Thursday, January 16, 2014

ಸಾಹಿತ್ಯ ಸಮ್ಮೇಳನ ಮತ್ತು ಪ್ರಚಲಿತ ಸವಾಲುಗಳು




(ಚಿತ್ರ ಕೃಪೆ: www.oneindia.com)



           ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಾಯಿತು. ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಸಮ್ಮೇಳನದ ಫಲಶ್ರುತಿ ಅದು ಎಷ್ಟರ ಮಟ್ಟಿಗೆ ನಾಡು ನುಡಿಯ ಬೆಳವಣಿಗೆಗೆ ಸಹಾಯವಾಗಲಿದೆಯೋ ಗೊತ್ತಿಲ್ಲ. ಪ್ರತಿವರ್ಷ ಸಮ್ಮೇಳನ ಏರ್ಪಡಿಸಿದಾಗ ಕೊನೆಯ ದಿನ ಒಂದಿಷ್ಟು ನಿರ್ಣಯಗಳನ್ನು ತೆಗೆದುಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆಯನ್ನು ಸರ್ಕಾರದ ಹೆಗಲಿಗೇರಿಸಿ ನಮ್ಮ ಸಾಹಿತಿಗಳು ತಮ್ಮ ಕೆಲಸ ಇಷ್ಟಕ್ಕೇ ಮುಗಿಯಿತು ಎಂದು ಕೈತೊಳೆದುಕೊಳ್ಳುವುದು ಪರಂಪರಾಗತವಾದ  ರೂಢಿಯಾಗಿ ಬಿಟ್ಟಿದೆ. ಹೀಗೆ ತೆಗೆದುಕೊಂಡ ನಿರ್ಣಯಗಳು ನಂತರದ ದಿನಗಳಲ್ಲಿ ಕಾರ್ಯರೂಪಕ್ಕೆ ಬಂದಿವೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಯಾರೂ ಹೋಗಲಾರರು. ಮತ್ತೊಂದು ಸಮ್ಮೇಳನ ಮತ್ತೊಂದಿಷ್ಟು ನಿರ್ಣಯಗಳು ಇದು ಪ್ರತಿವರ್ಷ ಪುನರಾವರ್ತನೆಯಾಗುತ್ತಿದೆ. ನಮ್ಮನ್ನಾಳುವ ಪ್ರಭುಗಳಿಗೂ ಹೀಗೆ ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅದೊಂದು ಸಾಹಿತಿಗಳ ಚಟ ಎನ್ನುವಷ್ಟು ಸಹಜವಾಗಿದೆ. ಜೊತೆಗೆ ದುರಂತದ ಸಂಗತಿ ಎಂದರೆ ನಮ್ಮ ಸಾಹಿತಿ ಗಣ್ಯರು ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳೆಲ್ಲ ಭಾಷೆಯ ಸುತ್ತಲೇ ಗಿರಕಿ ಹೊಡೆಯುತ್ತವೆ. ಕನ್ನಡ ಶಾಲೆಗಳನ್ನು ಮುಚ್ಚ ಬೇಡಿ, ಕೋರ್ಟಿನಲ್ಲಿ ಕನ್ನಡ ಬಳಸಿ, ಆಡಳಿತದಲ್ಲಿ ಕನ್ನಡ ಬಳಸಿ, ಮಕ್ಕಳಿಂದ ನಾಡಗೀತೆ ಹಾಡಿಸಿ ಹೀಗೆ ಇಂಥದ್ದೇ ಹತ್ತು ಹಲವು ಸಲಹೆಗಳನ್ನು ನೀಡಿ ಕೃತಾರ್ಥರಾಗುವರು. ನಿಜಕ್ಕೂ ಸಾಹಿತ್ಯ ಸಮ್ಮೇಳನದ ವೇದಿಕೆ ಕನ್ನಡ ಭಾಷೆಯ ಜೊತೆಗೆ ಸಮಾಜದ ಸಮಸ್ಯೆಗಳಿಗೂ ಮುಖಾಮುಖಿಯಾಗಬೇಕು.

ಶಿಕ್ಷಣೋದ್ಯಮದ ವಿರುದ್ಧ ಆಕ್ರೋಶವಿಲ್ಲ 


            ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ ಎಂದು ಸರ್ಕಾರದೆದುರು ಅಲವತ್ತುಕೊಳ್ಳುವ  ಸಾಹಿತ್ಯ ವಲಯ ಇವತ್ತು ಶಿಕ್ಷಣ ಕ್ಷೇತ್ರ ಒಂದು ಉದ್ಯಮವಾಗಿ ಬದಲಾಗುತ್ತಿರುವುದರ ವಿರುದ್ಧ ಆಕ್ರೋಶದ ಮಾತುಗಳನ್ನಾಡಲು ಸಿದ್ಧರಿಲ್ಲ. ೮೦ನೇ ಸಾಹಿತ್ಯ ಸಮ್ಮೇಳನ ನಡೆದ ಕೊಡಗಿನ ಆ ನೆಲದಲ್ಲೇ ಇವತ್ತು ಅನೇಕ ಕುಟುಂಬಗಳು ಶಿಕ್ಷಣವನ್ನು ಕುಟುಂಬದ ಖಾಸಗಿ ಉದಮ್ಯವನ್ನಾಗಿ ಮಾಡಿಕೊಂಡಿರುವರು. ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಖಾಸಗಿಯವರ ಸುಪರ್ದಿಗೆ ಒಳಪಟ್ಟು ಅನೇಕ ದಶಕಗಳಾದವು. ಈ ಶಿಕ್ಷಣದ ಖಾಸಗೀಕರಣ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸ್ಥಾಪನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತ ಇನ್ನೊಂದೆಡೆ ಕನ್ನಡ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಕೊರತೆಯನ್ನು ಹುಟ್ಟುಹಾಕುತ್ತಿದೆ. ಕನ್ನಡ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದರಿತ ಬಹುಪಾಲು ಪಾಲಕರು ಖಾಸಗಿ ಇಂಗ್ಲಿಶ್ ಶಾಲೆಗಳತ್ತ ವಲಸೆ ಹೋಗುತ್ತಿರುವರು. ಗುಣಾತ್ಮಕ ಶಿಕ್ಷಣದ ಮೂಲಕ ಮಕ್ಕಳ ಬದುಕನ್ನು ಕಟ್ಟಿಕೊಡಬೇಕೆನ್ನುವ ಪಾಲಕರ ಈ ಮನೋಭಾವವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರುಪಾಯಿಗಳನ್ನು ಶುಲ್ಕದ ರೂಪದಲ್ಲಿ ಪಡೆಯುತ್ತಿರುವರು. ಇವತ್ತು ನಾಡಿನ ಉದ್ಯಮಿಗಳು ಮತ್ತು ರಾಜಕಾರಣಿಗಳು ಮಾತ್ರವಲ್ಲದೆ ನೆರೆಯ ರಾಜ್ಯಗಳ ಉದ್ಯಮಿಗಳೂ ಸಹ ರಾಜ್ಯಕ್ಕೆ ಬಂದು ಶಿಕ್ಷಣದ ಮೇಲೆ ಬಂಡವಾಳ ಹೂಡುತ್ತಿರುವರು. ಒಂದು ಕಾಲದಲ್ಲಿ ಶಾಲೆಗಳ ಸ್ಥಾಪನೆ ಎನ್ನುವುದು ಸಾಮಾಜಿಕ ಸೇವೆ ಎಂದೇ ಪರಿಗಣಿಸಲ್ಪಟ್ಟಿದ್ದ ನಾಡಿನಲ್ಲಿ ಇವತ್ತು ಶಿಕ್ಷಣ ಲಾಭತರುವ ಬೃಹತ್ ಉದ್ಯಮವಾಗಿ ಬದಲಾಗಿದೆ. ಮಠ ಮಾನ್ಯಗಳು ಮತ್ತು ಸಂಘ ಸಂಸ್ಥೆಗಳು  ಮಾತ್ರವಲ್ಲದೆ ಶ್ರೀಮಂತ ಕುಟುಂಬಗಳು ಇವತ್ತು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣವನ್ನು ಕುಟುಂಬದ ಬಂಡವಾಳ ಹೂಡಿ ಲಾಭ ಮಾಡಿಕೊಳ್ಳುವ ಉದ್ದಿಮೆಯಾಗಿ ಪರಿವರ್ತಿಸಿರುವರು. ಪರಿಸ್ಥಿತಿ ಹೀಗಿರುವಾಗ ಇವತ್ತು ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ, ಇಂಗ್ಲಿಷ್ ಶಾಲೆಗಳಲ್ಲಿಯೂ ನಾಡಗೀತೆ ಹಾಡಿಸಿ ಎನ್ನುವ ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಾಗಲಾರದು. ಬದಲಾಗಿ ಹತ್ತನೇ ತರಗತಿಯವರೆಗೂ ಇಂಗ್ಲಿಷ್ ಶಾಲೆಗಳನ್ನು ಮುಚ್ಚಿಸಿ ಎನ್ನುವ ಆಕ್ರೋಶದ ಮಾತುಗಳು ಕೇಳಿಬರಬೇಕು. ಏಕೆಂದರೆ  ಶಿಕ್ಷಣವನ್ನು ಉದ್ಯಮದ ಸ್ವರೂಪದಿಂದ ಬಿಡುಗಡೆಗೊಳಿಸುವುದು ಇವತ್ತಿನ ತುರ್ತು ಅಗತ್ಯಗಳಲ್ಲೊಂದು.

ಮಹಿಳಾ ಗೋಷ್ಠಿ ಮತ್ತು ಸ್ತ್ರೀ ಸಮಸ್ಯೆ 


              ಪ್ರತಿವರ್ಷ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಪರಿಹಾರಗಳನ್ನು ಸೂಚಿಸಲು ಪ್ರತ್ಯೇಕ ಮಹಿಳಾ ಗೋಷ್ಠಿಯನ್ನು ಏರ್ಪಡಿಸುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಮಹಿಳಾ ಲೇಖಕಿಯರನ್ನು ಒಂದುಗೂಡಿಸಿ ಆ ಮೂಲಕ ಮಹಿಳೆಯರ ಪ್ರಚಲಿತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಆದರೆ ಸಮ್ಮೇಳನದ ವೇದಿಕೆಯಲ್ಲಿ ಹೀಗೆ ಒಂದೆಡೆ ಸೇರುವ ಮಹಿಳಾ ಲೇಖಕಿಯರ ಬಹುಪಾಲು ಚರ್ಚೆ ಮಹಿಳಾ ಸಾಹಿತ್ಯಕ್ಷೆತ್ರಕ್ಕಷ್ಟೇ ಸೀಮಿತವಾಗುತ್ತಿದೆ. ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ, ಸಾಹಿತ್ಯ ವಲಯದಲ್ಲಿನ ಲಿಂಗ ತಾರತಮ್ಯ, ಅನುವಾದಕಿಯಾಗಿ ಸ್ತ್ರೀ, ಲೇಖಕಿಯಾಗಿ ಸ್ತ್ರೀ ಹೀಗೆ ಸಾಹಿತ್ಯ ಸಮ್ಮೇಳನಗಳಲ್ಲಿ  ಮಹಿಳಾ ಲೇಖಕಿಯರ ಮಹಿಳಾಪರ ಚರ್ಚೆ ಯಲ್ಲಿ ಹೆಣ್ಣನ್ನು  ಕೇವಲ ಲೇಖಕಿಯಾಗಿ ಮಾತ್ರ ನೋಡಲಾಗುತ್ತಿದೆ. ಅವರುಗಳ ಚರ್ಚೆ  ಸಾಹಿತ್ಯವಲಯವನ್ನು ದಾಟಿ ಹೋಗುತ್ತಿಲ್ಲ. ದೇವದಾಸಿಯರ ಬಗ್ಗೆ, ಶೋಷಿತ ಹೆಣ್ಣಿನ ಬಗ್ಗೆ ತಮ್ಮ ಕಥೆ, ಕಾವ್ಯ, ಕಾದಂಬರಿಗಳಲ್ಲಿ ಪುಂಖಾನುಪುಂಖವಾಗಿ ಬರೆಯುವ ಮಹಿಳಾ ಲೇಖಕಿಯರು ಯಾವತ್ತೂ ಸಾಹಿತ್ಯ ಸಮ್ಮೇಳನದ ಚರ್ಚಾ ವೇದಿಕೆಗೆ ತಮ್ಮ ಬರವಣಿಗೆಗೆ ವಸ್ತುವಾಗುವ ಹೆಣ್ಣಿನ ಸಮಸ್ಯೆಗಳನ್ನು ತೆಗೆದುಕೊಂಡು ಹೋಗುತ್ತಿಲ್ಲ.

ದಲಿತ ಸಾಹಿತ್ಯ ಗೋಷ್ಠಿ 


          ದಲಿತ ಸಾಹಿತ್ಯ ಚರ್ಚೆಗೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ಗೋಷ್ಠಿಗೆ ಅವಕಾಶ ಒದಗಿಸಬೇಕೆನ್ನುವುದು ಬಹುವರ್ಷಗಳ ಬೇಡಿಕೆಯಾಗಿತ್ತು. ಕೆಲವು ಸಂದರ್ಭಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ದಲಿತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ ಉದಾಹರಣೆಯೂ ಉಂಟು. ಈ ವರ್ಷದ ೮೦ನೇ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ  ಗೋಷ್ಠಿಗೆ ವೇದಿಕೆ ಒದಗಿಸಿದ್ದು ನಿಜಕ್ಕೂ ಅದೊಂದು ಉತ್ತಮ ಪ್ರಯತ್ನ. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದಲಿಂಗಯ್ಯನವರು ದಲಿತರ ಸಮಸ್ಯೆಗಳನ್ನು ವೈಯಕ್ತಿಕ ನೆಲೆಯಲ್ಲಿ ನೋಡದೆ ಸಾಮಾಜಿಕ ನೆಲೆಯಲ್ಲಿ ನೋಡುವಂತಾಗಬೇಕೆನ್ನುವ ಆಶಯ ವ್ಯಕ್ತಪಡಿಸಿದರು. ಹೀಗೆ ತಳ ಸಮುದಾಯದ ಸಮಸ್ಯೆಗಳನ್ನು ಚರ್ಚಿಸುವಾಗಲೆಲ್ಲ ನಮ್ಮ ದಲಿತ ಸಾಹಿತಿಗಳು ತಮ್ಮ ಚರ್ಚೆಯನ್ನು ಅಂಬೇಡ್ಕರ್ ವಿಚಾರಗಳಿಗೆ ಮತ್ತು ಮೇಲ್ವರ್ಗದವರನ್ನು ತೆಗಳುವುದಕ್ಕೆ ಸೀಮಿತಗೊಳಿಸುತ್ತಿರುವರು. ಯಾವ ದಲಿತ ಬರಹಗಾರರೂ ದಲಿತ ಸಮುದಾಯವನ್ನು ಆರ್ಥಿಕವಾಗಿ ಪ್ರಬಲರಾದ ಮತ್ತು ದುರ್ಬಲರಾದ ಎಂದು ಎರಡು ಬಣಗಳಾಗಿ ವಿಂಗಡಿಸಿ ಚರ್ಚಿಸಲು ಮುಂದೆ ಬರುತ್ತಿಲ್ಲ. ಆರ್ಥಿಕವಾಗಿ ಪ್ರಬಲರಾದ ದಲಿತರು ಇವತ್ತಿಗೂ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವುದು ಒಂದರ್ಥದಲ್ಲಿ ಅದು ಆರ್ಥಿಕವಾಗಿ ದುರ್ಬಲರಾದ ದಲಿತರಿಗೆ ಮಾಡುತ್ತಿರುವ ಅನ್ಯಾಯ. ದಲಿತ ರಾಜಕಾರಣಿಗಳ ಮತ್ತು ದಲಿತ ಅಧಿಕಾರಿಗಳ ಮಕ್ಕಳು ಸರ್ಕಾರ ಕೊಡಮಾಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿದಲ್ಲಿ ಆರ್ಥಿಕವಾಗಿ ಹಿಂದುಳಿದ ದಲಿತರಿಗೆ ಇನ್ನು ಹೆಚ್ಚಿನ ಸವಲತ್ತುಗಳನ್ನು  ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುವುದು. ಇಂಥದ್ದೊಂದು ಚರ್ಚೆಗೆ ಸಾಹಿತ್ಯ ಸಮ್ಮೇಳನದ ದಲಿತ ಸಾಹಿತ್ಯ ಗೋಷ್ಠಿ ಮುನ್ನುಡಿ ಬರೆಯಬೇಕು. ಆದರೆ ವೇದಿಕೆಯಲ್ಲಿ ನಿಂತು ಮಾತನಾಡುವ ನಮ್ಮ ಬಹುಪಾಲು ದಲಿತ ಸಾಹಿತಿಗಳಿಗೆ ಸರ್ಕಾರದ ಸೌಲಭ್ಯಗಳಿಂದ ತಮ್ಮ ಮಕ್ಕಳನ್ನು ವಂಚಿತರನ್ನಾಗಿಸುವ ಇಚ್ಛೆ ಇಲ್ಲದಿರುವುದರಿಂದ ಅವರಿಂದ ಅಂಥದ್ದೊಂದು ಪ್ರಾಮಾಣಿಕ ಪ್ರಯತ್ನವನ್ನು ನಿರೀಕ್ಷಿಸುವುದು ಅಸಾಧ್ಯದ ಸಂಗತಿ.

ರೈತಪರ ದನಿ ಮೊಳಗುತ್ತಿಲ್ಲ 


               ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರೈತಪರ ದನಿ ಮೊಳಗಿದ ಉದಾಹರಣೆಯೇ ಇಲ್ಲ. ನಮ್ಮ ಸಾಹಿತಿಗಳು ಯಾವತ್ತೂ ರೈತನ ಸಮಸ್ಯೆಗಳನ್ನು ಕುರಿತು ಮಾತನಾಡಲಾರರು. ಬೆಳೆಯುತ್ತಿರುವ ನಗರೀಕರಣ ಮತ್ತು ಕ್ಷಿಣೀಸುತ್ತಿರುವ ಕೃಷಿ ಭೂಮಿ ಇವತ್ತು ನಾವು ಎದುರಿಸುತ್ತಿರುವ ಸವಾಲುಗಳಲ್ಲಿ ಬಹುಮುಖ್ಯವಾದವುಗಳು. ಇವುಗಳನ್ನು ಕೇವಲ ರೈತನ ಸಮಸ್ಯೆಗಳೆಂದು ಉದಾಸಿನ ತೋರದೆ ಅವುಗಳನ್ನು ಸಾರ್ವತ್ರಿಕ ನೆಲೆಯಲ್ಲಿ ಚರ್ಚಿಸಬೇಕಾದ ಅಗತ್ಯ ಎದುರಾಗಿದೆ. ಆ ಕೆಲಸವನ್ನು ಮಾಡಬೇಕಾದ ಮಹತ್ವದ ಜವಾಬ್ದಾರಿ ಸಾಹಿತ್ಯದ ಮೇಲಿದೆ. ಆದ್ದರಿಂದ ಬರಹಗಾರನು ತನ್ನ ನೆಲದ ಸಮಸ್ಯೆಗೂ ದನಿಯಾಗಬೇಕು. ದುರಂತವೆಂದರೆ ರೈತನ ಸಮಸ್ಯೆಗಳನ್ನು ಸಮಾಜದ ಸಮಸ್ಯೆಗಳೆಂದು ತೆಗೆದುಕೊಂಡು ಬರೆದ ಬರಹಗಾರರ ಸಂಖ್ಯೆ ಕನ್ನಡದಲ್ಲಿ ಬಹಳಷ್ಟು ಕಡಿಮೆ. ಈ ವಿಷಯದಲ್ಲಿ ನಾವು ಪೂರ್ಣಚಂದ್ರ ತೇಜಸ್ವಿ ಮತ್ತು ಶಿವರಾಮ ಕಾರಂತರನ್ನು ಅಭಿನಂದಿಸಲೇ ಬೇಕು. ಆದರೆ ಇವರುಗಳ ನಂತರ ರೈತಪರವಾದ ಸಾಹಿತ್ಯ ಸಂಪೂರ್ಣವಾಗಿ ಕ್ಷಿಣೀಸಿದೆ. ಯಾವ ಲೇಖಕನೂ ರೈತರ ಪರವಾಗಿ ಬರೆಯಲು ಮನಸ್ಸು ಮಾಡುತ್ತಿಲ್ಲ. ಗತಕಾಲದ ನೆನಪುಗಳೊಂದಿಗೆ ಬದುಕುತ್ತ ಆ ನೆನಪುಗಳಿಗೆ ಅಕ್ಷರ ರೂಪ ಕೊಡುತ್ತಿರುವ ನಮ್ಮ ಬರಹಗಾರರು ಪ್ರಚಲಿತ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲುತ್ತಿಲ್ಲ. ನಿಜಕ್ಕೂ ಇದು ಯೋಚಿಸಬೇಕಾದ ಸಂಗತಿ. ಸಾಹಿತ್ಯ ಸಮ್ಮೇಳನದಲ್ಲಿ ಇಂಥ ಸಮಸ್ಯೆಗಳು ಚರ್ಚೆಗೆ ಬರಬೇಕು.

ಸ್ವಜಾತಿ ಮತ್ತು ಪ್ರಾದೇಶಿಕ ಪ್ರೇಮ


            ಸಾಹಿತ್ಯ ವಲಯವನ್ನು ಆವರಿಸಿಕೊಂಡಿರುವ ಬಹುದೊಡ್ಡ ಪಿಡುಗಿದು. ಯಾವ ವರ್ಣ ವ್ಯವಸ್ಥೆಯನ್ನು ವಿರೋಧಿಸಿ  ನಮ್ಮ ಸಾಹಿತಿಗಳು ಆಕ್ರೋಶದಿಂದ ಬರೆಯುವರೋ ಅವರು ತಮ್ಮ ಆಂತರ್ಯದಲ್ಲಿ ಆ ವ್ಯವಸ್ಥೆಯನ್ನು ಅಷ್ಟೇ ಗಾಢವಾಗಿ ಪ್ರೀತಿಸುತ್ತಿರುವುದು ನಿಜಕ್ಕೂ ಬಹುದೊಡ್ಡ ವಿಪರ್ಯಾಸ. ಈ ಸ್ವಜಾತಿ ಪ್ರೇಮ ಮತ್ತು ಪ್ರಾದೇಶಿಕ ಪ್ರೇಮದ ಬಿಸಿ ಸಾಹಿತ್ಯ ಸಮ್ಮೇಳನಕ್ಕೂ ತಟ್ಟಿದೆ. ಮೊನ್ನೆ ಕೊಡಗಿನಲ್ಲಿ ನಡೆದ ಸಮ್ಮೇಳನದಲ್ಲಿ ಒಂದು ಕವಿಗೋಷ್ಠಿಯ ಬದಲಾಗಿ ಎರಡು ಕವಿಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಇದಕ್ಕೆ ಕವಿತೆಗಳನ್ನು ವಾಚಿಸುವ ಕವಿಗಳ ಸಂಖ್ಯೆ ಬಹಳಷ್ಟಿದ್ದದ್ದೆ ಕಾರಣವಾಗಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರು  ಸ್ವಜಾತಿ ಮತ್ತು ಪ್ರಾದೇಶಿಕ ಪ್ರೇಮ ಮೆರೆದು ತಮ್ಮ ತಮ್ಮ ಕೋಟಾದಲ್ಲಿ ಅನೇಕ ಕವಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವಿದು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬರಹಗಾರ ಅಬ್ದುಲ್ ರಶೀದ ಈ ಬೆಳವಣಿಗೆಗೆ ವೇದಿಕೆಯಲ್ಲೇ ಖಾರವಾಗಿ ಪ್ರತಿಕ್ರಿಯಿಸಿದರು. ಮುಂದಿನ ದಿನಗಳಲ್ಲಿ ಸಾಹಿತ್ಯ ಮತ್ತು ಸಾಹಿತ್ಯ ಸಮ್ಮೇಳನ ಇಂಥದ್ದೊಂದು ದುರಂತದಿಂದ ಮುಕ್ತವಾಗಲಿ ಎನ್ನುವ ಕಿವಿಮಾತು ಹೇಳಿದರು. ಆದ್ದರಿಂದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ವಲಯವನ್ನು ಜಾತಿ ಮತ್ತು ಪ್ರಾದೇಶಿಕ ಪ್ರೇಮದಿಂದ ಮುಕ್ತಗೊಳಿಸಿ ಅದನ್ನು ಪರಿಶುದ್ಧಗೊಳಿಸುವ ಕೆಲಸವಾಗಬೇಕು. ಇಂಥದ್ದೊಂದು ಸವಾಲಿಗೆ ಪರಿಹಾರ ಕಂಡುಕೊಳ್ಳಬೇಕಿರುವುದು ಸಾಹಿತ್ಯವನ್ನು ಅದರ ಮೂಲ ಉದ್ದೇಶದಿಂದ ಬೇರ್ಪಡಿಸದೆ ಇರುವ ಕಾರಣದಿಂದ  ಇವತ್ತಿನ ತುರ್ತು ಅಗತ್ಯವಾಗಿದೆ.

ನಾನ್ ಅಕಾಡೆಮಿಕ್  ಎನ್ನುವ ಅಸ್ಪೃಶ್ಯತೆ


          ಕನ್ನಡ ಸಾಹಿತ್ಯ ವಲಯದಲ್ಲಿ ಬಹುಕಾಲದಿಂದ ನಡೆದುಕೊಂಡು ಬಂದ ಸಂಸ್ಕೃತಿ ಇದು. ಇಡೀ ಕನ್ನಡ ಸಾಹಿತ್ಯವಲಯವನ್ನು ನಮ್ಮ ಪ್ರಜ್ಞಾವಂತ ಬರಹಗಾರರು ಅಕಾಡೆಮಿಕ್ ಮತ್ತು ನಾನ್ ಅಕಾಡೆಮಿಕ್ ಎಂದು ವಿಭಜಿಸಿ ನಾನ್ ಅಕಾಡೆಮಿಕ್ ಬರಹಗಾರರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಿರುವರು. ೮೦ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ    ನಾ. ಡಿಸೋಜಾ ಅವರನ್ನು ಆಯ್ಕೆ ಮಾಡಿದಾಗಲೇ ಅವರು ನಾನ್ ಅಕಾಡೆಮಿಕ್ ಬರಹಗಾರ ಎನ್ನುವ ಅಪಸ್ವರದ ಮಾತುಗಳು ಅಲ್ಲಲ್ಲಿ ಕೇಳಿ ಬಂದವು. ಜೊತೆಗೆ ಅವರನ್ನು ಆಯ್ಕೆಮಾಡುವ ಮೂಲಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ತಮ್ಮ ಜಾತ್ಯಾತೀತ ಮನೋಭಾವವನ್ನು ಪ್ರದರ್ಶಿಸುವ ಆಕಾಂಕ್ಷೆ ದಟ್ಟವಾಗಿತ್ತು. ಹೀಗೆ ನಾ. ಡಿಸೋಜಾ ಅವರನ್ನು ನಾನ್ ಅಕಾಡೆಮಿಕ್ ಮತ್ತು ಅನ್ಯ ಧರ್ಮೀಯ ಎಂದು ಬಿಂಬಿಸುವ ನಮ್ಮ ಸಾಹಿತ್ಯ ವಲಯದ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡಿತು. ಇವರ ನಾನ್ ಅಕಾಡೆಮಿಕ್ ಹಿನ್ನೆಲೆಯನ್ನು ಸರಿಯಾಗಿಯೇ ಬಳಸಿಕೊಂಡ ಪರಿಷತ್ತಿನ ಅಧ್ಯಕ್ಷರು ಸಮ್ಮೇಳನದ ಅಧ್ಯಕ್ಷರಿಗೆ ಭಾಷಣದ ಮಧ್ಯದಲ್ಲೇ ಮೊಟಕುಗೊಳಿಸುವಂತೆ ಚೀಟಿ ಕಳುಹಿಸುವರು. ಒಂದು ಗುಂಪು ವೇದಿಕೆಯನ್ನೇರಿ ಸಮ್ಮೇಳನದ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಬೇಸರದ ಸಂಗತಿ ಎಂದರೆ ಈ ಎರಡೂ ಘಟನೆಗಳಿಗೆ ನಮ್ಮ ಅಕಾಡೆಮಿಕ್ ಸಾಹಿತ್ಯದ ವಲಯದಿಂದ ಒಂದೇ ಒಂದು ವಿರೋಧದ ಮಾತುಗಳು ಕೇಳಿ ಬರದಿರುವುದು. ಇಂಥದ್ದೊಂದು ಘಟನೆಗಾಗಿ ಕಾದವರಂತೆ ಅವರೆಲ್ಲ ಸಂಭ್ರಮಿಸುತ್ತಾರೆ. ಇಂಥದ್ದೊಂದು ಕೆಟ್ಟ ಸಂಪ್ರದಾಯದಿಂದ ಕನ್ನಡ ಸಾಹಿತ್ಯ ವಲಯ ಮುಕ್ತವಾಗಬೇಕು. ಈ ಮುಕ್ತಿಗೊಳಿಸುವ ಕೆಲಸ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಾಗಬೇಕು.

ಸಿನಿಮಾ ಎಂದರೆ ಮಾರು ದೂರ 


                ಸಿನಿಮಾ ಮಾಧ್ಯಮ ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಕನ್ನಡ ಸಾಹಿತ್ಯಕ್ಕೆ ಸಮಾನಾಂತರವಾಗಿ ಕೆಲಸ ಮಾಡಿದೆ. ರಾಜಕುಮಾರ, ಬಾಲಕೃಷ್ಣ, ಪಂಢರೀಬಾಯಿ ಅವರಂಥ ಪ್ರತಿಭಾನ್ವಿತ ಕಲಾವಿದರು ಮತ್ತು ನಾಗೇಂದ್ರರಾಯರು,  ಅಯ್ಯರ, ಪುಟ್ಟಣ್ಣ ಕಣಗಾಲ್ ಅವರಂಥ ಸೃಜನಶೀಲ ನಿರ್ದೇಶಕರು ಕನ್ನಡ ಸಿನಿಮಾಗಳ ಮೂಲಕ ನಾಡಿನ ಭವ್ಯ ಪರಂಪರೆಯನ್ನು ಇಡೀ ದೇಶಕ್ಕೆ ಪರಿಚಯಿಸಿದರು. ಬಂಗಾರದ ಮನುಷ್ಯ, ಭೂದಾನ, ಭೂತಯ್ಯನ ಮಗು ಅಯ್ಯು, ಚೋಮನ ದುಡಿಯಂಥ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿ ಅನಾವರಣಗೊಂಡಿದೆ. ಅನೇಕ ಕಾದಂಬರಿಗಳನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸಿ ಒಂದರ್ಥದಲ್ಲಿ ಕನ್ನಡ ಸಾಹಿತ್ಯವನ್ನು ಈ ಸಿನಿಮಾ ಮಾಧ್ಯಮ ಜನಪ್ರಿಯಗೊಳಿಸಿತು. ತರಾಸು, ಶಿವರಾಮ ಕಾರಂತ, ಅನಂತಮೂರ್ತಿ, ಭೈರಪ್ಪನವರ ಕಾದಂಬರಿಗಳನ್ನು ಸಿನಿಮಾ ಪರದೆಯ ಮೇಲೆ ನೋಡುವ ಭಾಗ್ಯ ಕನ್ನಡಿಗರಿಗೆ ಸಿಕ್ಕಿದ್ದು ಈ ಸಿನಿಮಾ ಮಾಧ್ಯಮದ ಮೂಲಕವೇ. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡ ಚಿತ್ರರಂಗ ಸಾಹಿತ್ಯ ವಲಯದೊಡನೆ ದನಿಗೂಡಿಸಿದೆ. ಚಳುವಳಿಯ ಸಂದರ್ಭ ಸಿನಿಮಾ ಕಲಾವಿದರೆಲ್ಲ ಮುಂಚೂಣಿಯಲ್ಲಿ ನಿಂತು ಹೋರಾಡಿದ ಉದಾಹರಣೆಗಳಿವೆ. ಗೋಕಾಕ ಚಳುವಳಿಯೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ. ಹೀಗಿದ್ದೂ ನಮ್ಮ ಸಾಹಿತ್ಯ ವಲಯ ಸಿನಿಮಾ ಮಾಧ್ಯಮವನ್ನು ಈ ನೆಲದ ಸೃಜನಶೀಲ ಹಿರಿಮೆಯಂದು ಪರಿಗಣಿಸಿಯೇ ಇಲ್ಲ. ಸಿನಿಮಾ, ಸಿನಿಮಾ ಕಲಾವಿದರು ಮತ್ತು ಸಿನಿಮಾ ಸಾಹಿತಿಗಳನ್ನು ನಮ್ಮ ಸಾಹಿತ್ಯ ವಲಯ ಎಂದಿಗೂ ಅಸ್ಪೃಶ್ಯತೆಯ ಭಾವನೆಯಿಂದಲೇ ಕಾಣುತ್ತ ಬಂದಿದೆ. ಅದಕ್ಕೆಂದೇ ಸಿನಿಮಾ ಮಾಧ್ಯಮದ ಕುರಿತಾದ ಚರ್ಚೆಗೆ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆ ಲಭ್ಯವಾಗಿಲ್ಲ (ಒಂದೆರಡು ಸಮ್ಮೇಳನಗಳಲ್ಲಿ ಪರಭಾಷೆಗಳಿಂದ ಕನ್ನಡಕ್ಕೆ ಸಿನಿಮಾ ಡಬ್ಬಿಂಗ್ ನ್ನು ನಿಲ್ಲಿಸಬೇಕೆನ್ನುವ ನಿರ್ಣಯ ಕೈಗೊಳ್ಳಲಾಗಿತ್ತು ಆದರೆ ಈ ವಿಷಯ ಚರ್ಚೆಗೆ ಒಳಗಾಗಿರಲಿಲ್ಲ). ಸಿನಿಮಾ ಮಾಧ್ಯಮವನ್ನು ಒಂದು ಸೃಜನಶೀಲತೆಯ ನೆಲೆಯಲ್ಲಿ ನೋಡುವ ಮತ್ತು ಅದರ ಕೊಡುಗೆಯನ್ನು ಸ್ಮರಿಸುವ ಜೊತೆಗೆ ಸಮಾಜದ ಮೇಲೆ ಅದರಿಂದಾಗುವ ಪರಿಣಾಮಗಳನ್ನು ಕುರಿತು ಚರ್ಚಿಸಲು ಸಾಹಿತ್ಯ ಸಮ್ಮೇಳಗಳು ಅವಕಾಶ ಒದಗಿಸಬೇಕು. ಸಾಂಸ್ಕೃತಿಕ ಸಂಕ್ರಮಣದ ಈ ಕಾಲಘಟ್ಟದಲ್ಲಿ ಸಿನಿಮಾ ಮಾಧ್ಯಮ ತನ್ನ ಮೂಲ ಆಶಯದಿಂದ ಬಹುದೂರ ಸಾಗಿಬಂದಿದೆ. ಅದಕ್ಕೆಂದೇ ಇಲ್ಲಿ ಚಿತ್ರ ವಿಚಿತ್ರ ಸಿನಿಮಾಗಳು ಈಗ ನಿರ್ಮಾಣವಾಗುತ್ತಿವೆ.  ಸಾಹಿತ್ಯ ವಲಯ ತನ್ನ ಸುತ್ತಲಿನ ಈ ಎಲ್ಲ ರೂಪಾಂತರಗಳಿಗೆ  ಕಣ್ಣಾದಲ್ಲಿ ಒಂದಿಷ್ಟು ಭರವಸೆಯ ಹೊಸ ಗಾಳಿ ಬೀಸಬಹುದು. ಆದ್ದರಿಂದ ಸಿನಿಮಾ ಮಾಧ್ಯಮವನ್ನು ಸಾಹಿತ್ಯ ಸಮ್ಮೇಳನಗಳು ತಮ್ಮ ಚರ್ಚಾ ವೇದಿಕೆಗೆ ಎಳೆದುಕೊಳ್ಳುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ.

ಕೊನೆಯ ಮಾತು 


         ಸಾಹಿತ್ಯ ಸಮ್ಮೇಳನ ನಮ್ಮ ಸಾಹಿತಿಗಳ ಒಣ ಪ್ರತಿಷ್ಠೆ ಮತ್ತು ಅವರವರ ಅನುಕೂಲಸಿಂಧುವಿಗೆ ವೇದಿಕೆಯಾಗುತ್ತಿರುವುದು ಅದು ಎಲ್ಲರಿಗೂ ತಿಳಿದಿರುವ ಸಂಗತಿ. ಅದಕ್ಕೆಂದೇ ವೇದಿಕೆಯಲ್ಲಿ ಸಾಹಿತಿಗಳು ಸಮಾಜದ ಸಮಸ್ಯೆಗಳನ್ನು ಮೂಲೆಗುಂಪಾಗಿಸಿ ವೈಯಕ್ತಿಕ ನಿಂದನೆಗೆ ತೊಡಗುವರು. ಜೊತೆಗೆ ಸಾಹಿತ್ಯದ ಉದ್ದೇಶ ಕೇವಲ ಭಾಷಾಭಿವೃದ್ಧಿ ಮಾತ್ರವಲ್ಲ ಅದು ಸಮಾಜದ ಎಲ್ಲ ಸಮಸ್ಯೆಗಳಿಗೂ ಮುಖಾಮುಖಿಯಾಗಬೇಕು. ಬರಹಗಾರರನ್ನು ಮತ್ತು ಸಾರ್ವಜನಿಕರನ್ನು ಸಮ್ಮೇಳನ, ವಿಚಾರ ಸಂಕೀರಣಗಳ ಮೂಲಕ ಒಂದು ವೇದಿಕೆಗೆ ಕರೆತಂದಾಗ ಅಲ್ಲಿ ಭಾಷೆಯೊಂದು ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ಸಾಮಾಜಿಕ ಸಮಸ್ಯೆಗಳೂ ಚರ್ಚೆಗೆ ಒಳಪಡಬೇಕು. ಎಲ್ಲವನ್ನೂ ಭಾಷೆ ಮತ್ತು ಸಾಹಿತ್ಯದ ನೆಲೆಯಲ್ಲಿ ಮಾತ್ರ ನೋಡಿದರೆ ಸಾಹಿತ್ಯ ಸಮ್ಮೇಳನಗಳು ಜನರಿಗೆ ಹತ್ತಿರವಾಗಲಾರವು. ಹಳೆಗನ್ನಡ, ನಡುಗನ್ನಡಗಳ  ಕುರಿತು ಚರ್ಚಿಸುವುದಕ್ಕಿಂತ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗಲಿ. ಮುಂದಿನ ದಿನಗಳಲ್ಲಾದರೂ ಇಂಥದ್ದೊಂದು ಬದಲಾವಣೆಗೆ  ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು  ಮತ್ತು ನಮ್ಮ ಅಕಾಡೆಮಿಕ್ ಬರಹಗಾರರು ತಮ್ಮನ್ನು ತಾವು ತೆರೆದುಕೊಳ್ಳಲಿ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, January 4, 2014

ಲೂಯಿ ಬ್ರೈಲ್: ಅಂಧರ ಬದುಕಿನ ಆಶಾಕಿರಣ

     

                                                       ( ಲೂಯಿ ಬ್ರೈಲ್ : ೧೮೦೯- ೧೮೫೨)


     (ಇಂದು ಲೂಯಿ ಬ್ರೈಲ್ ಜನ್ಮದಿನ ಅದಕ್ಕಾಗಿ ಒಂದಿಷ್ಟು ಸ್ಮರಣೆ)

        ಅಂಧತ್ವ ಅದು ಬದುಕಿನ ಬಹುದೊಡ್ಡ ಸಮಸ್ಯೆ. ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡು ಬದುಕುವ ರೀತಿ ನಿಜಕ್ಕೂ ಅದೊಂದು ಹೋರಾಟದ ಬದುಕು. ಎಲ್ಲ ಅಂಗಗಳು ಸರಿಯಿದ್ದೂ ಸಮಾಜಕ್ಕೆ ಹೊರೆಯಾಗಿ ಬದುಕುವವರ ನಡುವೆ ಅಂಧರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೆ ಸಹಜ ರೀತಿಯಿಂದ ಬದುಕು ನಡೆಸುತ್ತಿರುವರು. ಅಂಗವೈಕಲ್ಯವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮೆರೆಯುತ್ತಿರುವರು. ಬದುಕು ಅವರಿಗೆ ಯಾವತ್ತಿಗೂ ಹೊರೆಯಾಗಿಲ್ಲ. ಅಮೇರಿಕ ದೇಶದ ಲೇಖಕಿ ಹೆಲನ್ ಕೆಲ್ಲರ್, ತನ್ನ ೪೩ ನೇ ವಯಸ್ಸಿನಲ್ಲಿ ಅಂಧನಾದ ಕವಿ ಜಾನ್ ಮಿಲ್ಟನ್,  ಕಾರ್ಟೂನಿಸ್ಟ್ ಜೆಮ್ಸ್  ಟರ್ಬರ್, ಹುಟ್ಟು ಅಂಧರಾಗಿ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಪುಟ್ಟರಾಜ ಗವಾಯಿಗಳು ಈ ಎಲ್ಲ ಮಹನೀಯರು ತಮ್ಮ ದೈಹಿಕ ವೈಕಲ್ಯವನ್ನು ಮರೆತು ಮಾಡಿದ ಸಾಧನೆ ಮತ್ತು ಪಡೆದ ಯಶಸ್ಸು ಅಪಾರ.  ಅಂಧರ ಬದುಕಿನ ಇವತ್ತಿನ ಆತ್ಮವಿಶ್ವಾಸ ಮತ್ತು ಅವರ ಸಾಧನೆಗಳ ಹಿಂದೆ ಲೂಯಿ ಬ್ರೈಲ್ ಎನ್ನುವ ಸಾಧಕನ ಪರಿಶ್ರಮವಿದೆ. ಬ್ರೈಲ್ ನ ಬದುಕು ಮತ್ತು ಆತ ಮಾಡಿದ ಸಾಧನೆ ಅದೊಂದು ಯಶೋಗಾಥೆ. ತನ್ನ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಆತ  ಮಾಡಿದ ಸಾಧನೆ ಅದು ಅನೇಕ ದೃಷ್ಟಿಹೀನರ ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದೆ.

ಬಾಲ್ಯ ಮತ್ತು ಎದುರಾದ ಸಂಕಷ್ಟ 


        ಜನವರಿ ೪, ೧೮೦೯ ರಂದು ಪ್ಯಾರಿಸ್ ಸಮೀಪದ ಗ್ರಾಮವೊಂದರಲ್ಲಿ ಜನಸಿದ ಲೂಯಿ ಬ್ರೈಲ್ ಹುಟ್ಟು ಕುರುಡನಾಗಿರಲಿಲ್ಲ. ಜನಿಸಿದಾಗ ಅವನು ಸಾಮಾನ್ಯ ಮಕ್ಕಳಂತೆಯೇ ಇದ್ದ. ಲೂಯಿಯದು ತಂದೆ ತಾಯಿ ಮತ್ತು ನಾಲ್ಕು ಜನ ಸಹೋದರರಿಂದ ಕೂಡಿದ  ದೊಡ್ಡ ಕುಟುಂಬ.  ಲೂಯಿಯ ತಂದೆ ಅತ್ಯಂತ ಬಡವನಾಗಿದ್ದು ಪಾದರಕ್ಷೆಗಳನ್ನು ತಯ್ಯಾರಿಸುವ ಒಂದು ಸಣ್ಣ ಅಂಗಡಿಯೇ ಅವರ ಕುಟುಂಬದ ಜೀವನ ನಿರ್ವಹಣೆಗೆ ಆಧಾರವಾಗಿತ್ತು. ಚಿಕ್ಕ ಮಗುವಾಗಿದ್ದ ಲೂಯಿ ತನ್ನ ದಿನದ ಬಹುಪಾಲು ಸಮಯವನ್ನು ತಂದೆಯೊಂದಿಗೆ ಪಾದರಕ್ಷೆಗಳ ಅಂಗಡಿಯಲ್ಲೇ ಕಳೆಯುತ್ತಿದ್ದ. ಬದುಕಿನಲ್ಲಿ ನಡೆಯುವ ಆಕಸ್ಮಿಕ ಘಟನೆಗಳು ಬದುಕಿನ ದಿಕ್ಕನ್ನೇ ಬದಲಿಸುವಂತೆ ಲೂಯಿ ಬ್ರೈಲ್ ಚಿಕ್ಕವನಾಗಿದ್ದಾಗ ನಡೆದ ಒಂದು ಘಟನೆ ಶಾಶ್ವತವಾಗಿ ಆತ ತನ್ನ ದೃಷ್ಟಿಯನ್ನು ಕಳೆದುಕೊಳ್ಳುವಂತೆ ಮಾಡಿತು. ಒಮ್ಮೆ ತಂದೆ ತಯ್ಯಾರಿಸುತ್ತಿದ್ದ ಚಪ್ಪಲಿ ಅಂಗಡಿಗೆ ಹೋದ ಲೂಯಿ ಬ್ರೈಲ್ ಒಂದು ದಪ್ಪ ಚರ್ಮವನ್ನು ತೆಗೆದುಕೊಂಡು ಸೂಜಿಯಿಂದ ಹೊಲಿಯ ತೊಡಗಿದ. ಹೀಗೆ ಚರ್ಮದ ಮೇಲೆ ದಾರದಿಂದ ಚಿತ್ರ ಬಿಡಿಸುತ್ತಿದ್ದ ಆ ಘಳಿಗೆ ಆಕಸ್ಮಿಕವಾಗಿ ಸೂಜಿ ಲೂಯಿಯ ಬಲ  ಕಣ್ಣಿಗೆ ತಾಗಿತು. ಶಸ್ತ್ರ ಚಿಕಿತ್ಸೆಯ ನಂತರವೂ ಗಾಯ ಗುಣವಾಗುವ ಲಕ್ಷಣ ಕಂಡುಬರಲಿಲ್ಲ. ಒಂದು ಕಣ್ಣಿಗೆ ಆದ ಗಾಯದ ಸೋಂಕು ಮತ್ತೊಂದು ಕಣ್ಣಿಗೆ ತಗುಲಿತು. ಪರಿಣಾಮವಾಗಿ  ಲೂಯಿ ಬ್ರೈಲ್ ತನ್ನ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡ. ಹೀಗೆ ದೃಷ್ಟಿಹೀನನಾದ ಆ ಹೊತ್ತು ಲೂಯಿಗೆ ಆಗಿನ್ನೂ ಕೇವಲ ೪ ವರ್ಷ ವಯಸ್ಸು. ಪಾಲಕರಿಗೆ ಲೂಯಿಯ ಬದುಕು ಒಂದು ಸಮಸ್ಯೆಯಾಗಿ ಕಾಡತೊಡಗಿತು. ಆತನನ್ನು ಬೇರೆ ಮಕ್ಕಳಂತೆ ಶಾಲೆಗೆ ಕಳುಹಿಸಲಾಯಿತಾದರೂ ಅಲ್ಲಿ ಅನೇಕ ಸಮಸ್ಯೆಗಳು ಎದುರಾದವು. ಶಿಕ್ಷಕರಿಗೂ ಆ ಅಂಧ ಮಗುವಿಗೆ ಪಾಠ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿತು. ಅಂಥ ಸಮಸ್ಯೆಗಳ ನಡುವೆಯೂ ಲೂಯಿ ಬ್ರೈಲ್ ಆ ಶಾಲೆಯಲ್ಲಿ  ಕೆಲವು ವರ್ಷ ಅಭ್ಯಾಸ ಮಾಡಿದ. ಆದರೆ ಆ ಶಾಲೆಯಲ್ಲಿ ಅಂಧ ಮಕ್ಕಳಿಗಾಗಿ ಓದಲು ಪುಸ್ತಕಗಳಿರಲಿಲ್ಲ.  ತನ್ನ ಅಂಧತ್ವದಿಂದಾಗಿ ಲೂಯಿಗೆ ಶಾಲೆಯಲ್ಲಿ ಏನನ್ನೂ ಕಲಿಯಲು ಸಾಧ್ಯವಾಗಲಿಲ್ಲ. ಇನ್ನು ಅದೇ ಶಾಲೆಯಲ್ಲಿ ಮುಂದುವರಿದರೆ ಶಿಕ್ಷಣ ಪಡೆಯುವುದು ಅಸಾಧ್ಯ ಎಂದರಿತ ಲೂಯಿಯ ತಂದೆ ತನ್ನ ಮಗನಿಗಾಗಿ ಹೊಸ ಶಾಲೆಯನ್ನು ಹುಡುಕತೊಡಗಿದ.

ಪ್ಯಾರಿಸ್ ನಡೆಗೆ ಪಯಣ   


            ಲೂಯಿಗೆ ಉತ್ತಮ ಶಿಕ್ಷಣ ಒದಗಿಸಿ ಆತನನ್ನು ಸ್ವಾವಲಂಬಿಯಾಗಿಸಬೇಕೆನ್ನುವುದು ಆತನ ತಂದೆಯ ಬಯಕೆಯಾಗಿತ್ತು. ಆ ದಿನಗಳಲ್ಲಿ ಅಂಧ ಮಕ್ಕಳು ಪ್ಯಾರಿಸ್  ಬೀದಿಗಳಲ್ಲಿ ಬಿಕ್ಷೆ ಬೇಡುವುದು ಸಾಮಾನ್ಯ ದೃಶ್ಯವಾಗಿತ್ತು. ಲೂಯಿ ಬ್ರೈಲ್ ನ   ತಂದೆಗೆ ತನ್ನ ಮಗ ಬಿಕ್ಷೆ ಬೇಡುವ ಚಿತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟದ ಸಂಗತಿಯಾಗಿತ್ತು. ಸ್ವತಹ ಅಕ್ಷರಸ್ಥನಾದ ಲೂಯಿಯ  ತಂದೆಗೆ ಶಿಕ್ಷಣದ ಮಹತ್ವದ ಅರಿವಿತ್ತು. ಆತ ತನ್ನ ಕುರುಡು ಮಗನ ಭವಿಷ್ಯವನ್ನು ಉಜ್ವಲಗೊಳಿಸಲು ಶಿಕ್ಷಣದ ಮೊರೆ ಹೋದ.   ಸಾಮಾನ್ಯ ಮಕ್ಕಳ ಶಾಲೆಯಲ್ಲಿ  ಲೂಯಿಗೆ ಸಮಸ್ಯೆ ಎದುರಾದಾಗ ಆತನ ತಂದೆ ಅವನನ್ನು ಪ್ಯಾರಿಸ್ ನಲ್ಲಿರುವ ವಿಶ್ವದ ಪ್ರಥಮ ಅಂಧರ ಶಾಲೆಯಾದ 'ರಾಯಲ್ ಇನ್ಸ್ಟಿಟ್ಯೂಟ್ ಆಫ್ ಬ್ಲೈಂಡ್ ಯುಥ್' ಎನ್ನುವ  ಅಂಧರ ಶಾಲೆಗೆ ಸೇರಿಸಿದ. ಲೂಯಿ ಬ್ರೈಲ್ ಗೆ ಎರಡನೇ ಆಯ್ಕೆಯೇ ಇರಲಿಲ್ಲ. ಉತ್ತಮ ಶಿಕ್ಷಣ ಪಡೆಯಬೇಕೆನ್ನುವ ಅವನೊಳಗಿನ ಮಹತ್ವಾಕಾಂಕ್ಷೆ ಆತನನ್ನು ಪ್ಯಾರಿಸ್ ನಲ್ಲಿರುವ ಅಂಧರ ಶಾಲೆಗೆ ಕರೆದೊಯ್ಯಿತು. ಪ್ಯಾರಿಸ್ ನಡೆಗಿನ ಆ ಪಯಣ ನಂತರದ  ದಿನಗಳಲ್ಲಿ ಲೂಯಿ ಬ್ರೈಲ್ ನ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು. ೧೭೮೬ ರಲ್ಲಿ ಸ್ಥಾಪನೆಯಾದ ಈ ಶಾಲೆ ಪ್ರಥಮ ಅಂಧ ಮಕ್ಕಳ ಶಾಲೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ.  ಆ ಶಾಲೆಯ ಸ್ಥಾಪಕನಾದ ವಾಲೆಂಟಿನ್ ಹೂಯಿ ಅಂಧ ಮಕ್ಕಳು ಓದಲು ಮತ್ತು ಬರೆಯಲು ತನ್ನದೇ ವಿಧಾನವನ್ನು ಅನುಸರಿಸುತ್ತಿದ್ದ. ಅಂಧನಾಗಿರದ ವಾಲೆಂಟಿನ್ ಗೆ ಅಂಧ ಮಕ್ಕಳ ಸಮಸ್ಯೆಯನ್ನು ಸಹಜವಾಗಿ ಗುರುತಿಸಿ ಅದಕ್ಕೆ ಪರಿಹಾರ ಕಂಡುಹಿಡಿಯುವುದು ಅಸಾಧ್ಯದ ಸಂಗತಿಯಾಗಿತ್ತು. ಅಂಧ ಮಕ್ಕಳಿಗೆ ಸಹಾಯ ಮಾಡಬೇಕೆನ್ನುವ ಅವನೊಳಗಿನ ಇಂಗಿತ ಅವನನ್ನು ಅಂಧ ಮಕ್ಕಳ ಶಾಲೆ ತೆರೆಯಲು ಪ್ರೇರೇಪಿಸಿತ್ತು.  ಆದರೆ ಆ ಶಾಲೆಯಲ್ಲಿನ ಪುಸ್ತಕಗಳನ್ನು ಅಂಧ ಮಕ್ಕಳು ಸರಾಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಪುಸ್ತಕಗಳ ಗಾತ್ರ ಮತ್ತು ಭಾರ ಮಕ್ಕಳಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಆ ಸಂದರ್ಭ ಶಾಲೆಯಲ್ಲಿನ ಅದೆಷ್ಟೋ ಅಂಧ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದದುಂಟು. ಆಗೆಲ್ಲ ಆ ಶಾಲೆಯ ಸಂಸ್ಥಾಪಕನಾದ ವಾಲೆಂಟಿನ್ ಹೂಯಿಗೆ ನಿರಾಶೆ ಎದುರಾಗುತ್ತಿತ್ತು. ಲೂಯಿ ಬ್ರೈಲ್ ಮಾತ್ರ ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಅತ್ಯಂತ ಶ್ರದ್ಧೆಯಿಂದ ಓದುತ್ತಿದ್ದ. ಆ ಶಾಲೆಯಲ್ಲಿದ್ದ ಅಂಧ ಮಕ್ಕಳಿಗೆಂದೇ  ಪ್ರಕಟವಾಗಿದ್ದ ಎಲ್ಲ ೧೪ ಪುಸ್ತಕಗಳನ್ನೂ ಓದಿ ಮುಗಿಸಿದ. ತನ್ನ ಬದುಕನ್ನು ಕವಿದ ಕಾರ್ಮೋಡದಿಂದ ಹೊರಬರಬೇಕೆನ್ನುವ ಮಹತ್ವಾಕಾಂಕ್ಷೆ ಆತನದಾಗಿತ್ತು. ಪರೀಕ್ಷೆಯಲ್ಲಿ ಉತ್ತಿರ್ಣನಾದ ಲೂಯಿ ಬ್ರೈಲ್ ತನ್ನ ಗುರುವಿನ ಆಸೆಯಂತೆ ತಾನೊದಿದ ಶಾಲೆಯಲ್ಲೇ ಶಿಕ್ಷಕನಾಗಿ ವೃತ್ತಿಯನ್ನಾರಂಭಿಸಿದ.

ಬ್ರೈಲ್ ಲಿಪಿಯ ಅವಿಷ್ಕಾರ 


          ಅಂಧ ಮಕ್ಕಳಿಗಾಗಿ ಏನಾದರೂ ಉಪಯುಕ್ತವಾದದ್ದನ್ನು ಮಾಡಬೇಕೆನ್ನುವ ಆಸೆಯೊಂದಿಗೇ ಲೂಯಿ ಬ್ರೈಲ್ ಆ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿದ. ಆತನ ಮೊದಲ ಆದ್ಯತೆ ಮಕ್ಕಳು  ಓದಲು ಮತ್ತು ಬರೆಯಲು ಅನುಕೂಲವಾಗುವಂತೆ ಹೊಸ ಬರವಣಿಗೆಯ ವಿಧಾನವೊಂದನ್ನು ಕಂಡು ಹಿಡಿಯ ಬೇಕೆನ್ನುವುದಾಗಿತ್ತು. ಆ ಶಾಲೆಯಲ್ಲಿ ಅಂಧ ಮಕ್ಕಳಿಗಾಗಿ  ಪುಸ್ತಕಗಳಿದ್ದರೂ ಅಕ್ಷರಗಳನ್ನು ಬೇಗನೆ ಗುರುತಿಸಿ ಸಾಮಾನ್ಯ ಮಕ್ಕಳಂತೆ ವೇಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಅಕ್ಷರಗಳನ್ನು ಗುರುತಿಸಿ ವಾಕ್ಯಗಳನ್ನು ಓದುವುದು  ಕಷ್ಟದ ಕೆಲಸವಾಗಿತ್ತು.  ಆದ್ದರಿಂದ ಅಕ್ಷರಗಳನ್ನು ಬಲುಬೇಗನೆ ಗುರುತಿಸಿ ವೇಗವಾಗಿ ಓದಲು   ಸಹಾಯವಾಗುವಂಥ ಲಿಪಿಯನ್ನು ಕಂಡು ಹಿಡಿಯಬೇಕೆನ್ನುವುದು ಲೂಯಿ ಬ್ರೈಲ್ ನ ಉದ್ದೇಶವಾಗಿತ್ತು.   ಅವನು ವಿದ್ಯಾರ್ಥಿಯಾಗಿದ್ದ ಸಂದರ್ಭ  ಆ ಶಾಲೆಯಲ್ಲಿ ನಡೆದ ಒಂದು ಘಟನೆ ಲೂಯಿ ಬ್ರೈಲ್ ನ ಸಮಸ್ಯೆಗೆ ಶಾಶ್ವತ ಪರಿಹಾರವನ್ನೊದಗಿಸಿತು. ಆ ಘಟನೆ ಹೀಗಿದೆ ೧೮೨೧ ರಲ್ಲಿ  ಚಾರ್ಲ್ಸ್ ಬಾರ್ಬೈರ್ ಎನ್ನುವ ಸೈನಿಕ ಲೂಯಿ ಓದುತ್ತಿದ್ದ ಅಂಧರ ಶಾಲೆಗೆ ಭೇಟಿ ನೀಡಿ ತಾನು ಕಂಡುಹಿಡಿದಿದ್ದ 'ನೈಟ್ ರೈಟಿಂಗ್' ಎನ್ನುವ ಯಂತ್ರದ ಕುರಿತು ವಿವರಿಸಿದನು. ನೈಟ್ ರೈಟಿಂಗ್ ಸೈನಿಕರು ದೂರದಿಂದಲೇ ಪರಸ್ಪರ ಸಂದೇಶಗಳನ್ನು ರವಾನಿಸುವ ಒಂದು ಯಂತ್ರವಾಗಿದ್ದು ಅದು ೧೨ ರಂಧ್ರಗಳನ್ನೊಳಗೊಂಡಿತ್ತು. ಆ ಎಲ್ಲ ೧೨ ರಂಧ್ರಗಳು ವಿಭಿನ್ನ ಶಬ್ದಗಳನ್ನು ಹೊರಡಿಸುತ್ತಿದ್ದವು. ದುರದೃಷ್ಟವಶಾತ್ ಸೈನಿಕರು ಈ ಯಂತ್ರವನ್ನು ಉಪಯೋಗಿಸಲು ವಿಫಲರಾದ ಕಾರಣ ಅದರ ಉಪಯೋಗವನ್ನು ತಿರಸ್ಕರಿಸಲಾಯಿತು. 

            ನೈಟ್ ರೈಟಿಂಗ್ ಯಂತ್ರದ ಪ್ರಾತ್ಯಕ್ಷಿಕತೆ ಲೂಯಿ ಬ್ರೈಲ್ ಮೇಲೆ ತುಂಬ ಪ್ರಭಾವ ಬೀರಿತು. ಈ ಯಂತ್ರ ಅಂಧ ಮಕ್ಕಳ ಓದಿಗೆ ಅನುಕೂಲವಾಗಬಹುದೆನ್ನುವ ಮಹತ್ವಾಕಾಂಕ್ಷೆ ಅವನಲ್ಲಿ ಚಿಗುರೊಡೆಯಿತು. ಪರಿಣಾಮವಾಗಿ ಲೂಯಿ ಬ್ರೈಲ್ ರಂಧ್ರಗಳ ಸಹಾಯದಿಂದ ಬರೆಯುವ ಮತ್ತು ಓದುವ ವಿಧಾನವನ್ನು ಕಂಡು ಹಿಡಿಯಲು ಪ್ರಯತ್ನಿಸಿದ. ಲೂಯಿ  ಹಗಲಿರುಳೆನ್ನದೆ ಶ್ರಮಿಸಿದ.ಕೊನೆಗೂ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿ ಆತ ಬ್ರೈಲ್ ಲಿಪಿಯನ್ನು ಅವಿಷ್ಕರಿಸಿದ ಆ ಸಂದರ್ಭ ಅವನಿಗಿನ್ನೂ ೧೫ ವರ್ಷ ವಯಸ್ಸು. ಲೂಯಿ ಬ್ರೈಲ್ ಪ್ರಾರಂಭದಲ್ಲಿ ಗಣಿತ ಮತ್ತು ಸಂಗೀತ ವಿಷಯಗಳನ್ನು ಓದಲು ಮತ್ತು ಬರೆಯಲು ಸಂಕೇತಗಳನ್ನು ಕಂಡುಹಿಡಿದ. ೧೮೨೭ ರಲ್ಲಿ ಪ್ರಥಮ ಬಾರಿಗೆ ಬ್ರೈಲ್ ಲಿಪಿಯಲ್ಲಿ ಪುಸ್ತಕ ಪ್ರಕಟವಾಯಿತು. ಆದರೆ ಆಗ ಲೂಯಿ ಬ್ರೈಲ್ ಗೆ ದೊರೆಯಬೇಕಾದ ಸೂಕ್ತ ಪ್ರೋತ್ಸಾಹ ದೊರೆಯಲಿಲ್ಲ. ಅವನು ಪಾಠ ಮಾಡುತ್ತಿದ್ದ ಶಾಲೆಯಲ್ಲಿ ಬ್ರೈಲ್ ಲಿಪಿಯನ್ನು ಬಳಸಲು  ಅವಕಾಶ ನೀಡಲಿಲ್ಲ. ಇದರಿಂದ ಆತ ನಿರಾಶನಾಗದೆ  ಬ್ರೈಲ್ ಲಿಪಿಯಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿ ಆ  ಮೂಲಕ ಅಂಧರ ಬದುಕಿಗೆ ಬೆಳಕು ನೀಡಲು ಪ್ರಯತ್ನಿಸಿದ. ಲೂಯಿ ಬದುಕಿರುವ ಅವಧಿಯಲ್ಲಿ ಆತನ ಪ್ರಯೋಗ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ. ಸತತ ಅನಾರೋಗ್ಯದಿಂದ ಬಳಲುತ್ತಿದ್ದ ಲೂಯಿ ಬ್ರೈಲ್ ಕ್ಷಯರೋಗದಿಂದ ೧೮೫೨ ರಲ್ಲಿ ಅಸುನೀಗಿದಾಗ ಅವನ ವಯಸ್ಸು ೪೩ ವರ್ಷಗಳು. ತನ್ನ ಮರಣದ ನಂತರ ಆತ ತನ್ನಲ್ಲಿದ್ದ ಹಣವನ್ನೆಲ್ಲ ಅಂಧರ ಸಂಘಗಳಿಗೆ ದೇಣಿಯಾಗಿ ಕೊಡುವಂತೆ ಸೂಚಿಸಿದ್ದ.


                                                                  (ಬ್ರೈಲ್ ಲಿಪಿಯ ಮಾದರಿ)


ದೊರೆತ ಗೌರವ 


               ಲೂಯಿ ಬ್ರೈಲ್ ನ ಸಾವಿನ ನಂತರ ಅನೇಕ ವರ್ಷಗಳವರೆಗೆ ಬ್ರೈಲ್ ಲಿಪಿ ಜನರ ನೆನಪಿನಿಂದ ಮರೆಯಾಯಿತು. ಆದರೆ ೧೮೬೮ ರಲ್ಲಿ ಡಾ. ಥಾಮಸ್ ಆರ್ಮಿಟೆಜ್ ಫ್ರಾನ್ಸ್ ನಲ್ಲಿ ಅಂಧರ ಒಂದು ಸಂಘವನ್ನು ಸ್ಥಾಪಿಸಿ ಬ್ರೈಲ್ ಲಿಪಿಯ ಸಹಾಯದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಥಾಮಸ್ ಆರ್ಮಿಟೆಜ್ ಅವರ ನಿರಂತರ  ಪ್ರಯತ್ನದ ಪರಿಣಾಮ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರೈಲ್ ಲಿಪಿಯ ಬಳಕೆ ಹೆಚ್ಚಿತು. ೧೯೯೦ ರ ಹೊತ್ತಿಗೆ ಪ್ರತಿಯೊಂದು ರಾಷ್ಟ್ರದಲ್ಲಿನ ಎಲ್ಲ ಪ್ರಮುಖ ಭಾಷೆಗಳಲ್ಲಿ ಬ್ರೈಲ್ ಲಿಪಿಯಲ್ಲಿ ಪುಸ್ತಕಗಳು ಪ್ರಕಟವಾದವು. ಇದೇ ವೇಳೆ 'ಬ್ರೈಲ್ ಲಿಪಿಯನ್ನು ಬಳಸದೇ ಇರುವ ಅಂಧರ ಶಾಲೆ ಜಗತ್ತಿನ  ಯಾವ ದೇಶದಲ್ಲೂ  ಇಲ್ಲ' ಎಂದು ಥಾಮಸ್ ಆರ್ಮಿಟೆಜ್ ಘೋಷಿಸಿದರು.  ಇಂದು ಜಗತ್ತಿನ ಆಲ್ಬೇನಿಯನ್ (Albanian) ಭಾಷೆಯಿಂದ ಝುಲು (Zulu) ಭಾಷೆಯವರೆಗೆ ಎಲ್ಲ ಭಾಷೆಗಳಲ್ಲಿ ಬ್ರೈಲ್ ಲಿಪಿ ಬಳಕೆಯಲ್ಲಿದೆ. 

            ನಂತರದ ವರ್ಷಗಳಲ್ಲಿ ಬ್ರೈಲ್ ಲಿಪಿಯ ಯಶಸ್ಸು, ಜನಪ್ರಿಯತೆ ಮತ್ತು ಅದರ ಉಪಯುಕ್ತತೆಯನ್ನು ಪರಿಗಣಿಸಿ ಫ್ರಾನ್ಸ್ ರಾಷ್ಟ್ರದಲ್ಲಿ ಲೂಯಿ ಬ್ರೈಲ್ ಗೆ ದೊರೆಯಬೇಕಾದ ಮನ್ನಣೆ ಮತ್ತು ಗೌರವ ದೊರೆತವು. ವಿಪರ್ಯಾಸದ ಸಂಗತಿ ಎಂದರೆ ಆ ಹೊತ್ತಿಗೆ ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸಲು ಲೂಯಿ ಬ್ರೈಲ್ ಬದುಕಿರಲಿಲ್ಲ. ಬದುಕಿನುದ್ದಕ್ಕೂ ಸಂಕಷ್ಟಗಳ ಮಧ್ಯೆಯೇ ಜೀವನ ಸಾಗಿಸಿದ ಲೂಯಿ ಬ್ರೈಲ್ ಸಾವಿನ ನಂತರವೂ ನೆನಪಿನಲ್ಲುಳಿಯುವಂಥ ಮಹತ್ವದ ಕಾಣಿಕೆಯನ್ನು ಪ್ರಪಂಚಕ್ಕೆ ನೀಡಿ ಫ್ರಾನ್ಸ್ ದೇಶದ ಮಹಾನ್ ನಾಯಕನೆನಸಿಕೊಂಡ. ಲೂಯಿಯ ಸಾವಿನ ನಂತರ ಆತ ಜನಿಸಿದ ಮನೆಯನ್ನು ಐತಿಹಾಸಿಕ ಸ್ಥಳವಾಗಿ ಪರಿವರ್ತಿಸಲಾಯಿತು.  ೧೯೫೨ ರಲ್ಲಿ ಲೂಯಿ ಬ್ರೈಲ್ ನ ಸಮಾಧಿಯನ್ನು ಫ್ರಾನ್ಸ್ ದೇಶದ ರಾಷ್ಟ್ರೀಯ ನಾಯಕರ ಸಮಾಧಿ ಸ್ಥಳವಾದ ಪ್ಯಾಂಥೆನ್ (Pantheon) ರುದ್ರಭೂಮಿಗೆ ಸ್ಥಳಾಂತರಿಸಿ ಆತನ ಸಾಧನೆಯನ್ನು ಗೌರವಿಸಲಾಯಿತು. ೨೦೦೯ ರಲ್ಲಿ ಲೂಯಿ ಬ್ರೈಲ್ ನ ೨೦೦ನೇ ಜನ್ಮದಿನದ ಸ್ಮರಣಾರ್ಥ ಅಮೇರಿಕ, ಭಾರತ, ಇಟಲಿ ಮತ್ತು ಬೆಲ್ಜಿಯಂ ದೇಶಗಳಲ್ಲಿ ಲೂಯಿ ಚಿತ್ರವಿರುವ ನಾಣ್ಯಗಳನ್ನು ಹೊರತರಲಾಯಿತು. ಜರ್ಮನ್ ರಾಷ್ಟ್ರವು ಲೂಯಿ ಬ್ರೈಲ್ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆಮಾಡಿ ಆ ಸಾಧಕನನ್ನು ಗೌರವಿಸಿತು. ಜೊತೆಗೆ ಲೂಯಿ ಬ್ರೈಲ್ ನ ಸಾಧನೆ ಕುರಿತು ಅನೇಕ ಭಾಷೆಗಳಲ್ಲಿ ಮಕ್ಕಳ ಪುಸ್ತಕಗಳು ಪ್ರಕಟವಾಗಿವೆ. ಫ್ರಾನ್ಸ್  ದೇಶದಲ್ಲಿ ಲೂಯಿ ಬ್ರೈಲ್ ನ  ಸಾಧನೆಯ ಮೇಲೆ ಬೆಳಕು ಚೆಲ್ಲುವ ನಾಟಕಗಳು ಅಲ್ಲಲ್ಲಿ ಪ್ರದರ್ಶನಗೊಂಡವು ಮತ್ತು ೨೦೦೮ ರಲ್ಲಿ ಫ್ರಾನ್ಸ್ ಭಾಷೆಯಲ್ಲಿ ಸಿನಿಮಾ ಕೂಡ ತಯ್ಯಾರಾಯಿತು. 

ಕೊನೆಯ ಮಾತು 


ರಸಲ್ ಫ್ರೀಡಮನ್ ಬರೆದ 'ಔಟ್ ಆಫ್ ಡಾರ್ಕ್ ನೆಸ್' (Out of Darkness) ಪುಸ್ತಕದಲ್ಲಿನ ಪ್ರಾರಂಭದ ಈ ಕೆಳಗಿನ ಸಾಲುಗಳು ಲೂಯಿ ಬ್ರೈಲ್ ನೊಳಗಿನ ಮಹತ್ವಾಕಾಂಕ್ಷೆ ಮತ್ತು ತಹತಹಿಕೆಗೆ ಕನ್ನಡಿ ಹಿಡಿಯುತ್ತವೆ.

'More than anything else Louis Braille wanted to read. He could not accept the fact that as a blind boy, in the year 1821 he was unable to communicate by the written word. So each night in the darkness of his dormitory room he punched tiny holes in paper. His friends told him he was wasting his time, but Braille's experiment with dots became a system that as the plaque on the front of Braille's house reads, 'Open the doors of knowledge to all those who cannot see'.


-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ  



Tuesday, December 24, 2013

ಹಚ್ಚಿದರು ಹಣತೆ

              






            ಕನ್ನಡದ ಹಿರಿಯ ಸಾಹಿತಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ನಿನ್ನೆ ಅಸ್ತಂಗತರಾದರು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ  ನಷ್ಟ. ಜಿಎಸ್ಎಸ್ ಕನ್ನಡ ನಾಡಿನ ಸಮನ್ವಯ ಕವಿ. ತಮ್ಮ ಭಾವ ಗೀತೆಗಳ ಮೂಲಕ ಇಡೀ ನಾಡಿನ ಜನರ ಮನಸ್ಸುಗಳನ್ನು ಭಾವಲೋಕಕ್ಕೆ ಕೊಂಡೊಯ್ದ ಗಾರುಡಿಗ. ಯಾವ ನವ್ಯ, ನವೋದಯ, ಬಂಡಾಯಗಳ ಬೇಲಿಯನ್ನು ತಮ್ಮ ಸುತ್ತ ಕಟ್ಟಿಕೊಳ್ಳದೆ ತಮ್ಮೊಳಗಿನ ಸೃಜನಶೀಲತೆಯು  ಮುಕ್ಕಾಗದಂತೆ ಕಾಪಾಡಿಕೊಂಡು ಬಂದ ಕನ್ನಡದ ಅನನ್ಯ ಬರಹಗಾರ. ಅಪ್ರಮಾಣಿಕತೆ, ಭ್ರಷ್ಟಾಚಾರವೇ ನಮ್ಮ ಸುತ್ತ ಕುಣಿದು ಕೇಕೆ ಹಾಕುತ್ತಿರುವ ಹೊತ್ತು ಇದೇ ಜಿಎಸ್ಎಸ್ ಅವರ ಭಾವಗಿತೆಗಳು ನಮ್ಮ ಬದುಕನ್ನು ಸಹನೀಯವಾಗಿಸಿದವು.  ಬದುಕಿನ  ನಿಜಾರ್ಥ ನಮ್ಮೆದುರು ಅನಾವರಣಗೊಂಡಿದ್ದು ಅವರದೇ ಭಾವಗೀತೆಗಳ ಮೂಲಕ. ಒಂದರ್ಥದಲ್ಲಿ ಜಿಎಸ್ಎಸ್ ಅವರ ಭಾವಗೀತೆಗಳಿಗೆ ಬದುಕನ್ನೇ  ಬದಲಿಸುವ ಶಕ್ತಿಯಿದೆ. ಅದಕ್ಕೆಂದೇ ಅವು ಎಲ್ಲ ಕಾಲಕ್ಕೂ ಸಲ್ಲುವ ಗೀತೆಗಳು.

       ಜಿಎಸ್ಎಸ್ ಅವರದು ಜಾಗೃತಿ ಮತ್ತು ಚಿಂತನೆಗಳನ್ನು ಓದುಗರಲ್ಲಿ ಒಡಮೂಡಿಸುವ ಕಾವ್ಯ. ಅವರ ಕವಿತೆಗಳಲ್ಲಿ ಸಾಮಾಜಿಕ ಆಯಾಮ ಅನಾವರಣಗೊಂಡಿದೆ. ಕಾವ್ಯರಚನೆ ಅವರಿಗೆ ಅದೊಂದು ಸಾಮಾಜಿಕ ಬದುಕನ್ನು ಕಟ್ಟಿಕೊಡುವ ಪ್ರಕ್ರಿಯೆ. ಇಂಥ ಮನೋಭಾವವಿರುವ ಅವರ ಕವಿ ಮನಸ್ಸು 'ಕಾವ್ಯ ಬರೀ ಶಬ್ದ ಸೇರಿಸುವ ಕ್ರಿಯೆಯಲ್ಲ. ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?' ಎಂದು ಪ್ರಶ್ನಿಸುತ್ತದೆ. ಅದಕ್ಕೆಂದೇ ಅವರು ತಮ್ಮ ಕಾವ್ಯ ರಚನೆಯನ್ನು ಹೀಗೆ ಹೇಳುತ್ತಾರೆ

          ನಾನು ಬರೆಯುತ್ತೇನೆ
          ಖುಷಿಗೆ, ನೋವಿಗೆ
          ರೊಚ್ಚಿಗೆ ಮತ್ತು ಹುಚ್ಚಿಗೆ
          ಅಥವಾ ನಂದಿಸಲಾರದ ಕಿಚ್ಚಿಗೆ

    ಸಮಾಜದ ಸಮಸ್ಯೆಗಳಿಗೆ ದನಿಯಾಗುವಲ್ಲಿ ಕವಿಯ ಸಾಫಲ್ಯವಡಗಿದೆ. ಕವಿಯಾದವನು ವೈಯಕ್ತಿಕವಾದದ್ದನ್ನು ಸಾರ್ವತ್ರಿಕರಿಸುತ್ತ ಹೋಗುತ್ತಾನೆ. ಜಿಎಸ್ಎಸ್ ಅವರ ಹೆಚ್ಚಿನ ಕವಿತೆಗಳಲ್ಲಿ ಶೋಷಿತರ ದನಿ ಅನುರಣಿಸಿದೆ.

          ಸುತ್ತ ಮುತ್ತ ಮನೆ ಮಠಗಳು
          ಹೊತ್ತಿಕೊಂಡು ಉರಿಯುವಲ್ಲಿ
          ಸೋತು ಮೂಕವಾದ ಬದುಕು
          ನಿಟ್ಟುಸಿರೊಳು ತೇಲುವಲ್ಲಿ
          ಯಾವ ಹಾಡ ಹಾಡಲಿ?

           ಉರಿವ ಕಣ್ಣ ಚಿತೆಗಳಲ್ಲಿ
           ಇರುವ ಕನಸು ಸೀಯುವಲ್ಲಿ
           ಎದೆ ಎದೆಗಳ ಜ್ವಾಲಾಮುಖಿ
           ಹೊಗೆ  ಬೆಂಕಿ ಕಾರುವಲ್ಲಿ
           ಯಾವ ಹಾಡ ಹಾಡಲಿ?

     ಹೀಗೆ ಸೋತ ಸಮಾಜಕ್ಕೆ ದನಿಯಾಗುವ ಕವಿಯಲ್ಲಿ ನಂಬಿಕೆಯೂ ಇದೆ. ಶೋಷಿತರ ಸಮಸ್ಯೆಗಳನ್ನು ತನ್ನ ಹೃದಯಕ್ಕೆ ತೆಗೆದುಕೊಂಡು ಅವುಗಳನ್ನು ಪರಿಹರಿಸುವ ಆತ್ಮವಿಶ್ವಾಸವೂ  ಅವರದಾಗಿತ್ತು. ನಂಬಿಕೆ ಮತ್ತು ಆತ್ಮವಿಶ್ವಾಸಗಳೇ ಬರಹಗಾರನ ಬಹುಮುಖ್ಯವಾದ ಆಸ್ತಿಗಳು. ಜೊತೆಗೆ ಇದರೊಂದಿಗೆ ತಾಯ್ತನದ ಅಂತ:ಕರಣವೂ  ಸೇರಿದರೆ ಬರಹಗಾರ ಎಲ್ಲ ಸಾಮಾಜಿಕ ವೈರುಧ್ಯಗಳಿಗೂ ಮುಖಾಮುಖಿಯಾಗಿ ನಿಲ್ಲಬಲ್ಲ.

        ದೀಪವಿರದ ದಾರಿಯಲ್ಲಿ
        ತಡವರಿಸುವ ನುಡಿಗಳೇ
         ಕಂಬನಿಗಳ ತಲಾತಲದಿ
         ನಂದುತಿರುವ ಕಿಡಿಗಳೇ
         ಉಸಿರನಿಡುವೆ
         ಹೆಸರ ಕೊಡುವೆ
         ಬನ್ನಿ ನನ್ನ ಹೃದಯಕೆ

       ಜಿಎಸ್ಎಸ್ ಅವರಲ್ಲಿ ತಾಯ್ತನದ ಅಂತ:ಕಾರಣದ ಜೊತೆಗೆ ಆ ತಾಯ್ತನಕ್ಕೆ ಸಂಕೇತಳಾದ ಹೆಣ್ಣನ್ನು ಗೌರವಿಸುವ ವಿಶಾಲ ಮನೋಭಾವವೂ ಇತ್ತು. ಅವರ 'ಸ್ತ್ರೀ' ಕವಿತೆ ಹೆಣ್ಣನ್ನು ಪೂಜ್ಯನೀಯ ದೃಷ್ಟಿಯಿಂದ ಕಾಣುವ ಅವರ ಮನೋಭಾವಕ್ಕೊಂದು ದೃಷ್ಟಾಂತ. ಅವರೊಳಗಿನ ಸ್ತ್ರೀ ಸಂವೇದನೆಯ ಗುಣ ಈ ರೀತಿಯಾಗಿ ಅನಾವರಣಗೊಂಡಿದೆ

          ಆಕಾಶದ ನೀಲಿಯಲ್ಲಿ
          ಚಂದ್ರ ತಾರೆ ತೊಟ್ಟಿಲಲ್ಲಿ
          ಬೆಳಕನಿಟ್ಟು ತೂಗಿದಾಕೆ
          ನಿನಗೆ ಬೇರೆ ಹೆಸರು ಬೇಕೆ
          ಸ್ತ್ರೀ ಅಂದರೆ ಅಷ್ಟೆ ಸಾಕೇ ?

           ಮನೆಮನೆಯಲಿ ದೀಪ ಮುಡಿಸಿ
           ಹೊತ್ತು ಹೊತ್ತಿಗನ್ನ ಉಣಿಸಿ
           ತಂದೆ ಮಗುವ ತಬ್ಬಿದಾಕೆ
           ನಿನಗೆ ಬೇರೆ ಹೆಸರು ಬೇಕೆ
           ಸ್ತ್ರೀ ಅಂದರೆ ಅಷ್ಟೆ ಸಾಕೇ ?

    ಜಿಎಸ್ಎಸ್ ಅವರಲ್ಲಿ ಬಹುಮುಖ್ಯವಾಗಿ ನಾವು ಕಾಣುವ ಇನ್ನೊಂದು ಗುಣ ಅದು ಅವರೊಳಗಿನ ನಿರ್ಲಿಪ್ತತೆ. ಯಾವ ಬಿರುದು, ಪ್ರಶಸ್ತಿಗಳ ಬೆನ್ನು ಹತ್ತಿ ಹೋದವರಲ್ಲ. ಅವುಗಳು ಅವರನ್ನು ಅರಸಿ ಬಂದಾಗಲೂ ಈ ಕವಿಯದು ಅದೇ ದಿವ್ಯ ನಿರ್ಲಿಪ್ತತೆ. ಕಲಾವಿದನಲ್ಲಿ ಇರಲೇ ಬೇಕಾದ ಗುಣವಿದು. ನಿರೀಕ್ಷೆ ಮತ್ತು ಅಹಂಕಾರಗಳನ್ನು ಮೀರಿ ನಿಂತಾಗಲೇ ಬರಹಗಾರನಲ್ಲಿ ಸೃಜನಶೀಲತೆ ಸೃಷ್ಟಿಯಾಗಬಲ್ಲದು. ಅಂಥದ್ದೊಂದು ಆಶಯವನ್ನು ಜಿಎಸ್ಎಸ್ ತಮ್ಮ 'ಎದೆ ತುಂಬಿ ಹಾಡಿದೆನು' ಕವಿತೆಯಲ್ಲಿ ವ್ಯಕ್ತಪಡಿಸಿರುವರು.

           ಎಲ್ಲ ಕೇಳಲಿ ಎಂದು
           ನಾನು ಹಾಡುವುದಿಲ್ಲ
           ಹಾಡುವುದು ಅನಿವಾರ್ಯ
           ಕರ್ಮ ನನಗೆ

           ಕೇಳುವವರಿಹರೆಂದು
           ನಾ ಬಲ್ಲೆ ಅದರಿಂದ
           ಹಾಡುವೇನು ಮೈದುಂಬಿ
           ಎಂದಿನಂತೆ ಯಾರು
           ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ


         ವೈಚಾರಿಕತೆ ಜಿಎಸ್ಎಸ್ ಕಾವ್ಯದ ಇನ್ನೊಂದು ಬಹುಮುಖ್ಯವಾದ ಗುಣ. ಜಿಎಸ್ಎಸ್ ವ್ಯಕ್ತಿತ್ವ ಜಾತಿ, ಧರ್ಮಗಳ ಸಂಕೋಲೆಯಿಂದ ಮುಕ್ತವಾದದ್ದು. ಅವರ ಕವಿ ಮನಸ್ಸು ಅದನ್ನೇ ಸಮಾಜದಿಂದಲೂ ನಿರೀಕ್ಷಿಸುತ್ತದೆ (ಇಲ್ಲಿ ನಿರೀಕ್ಷೆ ವೈಯಕ್ತಿಕ ನೆಲೆಯಲ್ಲಲ್ಲ. ಅದು ಸಮಾಜಮುಖಿ ನಿರೀಕ್ಷೆ). ವೈಚಾರಿಕ ಪ್ರಜ್ಞೆಯೊಂದು ನಮ್ಮಲ್ಲಿ ಒಡಮೂಡಲು ಅದಕ್ಕೆ ಧರ್ಮನಿರಪೇಕ್ಷಿತ ದೃಷ್ಟಿಕೊನವೇ ದಾರಿ. ಹಲವು ದೇವರನ್ನು ದೂರ ನೂಕಿ ಪ್ರೀತಿ, ಸ್ನೇಹವೇ ನಮ್ಮ ದೇವರಾಗಬೇಕೆನ್ನುವ ವೈಚಾರಿಕ ಪ್ರಜ್ಞೆ ಅವರದಾಗಿತ್ತು.

          ಎಲ್ಲೋ ಹುಡುಕಿದೆ ಇಲ್ಲದ ದೇವರ
          ಕಲ್ಲು ಮಣ್ಣುಗಳ ಗುಡಿಯೊಳಗೆ
          ಇಲ್ಲೇ ಇರುವ ಪ್ರೀತಿ ಸ್ನೇಹಗಳ
          ಗುರುತಿಸದಾದೆನು ನಮ್ಮೊಳಗೆ

          ಎಲ್ಲಿದೆ ನಂದನ ಎಲ್ಲಿದೆ ಬಂಧನ
          ಎಲ್ಲಾ ಇದೆ ಈ ನಮ್ಮೊಳಗೆ
          ಒಳಗಿನ ತಿಳಿಯನು ಕಲಕದೆ ಇದ್ದರೆ
          ಅಮೃತದ ಸವಿಯಿದೆ ನಾಲಿಗೆಗೆ

     
          ಹೀಗೆ ವೈಚಾರಿಕ ಪ್ರಜ್ಞೆಗೊಳಗಾದ ಕವಿ ಸಮಾಜದಲ್ಲಿ ಜನರ ದುಷ್ಟತನವನ್ನು ಕಂಡು ಸಂಕಟಪಡುತ್ತಾರೆ. ಮನುಷ್ಯರೊಳಗಿನ ಕೆಟ್ಟತನ ಅವರನ್ನು ಯಾತನೆಗೊಳಿಸುತ್ತದೆ. ದುಷ್ಟರ ದುಷ್ಟತನವನ್ನು ಪ್ರಶ್ನಿಸುತ್ತಲೇ ಸಮಾಜದೊಂದಿಗಿನ ತಮ್ಮ ಸಂಬಂಧವೇನು ಎನ್ನುವ ವಿವೇಚನೆಗೆ ಮುಂದಾಗುತ್ತಾರೆ.

          ದು:ಖ ಅವಮಾನ ಸಂಕಟಗಳಲ್ಲಿ ನಾನು
          ಒಬ್ಬಂಟಿಯಾಗುತ್ತೇನೆ. ಅದುವರೆಗು ಜತೆಗೆ
          ನಿಂತವರೊಬ್ಬರೂ ಇರದ ದ್ವೀಪವಾಗುತ್ತೇನೆ
          ಹಬ್ಬಿರುವ ಮಬ್ಬಿನ ಮಧ್ಯೆ ಒಬ್ಬನೇ ಕೂತು
          ಯೋಚಿಸುತ್ತೇನೆ ಯಾಕಿಷ್ಟು ದುಷ್ಟರಾಗುತ್ತಾರೆ
          ಜನ ಕೊಂಬೆಗಳ ಕಡಿದು ಹೂವುಗಳ
          ಹೊಸಕಿ ಹಕ್ಕಿಗಳ ಕೊರಳು ಹಿಸುಕುತ್ತಾರೆ
          ನಿಷ್ಕಾರಣ? ಈ ಹೊತ್ತಿನಲ್ಲಿ ಮತ್ತೆ ಕಾಡುವುದು
          ಪ್ರಶ್ನೆ ಈ ಇವರಿಗೂ ನನಗೂ ಏನು ಸಂಬಂಧ?


          ಒಟ್ಟಿನಲ್ಲಿ ಜಿಎಸ್ಎಸ್ ಅವರ ಕವಿತೆಗಳು ಕಾಲ ಮತ್ತು ದೇಶಾತೀತವಾದವುಗಳು. ಅವರು ತಮ್ಮ ಭಾವಗೀತೆಗಳ ಮೂಲಕ ನಮ್ಮನ್ನು ಭಾವಲೋಕಕ್ಕೆ ಕರೆದೊಯ್ದು ನಮ್ಮಗಳ ಬದುಕನ್ನು ಒಂದಿಷ್ಟು ಸಹನೀಯವಾಗಿಸಿದ್ದು ಎಷ್ಟು ಸತ್ಯವೋ  ನಮ್ಮಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ್ದು ಕೂಡ ಅಷ್ಟೆ ಸತ್ಯ. ಕುವೆಂಪು ನಂತರ ನಮಗೆ ಜಿಎಸ್ಎಸ್ ಇದ್ದರು ಈಗ ಜಿಎಸ್ಎಸ್ ನಂತರ _________ ಎನ್ನುವ ಪ್ರಶ್ನೆಯೊಂದು ನಮ್ಮ ಮನದಲ್ಲಿ ಮೂಡುವುದು ಸಹಜ. ಜಿಎಸ್ಎಸ್ ಕೂಡ ತಮ್ಮ ಗುರು ಕುವೆಂಪು ಅವರಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಉತ್ಕೃಷ್ಟ ಗುರು-ಶಿಷ್ಯ ಪರಂಪರೆಯನ್ನೇ ಬೆಳೆಸಿದರು. ಅದಕ್ಕೆಂದೇ ಯು. ಆರ್. ಅನಂತಮೂರ್ತಿ ಅವರು ಜಿಎಸ್ ಎಸ್ ಅವರನ್ನು 'ನಮ್ಮ ಕಾಲದ ದ್ರೋಣ' ಎಂದು ಕರೆಯುತ್ತಾರೆ. ಜಿಎಸ್ಎಸ್ ಕನ್ನಡ ಸಾಹಿತ್ಯದಲ್ಲಿ ತಮ್ಮೊಂದಿಗೆ ಒಂದು ದೊಡ್ಡ ಶಿಷ್ಯ ಸಮೂಹವನ್ನೇ ಕಟ್ಟಿ ಬೆಳೆಸಿದರು. ಜಿಎಸ್ಎಸ್ ಅವರ ಈ ಗುಣವನ್ನು ದುಂಡಿರಾಜ್ ತಮ್ಮ 'ತೆಂಗಿನ ಮರ' ಕವಿತೆಯಲ್ಲಿ ಬಹು ವಿಶಿಷ್ಟವಾಗಿ ಕಟ್ಟಿಕೊಟ್ಟಿರುವರು.


          ಮರಗಳಲ್ಲಿ
          ತೆಂಗಿನ ಮರ
          ಕವಿಗಳಲ್ಲಿ ಇವರು
          ಅದೇ ಥರ
          ಎತ್ತರ
          ಸರಳ, ನೇರ

          ನೆಲದ ಸಾರವನ್ನೆಲ್ಲ ಒಬ್ಬರೇ
          ಹೊಟ್ಟೆ ಬಾಕನಂತೆ ಹೀರಿ
          ಅಡ್ಡಾದಿಡ್ಡಿ ಬೆಳೆದು
          ಎಲ್ಲ ಕಡೆಗೂ ಗೆಲ್ಲು
          ಚಾಚಿದವರಲ್ಲ

          ಗಾಳಿ ಬೆಳಕು
          ತಾವಷ್ಟೇ ಕುಡಿದು
          ಬೇರೆ ಕುಡಿ ಚಿಗುರದಂತೆ
          ನೆರಳು ರಾಚಿದವರಲ್ಲ
       
          ಬೆಳೆಯುವಂತೆ ತೆಂಗಿನ
          ತೋಟದಲ್ಲಿ ಬಾಳೆ,
          ಕೋಕೋ, ಅಡಿಕೆ, ವೀಳ್ಯದೆಲೆ
          ಬೆಳೆಸಿದರು ನೂರಾರು
          ಸಾಹಿತಿಗಳನ್ನು ತಮ್ಮ
          ಜೊತೆ ಜೊತೆಯಲ್ಲೆ 

      ಜಿಎಸ್ಎಸ್ ಭೌತಿಕವಾಗಿ  ನಮ್ಮಿಂದ  ದೂರಾದರೂ ತಮ್ಮ ಕವಿತೆಗಳ ಮೂಲಕ ಅವರು ಎಂದಿಗೂ ನಮ್ಮೊಂದಿಗಿರುತ್ತಾರೆ. ಈ ಸಮನ್ವಯದ ಕವಿಗೆ ಒಂದು ಪುಟ್ಟ ಕವನದ ಮೂಲಕ ಭಾವಪೂರ್ಣ ನಮನಗಳು. 

                             ಹಚ್ಚಿದರು ಹಣತೆ 


                                     ಸಿಡಿದು ಬಂತೊಂದು 
                                     ಬೆಂಕಿಯ ಕಿಡಿ 
                                     ರಸಋಷಿ  (ಕುವೆಂಪು) ಯ 
                                     ಯಜ್ಞ ಕುಂಡದಿಂದ 


                                    ಗುರು ಹಚ್ಚಿದ  ಹಣತೆಯಲಿ 
                                    ಬೆಳಗಿದವರು ನೀವು 
                                    ಗುರುವಿನಂತೆ ಶಿಷ್ಯ 
                                    ಕಂಡಿತು ಈ ಜಗವು 


                                    ಸುತ್ತಲೂ ಕತ್ತಲೆಯೊಳಗೆ 
                                    ಪ್ರೀತಿಯ ಹಣತೆ ಹಚ್ಚಿ 
                                    ಉಣಬಡಿಸಿದಿರಿ ಸಾಹಿತ್ಯದೂಟ 
                                    ಅನುಭವದ ಜೋಳಿಗೆ ಬಿಚ್ಚಿ 


                                    ಭೋರ್ಗರೆಯುತ್ತಿತ್ತು  ನಿಮ್ಮಲ್ಲಿ 
                                    ಕನ್ನಡದ ಅಭಿಮಾನ 
                                    ಮುಗ್ಧ ನಗುವಿನ ಹಿಂದೆ 
                                    ಜಗವ ಮಣಿಸುವ ಸ್ವಾಭಿಮಾನ 


                                    ನವ್ಯ ನವೋದಯ 
                                    ಬಂಡಾಯದ ಹಣೆಪಟ್ಟಿ 
                                    ಹಚ್ಚಿಕೊಂಡವರಲ್ಲ 
                                    ಅದಕ್ಕೆಂದೇ ರಾಷ್ಟ್ರಕವಿಯ ಪಟ್ಟ 


                                    ಕಳಚಿಕೊಂಡವರು ನೀವು 
                                    ಹಮ್ಮು ಬಿಮ್ಮಿನ ಸಂಕೋಲೆ 
                                    ಕೊನೆ ಉಸಿರಿನಲ್ಲೂ  
                                    ಕನ್ನಡದ  ಪ್ರೇಮ ಬತ್ತದ ಸೆಲೆ 


                                     ರಾಷ್ಟ್ರಕವಿಯಾದರೂ 
                                     ಅದೇ ನಿರ್ಲಿಪ್ತ ಮನ 
                                     ಹಾಡು ಹಕ್ಕಿಗೆ ಬೇಕೇ 
                                     ಬಿರುದು ಸನ್ಮಾನ 


                                     ಗುರುವಿನಂತೆ ನೀವು 
                                     ಹಚ್ಚಿದಿರಿ ಹಣತೆ ನೂರಾರು 
                                     ಸದ್ದುಗದ್ದಲದಾಚೆ ನಿಂತು 
                                     ನಿಮ್ಮ ನೆನೆಯುವ ನಾವು ಧನ್ಯರು 

                                                       -ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Monday, December 16, 2013

ಭಿತ್ತಿ: ಭಾವಪ್ರಧಾನ ವ್ಯಕ್ತಿತ್ವದ ಕಥನ




          'ಚಿಕ್ಕ ಹುಡುಗನಾದ್ದರಿಂದ ಚಟ್ಟದ ಅಗತ್ಯವಿರಲಿಲ್ಲ. ನಾನೇ ಎತ್ತಿ ಎಡ ಹೆಗಲ ಮೇಲೆ ಹೊತ್ತುಕೊಂಡು ಬಲಗೈಲಿ ಬೆಂಕಿಯ ಮಡಕೆ ಹಿಡಿದು ಹೋಗುವುದೆಂದು ತೀರ್ಮಾನವಾಯಿತು. ಹೆಣ ಎತ್ತುವ ಮೊದಲು ಒಂದೊಂದು ಹಿಡಿಯಂತೆ ಒಟ್ಟು ಮೂರು ಹಿಡಿ ಅಕ್ಕಿ ಕಾಳು ನಾನು, ಅಜ್ಜಿ, ಲಲಿತ ಹೆಣದ ಬಾಯಮೇಲೆ ಸುರಿದ ನಂತರ ನಾನು ಮುಕ್ಕಿರಿದು ಎತ್ತಿ ಹೆಣವನ್ನು ಎಡ ಹೆಗಲ ಮೇಲೆ ಹಾಕಿಕೊಂಡು ಕೆಂಪು ಸೀರೆಯ ತುಂಡನ್ನು ಹೊದಿಸಿ ಮಡಕೆಯ ಬೆಂಕಿಯನ್ನು ಬಲಗೈಲಿ ಹಿಡಿದು ಬೀದಿಯಲ್ಲಿ ಹೊರಟೆ. ಏಳು ವರ್ಷದ ಹುಡುಗನ ಹೆಣದ ಭಾರಕ್ಕೆ ಎಡ ಹೆಗಲು ಸೇದಿ ನುಲಿಯತೊಡಗಿತು. ಅತ್ತಿತ್ತ ಹೊರಳಿಸಿ ಭಾರದ ಸ್ಥಾನವನ್ನು ಬದಲಿಸಿಕೊಳ್ಳಲು ಬಲಗೈ ಮುಕ್ತವಾಗಿರಲಿಲ್ಲ. ಅದಕ್ಕೆ ಕೂಡ ಬೆಂಕಿಯ ರಾವು ಹೊಡೆಯುತ್ತಿತ್ತು. ಸುಸ್ತಾಯಿತೆಂದು ಪದೇ ಪದೇ ಕೆಳಗಿಳಿಸಿ ಸುಧಾರಿಸಿಕೊಂಡು ಪಯಣವನ್ನು ಮುಂದುವರೆಸುವಂತೆಯೂ ಇಲ್ಲ. ಸ್ಮಶಾನಕ್ಕೆ ಹೋಗುವಷ್ಟರಲ್ಲಿ ನನ್ನ ಭುಜ ಮತ್ತು ಎದೆಗೂಡುಗಳು ಸತ್ತು ಹೋಗಿದ್ದವು. ನನ್ನ ಕಣ್ಣೆದುರಿಗೇ ಕೃಷ್ಣಮೂರ್ತಿಯ ಹೆಣ ಕಪ್ಪು ತಿರುಗಿ ಚರ್ಮ ಸುಲಿದು ಬಿಳಿಯ ನೆಣ ಬಾಯ್ದೆರೆದು ತೊಟ್ಟಿಕ್ಕಿ ಅದೇ ಇಂಧನವಾಗಿ ಹೆಣವೇ ಹೊತ್ತಿಕೊಂಡಿತು'. ಓದಿದ ಆ ಕ್ಷಣ ಬುದ್ದಿಯನ್ನೇ  ಮಂಕಾಗಿಸಿ ಮನಸ್ಸನ್ನು ಆರ್ದ್ರಗೊಳಿಸುವ ಈ ಸಾಲುಗಳು ನಾನು ಇತ್ತೀಚಿಗೆ ಓದಿದ 'ಭಿತ್ತಿ' ಪುಸ್ತಕದಿಂದ ಹೆಕ್ಕಿ ತೆಗೆದವುಗಳು. 

          'ಭಿತ್ತಿ' ಇದು ಕನ್ನಡ ಸಾಹಿತ್ಯಕ್ಕೆ ಕ್ಲಾಸಿಕ್ ಕಾದಂಬರಿಗಳನ್ನು ನೀಡಿರುವ ಶ್ರೇಷ್ಠ ಬರಹಗಾರ ಸಂತೇಶಿವರ ಲಿಂಗಣ್ಣ ಭೈರಪ್ಪನವರ ಆತ್ಮಕಥೆ. ಇಪ್ಪತ್ನಾಲ್ಕು ಕಾದಂಬರಿಗಳು, ಆತ್ಮವೃತ್ತಾಂತ, ನಾಲ್ಕು ಸಾಹಿತ್ಯ ಚಿಂತನ ಗ್ರಂಥಗಳು ಮತ್ತು ಎರಡು ಸಂಪಾದಿತ ಕೃತಿಗಳ ಲೇಖಕರಾದ ಎಸ್.ಎಲ್. ಭೈರಪ್ಪನವರು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಓದುಗರ ದೊಡ್ಡ ಸಮೂಹವನ್ನು ಹೊಂದಿರುವ ವಿಶಿಷ್ಠ ಬರಹಗಾರ. ಭೈರಪ್ಪನವರ ಕಾದಂಬರಿಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳೂ ಸೇರಿ ಭಾರತದ ಎಲ್ಲ ೧೪ ಭಾಷೆಗಳಿಗೂ ಅನುವಾದಗೊಂಡಿವೆ. ಭೈರಪ್ಪನವರ ಬದುಕು ಮತ್ತು ಸಾಹಿತ್ಯ ಕುರಿತೇ  ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಬೇರೆ ಬೇರೆ ಲೇಖಕರಿಂದ ರಚನೆಗೊಂಡಿರುವುದು ಇನ್ನೊಂದು ವಿಶೇಷ. ಕಾಲಕಾಲಕ್ಕೆ ತಮ್ಮ ಬರವಣಿಗೆಯಿಂದ ಭೈರಪ್ಪನವರು ಕನ್ನಡದ ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವರು. ಅವರ ಕೃತಿಗಳು ಮನೋರಂಜನೆಗಾಗಿಯೋ ಇಲ್ಲವೇ ಸಮಯ ಕಳೆಯುವುದಕ್ಕಾಗಿಯೋ ಓದುವಂಥ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಕೃತಿಗಳಲ್ಲ. ಭೈರಪ್ಪನವರ ಕಾದಂಬರಿಯೊಂದನ್ನು ಓದಿದ ನಂತರ ಅದು ಓದುಗನ ಮನಸ್ಸನ್ನು ಅನೇಕ ದಿನಗಳವರೆಗೆ ಕಾಡುತ್ತ ಹೊಸ ಚಿಂತನೆಯನ್ನು ಸೃಷ್ಟಿಸಿ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ. ಧರ್ಮಶ್ರೀ, ಮತದಾನ, ದಾಟು, ಪರ್ವ, ಮಂದ್ರ ಕಾದಂಬರಿಗಳನ್ನು ಓದಿದ ನನಗೆ ಭೈರಪ್ಪನವರ ಆತ್ಮಕಥೆ ಓದಬೇಕೆನ್ನುವ ಆಸೆ ಮನಸ್ಸಿನಲ್ಲಿ ಮೊಳಕೆಯೊಡೆದು ಕಾಲಾನಂತರದಲ್ಲಿ ಅದು ಹೆಮ್ಮರವಾಗಿ ಬೆಳೆದು ಕೂತಲ್ಲಿ ನಿಂತಲ್ಲಿ ಕಾಡತೊಡಗಿದಾಗ ಪರಿಚಿತರನ್ನು ಸಂಪರ್ಕಿಸಿ 'ಭಿತ್ತಿ' ಯನ್ನು ತರಿಸಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಒಂದು ಹಗಲು ಒಂದು ರಾತ್ರಿ ಕುಳಿತು ಓದಿದ್ದಾಯಿತು. ಓದಿದ ನಂತರದ ಕೆಲವು ದಿನಗಳವರೆಗೆ ಮನೆಯಲ್ಲಿ ಹಾಗೂ ಪರಿಚಿತರಲ್ಲಿ 'ಭಿತ್ತಿ'ಯದೇ ಮಾತು. ಅಷ್ಟರಮಟ್ಟಿಗೆ ಭೈರಪ್ಪನವರ ಬದುಕು ನನ್ನನ್ನು ಕಲಕಿತ್ತು. ಜೊತೆಗೆ ಓದಿದ ಉತ್ತಮ ಪುಸ್ತಕವೊಂದನ್ನು ಅನೇಕ ಮನಸ್ಸುಗಳಿಗೆ ವಿಸ್ತರಿಸುವ ಕೆಲಸ ಓದುಗನಿಂದಾಗಬೇಕು ಎನ್ನುವುದನ್ನು ಬಲವಾಗಿ ನಂಬಿಕೊಂಡಿರುವ ಓದುಗ ನಾನು. ಅದಕ್ಕೆಂದೇ ಕನ್ನಡ ಪುಸ್ತಕಗಳ ಓದುಗರಿಗಾಗಿ 'ಭಿತ್ತಿ' ಕುರಿತು ನನ್ನ ಈ ಬರಹ.

ಭಿತ್ತಿಯಲ್ಲಿ ಮೂಡಿದ ಬದುಕು 


            ಬೆನ್ನು ಹತ್ತಿದ ಬಡತನ, ಜವಾಬ್ದಾರಿಯರಿಯದ ಅಪ್ಪ, ನೆರವು ನೀಡದ ಬಂಧುಗಳು ಹಾಗೂ ಇತರರ ಕೊಂಕು ನುಡಿಗಳ ನಡುವೆ ಭೈರಪ್ಪನವರ ಬಾಲ್ಯದ ಬದುಕು ತೆರೆದುಕೊಳ್ಳುತ್ತದೆ. ಏಳು ಮಕ್ಕಳ ದೊಡ್ಡ ಕುಟುಂಬಕ್ಕೆ ಆಸರೆಯಾಗಿದ್ದು ತಾಯಿಯ ದುಡಿಮೆಯೊಂದೆ. ಗಂಡಸಿಗೆ ಸರಿಸಮವಾಗಿ ದುಡಿದು ಕುಟುಂಬವನ್ನು ಸಾಕುತ್ತಿರುವ ತಾಯಿಯನ್ನು ಕಂಡರೆ ಭೈರಪ್ಪನವರಿಗೆ ಎಲ್ಲಿಲ್ಲದ  ಗೌರವ ಮತ್ತು ಅಭಿಮಾನ. ಆ ಅಭಿಮಾನ ಮತ್ತು ಗೌರವ ಅಮ್ಮನ ಸಾವಿನ ನಂತರವೂ ಅವರಲ್ಲುಳಿದು ಅಮ್ಮನ ವ್ಯಕ್ತಿತ್ವ ಅವರನ್ನು ಸದಾ ಎಚ್ಚರಿಸುವ ಜಾಗೃತ ಪ್ರಜ್ಞೆಯಾಗುತ್ತದೆ. ಜೊತೆಗೆ ಬಾಲ್ಯದಲ್ಲೇ ಕಂಡ ಸಾಲು ಸಾಲು ಸಾವುಗಳು ಭೈರಪ್ಪನವರ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನುಂಟು ಮಾಡುತ್ತವೆ. ಅಮ್ಮ, ಅಕ್ಕಯ್ಯ, ರಾಮಣ್ಣ, ಸುಶೀಲ, ಕೃಷ್ಣಮೂರ್ತಿ ಈ ಎಲ್ಲ ಸಾವುಗಳನ್ನು ಕಂಡ ಆ ಘಳಿಗೆ ಭೈರಪ್ಪನವರಿಗಿನ್ನೂ ಹದಿನೈದು ವರ್ಷ ವಯಸ್ಸು. ಈ ಸೂತಕದ ಛಾಯೆ ಸಹಜವಾಗಿಯೇ ಅವರಲ್ಲಿ ಧರ್ಮ ಕರ್ಮ, ನ್ಯಾಯ ನೀತಿ, ಸರಿತಪ್ಪು ಇತ್ಯಾದಿ ಅಧ್ಯಾತ್ಮ ಗುಣದ ಪ್ರಶ್ನೆಗಳು ಸ್ಫುಟವಾಗಲು ಕಾರಣವಾಯಿತು. ಸಂತೇಶಿವರದಿಂದ ಬಾಗೂರಿಗೆ ಮುಂದೆ ನುಗ್ಗೆಹಳ್ಳಿಗೆ, ಗೊರೂರು, ಮೈಸೂರು, ಮುಂಬೈ, ಹಾವೇರಿ ಹೀಗೆ ಬದುಕು ಭೈರಪ್ಪನವರನ್ನು ಕೈಹಿಡಿದು ಎಲ್ಲೆಲ್ಲಿಗೋ ಕರೆದೊಯ್ಯುತ್ತದೆ. ಸ್ವಾಮಿ ಮೇಷ್ಟ್ರು, ಅತ್ತಿಗೆ, ಶ್ರೀನಿವಾಸ ಅಯ್ಯಂಗಾರರು, ರಾಮಕೃಷ್ಣಯ್ಯನವರು, ರಾಂಪುರದ ಕಲ್ಲೇಗೌಡರಿಂದ ದೊರೆತ ಸಹಾಯ ಭೈರಪ್ಪನವರ ಬಾಲ್ಯ ಜೀವನವನ್ನು ಒಂದಿಷ್ಟು ಸಹನೀಯವಾಗಿಸುತ್ತದೆ.  ಸೋದರ ಮಾವನ ಮನೆಯಲ್ಲಿ ಅನುಭವಿಸಿದ  ಹಿಂಸೆ, ಅಪಮಾನವನ್ನು ಕುರಿತು ಬರೆಯುವಾಗ ಸಹಜವಾಗಿಯೇ ಭೈರಪ್ಪನವರು ಭಾವುಕರಾಗುತ್ತಾರೆ. ಆ ಅಪಮಾನ ಹಿಂಸೆಯೇ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಅಮ್ಮನ ಸಾವಿನ ನಂತರ ಸೋದರ ಮಾವನನ್ನು ವಿರೋಧಿಸಿ ಮನೆಯಿಂದ ಹೊರ ಬರುವ ಆ ಸಂದರ್ಭ ಅಸಹಾಯಕಳಾಗಿ ಅಳುತ್ತ ನಿಲ್ಲುವ ಅಕ್ಕಮ್ಮ (ಅಜ್ಜಿ) ನ ಚಿತ್ರ ಕಣ್ಮುಂದೆ ಸುಳಿದು ಓದುಗನ ಮನಸ್ಸು ಆರ್ದ್ರವಾಗುತ್ತದೆ.

         ಅಮ್ಮನ ಅಗಲಿಕೆ, ಸಹೋದರ ಸಹೋದರಿಯರ ಸಾವುಗಳು, ಬೆನ್ನುಹತ್ತಿದ ಬಡತನ, ಅಪ್ಪನ ಬೇಜವಾಬ್ದಾರಿತನ, ಅಮ್ಮನ ತವರಿನಲ್ಲಿ ಅನುಭವಿಸಿದ ಕಷ್ಟ ಈ ಎಲ್ಲ ನೋವುಗಳ ನಡುವೆಯೂ ಭೈರಪ್ಪನವರು ಬದುಕನ್ನು ಒಂದು ಸೃಜನಶೀಲ ನೆಲೆಯಲ್ಲಿ ಕಟ್ಟಿಕೊಳ್ಳಲು ನೆರವಾಗಿದ್ದೆ ನಾಟಕಗಳು. ದಿನನಿತ್ಯ ಹತ್ತಾರು ಮೈಲಿ ನಡೆದು ಊರೂರು ಸುತ್ತಿ ರಾತ್ರಿಯೆಲ್ಲ ನಿದ್ದೆಗಟ್ಟಿ ನೋಡಿದ ನಾಟಕಗಳು ಭೈರಪ್ಪನವರ ಬದುಕಿನ ಮೇಲೆ ಗಾಢ ಪ್ರಭಾವ ಬೀರುತ್ತವೆ. ಮುಂದೆ ಸಿನಿಮಾ ಮಂದಿರದಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುವ ವೇಳೆ ನೋಡುವ ಸಿನಿಮಾಗಳು, ಸಂಗೀತದ ಅಭಿಮಾನಿಯಾಗಿ ಅಸಂಖ್ಯಾತ ಕಾರ್ಯಕ್ರಮಗಳಿಗೆ ಕಿವಿಯಾದದ್ದು, ಊರೂರು ಅಲೆದಾಟ ಈ ಹವ್ಯಾಸಗಳೇ ಅಂದಿಗೂ ಇಂದಿಗೂ ಭೈರಪ್ಪನವರ ಸೃಜನಶೀಲತೆ ಮಂಕಾಗದಂತೆ ಕಾಪಿಟ್ಟುಕೊಂಡು ಬಂದಿವೆ.

        ಭೈರಪ್ಪನವರಿಗೆ ಬರಹದಲ್ಲಿ ರಸವನ್ನು ಸೃಷ್ಟಿಸುವ ಸೃಜನಶೀಲತೆಯಿದೆ. ಅಂಥದ್ದೊಂದು ಸೃಜನಶೀಲ ಶಕ್ತಿ ಅವರಲ್ಲಿರುವುದರಿಂದಲೇ ಅವರ ಈ ಆತ್ಮಕಥೆಯನ್ನು ಓದುವಾಗ ಅದೊಂದು ರೋಚಕ ಕಾದಂಬರಿಯಂತೆ ಭಾಸವಾಗುತ್ತದೆ. ಕಥೆಯ ಓಘ ತನ್ನ ವೇಗವನ್ನು ಕಳೆದುಕೊಳ್ಳದಿರುವುದರಿಂದ ಇಲ್ಲಿ ಪ್ರತಿಯೊಂದು ಅಧ್ಯಾಯ ತನ್ನ ತಾಜಾತನವನ್ನು ಉಳಿಸಿಕೊಂಡಿದೆ. ಜೊತೆಗೆ ಸಾಹಿತ್ಯದ ಒಂದು ಪ್ರಕಾರಕ್ಕೆ ಮಾತ್ರ ನಿಷ್ಠರಾಗಿರಬೇಕೆನ್ನುವ ಅವರೊಳಗಿನ ಹಠ ರಸಸೃಷ್ಟಿಯ ಸೆಲೆಯನ್ನು ನಿರಂತರವಾಗಿ ಪ್ರವಹಿಸುವಂತೆ ಮಾಡಿದೆ. ಭೈರಪ್ಪನವರು ತತ್ವಶಾಸ್ತ್ರವನ್ನು ತಮ್ಮ ಅಧ್ಯಯನಕ್ಕೆ ಆಯ್ಕೆಮಾಡಿಕೊಳ್ಳಲು ಅವರು ಬದುಕಿನಲ್ಲಿ ಎದುರಿಸಿದ ಅನೇಕ ಸವಾಲುಗಳು ಮತ್ತು ಸಮಸ್ಯೆಗಳೇ ಮುಖ್ಯಕಾರಣವಾಗುತ್ತವೆ. ತತ್ವಶಾಸ್ತ್ರದ ಅಧ್ಯಯನದಿಂದ ನೌಕರಿ ಗಿಟ್ಟಿಸುವುದು ಅಸಾಧ್ಯ ಎನ್ನುವ ಸಮಸ್ಯೆಯ ನಡುವೆಯೂ ಅವರು ತತ್ವಶಾಸ್ತ್ರವನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. 'ಇಫ್ ಫಿಲಾಸಫಿ ಡಸ್ ನಾಟ್ ಬೇಕ್ ಎನಿ ಬ್ರೆಡ್ ಐ ವಿಲ್ ಓಪನ್ ಎ ಬೇಕರಿ ಅಂಡ್ ಅರ್ನ್ ಮೈ ಬ್ರೆಡ್' ಎನ್ನುವಷ್ಟು ತತ್ವಶಾಸ್ತ್ರದ ಮೇಲೆ  ಶ್ರದ್ಧೆ ಮತ್ತು ಪ್ರೀತಿ ಅವರಿಗೆ. ವಿದ್ಯಾರ್ಥಿ ದೆಸೆಯಲ್ಲೇ ತತ್ವಶಾಸ್ತ್ರದ ಆಳ ಅಗಲಗಳ ಶೋಧನೆಗೆ ಮುಂದಾಗುತ್ತಾರೆ. ಯಮುನಾಚಾರ್ಯ ಮತ್ತು ಶಾಂತಮ್ಮನವರಂಥ ಶ್ರೇಷ್ಠ ಗುರುಗಳ ಮಾರ್ಗದರ್ಶನದಲ್ಲಿ ಭೈರಪ್ಪನವರು ತತ್ವಶಾಸ್ತ್ರವನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಳ್ಳುತ್ತಾರೆ. ತತ್ವಶಾಸ್ತ್ರದ ವಿದ್ಯಾರ್ಥಿಯಾಗಿ ಅದನ್ನು ಆಳವಾಗಿ ಅಭ್ಯಸಿಸಿ ಅದೇ ವಿಷಯದ ಉಪನ್ಯಾಸಕರಾಗಿ ಮತ್ತು ಸಂಶೋಧಕರಾಗಿ ಕಾರ್ಯನಿರ್ವಹಿಸುವ ಭೈರಪ್ಪನವರು ಮುಂದೊಂದು ದಿನ ಶ್ರೇಷ್ಠ ತತ್ವಜ್ಞಾನಿಯಾಗುವ ಎಲ್ಲ ಅವಕಾಶಗಳು ಮತ್ತು ಪ್ರತಿಭೆ ಇದ್ದೂ ಅವರು ಸಾಹಿತ್ಯದತ್ತ ಹೊರಳುವುದು ಸಾಹಿತ್ಯದ ಮೇಲಿನ ಅನನ್ಯ ಪ್ರೀತಿಗೆ ಸಾಕ್ಷಿಯಾಗಿದೆ. ಬದುಕಿನ ಒಂದು ಹಂತದಲ್ಲಿ ಎದುರಾಗುವ ಎರಡು ಅವಕಾಶಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎನ್ನುವ ದ್ವಂದ್ವ ಭೈರಪ್ಪನವರನ್ನು ಕಾಡುತ್ತದೆ. ತತ್ವಜ್ಞಾನಿಯಾಗಿ ಖ್ಯಾತಿಯನ್ನು ಹೊಂದಬೇಕೋ ಅಥವಾ ಸಾಹಿತ್ಯದ ಸೃಷ್ಟಿಯಲ್ಲಿ ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕೋ ಎನ್ನುವ ಜಿಜ್ಞಾಸೆಗೆ ಉತ್ತರವನ್ನು ಕಂಡುಕೊಳ್ಳಲು ಅವರು ಹೆಣಗುತ್ತಾರೆ.

ಸಾಹಿತ್ಯದತ್ತ ಹೊರಳುವಿಕೆ


           ಎಸ್. ಎಲ್. ಭೈರಪ್ಪನವರು ೧೯೫೮ ರಲ್ಲಿ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ತಮ್ಮ ವೃತ್ತಿಬದುಕಿಗೆ ಕಾಲಿಡುವರು. ೧೯೬೦ ರ ವರೆಗೆ ಸುಮಾರು ಎರಡು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿ ಮುಂದೆ ಗುಜರಾತಿನ ಸರ್ದಾರ ಪಟೇಲ ವಿಶ್ವವಿದ್ಯಾಲಯದಲ್ಲಿ  ಹೊಸ ನೇಮಕಾತಿಯೊಂದಿಗೆ ಹೊಸ ಪರಿಸರದಲ್ಲಿ ಅವರ ವೃತ್ತಿ ಬದುಕಿನ ಪುಟಗಳು ತೆರೆದುಕೊಳ್ಳಲಾರಂಭಿಸುತ್ತವೆ. ಆ ಖಾಸಗಿ  ಕಾಲೇಜನ್ನು ಬಿಟ್ಟು  ಬರುವಾಗ ಅವರಿಗೆ ಅಡೆತಡೆಗಳು ಮತ್ತು ಕೆಲವು ಮಹನೀಯರ ಸಹಕಾರ ಒಟ್ಟೊಟ್ಟಿಗೆ ಎದುರಾಗುತ್ತವೆ. ಆ ಸಂದರ್ಭ ಹಿರಿಯರಾದ ನಾಡಗೌಡ, ತೋಪಖಾನೆ, ಕಲ್ಮಠ ಅವರಿಂದ ದೊರೆಯುವ ಸಹಕಾರ ಮತ್ತು ನೈತಿಕ ಪ್ರೋತ್ಸಾಹ ಯಾವುದೇ ಸಮಸ್ಯೆಗಳಿಲ್ಲದೆ ಭೈರಪ್ಪನವರು ವಿಶ್ವವಿದ್ಯಾಲಯದಂಥ ಉನ್ನತ ಶಿಕ್ಷಣ ಕೇಂದ್ರಕ್ಕೆ ಉಪನ್ಯಾಸಕರಾಗಿ ಸೇರಲು ನೆರವಾಗುತ್ತದೆ.

            ಗುಜರಾತು ಸೇರಿದ ಮುಂದಿನ ಎರಡು ವರ್ಷಗಳಲ್ಲೇ ಭೈರಪ್ಪನವರು ಡಾ.ಜಾವಡೇಕರ್ ಅವರ ಮಾರ್ಗದರ್ಶನದಲ್ಲಿ      ಪಿ. ಹೆಚ್. ಡಿ ಶಿಕ್ಷಣವನ್ನು ಪೂರ್ಣಗೊಳಿಸುವರು. ಪಿ. ಹೆಚ್. ಡಿ ಪದವಿ ನಂತರ ಜಾವಡೇಕರ್ ಡಿ. ಲಿಟ್ ಪದವಿಗಾಗಿ ತತ್ವಶಾಸ್ತ್ರದಲ್ಲಿ ಪುಸ್ತಕವೊಂದನ್ನು ಬರೆಯುವಂತೆ ಭೈರಪ್ಪನವರಿಗೆ ಸೂಚಿಸುವರು. ಅನೇಕ ಪುಸ್ತಕಗಳನ್ನು ಓದಿ ತತ್ವಶಾಸ್ತ್ರ ವಿಷಯದಲ್ಲಿ ಪ್ರಭುತ್ವವಿರುವ ಭೈರಪ್ಪನವರಿಗೆ ಇದು ಸುಲಭದ ಕೆಲಸ ಎನ್ನುವುದು ಜಾವಡೇಕರ್ ರ ಅಭಿಪ್ರಾಯವಾಗಿತ್ತು. ತಮ್ಮ ಗುರುಗಳ ಸಲಹೆಗೆ ಪ್ರಾರಂಭದಲ್ಲಿ ಸೂಕ್ತವಾಗಿಯೇ ಪ್ರತಿಕ್ರಿಯಿಸುವ ಭೈರಪ್ಪನವರು ಈ ವಿಷಯವಾಗಿ ಕಾರ್ಯೋನ್ಮುಖರಾಗುವರು. ಹೀಗೆ ಡಿ.ಲಿಟ್ ಪದವಿಗಾಗಿ ತಯ್ಯಾರಿ ಮಾಡಿಕೊಳ್ಳುತ್ತಿರುವ ಸಮಯದಲ್ಲೇ ಅವರಲ್ಲಿ 'ವಂಶ ವೃಕ್ಷ' ದ ಕಥೆ, ಪಾತ್ರಗಳು, ಸನ್ನಿವೇಶ, ಸಂದರ್ಭಗಳು ಮನಸ್ಸಿನಲ್ಲಿ ಮೊಳಕೆಯೊಡೆದು ಕಾಡಲಾರಂಭಿಸುತ್ತವೆ. ಈ ನಡುವೆ ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಗೋವಿಂದರಾಯರಿಂದ ಕಾದಂಬರಿಯೊಂದನ್ನು ಬರೆದು ಕಳುಹಿಸಿ ಎನ್ನುವ ಪ್ರೀತಿಯ ಒತ್ತಾಯ. ಒಂದೆಡೆ ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನ ತಂದು ಕೊಡಲಿರುವ ಡಿ.ಲಿಟ್ ಪದವಿ ಇನ್ನೊಂದೆಡೆ ಸೃಜನಾತ್ಮಕವಾದದ್ದನ್ನು ಸೃಷ್ಟಿಸಲು ನೆರವಾಗುವ ಸಾಹಿತ್ಯ. ಒಂದು ವಾಸ್ತವವಾದರೆ ಇನ್ನೊಂದು ಭಾವಪ್ರಧಾನ. ತತ್ವಶಾಸ್ತ್ರದ ಸಂಶೋಧನೆಯಲ್ಲೇ ಮುಂದುವರೆಯಲೇ? ಅಥವಾ ಸೃಜನಶೀಲ ಮಾಧ್ಯಮವಾದ ಕಾದಂಬರಿ ರಚನೆಯಲ್ಲಿ ತೊಡಗಿಸಿಕೊಳ್ಳಲೆ ಭೈರಪ್ಪನವರ ಮನಸ್ಸು ಈ ಸಂದಿಗ್ಧದಲ್ಲಿ ಅನೇಕ ತಿಂಗಳುಗಳ ಕಾಲ ಹೊಯ್ದಾಡುತ್ತದೆ. ಒಂದು ಹಂತದಲ್ಲಿ ಕನ್ನಡದಲ್ಲಿ ಬರೆಯುವ ಕಾದಂಬರಿಗೆ ಗುಜರಾತಿನಲ್ಲಿರುವ ತತ್ವಶಾಸ್ತ್ರ ವಿಭಾಗದಲ್ಲೇನು ಬೆಲೆ ಇರುತ್ತದೆ? ಎಂಬ ಲೌಕಿಕ ವಿವೇಕ ಎಚ್ಚರಿಸುತ್ತದೆ. ಇಂಥದ್ದೊಂದು ಹೊಯ್ದಾಟದ ನಡುವೆ ಕೆಲವು ದಿನಗಳ ಕಾಲ ಡಿ.ಲಿಟ್ ಪುಸ್ತಕಕ್ಕೆ ಕೈ ಹಚ್ಚುವುದು ನಂತರ ಇದು ನನ್ನ ಅಭಿವ್ಯಕ್ತಿ ಮಾಧ್ಯಮವಲ್ಲ ಎನ್ನುವ ಒಳಗಿನ ಒತ್ತಡದಿಂದಾಗಿ ಕಾದಂಬರಿ ಕಡೆ ಹೊರಳುವುದು ಈ ತೊಳಲಾಟ ಮುಂದುವರಿಯುತ್ತದೆ. ಕೊನೆಗೆ ಲೌಕಿಕ ವಿವೇಕದ ದ್ವನಿಯು ಬುದ್ದಿಯೊಳಕ್ಕೆ ಪ್ರವೇಶವನ್ನೇ ಮಾಡದ ಸ್ಥಿತಿಯು ಒಳಗಿನಿಂದ ಬೆಳೆದು ಹೆಮ್ಮರವಾದಾಗ ಭೈರಪ್ಪನವರು ಸೃಜನಾತ್ಮಕವಾಗಿ ಸೃಷ್ಟಿಸುವ ಸಾಹಿತ್ಯವನ್ನೇ ತಮ್ಮ ಬರವಣಿಗೆಯ ಮಾಧ್ಯಮವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಭೈರಪ್ಪನವರ ದೃಷ್ಟಿಯಲ್ಲಿ ಬರವಣಿಗೆ ಎನ್ನುವುದು ಅದು ಬರೀ ಬರೆದು ಹೊರಹಾಕುವುದಲ್ಲ. ಕುಸುರಿ ಕೆಲಸವಿರುವ ಪಾತ್ರಗಳ ಒಳಗನ್ನು ಪದರ ಪದರವಾಗಿ ತೋರಿಸುವ ಬರವಣಿಗೆ ಅದೊಂದು ಕಲೆ. ಇಂಥದ್ದೊಂದು ಕಲೆ ಅದು ಕಾದಂಬರಿ ರಚನೆಯಲ್ಲಿ ಮಾತ್ರ ಸಾಧ್ಯ ಎಂದವರ ನಂಬಿಕೆ. ಆದ್ದರಿಂದ ಸಂಶೋಧನಾ ಬರವಣಿಗೆಯನ್ನು ಹಿಂದೆ ಸರಿಸಿ ಕಾದಂಬರಿಯ ಬರವಣಿಗೆಗೆ ಮುಂದಾಗುತ್ತಾರೆ. ಹೀಗೆ ಸಂಶೋಧನಾ ಬರವಣಿಗೆಯಿಂದ ಸಂಪೂರ್ಣವಾಗಿ ಬಿಡಿಸಿಕೊಂಡು ಹೊರಬರುವ ಭೈರಪ್ಪನವರು ಆ ಘಳಿಗೆ ಹೀಗೆ ನುಡಿಯುತ್ತಾರೆ 'ತತ್ವಶಾಸ್ತ್ರದಲ್ಲಿ ಸೃಜನಾತ್ಮಕವಾಗಿ ಸೃಷ್ಟಿಸುವುದು ನನ್ನ ಮನೋಧರ್ಮದಲ್ಲಿಲ್ಲ. ನನ್ನದು ಭಾವಪ್ರಧಾನ ವ್ಯಕ್ತಿತ್ವ. ನಾನು ಸೃಜನಾತ್ಮಕವಾಗಬಹುದಾದದ್ದು ಸಾಹಿತ್ಯದಲ್ಲಿ ಮಾತ್ರ ಎಂಬುದನ್ನು ಒಂದು ಘಟ್ಟದಲ್ಲಿ ಅರ್ಥಮಾಡಿಕೊಂಡೆ. ಸಾಹಿತ್ಯವು ನನ್ನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮವಾಯಿತು. ಅದು ಅಪೇಕ್ಷಿಸಿದಂತೆ ನನ್ನ ಕಾಲ, ಚಿಂತನೆ, ವ್ಯವಸಾಯಗಳನ್ನೆಲ್ಲ ಬದಲಿಸಿಕೊಂಡೆ'. ಹೀಗೆ ಕಾಲ, ಚಿಂತನೆ, ವ್ಯವಸಾಯಗಳನ್ನು ಸಾಹಿತ್ಯಕ್ಕೆ ಪೂರಕವಾಗಿ ಬದಲಿಸಿಕೊಂಡ ಭೈರಪ್ಪನವರಿಂದ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಮಾತ್ರವಲ್ಲದೆ ಭಾರತದ ಇಡೀ ಸಾಹಿತ್ಯ ಕ್ಷೇತ್ರಕ್ಕೆ ಶ್ರೇಷ್ಠ ಕಾದಂಬರಿಗಳು ಕೊಡುಗೆಯಾಗಿ ದೊರೆತವು.

ನಾನ್ ಅಕಾಡೆಮಿಕ್ ಬರಹಗಾರ


         ಭೈರಪ್ಪನವರು ಓದಿದ್ದು ತತ್ವಶಾಸ್ತ್ರ ಆದರೆ ಕೃಷಿ ಮಾಡುತ್ತಿರುವುದು ಸಾಹಿತ್ಯದಲ್ಲಿ. ಅವರ ಓದಿನ ಹಿನ್ನೆಲೆಯನ್ನೇ ಆಧಾರವಾಗಿಟ್ಟುಕೊಂಡು ಕನ್ನಡದ ಸಾಹಿತ್ಯ ವಲಯ ಕಾಲಾನುಕಾಲಕ್ಕೆ ಭೈರಪ್ಪನವರ ಬರವಣಿಗೆಯನ್ನು ಟೀಕಿಸುತ್ತಲೇ ಬಂದಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಭೈರಪ್ಪನವರು ಯಾವ ಟೀಕೆ ಟಿಪ್ಪಣಿಗಳಿಗೂ ಕಿವಿಗೊಡದೆ ಅತ್ಯುತ್ತಮ ಕಾದಂಬರಿಗಳನ್ನು ಬರೆದು ತಮ್ಮ ಬರವಣಿಗೆಯ ಓದಿಗೆ ದೊಡ್ಡ ಓದುಗರ ಸಮೂಹವನ್ನೇ ಸೃಷ್ಟಿಸಿಕೊಂಡ ಲೇಖಕ. ಭೈರಪ್ಪನವರಿಗಿರುವ ಈ ಜನಪ್ರಿಯತೆ ಮತ್ತು ಅವರೊಳಗಿನ ಸೃಜನಶೀಲತೆಯನ್ನು ಸಹಿಸಿಕೊಳ್ಳದ ನಮ್ಮ ಸಾಹಿತಿಗಳು ಅನೇಕ ಸಂದರ್ಭಗಳಲ್ಲಿ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದುಂಟು. ಅಂಥ ಒಂದೆರಡು ಸಣ್ಣತನಗಳನ್ನು ಹೇಳದೆ ಇದ್ದಲ್ಲಿ ಲೋಪವಾಗಬಹುದೆನ್ನುವ ವಿನಯದಿಂದಲೇ ಭೈರಪ್ಪನವರು ತಮ್ಮ ಆತ್ಮಕಥನದಲ್ಲಿ ಒಂದೆರಡು ಉದಾಹರಣೆಗಳಿಗೆ ಜಾಗಮಾಡಿ ಕೊಟ್ಟಿರುವರು.

         ಕನ್ನಡದ ಶ್ರೇಷ್ಠ ವಿಮರ್ಶಕರೆಂದೇ ಹೆಸರಾದ ಕೀರ್ತಿನಾಥ ಕುರ್ತುಕೋಟಿ ಅವರು ಅನೇಕ ಸಂದರ್ಭಗಳಲ್ಲಿ ಭೈರಪನವರ ಬರವಣಿಗೆಯನ್ನು ಟೀಕಿಸಿದ ಪ್ರಸಂಗಗಳು ಪುಸ್ತಕದ ಅಲ್ಲಲ್ಲಿ ಬರುತ್ತವೆ. ಒಂದು ಹಂತದಲ್ಲಿ ಕುರ್ತುಕೋಟಿ ಅವರು ಭೈರಪ್ಪನವರ ವ್ಯಕ್ತಿತ್ವದ ಮೇಲೆ ಪ್ರಹಾರ ಮಾಡುತ್ತ ಹೀಗೆ ಟೀಕಿಸುತ್ತಾರೆ 'ಸದಾ ಪುಸ್ತಕ ಜೀವಿಯಾಗಿರುವ ಭೈರಪ್ಪನವರಿಗೆ ಜೀವನಾನುಭವವೇ ಇಲ್ಲ. ಇವರು ಬರೆಯುವ ಕಾದಂಬರಿಯಲ್ಲಿ ಸತ್ವ ಹೇಗಿದ್ದೀತು? ಭೈರಪ್ಪನವರು ಚಹಾ ಕುಡಿಯುವುದಿಲ್ಲ ಆದ್ದರಿಂದ ಅವರ ಪಾತ್ರಗಳಿಗೂ ಚಹಾ ಕುಡಿಯಲು ಬರುವುದಿಲ್ಲ'.

         ೧೯೬೭ ರಲ್ಲಿ ಉಡುಪಿಯಲ್ಲಿ ಏರ್ಪಟ್ಟ ವಿಚಾರಗೊಷ್ಠಿಯಲ್ಲಿ ಕುರ್ತುಕೋಟಿಯವರು 'ವಂಶ ವೃಕ್ಷ' ಕಾದಂಬರಿಯನ್ನು ನೂರು ದೋಷಗಳಿರುವ ಕಾದಂಬರಿ ಎಂದು ಟೀಕಿಸಿದರೆ 'ಪರ್ವ' ದ ಮೇಲೆ ಬೆಂಗಳೂರಿನಲ್ಲಿ ನಡೆದ ವಿಮರ್ಶಾಗೊಷ್ಠಿಯಲ್ಲಿ 'ಇದು ಪಾಶ್ಚಿಮಾತ್ಯರಿಂದ ಪಡೆದ ಕಾದಂಬರಿ ಫಾರಂನಿಂದ ನಮ್ಮ ಪುರಾಣದ ಮೇಲೆ ನಿಯೋಗ ಮಾಡಿಸಿ ಸೃಷ್ಟಿಸಿದ ಕೃತಿ' ಎಂದು ರೋಷ ವ್ಯಕ್ತಪಡಿಸುತ್ತಾರೆ. ೧೯೮೮ ರಲ್ಲಿ ಬರೋಡದಲ್ಲಿ ಏರ್ಪಡಿಸಿದ ಭೈರಪ್ಪನವರ ಸನ್ಮಾನ ಸಮಾರಂಭದಲ್ಲಿ ಕುರ್ತುಕೋಟಿ ಅವರು 'ಭೈರಪ್ಪನವರು ತುಂಬಾ ಉದಾರವಾದಿ. ಮನೆಗೆ ಬಂದ ಮಿತ್ರರಿಗೆ ಹೋಳಿಗೆ ಮಾಡಿಸಿ ಉಣ್ಣಿಸುತ್ತಾರೆ' ಎಂದು ಹೇಳಿ ಅವರ ಕಾದಂಬರಿಗಳ ವಿಷಯವಾಗಿ ಒಂದು ಮಾತನ್ನೂ ಆಡುವುದಿಲ್ಲ.

           ಭೈರಪ್ಪನವರು ತಮ್ಮ ವೃತ್ತಿ ಬದುಕಿನ ಕೊನೆಯ ಹಂತವಾಗಿ ಮೈಸೂರಿಗೆ ಬಂದು ನೆಲೆಸಿದಾಗ ಅದಾಗಲೇ ನವ್ಯರು ಕನ್ನಡ ಸಾಹಿತ್ಯ ವಲಯದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಕರ್ನಾಟಕದ ಹೊರಗಿದ್ದೇ ಭೈರಪ್ಪನವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರೂ ಇಲ್ಲಿನ ನವ್ಯರೊಂದಿಗೆ ಅವರಿಗೆ ಸಂಪರ್ಕ ಏರ್ಪಡಲಿಲ್ಲ. ಪರಿಣಾಮವಾಗಿ ನವ್ಯರು ಕಾಲ ಕಾಲಕ್ಕೆ ಭೈರಪನವರ ಕೃತಿಗಳನ್ನು ಅನಂತಮೂರ್ತಿ ಅವರ ಕೃತಿಗಳೊಂದಿಗೆ ತುಲನೆ ಮಾಡುತ್ತ ಟೀಕಿಸುತ್ತಲೇ ಹೋದರು. ಅನಂತಮೂರ್ತಿ ಅವರ 'ಸಂಸ್ಕಾರ' ಪ್ರಗತಿಗಾಮಿಯಾದರೆ ಭೈರಪ್ಪನವರ 'ವಂಶ ವೃಕ್ಷ' ಪ್ರತಿಗಾಮಿ ಎನ್ನುವ ಉಪೇಕ್ಷೆಗೆ ಒಳಗಾಯಿತು. 'ಭಾರತೀಪುರ' ಕ್ರಾಂತಿಕಾರಕ ಕೃತಿಯಾದರೆ 'ದಾಟು' ಬ್ರಾಹ್ಮಣಿಕೆಯ ಹಿರಿಮೆಯನ್ನು ಎತ್ತಿ ಹಿಡಿಯುವ ಪ್ರತಿಗಾಮಿ ಕೃತಿ ಎಂದು ಪ್ರಚಾರ ಮಾಡಲಾಯಿತು. ಕೆಲವು ವಿಮರ್ಶಕರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ 'ಭೈರಪ್ಪನವರದು ರಂಜಿಸಿ ವಂಚಿಸುವ ಕಲೆ. ಇವರದು ಪೂರ್ವನಿಶ್ಚಿತ ವಿಚಾರಗಳನ್ನು ಪ್ರತಿಪಾದಿಸಲೆಂದು ಬರೆಯುವ ವಿಧಾನ. ಇವರೊಬ್ಬ ರಂಜಕ ಕಥೆಗಾರರು. ಕಥೆಗಿಂತ ಹೆಚ್ಚಿನದು ಇವರ ಕಾದಂಬರಿಗಳಲ್ಲಿಲ್ಲ. ಇವರೊಬ್ಬ ಜನಪ್ರಿಯ ಆದರೆ ಕಲಾಗುಣವಿಲ್ಲದ ಲೇಖಕ' ಎಂದು ಆರೋಪಿಸಿದರು.

           ೧೯೮೧ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಭಾರತದ ಎಲ್ಲ ಭಾಷೆಗಳಲ್ಲೂ ಒಂದೊಂದು ಆಧುನಿಕ ಕ್ಲಾಸಿಕ್ ಎಂದು ಪರಿಗಣಿಸಲ್ಪಡಬಹುದಾದ ಸಾಹಿತ್ಯ ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸಲು ಯೋಜನೆ ಹಾಕಿಕೊಳ್ಳುತ್ತದೆ. ಆಗ ಕನ್ನಡ ಭಾಷೆಯಿಂದ ಆಯ್ಕೆಯಾಗುವ ಕೃತಿ ಕನ್ನಡ ಸಾಹಿತ್ಯದಲ್ಲೇ ಶ್ರೇಷ್ಠ ಎಂದೇ ಪರಿಗಣಿತವಾಗಿದ್ದ 'ಪರ್ವ' ಕಾದಂಬರಿ. ಅಕಾಡೆಮಿಯ ಸದಸ್ಯರೆಲ್ಲರೂ 'ಪರ್ವ' ಕೃತಿ ಅನುವಾದಗೊಳ್ಳಲೇ ಬೇಕಾದ ಕೃತಿ ಎಂದು ಅನುಮೋದಿಸಿದರೂ ಅನಂತಮೂರ್ತಿ ಮತ್ತು ಕುರ್ತುಕೋಟಿ ಅಪಸ್ವರ ಎತ್ತುತ್ತಾರೆ. ಕೊನೆಗೆ ಹೊಸ ಸಲಹಾ ಸಮಿತಿಯೊಂದು ಅಸ್ತಿತ್ವಕ್ಕೆ ಬಂದು 'ಪರ್ವ' ಕಾದಂಬರಿಯ ಇಂಗ್ಲಿಷ್ ಅನುವಾದಕ್ಕೆ ಒಪ್ಪಿಗೆ ದೊರೆಯುತ್ತದೆ. ಹೀಗೆ ಭೈರಪ್ಪನವರ ವ್ಯಕ್ತಿತ್ವ ಮತ್ತು ಬರವಣಿಗೆಯನ್ನು ಅವಕಾಶ ಸಿಕ್ಕಾಗಲೆಲ್ಲ ನವ್ಯರ ಗುಂಪು ತೇಜೋವಧೆಗೆ ಪ್ರಯತ್ನಿಸುತ್ತಲೇ ಬಂದಿದೆ. ಇತ್ತೀಚಿನ ಉದಾಹರಣೆಯಾಗಿ ಅವರ 'ಆವರಣ' ಕೃತಿಯನ್ನು ವಿರೋಧಿಸಿ 'ಅನಾವರಣ' ಪುಸ್ತಕವನ್ನೇ ಬರೆದರು. ಆದರೆ ಭೈರಪ್ಪನವರು ಮಾತ್ರ ಈ ಎಲ್ಲ ಬೆಳವಣಿಗೆಗಳಿಂದ ದೂರ ನಿಂತು ಕನ್ನಡಕ್ಕೆ ಕ್ಲಾಸಿಕ್ ಕೃತಿಗಳನ್ನು ಕೊಡುತ್ತಲೇ ಇರುವರು.

ಸಾಹಿತ್ಯ ಭಂಡಾರದೊಂದಿಗಿನ ನಂಟು 


            ಭೈರಪ್ಪನವರ ಎಲ್ಲ ಕೃತಿಗಳನ್ನು ಪ್ರಕಟಿಸಿದ್ದು ಸಾಹಿತ್ಯ ಭಂಡಾರ ಪ್ರಕಾಶಕರು. ಭೈರಪ್ಪನವರ ಕಾದಂಬರಿಗಳಿಗೆ ಅತಿ ಬೇಡಿಕೆಯಿದ್ದು ಅನೇಕ ಪ್ರಕಾಶಕರು ಅವರ ಕೃತಿಗಳನ್ನು ಪ್ರಕಟಿಸಲು ಮುಂದೆ ಬಂದರೂ ಭೈರಪ್ಪನವರು ಮಾತ್ರ ಸಾಹಿತ್ಯ ಭಂಡಾರದೊಂದಿಗಿನ ತಮ್ಮ ನಿಷ್ಠೆಯನ್ನು ಮುರಿಯಲಿಲ್ಲ. ಅದಕ್ಕೆಂದೇ ಭೈರಪ್ಪನವರಿಗೂ ಮತ್ತು ಸಾಹಿತ್ಯ ಭಂಡಾರದ ಗೋವಿಂದ ರಾಯರಿಗೂ ನಡುವೆ ಲೇಖಕ ಮತ್ತು ಪ್ರಕಾಶಕನ ಸಂಬಂಧವನ್ನು ಮೀರಿದ ಅನ್ಯೋನ್ಯತೆ ಮನೆ ಮಾಡಿತ್ತು. ಭೈರಪ್ಪನವರು ತಮ್ಮ ಆತ್ಮಕಥೆ 'ಭಿತ್ತಿ'ಯಲ್ಲಿ ಸಾಹಿತ್ಯ ಭಂಡಾರ ಮತ್ತು ಗೋವಿಂದ ರಾಯರಿಗೆ ವಿಶೇಷ ಸ್ಥಾನ ನೀಡಿರುವರು. ನಿಜಕ್ಕೂ ಅವರಿಬ್ಬರ ನಡುವಣ ಅನ್ಯೋನ್ಯತೆ ಮತ್ತು ವ್ಯವಹಾರ ನಿಷ್ಠೆ ಇವತ್ತಿನ ಲೇಖಕರು ಮತ್ತು ಪ್ರಕಾಶಕರಿಗೆ ಅದೊಂದು ಮಾದರಿ.

         ಭೈರಪ್ಪನವರಿಗೆ ಗೋವಿಂದರಾಯರ ಪರಿಚಯವಾಗಿದ್ದು ಅವರ 'ಧರ್ಮಶ್ರೀ' ಕಾದಂಬರಿಯ ಪ್ರಕಟಣೆಯ ಸಂದರ್ಭ. ಯಾವ ಹೆಸರೂ ಇಲ್ಲದ ಲೇಖಕನನ್ನು ಮನೆ ಹುಡುಕಿಕೊಂಡು ಹೋಗಿ ಅವರ ಕಾದಂಬರಿಯನ್ನು ಪ್ರಕಟಿಸಿದ ಔದಾರ್ಯತೆ ಸಾಹಿತ್ಯ ಭಂಡಾರದ ಗೋವಿಂದರಾಯರದು. ಅವರ ಆ ಔದಾರ್ಯತೆಯೇ ಭೈರಪ್ಪನವರು ತಮ್ಮ ಎಲ್ಲ ಕೃತಿಗಳನ್ನು ಸಾಹಿತ್ಯ ಭಂಡಾರದ ಮೂಲಕವೇ ಪ್ರಕಟವಾಗುವಂತೆ ನೋಡಿಕೊಳ್ಳಲು ಕಾರಣವಾಯಿತು. ನಂತರದ ದಿನಗಳಲ್ಲಿ ಭೈರಪ್ಪನವರ ಜನಪ್ರಿಯತೆ ಹೆಚ್ಚಿ ಅವರ ಕಾದಂಬರಿಗಳ ಬೇಡಿಕೆ ಏರಿ ಅನೇಕ ಪ್ರಕಾಶಕರು ಹೆಚ್ಚಿನ ಸಂಭಾವನೆ ಕೊಡುವ ಪ್ರಲೋಭನೆ ಒಡ್ಡಿದಾಗಲೂ ಅವರು ಗೋವಿಂದ ರಾಯರೆಡೆಗಿನ ತಮ್ಮ ನಿಷ್ಠೆಯನ್ನು ಬದಲಿಸಲಿಲ್ಲ. ಗೋವಿಂದ ರಾಯರು ತಮ್ಮ ಮೊದಲ ಕಾದಂಬರಿಯನ್ನು ಪ್ರಕಟಿಸಿದರು ಎನ್ನುವುದರ ಜೊತೆಗೆ ಪುಸ್ತಕ ಪ್ರಕಾಶಕನದ ಬಗೆಗಿನ ಅವರಲ್ಲಿದ್ದ ಕಾಳಜಿ, ಪ್ರಾಮಾಣಿಕತೆ, ಖರೀದಿಸಿ ಓದುವ ಓದುಗರಿಗೆ ಮೋಸ ಮಾಡಬಾರದೆನ್ನುವ ಮನೋಭಾವ ಈ ಗುಣಗಳೇ ಭೈರಪ್ಪನವರಿಗೆ ಗೋವಿಂದ ರಾಯರ ಬಗೆಗಿನ ನಿಷ್ಠೆಗೆ ಕಾರಣಗಳಾದವು.

           ಈ ನಡುವೆ ಭೈರಪ್ಪನವರು ಸಂಬಳವಿಲ್ಲದೆ ರಜೆ ಹಾಕಿ 'ಪರ್ವ' ಬರೆಯಲು ನಿರ್ಧರಿಸುತ್ತಾರೆ. ಸಂಬಳವಿಲ್ಲದೆ ಸಂಸಾರದ ಖರ್ಚು ವೆಚ್ಚಗಳನ್ನು ತೂಗಿಸುವುದಾದರೂ ಹೇಗೆ ಎನ್ನುವ ಸಮಸ್ಯೆ ಎದುರಾದಾಗ ಗೋವಿಂದ ರಾಯರು ಅವರ ನೆರವಿಗೆ ಬರುತ್ತಾರೆ. ಭೈರಪ್ಪನವರು ರಜೆಯಿಂದ ಕೆಲಸಕ್ಕೆ ಹಿಂದಿರುಗುವವರೆಗೂ ಅವರ ಸಂಸಾರ ನಿರ್ವಹಣೆಗೆ ಅಗತ್ಯದ ಹಣವನ್ನು ಪ್ರತಿತಿಂಗಳೂ ತಪ್ಪದೆ ತಲುಪಿಸುತ್ತಾರೆ. ಲೇಖಕನ ಸೃಜನಶೀಲತೆ ಮುಕ್ಕಾಗದಂತೆ ಕಾಯ್ದುಕೊಳ್ಳುವ ಈ ಪ್ರವೃತ್ತಿ ಇವತ್ತಿನ ಪ್ರಕಾಶಕರಲ್ಲಿ ಇಲ್ಲದಿರುವುದು ಅತ್ಯುತ್ತಮ ಪುಸ್ತಕಗಳ ಕೊರತೆಗೆ ಬಹುಮುಖ್ಯ ಕಾರಣವಾಗಿದೆ. 'ದಾಟು' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಗೋವಿಂದ ರಾಯರು ಸಂಭ್ರಮದಿಂದ ಮನೆಯಲ್ಲಿ ಹಬ್ಬ ಆಚರಿಸುವರು. ಆ ನೆನಪಿಗಾಗಿ ಸಾಹಿತ್ಯ ಪರಿಷತ್ತಿಗೆ ಹಣವನ್ನು ದೇಣಿಗೆಯಾಗಿ ನೀಡುವರು. ಭೈರಪ್ಪನವರೂ ಸಹ ಗೋವಿಂದ ರಾಯರೊಂದಿಗಿನ ವ್ಯವಹಾರಕ್ಕೆ ಯಾವುದೇ ಧಕ್ಕೆಯಾಗದಂತೆ ನಡೆದು ಕೊಳ್ಳುವರು. ಭೈರಪ್ಪನವರು ತಮ್ಮ ಆತ್ಮಕಥೆಯನ್ನು ಬರೆಯಲು ಮುಂದಾಗುವುದು ಕೂಡ ಗೋವಿಂದ ರಾಯರ ಪ್ರೀತಿಯ ಒತ್ತಾಯದಿಂದಲೇ. ಗೋವಿಂದ ರಾಯರ ಸಾವಿನ ನಂತರ   ಹಿರಿಯ ಜೀವವೊಂದನ್ನು ಕಳೆದುಕೊಂಡ ಅನಾಥ ಪ್ರಜ್ಞೆ ಕಾಡಲಾರಂಭಿಸುತ್ತದೆ. ಆ ಅನಾಥ ಪ್ರಜ್ಞೆಯನ್ನು ಭೈರಪ್ಪನವರು ಹೀಗೆ ವಿವರಿಸುತ್ತಾರೆ 'ಸಾವಿನ ಆ ಕ್ಷಣ ಗೋವಿಂದರಾಯರಿಗೆ ಎಂಬತ್ತೇಳು. ವಯಸ್ಸಿನಿಂದ ಮಾತ್ರವಲ್ಲ ಭಾವನಾತ್ಮಕವಾಗಿ ಅವರು ನನಗೆ ಹಿರಿಯರಾಗಿದ್ದರು. ಕೆಲವು ಗಟ್ಟಿ ಮೌಲ್ಯಗಳ ಜೀವಂತ ಪ್ರತ್ಯಕ್ಷವಾಗಿದ್ದರು. ನನಗೂ ಸಾವಿಗೂ ನಡುವಣ ಮರೆಯಾಗಿದ್ದರು. ಅವರು ಹೋದ ನಂತರ ಆತ್ಮೀಯ ವರ್ತುಲದಲ್ಲಿ ನನಗೆ ಹಿರಿಯರೆಂದು ನಾನು ಭಾವಿಸಬಹುದಾದ ಬೇರಾವ ವ್ಯಕ್ತಿಯೂ ಇಲ್ಲ. ಆ ನಡುವಣ ಮರೆಯು ಹೊರಟು ಹೋಗಿ ಇನ್ನು ನಾನೇ ಹಿರಿಯ ಎಂಬ ಸರದಿಯ ಭಾವನೆಯು ತುಂಬಿಕೊಂಡಿತು'.

          ಪುಸ್ತಕದ ಅಲ್ಲಲ್ಲಿ ಇನ್ನೂ ಅನೇಕ ಸಂಗತಿಗಳು ಓದಲು ಸಿಗುತ್ತವೆ. ತಂಗಿ ಲಲಿತಳ ಬದುಕನ್ನು ಒಂದು ದಡಕ್ಕೆ ಮುಟ್ಟಿಸಿದ್ದು, ಅಪ್ಪನ ಸಾವು, ಚಿಕ್ಕಪ್ಪನಿಗೆ ನೀಡಿದ ನೆರವು, ವಿದೇಶ ಪ್ರವಾಸ, ಗುಜರಾತಿನಿಂದ ದೆಹಲಿ ಮತ್ತು ದೆಹಲಿಯಿಂದ ಮೈಸೂರಿಗೆ ಬಂದು ನೆಲೆಸಿದ್ದು, ನಿವೃತ್ತಿಯ ದಿನ ಭಾವನೆಗಳನ್ನು ಹಿಡಿದಿಡಲು ಆಗದೆ ಅತ್ತಿದ್ದು ಹೀಗೆ ಅನೇಕ ಸಂಗತಿಗಳ ಸ್ವಾರಸ್ಯಪೂರ್ಣ ಓದು ಪುಸ್ತಕದುದ್ದಕ್ಕೂ ಹೇರಳವಾಗಿ ಲಭಿಸುತ್ತದೆ.

ಕೊನೆಯ ಮಾತು 


            ವ್ಯಕ್ತಿಯೊಬ್ಬನ ಕುರಿತು ಬರೆಯಲು ಹೊರಟರೆ ಅದು ಸಮಾಜದ ಚರಿತ್ರೆಯಾಗುತ್ತದೆ ಎನ್ನುವ ಮಾತಿದೆ.  ಈ ಮಾತಿಗೆ ಪುಷ್ಟಿಕೊಡುವಂತೆ ಅನೇಕ ಆತ್ಮಕಥನಗಳು ಪ್ರಕಟವಾಗಿವೆ. ಅಲ್ಲೆಲ್ಲ ಕಥಾನಾಯಕ ನೇಪಥ್ಯಕ್ಕೆ ಸರಿದು ಸಾಮಾಜಿಕ ಸಮಸ್ಯೆಗಳು ಮುಖ್ಯ ಭೂಮಿಕೆಗೆ ಬರುತ್ತವೆ. ಹಾಗೆಂದ ಮಾತ್ರಕ್ಕೆ ಅಲ್ಲಿನ ಕಥಾನಾಯಕ ಪರ್ಯಾಯ ವ್ಯವಸ್ಥೆಯನ್ನೇನೂ ತೋರಿಸಲಾರ. ಇಂಥ ಆತ್ಮಕಥೆಯನ್ನು ಬರೆಯುವ ವ್ಯಕ್ತಿಗೆ ಸಾಮಾಜಿಕ ಸಮಸ್ಯೆಗಳು ಶಾಶ್ವತವಾಗಿದ್ದರೆ ಮಾತ್ರ ಆತನ ಬರವಣಿಗೆಗೆ ಹೇರಳ ಫಸಲು ಲಭ್ಯ. ಇಂಥದ್ದೊಂದು ತಕರಾರು ಅನೇಕ ಓದುಗರದು. ಆದರೆ ಭೈರಪ್ಪನವರ 'ಭಿತ್ತಿ' ಯಾವ ಸಾಮಾಜಿಕ ಅವಲಕ್ಷಣಗಳ ಸುತ್ತ ಸುತ್ತದೆ ಅವರ ವೈಯಕ್ತಿಕ ಬದುಕನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಆತ್ಮಕಥನ. ಇಲ್ಲೂ ಕೆಲವೊಂದು ಸಣ್ಣತನಗಳ ಮೇಲೆ ಬೆಳಕು ಚೆಲ್ಲಲಾಗಿದೆಯಾದರೂ ಆ ಎಲ್ಲ ಸಮಸ್ಯೆಗಳು ಭೈರಪ್ಪನವರ ಸಂಪರ್ಕಕ್ಕೆ ಬಂದು ಅನಾವರಣಗೊಳ್ಳುತ್ತವೆ. ಈ ಆತ್ಮಕಥನವನ್ನು ಓದಿದ ನಂತರ ಭೈರಪ್ಪನವರ ಬದುಕು ಮತ್ತು ಬರಹ ಆದರ್ಶಪ್ರಾಯವಾಗಿ ನಿಲ್ಲುತ್ತವೆ. ಓದುಗರು ತಮ್ಮ ಹಿರಿಯರಿಂದ ನಿರೀಕ್ಷಿಸುವುದು ಕೂಡ ಇದನ್ನೇ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ  



     

Monday, December 2, 2013

ಮೈನಾ: ಒಂದು ಸುಂದರ ದೃಶ್ಯ ಕಾವ್ಯ



     







       



                ಮೊನ್ನೆ 'ಮೈನಾ' ಎನ್ನುವ ಕನ್ನಡ ಸಿನಿಮಾ ನೋಡಿದೆ. ಹಲವು ದಿನಗಳ ನಂತರ ನೋಡಿದ ಉತ್ತಮ ಕನ್ನಡ ಸಿನಿಮಾವಿದು.  ಇಲ್ಲಿ ನಾನು ಉತ್ತಮ ಸಿನಿಮಾ ಎಂದು  ಹೇಳಲು ಕಾರಣ ಈ ದಿನಗಳಲ್ಲಿ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ನೋಡುವಂಥ ಸದಭಿರುಚಿಯ ಸಿನಿಮಾಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂಥದ್ದೊಂದು ನಿರಾಸೆಯ ನಡುವೆಯೂ 'ಮೈನಾ' ದಂಥ ಸಿನಿಮಾಗಳ ನಿರ್ಮಾಣ ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. ಜೊತೆಗೆ ಇಂಥ ಸಿನಿಮಾಗಳಿಗೆ ಪ್ರೇಕ್ಷಕರಿಂದ ದೊರೆಯಬೇಕಾದ ಉತ್ತೇಜನ ಮತ್ತು ಪ್ರೋತ್ಸಾಹ ದೊರೆಯದಿರುವುದು ವಿಪರ್ಯಾಸದ ಸಂಗತಿ. ಈ ವಿಷಯದಲ್ಲಿ ನಮ್ಮ ಕನ್ನಡದ ಸಿನಿಮಾ ಪ್ರೇಕ್ಷಕ ವರ್ಗ ನೆರೆಯ ತಮಿಳು ಮತ್ತು ಮಲೆಯಾಳಿ ಸಿನಿಮಾಗಳ ಪ್ರೇಕ್ಷಕರಿಂದ ಕಲಿಯ ಬೇಕಾದದ್ದು ಬಹಳಷ್ಟಿದೆ. ಇರಲಿ ಈಗ ನಾನು ಮತ್ತೆ 'ಮೈನಾ' ಚಿತ್ರದ ವಿಷಯಕ್ಕೆ ಬರುತ್ತೇನೆ. ಹಾಸ್ಯನಟನಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಾಗಶೇಖರ ಅವರ ನಿರ್ದೇಶನದ ಮೂರನೇ ಸಿನಿಮಾವಿದು. ಈ ಮೊದಲು 'ಅರಮನೆ' ಮತ್ತು 'ಸಂಜು ವೆಡ್ಸ್ ಗೀತಾ' ಸಿನಿಮಾಗಳನ್ನು ನಿರ್ದೇಶಿಸಿ ಗಾಂಧಿ ನಗರದ ನಿರ್ಮಾಪಕರಿಂದ ಮತ್ತು ಕನ್ನಡದ ಪ್ರೇಕ್ಷಕರಿಂದ ಸೈ  ಎನಿಸಿಕೊಂಡ ನಿರ್ದೇಶಕನೀತ. 'ಅರಮನೆ' ಮತ್ತು 'ಸಂಜು ವೆಡ್ಸ್ ಗೀತಾ' ಎರಡೂ ವಿಭಿನ್ನ ಕಥೆಯ ಸಿನಿಮಾಗಳು. ಅವರ ನಿರ್ದೇಶನದ 'ಮೈನಾ' ಕೂಡ ಮೊದಲೆರಡು ಸಿನಿಮಾಗಳಿಂದ ವಿಭಿನ್ನವಾಗಿದ್ದರೂ ಕಥೆಯ ಜೀವಾಳ ಮಾತ್ರ ಮನುಷ್ಯ ಸಂಬಂಧಗಳೇ.

         ಪೋಲೀಸ್ ಇಲಾಖೆಯ ದಾಖಲೆಗಳಲ್ಲಿ ಸರಣಿ ಹಂತಕನೆಂದೇ ಖ್ಯಾತನಾದ ಸತ್ಯನನ್ನು ಚೆನ್ನೈನ ಸಮುದ್ರ ತೀರದಲ್ಲಿ ಕರ್ನಾಟಕದ ಪೋಲಿಸರು ಬಂಧಿಸುವುದರೊಂದಿಗೆ 'ಮೈನಾ' ಸಿನಿಮಾದ ಕಥೆ ಪ್ರಾರಂಭವಾಗುತ್ತದೆ. ಈ ಅಪಾದಿತನೆ ಸಿನಿಮಾದ ನಾಯಕ ಕೂಡ ಹೌದು. ಅವನನ್ನು ಬಂಧಿಸಿರುವ ಪೋಲೀಸ್ ಅಧಿಕಾರಿಗೆ ಸತ್ಯನನ್ನು ಕಂಡರೆ ಒಂದಿಷ್ಟು ಪ್ರೀತಿ ಜೊತೆಗೆ ವಿಶ್ವಾಸ ಕೂಡ ಇದೆ. ಆ ವಿಶ್ವಾಸವೇ ಸತ್ಯನ  ಬದುಕಿನ  ಕಥೆ ಬಿಚ್ಚಿಕೊಳ್ಳಲು ಕಾರಣವಾಗುತ್ತದೆ. ಸತ್ಯ ರೀಯಾಲಿಟಿ ಷೋ ಒಂದರಲ್ಲಿ ಭಾಗವಹಿಸಲು ಬೆಳಗಾವ ಮತ್ತು ಗೋವಾ ಮಧ್ಯದಲ್ಲಿರುವ ದೂದ ಸಾಗರ ರೈಲು ನಿಲ್ದಾಣಕ್ಕೆ ಬಂದಿಳಿದಿರುವ ಹುಡುಗ. ಯಾರಿಗೂ ಕೇಡು ಬಗೆಯದ ತಾನಾಯಿತು ತನ್ನ ಬದುಕಾಯಿತು ಎನ್ನುವಂತ ಅಮಾಯಕ ಹುಡುಗನಾತ.  ರೀಯಾಲಿಟಿ ಷೋ ನಲ್ಲಿ ಗೆದ್ದು ಬರುವ ಹಣದಿಂದ ಬೆಂಗಳೂರಿನಲ್ಲಿ ಒಂದು ಸ್ವಂತದ  ಜಿಮ್ ಪ್ರಾರಂಭಿಸಬೇಕೆನ್ನುವ ಆಸೆ ಸತ್ಯನದು. ಜೊತೆಗೆ  ಅಪ್ಪ ಅಮ್ಮನ ಕನಸುಗಳು ಅವನ ಈ ಆಸೆಗೆ ನೀರೆರೆಯುತ್ತವೆ.

            ಷೋ ನ ಎರಡನೇ ದಿನವೇ ಅವನಿಗೆ ರೈಲಿನಲ್ಲಿ ನಾಯಕಿಯ ಭೇಟಿಯಾಗುತ್ತದೆ.  ಕಾಲಿಲ್ಲದ ಅಂಗವಿಕಲ ಬಿಕ್ಷುಕನಂತೆ ವೇಷಧರಿಸಿ  ಬಿಕ್ಷೆ ಬೇಡುತ್ತ ಹೋಗುತ್ತಿದ್ದವನನ್ನು ನಾಯಕಿಯ  ಸ್ನಿಗ್ಧ ಸೌಂದರ್ಯ ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಕಿಟಕಿಯ ಪಕ್ಕ ಕುಳಿತು ನಿಸರ್ಗದ ಚೆಲುವನ್ನು ಸವಿಯುತ್ತಿದ್ದ  ಅವಳೋ ಸೌಂದರ್ಯದೊಂದಿಗೆ ಸ್ಪರ್ಧೆಗಿಳಿದಂತೆ ಕಾಣುವ  ಚೆಲುವೆ.  ಅವಳ ಆ ನಗು ಹಾಲು ಚೆಲ್ಲಿದ ಬೆಳ್ಳನೆಯ  ಬೆಳದಿಂಗಳು. ಬಿಕ್ಷೆಗಾಗಿ ಕೈ ಮುಂದೆ ಚಾಚಿದವನ ಕೈಗೆ ನೂರರ ನೋಟನ್ನಿತ್ತು ತನ್ನ ಮಂದ ಸ್ವರದಲ್ಲಿ ನುಡಿಯುತ್ತಾಳೆ 'ಇದು ನಾನು ಕಷ್ಟ ಪಟ್ಟು ದುಡಿದ ಹಣ. ದಯವಿಟ್ಟು misuse ಮಾಡ್ಬೇಡಿ'. ರೈಲಿನಿಂದ ಕೆಳಗಿಳಿದವನಿಗೆ ಪ್ರಪಂಚವನ್ನೇ ಗೆದ್ದ  ಪುಟ್ಟ ಮಗುವಿನ  ಸಂಭ್ರಮ.

            ಆ ರೀಯಾಲಿಟಿ ಷೋ ನಲ್ಲಿ ಎರಡು ತಂಡಗಳಿವೆ. ಸಿನಿಮಾದ ನಾಯಕ ಸತ್ಯನ ತಂಡ ಆ ದಿನ ಗಳಿಸಿದ ಹಣ ಎದುರಾಳಿ ತಂಡಕ್ಕಿಂತ ಒಂದಿಷ್ಟು ಕಡಿಮೆ. ಸತ್ಯನ ಹತ್ತಿರ ನೂರು ರುಪಾಯಿಗಳಿವೆ ಎಂದು ಆ ಕಾರ್ಯಕ್ರಮದ ನಿರೂಪಕನಿಗೆ  ಗೊತ್ತು. ಆ ಹಣವನ್ನು ಸೇರಿಸಿದಲ್ಲಿ ಸತ್ಯನ ತಂಡ ಅವತ್ತಿನ ಸ್ಪರ್ಧೆಯಲ್ಲಿ ಗೆಲ್ಲುವುದು ಗ್ಯಾರಂಟಿ. ಆ ಗುಂಪಿಗೂ ಗೆಲುವು ಬೇಕಿದೆ. ಯಾರು ಎಷ್ಟೇ ಒತ್ತಾಯ ಮಾಡಿದರೂ ಸತ್ಯ ತನ್ನಲ್ಲಿರುವ ಆ ಸ್ನಿಗ್ಧ ಸೌಂದರ್ಯದ ಚೆಲುವೆ ಕೊಟ್ಟಿರುವ  ಹಣ ಬಳಸಿಕೊಳ್ಳಲು ಸಿದ್ಧನಿಲ್ಲ. ಅದು ಅವನಿಗೆ ಹಣಮಾತ್ರವಲ್ಲ. ಅದವಳ ನೆನಪು ತನ್ನ ಪ್ರಿಯತಮೆಯ ಒಲವಿನ ಉಡುಗೊರೆ. ಆ  ಮಧುರ ನೆನಪನ್ನು ಕಳೆದುಕೊಳ್ಳಲು ಅವನ ಮನಸ್ಸು ಒಪ್ಪುತ್ತಿಲ್ಲ. ತನ್ನ ಪ್ರೀತಿಗಾಗಿ ಕೊನೆಗೂ ಸತ್ಯ ರೀಯಾಲಿಟಿ ಷೋನಿಂದ ಹೊರಬರುತ್ತಾನೆ. ಹೀಗೆ ಹೊರಬಂದವನಿಗೆ ತನ್ನ ಪ್ರಿಯತಮೆಯನ್ನು ಕಾಣುವ ಅವಳಲ್ಲಿ ತನ್ನ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳುವ ತವಕ. ಅವನಿಗೆ ಗೊತ್ತಿದೆ ಅವಳು ಪ್ರತಿದಿನ ತಾನು ಬಿಕ್ಷೆ ಬೇಡಿದ ರೈಲಿನಲ್ಲೇ ದಿನಕ್ಕೆ ಎರಡು ಬಾರಿ ಸಂಚರಿಸುತ್ತಾಳೆಂದು.

           ಮರುದಿನ ಸತ್ಯ ಮತ್ತದೇ ರೈಲಿನ ಅವಳಿದ್ದ ಭೋಗಿಯಲ್ಲಿ ಆಕೆಯನ್ನು ಕಾಣಲು ಬರುತ್ತಾನೆ.  ದಿನಪತ್ರಿಕೆ ಮಾರುವವನಾಗಿ ತೆವಳುತ್ತ  ಅವಳಿದ್ದಲ್ಲಿಗೆ ಬಂದವನನ್ನು   ಕರೆದು ಪತ್ರಿಕೆ ಕೊಳ್ಳುತ್ತಾಳೆ. ಅವಳ ಕಣ್ಣ ಮೆಚ್ಚುಗೆಗಾಗಿ ಕಾದವನಿಗೆ ಅವಳು ನಿರಾಸೆ ಮಾಡಲಾರಳು. ಇಬ್ಬರದೂ  ಪ್ರೀತಿಗಾಗಿ  ಹಂಬಲಿಸುವ ಹೃದಯ. ಸತ್ಯನ ಒಡನಾಟದಿಂದ  ಅವಳಿಗೆ ಬದುಕು  ಅದು  ಬಣ್ಣಗಳ ಚಿತ್ತಾರ ಎಂದೆನಿಸುತ್ತದೆ. ಹಸಿರುಹೊದ್ದು ಮಲಗಿರುವ ಬೆಟ್ಟಗಳ ನಡುವೆ ಭೋರ್ಗರೆದು ಹರಿಯುತ್ತ ನದಿ ವಸುಂಧರೆಯ ಒಡಲು ಸೇರುತ್ತಿರುವ ಆ ನಿರ್ಜನ ತಾಣದಲ್ಲಿ ತನ್ನ ಪ್ರಿಯತಮೆಯ ವರ್ಣನೆಯನ್ನು ಆಲಿಸಲು ಸತ್ಯನಿಗೂ ಒಬ್ಬ ಜೊತೆಗಾರ ಬೇಕು. ಮನುಷ್ಯ ತನ್ನ ದುಃಖಕ್ಕೆ ಕಿವಿಯಾಗುವವರಿಗಿಂತ ತನ್ನ ಸಂತಸಕ್ಕೆ ಕಿವಿಯಾಗುವವರಿಗಾಗಿ ಹಂಬಲಿಸುತ್ತಾನೆ. ಇದು ಮನುಷ್ಯ ಸಹಜ ಸ್ವಭಾವ. ಸತ್ಯನ ಸಂತಸವನ್ನು ಹಂಚಿಕೊಳ್ಳಲು ಅಲ್ಲೊಂದು ಪಾತ್ರವನ್ನು ಸೃಷ್ಟಿಸಲಾಗಿದೆ. ಆತ ಸತ್ಯನ ಪ್ರೀತಿಗೆ ಸಾಕ್ಷಿಯಾಗುತ್ತಾನೆ. ಅವನ ಸಂತೋಷದಲ್ಲಿ ಭಾಗಿಯಾಗುತ್ತಾನೆ ಸಂಕಟದಲ್ಲಿ ನೆರವಾಗುತ್ತಾನೆ. ಹಿರಿಯಣ್ಣನಂತೆ ಬುದ್ದಿ ಹೇಳುತ್ತಾನೆ. ಪ್ರೀತಿಯ ಏಕತಾನತೆ ಪ್ರೇಕ್ಷಕನಿಗೆ ಕಾಡದಿರಲೆಂದು ನಕ್ಕು ನಗಿಸಲು ಅಲ್ಲೊಂದು ಕುರುಡು ಬಿಕ್ಷುಕನ  ಪಾತ್ರವಿದೆ. ನಿಜವಾದ ಸಂಗತಿಯೆಂದರೆ ಆತನದೂ  ಚಿತ್ರದ ನಾಯಕ ಸತ್ಯನಂತೆ ನಟನೆಯ ಕುರುಡುತನ. ಒಬ್ಬನ ನಟನೆ ಪ್ರೀತಿಗಾಗಿ ಇನ್ನೊಬ್ಬನದು ಎರಡ್ಹೊತ್ತಿನ ಹಿಡಿ ಅನ್ನಕ್ಕಾಗಿ. ಆ ಎರಡೂ ನಟನೆಗಳನ್ನು ಪ್ರೇಕ್ಷಕರು ಸಮೀಕರಿಸಿ ನೋಡಲೆಂದೇ ನಿರ್ದೇಶಕರು ಅತಿ ಜಾಣ್ಮೆಯಿಂದ ಸೃಷ್ಟಿಸಿರುವ ಪಾತ್ರವಿದು.

          ಈ ನಡುವೆ ನಾಯಕ ನಾಯಕಿಯರ ನಡುವೆ ಪ್ರೀತಿಯ ವಿನಿಮಯವಾಗುತ್ತದೆ. ಎಲ್ಲ ಪ್ರೇಮಿಗಳಂತೆ ಅವರು ಪ್ರೀತಿಯನ್ನು ಐ ಲವ್ ಯು ಎನ್ನುವ ಅರ್ಥ ಕಳೆದುಕೊಂಡ ಶಬ್ದಗಳಲ್ಲಿ ಹೇಳಲಾರರು. ಅದಕ್ಕವರಿಟ್ಟ ಹೆಸರು ಕಲರ್ ಫುಲ್ ಎಂದು. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಕಲರ್ ಫುಲ್ ಎಂದು ಹೇಳಿದ ಸಂದರ್ಭಗಳೆಷ್ಟೋ. ನಾಯಕನ ಕನಸುಗಳಲ್ಲಿ ನಾಯಕಿ ಮತ್ತು ನಾಯಕಿಯ ಮಧುರ ನೆನಪುಗಳಲ್ಲಿ ನಾಯಕ ಇಬ್ಬರೂ ಕೈ ಕೈ ಹಿಡಿದು ಹಾಡುತ್ತಾರೆ ಕುಣಿಯುತ್ತಾರೆ. ಈ ಪ್ರೇಮದ ಪರವಶತೆಯಲ್ಲೇ ಅವಳ ಕೋಗಿಲೆಯ ಕಂಠ  ತನ್ಹೇಸರು 'ಮೈನಾ' ಎಂದು ಉಲಿಯುತ್ತದೆ. ಮುಂದೇನಾಗುತ್ತದೆ ಎಂದು ಉಸಿರು ಬಿಗಿ ಹಿಡಿದು ನೋಡುವ ಸರದಿ ಪ್ರೇಕ್ಷಕನದು. ಏಕೆಂದರೆ ಆ ಪ್ರೀತಿಯ ಹುಡುಗಿ ಮೈನಾಗೆ ಗೊತ್ತಿಲ್ಲ ತಾನು ಪ್ರೀತಿಸುತ್ತಿರುವ ಹುಡುಗ ಕಾಲಿಲ್ಲದ ನಾಟಕ ಆಡುತ್ತಿರುವ ಸುಳ್ಳುಗಾರನೆಂದು. ಸುಳ್ಳನ್ನು ಸತ್ಯವೆಂದು ಆ ಕ್ಷಣಕ್ಕೆ ನಂಬಿಸಬಹುದಾದರೂ ಅದನ್ನು ಕೊನೆಯವರೆಗೂ ನಂಬಿಸುವುದು ಸತ್ಯನಂಥ ಪ್ರೀತಿಯ ಹುಡುಗನಿಗೂ ಸಾಧ್ಯವಿಲ್ಲ. ಕೊನೆಗೂ ಆ ಸುಳ್ಳಿಗೊಂದು ತೆರೆ ಬೀಳುವ ಸಂದರ್ಭ ಎದುರಾಗುತ್ತದೆ.

          ಪ್ರತಿದಿನದಂತೆ ಆ ದಿನವೂ ಸತ್ಯ ಅವಳೆದುರು ಕುಳಿತು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾನೆ. ಆಕೆ ತನ್ನ ಪ್ರಿಯತಮನ ಮಾತುಗಳಿಗಾಗಿ ಕಾತರಿಸುತ್ತ  ಅವನ ಕಣ್ಣುಗಳಲ್ಲಿನ  ತನ್ನ ಪ್ರತಿಬಿಂಬವನ್ನು ಹುಡುಕುತ್ತಿದ್ದಾಳೆ. ಇಬ್ಬರೂ  ಒಬ್ಬರನ್ನೊಬ್ಬರು ನೋಡುತ್ತ ಪ್ರಪಂಚವನ್ನೇ ಮರೆತ ಕ್ಷಣವದು. ಇದೇ ಸಮಯವೆಂದು ಹೊಂಚು ಹಾಕಿದ ಕಳ್ಳ ಅವಳ ಬ್ಯಾಗಿನೊಂದಿಗೆ ಓಟ ಕೀಳುತ್ತಾನೆ. ಇಬ್ಬರೂ ವಾಸ್ತವಕ್ಕೆ ಮರಳಿದಾಗ ನಡೆದ ಅನಾಹುತದ ಅರಿವಾಗುತ್ತದೆ. ಸತ್ಯ ರೈಲಿನಿಂದ ಹೊರ ಜಿಗಿದು ಕಳ್ಳನನ್ನು ಬೆನ್ನಟ್ಟಿ ಬ್ಯಾಗನ್ನು ಮರಳಿ ತರುತ್ತಾನೆ. ಅದುವರೆಗೂ ತಾನು ನಂಬಿದ್ದು ಸುಳ್ಳೆಂದು ನಾಯಕಿಗೆ ಅರಿವಾಗುತ್ತದೆ. ನಾಯಕನ ಪ್ರೀತಿಯನ್ನು ತಿರಸ್ಕರಿಸಿ  ಆಕೆ ತೆವಳುತ್ತ ಸಾಗುವ ದೃಶ್ಯ ಆ ಕ್ಷಣಕ್ಕೆ ಇಡೀ ಪ್ರೇಕ್ಷಕ ಸಮೂಹವನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಚಿತ್ರದ ನಾಯಕಿ ಮೈನಾ ಅಂಗವಿಕಲೆ. ಪೋಲಿಯೋ ದಿಂದ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ ಅವಳಿಗೆ ನಡೆಯಲು ಬಾರದು ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಕೆಲವು ಕ್ಷಣಗಳೇ ಬೇಕಾಗುತ್ತವೆ. ಸುಳ್ಳು ಹೇಳಿ ತನ್ನ ಪ್ರೀತಿ ಗಿಟ್ಟಿಸಿದ ನಾಯಕನ ಪ್ರೀತಿಯನ್ನು ಮೈನಾ ತಿರಸ್ಕರಿಸುತ್ತಾಳೆ. ನಿನ್ನನ್ನು ಪ್ರೀತಿಸುತ್ತೇನೆ ಎಂದ ಸತ್ಯನ ಮಾತಿಗೆ ಮೈನಾ ಅನುಕಂಪದ ಪ್ರೀತಿ ನನಗೆ ಬೇಕಿಲ್ಲ ಎಂದುತ್ತರಿಸುತ್ತಾಳೆ. ನಿನಗೆ ಕಾಲಿಲ್ಲದ ವಿಷಯ ನನಗೆ ಮೊದಲೇ ಗೊತ್ತಿತ್ತು ಎಂದು ಆತ ನುಡಿದಾಗ ಮತ್ತೊಮ್ಮೆ ಅಚ್ಚರಿ ಪಡುವ ಸರದಿ ಪ್ರೇಕ್ಷಕರದು. ತನ್ನ ಪ್ರೀತಿಯ ಪ್ರಾರಂಭದಲ್ಲಿ ಅದೊಂದು ದಿನ ಅವಳನ್ನು ಹಿಂಬಾಲಿಸಿ ಹೋದ ಸತ್ಯನಿಗೆ ಆಕೆ ಅಂಗವಿಕಲೆ ಎಂದು ಗೊತ್ತಾಗುತ್ತದೆ. ಆದರೆ ಆತ ಪ್ರೀತಿಸುವುದು ಅವಳ ದೈಹಿಕ ಸೌಂದರ್ಯವನ್ನಲ್ಲ. ಬದುಕಿನುದ್ದಕ್ಕೂ ನಾನು ನಿನ್ನ ಜೊತೆಗಿರುವೆ ಎಂದು ಅಭಯ ನೀಡಿದ ಆ ಘಳಿಗೆ ಮೈನಾ ಸತ್ಯನ ಪ್ರೀತಿ ಎದುರು ಸೋಲುತ್ತಾಳೆ. ನಿಜಸ್ಥಿತಿಯನ್ನು ನಂತರ ತಿಳಿದು ನಾಯಕ ನಾಯಕಿಯನ್ನು ಪ್ರೀತಿಸಲು ಮುಂದಾಗಿದ್ದರೆ ಅದು ಅನುಕಂಪದ ಪ್ರೀತಿಯಾಗುತ್ತಿತ್ತು. ಆದ್ದರಿಂದ ಇಂಥದ್ದೊಂದು ಸಮಸ್ಯೆಯಿಂದ ಪಾರಾಗುವಲ್ಲಿ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ. ಸತ್ಯನಿಗೆ ಮೈನಾಳ ಪರಿಸ್ಥಿತಿಯನ್ನು ಮೊದಲೇ ಪರಿಚಯಿಸಿ ಇಲ್ಲಿ ಪ್ರೀತಿಯನ್ನು ಗೆಲ್ಲಿಸಿದ್ದಾರೆ. ಸತ್ಯ ಮತ್ತು ಮೈನಾ ಒಂದಾಗುವುದನ್ನು ಕುರುಡನಂತೆ ನಟಿಸುವ ಬಿಕ್ಷುಕ ದೂರದಲ್ಲಿ ನಿಂತು ನೋಡುವ ದೃಶ್ಯ ಆ ಸನ್ನಿವೇಶಕ್ಕೆ ಸಂದರ್ಭೋಚಿತವಾಗಿದೆ.

      ಸಿನಿಮಾದಲ್ಲಿ  ಸತ್ಯ ಮತ್ತು ಮೈನಾಳ ಪ್ರೀತಿಗೆ ಅಡ್ಡಿಯುಂಟು ಮಾಡುವ ವಿಲನ್ ಗಳಿಲ್ಲ. ಮದುವೆಯಾಗಿ ಆ ಯುವಜೋಡಿ ದೂರದ ಬೆಂಗಳೂರಿನಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಸತ್ಯನಿಗಿರುವುದು ಒಂದೇ ಆಸೆ ತನ್ನ ಪ್ರೀತಿಯ ಹುಡುಗಿ ಎಲ್ಲರಂತೆ ನಡೆಯುವಂತಾಗಬೇಕು. ಆದರೆ ಅವಳಿಗೋ ನಾನೆಲ್ಲಿ ತನ್ನ ಪ್ರೀತಿಯ ಹುಡುಗನ ತೋಳ ತೆಕ್ಕೆಯಿಂದ ದೂರಾಗುವೇನೋ  ಎನ್ನುವ ಆತಂಕ. ಈ ಕೈ ಹಿಡಿದು ನಡೆಸುವ, ಮಗುವಿನಂತೆ ತೋಳುಗಳಲ್ಲಿ ಎತ್ತಿಕೊಳ್ಳುವ ಮಧುರ ಅನುಭವ ಇವೆಲ್ಲ ನಾಳೆಯಿಂದ ಬರೀ ನೆನಪುಗಳಾಗಿ ಉಳಿಯುವ ಬೇಸರ ಅವಳದು. ಆದರೆ ಸತ್ಯನ ಪ್ರೀತಿಯೇದುರು ಅವಳ ಹಠ ಮತ್ತೊಮ್ಮೆ ಸೋಲುತ್ತದೆ. ಅವಳನ್ನು ಪರೀಕ್ಷಿಸಿದ ಡಾ. ಅನಿರುದ್ಧ ದೇಸಾಯಿ ಮೈನಾ ಚಿಕಿತ್ಸೆಯ ನಂತರ ಸಹಜವಾಗಿ ನಡೆಯುವಳು ಎನ್ನುವ  ಭರವಸೆ ನೀಡುವನು. ಆದರೆ ಚಿತ್ರದ ಕಥೆ ತಿರುವು ಪಡೆಯುವುದೇ ಇಲ್ಲಿಂದ. ಮೈನಾಳ ಸೌಂದರ್ಯಕ್ಕೆ ಮನಸೋತ ಅನಿರುದ್ಧ ದೇಸಾಯಿಗೆ ಅವಳ ಮೇಲೆ ದೈಹಿಕ ವಾಂಛೆ ಬೆಳೆಯುತ್ತದೆ. ಮೈನಾಳನ್ನು ಸೇರಬೇಕೆನ್ನುವ ಅವನ ಆಸೆ ಅವಳ ನಗ್ನ ದೇಹವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿಯುವಂತೆ ಪ್ರಚೋದಿಸುತ್ತದೆ. ಅದನ್ನೇ ಮುಂದಿಟ್ಟುಕೊಂಡು ಆತ ಮೈನಾಳನ್ನು ಬ್ಲಾಕ್ ಮೇಲ್ ಮಾಡಲಾರಂಭಿಸುವನು. ಒಂದೆಡೆ ಜೀವಕ್ಕೆ ಜೀವವಾಗಿ ಪ್ರೀತಿಸುವ ಪತಿ. ಇನ್ನೊಂದೆಡೆ ದೈಹಿಕ ತೃಷೆಯಿಂದ ಉನ್ಮತ್ತಗೊಂಡ  ಮೃಗ. ಹೇಳಲೂ ಆಗದ ಅನುಭವಿಸಲೂ ಆಗದ ಸ್ಥಿತಿಯಲ್ಲಿ ಮೈನಾಳ ಮಾನಸಿಕ ತೊಳಲಾಟ ಆ ಕ್ಷಣ ಪ್ರೇಕ್ಷಕರ  ಮನಸ್ಸನ್ನು ಆರ್ದ್ರವಾಗಿಸುತ್ತದೆ.  ವಿಷಯ ತಿಳಿದ ಸತ್ಯ ಡಾ.ಅನಿರುದ್ಧ ದೇಸಾಯಿಯ ಕೊಲೆ ಮಾಡುತ್ತಾನೆ. ಆದರೆ ಇಡೀ ಸತ್ಯವನ್ನು  ಮೈನಾಳಿಂದ ಮುಚ್ಚಿಡುತ್ತಾನೆ. ಆ ಪರಿಸರದಲ್ಲಿ ಬದುಕುವುದು ಅಸಹನೀಯ ಎಂದೆನಿಸಿದಾಗ  ಹೊಸ ಪರಿಸರದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಇಬ್ಬರೂ ಚೆನ್ನೈಗೆ ಪಯಣಿಸುತ್ತಾರೆ.

             ಇತ್ತ ಬೆಂಗಳೂರಿನಲ್ಲಿ ರಾಜಕಾರಣಿ ಸಂಜಯ ದೇಸಾಯಿ ತನ್ನ ತಮ್ಮನ ಕೊಲೆಗಾರನನ್ನು ಬಂಧಿಸುವಂತೆ ಪೋಲೀಸ್ ಇಲಾಖೆಯ ಮೇಲೆ ಒತ್ತಡ ತರುತ್ತಾನೆ. ಪೋಲೀಸ್ ಇಲಾಖೆ ಈ ಕೆಲಸವನ್ನು ದಕ್ಷ ಪೋಲೀಸ್ ಅಧಿಕಾರಿ ಶರತ್ ಕುಮಾರಗೆ ವಹಿಸುತ್ತದೆ. ಕೊನೆಗೂ ಪೋಲೀಸರು ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗುವರು. ಮೈನಾಳ ಸ್ನೇಹಿತೆಯ ನೆರವಿನಿಂದ ಕೊಲೆಗಾರ ಸತ್ಯ ಚೆನ್ನೈನಲ್ಲಿರುವ ಸಂಗತಿ ಬಹಿರಂಗವಾಗಿ ಅವನನ್ನು ಬಂಧಿಸುತ್ತಾರೆ. ಇತ್ತ ರಾಜಕಾರಣಿ ಸಂಜಯ ದೇಸಾಯಿ ಸತ್ಯನನ್ನು ಕೊಲ್ಲಲು ಬಾಡಿಗೆ ಹಂತಕರನ್ನು ನೇಮಿಸುತ್ತಾನೆ. ಸತ್ಯನನ್ನು ಬೆಂಗಳೂರಿಗೆ ಕರೆತರುವ ಶರತ್ ಕುಮಾರ ಅವನನ್ನು ತನ್ನ ಸ್ನೇಹಿತನ ಸುಪರ್ದಿಗೆ ಒಪ್ಪಿಸಿ ಕಾನೂನಿನ ಮೂಲಕ ಸತ್ಯನನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಬಂಧಿತನಾದ ಸತ್ಯನಿಗೆ ಮೈನಾಳದೆ ಚಿಂತೆ. ಅವಳನ್ನು ಕಾಣಲು ಅಲ್ಲಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸುತ್ತಾನೆ. ಕೊನೆಗೂ ತಪ್ಪಿಸಿಕೊಳ್ಳುವ ಸತ್ಯ ಮೈನಾಳನ್ನು ರೈಲು ನಿಲ್ದಾಣಕ್ಕೆ ಕರೆತರಲು ತನ್ನ ಸ್ನೇಹಿತನಿಗೆ ಸೂಚಿಸುವನು. ಸತ್ಯ ತಪ್ಪಿಸಿಕೊಂಡ ಸುದ್ದಿ ತಿಳಿದ ಹಂತಕರು ಅವನನ್ನು ಬೇಟೆಯಾಡಲು ಬೆನ್ನಟ್ಟುತ್ತಾರೆ. ಇನ್ನೊಂದೆಡೆ ಪೋಲೀಸ್ ಇಲಾಖೆಯೂ ಸತ್ಯನನ್ನು ಬಂಧಿಸಲು ಕಾರ್ಯತಂತ್ರ ರೂಪಿಸುತ್ತದೆ. ಸತ್ಯನ ಕೊಲೆಯ ಸಂಚಿನ ರಹಸ್ಯ ಅರಿತ ಪೋಲಿಸ್ ಅಧಿಕಾರಿ ಶರತ್ ಕುಮಾರ   ಅವನನ್ನು ಹಂತಕರಿಂದ ಉಳಿಸುತ್ತಾನೆ. ಸತ್ಯ ಮತ್ತು ಮೈನಾ ಒಂದಾಗುತ್ತಾರೆ. ಆದರೆ  ಅಷ್ಟರಲ್ಲೇ ಅನಾಹುತ ಸಂಭವಿಸುತ್ತದೆ. ರೈಲು ನಿಲ್ದಾಣವನ್ನು ಸುತ್ತುವರಿದ ಪೋಲೀಸರ ಗುಂಡಿಗೆ ಸತ್ಯ ಮತ್ತು ಮೈನಾರ  ದೇಹಗಳು ನೆಳಕ್ಕುರುಳುವುದರೊಂದಿಗೆ  ಚಿತ್ರ ಮುಗಿಯುತ್ತದೆ.

           ಸಿನಿಮಾದ ಮೊದಲರ್ಧ ಲವಲವಿಕೆಯಿಂದ ಕೂಡಿದ್ದರೆ ಉಳಿದರ್ಧದಲ್ಲಿ ಕಥೆಯ ಓಟ ಪಡೆದುಕೊಳ್ಳುವ ವೇಗ ಪ್ರೇಕ್ಷಕರನ್ನು ಒಂದಿಷ್ಟು ಗೊಂದಲಕ್ಕಿಡು ಮಾಡುತ್ತದೆ. ಎರಡುವರೆ ಗಂಟೆಗಳಿಗೆ ಮಾತ್ರ  ಸಿನಿಮಾ ಹೆಣೆಯ ಬೇಕೆಂಬ ಗಾಂಧಿನಗರದ ಸಿದ್ದ ಸೂತ್ರಕ್ಕೆ ಬದ್ದರಾದ ನಿರ್ದೇಶಕ ನಾಗಶೇಖರ ದ್ವಿತಿಯಾರ್ಧದಲ್ಲಿ ಕಥೆಯ ವೇಗಕ್ಕೆ ಒತ್ತು ನೀಡಿರುವರು. ಅದಕ್ಕೆಂದೇ ಅನಂತ ನಾಗ, ಸುಹಾಸಿನಿ, ಜೈ ಜಗದೀಶ, ರವಿವರ್ಮ  ಅವರಂಥ ಪ್ರತಿಭಾನ್ವಿತ ಕಲಾವಿದರ ಪಾತ್ರಗಳು ನೆಪಕ್ಕೆ ಮಾತ್ರ ಎನ್ನುವಂತೆ ಬಂದು ಹೋಗುತ್ತವೆ. ಇವರುಗಳ ಪ್ರತಿಭೆಯನ್ನು ನಿರ್ದೇಶಕರು ಸರಿಯಾದ ರೀತಿಯಲ್ಲಿ ದುಡಿಸಿಕೊಳ್ಳುವಲ್ಲಿ ಸೋತಿರುವರು. ಚಿತ್ರದ ನಾಯಕ ಸತ್ಯನ ಪಾತ್ರದಲ್ಲಿ  ನಟ ಚೇತನ್ ಅಭಿನಯ ಸಿನಿಮಾದ  ಮುಖ್ಯ ಜೀವಾಳ. ವಿದೇಶದಲ್ಲಿ ಓದಿರುವ ಈ ನಟ ಕಲೆಯ ಮೇಲಿನ ಆಸಕ್ತಿಯಿಂದ ಕರ್ನಾಟಕಕ್ಕೆ ಬಂದು ಅಭಿನಯ ತರಬೇತಿ ಪಡೆದವರು. ತಮ್ಮ ಮೊದಲ ಚಿತ್ರ 'ಆ ದಿನಗಳು' ಮೂಲಕ ಚಿತ್ರರಂಗದಲ್ಲಿ ಭದ್ರವಾಗಿ ತಳವೂರುವ ಭರವಸೆ ಮೂಡಿಸಿದ ನಟ. ನಾಯಕಿ ನಿತ್ಯಾ ಮೆನನ್ ಬೆಂಗಳೂರಿನ ಹುಡುಗಿ. ಆದರೆ ಹೆಸರು ಮಾಡಿದ್ದು ಮಲೆಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ. ಅವರ ಸೌಂದರ್ಯ ಮತ್ತು ಅಭಿನಯ ಸಿನಿಮಾದ ಪ್ಲಸ್ ಪಾಯಿಂಟ್ ಗಳು. ತಮಿಳಿನ ಶರತ್ ಕುಮಾರ  ಖಡಕ್ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿರುವರು. ಸಾಧು ಕೋಕಿಲ ಕೆಲವೇ  ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ನೀಡಿರುವರು. ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರದ ಹೈಲೆಟ್. ಅವರ ಫೋಟೋಗ್ರಾಫಿ ಕಣ್ಣು ದೂದ ಸಾಗರನ ರಮಣೀಯ ದೃಶ್ಯವನ್ನು ಅತ್ಯಂತ ಸುಂದರವಾಗಿ ಸೆರೆ ಹಿಡಿದಿದೆ. ಸಿ. ಅಶ್ವತ್ಥ ಅವರ ಕಂಠದಲ್ಲಿ ಮೂಡಿ ಬಂದ ' ಕಾಣದ ಕಡಲಿಗೆ ಹಂಬಲಿಸಿದೆ ಮನ' ಹಾಡು ಕೇಳಲು ಇಂಪಾಗಿದೆ. ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಹಾಡಿರುವ 'ಮೊದಲ ಮಳೆಯಂತೆ' ಯುಗಳ ಗೀತೆ ಅನೇಕ ದಿನಗಳವರೆಗೆ ಕಾಡುತ್ತದೆ. ೧೯೬೫ ರಲ್ಲಿ ತೆರೆಕಂಡ 'ನಾಗ ಪೂಜಾ' ಚಿತ್ರದ ಎಲ್. ಆರ್. ಈಶ್ವರಿ ಹಾಡಿರುವ 'ಓ ಪ್ರೇಮದ ಪುಜಾರಿ' ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಂಡಿರುವುದು ಸಿನಿಮಾದ ಇನ್ನೊಂದು ವಿಶೇಷ. ಶ್ರೇಯಾ ಘೋಷಾಲ ಅವರ ಕಂಠಸಿರಿಯಲ್ಲಿ ಹಾಡು ಸೊಗಸಾಗಿ ಮೂಡಿ ಬಂದಿದೆ.

            'ಮೈನಾ' ಚಿತ್ರದಲ್ಲಿ ಒಂದೆರಡು ನ್ಯೂನ್ಯತೆಗಳು ಕಂಡು ಬಂದರು ಒಟ್ಟಾರೆ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ದ್ವಂದ್ವಾರ್ಥ ಸಂಭಾಷಣೆಯಾಗಲಿ ಅಶ್ಲೀಲ ದೃಶ್ಯಗಳಾಗಲಿ ಇಲ್ಲದ ಸಿನಿಮಾವಿದು. ಕಥೆ ಮತ್ತು ತಾಂತ್ರಿಕವಾಗಿಯೂ ಸಿನಿಮಾ ಗೆದ್ದಿದೆ. ಒಂದು ಕಾಲದಲ್ಲಿ ನಿರ್ದೇಶಕನ ಮಾಧ್ಯಮವಾಗಿದ್ದ ಸಿನಿಮಾ ಕಾಲಾನಂತರದಲ್ಲಿ ಅನೇಕ ರೂಪಾಂತರಗಳನ್ನು ಹೊಂದಿ  ಅದು ನಾಯಕ ಪ್ರಧಾನ ಸಿನಿಮಾ ಎನ್ನುವ ಹಣೆಪಟ್ಟಿ ಅಂಟಿಸಿಕೊಂಡಿತು. ನಾಯಕನನ್ನು ಹೊರತು ಪಡಿಸಿ ಪೋಷಕ  ಪಾತ್ರಗಳೆಲ್ಲ ನೇಪಥ್ಯಕ್ಕೆ ಸರಿದದ್ದು ಈಗ ಇತಿಹಾಸ. ಹೀಗೆ ನಾಯಕ ನಟನನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ರೀಲು ಸುತ್ತುತ್ತಿರುವ ಕನ್ನಡ ಚಿತ್ರೋದ್ಯಮದಲ್ಲಿ  ನಾಗಶೇಖರ, ಪ್ರಕಾಶ, ಚಂದ್ರು  ಅವರಂಥ ನಿರ್ದೇಶಕರು ಪುಟ್ಟಣ್ಣ ಕಣಗಾಲ ಅವರ ವಾರಸುದಾರರಂತೆ ಕಾಣಿಸುತ್ತಾರೆ.  ಇಂಥವರ ಸಂಖ್ಯೆ ಇನ್ನಷ್ಟು ಹೆಚ್ಚಲಿ ಎನ್ನುವುದೇ ಪ್ರಜ್ಞಾವಂತ ಪ್ರೇಕ್ಷಕರ ಹಾರೈಕೆ.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ



Wednesday, November 13, 2013

ಸಚಿನ್ ತೆಂಡೂಲ್ಕರ್: ಕ್ರಿಕೆಟ್ ಲೋಕದ ಅನರ್ಘ್ಯ ರತ್ನ

                                 (ಎರಡು ದಶಕಗಳ ಕಾಲ ನಮ್ಮನ್ನು ರಂಜಿಸಿದ ಸಚಿನ್ ನಿನಗೊಂದು ಸಲಾಂ)



         ನಾಳೆ  ೨೦೦ ನೇ ಟೆಸ್ಟ್ ಆಡುತ್ತಿರುವ ಸಚಿನ್ ಗೆ ಇದು ಕೊನೆಯ ಆಟ. ಇನ್ನು ಮುಂದೆ ಕ್ರಿಕೆಟ್ ಮೈದಾನದಲ್ಲಿ ಸಚಿನ್ ಆಟವನ್ನು ನಾವು ನೋಡಲಾರೆವು. ಸತತ ೨೪ ವರ್ಷಗಳಿಂದ ಕ್ರಿಕೆಟ್ ಆಟದ ಸೊಗಸನ್ನು ನಾವುಗಳೆಲ್ಲ ಸವಿಯುವಂತೆ ಮಾಡಿದ ವ್ಯಕ್ತಿ ಈ ಸಚಿನ್ ತೆಂಡೂಲ್ಕರ್. ಸಚಿನ್ ಬಗ್ಗೆ ಬರೆಯಲು ಕುಳಿತರೆ ಹೇಳಿದ್ದನ್ನೇ ಹೇಳಿದಂತಾಗುತ್ತದೆ ಎನ್ನುವ ಭಯ ಕಾಡಲಾರಂಭಿಸುತ್ತದೆ. ಏಕೆಂದರೆ ಆತನ ಬಗ್ಗೆ ಬರೆಯದ ಮತ್ತು ಹೇಳದ ಯಾವ ಮಾಧ್ಯಮವೂ ಇಲ್ಲ. ಬರಹ ಮಾಧ್ಯಮದಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳವರೆಗೆ ಸಚಿನ್ ವ್ಯಾಪಿಸಿ ಬೆಳೆದು ನಿಂತ ರೀತಿ ನಿಜಕ್ಕೂ ವಿಸ್ಮಯ. ಎರಡು ದಶಕಗಳಿಂದ ಕಳಂಕ ರಹಿತ ಕ್ರಿಕೆಟ್ ಆಟ ಆಡುತ್ತ ಆ ಆಟಕ್ಕೊಂದು ವಿಶಿಷ್ಠ ಮೆರುಗು ತಂದ ಈ ಅದ್ಭುತ ಪ್ರತಿಭೆಯ ಆಟಗಾರನನ್ನು ಆತನ ಈ ವಿದಾಯದ ಸಂದರ್ಭ ಒಂದಿಷ್ಟು ಸ್ಮರಿಸೋಣ ಎನ್ನುವ ಕಾರಣಕ್ಕಾಗಿ ಈ ಲೇಖನ.

           ೧೯೮೯ ರಲ್ಲಿ ಸಚಿನ್ ತನ್ನ ೧೬ ನೇ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗ ನಾನಾಗ    ಬಿ. ಎ ಮೊದಲ ವರ್ಷದ ವಿದ್ಯಾರ್ಥಿ. ಆ ಮೊದಲು ಗವಾಸ್ಕರ್ ಮತ್ತು ಕಪಿಲ್ ದೇವ್ ಹೆಸರು ಕೇಳಿದ್ದೆನಾದರೂ ಕ್ರಿಕೆಟ್ ಆಟ ನೋಡಿರಲಿಲ್ಲ. ಸಚಿನ್ ಕ್ರಿಕೆಟ್ ಪ್ರಪಂಚದಲ್ಲಿ ಒಂದಾದ ಮೇಲೊಂದರಂತೆ ದಾಖಲೆ ಬರೆಯುತ್ತಿದ್ದಂತೆ ನನ್ನ ಸಮಕಾಲಿನ ಪೀಳಿಗೆಯಲ್ಲಿ ಆ ಆಟದ ಕುರಿತು ಒಂದಿಷ್ಟು ಕುತೂಹಲ ಮೂಡತೊಡಗಿತು. ಅದಾಗಲೇ ಕ್ರಿಕೆಟ್ ಆಟವನ್ನು ಆರಾಧಿಸುತ್ತಿದ್ದವರಲ್ಲಿ ಆ ಆಟದ ಬಗೆಗಿನ ಕುತೂಹಲ ಮತ್ತಷ್ಟು ಇಮ್ಮಡಿಸಿತು. ಕ್ರಿಕೆಟ್ ಆಟವನ್ನೇ ದ್ವೇಷಿಸುತ್ತಿದ್ದ ಹಿರಿಯ ಜೀವಗಳಲ್ಲಿ ಆ ಆಟವನ್ನು ನೋಡಬೇಕೆಂಬ ಆಸೆ ಮೊಳಕೆಯೊಡೆಯಿತು. ಒಂದರ್ಥದಲ್ಲಿ ಸಚಿನ್ ಈ ಎರಡು ದಶಕಗಳಲ್ಲಿ ಕ್ರಿಕೆಟ್ ಆಟವನ್ನು ಪ್ರಪಂಚದ ಮನೆ ಮತ್ತು ಮನಸ್ಸುಗಳಿಗೆ ಮುಟ್ಟಿಸಿ ಜನಪ್ರಿಯಗೊಳಿಸಿದ. ಆತನ ಕಳಂಕ ರಹಿತ ಆಟ, ಮಾನಸಿಕ ದೃಢತೆ, ವೃತ್ತಿ ಪಾವಿತ್ರ್ಯತೆ, ಆಟದ ಮೇಲಿನ ನೈಜ ಪ್ರೀತಿ ಈ ಎಲ್ಲ ಗುಣಗಳು ಆತನ ವ್ಯಕ್ತಿತ್ವವನ್ನು ಹಿಮಾಲಯದೆತ್ತರಕ್ಕೆ ತಂದು ನಿಲ್ಲಿಸಿವೆ. ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಗೆ ಸಚಿನ್ ಮಾತ್ರ ಸಾಟಿ ಎನ್ನುವ ಮಾತು ಅಕ್ಷರಶ: ನಿಜ.

ಅದು ಅದ್ಭುತ ಆಟ


            ೧೯೯೮ ಎಪ್ರಿಲ್ ೨೨ ಅದು ಶಾರ್ಜಾದ ಕ್ರಿಕೆಟ್ ಮೈದಾನ. ಅಲ್ಲಿ ಆ ದಿನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕೋಕ ಕೋಲಾ ಕಪ್ ನ ಕೊನೆಯ ಲೀಗ್ ಪಂದ್ಯದಲ್ಲಿ ಮುಖಾಮುಖಾಯಾಗಿದ್ದವು. ಆ ಹೊತ್ತಿಗಾಗಲೇ ಆಸ್ಟ್ರೇಲಿಯಾ ತಂಡ ಫೈನಲ್ ಗೆ ಅರ್ಹತೆ ಗಿಟ್ಟಿಸಿದ್ದರಿಂದ ಆ ದಿನದ ಪಂದ್ಯ ಅವರಿಗೆ ಔಪಚಾರಿಕವಾಗಿತ್ತು. ಆದರೆ ಭಾರತೀಯ ತಂಡದ ಪರಿಸ್ಥಿತಿ ತೀರ ಭಿನ್ನವಾಗಿತ್ತು. ತ್ರಿಕೋನ ಸರಣಿಯಲ್ಲಿನ ಇನ್ನೊಂದು ತಂಡವಾದ ನ್ಯೂಜಿಲೆಂಡ್ ಭಾರತಕ್ಕಿಂತ ಹೆಚ್ಚಿನ ರನ್ ರೇಟ್ ಹೊಂದಿದ್ದರಿಂದ ಭಾರತ  ಪಂದ್ಯವನ್ನು ಔಪಚಾರಿಕವಾಗಿ ತೆಗೆದುಕೊಳ್ಳುವಂತಿರಲಿಲ್ಲ. ಭಾರತ ಆ  ಪಂದ್ಯವನ್ನು ಸೋತರೂ ಅದು ೨೫೦ ಕ್ಕಿಂತ ಹೆಚ್ಚು ರನ್ ಗಳನ್ನು ಗಳಿಸಲೇ ಬೇಕಿತ್ತು. ಈ ಒಂದು ಒತ್ತಡದಲ್ಲಿ ಭಾರತ ಆಟದ ಅಂಗಳಕ್ಕಿಳಿದಾಗ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ೨೮೪ ರನ್ ಗಳ ಬೃಹತ್ ಮೊತ್ತ ಪೇರಿಸಿತು. ಭಾರತ ಇನ್ನಿಂಗ್ಸ್ ಆರಂಭಿಸಿದಾಗ ಅದರೆದುರು ಎರಡು ಆಯ್ಕೆಗಳಿದ್ದವು.  ಒಂದು ಪಂದ್ಯವನ್ನು ಗೆಲ್ಲಬೇಕು ಅಥವಾ ೨೫೪ ರನ್ ಗಳನ್ನಾದರೂ ಗಳಿಸಬೇಕು. ಪ್ರತಿ ಓವರ್ ಗೆ ಸರಾಸರಿ ೫.೪ ರನ್ ಗಳ ಗುರಿಯೊಂದಿಗೆ ಆಟ ಪ್ರಾರಂಭಿಸಿದ ಭಾರತಕ್ಕೆ ಸಚಿನ್ ತನ್ನ ಅಮೋಘ ಆಟದಿಂದ ಉತ್ತಮ ಅಡಿಪಾಯ ಒದಗಿಸಿದ. ಕ್ಯಾಸ್ಟ್ರೋವಿಚ್ ನ ಆರನೇ ಓವರ್ ನಲ್ಲಿ ಸತತವಾಗಿ ಭಾರಿಸಿದ ಎರಡು ಸಿಕ್ಸರ್ ಗಳು ಮನಮೋಹಕವಾಗಿದ್ದವು. ಸಚಿನ್ ಆಟ ಸೊಗಸಾಗಿದ್ದು ಮತ್ತು  ಆಕ್ರಮಣಕಾರಿಯಾಗಿದ್ದರೂ  ಬೇರೆ ಆಟಗಾರರಿಂದ ಬೆಂಬಲ ದೊರೆಯಲಿಲ್ಲ. ೨೯ ಓವರ್ ಗಳಾಗುವಷ್ಟರಲ್ಲಿ ಭಾರತ ೧೩೪ ರನ್ ಗಳಿಗೆ ೪ ವಿಕೆಟ್ ಗಳನ್ನು ಕಳೆದುಕೊಂಡು ಅಪಾಯದಲ್ಲಿತ್ತು. ಆ ಹೊತ್ತಿಗಾಗಲೇ ಮೈದಾನವನ್ನು ಪ್ರವೇಶಿಸಿದ ಗಾಳಿ ಕೆಲವು ನಿಮಿಷಗಳ ಕಾಲ ಆಟಕ್ಕೆ ತಡೆಯೊಡ್ಡಿತು. ಪರಿಣಾಮವಾಗಿ ೪೬ ಓವರ್ ಗಳಿಗೆ ಆಟವನ್ನು ಸೀಮಿತಗೊಳಿಸಿ ಭಾರತಕ್ಕೆ ಗೆಲ್ಲಲು ೨೭೬ ರನ್ ಗಳ ಗುರಿ ನೀಡಲಾಯಿತು ಇಲ್ಲವೇ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ೨೩೭ ರನ್ ಗಳನ್ನು ಗಳಿಸಬೇಕಿತ್ತು. ಗಾಳಿ ಶಾಂತವಾದ ನಂತರ ಮೈದಾನಕ್ಕೆ ಬಂದ ಸಚಿನ್ ಆಟ ಆಕ್ರಮಣಕಾರಿಯಾಗಿತ್ತು.  ಕೇವಲ ೧೦೯ ಎಸೆತಗಳಲ್ಲಿ ೧೪೩ ರನ್ ಗಳಿಸಿ ಆತ ಔಟಾದಾಗ ಸ್ಕೋರ್ ಬೋರ್ಡಿನಲ್ಲಿ ಭಾರತದ ಮೊತ್ತ ೨೩೭ ನ್ನು ದಾಟಿಯಾಗಿತ್ತು. ಭಾರತ ಆ ಪಂದ್ಯವನ್ನು ಸೋತರೂ ಹೆಚ್ಚಿನ ರನ್ ರೇಟ್ ಕಾರಣದಿಂದ ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿತು. ಸಚಿನ್ ಏಕಾಂಗಿಯಾಗಿ ಹೋರಾಡಿ ಭಾರತವನ್ನು ಫೈನಲ್ ನ ಹೊಸ್ತಿಲಿಗೆ  ತಂದು ನಿಲ್ಲಿಸಿದ್ದ. ಫೈನಲ್ ಪಂದ್ಯ ಎಪ್ರಿಲ್ ೨೪ ರಂದು ನಿಗದಿಯಾಗಿತ್ತು. ಆ ದಿನ ಸಚಿನ್ ತೆಂಡೂಲ್ಕರನದು ೨೫ ನೆ ಹುಟ್ಟು ಹಬ್ಬ.

            ಎಲ್ಲರೂ ಕಾತುರದಿಂದ ನಿರೀಕ್ಷಿಸುತ್ತಿದ ಎಪ್ರಿಲ್ ೨೪ ಬಂದೆ ಬಿಟ್ಟಿತು. ಅದೇ ಶಾರ್ಜಾದ  ಕ್ರಿಕೆಟ್ ಮೈದಾನ. ಮತ್ತೆ ಅದೇ ಎರಡು ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗಿದ್ದವು. ಹೊನಲು ಬೆಳಕಿನ ಪಂದ್ಯ ಆರಂಭವಾದಾಗ  ಮಧ್ಯಾಹ್ನದ ಸಮಯ. ಇಲ್ಲಿ ಭಾರತದಲ್ಲಿ ಟಿವಿ ಪರದೆಯ ಮುಂದೆ ಕುಳಿತಿದ್ದ ಕೋಟ್ಯಾಂತರ ಭಾರತೀಯರು ಭಾರತ ಗೆಲ್ಲಲೆಂದು ಪ್ರಾರ್ಥಿಸುತ್ತಿದ್ದರು. ಟಾಸ್ ಗೆದ್ದ ಭಾರತ ಆಸ್ಟ್ರೇಲಿಯಾಕ್ಕೆ ಬ್ಯಾಟಿಂಗ್ ನೀಡಿತು. ತನಗೆ ನೀಡಿದ ಆಹ್ವಾನವನ್ನು ಸರಿಯಾಗಿಯೇ ಬಳಸಿಕೊಂಡ ಆಸ್ಟ್ರೇಲಿಯಾ ೫೦ ಓವರ್ ಗಳಲ್ಲಿ ಸವಾಲಿನ ೨೭೨ ರನ್ ಗಳನ್ನು ಕಲೆಹಾಕಿ ಭಾರತಕ್ಕೆ ಗೆಲ್ಲಲು ೨೭೩ ರನ್ ಗಳ ಗುರಿ ನೀಡಿತು. ನೆನಪಿರಲಿ ೧೯೯೦ ರ ದಶಕದಲ್ಲಿ ಏಕದಿನ ಪಂದ್ಯದಲ್ಲಿ ೨೫೦ ರನ್ ಗಳಿಸುವುದೇ ಬೃಹತ್ ಮೊತ್ತವಾಗಿತ್ತು. ಅಂಥದ್ದರಲ್ಲಿ ೨೭೩ ಭಾರತಕ್ಕೆ ಸವಾಲಿನ ಮೊತ್ತವಾಗಿತ್ತು. ಓವರ್ ಗೆ ಸರಾಸರಿ ೫.೫ ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಗಿಳಿದ ಭಾರತಕ್ಕೆ ಮತ್ತೆ ಅದೇ ಸಚಿನ್ ಆಸರೆಯಾದ. ಮೊಂಗಿಯಾ ಮತ್ತು ಅಜರ್ ರೊಂದಿಗಿನ ಎರಡು ಉತ್ತಮ ಜೊತೆಯಾಟದಲ್ಲಿ ಉತ್ತಮ ರನ್ ಕಲೆಹಾಕಿ ಭದ್ರ ಅಡಿಪಾಯ ಒದಗಿಸಿದ. ಆತನ ಮೊದಲ ಐವತ್ತು ರನ್ ಗಳು ಕೇವಲ ೪೪ ಎಸೆತಗಳಲ್ಲಿ ಬಂದವು. ಅದು ಆ ಸರಣಿಯ ಅತಿ ವೇಗದ ಅರ್ಧ ಶತಕ ಎಂದು ದಾಖಲಾಯಿತು. ಅಂದಿನ ಸಚಿನ್ ಆಟದ ವೈಖರಿ ಫೈನಲ್ ಪಂದ್ಯವನ್ನು ಗೆಲ್ಲಲೇ ಬೇಕೆಂದು ನಿರ್ಧರಿಸಿದಂತಿತ್ತು. ಮತ್ತೆ ಸಚಿನ್ ಸರಣಿಯಲ್ಲಿ ಸತತ ಎರಡನೇ ಶತಕ ದಾಖಲಿಸಿದ. ೧೩೪ ರನ್ ಗಳಿಸಿ ಸಚಿನ್ ಔಟಾದಾಗ ಭಾರತದ ಮೊತ್ತ ೨೪೮. ಆಗ ಭಾರತಕ್ಕೆ ಪಂದ್ಯ ಗೆಲ್ಲಲು  ಬೇಕಾಗಿದ್ದದ್ದು ಕೇವಲ ೨೫ ರನ್ ಗಳು ಮಾತ್ರ. ಜಡೇಜಾ ಮತ್ತು ಕಾನಿಟ್ಕರ್ ಇನ್ನೂ ೯ ಎಸೆತಗಳು ಉಳಿದಿರುವಂತೆಯೇ ಜಯದ ಔಪಚಾರಿಕತೆಯನ್ನು ಪೂರೈಸಿದರು. ಶಾರ್ಜಾದ ಕ್ರೀಡಾಂಗಣದ ತುಂಬ ಭಾರತದ ತ್ರಿವರ್ಣ ಧ್ವಜ ಹಾರಾಡಿತು. ಅರ್ಹವಾಗಿಯೇ ಸಚಿನ್ ಪಂದ್ಯ ಶ್ರೇಷ್ಠ ಮತ್ತು ಸರಣಿ  ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ. ದಶಕದ ನಂತರವೂ ಅಂದಿನ ಆ ಎರಡು ಪಂದ್ಯಗಳು ಭಾರತೀಯರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿವೆ. ಅದಕ್ಕೆ ಕಾರಣ ಅಂದು ಸಚಿನ್ ನೀಡಿದ ಆ ಅದ್ಭುತ ಪ್ರದರ್ಶನ.

ಆ ದಾಖಲೆ ಸಚಿನ್ ಗಾಗಿ ಕಾಯುತ್ತಿತ್ತು


            ಏಕದಿನ ಪಂದ್ಯದಲ್ಲಿ ಮೊದಲ ದ್ವಿಶತಕ ಇದು ಸಚಿನ್ ಬರೆದ ಹೊಸ ದಾಖಲೆ. ನಮಗೆಲ್ಲ ನೆನಪಿರುವಂತೆ ೧೯೭೧ ರಿಂದ ಪ್ರಾರಂಭವಾದ ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ಗಿಂತ ಮೊದಲು ಯಾವೊಬ್ಬ ಕ್ರಿಕೆಟಿಗ ದ್ವಿಶತಕ ದಾಖಲಿಸಿರಲಿಲ್ಲ. ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಎಂದಾಕ್ಷಣ ಎಲ್ಲರಿಗೂ ನೆನಪಾಗುತ್ತಿದ್ದದ್ದು ಆಕ್ರಮಣಕಾರಿ ಆಟಕ್ಕೆ ಹೆಸರಾದ ಜಯಸೂರ್ಯ, ಆಫ್ರಿದಿ, ಗಿಲ್ ಕ್ರಿಸ್ಟ್, ಸೆಹ್ವಾಗ್ ಮಾತ್ರ. ಆದರೆ ಅಂಥದ್ದೊಂದು ದಾಖಲೆಯ ಆಟ ಆಡಲು ತಾಳ್ಮೆ, ಇಡೀ ಇನ್ನಿಂಗ್ಸ್ ಆಡುವ ದೈಹಿಕ ಸಾಮರ್ಥ್ಯ, ಸಂಯಮ ಈ ಎಲ್ಲ ಗುಣಗಳು ಬೇಕು. ಈ ಎಲ್ಲ ಗುಣಗಳು ಇಡಿಯಾಗಿ ಒಂದೇ ವ್ಯಕ್ತಿತ್ವದಲ್ಲಿರುವುದು ಅದು ಸಚಿನ್ ನಲ್ಲಿ ಮಾತ್ರ. ಫೆಬ್ರುವರಿ ೨೩, ೨೦೧೦ ರಂದು ಗ್ವಾಲಿಯರ್ ನ ರೂಪಸಿಂಗ್ ಮೈದಾನ ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಯಿತು. ಆ ದಿನ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಏಕದಿನ ಪಂದ್ಯ ಯಾರೂ ನಿರೀಕ್ಷಿಸದ ಮೈಲಿಗಲ್ಲನ್ನು ಕ್ರಿಕೆಟ್ ನ ಇತಿಹಾಸದಲ್ಲಿ ದಾಖಲಿಸಿತು. ಇನ್ನಿಂಗ್ಸ್ ನ ಕೊನೆಯ ಓವರ್ ನ ಎರಡನೇ ಚೆಂಡನ್ನು ಎದುರಿಸಿದ ಸಚಿನ್ ಒಂದು ರನ್ ಗಾಗಿ ಓಡಿದಾಗ ಇಡೀ ಕ್ರೀಡಾಂಗಣದ ತುಂಬ ರೋಮಾಂಚನದ ಕ್ಷಣವದು. ಇದು ಕನಸಿರಬಹುದೇ ಎನ್ನುವ ಅಚ್ಚರಿ ಅನೇಕರದು. ಏಕದಿನ ಕ್ರಿಕೆಟ್ ನಲ್ಲಿ ಶತಕಕ್ಕೊಂದು ಸಂಗಾತಿಯನ್ನು ಒದಗಿಸಿದ ಈ ವಾಮನ ಆ ಕ್ಷಣ ತ್ರಿವಿಕ್ರಮನಾಗಿ ಗೋಚರಿಸಿದ. ನಾಲ್ಕು ದಶಕಗಳಿಂದ ಯಾವ ಕ್ರಿಕೆಟಿಗ ಮಾಡದೆ ಇದ್ದ ಸಾಧನೆ ಅಂದು ಸಚಿನ್ ನಿಂದ ದಾಖಲಾಯಿತು. ಇಪ್ಪತ್ತು ವರ್ಷಗಳಿಂದ ಸತತ ಕ್ರಿಕೆಟ್ ಆಡುತ್ತಿರುವ ಸಚಿನ್ ಅಂದು ಇಡೀ ಇನ್ನಿಂಗ್ಸ್ ಆಡಿ ದ್ವಿಶತಕ ದಾಖಲಿಸಿದ. ಇಡೀ ಇನ್ನಿಂಗ್ಸ್ ಆಡಿದ್ದರೂ ಆತನ ಆಟ ಆಕ್ರಮಣಕಾರಿಯಾಗಿತ್ತು. ದ್ವಿಶತಕಕ್ಕಾಗಿ ಎದುರಿಸಿದ್ದು ಕೇವಲ ೧೪೭ ಎಸೆತಗಳನ್ನು ಮಾತ್ರ. ಇಂಥದ್ದೊಂದು ದಾಖಲೆ ಯಾವಾಗ ಬರೆಯುತ್ತದೆಂದು ಕ್ರಿಕೆಟ್ ಪ್ರಿಯರು ಕಾಯುತ್ತಿದ್ದರು. ಕೊನೆಗೂ ಅದು ಸಚಿನ್ ನಿಂದ ಸಾಧ್ಯವಾಯಿತು. ಏಕೆಂದರೆ ಆ ದಾಖಲೆ ಸಚಿನ್ ಗಾಗಿ ಕಾಯುತ್ತಿತ್ತು.

ಮಾನಸಿಕ ದೃಢತೆ


            ಸಚಿನ್ ಆಟದಲ್ಲಿನ ಸ್ಥಿರತೆ ನಿಜಕ್ಕೂ ಅಚ್ಚರಿಯ ಸಂಗತಿ. ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಒಬ್ಬ ಕ್ರಿಕೆಟಿಗ ನಿರಂತರವಾಗಿ ಸ್ಥಿರತೆಯನ್ನು ಕಾಪಾಡಿಕೊಂಡು ಬರುವುದು ಸಣ್ಣ ಸಂಗತಿಯಲ್ಲ. ಕ್ರಿಕೆಟ್ ಆಟದಿಂದ ದೊರೆಯುತ್ತಿರುವ ಜನಪ್ರಿಯತೆ ಮತ್ತು ಶ್ರೀಮಂತಿಕೆಯಿಂದ ಆಟಗಾರರು ಉನ್ಮತ್ತರಾಗುತ್ತಿರುವರು. ಪರಿಣಾಮವಾಗಿ ಆಟದಲ್ಲಿನ ಕನ್ಸಿಸ್ಟೆನ್ಸಿ ಯನ್ನು ಅವರು ಬೇಗನೆ ಕಳೆದುಕೊಳ್ಳುತ್ತಿರುವರು. ಆದರೆ ಸಚಿನ್ ವ್ಯಕ್ತಿತ್ವ ಹಾಗಿಲ್ಲ. ಈ ಜನಪ್ರಿಯತೆ ಮತ್ತು ಹಣ   ಆತನನ್ನು ಉನ್ಮತ್ತನನ್ನಾಗಿಸಿಲ್ಲ. ದಾಖಲೆ ಮೇಲೆ ದಾಖಲೆ ಬರೆದರೂ ಆತನ ತಲೆ ಭುಜದ ಮೇಲೇ ಇದೆ. ರೂಪಸಿಂಗ್ ಮೈದಾನದಲ್ಲಿ ದ್ವಿಶತಕದ ಆಟವಾಡಿದಾಗ ಆತ ಕುಣಿಯಲಿಲ್ಲ, ಕುಪ್ಪಳಿಸಲಿಲ್ಲ, ಪಿಚ್ ಗೆ ಬಾಗಿ ನಮಿಸಲಿಲ್ಲ, ಕ್ರೀಡಾಂಗಣದ ತುಂಬ ಓಡಾಡಲಿಲ್ಲ, ಬ್ಯಾಟಿಗೆ ಮುತ್ತಿಕ್ಕಲಿಲ್ಲ. ಪ್ರತಿ ಬಾರಿ ಅರ್ಧ ಶತಕ, ಶತಕ ದಾಖಲಿಸಿದಾಗ ಆತನ ಪ್ರತಿಕ್ರಿಯೆ ಹೇಗಿರುತ್ತಿತ್ತೋ ಆ ದಿನ ಕೂಡ ಹಾಗೆ ಇತ್ತು.

           ಹೊಗಳಿಕೆ ಮತ್ತು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಆತನದು. ಸಚಿನ್ ವೃತ್ತಿ ಬದುಕಿನ ಈ ಎರಡು ದಶಕಗಳಲ್ಲಿ ಅನೇಕರು ಅನೇಕ  ರೀತಿಯ ಟೀಕೆಗಳನ್ನು ಮಾಡಿರುವರು. ಸಚಿನ್ ಗೆ ವಯಸ್ಸಾಗಿದೆ, ಆತನ ದೇಹ ಆಟಕ್ಕೆ ಸ್ಪಂದಿಸುತ್ತಿಲ್ಲ, ಆತ ಒಳ್ಳೆಯ ಫಿನಿಶರ್ ಅಲ್ಲ, ಸಚಿನ್ ಒತ್ತಡದಲ್ಲಿ ಆಡಲಾರ, ಆತ ಕೇವಲ ದಾಖಲೆಗಾಗಿ   ಆಡುವನು ಹೀಗೆ ಸಚಿನ್ ಹಲವು ಬಗೆಯ ಟೀಕೆಗಳನ್ನು ಎದುರಿಸಿರುವನು. ಆದರೆ ಸಚಿನ್  ಯಾವ ಟೀಕೆಗಳಿಗೂ ಉತ್ತರಿಸಲಾರ. ಯಾವ ಟೀಕೆಯೂ ಆಟದ ಬಗೆಗಿನ ಆತನ ಬದ್ಧತೆಯನ್ನು ಹಾಳುಗೆಡುವಲಿಲ್ಲ. ಪ್ರತಿಯೊಂದು ಟೀಕೆ ಬಂದಾಗಲೂ ಅವನೊಬ್ಬ ಪ್ರಬುದ್ಧ ಆಟಗಾರನಾಗಿ ಬೆಳೆಯುತ್ತಲೇ ಹೋದ.

ಆ ಒಂದು ಕೊರಗು ಆತನಿಗೂ ಇತ್ತು


             ಎಷ್ಟೆಲ್ಲಾ ದಾಖಲೆಗಳನ್ನು ಬರೆದು ಏನೆಲ್ಲಾ ವಿಕ್ರಮಗಳನ್ನು ಸಾಧಿಸಿಯೂ ಸಚಿನ್ ನಲ್ಲಿ ಒಂದು ಕೊರಗಿತ್ತು. ೨೦೧೧ ರ ವಿಶ್ವಕಪ್ ಗಿಂತ ಮೊದಲು ಐದು ವಿಶ್ವಕಪ್ ಗಳಲ್ಲಿ ಆಡಿರುವ ಸಚಿನ್ ಗೆ ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗದೆ ಇರುವುದು ಒಂದು ಕೊರಗಾಗಿ ಪರಿಣಮಿಸಿತ್ತು. ಸಚಿನ್ ಆಡಿದ ಮೊದಲಿನ ಆ ಐದು ವಿಶ್ವಕಪ್ ಗಳಲ್ಲಿ ಭಾರತ ವಿಶ್ವಕಪ್ ಗೆಲ್ಲದಿದ್ದರೂ ಸಚಿನ್ ಮಾತ್ರ ವಿಶ್ವಕಪ್ ನಲ್ಲಿ ತನ್ನ ಛಾಪು ಮೂಡಿಸಿದ್ದ. ವಿಶ್ವಕಪ್ ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಸಚಿನ್ ಹೆಸರಿನಲ್ಲಿದೆ. ೨೦೦೩ ರ ವಿಶ್ವಕಪ್ ನಲ್ಲಿ ೬೭೩ ರನ್ ಕಲೆಹಾಕಿದ ಸಚಿನ್ ಒಂದೇ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಗೆ ಭಾಜನನಾದ. ಅದೇ ವರ್ಷ ವಿಶ್ವಕಪ್ ಸರಣಿ ಪುರುಷ ಪ್ರಶಸ್ತಿ ಸಚಿನ್ ಮುಡಿಗೇರಿತು. ೨೦೦೩ ರ ವಿಶ್ವಕಪ್ ನಲ್ಲಿ ಸಚಿನ್ ತನ್ನ ಅಮೋಘ ಆಟದಿಂದ ಭಾರತವನ್ನು ಫೈನಲ್  ವರೆಗೂ ಕೊಂಡೊಯ್ದ. ಆದರೆ   ಸಚಿನ್ ಕನಸು ನನಸಾದದ್ದು ೨೦೧೧ ರಲ್ಲಿ. ಅದು ಸಚಿನ್ ಪಾಲಿಗೆ ಆರನೇ ಮತ್ತು ಕೊನೆಯ ವಿಶ್ವಕಪ್ ಆಗಿತ್ತು. ಅದ್ಭುತ ಫಾರ್ಮ್ ನಲ್ಲಿದ್ದ ಭಾರತೀಯ ಕ್ರಿಕೆಟಿಗರು ಸಚಿನ್ ಗಾಗಿ ವಿಶ್ವಕಪ್ ಗೆಲ್ಲುವ ಪಣ ತೊಟ್ಟಿದ್ದರು. ವಿಶ್ವಕಪ್ ಗೆದ್ದ ಆ ದಿನ ಸಚಿನ್  ನನ್ನು ತಮ್ಮ ಹೆಗಲೆ ಮೇಲೆ ಹೊತ್ತು ಗೌರವಿಸಿದರು. ಕ್ರಿಕೆಟ್ ಲೋಕದ ಅನರ್ಘ್ಯ ರತ್ನ ಸಚಿನ್ ಗೆ ತನ್ನ ನಿವೃತ್ತಿಯ ದಿನಗಳಲ್ಲಿ ವಿಶ್ವಕಪ್ ಗೆಲ್ಲಲಿಲ್ಲ ಎನ್ನುವ ಕೊರಗು ಕಾಡದಿರಲಿ ಎನ್ನುವುದು ಅವರೆಲ್ಲರ ಬಯಕೆಯಾಗಿತ್ತು. 'ಕಳೆದ ಎರಡು ದಶಕಗಳಿಂದ ರಾಷ್ಟ್ರದ ಕ್ರಿಕೆಟ್ ಆಟದ ಕೀರ್ತಿಯನ್ನು  ಹೆಗಲೆ ಮೇಲೆ ಹೊತ್ತು ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಸಚಿನ್ ನನ್ನು ನಾವು ಈ ದಿನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಗೌರವಿಸುತ್ತಿದ್ದೇವೆ' ಸಚಿನ್ ನನ್ನು ಗೌರವಿಸಿದ ಆ ಘಳಿಗೆ ಯುವ  ಕ್ರಿಕೆಟಿಗ  ವಿರಾಟ್ ಕೊಹ್ಲಿ ಹೇಳಿದ ಈ ಮಾತು ನಿಜಕ್ಕೂ ಅರ್ಥಪೂರ್ಣ.

ಸಚಿನ್ ಗೂ ಅಂಟಿದ ಕಳಂಕ


            ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಒಬ್ಬ ವಿವಾದೀತ ಆಟಗಾರ. ಭಾರತದ ಪ್ರತಿಯೊಬ್ಬ ಕ್ರಿಕೆಟಿಗನಿಗೆ ಸಚಿನ್ ಜೊತೆ ಆಡುವುದು ಜೀವನದ ಬಹುಮುಖ್ಯ ಕನಸು. ಎದುರಾಳಿ ತಂಡ ಯಾವುದೇ ದೇಶವಾಗಿರಲಿ ಆ ಆಟಗಾರರೆಲ್ಲರೂ ಸಚಿನ್ ನನ್ನು ಗೌರವಿಸುತ್ತಾರೆ. ಮೈದಾನದಲ್ಲಿನ ಆತನ ಸಭ್ಯ ವರ್ತನೆ ವಿದೇಶಿ ಪ್ರೇಕ್ಷಕರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಆತ ಶತಕ ಸಿಡಿಸಿದಾಗ ದೇಶ, ಭಾಷೆಯ ಗಡಿಯನ್ನು ಮೀರಿ ಎಲ್ಲ ಪ್ರೇಕ್ಷಕರು ಎದ್ದು ನಿಂತು ಕರತಾಡನದ ಮೂಲಕ ಸಂಭ್ರಮಿಸುತ್ತಾರೆ. ಇಂಥ ಸಭ್ಯ ಸಚಿನ್ ಗೂ ಒಂದು ಸಾರಿ ಕಳಂಕ ಅಂಟಿಕೊಂಡಿತ್ತು. ೨೦೦೧ ರಲ್ಲಿ ದಕ್ಷಿಣ ಆಫ್ರಿಕ ಜೊತೆಗಿನ ಎರಡನೇ ಟೆಸ್ಟ್ ನಲ್ಲಿ ಸಚಿನ್ ಚೆಂಡನ್ನು ಸ್ವಚ್ಚಗೊಳಿಸಿದ್ದು ವಿವಾದಕ್ಕೆ ಕಾರಣವಾಯಿತು. ಮ್ಯಾಚ್ ರೆಫರಿ ಮೈಕ್ ಡೆನ್ನಿಸ್ ಚೆಂಡು ವಿರೂಪಗೊಳಿಸಿದ ಆರೋಪದ ಮೇಲೆ ಸಚಿನ್ ಗೆ ಒಂದು ಪಂದ್ಯದ ನಿಷೇಧ ವಿಧಿಸಿದ. ನಂತರದ ದಿನಗಳಲ್ಲಿ ಮೈಕ್ ಡೆನಿಸ್ ವಿರುದ್ಧ ಆಕ್ರೋಶದ ಮಾತುಗಳು ಕೇಳಿ ಬಂದವು. ಎಲ್ಲ ದೇಶಗಳ ಕ್ರಿಕೆಟಿಗರು ಸಚಿನ್ ಬೆಂಬಲಕ್ಕೆ ನಿಂತರು. ಕೊನೆಗೆ ಎಚ್ಚೆತ್ತುಕೊಂಡ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮೈಕ್ ಡೆನಿಸ್ ನನ್ನು ಮೂರನೆ ಪಂದ್ಯದ ಮ್ಯಾಚ್ ರೆಫರಿ ಸ್ಥಾನದಿಂದ ಕೆಳಗಿಳಿಸಿತು. ಸಚಿನ್ ತನ್ನ ನಿಷ್ಕಳಂಕ ವ್ಯಕ್ತಿತ್ವದಿಂದ ಕ್ರಿಕೆಟ್ ಆಟವನ್ನು ಗೆಲ್ಲಿಸಿದ. ಇದು ಆತನ  ಸ್ಟ್ರೆಂಗ್ತ್    ಕೂಡ ಹೌದು.

ಕ್ರಿಕೆಟ್  ಹನ್ನೊಂದು ಜನರ ಆಟ


         ಸಚಿನ್ ಶತಕವನ್ನೂ ದಾಖಲಿಸಿಯೂ ಭಾರತ ಪಂದ್ಯವನ್ನು ಸೋತಾಗ ಆತನ ಆಟದ ಕುರಿತು ಟೀಕೆಗಳು ಕೇಳಿ ಬರುತ್ತವೆ. ಕ್ರಿಕೆಟ್ ಪಂಡಿತರು ಸಚಿನ್ ಕ್ರಿಕೆಟ್ ಬದುಕು ಮುಗಿಯಿತು ಎಂದು ಷರಾ ಬರೆಯುತ್ತಾರೆ. ಸಚಿನ್ ಆಡುವುದು ದಾಖಲೆಗಾಗಿ ಎಂದು ಮಾಧ್ಯಮಗಳು ವ್ಯಂಗ್ಯವಾಡುತ್ತವೆ. ಹೀಗೆ ಟೀಕಿಸುವವರು ಕ್ರಿಕೆಟ್   ಕೇವಲ ಒಬ್ಬನ ಆಟವಲ್ಲ ಅದು ಹನ್ನೊಂದು ಜನರ ಆಟ ಎಂದು ಅರ್ಥೈಸಿಕೊಳ್ಳದಿರುವುದು ದೊಡ್ಡ ದುರಂತ. ಚೆಸ್, ಟೆನಿಸ್, ಬಾಕ್ಸಿಂಗ್ ನಂಥ ಆಟಗಳು ಒಬ್ಬನೇ ಆಟಗಾರನ ಸಾಮರ್ಥ್ಯವನ್ನು ಅವಲಂಬಿಸಿವೆ. ಆದರೆ ಕ್ರಿಕೆಟ್ ಹಾಗಲ್ಲ. ಇಲ್ಲಿ ಬ್ಯಾಟ್ಸ್ ಮನ್ ರನ್ ಗಳಿಸಬೇಕು, ಬೌಲರ್ ವಿಕೆಟ್ ಉರುಳಿಸ ಬೇಕು, ಕಿಪರ್ ವಿಕೆಟ್ ಹಿಂದೆ ಅದ್ಭುತವಾಗಿ ಕಾರ್ಯನಿರ್ವಹಿಸಬೇಕು, ಕ್ಷೇತ್ರ  ರಕ್ಷಕ  ರನ್ ಉಳಿಸಬೇಕು ಇದೆಲ್ಲಕ್ಕೂ ಮಿಗಿಲಾಗಿ ನಾಯಕ ಇಡೀ ತಂಡವನ್ನು ಜಯದತ್ತ  ಮುನ್ನಡೆಸಬೇಕು.  ಅಂದಾಗ ಮಾತ್ರ ಕ್ರಿಕೆಟ್  ನಲ್ಲಿ ಗೆಲುವು ಸಾಧ್ಯ.  ಈ ಎಲ್ಲ ಪಾತ್ರಗಳನ್ನು ನಿರ್ವಹಿಸಲೆಂದೇ ಕ್ರಿಕೆಟ್ ಆಟದಲ್ಲಿ ಹನ್ನೊಂದು ಜನ ಆಟಗಾರರಿರುವರು. ಈ ಎಲ್ಲ ಪಾತ್ರಗಳನ್ನು ಸಚಿನ್ ಒಬ್ಬನೇ ನಿರ್ವಹಿಸಲು ಸಾಧ್ಯವಿಲ್ಲ. ಹೀಗಿದ್ದೂ ಸಚಿನ್ ಅನೇಕ ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ಭಾರತಕ್ಕೆ ಜಯ ತಂದಿರುವನು. ಆಟದ ಬಗೆಗಿನ ಆತನ ವೃತ್ತಿ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಕ್ರಿಕೆಟ್ ಮೇಲಿನ ಅನನ್ಯ ಪ್ರೀತಿಯೆ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಡಲು ಸಾಧ್ಯವಾಗಿಸಿರುವುದು. ಸಚಿನ್ ಆಡುತ್ತ ಹೋದಂತೆ ದಾಖಲೆಗಳು ನಿರ್ಮಾಣವಾಗುತ್ತ ಹೋದವು. ಒಂದು ವೇಳೆ ಸಚಿನ್  ಪಂದ್ಯದಲ್ಲಿ  ಐದು ಹತ್ತು ರನ್ ಗಳಿಸಿ ಔಟಾಗುತ್ತಿದ್ದರೆ ಆತನ ಕ್ರಿಕೆಟ್ ಬದುಕು ಇವತ್ತಿನವರೆಗೂ ಮುಂದುವರಿಯುತ್ತಿತ್ತೆ?

ಕೊನೆಯ ಮಾತು 


           ಸಚಿನ್ ಮತ್ತು ಆತನ ಬಾಲ್ಯದ ಗೆಳೆಯ ಕಾಂಬ್ಳಿ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಇಬ್ಬರೂ ಪ್ರತಿಭಾನ್ವಿತ ಆಟಗಾರರು. ಆದರೆ ಕಾಂಬ್ಳಿ ಬಹುಬೇಗ ತನ್ನ ಫಾರ್ಮ್ ಕಳೆದುಕೊಂಡು ಕ್ರಿಕೆಟ್ ನಿಂದ ದೂರವಾದ. ಸಚಿನ್ ಎರಡೂವರೆ ದಶಕಗಳ ಕಾಲ  ತನ್ನ ಸ್ಥಿರತೆಯನ್ನು ಕಾಯ್ದುಕೊಂಡು ಕ್ರಿಕೆಟ್ ಆಡಿದ. ಜನಪ್ರಿಯತೆ ಮತ್ತು ಹಣ ಒಬ್ಬನ ಕ್ರಿಕೆಟ್ ಬದುಕನ್ನು ಮೊಟಕುಗೊಳಿಸಿದರೆ ಇನ್ನೊಬ್ಬ ತನ್ನ ನಿಷ್ಕಳಂಕ ಆಟದಿಂದ ಕ್ರಿಕೆಟ್ ಆಟಕ್ಕೆ ಹೊಸ ಮೆರುಗು ತಂದಿತ್ತ. ಇಪ್ಪತ್ನಾಲ್ಕು  ವರ್ಷಗಳಿಂದ ನಾವು ನೋಡುತ್ತಿರುವ ಸಚಿನ್ ವ್ಯಕ್ತಿತ್ವದಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ. ಬದಲಾಗಿರುವುದು ಕಾಲ ಮತ್ತು ಕ್ರಿಕೆಟ್ ಮಾತ್ರ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



 
       

Saturday, November 2, 2013

ದೀಪಾವಳಿ ಮತ್ತು ಸಾಂಸ್ಕೃತಿಕ ಸಂಕ್ರಮಣ

     



     









         




           
          ಇದು ಸಾಂಸ್ಕೃತಿಕ ಸಂಕ್ರಮಣದ ಕಾಲಘಟ್ಟ. ಏಕೆಂದರೆ ಆಧುನಿಕತೆ ಮತ್ತು ಜಾಗತೀಕರಣದ ಈ ಸಂದರ್ಭ ನಾವು ಜಗತ್ತಿನ ಆಗು ಹೋಗುಗಳಿಗೆ ಮುಖ ಮಾಡಿ ನಿಂತಿರುವ ಈ ಹೊತ್ತಿನಲ್ಲೇ ನಮ್ಮದೇ ನೆಲದ ಸಾಂಸ್ಕೃತಿಕ ಆಚರಣೆಗಳಾದ ಹಬ್ಬಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಅದಕ್ಕೆಂದೇ ನಾನು ಈ ಅವಧಿಯನ್ನು ಸಾಂಸ್ಕೃತಿಕ ಸಂಕ್ರಮಣದ ಕಾಲಘಟ್ಟವೆಂದು ಕರೆದಿದ್ದು. ನಿಮಗೊಂದು ಉದಾಹರಣೆ ಹೇಳುತ್ತೇನೆ ನನ್ನ ಪರಿಚಿತರ ಮಗ ಪ್ರದೀಪ ಹತ್ತನೇ ತರಗತಿಯಲ್ಲಿ ಓದುತ್ತಿರುವ ಹುಡುಗ. ಆತನನ್ನು ಮಾತನಾಡಿಸಿದಾಗ ಸೆಂಚುರಿಯನ್ ಇಂಗ್ಲಿಷ್ ಸಿನಿಮಾದ ಬಗ್ಗೆ, ರಫೆಲ್ ನಡಾಲ್ ಕುರಿತು, ಐಪಾಡ್ ಟ್ಯಾಬ್ಲೆಟ್ ವಿಷಯವಾಗಿ ಹೀಗೆ ಅನೇಕ ವಿಷಯಗಳನ್ನು ಹೇಳಿದ. ನಿಜಕ್ಕೂ ಆ ವಯಸ್ಸಿಗೆ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದ. ಆದರೆ ನಮ್ಮ ಸಂಭಾಷಣೆಯ ಕೊನೆಯಲ್ಲಿ ಆತ ಕೇಳಿದ ಪ್ರಶ್ನೆ ನನ್ನನ್ನು ಆ ಕ್ಷಣಕ್ಕೆ ಒಂದಿಷ್ಟು ವಿವೇಚಿಸುವಂತೆ ಮಾಡಿತು. ಆತ ಕೇಳಿದ್ದಿಷ್ಟೆ ಗಾಂಧಿ ಜಯಂತಿ ಪ್ರತಿವರ್ಷ ಅಕ್ಟೋಬರ್ ಎರಡನೇ ತಾರಿಖಿಗೆ ಆಚರಿಸುವಂತೆ ಈ ದೀಪಾವಳಿ ಹಬ್ಬವನ್ನು ಪ್ರತಿವರ್ಷ ಅದೇ ತಿಂಗಳು ಮತ್ತು ತಾರಿಖಿಗೆ ಏಕೆ ಆಚರಿಸುವುದಿಲ್ಲ? ಜಗತ್ತಿನ ಅನೇಕ ವಿಷಯಗಳನ್ನು ತಿಳಿದುಕೊಂಡಿರುವ  ಮಗು ತನ್ನ ನೆಲದ ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿದುಕೊಂಡಿಲ್ಲವಲ್ಲ ಎಂದು ಅಚ್ಚರಿಯ ಜೊತೆ ನನ್ನಲ್ಲಿ ಬೇಸರವೂ ಮೂಡಿತು. ಇಲ್ಲಿ ಆ ತಪ್ಪು ಹುಡುಗನದಲ್ಲ. ನೆಲದ ಸಾಂಸ್ಕೃತಿಕ ಮಹತ್ವ ಮತ್ತು ಹಿನ್ನೆಲೆಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದಾಟಿಸುವ ಕೆಲಸವನ್ನು ಮನೆಯ ಹಿರಿಯರು, ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಮಾಜದಲ್ಲಿನ ಮಾಧ್ಯಮಗಳು ಮಾಡಬೇಕು. ಆದರೆ ಈ ದಿನಗಳಲ್ಲಿ ರೋಚಕ ಸುದ್ದಿಗಳತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು ಈ ಸಾಂಸ್ಕೃತಿಕ ಮಹತ್ವವನ್ನು ದಾಟಿಸುವ ಕೆಲಸ ಮಾಡುತ್ತಿಲ್ಲ.

           ಈಗ ನಾನು ಮತ್ತೆ ಪ್ರದೀಪ ಕೇಳಿದ ಪ್ರಶ್ನೆಗೆ  ಬರುತ್ತೇನೆ ದೀಪಾವಳಿ ನಾವು ಆಚರಿಸುವ ಹಬ್ಬಗಳಲ್ಲೇ ಅತ್ಯಂತ ಮಹತ್ವದ ಹಬ್ಬ. ಈ ಹಬ್ಬವನ್ನು ಪ್ರತಿವರ್ಷ ಆಶ್ವಿಜಮಾಸ ಕೃಷ್ಣ ಪಕ್ಷದ ಚತುರ್ದಶಿ, ಅಮವಾಸೆ ಹಾಗೂ ಕಾರ್ತಿಕ ಮಾಸ ಶುಕ್ಲ ಪಕ್ಷದ ಪಾಡ್ಯ ಈ ಮೂರು ದಿನಗಳಂದು ಆಚರಿಸಲಾಗುತ್ತದೆ. ದೀಪಾವಳಿಯ ಆಚರಣೆ ಮುಖ್ಯವಾಗಿ ಎರಡು ಪೌರಾಣಿಕ ಘಟನೆಗಳಿಗೆ ಸಂಬಂಧಿಸಿದೆ. ದೀಪಾವಳಿಯ ಮೊದಲ ದಿನ ನರಕ ಚತುರ್ದಶಿಯನ್ನು ಶ್ರೀಕೃಷ್ಣ ನರಕಾಸುರನನ್ನು ಕೊಂದ ದಿನವೆಂದು ಹೇಳುವರು. ಕೊನೆಯ ದಿನ ಬಲಿಪಾಡ್ಯಮಿಯನ್ನು ಬಲಿಚಕ್ರವರ್ತಿ ಭಗವಾನ ವಿಷ್ಣುವಿಗೆ ಸರ್ವಸ್ವವನ್ನೂ ಸಮರ್ಪಿಸಿದ ದಿನ ಎಂದು ಹೇಳಲಾಗುತ್ತದೆ. ಹೀಗೆ ದೀಪಾವಳಿ ಹಬ್ಬದ ಆಚರಣೆಗೆ ಪೌರಾಣಿಕ ಹಿನ್ನೆಲೆಯಿದೆ.

ನರಕ ಚತುರ್ದಶಿ 


          ನರಕ ಚತುರ್ದಶಿಯನ್ನು ಆಶ್ವಿಜ ಮಾಸ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದೆ ಒಂದು ಪೌರಾಣಿಕ ಕಥೆಯೇ ಇದೆ. ನರಕಾಸುರನೆನ್ನುವ ರಾಕ್ಷಸನ ಕಥೆಯದು. ವಿಷ್ಣು ಮತ್ತು ಭೂದೇವಿಯ ಸಮಾಗಮದಿಂದ ಹುಟ್ಟಿದ ಮಗುವೇ ಈ ನರಕಾಸುರನೆನ್ನುವ ರಾಕ್ಷಸ. ಈ ನರಕಾಸುರ ತಪಸ್ಸು ಮಾಡಿ ತನಗೆ ತನ್ನ ತಾಯಿಯಿಂದ ಮಾತ್ರವಲ್ಲದೆ ಬೇರೆಯಾರಿಂದಲೂ ಸಾವು ಬರಬಾರದು ಎಂದು ಬೃಹ್ಮನಿಂದ ವರ ಪಡೆಯುತ್ತಾನೆ. ಹೀಗೆ ಬೃಹ್ಮನ   ಕೃಪೆಗೆ  ಒಳಗಾದ ನರಕಾಸುರ ಭೂಮಂಡಲವನ್ನು ಮಾತ್ರವಲ್ಲದೆ ದೇವಾನುದೇವತೆಗಳನ್ನೂ ತನ್ನ ಅಂಕಿತದಲ್ಲಿಟ್ಟು ಕೊಳ್ಳುತ್ತಾನೆ. ಅವನ ಉಪಟಳ ಹೆಚ್ಚಿದಾಗ ದೇವತೆಗಳೆಲ್ಲರೂ ವಿಷ್ಣುವಿನ ಮೊರೆ ಹೋಗುತ್ತಾರೆ. ಅದೇ ಅವಧಿಯಲ್ಲಿ ವಿಷ್ಣು ಭೂಮಿಯ ಮೇಲಿನ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಶ್ರೀಕೃಷ್ಣನ ರೂಪದಲ್ಲಿ ಅವತರಿಸಿರುತ್ತಾನೆ. ಒಮ್ಮೆ ಕೃಷ್ಣ ತನ್ನ ಪ್ರೀತಿಯ ಮಡದಿ ಸತ್ಯಭಾಮೆಯೊಂದಿಗೆ ವಿಹರಿಸುತ್ತಿರುವಾಗ ನರಕಾಸುರ ದಾಳಿ ಮಾಡುತ್ತಾನೆ. ಇಲ್ಲಿ ಗಮನಿಸ  ಬೇಕಾದ ಸಂಗತಿ ಎಂದರೆ ಸತ್ಯಭಾಮೆ ಭೂದೇವಿಯ ಆಶೀರ್ವಾದದಿಂದ ಹುಟ್ಟಿರುವುದರಿಂದ ಅವಳು ಒಂದರ್ಥದಲ್ಲಿ ನರಕಾಸುರನಿಗೆ  ತಾಯಿ ಇದ್ದಂತೆ. ಈ ವಿಷಯ ತಿಳಿದಿದ್ದ ಕೃಷ್ಣ ಸತ್ಯಭಾಮೆಗೆ ತನ್ನ ಸುದರ್ಶನ ಚಕ್ರವನ್ನು ಕೊಟ್ಟು ನರಕಾಸುರನನ್ನು ಸಂಹರಿಸುವಂತೆ ಹೇಳುತ್ತಾನೆ. ಕೊನೆಗೆ ನರಕಾಸುರ ಸಂಹಾರದಿಂದ ಭೂಲೋಕ ಮತ್ತು ದೇವಲೋಕಗಳೆರಡೂ ಅಸುರನ ದೌರ್ಜನ್ಯದಿಂದ ಮುಕ್ತಿ ಹೊಂದುತ್ತವೆ. ನರಕಾಸುರನನ್ನು ಸಂಹರಿಸಿದ ನೆನಪಿಗಾಗಿ ನರಕ ಚತುರ್ದಶಿಯನ್ನು ಆಚರಿಸಲಾಗುವುದು. ಆ ದಿನ ಮನೆಯನ್ನು ದೀಪಗಳಿಂದ ಶೃಂಗರಿಸುವುದರ ಅರ್ಥ ಕತ್ತಲೆ ಕಳೆದು ಬೆಳಕಿನಡೆ ನಡೆಯುವುದು ಎಂದು.

ಬಲಿಪಾಡ್ಯಮಿ 


        ಬಲಿಪಾಡ್ಯಮಿ ಹಬ್ಬ ಕೂಡ ದುಷ್ಟತನವನ್ನು ಕಳೆದುಕೊಂಡು ಸನ್ಮಾರ್ಗದೆಡೆ ನಡೆಯುವುದರ ಸಂಕೇತ. ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದ ಮಹಾ ವಿಷ್ಣು ಭಕ್ತ. ಆತನ ಮಗನೇ ವಿರೋಚನ. ವಿರೋಚನನ ಮಗನೇ ಬಲಿಚಕ್ರವರ್ತಿ. ಬಲಿಚಕ್ರವರ್ತಿ ಸಹ ತನ್ನ ತಾತ ಪ್ರಹ್ಲಾದನಂತೆ ವಿಷ್ಣು ಭಕ್ತನಾಗಿದ್ದ. ಆದರೆ ಅಸುರರ ವಂಶದಲ್ಲಿ ಹುಟ್ಟಿದ್ದರಿಂದ ತನ್ನ ಹಿಂಸಾ ಪ್ರವೃತ್ತಿಯನ್ನು ಬಿಟ್ಟಿರಲಿಲ್ಲ. ಬಲಿಚಕ್ರವರ್ತಿಯ ರಾಜ್ಯ ಸುಭಿಕ್ಷವಾಗಿತ್ತು. ಆದರೆ ಈತ ಋಷಿ ಮುನಿಗಳ ತಪೋಭಂಗ ಮಾಡುವುದು, ಯಜ್ಞ ಯಾಗಾದಿಗಳಿಗೆ ಅಡ್ಡಿಪಡಿಸುವುದು ಮಾಡುತ್ತಿದ್ದ. ಈತನ ಉಪಟಳ ಹೆಚ್ಚಾದಾಗ ಋಷಿ ಮುನಿಗಳೆಲ್ಲ ವಿಷ್ಣುವಿನ ಮೊರೆ ಹೋಗುತ್ತಾರೆ. ಇದೇ ಸಮಯದಲ್ಲಿ ಬಲಿಚಕ್ರವರ್ತಿಯು ಅಶ್ವಮೇಧ ಯಾಗವನ್ನು ಮಾಡಲು ಪ್ರಾರಂಭಿಸುವನು. ಈ ಯಾಗ ಮಾಡುವ ವೇಳೆ ಯಾರೇ ಬಂದು ಏನನ್ನೇ ಕೇಳಿದರೂ ಯಾರನ್ನೂ ಬರಿಗೈಯಿಂದ ಕಳುಹಿಸಬಾರದೆಂದು ನಿರ್ಧರಿಸುತ್ತಾನೆ. ವಿಷ್ಣು ಬಲಿಯನ್ನು ಸಂಹರಿಸಲು ಇದೇ ತಕ್ಕ ಸಮಯವೆಂದು ಅರಿತು ಯಾಗದ ಸ್ಥಳಕ್ಕೆ ಬ್ರಾಹ್ಮಣ ಬಾಲಕನ ವೇಷದಲ್ಲಿ ಹೋಗಿ ತನಗೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ದಾನವಾಗಿ ಕೊಡುವಂತೆ ಕೇಳುತ್ತಾನೆ. ಆಗ ಬಲಿಚಕ್ರವರ್ತಿ ಒಪ್ಪಿಕೊಳ್ಳಲು ವಿಷ್ಣು ತ್ರಿವಿಕ್ರಮನಾಗಿ ಒಂದು ಹೆಜ್ಜೆಯನ್ನು ಭೂಮಿಯ  ಮೇಲೂ ಇನ್ನೊಂದು ಹೆಜ್ಜೆಯನ್ನು ಆಕಾಶದ ಮೇಲೂ ಇಡುತ್ತಾನೆ. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಬಲಿಯನ್ನು ಕೇಳಿದಾಗ ಆಗ ಆತ ತನ್ನ ಮೇಲೆ ಎಂದು ಹೇಳಲು ವಿಷ್ಣು ತನ್ನ ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ತಳ್ಳುವನು. ಆದರೆ ಬಲಿಚಕ್ರವರ್ತಿಯ ವಿಷ್ಣು ಭಕ್ತಿಯನ್ನು ಮೆಚ್ಚಿ ಅವನಿಗೆ ವಿಷ್ಣು ಪ್ರತಿವರ್ಷ ಆಶ್ವಿಜ ಮಾಸದಲ್ಲಿ ಮೂರು ದಿನಗಳ ಕಾಲ ಪೂಜೆಗೊಳ್ಳಲು ಭೂಲೋಕಕ್ಕೆ ಬರಬಹುದೆನ್ನುವ ಒಂದು ವರವನ್ನು ಕೊಡುವನು. ಆ ವರದ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರನ ಪೂಜೆ ಮಾಡುವರು.

ದೀಪಾವಳಿ ಮತ್ತು ಧಾರ್ಮಿಕ ಬೆಸುಗೆ


              ದೀಪಾವಳಿ ಇದು ಕೇವಲ ಹಿಂದೂ ಧರ್ಮದವರು ಮಾತ್ರ ಆಚರಿಸುವ ಹಬ್ಬವಲ್ಲ. ಇದನ್ನು ಸಿಖ್, ಜೈನ ಮತ್ತು ಬೌದ್ಧ ಧರ್ಮಗಳಲ್ಲೂ ಆಚರಿಸುವರು. ಸಿಖ್ ಧರ್ಮಿಯರಲ್ಲಿ ದೀಪಾವಳಿ ಹಬ್ಬವನ್ನು ಸಿಖ್ ರ ಆರನೇ ಗುರು ಹರಗೋಬಿಂದ ಸಿಂಗ್ ಗ್ವಾಲಿಯರ್ ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಆಚರಿಸುವರು. ದೀಪಾವಳಿ ಜೈನ ಧರ್ಮದಲ್ಲೂ ತನ್ನ ಮಹತ್ವವನ್ನು ಪಡೆದು ಕೊಂಡಿದೆ. ಜೈನಧರ್ಮದ ಕಡೆಯ ತೀರ್ಥಂಕರ ಮಾಹಾವೀರನು ಕಾರ್ತಿಕ ಚತುರ್ದಶಿಯಂದು ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ದೀಪಾವಳಿಯನ್ನು ಆಚರಿಸುವರು.

ಸಾಂಸ್ಕೃತಿಕ ಸಂಕ್ರಮಣಕ್ಕೆ ಕಾರಣ 


       ಇವತ್ತು ದಟ್ಟವಾಗಿ ಆವರಿಸಿರುವ ಸಾಂಸ್ಕೃತಿಕ ಸಂಕ್ರಮಣಕ್ಕೆ ಮೂಲ ಕಾರಣವೇನೆಂದು  ಹುಡುಕಿಕೊಂಡು  ಹೊರಟಾಗ ನಾವು ಗುರುತಿಸುವುದು ಎರಡು ಕಾರಣಗಳನ್ನು. ಒಂದು ಮನೋರಂಜನಾ ಮಾಧ್ಯಮಗಳು ಮತ್ತು ಎರಡನೆಯದು ಬೆಳೆಯುತ್ತಿರುವ ನಗರೀಕರಣ. ದಿನದ ೨೪ ಗಂಟೆಗಳ ಕಾಲ ಅವ್ಯಾಹತವಾಗಿ ಮನೋರಂಜನೆಯನ್ನು ಒದಗಿಸುತ್ತಿರುವ ಈ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾಂಸ್ಕೃತಿಕ ಹಿನ್ನೆಡೆಯನ್ನು ಸೃಷ್ಟಿಸಿವೆ. ಈ ಮಾಧ್ಯಮಗಳ ಪ್ರಭಾವ ಮತ್ತು ಆಕರ್ಷಣೆ  ಈ ದಿನಗಳಲ್ಲಿ ಎಷ್ಟೊಂದು ವ್ಯಾಪಕವಾಗಿದೆ ಎಂದರೆ ಜನರು ಹಬ್ಬಗಳ ಆಚರಣೆಯ ಬದಲು ಆ ದಿನದಂದು ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುವ ಹೊಸ ಹೊಸ ಸಿನಿಮಾಗಳು ಮತ್ತು ಹಾಸ್ಯ ಸನ್ನಿವೇಶಗಳನ್ನು ನೋಡಿ ಸಂಭ್ರಮಿಸುತ್ತಿರುವರು. ಹೀಗೆ ಹಬ್ಬಗಳಂಥ ಸಾಂಸ್ಕೃತಿಕ ಆಚರಣೆಗಳನ್ನು ಮೂಲೆಗುಂಪಾಗಿಸುತ್ತಿರುವ ಎಲೆಕ್ಟ್ರಾನಿಕ್ ಮಾಧ್ಯಮಗಳು ಒಂದು ಸಂಸ್ಕೃತಿಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಪರಿಚಯಿಸುವ ಮತ್ತು ದಾಟಿಸುವ ಕೆಲಸ ಮಾಡುತ್ತಿಲ್ಲ.

        ಇನ್ನು ಎರಡನೇ ಕಾರಣವೆಂದು ಗುರುತಿಸುತ್ತಿರುವ ನಗರೀಕರಣ ಸಮಾಜದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ನಗರ ಬದುಕಿನ ಯಾಂತ್ರಿಕತೆ ಮತ್ತು ಒತ್ತಡದ ಬದುಕಿನಿಂದಾಗಿ ಜನರಿಗೆ ತಮ್ಮ ಸಾಂಸ್ಕೃತಿಕ ಆಚರಣೆಗಳನ್ನು ಕಾಯ್ದುಕೊಳ್ಳುವಷ್ಟು ವ್ಯವಧಾನ ಇಲ್ಲವಾಗಿದೆ. ಜೊತೆಗೆ ಅವರೆಲ್ಲ ತಮ್ಮ ನಂತರದ ಪೀಳಿಗೆಯನ್ನು ಈ ಜಾಗತೀಕರಣಕ್ಕೆ ಮುಖಮಾಡಿ ನಿಲ್ಲಿಸುವ ಧಾವಂತದಲ್ಲಿರುವರು. ಇಂಥದ್ದೊಂದು ಧಾವಂತ ಮತ್ತು ಸಮಯದ ಅಭಾವದಿಂದಾಗಿ ಹಬ್ಬಗಳು ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ಆದ್ದರಿಂದ ಇಂಥದ್ದೊಂದು ಸಾಂಸ್ಕೃತಿಕ ಸಂಕ್ರಮಣದಿಂದ ಹೊರಬರುವ ಕೆಲಸ ಇವತ್ತಿನ ತುರ್ತು ಅಗತ್ಯವಾಗಿದೆ. ಒಂದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದೆ  ಅಲ್ಲವೇ ಮತ್ತೊಂದು ಹೊಸ ಸಂಸ್ಕೃತಿಯ ಉಗಮಕ್ಕೆ ಕಾರಣವಾಗುವುದು?

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ