಸಮಕಾಲೀನ ನಟರು ಮರಸುತ್ತುವ ನಾಯಕ ಪಾತ್ರಗಳಿಂದ ನಿವೃತ್ತರಾಗಿ ಮೂಲೆ ಗುಂಪಾಗಿರುವ ಈ ಹೊತ್ತಿನಲ್ಲಿ ಅಮಿತಾಬ್ ಇವತ್ತಿಗೂ ತನ್ನ ನಟನೆಯಿಂದ ನಾಯಕನಿಗೆ ಸಮನಾದ ಪಾತ್ರಗಳಲ್ಲಿ ಅಭಿನಯಿಸುತ್ತಿರುವರು. ಕೇವಲ ಇಮೇಜಿಗೆ ಅಂಟಿಕೊಂಡು ಒಬ್ಬ ಕಲಾವಿದನಾಗಿ ಬೆಳೆಯುವ ಅವಕಾಶದಿಂದ ವಂಚಿತರಾಗುವ ನಟ ನಟಿಯರ ನಡುವೆ ಅಮಿತಾಭ್ ತಮ್ಮ ಅಭಿನಯ ಮತ್ತು ಪಾತ್ರಗಳ ಆಯ್ಕೆಯಿಂದ ವಿಭಿನ್ನರಾಗಿ ನಿಲ್ಲುತ್ತಾರೆ. ಒಟ್ಟಿನಲ್ಲಿ ಅಮಿತಾಭ್ ನಿರ್ದೇಶಕರ ನಟನಾಗಿ ಬದಲಾಗಿ ತಮ್ಮ ಎರಡನೇ ಇನ್ನಿಂಗ್ಸ್ ನ್ನು ಭರ್ಜರಿಯಾಗೇ ಆರಂಭಿಸಿರುವರು. ಇಲ್ಲಿ ಅಮಿತಾಭ್ ನಟಿಸಿರುವ ಅಪ್ಪನ ಪಾತ್ರ ಅದೇನು ಆದರ್ಶದ್ದಲ್ಲ. ಆದರೆ ತನ್ನ ಮನೋಜ್ಞ ಅಭಿನಯದಿಂದ ಅಮಿತಾಭ್ ಸ್ವಾರ್ಥ ಮತ್ತು ವಾಚಾಳಿತನದ ಅಪ್ಪನ ಪಾತ್ರವನ್ನು ಕಥೆಯ ಕೇಂದ್ರವಾಗಿಸಿರುವರು. ಬ್ಲ್ಯಾಕ್, ಪಾ ದಂಥ ಸಿನಿಮಾಗಳಲ್ಲಿನ ಅಮಿತಾಭ್ ಅಭಿನಯ ಇಲ್ಲಿ ನಮಗೆ ಮತ್ತೊಮ್ಮೆ ನೆನಪಾಗುತ್ತದೆ.

                 ಅಮಿತಾಭ್, ದೀಪಿಕಾ ಪಡುಕೋಣೆ, ಇರ್ಫಾನ್ ತಮ್ಮ ಪಾತ್ರಗಳಿಗೆ ಈ ಸಿನಿಮಾದಲ್ಲಿ ಜೀವತುಂಬಿ  ನಟಿಸಿರುವರು. ಸಿನಿಮಾದಲ್ಲಿ ಹಾಡುಗಳು ಇಲ್ಲದೆ ಇರುವುದು ಅದೇನು ದೊಡ್ಡ ಕೊರತೆ ಎನಿಸುವುದಿಲ್ಲ. ಇರ್ಫಾನ್ ರಂಗಭೂಮಿಯಿಂದ ಬಂದ ಕಲಾವಿದನಾಗಿರುವುದರಿಂದ ಆತನ ನಟನೆಯಲ್ಲಿ ಸಹಜತೆ ಇದೆ. ದೀಪಿಕಾಳಂಥ ಕಮರ್ಷಿಯಲ್ ಸಿನಿಮಾಗಳ ನಟಿ  ದೇಹ ಮತ್ತು ಸೌಂದರ್ಯವನ್ನು ಪ್ರದರ್ಶಿಸಲು  ಅವಕಾಶವಿಲ್ಲದಂಥ ಪೀಕೂ ಸಿನಿಮಾದಲ್ಲಿ ನಟಿಸಿದ್ದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ. ಇಂಥ ಪಾತ್ರಗಳಲ್ಲಿ  ಅಭಿನಯಿಸುವುದರಿಂದಲೇ ನಟ ನಟಿಯರು ಕಲಾವಿದರಾಗಿ ರೂಪುಗೊಳ್ಳುವುದು. ಆದರೆ ಪ್ರೇಕ್ಷಕರು ಮಾತ್ರ ಇಂಥ ಸದಭಿರುಚಿಯ ಸಿನಿಮಾಗಳನ್ನು ಪ್ರೋತ್ಸಾಹಿಸದಿರುವುದು ದುರಾದೃಷ್ಟದ ಸಂಗತಿ. ಬಿಡುಗಡೆಯಾದ ಎರಡನೇ ದಿನಕ್ಕೆ ಅಲ್ಲಿದ್ದ ಪ್ರೇಕ್ಷಕರ ಸಂಖ್ಯೆ  ಬೆರಳೆಣಿಕೆಯಷ್ಟು ಎನ್ನುವುದು ನಮ್ಮ ಸಿನಿಮಾ ನೋಡುಗರ  ಅಭಿರುಚಿಗೆ ಕನ್ನಡಿ ಹಿಡಿಯುತ್ತದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ  


Saturday, May 2, 2015

ಅನಾವರಣ: ಪುಸ್ತಕ ಬಿಡುಗಡೆ

 (ಮೇ ೧, ೨೦೧೫ ರಂದು ನನ್ನ 'ಅನಾವರಣ' ಪುಸ್ತಕ ಬಿಡುಗಡೆಯಾಯಿತು)



ನನಗೆ ನನ್ನ ಬರವಣಿಗೆಯ ಮಿತಿ ಗೊತ್ತು. ನಾನು ಪಂಪ, ರಾಘವಾಂಕ, ಕುಮಾರವ್ಯಾಸರನ್ನು ಓದಿಕೊಂಡವನಲ್ಲ. ಹಳೆಗನ್ನಡ ನನಗೆ ಇವತ್ತಿಗೂ ಅರ್ಥವಾಗದ ಭಾಷೆ. ಅತಿ ಅಲಂಕಾರಿಕ ಪದಗಳನ್ನು ಬಳಸಿ ಬರೆದ ಪುಸ್ತಕಗಳ ಓದು ನನಗೆ ಅಷ್ಟಕಷ್ಟೆ. ಸರಳವಾಗಿ ಓದಿಸಿಕೊಂಡು ಹೋಗುವ ಮತ್ತು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲುವ ಬರಹಗಳ ಓದಿನಲ್ಲಿ ನನಗೆ ಹೆಚ್ಚು ಆಸಕ್ತಿ. ದಿನಪತ್ರಿಕೆಗಳು, ನಿಯತಕಾಲಿಕೆಗಳು, ಕಥೆ, ಕಾದಂಬರಿಗಳು, ಜೀವನ ಚರಿತ್ರೆಗಳು, ಪತ್ರಿಕೋದ್ಯಮದ ಬರಹಗಳ ಓದು ನನ್ನಲ್ಲೊಂದಿಷ್ಟು ಬರವಣಿಗೆಯಂಥ ಸೃಜನಶೀಲತೆಯನ್ನು ಮೂಡಿಸಿದೆ.  ಹಾಗೆಂದು ನನ್ನ ಬರವಣಿಗೆ ಬಗ್ಗೆ ನನಗೆ ಹೆಚ್ಚು ಅಭಿಮಾನವಾಗಲಿ ಇಲ್ಲವೇ ಅಹಂಕಾರವಾಗಲಿ ಇಲ್ಲ. ನಾನು ಬರವಣಿಗೆಯನ್ನು ನನ್ನೊಳಗಿನ ಆತಂಕ, ತಲ್ಲಣ, ಬೇಗುದಿ ಈ ಎಲ್ಲವನ್ನೂ ಅಕ್ಷರ ರೂಪಕ್ಕಿಳಿಸಲು ಬಳಸಿಕೊಂಡಿದ್ದೆ ಹೆಚ್ಚು. ಇಂಥದ್ದೊಂದು ಇತಿ ಮಿತಿಯ ಓದು ಮತ್ತು ಬರವಣಿಗೆಯ ನಡುವೆ ನಾನು ಬರೆದ ಅನಾವರಣ ಇದು ನನ್ನ ನಾಲ್ಕನೇ ಕೃತಿ.


   ಓದು ಮತ್ತು ಸಿನಿಮಾಗಳ ವೀಕ್ಷಣೆ ನನ್ನ ಅತ್ಯುತ್ತಮ  ಹವ್ಯಾಸಗಳು ಎನ್ನುವ ನಂಬಿಕೆ ನನ್ನದು. ಈ ಓದಿನ ಗೀಳು ನನಗೆ ಅಮ್ಮನಿಂದ ಬಂದ ಬಳುವಳಿ. ಸಿನಿಮಾ  ನೋಡುವ ಹುಚ್ಚು ಹತ್ತಿದ್ದು ಅಣ್ಣಂದಿರಿಂದ. ಉತ್ತಮ ಪುಸ್ತಕಗಳ ಓದು ಮತ್ತು ಅತ್ಯುತ್ತಮ ಕಲಾತ್ಮಕ ಹಾಗೂ ಕಮರ್ಷಿಯಲ್ ಸಿನಿಮಾಗಳ ವೀಕ್ಷಣೆಯಿಂದ ನನ್ನೊಳಗೆ ಬರವಣಿಗೆಯಂಥ ಸೃಜನಶೀಲತೆಯ ಸೆಲೆ ನಿರಂತರವಾಗಿ ಒಸರಲು ಕಾರಣವಾಯಿತು. ಜೊತೆಗೆ ನಾನು ಅಕ್ಷರ ಕಲಿತದ್ದು ಪಕ್ಕಾ ಕನ್ನಡ ಭಾಷೆಯಲ್ಲಿ. ಈ ಜಾಗತೀಕರಣ, ಐಟಿ, ಬೀಟಿಗಳು ನನ್ನ ವಿದ್ಯಾರ್ಥಿ ಜೀವನದ ಕಾಲಕ್ಕೆ ಈಗಿನಷ್ಟು ಸದ್ದು ಮಾಡುತ್ತಿರಲಿಲ್ಲವಾದ್ದರಿಂದ ಅಪ್ಪ ಖರ್ಚಾಗದೇ ಕಲಿಸುವ ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿದರು. ಹಾಗೆಂದು ಬೇಸರವೇನಿಲ್ಲ. ಕಲಿತ ಕನ್ನಡ ಶಾಲೆಗಳು ಪಠ್ಯಕ್ರಮದಾಚೆಯೂ ಕಲಿಸಿಕೊಟ್ಟ ಜೀವನಾನುಭವ ಅಪೂರ್ವ.


   ಬದುಕನ್ನು ಕಟ್ಟಿಕೊಳ್ಳಲು ಬಾಗಲಕೋಟೆಯಂಥ ಸಾಂಸ್ಕೃತಿಕ ನಗರಕ್ಕೆ ಬಂದ ಮೇಲೆ ನನ್ನ ಬರವಣಿಗೆ ಒಂದಿಷ್ಟು ಹದವಾಯಿತು. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ನನ್ನ ಬರವಣಿಗೆಗೆ ವೇದಿಕೆ ಒದಗಿಸಿತು. ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ವೀರಣ್ಣ ಚರಂತಿಮಠ ಹಾಗೂ ಶ್ರೀ  ಸಿದ್ದಣ್ಣ ಶೆಟ್ಟರ್, ಪ್ರೊ ಎನ್. ಜಿ. ಕರೂರ, ಡಾ ಅಶೋಕ ಮಲ್ಲಾಪುರ, ಡಾ ಚಿದಾನಂದ ಪಾಟೀಲ, ಶ್ರೀ ಪಿ ಎನ್ ಸಿಂಪಿ ಈ ಎಲ್ಲ ಮಹನೀಯರಿಂದ ನನ್ನ ಬರವಣಿಗೆಯ ಬದುಕಿಗೆ ದೊರೆತ ಪ್ರೋತ್ಸಾಹ ಮತ್ತು ಸಹಕಾರ ಅಪಾರ.


      ಇನ್ನು ಅನಾವರಣ ಕೃತಿಯ ವಿಷಯಕ್ಕೆ ಬರುವುದಾದರೆ ಇಲ್ಲಿನ ಎಲ್ಲ ೧೮ ಲೇಖನಗಳು ನಾನು ಹತ್ತು ತಿಂಗಳ ಅವಧಿಯಲ್ಲಿ ನನ್ನ ಬ್ಲಾಗಿಗೆ ಬರೆದ ಬರಹಗಳು. ಬ್ಲಾಗಿಗೆ ಬರೆಯುವಾಗಲೆಲ್ಲ ನಾನು ಪತ್ರಿಕೆಯೊಂದಕ್ಕೆ ಬರೆಯುವ ಬದ್ಧತೆಯಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಬ್ಲಾಗ್ ಬರವಣಿಗೆಯನ್ನು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲಿಸುವ ಕಾಳಜಿ ನನ್ನದಾಗಿರುವುದರಿಂದ ಕಡಿಮೆ ಅವಧಿಯಲ್ಲಿ ಬ್ಲಾಗ್ ಲೇಖನಗಳನ್ನು ಸಂಕಲಿಸಿ ಎರಡು ಪುಸ್ತಕಗಳನ್ನು ಹೊರತರಲು ಸಾಧ್ಯವಾಯಿತು. ಬ್ಲಾಗ್ ಓದುಗರಿಂದ ನನ್ನ ಲೇಖನಗಳಿಗೆ ದೊರೆಯುತ್ತಿರುವ ಪ್ರತಿಕ್ರಿಯೆಗಳನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸು ಕೃತಜ್ಞತೆಯಿಂದ ಭಾರವಾಗುತ್ತದೆ.


   ನನ್ನ ಕೃತಿಗಳ ಪ್ರಕಟಣೆಯ ವಿಷಯವಾಗಿ ನಾನು ಸ್ಮರಿಸಲೇಬೇಕಾದ ವ್ಯಕ್ತಿತ್ವ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಶ್ರೀ ಬಸವರಾಜ ಕೊನೆಕ್ ಅವರದು. ಅನಾವರಣವನ್ನೊಳಗೊಂಡಂತೆ ನನ್ನ ಮೂರು ಪುಸ್ತಕಗಳು ಸಿದ್ದಲಿಂಗೇಶ್ವರ ಪ್ರಕಾಶನದಿಂದ ಪ್ರಕಟವಾಗಿರುವುದರ ಹಿಂದೆ ಶ್ರೀ ಬಸವರಾಜ ಕೊನೆಕ್ ಅವರ ಪ್ರೀತಿ ಮತ್ತು ಸಹಕಾರವೇ ಕಾರಣ.  ಈ ಸಂದರ್ಭ ಸಹಕಾರ ನೀಡುತ್ತಿರುವ ಎಲ್ಲರನ್ನೂ ನಾನು ಅತ್ಯಂತ ವಿನಮೃತೆಯಿಂದ ಸ್ಮರಿಸಿಕೊಳ್ಳುತ್ತ ನನ್ನ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.

-  ರಾಜಕುಮಾರ . ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Wednesday, April 1, 2015

ಪೂರ್ವಾಪರ: ಚಿಂತಕನ ಒಳನೋಟಗಳು






             ಡಾ. ಯು. ಆರ್. ಅನಂತಮೂರ್ತಿ ಈ ನಾಡಿನ ಅಪೂರ್ವ ಚಿಂತಕ ಮತ್ತು ಬರಹಗಾರರಲ್ಲೊಬ್ಬರು. ಸಾಹಿತ್ಯ, ಸಮಾಜ, ರಾಜಕೀಯ, ಭಾಷೆ, ಸಂಸ್ಕೃತಿ ಹೀಗೆ ಹಲವು ಕ್ಷೇತ್ರಗಳ ಬಗ್ಗೆ ತೀವೃ ಸಂವೇದನೆಯಿಂದ ಮಾತನಾಡಿದ ಮತ್ತು ಬರೆದ ಬರಹಗಾರ ಅವರು. ವರ್ತಮಾನದ ಸಮಸ್ಯೆಗಳಿಗೆ ಅನಂತಮೂರ್ತಿ ಅವರು ಸ್ಪಂದಿಸಿದಷ್ಟು ಬೇರೆ ಲೇಖಕರು ಸ್ಪಂದಿಸಿದ್ದು ಕಡಿಮೆ ಎಂದರೆ ಅತಿಶಯೋಕ್ತಿಯಾಗಲಾರದು. ಕುಟುಂಬದ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ಸಮಾಜವಾದಿ ಹಿನ್ನೆಲೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ ಅನಂತಮೂರ್ತಿ ಅವರು ೧೯೭೦ ರ ದಶಕದಲ್ಲೇ 'ಸಂಸ್ಕಾರ' ಕಾದಂಬರಿ ಬರೆದು ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದವರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನದಿಂದ ಕುವೆಂಪು, ಕಾರಂತ, ಬೇಂದ್ರೆ ಅವರಷ್ಟೇ ಟಾಲ್ ಸ್ಟಾಯ್, ಡಿಕ್ಸನ್, ಸಾರ್ತ್ರ್, ಕಾಫ್ಕಾ, ಏಟ್ಸ್ ಸಹ ಅವರ ಬರವಣಿಗೆ ಮತ್ತು ಚಿಂತನೆಯನ್ನು ಪ್ರಭಾವಿಸಿದರು. ಗಾಂಧಿ ಮತ್ತು ಲೋಹಿಯಾ ಹೋರಾಟಗಾರರಾಗಿ ಅನಂತಮೂರ್ತಿ ಅವರಿಗೆ ತುಂಬ ಆಪ್ತರು. ಅನಂತಮೂರ್ತಿ ಅವರು ತಮ್ಮ ಬರಹ ಹಾಗೂ ಮಾತುಗಳಿಂದ ಒಂದು ವಯೋಮಾನದ ಓದುಗರನ್ನು ತುಂಬ ಪ್ರಭಾವಿಸಿರುವರು. ಸಂಸ್ಕಾರ, ಭವ, ದಿವ್ಯ, ಭಾರತಿಪುರ, ಪೂರ್ವಾಪರ, ವಾಲ್ಮೀಕಿಯ ನೆವದಲ್ಲಿ ಕೃತಿಗಳ ಮೂಲಕ ಓದುಗರನ್ನು ತಾವು ಬದುಕುತ್ತಿರುವ ಸಮಾಜದೊಂದಿಗೆ ನಿರಂತರವಾಗಿ ಮುಖಾಮುಖಿಯಾಗಿಸುತ್ತ ಬಂದ ಕನ್ನಡದ ಈ ಅಪೂರ್ವ ಬರಹಗಾರ ಮತ್ತು ಚಿಂತಕ ಸಾಹಿತ್ಯದೊಂದಿಗಿನ ತಮ್ಮ ಒಡನಾಟದಿಂದ ಅಭಿಮಾನಿ ಓದುಗರನ್ನೂ ಹಾಗೂ  ಅನೇಕರ ವಿರೋಧವನ್ನೂ  ಕಟ್ಟಿಕೊಂಡಿದ್ದುಂಟು. ಓದುಗರ ಒತ್ತಾಸೆಗಿಂತ ಟೀಕೆಗಳೇ ಅವರ ಮಾತುಗಳ ನ್ನಾಡುವ  ಮತ್ತು   ಬರೆಯುವ ಉತ್ಸಾಹವನ್ನು ಇಮ್ಮಡಿಗೊಳಿಸಿದವು.  ಅನಂತಮೂರ್ತಿ ಅವರ ಹೇಳಿಕೆಗಳು ಕೆಲವೊಮ್ಮೆ ವಿರೋಧಾಬಾಸಗಳಿಂದ ಕೂಡಿದ್ದರೂ ವಿರೋಧ ಮತ್ತು ಭಿನ್ನಾಭಿಪ್ರಾಯಗಳಿಗೆ ಮಣೆಹಾಕಿ ಹೊಸ ವಿಚಾರಗಳು ಮತ್ತು ಚಿಂತನೆಗಳು ಹುಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ಹೆಗ್ಗಳಿಕೆ ಅವರದು. ಅನಂತಮೂರ್ತಿ ಅವರೇ ಹೇಳಿಕೊಂಡಂತೆ ಯಾರೊಂದಿಗೂ ಅವರು ವ್ಯಕ್ತಿಗತ ನೆಲೆಗಟ್ಟಿನಲ್ಲಿ ವಿರೋಧವನ್ನು ಕಟ್ಟಿಕೊಂಡವರಲ್ಲ. ಅವರ ವಿರೋಧವೆನಿದ್ದರೂ ಅದು ವೈಚಾರಿಕ ನೆಲೆಯಲ್ಲಿ ಮಾತ್ರ. ಅದಕ್ಕೆಂದೇ ಲೇಖಕರೊಂದಿಗೆ ವಾಗ್ವಾದಕ್ಕಿಳಿದಾಗಲೆಲ್ಲ ತನ್ನ ಸೋಲಿನಿಂದಾದರೂ ಹೊಸ ವಿಚಾರಗಳು ಹುಟ್ಟಿಕೊಳ್ಳಲಿ ಎಂದು ಅವರು ಆಶಿಸುತ್ತಿದ್ದರು. 'ವಾಲ್ಮೀಕಿಯ ನೆವದಲ್ಲಿ' ಪುಸ್ತಕವನ್ನು ವಿಮರ್ಶಕರ ಟೀಕೆ ಟಿಪ್ಪಣಿಗಳೊಂದಿಗೆ ಪ್ರಕಟಿಸಿದ್ದು ಕನ್ನಡ ಸಾಹಿತ್ಯದಲ್ಲಿ ಅದೊಂದು ಹೊಸ ಪ್ರಯೋಗವಾಗಿದ್ದು ಇದು ಅನಂತಮೂರ್ತಿ ಅವರು ಭಿನ್ನಾಭಿಪ್ರಾಯಗಳಿಗೆ ಹಾಗೂ ಟೀಕೆಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು ಎನ್ನುವುದಕ್ಕೆ ಪುರಾವೆಯಾಗಿದೆ. 

               'ಪೂರ್ವಾಪರ' ಅನಂತಮೂರ್ತಿ ಅವರ ಸಾವಿನ ನಂತರ ನಾನು ಓದಿಗಾಗಿ ಕೈಗೆತ್ತಿಕೊಂಡ ಅವರ ಮಹತ್ವದ ಕೃತಿಗಳಲ್ಲೊಂದು. ೧೯೯೦ ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಅನಂತಮೂರ್ತಿ ಅವರು ವಿವಿಧ ಸಂದರ್ಭಗಳಲ್ಲಿ ಮಾಡಿದ ಭಾಷಣಗಳು ಮತ್ತು ಬರೆದ ಲೇಖನಗಳ ಸಂಗ್ರಹವಿದೆ. ಹೆಚ್ಚಿನ ಲೇಖನಗಳು ಅವರು ಸಂಪಾದಕರಾಗಿ 'ರುಜುವಾತು' ಪತ್ರಿಕೆಗೆ ಬರೆದವುಗಳು. 'ರುಜುವಾತು' ಪತ್ರಿಕೆ ಶುರುವಾದುದ್ದರ ಹಿಂದೆ ಒಂದು ಕಥೆಯಿದೆ. ಈ ಪುಸ್ತಕದ ಪ್ರಾರಂಭದಲ್ಲಿ ಹೇಳಿಕೊಂಡಂತೆ ೧೯೮೦ ರ ದಶಕದ ಪ್ರಾರಂಭದಲ್ಲಿ ಬರವಣಿಗೆಗೆ ಸಂಬಂಧಿಸಿದಂತೆ ಒಂದು ವಿಚಿತ್ರ ಬಗೆಯ ಸೋಮಾರಿತನ ಅನಂತಮೂರ್ತಿ ಅವರಲ್ಲಿ ಕಾಣಿಸಿಕೊಂಡಿತು. ಇಂಥ ಪರಿಸ್ಥಿತಿಯಲ್ಲಿ ಅವರನ್ನು ನೋಡಲು ಬಂದ ಕಿ ರಂ ನಾಗರಾಜ ಮತ್ತು ಸತ್ಯನಾರಾಯಣ ಒಂದು ಪತ್ರಿಕೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿದರ ಪರಿಣಾಮ 'ರುಜುವಾತು' ಪತ್ರಿಕೆ ಶುರುವಾಯಿತು. ಬರವಣಿಗೆಯ ಸೋಮಾರಿತನದಿಂದ ಹೊರಬರುವ ಅನಂತಮೂರ್ತಿ ಅವರು ಒಂದು ದಶಕದ ಕಾಲ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸುವುದರೊಂದಿಗೆ ಅನೇಕ ಬರಹಗಾರರು ಬೆಳೆಯಲು ವೇದಿಕೆ ರೂಪಿಸಿದರು. ಅನಂತಮೂರ್ತಿ ಅವರ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಚಿಂತನೆಗಳು 'ರುಜುವಾತು' ಪತ್ರಿಕೆಯ ಮೂಲಕ ನಾಡಿನ ಓದುಗರನ್ನು ತಲುಪಿದವು. ರುಜುವಾತು ಪತ್ರಿಕೆ ಒಂದು ದಶಕದ ಕಾಲ ಈ ನಾಡಿನ ಓದುಗರನ್ನು ಗಾಂಧಿ, ಲೋಹಿಯಾರಂಥ ಹೋರಾಟಗಾರರಿಗೆ, ಕುವೆಂಪು, ಬೇಂದ್ರೆ, ಡಿಡಿರೋ, ಟಾಲ್ ಸ್ಟಾಯ್ ಅವರಂಥ ಸೃಜನಶೀಲರಿಗೆ, ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳಿಗೆ, ಈ ನಾಡಿನ ಚಳವಳಿಗಳಿಗೆ ಮುಖಾಮುಖಿಯಾಗಿಸಿತು. 'ರುಜುವಾತು' ಪತ್ರಿಕೆಯಲ್ಲಿ ಪ್ರಕಟವಾದ ಅನಂತಮೂರ್ತಿ ಅವರ ಆ ಎಲ್ಲ ಚಿಂತನೆಗಳು ಇಡೀಯಾಗಿ ಓದುಗರಿಗೆ ತಲುಪುವಂತಾಗಲಿ ಎನ್ನುವ ಆಶಯದಿಂದ ಕೆ ವಿ ಸುಬ್ಬಣ್ಣನವರು ತಮ್ಮ ಅಕ್ಷರ ಪ್ರಕಾಶನದಿಂದ 'ಪೂರ್ವಾಪರ' ಕೃತಿಯನ್ನು ಪ್ರಕಟಿಸಿರುವರು.

ವ್ಯಕ್ತಿ ಚಿತ್ರಣ


                 ಪುಸ್ತಕದ ಅಲ್ಲಲ್ಲಿ ಲೇಖಕರು ಬೇಂದ್ರೆ, ಪುತಿನ, ಕೃಪಲಾನಿ,  ತರಾಸು, ಮಾಸ್ತಿ ಇತ್ಯಾದಿ ಮಹನೀಯರನ್ನು ಸ್ಮರಿಸಿ ಕೊಂಡಿರುವರು. ಕೆಲವರ ಕುರಿತು ಬರೆಯುವಾಗ ಅನಂತಮೂರ್ತಿ ಅವರು ತುಂಬ ಆರ್ದ್ರರಾಗುತ್ತಾರೆ ಮತ್ತು ಇನ್ನು ಕೆಲವರ ಕುರಿತು ಕಠೋರ ನಿಲುವು ತಳೆಯುತ್ತಾರೆ. ವ್ಯಕ್ತಿ ಚಿತ್ರಣದ ವೈಶಿಷ್ಟ್ಯ ವೇ ಅದು.   ತೀರ ಮುಖಸ್ತುತಿಯಾಗಲಿ ಇಲ್ಲವೇ ವೈಯಕ್ತಿಕ ದ್ವೇಷವಾಗಲಿ ಇಲ್ಲದೆ ತಮಗನಿಸಿದ್ದನ್ನು ಲೇಖಕರು ನೇರವಾಗಿ ಹೇಳಿರುವುದರಿಂದ ಬರಹ ಓದುಗನಿಗೆ ಆಪ್ತವಾಗುತ್ತದೆ. ಸಾಹಿತ್ಯದಲ್ಲಿ ರಸಪ್ರಜ್ಞೆ ಹುಟ್ಟುವುದು ಬರಹಗಾರ ಸ್ವಕೇಂದ್ರದಿಂದ ಮುಕ್ತಿ ಪಡೆದಾಗ ಮಾತ್ರ ಎಂದೆನ್ನುವ ಮೂರ್ತಿ ಅವರು ಅದಕ್ಕೆ ಉದಾಹರಣೆಯಾಗಿ ಪುತಿನ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಪುತಿನ ತಮ್ಮ ಜೀವನಾನುಭವವನ್ನು ಗಾಢವಾಗಿತೊಡಗಿಸಿಕೊಂಡೆ ಮತ್ತೆ ಹೊಸ ಬಗೆಯಲ್ಲಿ ಸಾಧಿಸಿದ ಕವಿ ಇದಾಗದಿದ್ದಲ್ಲಿ ಅವರ ಕಾವ್ಯ ಎಡೆತಡೆಯಿಲ್ಲದ ಮಾತಿನ ಸ್ವಪ್ರದರ್ಶನರತಿಯಾಗುತ್ತಿತ್ತು ಎಂದು ವಿಮರ್ಶಿಸುತ್ತಾರೆ.  ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದವನಿಗೆ ಕ್ರಾಂತಿ ಎಂಬುದು ಸರ್ವನಾಶದ ಸುಖ ಕೊಡಬಲ್ಲ ಒಂದು ತೀಟೆಯಾಗಿಬಿಡಬಹುದು ಎಂದು ಆತಂಕ ಪಡುವ ಲೇಖಕರು ಪುತಿನ ಅವರ ಬರಹ ಇಂಥ ಎಲ್ಲ ವಿಪರ್ಯಾಸಗಳಿಂದ ಮುಕ್ತವಾಗಿತ್ತು ಎನ್ನುತ್ತಾರೆ. ಪುತಿನ ಅವರ ಜೊತೆ ಜೊತೆಗೆ ಲಾರೆನ್ಸ್, ಕಾನ್ರಾಡ್, ಬ್ಲೇಕ್, ದಾಸ್ತೊವಸ್ಕಿ, ಬೋದಿಲೇರ್ ಕೂಡ ನಮ್ಮ ಓದಿಗೆ ದಕ್ಕುವುದೇ ಒಂದು ವಿಶಿಷ್ಠ ಅನುಭವ.

                  ಬೇಂದ್ರೆ ಕುರಿತು ಬರೆಯುವಾಗ ಅವರನ್ನು ನಮ್ಮ ಕಾಲದ ದೊಡ್ಡ ಕವಿ ಎಂದು ಹೇಳುವ ಅನಂತಮೂರ್ತಿ ಅವರು ಆತ್ಮಕಾಮಿ ಹಾಗೂ ಜೀವಕಾಮಿಯಾಗಿದ್ದ ಬೇಂದ್ರೆ ಅಲ್ಲಿಂದ ಕೆಳಗಿಳಿದು ಬರಬಲ್ಲವರಾಗಿದ್ದರಿಂದಲೇ ಅವರ ಕಾವ್ಯ ಸೃಜನಶೀಲತೆಯ ಸ್ವರೂಪ ಪಡೆಯಿತು ಎಂದು ಬೇಂದ್ರೆ ಅವರ ವ್ಯಕ್ತಿತ್ವವನ್ನು ವರ್ಣಿಸುತ್ತಾರೆ. ಬೇಂದ್ರೆ ಸಾಮಾನ್ಯರಂತೆ ಬದುಕಿ ಜೀವನಾನುಭವವನ್ನು ಗಾಢವಾಗಿ ಅನುಭವಿಸಿದರು ಎನ್ನುವುದನ್ನು ವಿವರಿಸಲು  ಅವರು ಕೊಡುವ ಉದಾಹರಣೆ ಹೀಗಿದೆ 'ನೊಬೆಲ್ ಪಾರಿತೋಷಕ ಪಡೆದ ನಂತರ ಗೌರವಾನ್ವಿತ ಋಷಿಯಂತೆ ಬದುಕಬೇಕಾಗಿ ಬಂದ ಟ್ಯಾಗೋರ್, ತಾನು ಆಗಬೇಕೆಂಬ ಆದರ್ಶವನ್ನು ಮುಖವಾಡ ಮಾಡಿಕೊಂಡು ಬದುಕಿದ ಏಟ್ಸ್ ಆದರೆ ಬೇಂದ್ರೆ ತನ್ನೆಲ್ಲ ಇಹಪರಗಳ ಪರದಾಟಗಳನ್ನು ಒಟ್ಟಾಗಿ ಬದುಕಲು ಸಾಧ್ಯವಾದದ್ದು ಅವರ ವ್ಯಕ್ತಿತ್ವದ ವಿಶಿಷ್ಠತೆಯಿಂದ'. ಛತ್ರಿ ಚೀಲಗಳನ್ನು ಹಿಡಿದುಕೊಂಡು ಕೋಪ ತಾಪದಿಂದ ಧಾರವಾಡದ ಬೀದಿಗಳಲ್ಲಿ ಓಡಾಡುತ್ತಿದ್ದ ಸಾಮಾನ್ಯನಾಗಿಯೂ ಮತ್ತು ಗಂಗಾವತರಣದ ಅಸಾಮಾನ್ಯನಾಗಿಯೂ ಬೇಂದ್ರೆ ನಮಗೆ ನಿಲುಕುವಂತೆ ಅನಂತಮೂರ್ತಿ ಇಲ್ಲಿ ಬೇಂದ್ರೆ ಅವರನ್ನು ಚಿತ್ರಿಸಿರುವರು.

               ಆಚಾರ್ಯ ಜೆ ಬಿ ಕೃಪಲಾನಿ ನಿಧನರಾದಾಗ ಗಾಂಧಿ ಯುಗದ ಕೊನೆಯ ಕಂಡಿ ಕಳಚಿದಂತಾಯಿತು ಎಂದು ನೋವಿನಿಂದ ನುಡಿಯುತ್ತಾರೆ. ಕೃಶವಾಗುತ್ತ ಹೋಗುತ್ತಿರುವ ರಾಷ್ಟ್ರದ ನೈತಿಕ ಪ್ರಜ್ಞೆಯನ್ನು ಜಾಗೃತವಾಗಿಡಲು ತನ್ನ ಕೊನೆಯ ಘಳಿಗೆಯ ತನಕ ಶ್ರಮಿಸಿದ ಕೃಪಲಾನಿ ಬದುಕಿನಲ್ಲಿ ನಿಷ್ಟುರರಾಗಿಯೂ ಪ್ರಾಮಾಣಿಕನಾಗಿಯೂ ಉಳಿದರು ಎಂದು ಹೇಳುವ ಲೇಖಕರು ಇದನ್ನು ರಾಜಕೀಯದಲ್ಲಿ ಸಾಧಿಸುವುದು ಹೆಚ್ಚು ಕಠಿಣ ಎಂದು ಓದುಗರಿಗೆ ವಾಸ್ತವವನ್ನು ನೆನಪಿಸುತ್ತಾರೆ. ವಿನೋಬಾಭಾವೆ ಕುರಿತು ಬರೆಯುವಾಗ ಅಲ್ಲಿ ಮೆಚ್ಚುಗೆಯ ಜೊತೆಗೆ ಟೀಕೆಯೂ ಇದೆ. ವಿನೋಬಾರ ಅಧಿಕಾರ ವಿಕೇಂದ್ರಿಕರಣದ ಕಲ್ಪನೆಯನ್ನು ಮೆಚ್ಚುವ ಅನಂತಮೂರ್ತಿ ತುರ್ತುಪರಿಸ್ಥಿತಿಗೆ ಬೆಂಬಲ ನೀಡಿದ ಅವರನ್ನು ಸರ್ಕಾರಿ ಸಂತ ಎಂದು ಟೀಕಿಸುತ್ತಾರೆ. ಮೋಹದ ಪ್ರಪಂಚದ ಹಂಗಿಲ್ಲದಂತೆ ಬದುಕುವಾತ ಅರಿಯಬಲ್ಲ ಸತ್ಯಗಳು ಕೇವಲ ಅಮೂರ್ತವಾಗುತ್ತವೆಯೇ? ಕಾವಿಲ್ಲದ ಸತ್ವಹೀನವಾಗುತ್ತವೆಯೇ? ಎನ್ನುವ ಪ್ರಶ್ನೆಗಳು ವಿನೋಬಾರ ಬ್ರಹ್ಮಚರ್ಯದ ಹಿನ್ನೆಲೆಯಲ್ಲಿ ಲೇಖಕರಿಗೆ ಎದುರಾಗುತ್ತವೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕುರಿತು ಬರೆಯುವಾಗಲೂ ಅನಂತಮೂರ್ತಿ ಒಂದಿಷ್ಟು ಕಠಿಣರಾಗುತ್ತಾರೆ. ಮಧ್ಯಮ ವರ್ಗದ ಪ್ರೇಕ್ಷಕರ ನೀರಸ ಬದುಕಿಗೆ ಕೆಲವು ಕ್ಷಣಗಳ ಉತ್ಕಟತೆಯ ಭ್ರಮೆಯನ್ನು ಉಂಟುಮಾಡುವುದಕ್ಕಾಗಿ ಮಾತ್ರ ಪುಟ್ಟಣ್ಣನವರ ಕಲೆಗಾರಿಕೆ ವ್ಯಯವಾದದ್ದು ಒಂದು ದುರಂತ ಎಂದು ಹಳಹಳಿಸುತ್ತಾರೆ. ಕಾರಂತರ ಬಗ್ಗೆ ಬರೆಯುವಾಗ ಕಾರಂತರ ಪ್ರಭಾವ ಅಜ್ಞಾತವಾಗಿ ನನ್ನ ಬರವಣಿಗೆಯ ಹಿಂದೆ ಕೆಲಸ ಮಾಡಿದೆ ಎನ್ನುವ ಲೇಖಕರು  ಕಾರಂತರ ಸಾಹಿತ್ಯದ ಪ್ರಭಾವ ನವ್ಯರ ಮೇಲಾಗಿದೆ ಎಂದು ಆತ್ಮಶೋಧನೆಗಿಳಿಯುತ್ತಾರೆ. ಕಾರಂತರ ಮರಳಿ ಮಣ್ಣಿಗೆಯ ಲಚ್ಚ ನನ್ನ ಸಂಸ್ಕಾರದ ನಾರಣಪ್ಪನನ್ನು ಪ್ರೇರೇಪಿಸಿದ ಎಂದು ಯಾವ ಮುಚ್ಚು ಮರೆಯಿಲ್ಲದೆ ನುಡಿಯುತ್ತಾರೆ. ತರಾಸು, ಮಾಸ್ತಿ, ಚದುರಂಗ, ನಿರಂಜನರ ಕುರಿತು ಬರೆಯುವ ಸಂದರ್ಭ ಲೇಖಕರು ಹೆಚ್ಚು ಆರ್ದ್ರರಾಗುತ್ತಾರೆ. ಬರವಣಿಗೆಯನ್ನು ಆಕರ್ಷಕ ಕ್ರಿಯೆಯಾಗಿ ಮಾಡಿದ ತರಾಸು ಅವರಷ್ಟೇ ಕನ್ನಡಕ್ಕಾಗಿ ಜೀವ ತೇದ ಮಾಸ್ತಿ ಕೂಡ ಅನಂತಮೂರ್ತಿ ಅವರಿಗೆ ಆಪ್ತರಾಗುತ್ತಾರೆ. ಒಂದು ಸಂದರ್ಭ ನಿರಂಜನರೊಂದಿಗೆ ವಿರೋಧ ಕಟ್ಟಿಕೊಂಡಾಗ ಅಪ್ಪಟ ನಿರಂಜನರನ್ನು ಕಾಣಲು ಶ್ರಮಿಸಬೇಕು ಹಾಗೂ ಅದನ್ನು ಮಾಡಲು ನಾನೂ ಅಪ್ಪಟನಾದ (ಯಾವ ಮುಖವಾಡವೂ ಇಲ್ಲದ)  ಅನಂತಮೂರ್ತಿಯಾಗಬೇಕು ಎನ್ನುವ ಸತ್ಯ ನುಡಿಯಲು ಹಿಂಜರಿಯುವುದಿಲ್ಲ. ನಿಜಕ್ಕೂ ಅವರ ಆತ್ಮಶೋಧನೆಯ ಈ ಗುಣ ಓದುಗರಿಗೆ ಇಷ್ಟವಾಗುತ್ತದೆ. ಒಟ್ಟಾರೆ ತಮ್ಮ ಒಡನಾಟದ ವ್ಯಾಪ್ತಿಗೆ ಬಂದ ಮಹನೀಯರ ಕುರಿತು ಬರೆಯುವಾಗ ಯಾವ ರಾಗ ದ್ವೇಷಗಳಿಗೂ ಒಳಗಾಗದ ಮತ್ತು ಮುಖ ಸ್ತುತಿಗೂ ಇಳಿಯದ ಲೇಖಕರ ಈ ಪ್ರಜ್ಞಾಪೂರ್ವಕ ನಿಲುವಿನಿಂದಾಗಿ ಬರಹ ಓದುಗನಿಗೆ ಹೆಚ್ಚು ಆಪ್ತವಾಗುತ್ತದೆ.

ಜಾತಿ ಮತ್ತು ಸಾಹಿತ್ಯ


              ಜಾತಿ ವ್ಯವಸ್ಥೆ ಕನ್ನಡ ಸಾಹಿತ್ಯವನ್ನು ಹೇಗೆ ಪ್ರಭಾವಿಸಿದೆ ಎಂದು ಅನಂತಮೂರ್ತಿ ಸಾಹಿತ್ಯದ ವಿಶ್ಲೇಷಣೆಗಿಳಿಯುತ್ತಾರೆ. ಲೇಖಕನೋರ್ವ ತನ್ನ ಜಾತಿಯ ಚೌಕಟ್ಟಿನಿಂದ ಹೊರಬಂದು ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸದೇ ಹೋದಲ್ಲಿ ಅಂಥ ಸಾಹಿತ್ಯದಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಲೇಖಕರದು. ಸಾಹಿತ್ಯವೊಂದು ತಲಸ್ಪರ್ಶಿಯಾಗಿ, ಸೂಕ್ಷ್ಮವಾಗಿ ಭಾರತದ ಮನಸ್ಸನ್ನು ಮುಟ್ಟಿ ಬದಲಿಸಬೇಕಾದ ಕಾರ್ಯ ಕನ್ನಡ ನಾಡಿನಲ್ಲಿ ಸ್ವಲ್ಪಮಟ್ಟಿಗೆ ಈ ಜಾತಿಯ ಗೊಂದಲದಿಂದಾಗಿ ಹಿಂಜರಿಯಿತು ಎಂದೆನ್ನುವ ಲೇಖಕರು ತನ್ನ ಜಾತಿಯವನ ಕೃತಿಯನ್ನು ಮೆಚ್ಚುವುದಾಗಲಿ ಬೇರೆ ಜಾತಿಯವರನ್ನು ಟೀಕಿಸುವುದಾಗಲಿ ಮುಜುಗರದ ವಿಷಯವಾಯಿತು ಎಂದೆನ್ನುತ್ತಾರೆ. ಇಂಥದ್ದೊಂದು ವ್ಯವಸ್ಥೆಯ ಪರಿಣಾಮ ಕನ್ನಡದಲ್ಲಿ ವಸ್ತುನಿಷ್ಠ  ವಿಮರ್ಶೆ ಹಿಮ್ಮೆಟ್ಟಿತು ಮತ್ತು ವ್ಯಕ್ತಿನಿಷ್ಠ ವಿಮರ್ಶೆ ಮುಖ್ಯ ವಾಹಿನಿಗೆ ಬಂತು ಎಂದು ಆತಂಕ ಪಡುವರು. ಜಾತಿಯನ್ನು ಆಧಾರವಾಗಿಟ್ಟುಕೊಂಡು  ಮನಬಂದಂತೆ ಕೃತಿಕಾರನ ಮೇಲೆ ಮಾಡುವ ಆರೋಪಗಳೇ ಕೃತಿ ವಿಮರ್ಶೆ ಎಂಬ ಭ್ರಾಂತಿಯಲ್ಲಿ ಅನೇಕ ತರುಣರು ಬರೆಯಲು ಪ್ರಾರಂಭಿಸಿದ್ದು ಕನ್ನಡ ಸಾಹಿತ್ಯದ ಬಹುದೊಡ್ಡ ದುರಂತಗಳಲ್ಲೊಂದು. ಕೆಲವು ಲೇಖಕರು ಎಷ್ಟೇ ಉದಾರ ಧೋರಣೆಯವರಾದರೂ ಬ್ರಾಹ್ಮಣರೆಂಬ ಕಾರಣಕ್ಕೆ ಪ್ರೋತ್ಸಾಹವನ್ನು ಪಡೆಯಲಾರದೆ ಹೋದರು ಮತ್ತು ಕೆಲವು ಬ್ರಾಹ್ಮಣೇತರ ಲೇಖಕರು ಹುಂಬತನದಿಂದ ತಾವು ಬರೆದುದ್ದಕ್ಕೆಲ್ಲ ಪ್ರೋತ್ಸಾಹ ಪಡೆಯುತ್ತಾ ಕಷ್ಟದ ದಾರಿ ತುಳಿದು ಪಕ್ವವಾಗಬೇಕಾದ ಪ್ರಕ್ರಿಯೆಯಿಂದ ವಂಚಿತರಾದರು. ಇದು ಕನ್ನಡ ಸಾಹಿತ್ಯಕ್ಕಾದ ನಷ್ಟ ಎನ್ನುವ ಪ್ರಜ್ಞೆಯಿಂದ ಅನಂತಮೂರ್ತಿ ಬರೆಯುತ್ತಾರೆ. ಜೊತೆಗೆ ಎದುರಾದ ಇನ್ನೊಂದು ಅಪಾಯವೆಂದರೆ ತಾನು ಜಾತಿವಾದಿಯಲ್ಲವೆಂದು ತೋರಿಸಿಕೊಳ್ಳುವುದಕ್ಕಾಗಿ ಎಷ್ಟೋ ವಿಮರ್ಶಕರು ತಮ್ಮ ಜಾತಿಯವರನ್ನು ತೆಗಳಿ ಬೇರೆಯವರನ್ನು ಹೊಗಳಿ ಬರೆಯಲಾರಂಭಿಸಿದರು. ಸಾಹಿತ್ಯ ಲೋಕದಲ್ಲಿ ಮನೆಮಾಡಿಕೊಂಡಿರುವ ಇಂಥದ್ದೊಂದು ಅನುಮಾನದಿಂದ ಹೊರಬರುವ ಪ್ರಯತ್ನವಾಗಿಯೇ ಅನಂತಮೂರ್ತಿ ಅವರು 'ಬ್ರಾಹ್ಮಣನಾಗಿ ನಾನು' ಎಂದು ಬರೆಯುತ್ತಾರೆ. ಬ್ರಾಹ್ಮಣನಾಗಿ ಹುಟ್ಟಿ ಬೆಳೆದ ಲೇಖಕರಿಗೆ (ಅನಂತಮೂರ್ತಿ) ಬ್ರಾಹ್ಮಣರ ಮನಸ್ಸನ್ನು ನೋಯಿಸುವುದು ಅನಿವಾರ್ಯವೇ ಹೊರತು ಇಷ್ಟದ ಸಂಗತಿಯಾಗಿರಲಿಲ್ಲ. ಸಂಸ್ಕಾರ, ಘಟಶ್ರಾದ್ಧ, ಭಾರತೀಪುರ ಕಥೆಗಳು ಬ್ರಾಹ್ಮಣರನ್ನು ತುಂಬ ನೋಯಿಸಿವೆ ಮತ್ತು ಕೆಲವರಿಗೆ ಕೋಪವನ್ನೂ ಉಂಟುಮಾಡಿವೆ ಎನ್ನುವ ವಾಸ್ತವದ ಅರಿವು ಅವರಿಗಿತ್ತು. ಜೊತೆಗೆ ಬ್ರಾಹ್ಮಣರನ್ನು ಟೀಕಿಸುವುದು ಇದೂ ಒಂದು ಬ್ರಾಹ್ಮಣ ತಂತ್ರ ಎಂದು ಸಂದೇಹದಿಂದ ನೋಡುವ ಬ್ರಾಹ್ಮಣೇತರ ಬುದ್ದಿ ಜೀವಿಗಳು ನಮ್ಮನ್ನು ಸುತ್ತುವರಿದ ಪ್ರಜ್ಞೆ ಹಾಗೂ ಎಚ್ಚರಿಕೆ ಅವರಲ್ಲಿದ್ದವು. ಇಂಥದ್ದೊಂದು ಸಂದೇಹ ಮತ್ತು ಅನುಮಾನಕ್ಕೆ ನಮ್ಮ ಮುಸ್ಲಿಂ ಲೇಖಕರೂ ಒಳಗಾಗುತ್ತಿರುವುದು ಚರ್ಚೆಯಾಗಬೇಕಾದ ಬಹುಮುಖ್ಯ ವಿಷಯಗಳಲ್ಲೊಂದು. ಸ್ವಜಾತಿ ಪ್ರೇಮವಾಗಲಿ ಮತ್ತು ತನ್ನದಲ್ಲದ ಜಾತಿಯನ್ನು ದ್ವೇಷಿಸುವ ಗುಣವಾಗಲಿ ಅನಂತಮೂರ್ತಿ ಅವರಲ್ಲಿ ಇಲ್ಲದೆ ಇದ್ದುದ್ದರಿಂದ ಬೇಂದ್ರೆ, ಮಾಸ್ತಿ, ಅನಕೃ ಅವರಂಥ ಬ್ರಾಹ್ಮಣ ಬರಹಗಾರರಷ್ಟೇ ಕುವೆಂಪು, ದೇವನೂರ ಮಹಾದೇವ, ಚದುರಂಗರಂಥ ಬ್ರಾಹ್ಮಣೇತರ ಲೇಖಕರೂ ಅವರಿಗೆ ಪ್ರಿಯರೂ ಮತ್ತು ಆಪ್ತರೂ ಆಗಿ ಉಳಿಯಲು ಸಾಧ್ಯವಾಯಿತು. ದಾಸರ ಕೀರ್ತನೆಗಳು ಮತ್ತು  ಬಸವಣ್ಣ ಅಲ್ಲಮರ ವಚನಗಳೂ ಅವರ ಓದಿನ ಪ್ರಧಾನ ಆದ್ಯತೆಗಳಾದವು.

ಪಾಶ್ಚಿಮಾತ್ಯ ಸಾಹಿತ್ಯದೊಂದಿಗೆ  ಮುಖಾಮುಖಿ


                  ಕನ್ನಡದ ಕೆಲವು ಬರಹಗಾರರು ಪ್ರಜ್ಞಾಪೂರ್ವಕವಾಗಿಯೇ ಜಗತ್ತಿನ ಸಾಹಿತ್ಯಕ್ಕೆ ಮುಖಾಮುಖಿಯಾಗಿದ್ದು ಕನ್ನಡ ಸಾಹಿತ್ಯದ ಓದುಗರಿಗಾದ ಬಹುದೊಡ್ಡ ಲಾಭವಿದು. ಈ ವಿಷಯದಲ್ಲಿ ಲಂಕೇಶ್, ತೇಜಸ್ವಿ ಅವರಷ್ಟೇ ಅನಂತಮೂರ್ತಿ ಅವರ ಕೊಡುಗೆಯೂ ಅಪಾರವಾಗಿದೆ. ಶಿಕ್ಷಣ ಮತ್ತು ವೃತ್ತಿಯ ನಿಮಿತ್ಯ ಭಾರತದಿಂದ ಒಂದಿಷ್ಟು ಕಾಲ ದೂರ ಉಳಿಯಬೇಕಾಗಿಬಂದ ಕಾರಣ ಇಂಗ್ಲಿಷ್ ಸಾಹಿತ್ಯ ಅನಂತಮೂರ್ತಿ ಅವರನ್ನು ಹೆಚ್ಚು ಪ್ರಭಾವಿಸಿತು. ಈ ಕಾರಣದಿಂದಲೇ ಅನಂತಮೂರ್ತಿ ಅವರ ಲೇಖನಗಳನ್ನು ಓದುವಾಗ ಪಾಶ್ಚಾತ್ಯ ಬರಹಗಾರರು ನಮ್ಮ ಓದಿನ ಅನುಭವಕ್ಕೆ ದಕ್ಕುತ್ತಾರೆ. ಟಾಲ್ ಸ್ಟಾಯ್, ಡಿಡೆರೋ, ಬೋದಿಲೇರ್, ಏಟ್ಸ್, ಬ್ಲೇಕ್, ಲಾರೆನ್ಸ್ ಇವರೆಲ್ಲ ನಮ್ಮದೇ ಭಾಷೆಯವರೆನೋ ಎನ್ನುವಷ್ಟು ನಮಗೆ ಆಪ್ತರಾಗುತ್ತಾರೆ. ಕ್ರಾಂತಿಕಾರಿಯೊಬ್ಬ ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದಾಗ ಎದುರಾಗಬಹುದಾದ ಅಪಾಯವನ್ನು ಕಾನ್ರಾಡ್ ನ 'ದಿ ಸಿಕ್ರೆಟ್ ಏಜೆಂಟ್'   ಕೃತಿಯ ಮೂಲಕ ತೆರೆದಿಡುವರು. ಸ್ವಕೇಂದ್ರದ ವ್ಯಾಮೋಹಕ್ಕೆ ಸಿಲುಕಿದ ಕ್ರಾಂತಿಕಾರಿಯೊಬ್ಬ ತನ್ನ ಹೆಂಡತಿಯ ತಮ್ಮನನ್ನು ಕ್ರಾಂತಿಯ ಉನ್ಮಾದಕ್ಕೆ ಸಿಲುಕಿಸಿ ಅವನನ್ನು ಸಾಯಿಸುತ್ತಾನೆ. ಹೆಂಡತಿ ಇದನ್ನು ತಿಳಿದೊಡನೆ ಮಾಂಸ ಕೊಯ್ಯುವ ಕತ್ತಿಯಿಂದಲೇ ಗಂಡನನ್ನು ಇರಿದು ಸಾಯಿಸುತ್ತಾಳೆ. ಇಲ್ಲಿ ಕಾನ್ರಾಡ್ ಪೋಲೆಂಡಿನ ಅರಾಜಕತೆಯನ್ನು ದುರುಪಯೋಗಪಡಿಸಿಕೊಂಡು ವಿನಾಶವನ್ನು ಪ್ರೀತಿಸುವ ಕ್ರಾಂತಿಕಾರರು ಹೇಗೆ ಕಿಚ್ಚೆಬ್ಬಿಸುತ್ತಾರೆ ಎನ್ನುವುದನ್ನು ಅನನ್ಯವಾಗಿ ಚಿತ್ರಿಸುತ್ತಾನೆ ಎನ್ನುವಲ್ಲಿ ಅನಂತಮೂರ್ತಿ ಅವರ ಮೆಚ್ಚುಗೆ ವ್ಯಕ್ತವಾಗಿದೆ. ದಾಸ್ತೊವಸ್ಕಿ ಮತ್ತು ಬೋದಿಲೇರ್ ತಮ್ಮ ವೇದನೆ ಮತ್ತು ವ್ಯಾಧಿಯಿಂದಲೇ ಲೋಕ ಕಲ್ಯಾಣ ಸಾಧಿಸಬಲ್ಲಂಥ ಸೃಜನಶೀಲರಾದರು ಎನ್ನುವುದನ್ನು ಅನಂತಮೂರ್ತಿ ಸ್ವಪ್ರದರ್ಶನರತಿಯಿಂದ ಹೊರಬಂದ ಬರಹಗಾರರಿಗೆ ಉದಾಹರಣೆಯಾಗಿ ಈ ಇಬ್ಬರು ಲೇಖಕರನ್ನು ಸ್ಮರಿಸುವರು. ಕ್ರೂರ ರಾಜಕೀಯ ವ್ಯವಸ್ಥೆ ಕಲೆ ಸಾಹಿತ್ಯವನ್ನು ಹೊಸಕಿ ಹಾಕುತ್ತಿರುವ ಘಳಿಗೆ ಅನಂತಮೂರ್ತಿ ಓದುಗರನ್ನು ಬ್ರೆಕ್ಟ್ ಗೆ ಮುಖಾಮುಖಿಯಾಗಿಸುತ್ತಾರೆ. ಮೂವತ್ತರ ದಶಕದ ಕ್ರೂರ ರಾಜಕೀಯ ಸನ್ನಿವೇಶದಲ್ಲಿ ಬ್ರೆಕ್ಟ್ ಹೊಟ್ಟೆಯ ಹಸಿವೇ ಎಲ್ಲವನ್ನೂ ಹೇಳುತ್ತಿರುವಾಗ ಫ್ರೆಂಚ್ ಭಾಷೆ ಏಕೆ ಕಲಿಯಬೇಕು ಎಂದು ಪದ್ಯ ಬರೆಯುತ್ತಾನೆ. ಒಂದು ಹಂತದಲ್ಲಿ ಆಫ್ರಿಕದ ಮಹತ್ವದ ಕಾದಂಬರಿಕಾರ ಚಿನುವಾ ಅಚಿಬೆ ಜೊತೆ ಸಂವಾದಕ್ಕಿಳಿಯುವ ಲೇಖಕರು ಓದುಗರನ್ನು ಅಚಿಬೆಯ ವಿಚಾರಗಳ ಮೂಲಕ ಸ್ವದೇಶಿಯತೆ ಮತ್ತು ಸಾರ್ವತ್ರಿಕತೆ ಕುರಿತು ಚಿಂತಿಸುವಂತೆ ಮಾಡುವರು. ಆತ್ಮದಂಡನೆ ಮತ್ತು ಆತ್ಮತೆಗಳಿಕೆಯಿಂದ ಕೆಲವು ಭಾರತೀಯ ಬರಹಗಾರರು ಪಾಶ್ಚಾತ್ಯರಿಗೆ ಅಪ್ಯಾಯಮಾನವಾಗುತ್ತಿರುವರು (ಇಲ್ಲಿ ಮುಖ್ಯವಾಗಿ ಭಾರತಿಯ ಮೂಲದ ನೈಪಾಲ್ ಹೆಸರು ಪ್ರಸ್ತಾಪವಾಗುತ್ತದೆ) ಎಂದು ಚಿನುವಾ ಅಚಿಬೆ ನಮ್ಮನ್ನು ಎಚ್ಚರಿಸುತ್ತಾರೆ.

ಎದುರಾಗುವ ಗಾಂಧಿ 


                  ಗಾಂಧಿ ನಮ್ಮ ಬರಹಗಾರರನ್ನು ಮತ್ತು ಚಿಂತಕರನ್ನು ಹೆಚ್ಚು ಹೆಚ್ಚು ಪ್ರಭಾವಿಸಿದ ಬಹುದೊಡ್ಡ ದಾರ್ಶನಿಕ. ಕನ್ನಡ ಸಾಹಿತ್ಯದಲ್ಲಿ ಅನಂತಮೂರ್ತಿ ಅವರ ಬರಹಗಳಲ್ಲಿ ಗಾಂಧಿ ಚಿಂತನೆಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಈ ವಿಷಯವಾಗಿ ನಾವು ನೆನಪಿಸಿಕೊಳ್ಳಬಹುದಾದ ಇನ್ನೋರ್ವ ಬರಹಗಾರರೆಂದರೆ ಅದು ದೇವನೂರ ಮಹಾದೇವ. ಅನಂತಮೂರ್ತಿ ಅವರ ಈ ಕೃತಿಯಲ್ಲಿ ನಮಗೆ ಅವಮಾನದಲ್ಲೂ ಸಂತಸದಿಂದಿರುವ ಗಾಂಧಿ ಎದುರಾಗುತ್ತಾರೆ. ತನ್ನನ್ನು ಜೈಲಿಗೆ ಹಾಕಿದ ಜನರಲ್ ಸ್ಮಟ್ಸಿಗೆ ಚಪ್ಪಲಿ ಹೊಲಿದು ಕೊಟ್ಟ ಗಾಂಧೀಜಿ ತಾನು ಪ್ರೀತಿಸಿದವರನ್ನೂ ಅಳಿಸಬಲ್ಲಷ್ಟು ನಿಷ್ಟುರ. ಅನಂತಮೂರ್ತಿ ಅವರು ಹೇಳುವಂತೆ ರಾಜಕೀಯವಾಗಿ ಗಾಂಧೀಜಿ ಸಾಮ್ರಾಜ್ಯಶಾಹಿಯನ್ನು ಬದುಕಿನ ಬಹುದೊಡ್ಡ ಶತ್ರುವಾಗಿ ಕಂಡರು. ಗಾಂಧೀಜಿ ಸಾಮ್ರಾಜ್ಯಶಾಹಿಯನ್ನು ಎಲ್ಲಿಯವರೆಗೆ ತಿರಸ್ಕರಿಸಬೇಕಾಯಿತೆಂದರೆ ಮಂಡಿಯ ಮೇಲೆ ಒಂದು ತುಂಡು ಪಂಚೆಯನ್ನು ಮಾತ್ರ ಉಡುವಷ್ಟು. ಅವರೊಳಗಿನ ಆ ನಿಗ್ರಹದ ಬಿಗಿಗೆ ವ್ಯವಸ್ಥೆಯ ಆಗ್ರಹದ ಹಂಗಿರಲಿಲ್ಲ, ಕಣ್ಣಿಟ್ಟು ಕಾಯುವ ಪ್ರಭು ಇರಲಿಲ್ಲ. ಸಾಮ್ರಾಜ್ಯಶಾಹಿಯಾಗುವ ಪ್ರಲೋಭನೆಯೇ ಇಲ್ಲವಾಗುವ ವ್ಯವಸ್ಥೆ ಗಾಂಧಿಯದು ಎನ್ನುತ್ತಾರೆ ಅನಂತಮೂರ್ತಿ. ಚಿನುವಾ ಅಚಿಬೆಯೊಂದಿಗಿನ ಸಂದರ್ಶನದಲ್ಲಿ ಗಾಂಧಿ ಮತ್ತೊಮ್ಮೆ ಚೆರ್ಚೆಗೆ ಗ್ರಾಸವಾಗುತ್ತಾರೆ. ಇಲ್ಲಿ ಲೇಖಕರು ಗಾಂಧಿಯ 'ಹಿಂದ್ ಸ್ವರಾಜ್ಯ' ಕೃತಿಯನ್ನು ಕಾರ್ಲ್ ಮಾರ್ಕ್ಸ್ ನ 'ದಾಸ್ ಕ್ಯಾಪಿಟಲ್' ನ ಶ್ರೇಷ್ಠತೆಗೆ ಎತ್ತರಿಸುತ್ತಾರೆ. ಜಾಗತೀಕರಣ ಈ ದೇಶದ ಗುಡಿ ಕೈಗಾರಿಕೆಗಳನ್ನು ನಾಶಗೊಳಿಸುತ್ತಿರುವ ಹೊತ್ತು ಅನಂತಮೂರ್ತಿ ಅವರಿಗೆ ಗಾಂಧೀಜಿ ಮತ್ತೆ ನೆನಪಾಗುತ್ತಾರೆ. 'ಬಹು ಉತ್ಪನ್ನವಲ್ಲ ಬಹು ಜನರಿಂದ ಉತ್ಪನ್ನ' ಎಂಬ ಗಾಂಧಿ ಸೂತ್ರ ಕಂಪ್ಯೂಟರ್ ಟೆಕ್ನಾಲಜಿ ಭ್ರಮೆಯಲ್ಲಿ ಮರೆತು ಹೋಗುವ ಚಿಹ್ನೆಗಳು ಕಾಣಿಸಿಕೊಂಡಿವೆ ಎಂದು ಆತಂಕ ವ್ಯಕ್ತಪಡಿಸುವರು. ಭಾರತದ ರಾಜಕಾರಣ ಭ್ರಷ್ಟಾಚಾರದ ರೂಪ ಪಡೆಯುತ್ತಿರುವಾಗ ನಮಗೆ ಮತ್ತೆ ಗಾಂಧಿ ಎದುರಾಗುತ್ತಾರೆ. ಗಾಂಧೀಜಿಯದು ನೈತಿಕ ಅರಿವಿನಿಂದ ಹುಟ್ಟಿದ ರಾಜಕಾರಣವಾದರೆ ಅವರ ನಂತರದ ಭಾರತದಲ್ಲಿ ರಾಜಕಾರಣವೆಂದರೆ ಆಯಾ ವರ್ಗಗಳ, ಜಾತಿಗಳ ಪ್ರತ್ಯೇಕ ಆಸಕ್ತಿಗಳನ್ನು ಗಿಟ್ಟಿಸಿಕೊಳ್ಳುವ ಪೈಪೋಟಿಯಲ್ಲಿ ಕ್ಷಣಿಕ ಹೊಂದಾಣಿಕೆಯನ್ನು ಸಾಧಿಸಿಕೊಳ್ಳುವ ತಂತ್ರಗಾರಿಕೆಯಾಗಿಬಿಟ್ಟಿದೆ ಎನ್ನುವುದು ಅವರ ಅಭಿಮತ. ಕರ್ನಾಟಕದಲ್ಲಿನ ರೈತ ಚಳವಳಿಯನ್ನು ಗಾಂಧೀಜಿ ಅವರ ಹೋರಾಟದೊಂದಿಗೆ ಹೋಲಿಸಿ ನೋಡುವ ಅನಂತಮೂರ್ತಿ ಅವರು  'ರೈತ ಸಂಘದವರು ಹಳ್ಳಿಯ ಶ್ರೀಮಂತನ ಕ್ರೌರ್ಯವನ್ನು ವಿರೋಧಿಸುವಷ್ಟು ಆಧುನಿಕರಣದ ವಾದಿಗಳಿಂದ ಉಂಟಾಗುವ ಕ್ರೌರ್ಯವನ್ನು ಅರ್ಥಮಾಡಿಕೊಂಡಿಲ್ಲ. ಈ ವಿಷಯದಲ್ಲಿ ಗಾಂಧೀಜಿ ಮಾಡಿದ ಕೆಲಸ ತುಂಬ ಅಪೂರ್ವವಾದದ್ದು. ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುವಾಗ ಗಾಂಧೀಜಿ ಏಕಕಾಲದಲ್ಲಿ ಇಡೀ ದೇಶದ ವೈರಿಯಾದ ಬ್ರಿಟಿಷರನ್ನೂ ದೇಶದೊಳಗೇ ದಲಿತರ ಏಳಿಗೆಗೆ ಕಂಟಕಪ್ರಾಯವಾದ ಸವರ್ಣಿಯರ ಮುರ್ಖತನವನ್ನೂ ಒಟ್ಟಾಗಿ ವಿರೋಧಿಸಿದರು. ರೈತಸಂಘ ಇಂಥ ಕೆಲಸ ಮಾಡಬಹುದಿತ್ತು ಆದರೆ ಮಾಡಲಿಲ್ಲ' ಎಂದು ಬರೆಯುತ್ತಾರೆ. ಪ್ರಾಚೀನದಲ್ಲಿ ಯಾವುದು ಉಳಿಯಬೇಕು ಯಾವುದು ಬೇಡ ಎನ್ನುವ ಪ್ರಶ್ನೆ ಲೇಖಕರಿಗೆ ಎದುರಾದಾಗ ಇಲ್ಲಿ ಅವರಿಗೆ ಗಾಂಧೀಜಿ ಬದುಕಿನ ಘಟನೆಯೊಂದು ನೆನಪಾಗುತ್ತದೆ. ಜುಟ್ಟು ಮತ್ತು ಜನಿವಾರ ಎರಡನ್ನೂ ಆಯ್ದುಕೊಳ್ಳಬೇಕಾದ ಸಂದರ್ಭ ಗಾಂಧಿ ಭಾರತೀಯ ಸಂಸ್ಕೃತಿಯ ಜುಟ್ಟನ್ನು ಮಾತ್ರ ಆಯ್ದು ಜನಿವಾರವನ್ನು ತ್ಯಜಿಸುತ್ತಾರೆ. ಹೀಗೆ ಮಾಡುವುದರ ಮೂಲಕ ಗಾಂಧಿ ಸಂಸ್ಕೃತಿಯ ಸಜೀವತೆ  ಇರುವುದು ಇಂಥ ಆಯ್ಕೆಗಳ ನೈತಿಕ ಪ್ರಜ್ಞೆ ನಮ್ಮೆಲ್ಲರಲ್ಲೂ ಕೆಲಸ ಮಾಡುತ್ತಿರುವಾಗ ಎಂದು ತೋರಿಸಿ ಕೊಟ್ಟರು. ಒಟ್ಟಾರೆ ಗಾಂಧಿ ವಿಚಾರಗಳು ಮತ್ತು ಅವರ  ಬದುಕಿನ ಮೌಲ್ಯಗಳು  ನಮ್ಮನ್ನು ಕೈಹಿಡಿದು  ನಡೆಸುವ ಬೆಳಕಿನ ಕಿರಣಗಳೆಂಬ ಚಿಂತನೆ ಅನಂತಮೂರ್ತಿ  ಅವರದು.

                ದೇವನೂರರ ಒಡಲಾಳ, ಶೂದ್ರ ಪತ್ರಿಕೆ, ಗೋಕಾಕ ಚಳವಳಿ, ಅವಸ್ಥೆಯನ್ನು ಸಮರ್ಥಿಸಿಕೊಂಡಿದ್ದು, ಫ್ರಾಂಕ್ ಫರ್ಟ್ ಗೆ ಭೇಟಿ, ಅಮೆರಿಕಾದಲ್ಲಿನ ಕನ್ನಡಿಗರ ಮನಸ್ಥಿತಿ, ದಲಿತ ಸಾಹಿತ್ಯ, ಕನ್ನಡ ಮತ್ತು ವಿಕೇಂದ್ರಿಕರಣ ಇನ್ನು ಹಲವು ಲೇಖನಗಳಲ್ಲಿ ಅನಂತಮೂರ್ತಿ ಅವರ ಚಿಂತನೆಗಳು ನಮ್ಮ ಓದಿಗೆ ದಕ್ಕುತ್ತವೆ. ವಿಮರ್ಶಕ ರಾಜಶೇಖರ ತಮ್ಮ ಒಂದು ಲೇಖನದಲ್ಲಿ ಹೇಳಿದಂತೆ ಅನಂತಮೂರ್ತಿ ಅವರು ತಮ್ಮ ಲೇಖನಗಳಲ್ಲಿ ಎಲ್ಲಿಯೂ ಇದೆ ಕೊನೆಯ ಮಾತು ಎಂಬಂತೆ ಏನೂ ಹೇಳುವುದಿಲ್ಲ. ಕಪ್ಪು-ಬಿಳುಪು, ತಪ್ಪು-ಸರಿ, ಅದು-ಇದು ಎಂದು ಜಗತ್ತಿನ ಬಗ್ಗೆ ಸರಳ ತೀರ್ಮಾನಗಳಿಗೆ ಬರುವುದು, ಪಕ್ಷ ವಹಿಸಿ ಮಾತನಾಡುವುದು ಈ ಸಲೀಸು ನಮೂನೆಗಳು ಅನಂತಮೂರ್ತಿ ಅವರ ಜಾಯಮಾನದಲ್ಲೇ ಇಲ್ಲ. ಒಟ್ಟಾರೆ ಅನಂತಮೂರ್ತಿ ಅವರ ಬರಹಗಳಲ್ಲಿ ಎಲ್ಲವನ್ನೂ  ಕ್ಷಮಿಸಿ ಬಿಡುವ ತಾಯ್ತನದ ಗುಣವಿದೆ. ಇದಕ್ಕೆ ಉದಾಹರಣೆಯಾಗಿ ಅವರ ಒಂದು ಲೇಖನದಲ್ಲಿನ ಈ ಮುಂದಿನ ಸಾಲುಗಳನ್ನು ಗಮನಿಸಿ 'ನಮ್ಮ ದೇಶ ಇನ್ನೂ ಎರಡೂ ಮೂರೂ ಶತಮಾನ ಪ್ರಯತ್ನಿಸಿದರೂ ಮುಟ್ಟಲಾರದ ಸಮೃದ್ಧಿಯನ್ನು ಅನಿವಾಸಿ ಭಾರತಿಯರಾದ ನೀವು ಒಂದು ದಿನದ ಪ್ರಯಾಣದಲ್ಲಿ   ಪಡೆದಿರುವಿರಿ. ಭಾರತದ ಅಸಂಖ್ಯಾತ ಬಡವರು ಈ ಕನಸನ್ನು ಸಹ ಕಾಣಲಾರರು. ಆದರೆ ಇಂಡಿಯಾದ ಭವಿಷ್ಯವನ್ನು ರೂಪಿಸುವವರು ನೀವಲ್ಲ ಅವರು. ಯಾಕೆಂದರೆ ನಿಮ್ಮ ಹಾಗೆ ಅವರು ಶತಮಾನಗಳನ್ನು ಜಿಗಿಯಲಾರರು. ಆದ್ದರಿಂದ ಅವರು ಭಾರತಕ್ಕೆ ಬದ್ಧರು. ಅವರು ತುಳಿಯುವ ಹಾದಿ ಕ್ರಾಂತಿಯಾದರೆ, ಹಿಂಸೆಯಾದರೆ ಅದನ್ನು ಟೀಕಿಸುವ ಹಕ್ಕು ನಿಮಗಿಲ್ಲ. ಈ ಮಾತುಗಳನ್ನು ಬರೆಯುತ್ತಿದ್ದಂತೆ ನನಗೆ ಮುಜುಗರವಾಗುತ್ತಿದೆ. ಅಮೆರಿಕಾದಲ್ಲಿರುವ ಈ ಕನ್ನಡಿಗರಲ್ಲಿ ಹಲವರು ವಾರಾನ್ನದಿಂದ ಓದಿದವರು. ತಮ್ಮಂದಿರ ವಿದ್ಯಾಭ್ಯಾಸ, ತಂಗಿಯರ ಮದುವೆ ಇತ್ಯಾದಿ ಜವಾಬ್ದಾರಿಗಳ ನಿರ್ವಹಣೆಗಾಗಿ ವಲಸೆ ಬಂದವರು. ಇಲ್ಲಿ ನನಗೆ ಯಾರನ್ನೂ ಟೀಕಿಸುವ ಅಧಿಕಾರವಿಲ್ಲ'. ಅನಂತಮೂರ್ತಿ ಅವರ ಈ ಮನಸ್ಥಿತಿಯನ್ನು ಕೆಲವು ವಿಮರ್ಶಕರು ದ್ವಂದ್ವ, ಇಬ್ಬಂದಿತನ, ತೊಳಲಾಟ ಎಂದು ಕರೆಯುವುದುಂಟು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಈ ಇಬ್ಬಂದಿತನದಿಂದ ಓದುಗರನ್ನೂ ದಿಕ್ಕು ತಪ್ಪಿಸುತ್ತಾರೆ ಎಂದು ವಿಮರ್ಶಿಸುತ್ತಾರೆ.  ಆದರೆ ಅನಂತಮೂರ್ತಿ ಅವರ ಮನಸ್ಥಿತಿಯನ್ನು ನಾನು ಹೊಸ ವಿಚಾರಗಳ ಹುಟ್ಟಿಗಾಗಿ ಹಂಬಲಿಸಿದ ಚಿಂತಕನ ಒಳನೋಟಗಳು ಎಂದು ಹೇಳಲು ಇಚ್ಚಿಸುತ್ತೇನೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Monday, February 2, 2015

ಅಜಾತಶತ್ರುವಿಗೆ ಅತ್ಯುನ್ನತ ಗೌರವ




          ಅಟಲ್ ಬಿಹಾರಿ ವಾಜಪೇಯಿ ಅವರಿಗೀಗ ೯೦ ವರ್ಷ ವಯಸ್ಸು. ಅವರು ರಾಜಕಾರಣ ಮತ್ತು ಸಾರ್ವಜನಿಕ ಬದುಕಿನಿಂದ ನಿವೃತ್ತರಾಗಿ ಹತ್ತಿರ ಹತ್ತಿರ ಹತ್ತು ವರ್ಷಗಳು ಕಳೆದು ಹೋಗಿವೆ. ಈ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳಾಗಿವೆ. ಕಳೆದ ಹತ್ತು ವರ್ಷಗಳ ರಾಷ್ಟ್ರದ ರಾಜಕಾರಣದಲ್ಲಿ ಕಾಣಿಸಿಕೊಂಡ ಭ್ರಷ್ಟಾಚಾರ, ಅಪ್ರಾಮಾಣಿಕತೆ, ನಿರಂಕುಶ ಪ್ರಭುತ್ವ, ಅಸಮರ್ಥ ಆಡಳಿತ ಸಾರ್ವಜನಿಕರಲ್ಲಿ ದಿಗಿಲು ಮತ್ತು ಆತಂಕ ಮೂಡಿಸಿವೆ. ರಾಜಕೀಯದ ಪಡಸಾಲೆಯಲ್ಲಿ ಪ್ರಾಮಾಣಿಕತೆ, ದಕ್ಷತೆ, ಮೃದುತ್ವ, ಸೃಜನಶೀಲತೆ, ವೈಚಾರಿಕತೆ, ಸರಳತೆ, ಸಜ್ಜನತೆ ನೋಡಲು ಸಿಗುತ್ತಿಲ್ಲ. ರಾಜಕಾರಣ ಎನ್ನುವುದು ಸೇಡು, ದ್ವೇಷ, ಪ್ರತಿಕಾರ, ಜಿದ್ದಾಜಿದ್ದಿನ ಕಣವಾಗಿ ರೂಪಾಂತರಗೊಂಡಿದೆ. ಇವತ್ತಿನ ಈ ರಾಜಕಾರಣ ನಮ್ಮನ್ನೆಲ್ಲ ಭ್ರಮನಿರಸನ ಗೊಳಿಸುತ್ತ ಅದು ವಿರೂಪ ಮತ್ತು ವಿಕಾರಗೊಳ್ಳುತ್ತಿರುವ ಈ ಸಂದರ್ಭ ರಾಜಕಾರಣಕ್ಕೊಂದು ಹೊಸ ವ್ಯಾಖ್ಯಾನ ನೀಡಿದ ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಒಂದು ದಶಕದ ನಂತರ ಮತ್ತೊಮ್ಮೆ ನಮಗೆ ನೆನಪಾಗುತ್ತಿರುವರು. ಬದುಕಿನ ಮುಸ್ಸಂಜೆಯಲ್ಲಿರುವ ತೊಂಬತ್ತರ ಇಳಿವಯಸ್ಸಿನ ಕವಿಮನಸ್ಸಿನ ರಾಜಕಾರಣದ ಈ ಅಜಾತುಶತ್ರುವಿಗೆ ಭಾರತ ಸರ್ಕಾರ ಅತ್ಯುನ್ನತ ಗೌರವ ಎಂದೇ ಪರಿಗಣಿತವಾದ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಎಂದೋ ದೊರೆಯಬೇಕಿದ್ದ ಗೌರವ ಬಹಳ ತಡವಾಗಿ ಸಂದಿದೆ. ದೊರೆತ ಗೌರವಕ್ಕೆ ಸ್ಪಂದಿಸುವ ಮತ್ತು ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಲ್ಲ. ಸುದೀರ್ಘ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ವಾಜಪೇಯಿ ಅವರ ಶರೀರ ಹತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಿಂದ ಬಳಲಿದೆ. ಭಾರತದ ದೌರ್ಭಾಗ್ಯವೇ ಅಂಥದ್ದು ಏಕೆಂದರೆ ಇಲ್ಲಿ ಸಾಧಕರನ್ನು ಯಾವ ರಾಗ ದ್ವೇಷಗಳಿಗೂ ಒಳಗಾಗದೆ, ಯಾವ ಜಾತಿ-ಧರ್ಮಗಳಿಗೂ ಸೀಮಿತಗೊಳಿಸಿದೆ ನೋಡುವ ವಿಶಾಲ ಮನಸ್ಸಿನ ಕೊರತೆ ಇದೆ. ಅದಕ್ಕೆಂದೇ ದೇಶದ ಈ ಮುತ್ಸದ್ದಿ ರಾಜಕಾರಣಿಗೆ ದೇಶದ ಅತ್ಯುನ್ನತ ಗೌರವ  ಸಿಗಲು ಅವರದೇ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಕಾಯಬೇಕಾಯಿತು. 

           ರಾಜಕಾರಣವನ್ನು ವಿಶಾಲ ಅರ್ಥದಲ್ಲಿ ನೋಡಿದ ಮತ್ತು ಆ ನೋಟವನ್ನು ಕ್ರಿಯೆಯಾಗಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿ ಅವರು ಹುಟ್ಟಿದ್ದು ಮಧ್ಯಪ್ರದೇಶದ  ಗ್ವಾಲಿಯರ್ ನಲ್ಲಿ ೧೯೨೪ ರ ಡಿಸೆಂಬರ್ ೨೫ ರಂದು ಅಟಲ್ ಬಿಹಾರಿ ಅವರ ತಂದೆ ಮೂಲತ: ಉತ್ತರ ಪ್ರದೇಶದ ಬಟೀಶ್ವರದವರು. ವೃತ್ತಿ ನಿಮಿತ್ಯ ವಲಸೆ ಬಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನೆಲೆ  ನಿಂತ ಕೃಷ್ಣ ಬಿಹಾರಿ  ವಾಜಪೇಯಿ ಅವರಿಗೆ ನಾಲ್ಕು ಗಂಡು ಮತ್ತು ಮೂವರು ಹೆಣ್ಣು ಮಕ್ಕಳು. ತಾತನ ಅಗಾಧ   ಪಾಂಡಿತ್ಯ ಮತ್ತು ಅವರಲ್ಲಿನ ಸಂಸ್ಕಾರ ಬಾಲ್ಯದಲ್ಲೇ ಅಟಲ್ ಬಿಹಾರಿ ವಾಜಪೇಯಿ ಅವರ ಮೇಲೆ ಗಾಢ ಪ್ರಭಾವ ಬೀರಿದವು. ಮನೆಯಲ್ಲಿ ಪಠಿಸುತ್ತಿದ್ದ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಬದುಕನ್ನು ಪ್ರಾಮಾಣಿಕತೆಯ ನೆಲೆಯಲ್ಲಿ ರೂಪಿಸಿಕೊಳ್ಳಲು ನೆರವಾದವು.  

             ವಿದ್ಯಾರ್ಥಿ ದೆಸೆಯಲ್ಲಿ ಹಿಂದಿ, ಇಂಗ್ಲಿಷ್, ಸಂಸ್ಕೃತ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ವಾಜಪೇಯಿ ಅವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾನೂನು ಪದವಿಯನ್ನು ಪಡೆದರು. ಅವರು ವಿದ್ಯಾರ್ಥಿಯಾಗಿದ್ದ ಸಂದರ್ಭ ಭಾರತದ ಸ್ವಾತಂತ್ರ್ಯ ಚಳುವಳಿ ಅತ್ಯಂತ ಪ್ರಖರವಾಗಿದ್ದ ದಿನಗಳವು. ಗಾಂಧೀಜಿ  ಕರೆಗೆ ಓಗೊಟ್ಟು ಚಳುವಳಿಗೆ  ಧುಮುಕಿದ ವಾಜಪೇಯಿ ಅವರು ೧೯೪೨ ರಲ್ಲಿ ಸೆರೆಮನೆ ವಾಸವನ್ನು ಅನುಭವಿಸ ಬೇಕಾಯಿತು. ಬಾಲ್ಯದಿಂದಲೇ ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಪರಿಣಾಮ ತಮ್ಮ ಬದುಕನ್ನೇ ರಾಷ್ಟ್ರ ಸೇವೆಗಾಗಿ ಮುಡುಪಾಗಿಟ್ಟರು. ತಾರುಣ್ಯದ ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು  ಸೇರಿ ವೈಯಕ್ತಿಕ ಬದುಕಿನ ಮಹತ್ವಾಕಾಂಕ್ಷೆಯನ್ನೆಲ್ಲ ಬದಿಗೆ ಸರಿಸಿ ರಾಷ್ಟ್ರದ ಪ್ರಗತಿಗಾಗಿ ತಮ್ಮ ಬದುಕನ್ನೇ ಧಾರೆ ಎರೆದರು.      

            ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರತಿ ಚಟುವಟಿಕೆಯಲ್ಲಿ ವಾಜಪೇಯಿ ಅವರದು ಸಕ್ರಿಯವಾದ ಪಾತ್ರ. ಭಾರತ ಸ್ವಾತಂತ್ರ್ಯಾ ನಂತರ ಅಖಂಡ ಹಿಂದೂಸ್ತಾನ ಒಡೆದು ಇಬ್ಭಾಗವಾಗಿತ್ತು. ಹಿಂದೂ ಮುಸ್ಲಿಂ ಸಂಘರ್ಷದಿಂದ ದೇಶದ ಏಕತೆಗೆ ಗಂಡಾಂತರ ಬಂದೊದಗಿತ್ತು. ಇಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ರಾಷ್ಟ್ರ ಧರ್ಮ ಪತ್ರಿಕೆಯ ಸಂಪಾದಕರಾಗಿ ಅಟಲ್ ಬಿಹಾರಿ ವಾಜಪೇಯಿ ಮೌಲಿಕ ಲೇಖನಗಳನ್ನು ಪ್ರಕಟಿಸಿ ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಪಾಂಚಜನ್ಯ, ಕರ್ಮಯೋಗಿ, ಸ್ವದೇಶ, ವೀರ ಅರ್ಜುನ ಪತ್ರಿಕೆಗಳು ಸಹ ಅವರ ಸಂಪಾದಕತ್ವದಲ್ಲಿ ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವ ಪತ್ರಿಕೆಗಳಾಗಿ ರೂಪುಗೊಂಡವು. ಪತ್ರಿಕೋದ್ಯಮದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದ ಸಂದರ್ಭದಲ್ಲೇ ಅಟಲ್ ಬಿಹಾರಿ ವಾಜಪೇಯಿ ಅವರ ಬದುಕು ಬೇರೊಂದು ಮಗ್ಗಲಿಗೆ ಹೊರಳಿಕೊಂಡಿತು. 


ರಾಜಕೀಯ ಪ್ರವೇಶ 


             ಭಾರತದ ರಾಜಕಾರಣದ ಏನೆಲ್ಲಾ ದೌರ್ಭಾಗ್ಯಗಳ ನಡುವೆಯೂ ಇಲ್ಲಿ ವಾಕ್ ಮತ್ತು ಪ್ರತಿರೋಧದ ಸ್ವಾತಂತ್ರ್ಯ ನೀಡಿರುವುದು ಅದು ಪ್ರಜಾಪ್ರಭುತ್ವದ ಹೆಗ್ಗಳಿಕೆಯೂ ಹೌದು. ಭಾರತದ ಸ್ವಾತಂತ್ರ್ಯದ ಪೂರ್ವದಿಂದಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೊಂದಿಗೆ ಭಿನ್ನಾಭಿಪ್ರಾಯದ ನೆಲೆಯಲ್ಲೇ ಸಂಘರ್ಷಣೆಗಿಳಿಯುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ವಾತಂತ್ರ್ಯಾ ನಂತರವೂ ತನ್ನ ವೈಚಾರಿಕ ಸಂಘರ್ಷವನ್ನು ಮುಂದುವರೆಸಿತು. ತನ್ನ ಹೋರಾಟವನ್ನು ಮತ್ತಷ್ಟು ಪ್ರಖರಗೊಳಿಸಲು ಸಂಘಕ್ಕೆ ರಾಜಕೀಯ ಅಸ್ತಿತ್ವದ ಅನಿವಾರ್ಯತೆ ಎದುರಾಯಿತು. ಅಂಥದ್ದೊಂದು ಅನಿವಾರ್ಯತೆಯ ಪರಿಣಾಮ ೧೯೫೧ ರಲ್ಲಿ ಭಾರತಿಯ ಜನಸಂಘ ಉದಯವಾಯಿತು. ಜನಸಂಘದ ಉದಯದಿಂದ ಅದರ ಜೊತೆಗಿದ್ದ ವಾಜಪೇಯಿ ಅದೇ ಪಕ್ಷವನ್ನು ಅಧಿಕಾರದ ಗದ್ದುಗೆಗೇರಿಸುವವರೆಗೂ ವಿಶ್ರಮಿಸಲಿಲ್ಲ. ೧೯೫೫ ರಲ್ಲಿ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಲಖನೌ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡ ವಾಜಪೇಯಿ ೧೯೫೭ ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಬಲರಾಮಪುರ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಯನ್ನು ಪ್ರವೇಶಿಸಿದರು. ಪ್ರಥಮ ಅವಧಿಯಲ್ಲೇ ತಮ್ಮ ವಿಶ್ಲೇಷಣಾತ್ಮಕ ಮತ್ತು ತರ್ಕಪೂರ್ಣ ವಿಚಾರ ಹಾಗೂ ಮಾತಿನ ಓಘದಿಂದ ಪ್ರಧಾನಿ ನೆಹರು ಅವರ ಗಮನ ಸೆಳೆದು ಅವರಿಂದ 'ಮುಂದೊಂದು ದಿನ ದೇಶದ ಪ್ರಧಾನಿಯಾಗುವ ಎಲ್ಲ ಅರ್ಹತೆಗಳು ಈ ಯುವಕನಿಗಿವೆ' ಎಂದು ಹೊಗಳಿಸಿಕೊಂಡರು. 

          ಇವತ್ತಿನ ಅನೇಕ ತರುಣ ಪೀಳಿಗೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದೊಮ್ಮೆ ವಿದೇಶಾಂಗ ಸಚಿವರಾಗಿದ್ದರು ಎನ್ನುವ ಸಂಗತಿ ಗೊತ್ತಿರಲಿಕ್ಕಿಲ್ಲ. ೧೯೭೫ ರ ತುರ್ತು ಪರಿಸ್ಥಿತಿ ಭಾರತದ ರಾಜಕೀಯದಲ್ಲಿ ಮಹತ್ವಪೂರ್ಣ ಬದಲಾವಣೆಗೆ ಕಾರಣವಾಯಿತು. ತುರ್ತುಪರಿಸ್ಥಿತಿಯ ನಂತರ ೧೯೭೭ ರಲ್ಲಿ ನಡೆದ ಚುನಾವಣೆಯಲ್ಲಿ ಮೂರು ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಪರಾಭವಗೊಂಡು ಪ್ರಥಮ ಬಾರಿಗೆ ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅಂದಿನ ಆ ಸರ್ಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಿದೇಶಾಂಗ ಸಚಿವರಾಗಿ ಪದಗ್ರಹಣ ಮಾಡಿದರು. 

            ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿದ್ದ ಆ  ಅವಧಿ ಭಾರತದ ರಾಜಕೀಯ ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಬನ್ನಿಸಲ್ಪಟ್ಟಿದೆ. ವಿದೇಶಾಂಗ ಸಚಿವರಾಗಿ ಅವರು ತಳೆದ ನಿಲುವು ಮತ್ತು ಇತರ ರಾಷ್ಟ್ರಗಳೊಂದಿಗಿನ ಸಂಬಂಧ ಸುಧಾರಣೆಗಾಗಿ ಮಾಡಿದ ಪ್ರಯತ್ನ ತುಂಬ ಅಪರೂಪದ್ದು. ನೆರೆಯ ರಾಷ್ಟ್ರಗಳಾದ ಚೀನಾ, ನೇಪಾಳ, ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ತಮ್ಮ ರಾಜತಾಂತ್ರಿಕ ನೈಪುಣ್ಯವನ್ನು ಮೆರೆದ ವಾಜಪೇಯಿ ಹಲವಾರು ದೀರ್ಘಕಾಲಿಕ ಸಮಸ್ಯೆಗಳು    ಇತ್ಯರ್ಥಗೊಳ್ಳಲು ಕಾರಣರಾದರು. ವಿದೇಶಾಂಗ ಸಚಿವರಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿದ ಹೆಗ್ಗಳಿಕೆ ಅವರದು. ತುರ್ತುಪರಿಸ್ಥಿತಿಯಂತಹ ಕರಾಳ  ನೆನಪಿನಿಂದ  ಭಾರತವನ್ನು  ಹೊರತರುವುದು  ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯುವುದು ವಿದೇಶಾಂಗ  ಸಚಿವರಾಗಿ ವಾಜಪೇಯಿ  ಅವರ  ಮುಂದೆ ಬಹುದೊಡ್ಡ ಸವಾಲುಗಳಿದ್ದವು.  ಆ ಎಲ್ಲ ಜವಾಬ್ದಾರಿಗಳನ್ನು ಅವರು ಅತ್ಯಂತ ಆತ್ಮವಿಶ್ವಾಸ ಮತ್ತು   ದಕ್ಷತೆಯಿಂದ  ನಿರ್ವಹಿಸಿದರು.     

            ವಿದೇಶಾಂಗ ಸಚಿವರಾಗಿ ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಮಹತ್ವದ ಸ್ಥಾನ ಮತ್ತು ಮನ್ನಣೆ ತಂದುಕೊಡಬೇಕೆನ್ನುವ ವಾಜಪೇಯಿ ಅವರ ಹಂಬಲ ಸರ್ಕಾರದ ಪತನದ ಪರಿಣಾಮ ಇಡೇರಲಿಲ್ಲ. ಜನತಾ ಪಕ್ಷದೊಳಗಿನ ನಾಯಕರ ಅಧಿಕಾರದ ಆಸೆ ಹಾಗೂ ಒಳಜಗಳ ಪರಿಣಾಮ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರ್ಕಾರ ಬಹುಬೇಗನೆ ಪತನಗೊಂಡಿತು. ಜನತಾ ಪಕ್ಷದವರ ಅಧಿಕಾರದ ಲಾಲಸೆಯಿಂದ ಬೇಸತ್ತು ಅವರೊಂದಿಗೆ ಸರ್ಕಾರ ರಚನೆಯಲ್ಲಿ ಕೈಜೋಡಿಸಿದ್ದ ಭಾರತೀಯ ಜನಸಂಘದ ಸದಸ್ಯರು ಮತ್ತೆ ತಮ್ಮ ಅಸ್ಮಿತೆಯ ಹುಡುಕಾಟದಲ್ಲಿ ತೊಡಗಿದರು. ಅಂಥದ್ದೊಂದು ಹುಡುಕಾಟದ ಪರಿಣಾಮ ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದು ಅಟಲ್ ಬಿಹಾರಿ ವಾಜಪೇಯಿ ಆ ಪಕ್ಷದ ಪ್ರಥಮ ಅಧ್ಯಕ್ಷರಾದರು. ೧೯೮೦ ರಲ್ಲಿ ವಾಜಪೇಯಿ ಅವರ ಸಾರಥ್ಯದಲ್ಲಿ ಚುನಾವಣೆಯನ್ನು ಎದುರಿಸಿದ ಪಕ್ಷ ೧೪ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ೧೯೮೪ ರಲ್ಲಿ ಪಕ್ಷಕ್ಕೆ ದೊರೆತಿದ್ದು ಕೇವಲ ಎರಡು ಸ್ಥಾನಗಳು. ಇಂಥ ಶೋಚನಿಯ ಸ್ಥಿತಿಯಲ್ಲಿದ್ದ ಪಕ್ಷ ಮುಂದೊಂದು ದಿನ ವಾಜಪೇಯಿ ಅವರ ಹೋರಾಟ ಮತ್ತು ನಿರಂತರ ಪ್ರಯತ್ನದಿಂದ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಬಹುದೆನ್ನುವ ಕಲ್ಪನೆಯೇ ಯಾರಿಗೂ ಇರಲಿಲ್ಲ. ವಿಪಕ್ಷದಲ್ಲಿದ್ದುಕೊಂಡೇ ದೇಶದ ಪ್ರಗತಿಯ ಬಗ್ಗೆ ಚಿಂತಿಸಿದ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿದ, ಸರ್ಕಾರದ ಉತ್ತಮ ಕೆಲಸಗಳಿಗೆ ಬೆನ್ನುತಟ್ಟಿದ ಜೊತೆಗೆ ಕರ್ತವ್ಯ ಲೋಪವನ್ನು ಎತ್ತಿತೋರಿಸಿದ ವಾಜಪೇಯಿ ತಮ್ಮ ಸುದೀರ್ಘ ರಾಜಕೀಯ ಅನುಭವದಿಂದ ತಮ್ಮ ಪಕ್ಷವನ್ನು ೧೯೯೬ ರಲ್ಲಿ ಸರ್ಕಾರ ರಚಿಸುವ ಹಂತಕ್ಕೆ ತಂದು ನಿಲ್ಲಿಸಿದರು. 


ಪ್ರಧಾನ ಮಂತ್ರಿಯಾಗಿ ವಾಜಪೇಯಿ 


            ೧೯೯೬ ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಥಮ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಸರ್ಕಾರ ರಚನೆಗೆ ಸ್ಪಷ್ಟ ಬಹುಮತವಿಲ್ಲದಿದ್ದರೂ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪರಿಣಾಮ ರಾಷ್ಟ್ರಪತಿಗಳು ವಾಜಪೇಯಿ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ಬಹುಮತದ ಕೊರತೆಯ ನಡುವೆಯೂ ವಾಜಪೇಯಿ ಪ್ರಧಾನ ಮಂತ್ರಿಯಾದರು. ಆದರೆ ವಾಜಪೇಯಿ ಮತ್ತು ಅವರ ಪಕ್ಷವನ್ನು ಅಧಿಕಾರದಿಂದ ಹೊರಗಿಡಬೇಕೆನ್ನುವ ಪೂರ್ವನಿರ್ಧಾರಿತ ಹುನ್ನಾರದಿಂದ ಯಾವ ಪಕ್ಷವೂ ಅವರನ್ನು ಬೆಂಬಲಿಸಲು ಮುಂದೆ ಬರಲಿಲ್ಲ. ವಿರೋಧ ಪಕ್ಷಗಳ ಹುನ್ನಾರದ ಮುನ್ಸೂಚನೆ ಅರಿತ ವಾಜಪೇಯಿ ಲೋಕಸಭೆಯಲ್ಲಿ ವಿಶ್ವಾಸ ಮತ ಚರ್ಚೆಗೆ ಮೊದಲೇ ರಾಷ್ಟ್ರಪತಿಗಳಿಗೆ ರಾಜಿನಾಮೆ ಸಲ್ಲಿಸಿದರು. ಆ ದಿನ ಪಾರ್ಲಿಮೆಂಟಿನಲ್ಲಿ ವಾಜಪೇಯಿ ಅವರು ಮಾಡಿದ ಭಾಷಣ ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಜನಾದೇಶ, ಬಹುಮತ, ಸಮ್ಮಿಶ್ರ ಸರ್ಕಾರದ ಅಗತ್ಯ, ಆಳುವ ಪಕ್ಷ ಹಾಗೂ ವಿಪಕ್ಷಗಳು ಜೊತೆಗೂಡಿ ಕೆಲಸ ಮಾಡಬೇಕಾದ ಅನಿವಾರ್ಯತೆ, ಚುನಾವಣೆಯಲ್ಲಿ ಆಗಬೇಕಾದ ಸುಧಾರಣೆ, ಪಕ್ಷಗಳನ್ನು ಒಡೆದು ಆಳುವ ಅನೈತಿಕತೆ ಹೀಗೆ ರಾಜಕಾರಣದ ವಿಶ್ಲೇಷಣಾತ್ಮಕ ಚರ್ಚೆಗಿಳಿದ ವಾಜಪೇಯಿ ಆತ್ಮಮಂಥನದ ಅಗತ್ಯವನ್ನು ಮನಗಾಣಿಸಿಕೊಟ್ಟರು. ಅಧಿಕಾರಕ್ಕೇರಿದ ಕೇವಲ ೧೩ ದಿನಗಳಲ್ಲಿ ಅವರ ಸರ್ಕಾರ ರಾಜಕಾರಣಿಗಳ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿ ಪತನಗೊಂಡಿತು. ಅಟಲ್ ಬಿಹಾರಿ ವಾಜಪೇಯಿ ಅವರ ಮಾತಿನ ಓಘ ಮತ್ತು ನಿರ್ಧಾರಕ್ಕೆ ಅಭೂತಪೂರ್ವ ಬೆಂಬಲ ದೊರೆಯಿತು. 'ಸಂಸತ್ತಿನ ಬಲಾಬಲ ಪರೀಕ್ಷೆಯಲ್ಲಿ ವಾಜಪೇಯಿ ಸೋತಿರಬಹುದು ಆದರೆ ಮತದಾರರ ಹೃದಯ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿರುವರು. ವಾಜಪೇಯಿ ವೈಫಲ್ಯವನ್ನೇ ಗೆಲುವನ್ನಾಗಿಸಿಕೊಂಡ ದುರಂತ ನಾಯಕ' ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಲೇಖನ ಪ್ರಕಟಿಸಿತು. 'ಸಂಖ್ಯಾ ಬಲದಲ್ಲಿ ಸಮರ್ಥ ವ್ಯಕ್ತಿಯೊಬ್ಬ ವಿಫಲವಾಗಿದ್ದು ದುರ್ದೈವದ ಸಂಗತಿ' ಎಂದು ಫ್ರೀ ಪ್ರೆಸ್ ಪತ್ರಿಕೆ ಬಣ್ಣಿಸಿತು. 'ವಾಜಪೇಯಿ ಸರ್ಕಾರದ ನಿರ್ಗಮನ ಬಿಜೆಪಿಯ ಅತ್ಯುತ್ಕೃಷ್ಟ ಘಳಿಗೆ. ಜನರಿಗೆ ಈಗ ತಾವು ಎಂಥ ಧೀಮಂತ ನಾಯಕನನ್ನು ಕಳೆದುಕೊಂಡಿದ್ದೇವೆ ಎನ್ನುವ ಅರಿವಾಗಿದೆ' ಎಂದು ಅಡ್ವಾಣಿ ಪ್ರತಿಕ್ರಿಯಿಸಿದರು. 

         ೧೯೯೮ ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ್ತೊಮ್ಮೆ ಜನಾದೇಶ ದೊರೆತು ಅಟಲ್ ಬಿಹಾರಿ ವಾಜಪೇಯಿ ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾದರು. ದುರಾದೃಷ್ಟಕ್ಕೆ ಪ್ರಾದೇಶಿಕ ಪಕ್ಷವೊಂದರ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿ ಸರ್ಕಾರ ಹದಿಮೂರು ತಿಂಗಳುಗಳಲ್ಲೇ ಬಹುಮತ ಕಳೆದುಕೊಂಡಿತು. ನಂತರ ೧೯೯೯ ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ   ಮತ್ತೊಮ್ಮೆ ಬಹುಮತ ಪಡೆದು ವಾಜಪೇಯಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರದ ಪೂರ್ಣಾವಧಿಯನ್ನು ಪೂರೈಸಿದರು. ಪ್ರಧಾನ ಮಂತ್ರಿಯಾಗಿ ವಾಜಪೇಯಿ ಅವರದು ಅನನ್ಯ ಸಾಧನೆ. ಪೊಖ್ರಾನ್ ಅಣ್ವಸ್ತ್ರ ಸ್ಫೋಟ, ಲಾಹೋರ್   ಶೃಂಗ ಸಭೆ, ಕಾರ್ಗಿಲ್ ಯುದ್ಧದಲ್ಲಿ ಭಾರತದ ಜಯಭೇರಿ, ರಾಷ್ಟ್ರೀಯ ಹೆದ್ದಾರಿ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸರ್ವಶಿಕ್ಷಾ ಅಭಿಯಾನ, ಟೆಲಿಕಾಮ್- ಐಟಿ ಬೆಳವಣಿಗೆ, ಪಾಕಿಸ್ತಾನಕ್ಕೆ ಬಸ್ ಸಂಚಾರ ಈ ಬೆಳವಣಿಗೆಗಳು ವಾಜಪೇಯಿ ಅವರ ಸಾಧನೆಯ ಕೆಲವು ಮೈಲಿಗಲ್ಲುಗಳು. 


ಅಜಾತಶತ್ರು 


        ದ್ವೇಷ ಮತ್ತು ಸೇಡಿನ ರಾಜಕಾರಣ ಭಾರತದ ರಾಜಕೀಯ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿರುವ ಈ ಘಳಿಗೆ ವಾಜಪೇಯಿ ತಮ್ಮ ನಿಷ್ಕಳಂಕ ಹಾಗೂ ದ್ವೇಷ ರಹಿತ ರಾಜಕಾರಣದಿಂದ ನಮಗೆ ಹೆಚ್ಚು ಆಪ್ತರಾಗುತ್ತಾರೆ. 'ರಾಜಕೀಯದಲ್ಲಿ ವಿರೋಧವಿದೆ ಆದರೆ ವಿರೋಧಿಗಳಿರುವುದಿಲ್ಲ' ಎನ್ನುವುದು ವಾಜಪೇಯಿ ಅವರ ಅಚಲ  ನಂಬಿಕೆ. ತಮ್ಮ ಸುದೀರ್ಘ ಐದು ದಶಕಗಳ ರಾಜಕೀಯದ ಬದುಕಿನಲ್ಲಿ ಅವರೆಂದೂ ಯಾವ ರಾಜಕೀಯ ನಾಯಕರನ್ನೂ ದ್ವೇಷಿಸಿದವರಲ್ಲ. ತಮ್ಮ ವಿರೋಧಿಗಳು ಉತ್ತಮ ಕೆಲಸ ಮಾಡಿದಾಗ ಯಾವ ಅಸೂಯೆಗೂ  ಒಳಗಾಗದೆ ಹೊಗಳಿದ ಅನೇಕ  ಉದಾಹರಣೆಗಳಿವೆ. ಉತ್ತಮ ಆಡಳಿತಗಾರರಾಗಿ ವಾಜಪೇಯಿ ಅವರಿಗೆ ಜವಾಹರಲಾಲ ನೆಹರು ಎಂದಿಗೂ ಆದರ್ಶ. ೧೯೭೧ ರಲ್ಲಿ ಪಾಕಿಸ್ತಾನದೊಂದಿಗಿನ ವಿಜಯದ ಬಳಿಕ ಇಂದಿರಾ ಗಾಂಧಿಯನ್ನು ಮುಕ್ತಕಂಠದಿಂದ ಶ್ಲಾಘಿಸಲು ಅವರು ಮರೆಯಲಿಲ್ಲ. ಪಂಡಿತ ನೆಹರು ಅವರು ಸಂಸತ್ತಿನಲ್ಲಿ ಅಳಿಸಲಾಗದ ಗುರುತನ್ನು ಬಿಟ್ಟು ಹೋಗಿರುವರು ಎಂದು ಹೊಗಳುವ ವಾಜಪೇಯಿ ಲಾಲಬಹಾದ್ದೂರ ಶಾಸ್ತ್ರಿ ನೆಹರು ಅವರ ಸಮರ್ಥ ಉತ್ತಾರಾಧಿಕಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮೊರಾರ್ಜಿ ದೇಸಾಯಿ ಅವರು ಕೆಲವು ಅಚಲ ನಂಬಿಕೆ, ನಿಶ್ಚಿತ ಅಭಿಪ್ರಾಯ ಹೊಂದಿದ್ದರು ಎಂದು ವಿಶ್ಲೇಷಿಸುವುದರೊಂದಿಗೆ  ರಾಜೀವ ಗಾಂಧಿ ಅವರಲ್ಲಿ  ಬೇರೆಯವರ ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳುವ ಗುಣವಿತ್ತು ಎಂದು ಹೇಳಲು ಹಿಂಜರಿಯುವುದಿಲ್ಲ. ನರಸಿಂಹರಾವ ದೇಶದ ಆರ್ಥಿಕ ಸುಧಾರಣೆಗೆ ಹೊಸ ದಿಕ್ಕನ್ನು ತೋರಿಸುವ ಮಹಾನ್ ಧೈರ್ಯವನ್ನು ಪ್ರದರ್ಶಿಸಿದರು ಎಂದು ವಿರೋಧ  ಪಕ್ಷದಲ್ಲಿದ್ದೂ ಹೊಗಳುವ ಔದಾರ್ಯತೆಯನ್ನು ಮೆರೆಯುವರು. ರಾಜಕಾರಣದ ಸೋಲು, ಗೆಲುವು ಮತ್ತು ಅಧಿಕಾರದ ಅಸ್ಥಿರತೆಯ ನಡುವೆಯೂ ವಾಜಪೇಯಿ ತಮ್ಮ ಸಮಚಿತ್ತದ ಹಾಗೂ ವಿಶಾಲ  ಮನೋಭಾವದಿಂದ ರಾಜಕೀಯದಲ್ಲಿ ಅಜಾತಶತ್ರು ಎನ್ನುವ ಗೌರವಕ್ಕೆ ಪಾತ್ರರಾಗಿರುವರು. 


ಅವರೊಳಗಿನ ಕವಿ 


        ಅಟಲ್ ಬಿಹಾರಿ ವಾಜಪೇಯಿ ಕವಿ  ಮನಸ್ಸಿನ  ಮೃದು ಹೃದಯದ  ರಾಜಕಾರಣಿ. ರಾಜಕಾರಣದ ಅವಕಾಶವಾದಿತನದ ನಡುವೆಯೂ ಅವರು ತಮ್ಮ ವ್ಯಕ್ತಿತ್ವವನ್ನು ಹಸನಾಗಿ ರೂಪಿಸಿಕೊಂಡಿರಲು ಸಾಧ್ಯವಾಗಿದ್ದು ಅವರೊಳಗಿನ ಬರವಣಿಗೆಯ ಸೃಜನಶೀಲತೆಯಿಂದ. ಇಕ್ಕೀಸ್ ಕವಿತಾಯೇಂ, ಕ್ಯಾ ಖೋಯಾ ಕ್ಯಾ ಪಾಯಾ, ಮೇರಿ ಇಕ್ಯಾವನ್ ಕವಿತಾಯೇಂ, ಶ್ರೇಷ್ಠ ಕವಿತಾ, ನಯೀ ದಿಶಾ, ಸಂವೇದನಾ ಇವು ವಾಜಪೇಯಿ ಅವರ ಕೆಲವು ಪ್ರಮುಖ ಕವನ ಸಂಗ್ರಹಗಳು. ತುರ್ತುಪರಿಸ್ಥಿತಿಯ ಸಂದರ್ಭ ಸೆರೆವಾಸದ ಸಮಯ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದು ಕವಿತೆಗಳನ್ನು ಬರೆಯುವುದರ ಮೂಲಕ. ಅದಕ್ಕೆಂದೇ ರಾಜಕಾರಣಿಗಿಂತ ಅವರೊಳಗಿನ ಕವಿಯೇ ವಾಜಪೇಯಿ ಅವರಿಗೆ ಹೆಚ್ಚು ಆಪ್ತ. ಈ ಭಾವನಾಜೀವಿಯ ಕವಿತೆಗಳಲ್ಲಿ ಬದುಕಿನ ದಟ್ಟ ಅನುಭವವಿದೆ. ಅವರ  ಕೆಲವೊಂದು  ಕವಿತೆಗಳಲ್ಲಿ  ರಾಷ್ಟ್ರಪ್ರೇಮವೂ ಅನಾವರಣ ಗೊಂಡಿದೆ. ಹದಿಮೂರು ದಿನಗಳಲ್ಲೇ ಅಧಿಕಾರ ಕೈಯಿಂದ ಜಾರಿದಾಗ, ಹದಿಮೂರು ತಿಂಗಳುಗಳಲ್ಲೇ ಅಧಿಕಾರದಿಂದ  ಕೆಳಗಿಳಿದಾಗ, ಉತ್ತಮ ಆಡಳಿತದ ನಂತರವೂ ಜನಾದೇಶ ವಿರುದ್ಧವಾದಾಗ, ಸಕ್ರಿಯ ರಾಜಕಾರಣದಿಂದ ನಿವೃತ್ತರಾದಾಗ ಈ ಎಲ್ಲ ದ್ವಂದ್ವ ಹಾಗೂ ಅನಿಶ್ಚಿತತೆಯ ನಡುವೆಯೂ ಅಟಲ್ ಜೀ ಅಟಲ್ ಜೀಯಾಗಿಯೆ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ಕಾರಣವಾಗಿರುವುದು   ಅವರೊಳಗಿನ ಬರವಣಿಗೆಯ ಶಕ್ತಿಯಿಂದ. ಬರಹಗಾರ ಕಲಾತ್ಮಕತೆಯ ಬೆನ್ನು ಹತ್ತಿದಾಗ ಆತನ ಬರವಣಿಗೆಯಲ್ಲಿ ಸತ್ಯವನ್ನು ಮರೆಮಾಚುವ ಅಪಾಯ ಎದುರಾಗುತ್ತದೆ. ಆದರೆ ವಾಜಪೇಯಿ ಅವರ ಕವಿತೆಗಳಲ್ಲಿ ಕಲಾತ್ಮಕತೆ ಮತ್ತು ಸತ್ಯ ಎರಡೂ ಒಟ್ಟಾಗಿ ಮೇಳೈಸಿವೆ. ಈ ದೃಷ್ಟಿಯಿಂದ ಅವರೊಬ್ಬ ಅಪರೂಪದ ಕವಿ. 

ಎತ್ತರ ಶಿಖರದ ಮೇಲೆ 
ಮರ ಬೆಳೆಯುವುದಿಲ್ಲ 
ಗಿಡ ಚಿಗುರುವುದಿಲ್ಲ 
ಹುಲ್ಲೂ ಹುಟ್ಟುವುದಿಲ್ಲ 

ಬರೀ ಮಂಜು 
ಗಡ್ಡೆ ಕಟ್ಟುತ್ತದೆ 
ಹೆಣದ  ಹೊದಿಕೆಯಂತೆ ಬೆಳ್ಳಗೆ 
ಹೆಣದಂತೆ ತಣ್ಣಗೆ 

ನನ್ನ ಪ್ರಭುವೇ 
ಅಂಥ ಎತ್ತರವನ್ನು 
ನನಗೆಂದೂ ನೀಡದಿರು 
ಅಂಥ ಎತ್ತರದ ಕಠೋರತೆಯನ್ನೆಂದೂ ನೀಡದಿರು 

(ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ವಾಜಪೇಯಿ ಅವರ ಕವನದಿಂದ)


ಕೊನೆಯ ಮಾತು 


      ಅಟಲ್ ಬಿಹಾರಿ ವಾಜಪೇಯಿ ಅವರಂಥ ರಾಜಕಾರಣಿ ಭಾರತದ ರಾಜಕೀಯದಲ್ಲಿ ಅತಿ ವಿರಳ. ಉತ್ತಮ ವಾಗ್ಮಿ, ಶ್ರೇಷ್ಠ  ಸಂಸದಿಯ ಪಟು, ದಕ್ಷ ಆಡಳಿತಗಾರ, ಆರ್ದ್ರ ಮನಸ್ಸಿನ ಕವಿ, ಶುದ್ಧ ಚಾರಿತ್ರ್ಯದ ಭಾವನಾ ಜೀವಿ ಈ ಎಲ್ಲ ಗುಣಗಳ ಒಟ್ಟು ವ್ಯಕ್ತಿತ್ವವೇ ಅಟಲ್ ಬಿಹಾರಿ ವಾಜಪೇಯಿ. ರಾಜಕಾರಣ ಎನ್ನುವುದು ಕುಲದ ಇಲ್ಲವೇ ಮನೆತನದ ಕಸುಬಲ್ಲ ಎನ್ನುವುದನ್ನು ಅಕ್ಷರಶ: ಬದುಕಿ ತೋರಿಸಿದ ಪರಿಶುದ್ಧ ರಾಜಕಾರಣಿ ಇವರು. ವೈಯಕ್ತಿಕವಾಗಿ ಯಾರನ್ನೂ ದ್ವೇಷಿಸದ ಮತ್ತು ವಿರೋಧಿಸದ ತಮ್ಮ ನಿಷ್ಕಂಳಕ ವ್ಯಕ್ತಿತ್ವದಿಂದ ರಾಜಕೀಯದಲ್ಲಿ ಅಜಾತಶತ್ರು ಎನ್ನುವ ಗೌರವಕ್ಕೆ ಪಾತ್ರರಾದವರು. ಪತ್ರಕರ್ತ ವೈಎನ್ ಕೆ ಹೇಳುವಂತೆ ಒಬ್ಬ ವ್ಯಕ್ತಿ ನಿಷ್ಕ್ರಿಯನಾಗಿದ್ದಾಗಲೂ ಅಜಾತಶತ್ರುವಾಗಿರುತ್ತಾನೆ. ಆದರೆ ರಾಜಕೀಯದಲ್ಲಿ ಸಕ್ರಿಯರಾಗಿದ್ದುಕೊಂಡು ಅಜಾತಶತ್ರು ಎಂದು ಕರೆಸಿಕೊಳ್ಳುವುದು ಸಣ್ಣ ಸಾಧನೆಯಲ್ಲ. ಅದಕ್ಕೆಂದೇ ಅಟಲ್ ಬಿಹಾರಿ ವಾಜಪೇಯಿ ಭಾರತದ ರಾಜಕಾರಣದಲ್ಲಿ ಅವರೊಂದು ಆದರ್ಶ ಮತ್ತು ಮಾದರಿ. 


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ