Tuesday, May 4, 2021

ನಾತಿ ಚರಾಮಿ (ಕಥೆ)

                                             
 


(ಏಪ್ರಿಲ್ ೨೦೨೧ ರ 'ಮಯೂರ' ಪತ್ರಿಕೆಯಲ್ಲಿ ಪ್ರಕಟ)

     ಈಗೀಗ ಪ್ರಭಂಜನನಿಗೆ ತನ್ನ ಮೇಲೆ ಆಸಕ್ತಿ ಕಡಿಮೆಯಾಗುತ್ತಿದ್ದು ಮತ್ತು ಅವನಿಗೆ ಹೀಗಾಗುತ್ತಿರುವುದಕ್ಕೆ ಬೇರೆ ಹೆಣ್ಣಿನ ಸಾಂಗತ್ಯವೇನಾದರೂ ಕಾರಣವಾಗಿರಬಹುದೇ ಎನ್ನುವ ಸಣ್ಣ ಅನುಮಾನವೊಂದು ಮನಸ್ಸಿನಲ್ಲಿ ಸುಳಿದು ಕ್ರಮೇಣ ಅದು ದೊಡ್ಡದಾಗುತ್ತ ಇಡೀ ಕೋಣೆಯನ್ನು ವ್ಯಾಪಿಸಿ ತನ್ನೆದುರು ಭೂತಾಕಾರವಾಗಿ ಬೆಳೆದು ನಿಂತಂತೆ ಭಾಸವಾದಾಗ ಒಂದು ಕ್ಷಣ ವಸುಮತಿಯ ದೇಹ ಭಯದಿಂದ ಕಂಪಿಸಿ ಆ ಕೊರೆಯುವ ಚಳಿಯಲ್ಲೂ ಹಣೆ ಮತ್ತು ಕುತ್ತಿಗೆಯ ಸುತ್ತ ಬೆವರೊಡೆದು ನಿಧಾನವಾಗಿ ಹರಿಯುತ್ತ ಎದೆಯ ಸೀಳನ್ನು ಹಾಯ್ದು ತೊಟ್ಟಿದ್ದ ಬ್ಲೌಜಿನೊಳಗೆ ಇಂಗಲಾರಂಭಿಸಿತು. ಅಂಥದ್ದೊಂದು ಅನುಮಾನ ಮನಸ್ಸಿನಲ್ಲಿ ಸುಳಿದದ್ದೆ ಕುಳಿತಿದ್ದ ವಸುಮತಿ ಧಡಕ್ಕನೆ ಮಂಚದಿಂದೆದ್ದು ಹತ್ತಿರದಲ್ಲಿರುವ ಅಲ್ಮೆರಾಕ್ಕೆ ಅಂಟಿಸಿದ್ದ ಆಳೆತ್ತರದ ನಿಲುವುಗನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನೇ ದಿಟ್ಟಿಸಿ ನೋಡತೊಡಗಿದಳು. ವಿರಳವಾಗುತ್ತಿರುವ ತಲೆಗೂದಲಿನಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಳ್ಳಿರೇಖೆಯಂಥ ಎಳೆಗಳು, ಕಣ್ಣಿನ ಕೆಳಗೆ ಕಟ್ಟಿಕೊಳ್ಳುತ್ತಿರುವ ವರ್ತುಲಾಕಾರದ ಕಪ್ಪು, ಕ್ಷಿಣಿಸುತ್ತಿರುವ ಮುಖದ ಮೇಲಿನ ಕಳೆ, ಒಂದೆರಡು ಹಲ್ಲುಗಳುದುರಿ ಅಸ್ಪಷ್ಟವಾಗಿ ಗೋಚರಿಸುತ್ತಿರುವ ಬಲ ಕೆನ್ನೆಯ ಮೇಲಿನ ಕುಳಿ, ಬಿರಿದ ತುಟಿಗಳು, ಸಡಿಲಾಗುತ್ತಿರುವ ಕುತ್ತಿಗೆ ಮತ್ತು ತೋಳಿನ ಸುತ್ತಲಿನ ಚರ್ಮ, ಮಡಿಕೆ ಬೀಳುತ್ತಿರುವ ಹೊಟ್ಟೆ, ಸೊಂಟದ ಸುತ್ತಲೂ ತುಂಬಿಕೊಳ್ಳುತ್ತಿರುವ ಬೊಜ್ಜು ಒಂದುಕ್ಷಣದ ಮಟ್ಟಿಗೆ ವಸುಮತಿಯ ಮನಸ್ಸಿನಲ್ಲಿ ತಾನು ನೋಡುತ್ತಿರುವುದು ಬೇರೆ ಯಾರದೋ ಪ್ರತಿಬಿಂಬ ಎನ್ನುವ ಭಾವವೊಂದು ಸುಳಿದು ಆ ಭಾವವೇ ಶಾಶ್ವತವಾಗಿರಲಿ ಎಂದೆನಿಸಿತು. ಹಾಗೆ ಕನ್ನಡಿಯಲ್ಲಿನ ತನ್ನ ಪ್ರತಿಬಿಂಬವನ್ನು ದಿಟ್ಟಿಸಿ ನೋಡುತ್ತ ನಿಂತವಳಿಗೆ ಪ್ರಭಂಜನ ಮಾತ್ರವಲ್ಲ ಪ್ರಪಂಚದಲ್ಲಿನ ಯಾವ ಗಂಡಸನ್ನೂ ಆಕರ್ಷಿಸುವ ಸೌಂದರ್ಯ ಇನ್ನು ತನ್ನ ಶರೀರಕ್ಕಿಲ್ಲ ಎಂದೆನಿಸಿ ಅಧೀರಳಾದಳು. ದಾಂಪತ್ಯದ ಬದುಕಿನಲ್ಲಿ ‘ಶಯನೇಶು ರಂಭಾ’ ಎನ್ನುವ ಸೂಕ್ತಿಗೆ ತಾನಿನ್ನು ಹೊರತಾದೆ ಎನ್ನುವ ಭಾವವೇ ಅವಳನ್ನು ಆ ಕ್ಷಣಕ್ಕೆ ಮುತ್ತಿನಿಂತು ಒಂದುರೀತಿ ಶೂನ್ಯ ಆವರಿಸಿದಂತಾಗಿ ಬದುಕಿನ ಬಗ್ಗೆಯೇ ಜಿಗುಪ್ಸೆ ಮೂಡಲಾರಂಭಿಸಿತು.

ವಸುಮತಿಯ ಮನಸ್ಸಿನಲ್ಲಿ ಪ್ರಭಂಜನನ ಬಗ್ಗೆ ಇಂಥದ್ದೊಂದು ಅನುಮಾನ ಮೊಳಕೆಯೊಡೆಯಲು ಕೆಲವು ದಿನಗಳ ಹಿಂದೆ ಆ ದಿನ ರಾತ್ರಿ ಮಲಗುವಾಗ ನಡೆದ ಘಟನೆಯೇ ಕಾರಣವಾಗಿತ್ತು. ನಡೆದದ್ದಿಷ್ಟು- ಎಂದಿನಂತೆ ರಾತ್ರಿ ಊಟದ ನಂತರ ಅಡುಗೆ ಮನೆಯಲ್ಲಿನ ದೀಪಗಳನ್ನಾರಿಸಿ ಬೆಡ್‍ರೂಂಗೆ ಬಂದವಳತ್ತ ಗಮನಕೊಡದೆ ಕೈಯಲ್ಲೊಂದು ಪುಸ್ತಕ ಹಿಡಿದು ಪ್ರಭಂಜನ ಓದುತ್ತ ಕುಳಿತಿದ್ದ. ಈ ಮೊದಲಾದರೆ ಕೈಯಲ್ಲಿ ನೆಪ ಮಾತ್ರಕ್ಕೆ ಪುಸ್ತಕ ಹಿಡಿದು ಕೂಡುತ್ತಿದ್ದವನು ವಸುಮತಿ ಬೆಡ್‍ರೂಂ ಒಳಗೆ ಕಾಲಿಟ್ಟಿದ್ದೆ ಕೈಯಲ್ಲಿನ ಪುಸ್ತಕವನ್ನು ಟೇಬಲ್ ಮೇಲೆ ಒಗೆದು ಅವಳನ್ನು ಎತ್ತಿ ಮಂಚದ ಮೇಲೆ ಮಲಗಿಸಿ ಇಡಿಯಾಗಿ ಆಕ್ರಮಿಸುತ್ತಿದ್ದ. ದೇಹದೊಂದಿಗೆ ದೇಹ ಬೆಸೆದು ತಮ್ಮಿಬ್ಬರದೂ ಒಂದೇ ದೇಹ ಮತ್ತು ಆತ್ಮವೆಂಬಂತೆ ತಣಿದು ಒಬ್ಬರನ್ನೊಬ್ಬರು ತಣಿಸಿ ನಿದ್ದೆಗೆ ಜಾರುವಷ್ಟರಲ್ಲಿ ಮಧ್ಯರಾತ್ರಿಯಾಗಿರುತ್ತಿತ್ತು. ಆದರೆ ಆ ದಿನ ವಸುಮತಿ ಕೋಣೆಯೊಳಗೆ ಬಂದಿದ್ದನ್ನು ನೋಡಿಯೂ ನೋಡದವನಂತೆ ಓದುತ್ತಿರುವ ಪುಸ್ತಕದಲ್ಲಿ ತನ್ನನ್ನು ತಲ್ಲೀನಗೊಳಿಸಿಕೊಂಡವನು ಈ ಇಡೀ ಭೂಮಂಡಲದಲ್ಲಿ ಆ ಪುಸ್ತಕವೊಂದನ್ನು ಹೊರತುಪಡಿಸಿ ತನಗೆ ಯಾವ ಬಾಹ್ಯ ಸಂಪರ್ಕವೂ ಇಲ್ಲವೇನೋ ಎನ್ನುವಂತೆ ಮುಗುಮ್ಮಾಗಿ ಕುಳಿತದ್ದು ವಸುಮತಿಯಲ್ಲಿ ಕೋಪಕ್ಕೆ ಕಾರಣವಾಗಿ ಆ ಕ್ಷಣಕ್ಕೆ ತಾನು ಹೆಣ್ಣೆಂಬ ಸಂಕೋಚವನ್ನು ಬಿಟ್ಟು ಅವನನ್ನು ಕೇಳಿದ್ದಳು ‘ಪ್ರಭ್ ನಿಮಗೆ ನೆನಪಿದೆಯಾ ನಾವಿಬ್ಬರೂ ಸೇರಿ ಎಷ್ಟು ದಿನಗಳಾಯ್ತು ಅಂತ’. ವಸುಮತಿಯ ಪ್ರಶ್ನೆಗೆ ಯಾವ ಅಳುಕು ಅನುಮಾನವಿಲ್ಲದೆ ಪ್ರಭಂಜನ ಉತ್ತರಿಸಿದ್ದ ‘ವಸು ಇಪ್ಪತ್ತು ವರ್ಷಗಳಿಂದ ಇದೇ ಮನೆಯಲ್ಲಿ ಒಟ್ಟಾಗಿ ಬಾಳ್ತಿದ್ದಿವಿ ಇದೇನು ಹೊಸದಾಗಿ ಕೇಳ್ತಿದ್ದಿ’. ಪ್ರಭಂಜನನ ಮಾತು ತನ್ನ ಪ್ರಶ್ನೆಗೆ ಉತ್ತರವೋ ಇಲ್ಲ ಅವನೇ ತನ್ನನ್ನು ಪ್ರಶ್ನಿಸುತ್ತಿರುವನೋ ಎನ್ನುವ ಗೊಂದಲಕ್ಕೊಳಗಾದ ವಸುಮತಿಗೆ ಪ್ರಭಂಜನನ ನಿರ್ಲಿಪ್ತತೆ ಅರಿವಾಗಲು ಕೆಲವು ಕ್ಷಣಗಳೇ ಬೇಕಾದವು. ‘ಪ್ರಭ್ ನನ್ನ ಮಾತಿನ ಅರ್ಥ ನಾವಿಬ್ಬರೂ ಒಟ್ಟಿಗೆ ಸೇರಿ ಐ ಮೀನ್ ಇಂಟರ್‍ಕೋರ್ಸಿಗೆ ಒಳಗಾಗಿ’ ಈ ಸಲ ವಸುಮತಿ ಸಂಕೋಚವನ್ನು ಮುರಿದು ನೇರವಾಗಿಯೇ ಪ್ರಶ್ನಿಸಿದ್ದಳು. ವಸುಮತಿಯ ನೇರವಾದ ಆಕ್ರಮಣಕ್ಕೆ ಪ್ರಭಂಜನನ ನಿರುತ್ಸಾಹ ಮತ್ತು ನಿರುತ್ತರವೇ ಪ್ರತಿಕ್ರಿಯೆಯಾಗಿತ್ತು. ಪ್ರಭಂಜನನ ವರ್ತನೆಯಿಂದ ಆ ರಾತ್ರಿ ವಸುಮತಿಗೆ ಭವಿಷ್ಯ ಅಂಧಕಾರದಲ್ಲಿ ಮುಳುಗಿದಂತಾಗಿ ನಿದ್ದೆ ಹತ್ತಿರ ಸುಳಿಯದೆ ಅವಳ ಮನಸ್ಸು ಒಂದುರೀತಿಯ ಕ್ಷೋಭೆಯಿಂದ ನರಳಿತು. 

* * *

ನಗರದ ಅನುದಾನಿತ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿರುವ ಪ್ರಭಂಜನ ಆಚಾರ್ಯ ಇಪ್ಪತ್ತು ವರ್ಷಗಳ ಹಿಂದೆ ಅದೇ ಆಗ ನೌಕರಿಗೆ ಸೇರಿದ್ದ ಆ ಆರಂಭದ ದಿನಗಳಲ್ಲಿ ಕಾಲೇಜಿನ ಕ್ಯಾಂಪಸ್‍ನಲ್ಲಿದ್ದ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಅಕೌಂಟ್ ತೆರೆಯಲೆಂದು ಹೋದವನು ಅಲ್ಲಿ ಕ್ಯಾಶ್ ಕೌಂಟರ್‍ನಲ್ಲಿದ್ದ ವಸುಮತಿಗೆ ಮನಸ್ಸು ಒಪ್ಪಿಸಿ ಒಂದು ವರ್ಷದÀ ಕಾಲ ಅವಳ ಹಿಂದೆ ಬಿದ್ದು ಕೊನೆಗೆ ಹಿರಿಯರ ಒಪ್ಪಿಗೆ ಪಡೆದು ತನ್ನ ಪ್ರೀತಿಯನ್ನು ದಾಂಪತ್ಯದಲ್ಲಿ ಪರ್ಯಾವಸಾನಗೊಳಿಸಿದ್ದ. ಬ್ಯಾಂಕಿನ ಕೂಡಿ ಕಳೆಯುವ ಲೆಕ್ಕದ ಬಿಡುವಿಲ್ಲದ ಕೆಲಸದ ಏಕತಾನತೆಯ ನಡುವೆ ಬಳಲಿ ಬೆಂಡಾಗುತ್ತಿದ್ದ ವಸುಮತಿಗೆ ಬ್ಯಾಂಕಿನ ಕೆಲಸದಾಚೆಯೂ ತನಗೊಂದು ಮನಸ್ಸಿದೆ ಮತ್ತು ಬದುಕಿದೆ ಎನ್ನುವುದು ಅವಳ ಅರಿವಿಗೆ ಬರುತ್ತಿದ್ದದ್ದು ಅವಳ ಮುಖದರ್ಶನದಿಂದಲೇ ಕೃತಾರ್ಥನಾದೆನೇನೋ ಎನ್ನುವಂತೆ ದಿನಕ್ಕೆ ಐದಾರು ಬಾರಿ ಕಾಲೇಜಿನಿಂದ ಬ್ಯಾಂಕಿಗೆ ಅಂಡಲೆಯುತ್ತಿದ್ದ ಪ್ರಭಂಜನನಿಂದ ಮಾತ್ರ. ಪುಸ್ತಕಗಳೇ ತನ್ನ ಪ್ರಪಂಚವೆಂದು ಭಾವಿಸಿದ್ದ ಪ್ರಭಂಜನ ಮತ್ತು ದಿನಬೆಳಗಾದರೆ ಡೆಬಿಟ್, ಕ್ರೆಡಿಟ್, ಬ್ಯಾಲೆನ್ಸ್‍ಶೀಟ್‍ಗಳಲ್ಲಿ ಮುಳುಗೇಳುತ್ತಿದ್ದ ವಸುಮತಿ ಪರಸ್ಪರ ವಿರುದ್ಧ ಭಾವಗಳ ಅವರಿಬ್ಬರ ಹೃದಯದಲ್ಲಿ ಅದುಹೇಗೆ ಪ್ರೇಮ ಪಲ್ಲವಿಸಿತು ಎನ್ನುವುದು ಸೃಷ್ಟಿಕರ್ತ ಬ್ರಹ್ಮನಿಗೆ ಗೊತ್ತು. ಲವ್ ಈಜ್ ಬ್ಲೈಂಡ್ ಎನ್ನುವ ಮಾತು ಇಂಥವರನ್ನು ನೋಡಿಯೇ ಹುಟ್ಟಿಕೊಂಡಿರಬಹುದೆನ್ನುವ ಸಂಶಯ ಅವರಿಬ್ಬರ ಬಂಧುಗಳಲ್ಲಿ ಮತ್ತು ಪರಿಚಿತರಲ್ಲಿ ಒಂದಿಷ್ಟು ದಿನ ಹರಿದಾಡಿ ಕೊನೆಗೆ ಅದೊಂದು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿತು.

ಮದುವೆಯಾದ ನಾಲ್ಕು ವರ್ಷದೊಳಗೆ ಕೀರ್ತಿಗೊಂದು ಆರತಿಗೊಂದು ಎನ್ನುವಂತೆ ಎರಡು ಮಕ್ಕಳು ಹುಟ್ಟಿ ಅವರ ದಾಂಪತ್ಯಕ್ಕೆ ಅಧಿಕೃತ ಮುದ್ರೆ ಬಿದ್ದಿತ್ತು. ಇವರಿಬ್ಬರ ಸುಖಸಂಸಾರವನ್ನು ನೋಡಿ ಆನಂದದ ಕಡಲಲ್ಲಿ ತೇಲಾಡಿದ ಅವರವರ ಅಪ್ಪ ಅಮ್ಮ ತಮಗಿನ್ನು ಈ ಲೌಕಿಕ ಬಂಧನ ಸಾಕೆನ್ನುವಂತೆ ಪ್ರಭಂಜನ ಮತ್ತು ವಸುಮತಿಯನ್ನು ಸರ್ವತಂತ್ರ ಸ್ವತಂತ್ರರನ್ನಾಗಿಸಿ ಬೇಗನೆ ತಮ್ಮ ಇಹಲೋಕಯಾತ್ರೆಯನ್ನು ಮುಗಿಸಿದ್ದರು. ಮಕ್ಕಳ ಲಾಲನೆ, ಪಾಲನೆ, ಅವರ ವಿದ್ಯಾಭ್ಯಾಸ, ತಮ್ಮ ತಮ್ಮ ಉದ್ಯೋಗದ ಜಂಜಾಟದಲ್ಲಿ ಇಪ್ಪತ್ತು ವರ್ಷಗಳು ಇಪ್ಪತ್ತು ನಿಮಿಷಗಳಂತೆ ಉರುಳಿಹೋಗಿದ್ದವು. ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಮಗಳು ಪಿಯುಸಿ, ಮಗ ಟೆಂಥ್ ಓದುತ್ತÀ ಮಕ್ಕಳಿಬ್ಬರೂ ಹಾಸ್ಟೆಲ್ ನಿವಾಸಿಗಳಾದ ಮೇಲೆ ತಾವಿಬ್ಬರೆ ಇರುವ ಆ ಮನೆಯಲ್ಲಿ ಆರಂಭದ ಕೆಲವು ದಿನಗಳು ಪ್ರಭಂಜನ ಮತ್ತು ವಸುಮತಿ ತಾವು ಈಗಷ್ಟೇ ಮದುವೆಯಾದ ನವವಿವಾಹಿತರೇನೋ ಎನ್ನುವಂತೆ ಹಗಲು ರಾತ್ರಿಯ ಪರಿವೆ ಇಲ್ಲದಂತೆ ಸುಖಿಸಿದ್ದರು. ವಸುಮತಿ ಕಳೆದುಹೋದ ತಾರುಣ್ಯ ತನಗೆ ಮತ್ತೆ ಪ್ರಾಪ್ತವಾದಷ್ಟೆ ಖುಷಿಯಿಂದ ಸಂಭ್ರಮಿಸಿದ್ದಳು. 

ಬದುಕು ಯಾವ ಗಳಿಗೆಯಲ್ಲಿ ಯಾವ ತಿರುವು ಪಡೆಯುತ್ತೋ ಯಾರಿಗೆ ಗೊತ್ತು. ಎಲ್ಲವೂ ಸರಿಯಾಗಿದೆ ಎಂದು ಭಾವಿಸಿದ್ದ ವಸುಮತಿಗೆ ಇತ್ತೀಚಿಗೆ ಪ್ರಭಂಜನನ ವರ್ತನೆಯೇ ಒಗಟಾಗಿ ಎಲ್ಲವೂ ಅಯೋಮಯ ಅಗೋಚರವೆನಿಸಿ ಅವನೊಂದು ವಿಚಿತ್ರ ಜೀವಿಯಂತೆ ಅವಳ ಭಾವಕ್ಕೆ ಗೋಚರಿಸಲಾರಂಭಿಸಿದ. ರಾತ್ರಿ ಊಟವಾದ ಮೇಲೆ ಅಡುಗೆ ಮನೆಯಲ್ಲಿನ ಕೆಲಸಕ್ಕೂ ಬಿಡದೆ ತನ್ನನ್ನು ಬೆಡ್ ರೂಂಗೆ ಬಾ ಎಂದು ಪೀಡಿಸುತ್ತಿದ್ದವನು ಈಗ ಕೆಲವು ದಿನಗಳಿಂದ ಊಟ ಮಾಡಿದ್ದೆ ಕೈಯಲ್ಲಿ ಪುಸ್ತಕ ಹಿಡಿದು ತನ್ನೊಂದಿಗೆ ಈ ನಾಲ್ಕು ಗೋಡೆಗಳ ನಡುವೆ ಬೇರೊಂದು ಜೀವವೂ ಉಸಿರಾಡುತ್ತಿದೆ ಎನ್ನುವುದನ್ನೂ ಮರೆತು ಗಂಟೆಗಟ್ಟಲೆ ತಪಸ್ಸಿಗೆ ಕುಳಿತವನಂತೆ ಓದಿನಲ್ಲಿ ಕಳೆದುಹೋಗಲಾರಂಭಿಸಿದ. ಪುಸ್ತಕದ ಪುಟಗಳನ್ನು ಮುಗುಚುವುದು, ಪೆನ್ನಿನಿಂದ ಅಲ್ಲಲ್ಲಿ ಗೆರೆಗಳನ್ನು ಎಳೆಯುವುದು, ಒಮ್ಮೊಮ್ಮೆ ಪುಸ್ತಕದಲ್ಲಿನ ಸಾಲುಗಳನ್ನು ಸ್ವಗತದಲ್ಲಿ ಹೇಳಿಕೊಳ್ಳುವುದು ಇಂಥ ದೈಹಿಕ ಚಲನೆಗಳನ್ನು ಬಿಟ್ಟರೆ ಉಳಿದ ವೇಳೆ ವೈರಾಗ್ಯವೇ ಮೈವೆತ್ತು ಅರೆನಿಮೀಲಿತನಾಗಿ ತಪಸ್ಸಿಗೆ ಕುಳಿತ ಬುದ್ಧನಂತೆ ಕಾಣಲಾರಂಭಿಸಿದಾಗ ವಸುಮತಿಗೆ ಭಯ ಶುರುವಾಯಿತು. 

* * *

ವಸುಮತಿ ತನ್ನನ್ನಾವರಿಸಿದ ಭಯದಿಂದ ಬಿಡುಗಡೆಗೊಳ್ಳಲು ತನ್ನ ಮನದ ಬೇಗುದಿಯನ್ನು ಬ್ಯಾಂಕಿನಲ್ಲಿ ಎಲ್ಲರ ಸಮಸ್ಯೆಗಳಿಗೂ ಒಂದಿಲ್ಲೊಂದು ಪರಿಹಾರ ಸೂಚಿಸುವ ವಿಶೇಷವಾಗಿ ಮಹಿಳಾ ಸಹೋದ್ಯೋಗಿಗಳ ವಲಯದಲ್ಲಿ ಕೌನ್ಸೆಲರ್ ಎಂದೇ ಖ್ಯಾತಳಾದ ಸರಳಾ ದೇಶಪಾಂಡೆ ಎದುರು ಹೊರಹಾಕಿದ್ದೆ ಎಡವಟ್ಟಾಗಿ ಪ್ರಭಂಜನನ ನಿರ್ಲಿಪ್ತತೆ ಬೇರೆ ಬೇರೆ

ವ್ಯಾಖ್ಯಾನಗಳನ್ನು ಪಡೆಯುತ್ತ ದಿನಕ್ಕೊಂದು ಹೊಸ ಅರ್ಥ ಹುಟ್ಟಿಸತೊಡಗಿತು. ಐವತ್ತರ ನಂತರ ಗಂಡಸರಿಗೆ ತಮ್ಮ ಹೆಂಡತಿಯನ್ನು ಹೊರತುಪಡಿಸಿ ಪ್ರಪಂಚದಲ್ಲಿರುವ ಬೇರೆ ಎಲ್ಲ ಹೆಂಗಸರೂ ತ್ರೀಲೋಕ ಸುಂದರಿಯರಾಗಿ ಕಾಣಿಸುವರೆಂದು, ಹೊರಗೆ ಮೇಯುವ ಚಾಳಿ ಬೆಳೆಸಿಕೊಂಡು ಹೆಂಡತಿಯೆದುರು ಏನೂ ಗೊತ್ತಿಲ್ಲದ ಸಂಭಾವಿತರಂತೆಯೂ ನಿರ್ಲಿಪ್ತರಂತೆಯೂ ನಡೆದುಕೊಳ್ಳುವರೆಂದು, ಹೆಂಡತಿ ಪಕ್ಕದಲ್ಲಿ ಮಲಗಿ ಕರೀನಾನೋ ಕತ್ರಿನಾಳನ್ನೋ ಕನವರಿಸುವರೆಂದು ಸರಳಾ ದೇಶಪಾಂಡೆ ಭಯಂಕರ ಗುಟ್ಟೊಂದನ್ನು ಹೊರಗೆಡವಿದ್ದಲ್ಲದೇ  ತಮ್ಮದೇ ಬ್ಯಾಂಕಿನ ಮೂರ್ನಾಲ್ಕು ಗಂಡು ಸಹೋದ್ಯೋಗಿಗಳನ್ನು ಉದಾಹರಣೆ ಸಹಿತ ಹೆಸರಿಸಿ ವಸುಮತಿಯಲ್ಲಿ ಏಕಕಾಲಕ್ಕೆ ಭಯ ಮತ್ತು ಗಂಡನ ಮೇಲೆ ಅನುಮಾನ ಇನ್ನಷ್ಟು ಹೆಚ್ಚಲು ಕಾರಣಳಾದಳು. ಈಗ ವಸುಮತಿಗೆ ಪ್ರಭಂಜನನನ್ನು ವಿವಿಧ ರೀತಿಯಿಂದ ಪರೀಕ್ಷಿಸಿ ನೋಡುವುದು ದಿನನಿತ್ಯದ ಕೆಲಸದ ಜೊತೆಗೆ ಮತ್ತೊಂದು ಹೊಸ ಕೆಲಸವಾಯಿತು. ಪ್ರಭಂಜನನ ಜೇಬು ತಡಕಾಡುವದರೊಂದಿಗೆ ಆರಂಭಗೊಂಡ ವಸುಮತಿಯ ತಪಾಸಣೆ ಅವನ ಮೊಬೈಲ್, ವಾಟ್ಸಪ್, ಫೇಸ್‍ಬುಕ್, ಇ-ಮೇಲ್, ಇನ್ಸ್‍ಟಾಗ್ರಾಮ್, ಟ್ವಿಟರ್‍ಗಳನ್ನು ಜಾಲಾಡುವುದರ ತನಕ ಮುಂದುವರೆಯಿತು. ಯಾವ ಸುಳಿವು ಸಿಗದೆ ಹೋದಾಗ ಪ್ರಭಂಜನ ತುಂಬ ಹುಷಾರಾಗಿ ಸರಳಾ ದೇಶಪಾಂಡೆ ಉಲ್ಲೇಖಿಸಿದ ಆ ಎಲ್ಲ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರಬಹುದೆನ್ನುವ ತೀರ್ಮಾನಕ್ಕೆ ವಸುಮತಿ ಬಂದಿದ್ದಳು. 

ಈಗೀಗ ವಸುಮತಿಗೆ ಕನ್ನಡಿ ಎದುರು ಗಂಟೆಗಟ್ಟಲೆ ನಿಂತು ಅಲಂಕರಿಸಿಕೊಳ್ಳುವ ಹೊಸ ಅಭ್ಯಾಸವೊಂದು ಶುರುವಾಗಿದೆ. ಮೊದಲೆಲ್ಲ ಮುಖಕ್ಕೆ ಒಂದಿಷ್ಟು ಪೌಡರ್ ಲೇಪಿಸಿ ನೆಪಕ್ಕೆ ಎನ್ನುವಂತೆ ತಲೆಯ ಮೇಲೆ ಬಾಚಣಿಗೆ ಆಡಿಸಿಕೊಂಡು ಜುಟ್ಟಿಗೊಂದು ಹೇರ್ ಬಾಂಡ್ ಸಿಕ್ಕಿಸಿ ಕೆಲಸಕ್ಕೆ ತಡವಾಯಿತೆಂದು ಮನೆಗೆ ಬೀಗಹಾಕಿ ಓಡುತ್ತಿದ್ದವಳು ಈಗ ಬೆಡ್ ರೂಮಿನ ಅಲ್ಮೆರಾದ ನಿಲುವುಗನ್ನಡಿ ಎದುರು ಹೆಚ್ಚಿನ ಸಮಯ ಕಳೆಯುವುದನ್ನು ರೂಢಿಸಿಕೊಂಡಿರುವಳು. ರಿಟೈರ್ಡ್ ಆಗಲು ಒಂದು ವರ್ಷವಷ್ಟೇ ಬಾಕಿ ಇರುವ ಮ್ಯಾನೇಜರ್ ಶ್ರೀಧರರಾವ್ ಬ್ಯಾಂಕಿಗೆ ಬಂದುಹೋಗುವ ಮಹಿಳಾ ಗ್ರಾಹಕರನ್ನು ಯಾವ ಯಾವುದೋ ಕಾರಣ ಮುಂದೆಮಾಡಿಕೊಂಡು ಮಾತನಾಡಿಸುವುದು ಪಾಸ್‍ಬುಕ್ ಕೊಡುವ ನೆಪದಲ್ಲಿ ಮೈ ಕೈ ಮುಟ್ಟುವುದು ಆಗಾಗ ವಲ್ಗರ್ ಜೋಕುಗಳನ್ನು ಹೇಳಿ ನಗುವುದನ್ನು ನೋಡಿ ವಸುಮತಿಗೆ ಪ್ರಪಂಚದಲ್ಲಿನ ಗಂಡಸರೆಲ್ಲ ಒಂದೇ ಜಾತಿಯವರೆಂದೆನಿಸಿ ಇಡೀ ಗಂಡುಕುಲವೇ ನಂಬಿಕೆಗೆ ಅನರ್ಹ ಎನ್ನುವ ನಿರ್ಧಾರಕ್ಕೆ ಬಂದಿದ್ದಳು. ಪ್ರಭಂಜನ ಕೂಡ ಕಾಲೇಜಿನಲ್ಲಿ ಅಲ್ಲಿನ ಮಹಿಳಾ ಸಹೋದ್ಯೋಗಿಗಳೊಂದಿಗೆ ಇದೇ ರೀತಿ ವರ್ತಿಸುತ್ತಿರಬಹುದೆನ್ನುವ ಕಲ್ಪನೆಯಿಂದಲೇ ವಸುಮತಿ ಅದೆಷ್ಟು ದಿಗಿಲುಗೊಂಡಳೆಂದರೆ ಮರುದಿನ ಬ್ಯಾಂಕಿಗೆ ರಜೆ ಹಾಕಿದವಳೆ ಬ್ಯೂಟಿ ಪಾರ್ಲರಿಗೆ ಹೋಗಿ ಅಲ್ಲಿನ ಬ್ಯೂಟಿಶಿಯನ್‍ಗೆ ಮುಖಕೊಟ್ಟು ಕುಳಿತವಳು ಮಧ್ಯಾಹ್ನದ ಹೊತ್ತಿಗೆ ಮೇಕಪ್ ಎಂಬ ಮಾಯೆಯ ಸಕಲ ಚರಾಚರ ಕ್ರಿಯೆಗಳು ಪೂರ್ಣಗೊಂಡು ಕನ್ನಡಿಯಲ್ಲಿ ಹೊಳೆಯುತ್ತಿರುವ ತನ್ನ ಮುಖವನ್ನು ನೋಡಿದಾಗಲೇ ಅವಳಿಗೆ ಸಮಾಧಾನವಾಯಿತು. 

ಸಾಯಂಕಾಲ ಕಾಲೇಜಿನಿಂದ ಮನೆಗೆ ಬಂದ ಪ್ರಭಂಜನನಿಗೂ ವಸುಮತಿ ಇವತ್ತು ಎಂದಿನಂತಿಲ್ಲ ಅವಳಲ್ಲಿ ಏನೋ ಬದಲಾವಣೆಯಾದಂತಿದೆ ಎಂದೆನಿಸಿದರೂ ಅಂವ ಪ್ರತಿದಿನದಂತೆ ಮುಖ ತೊಳೆದು ಟೀ ಕುಡಿದು ಬೆಡ್ ರೂಂಗೆ ಹೋಗಿ ಪುಸ್ತಕ ಕೈಯಲ್ಲಿ ಹಿಡಿದು ಕುಳಿತ. ವಸುಮತಿ ಕೆಲಸವಿಲ್ಲದಿದ್ದರೂ ಬೇಕೆಂದೆ ಅಡುಗೆ ಮನೆ ಮತ್ತು ಬೆಡ್‍ರೂಂ ನಡುವೆ ಹತ್ತಾರು ಬಾರಿ ಓಡಾಡಿದಳು. ಕಾರಣವಿಲ್ಲದೆ ಪ್ರಭಂಜನನನ್ನು ಮಾತನಾಡಿಸಿದಳು. ಸ್ಲೀವ್‍ಲೆಸ್ ರವಿಕೆ ತೊಟ್ಟವಳು ಗಳಿಗೆಗೊಮ್ಮೆ ಕೂದಲನ್ನು ಕೆರೆದು ನುಣುಪಾಗಿಸಿದ ಕಂಕುಳನ್ನು ಬೇಕೆಂದೆ ಕೈಯೆತ್ತಿ ಪ್ರಭಂಜನನಿಗೆ ಕಾಣುವಂತೆ ಪ್ರದರ್ಶಿಸಿದಳು. ಅಂದು ರಾತ್ರಿ ಪ್ರಭಂಜನ ಕೂಡ ಒಂದಿಷ್ಟು ಸಕಾರಾತ್ಮಕವಾಗಿ ಸ್ಪಂದಿಸಿದ. ಊಟದ ನಂತರ ಪುಸ್ತಕ ಕೈಗೆತ್ತಿಕೊಳ್ಳದೆ ಬೇಗನೆ ಮಂಚ ಸೇರಿದವನು ಹತ್ತಿರ ಬಂದವಳನ್ನು ಬರಸೆಳೆದು ಅಪ್ಪಿದ. ವಸುಮತಿಯ ದುರಾದೃಷ್ಟವೋ ಏನೋ ದೇಹಕ್ಕೆ ದೇಹ ಬೆಸೆದುಕೊಂಡು ಉನ್ಮತ್ತಗೊಂಡಿರುವ ಗಳಿಗೆ ನಿನ್ನೆಯಷ್ಟೆ ಓದಿ ಮುಚ್ಚಿಟ್ಟ ಫ್ರಾಂಝ್ ಕಾಫ್ಕಾನ ‘ಮೆಟಾಮಾರ್ಫಾಸಿಸ್’ ಕಥೆಯ ಗ್ರೇಗರ್‍ನ ಪಾತ್ರ ಪ್ರಭಂಜನನ ಮನದಲ್ಲಿ ಸುಳಿದು ತಾವಿಬ್ಬರೂ ಒಂದು ದೊಡ್ಡ ಕ್ರಿಮಿಯಾಗಿ ರೂಪಾಂತರಗೊಳ್ಳುತ್ತಿರುವಂತೆ ಭಾಸವಾಗಿ ಅಸಹ್ಯ ಭಾವನೆಯೊಂದು ಮೂಡಿ ಹೆಂಡತಿಯನ್ನು ದೂರತಳ್ಳಿ ಪಕ್ಕಕ್ಕೆ ಉರುಳಿದ. ಸುಖದ ಉತ್ತುಂಗದಲ್ಲಿದ್ದವಳನ್ನು ಎತ್ತಿ ಪಾತಾಳಕ್ಕೆ ಒಗೆದಂತಾಯಿತು. ಸದ್ದು ಕೇಳಿಸಿದತ್ತ ದೃಷ್ಟಿ ಹರಿಸಿದವಳಿಗೆ ಕೋಣೆಯ ಮೂಲೆಯಲ್ಲಿ ಪುಸ್ತಕ ಕೈಯಲ್ಲಿ ಹಿಡಿದು ಧ್ಯಾನಮಗ್ನನಾದ ಮುನಿಯಂತೆ ಕುಳಿತಿದ್ದ ಪ್ರಭಂಜನ ಕಣ್ಣಿಗೆ ಬಿದ್ದ. ಪ್ರಭಂಜನನಿಗೆ ಸೆಕ್ಸ್‍ನಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆಯೋ ಇಲ್ಲ ನನ್ನ ಮೇಲೆ ನಿರಾಸಕ್ತಿ ಮೂಡುತ್ತಿದೆಯೋ ಎಂದು ಗೊಂದಲಕ್ಕೊಳಗಾದ ವಸುಮತಿ ಮರುದಿನ ಅವನನ್ನು ಪರೀಕ್ಷೆಗೊಳಪಡಿಸುವ ಕಾರ್ಯತಂತ್ರವನ್ನು ರಾತ್ರಿಯೆಲ್ಲ ನಿದ್ದೆಗೆಟ್ಟು ಸಿದ್ಧಪಡಿಸಿದಳು. 

* * *

ಪ್ರಭಂಜನನನ್ನು ಕತ್ರಿನಾಳ ಆಳೆತ್ತರದ ಫೋಟೋದ  ಎದುರು ನಿಲ್ಲಿಸಿ ಅಂಗಡಿ ಒಳಹೊಕ್ಕ ವಸುಮತಿ ಬೇಕೆಂದೆ ಬಟ್ಟೆ ಹುಡುಕುವ ನೆವದಲ್ಲಿ ಅಂಗಡಿಯೊಳಗಿಂದ ಹೊರಬರಲು ಒಂದರ್ಧಗಂಟೆ ತಡಮಾಡಿದಳು. ಜನನಿಬಿಡ ಪ್ರದೇಶದ ಆಯಕಟ್ಟಿನ ಜಾಗದಲ್ಲಿರುವ ‘ಇನ್ನರ್ ಕಂಫರ್ಟ್’ ಹೆಸರಿನ ಆ ಬಟ್ಟೆಯಂಗಡಿ ಎದುರು ಅರೆಬರೆ ಪೋಷಾಕಿನಲ್ಲಿ  ಅರೆಬೆತ್ತಲೆಯಾಗಿ ಕಂಗೊಳಿಸುತ್ತಿರುವ ಕತ್ರಿನಾಳ ದಿವ್ಯ ಸೌಂದರ್ಯಕ್ಕೆ ಒಂದುಕ್ಷಣದ ಮಟ್ಟಿಗಾದರೂ ದಾರಿಹೋಕರನ್ನು ತನ್ನತ್ತ ಸೆಳೆದು ನಿಲ್ಲಿಸುವ ಮಾದಕತೆಯಿತ್ತು. ಪ್ರಭಂಜನನನ್ನು ಪರೀಕ್ಷಿಸಲೆಂದೋ ಅಥವಾ ಅವನನ್ನು ಉನ್ಮಾದಗೊಳಿಸಲೆಂದೋ ಬಟ್ಟೆಕೊಳ್ಳುವ ನೆಪದಲ್ಲಿ ಕರೆತಂದಿದ್ದ ವಸುಮತಿ ಒಳಗೆ ಬಟ್ಟೆ ಹುಡುಕುತ್ತಿದ್ದರೂ ಅವಳ ಒಂದು ಕಣ್ಣು ಕತ್ರಿನಾಳ ಫೋಟೋದ  ಎದುರು ನಿಂತಿದ್ದ ಗಂಡನ ಮೇಲೆಯೇ ನೆಟ್ಟಿತ್ತು. ಪ್ರಭಂಜನ ತನ್ನೆದುರಿನ ಆಳೆತ್ತೆರದ ಕತ್ರಿನಾಳ ಭಾವಚಿತ್ರವನ್ನೆ ತದೇಕಚಿತ್ತನಾಗಿ ನೋಡುತ್ತಿದ್ದವನು ಒಮ್ಮೆ ಕತ್ರಿನಾಳ ಎಡಕ್ಕೂ ಮತ್ತೊಮ್ಮೆ ಬಲಕ್ಕೂ ಮಗದೊಮ್ಮೆ ಮೇಲೆ ಕೆಳಗೆ ಹೀಗೆ ಕ್ಷಣ ಕ್ಷಣಕ್ಕೂ ದೃಷ್ಟಿ ಬದಲಿಸುತ್ತಿದ್ದವನು ಅದಕ್ಕೆ ತಕ್ಕಂತೆ ತಾನು ನಿಂತ ಭಂಗಿಯನ್ನೂ ಬದಲಿಸುತ್ತ ವಸುಮತಿಯಲ್ಲಿ ಆಸೆ ಭರವಸೆಗಳ ಮಹಾಪೂರವನ್ನೇ ಹುಟ್ಟಿಸಿದ. ಅಂಗಡಿಯೊಳಗಿಂದ ಹೊರಬಂದು ಪ್ರಭಂಜನನನ್ನೆ ದಿಟ್ಟಿಸಿ ನೋಡಿದವಳ ಕಣ್ಣಿಗೆ ಅವನಲ್ಲೇನೋ ಬದಲಾವಣೆಯಾದಂತೆ ಭಾಸವಾಯಿತವಳಿಗೆ. ಅವನನ್ನು ವಾಸ್ತವಕ್ಕೆಳೆಯುತ್ತ ‘ಏನೂ ಪ್ರೊಫೆಸರ್  ಸಾಹೇಬರು ಇನ್ನೊಂದಿಷ್ಟು ಹೊತ್ತು ನಾನು ಬರುವುದು ತಡವಾಗಿದ್ದರೆ ಕತ್ರಿನಾಳನ್ನು ತಿಂದೇ ಬಿಡ್ತಿದ್ದಿರೇನೋ’ ಎಂದು ನಗೆಯಾಡಿದಳು. ‘ಅಲ್ಲ ವಸು ಹೀಗೆ ಬಟ್ಟೆಯಿಲ್ಲದೆ ಅರೆಬೆತ್ತಲೆಯಾಗಿ ದೇಹನ ಪ್ರದರ್ಶಿಸಿದರೆ ನೋಡುವವರಲ್ಲಿ ಆಸಕ್ತಿ ಹುಟ್ಟಿಸಬಹುದು ಅಂತ ಭಾವಿಸ್ತಾರಲ್ಲ ಎಂಥ ಮೂರ್ಖರಿವರು. ಸೌಂದರ್ಯ ಇರೋದು ಬಿಚ್ಚಿ ತೋರಿಸೊದರಲ್ಲಲ್ಲ. ಮುಚ್ಚಿಟ್ಟಾಗ ಮನಸ್ಸಿನಲ್ಲಿ ಮೂಡುವ ಕುತೂಹಲ, ಕಲ್ಪನೆ ಬಿಚ್ಚಿಟ್ಟಾಗ ಇರಲ್ಲ ನೋಡು. ಬಿಚ್ಚಿದ ಆ ಕ್ಷಣಕ್ಕೆ ಇರೋದು ಇಷ್ಟೇನಾ ಅನ್ನೊ ನಿರ್ಲಿಪ್ತತೆ ಹುಟ್ಟುತ್ತೆ’ ಪ್ರಭಂಜನನ ಮಾತು ಕೇಳುತ್ತ ವಸುಮತಿಗೆ ಅದೇ ಆಗ ಮೂಡಿದ್ದ ಭರವಸೆಗಳೆಲ್ಲ ಒಂದೊಂದಾಗಿ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಂತೆ ಭಾಸವಾಗಿ ಕಂಗಳು ಹನಿಗೂಡಿದವು.

* * *

ಬ್ಯಾಂಕಿನ ಕೇಂದ್ರ ಕಚೇರಿಯ ಮುಖ್ಯಸ್ಥರಾದ ಸುಬ್ರತೋ ಬ್ಯಾನರ್ಜಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪ್ರಯುಕ್ತ ಬ್ಯಾಂಕ್‍ನ ಸಭಾಂಗಣದಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬ್ಯಾಂಕಿನ ಉದ್ಯೋಗಿಗಳು ಮಾತ್ರವಲ್ಲದೆ ಊರಿನ ಗಣ್ಯರು, ನಾಗರಿಕರು ಕೂಡ ಪಾಲ್ಗೊಂಡು ಸಭಾಂಗಣ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿತ್ತು. ವೇದಿಕೆಯ ಮೇಲೆ ಸುಬ್ರತೋ ಬ್ಯಾನರ್ಜಿ ಮತ್ತು ಅವರ ಪತ್ನಿ ಮೃಣಾಲಿನಿ ಬ್ಯಾನರ್ಜಿ ಆಸೀನರಾಗಿದ್ದರು. ಮೃಣಾಲಿನಿ ಬಂಗಾಳಿ ಭಾಷೆಯಲ್ಲಿ ಹಲವಾರು ಕಥೆ ಕಾದಂಬರಿಗಳನ್ನು ಬರೆದು ಜನಪ್ರಿಯ ಬರಹಗಾರ್ತಿಯೆಂದು ಹೆಸರು ಮಾಡಿದ್ದರು. ಅವರ ಅನೇಕ ಕಥೆಗಳು ಕನ್ನಡಕ್ಕೂ ಅನುವಾದಗೊಂಡು ಮೃಣಾಲಿನಿ ಕನ್ನಡಿಗರಿಗೂ ಪರಿಚಿತರಾಗಿದ್ದರು. ಅವರನ್ನು ಕಣ್ಣಾರೆ ನೋಡಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ಸುಬ್ರತೋ ಬ್ಯಾನರ್ಜಿ ಎಲ್ಲರಿಗೂ ಧನ್ಯವಾದ ಹೇಳಿದರು. ತಾವು ಸವೆಸಿದ ಬದುಕಿನ ದಾರಿಯನ್ನು ನೆನಪಿಸಿಕೊಂಡು ಭಾವುಕರಾದರು. ಬಾಳಿನ ಈ ಪಯಣದಲ್ಲಿ ಜೊತೆಗೆ ನಿಂತು ಸಹಕರಿಸಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸಿದರು. ತಮ್ಮ ಪತ್ನಿ ಮೃಣಾಲಿನಿಯನ್ನು ಬಾಯಿತುಂಬ ಹೊಗಳಿದರು. ಬ್ಯಾಂಕಿನ ವ್ಯವಹಾರಿಕ ಜಗತ್ತಿನÀ ಸುಬ್ರತೋ ಸೃಜನಶೀಲ ಕ್ಷೇತ್ರದಲ್ಲಿನ ಮೃಣಾಲಿನಿ ಬದುಕಿನ ಈ ಪಯಣದಲ್ಲಿ ಪರಸ್ಪರ ವಿಭಿನ್ನ ಅಭಿರುಚಿಗಳ ಅವರಿಬ್ಬರೂ ಜೊತೆಯಾದದ್ದೇ ಒಂದು ಸೋಜಿಗ ಎಂದು ಅಚ್ಚರಿಪಟ್ಟರು. ‘ಪರಸ್ಪರ ನಂಬಿಕೆ, ಗೌರವ, ವಿಶ್ವಾಸಗಳೇ ದಾಂಪತ್ಯದ ಯಶಸ್ಸಿನ ತಳಹದಿಗಳು. ನಾನು ಮೃಣಾಲಿನಿಯ ಬೆಳವಣಿಗೆಗೆ ನೀರೆರೆದೆ ಅವಳು ನನ್ನ ಬೆಳವಣಿಗೆಗೆ ಒತ್ತಾಸೆಯಾಗಿ ನಿಂತಳು. ನಾನು ಅವಳ ಅಭಿರುಚಿ, ಆಸಕ್ತಿಯನ್ನು ಗೌರವಿಸಿದೆ ಅವಳು ನನ್ನ ವ್ಯವಹಾರಿಕ ಪ್ರಜ್ಞೆಯನ್ನು ವಿಸ್ತರಿಸಿದಳು. ದಾಂಪತ್ಯ ಎನ್ನುವುದು ಕೇವಲ ದೇಹದ ಆಕರ್ಷಣೆ ಮಾತ್ರವಲ್ಲ. ಕಾಮವೇ ದಾಂಪತ್ಯದ ಬದುಕಿನ ಪರಮಾವಧಿಯೂ ಮತ್ತು ಅಂತಿಮ ಸತ್ಯವೂ ಅಲ್ಲ. ಧರ್ಮೆಚ, ಅರ್ಥೇಚ, ಕಾಮೆಚ, ಮೋಕ್ಷೆಚ ಅಹಮ್ ಇವಾಮ್ ನಾತಿಚರಾಮಿ ಎಂದು ಸಪ್ತಪದಿ ತುಳಿದ ದಾಂಪತ್ಯದಲ್ಲಿ ಕಾಮ ಅಥವಾ ಸೆಕ್ಸ್ ಅದೊಂದು ಸಂತಾನಭಿವೃದ್ಧಿಗೆ ಅಗತ್ಯವಾದ ಕ್ರಿಯೆಯೇ ವಿನ: ಅದೇ ಇಡೀ ಬದುಕಲ್ಲ’ ಎಂದು ಹಿತನುಡಿಗಳನ್ನಾಡಿದರು. ಸುಬ್ರತೋ ಬ್ಯಾನರ್ಜಿ ಅವರ ಮಾತುಗಳನ್ನಾಲಿಸುತ್ತ ವಸುಮತಿ ಒಂದು ಕ್ಷಣ ತನ್ನ ಇರುವಿಕೆಯನ್ನೇ ಮರೆತಳು. ಅವಳ ಭಾವಕೋಶದ ತುಂಬ ಪ್ರಭಂಜನನೇ ತುಂಬಿಕೊಂಡ. ಪ್ರಭಂಜನನ ವಿಸ್ತಾರವಾದ ಓದು, ಆಸಕ್ತಿ, ವಿದ್ವತ್‍ಗಳೆದುರು ಕಾಮ ಅರ್ಥಹೀನ ಎಂದೆನಿಸತೊಡಗಿತವಳಿಗೆ. ಸಭಾಂಗಣದ ಬಾಗಿಲ ಬಳಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದ ಮೃಣಾಲಿನಿಯವರ ಪುಸ್ತಕಗಳಿಂದ ಎರಡು ಅನುವಾದಿತ ಕಥಾಸಂಕಲನಗಳನ್ನು ಪ್ರಭಂಜನಗಾಗಿ ಖರೀದಿಸಿ ಮನೆಯತ್ತ ಹೆಜ್ಜೆ ಹಾಕಿದಳು. 

* * *

ಮನುಷ್ಯ ಪಾಠ ಕಲಿಯದಿದ್ದರೆ ಕೆಲವೊಮ್ಮೆ ಬದುಕೇ ಅವನಿಗೆ ಪಾಠ ಕಲಿಸುತ್ತದಂತೆ. ವಸುಮತಿಯ ವಿಷಯದಲ್ಲಿ ಈ ಮಾತು ನಿಜವಾಯಿತು. ಕೈಯಲ್ಲಿ ಮೃಣಾಲಿನಿಯವರ ಅನುವಾದಿತ ಕಥಾಸಂಕಲನಗಳನ್ನು ಹಿಡಿದು ಹೊಸ ಮನುಷ್ಯಳಾಗಿ ಅವಸರವಸರದಿಂದ ಮನೆಯತ್ತ ಹೆಜ್ಜೆಹಾಕುತ್ತಿದ್ದವಳನ್ನು ಹಿಂದುಗಡೆಯಿಂದ ಬಂದ ಬೈಕ್ ಸವಾರನೊಬ್ಬ  ಅದು ಯಾವ ಮಾಯದಲ್ಲೋ ಗುದ್ದಿ ಮುಂದೆಹೋದ. ಬೈಕ್ ಹಾಯ್ದದ್ದೊಂದು ನೆಪವಾಗಿ ವಸುಮತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಒಂದು ತಿಂಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಾಯಿತು. ಪರೀಕ್ಷೆ ಕಾಲವಾದ್ದರಿಂದ ಮಗ ಮತ್ತು ಮಗಳು ತಮ್ಮ ಅಸಹಾಯಕತೆಯನ್ನು ತೋಡಿಕೊಂಡು ‘ಟೇಕ್ ಕೇರ್ ಮಮ್ಮಿ’ ಎಂದು ಮಾತು ಮುಗಿಸಿದ್ದರು. ಆ ಇಡೀ ಒಂದು ತಿಂಗಳು ಪ್ರಭಂಜನ ಕಾಲೇಜಿಗೆ ರಜೆಹಾಕಿ ವಸುಮತಿಯ ಆರೈಕೆಗೆ ನಿಂತ. ಬೆಳಗ್ಗೆ ಬೆಡ್ ಟೀನಿಂದ ಹಿಡಿದು ರಾತ್ರಿ ಊಟ ಮಾಡಿಸಿ ಮಲಗಿಸುವವರೆಗೂ ಅವಳನ್ನು ಮಗುವಿನಂತೆ ಜೋಪಾನ ಮಾಡಿದ. ಸ್ನಾನ ಮಾಡಿಸುವುದು, ಮೈ ಒರೆಸುವುದು, ಬಟ್ಟೆ ತೊಡಿಸುವುದು ಆಗೆಲ್ಲ ವಸುಮತಿ, ಪ್ರಭಂಜನನ ಕೈಯೊಳಗೆ ಮಗುವಿನಂತಾಗುತ್ತಿದ್ದಳು. ದಿನಗಳುರುಳುತ್ತಿದ್ದಂತೆ ವಸುಮತಿಗೆ ದಾಂಪತ್ಯದಲ್ಲಿ  ಕಾಮದಾಚೆಗೂ ಒಂದು ವಿಸ್ತೃತವಾದ ಬದುಕಿದೆ ಎನ್ನುವುದು ಅರ್ಥವಾಗತೊಡಗಿತು. ಈಗ ಅವಳು ಪ್ರಭಂಜನನನ್ನು ಹೊಸ ಅರ್ಥದಲ್ಲಿ ನೋಡುತ್ತಾಳೆ. ಈ ಮೊದಲಿನ ಆತಂಕ, ಉದ್ವಿಗ್ನತೆಗಳಿಲ್ಲದೆ ವಸುಮತಿ ಬದುಕನ್ನು ಪ್ರೀತಿಸಲಾರಂಭಿಸಿದ್ದಾಳೆ. ದಿನದಿನಕ್ಕೂ ಬದಲಾಗುತ್ತಿರುವ ವಸುಮತಿಯನ್ನು ಪ್ರಭಂಜನ ಕೂಡ ಅವಳೊಂದು ಚಿಕ್ಕಮಗುವೇನೋ ಎನ್ನುವಂತೆ ಪ್ರೀತಿಸತೊಡಗಿದ. ಚೇತರಿಸಿಕೊಂಡು ಪುನ: ಕೆಲಸಕ್ಕೆ ಹೋಗಲಾರಂಭಿಸಿದ ಮೊದಲ ದಿನ ಪ್ರಭಂಜನನೆ ಅವಳನ್ನು ಬ್ಯಾಂಕ್‍ವರೆಗೂ ಡ್ರಾಪ್ ಮಾಡಿದ. ಅವನೆಡೆ ಕೈಬೀಸಿ ಒಳಹೋಗುತ್ತಿದ್ದವಳ ನಡಿಗೆಯಲ್ಲಿ ಒಂದುರೀತಿಯ ಎಂದೂ ಇಲ್ಲದ ಲವಲವಿಕೆ ಇತ್ತು. ಪ್ರಭಂಜನನಿಗೂ ಇಂದು ವಸುಮತಿ ಎಂದಿಗಿಂತ ಹೆಚ್ಚು ಖುಷಿಯಾಗಿದ್ದಾಳೆ ಅನಿಸಿತು.

-ರಾಜಕುಮಾರ ಕುಲಕರ್ಣಿ 


Tuesday, March 2, 2021

ಪುರುಕಾಕಾ (ಕಥೆ)

     



(೧೧.೦೨.೨೦೨೧ ರ 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ)

  ‘ಒಂದುವಾರ ಆಯ್ತು ನಿನ್ನ ಕಾಕಾ ಇಲ್ಲಿಂದ ಹೋಗಿ. ಹೋಗುವಾಗ ಊರಿಗೆ ಅಂತ ಹೇಳಿದ್ರು. ಹೋಗಿ ಮುಟ್ಟಿದ ತಕ್ಷಣ ಒಂದು ಫೋನ್  ಆದರೂ ಮಾಡೊವಷ್ಟು ಪುರುಸೊತ್ತಿಲ್ಲ ಅಂದ್ರ ಇಂಥವರಿಗಿ ಹೆಂಡತಿ, ಮಕ್ಕಳು, ಸಂಸಾರ ಅಂತಾದ್ರೂ ಯಾಕ್ಬೇಕು. ವಸುಮತಿ ಬಾಣಂತನ ಮುಗಿಸಿಕೊಂಡು ಗಂಡನ ಮನಿಗಿ ಹೊರಟು ನಿಂತಾಳ. ಇಂಥಾ ವ್ಯಾಳ್ಯಾದಾಗ ಅಪ್ಪ ಅನಿಸಿಕೊಂಡವರು ಇರಲಿಲ್ಲಂದ್ರ ಜನ ಏನು ತಿಳ್ಕೊತಾರ. ಜನದ ಮನಿ ಹಾಳಾಗ್ಲಿ ಬೀಗರ ಬಗ್ಗ್ಯಾದರೂ ವಿಚಾರ ಮಾಡ್ಬೇಕಲ್ಲ. ನಿನ್ನ ಕಾಕಾಗ ಜಲ್ದಿ ಕಳಿಸಿಕೊಡು’ ವತ್ಸಲಾಕಕ್ಕಿಯ ಮಾತು ಯಾವಾಗಲೂ ಹೀಗೆ ಭರ್ತ್ಸನೆಯಿಂದಲೆ ಕೂಡಿರುತ್ತದೆ ಎಂದೆನಿಸಿದರೂ ಶ್ರೀಧರನಿಗೆ ಪುರುಕಾಕಾನದೆ ಚಿಂತೆ ಕಾಡಲಾರಂಭಿಸಿತು. ಕಾಕಾ ಇಲ್ಲಿಂದ ಹೋಗಿ ಇವತ್ತಿಗೆ ನಾಲ್ಕು ದಿನಗಳಾದವು. ಇನ್ನೂ ಮನೆಗೆ ಹೋಗಿಲ್ಲ ಅಂದರೆ ಎಲ್ಲಿ ಹೋಗಿರಬಹುದು ಎನ್ನುವ ಚಿಂತೆಯಿಂದ ಕ್ರಮೇಣ ಮನಸ್ಸಿನಲ್ಲಿ ಅಸ್ಪಷ್ಟವಾದ ಆಕೃತಿಯೊಂದು ಮೂಡಲಾರಂಭಿಸಿ ಹಲವು ಕ್ಷಣಗಳ ನಂತರ ಅದು ಸ್ಪಷ್ಟರೂಪ ತಾಳಿ ಕಣ್ಣೆದುರು ಗೋಚರಿಸಲಾರಂಭಿಸಿದಾಗ ಕುಳಿತಿದ್ದ ಶ್ರೀಧರ ಧಗ್ಗನೆ ಎದ್ದು ಪಡಸಾಲೆಯಿಂದ ಅಂಗಳಕ್ಕೆ ಬಂದು ಶ್ರೀಹರಿಯ ಮನೆಯತ್ತ ಹೆಜ್ಜೆ ಹಾಕತೊಡಗಿದ. 

ಪುರುಷೋತ್ತಮ ನಾರಾಯಣರಾವ್ ಮಳಖೇಡಕರ್ ಯಾನೆ ಪುರುಕಾಕಾ ಶ್ರೀಧರನಿಗೆ ವರಸೆಯಲ್ಲಿ ಚಿಕ್ಕಪ್ಪನಾಗಬೇಕು. ಶ್ರೀಧರನ ಅಜ್ಜ ಮತ್ತು ಪುರುಕಾಕಾನ ಅಪ್ಪ ಖಾಸಾ ಅಣ್ಣತಮ್ಮಂದಿರು. ಪುರುಕಾಕಾನ ಅಜ್ಜ ಶೇಷಗಿರಿರಾವ್ ಈ ಮನೆತನದ ಮೂಲ ವ್ಯಕ್ತಿ. ಮಳಖೇಡದಿಂದ ಇಲ್ಲಿಗೆ ವಲಸೆ ಬಂದವರಂತೆ. ಹಾಗೆಂದೆ ಬಿಟ್ಟುಬಂದ ಊರಿನ ಹೆಸರಿನಿಂದಲೇ ಅವರನ್ನು ಇಲ್ಲಿನವರು ಕರೆಯುತ್ತಿದ್ದುದ್ದರಿಂದ ಮಳಖೇಡಕರ್ ಎನ್ನುವ ಹೆಸರು ಮನೆತನದ ಶಾಶ್ವತ ಹೆಸರಾಗಿ ಉಳಿದುಕೊಂಡಿತೆಂದು ಪುರುಕಾಕಾನೇ ಆಗಾಗ ಹೇಳುತ್ತಿದ್ದ ನೆನಪು ಶ್ರೀಧರನಿಗಿದೆ. ಪೌರೋಹಿತ್ಯ, ಗುಡಿಯ ಪೂಜೆ ಜೊತೆಗೆ ಬಳುವಳಿಯಾಗಿ ಬಂದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ್ದು ಪುರುಕಾಕಾ ಒಬ್ಬರೆ ಎನ್ನುವುದು ಆ ಮನೆತನದ ಎಲ್ಲರಿಗೂ ಇವತ್ತಿಗೂ ಗೌರವ ಮತ್ತು ಹೆಮ್ಮೆ ಇದೆ. ದಾಯಾದಿಗಳೆಂಬ ಬೇಧವಿಲ್ಲದೆ ನನ್ನನ್ನು ಮತ್ತು ಶ್ರೀಹರಿಯನ್ನು ಪಟ್ಟಣದ ತಮ್ಮ ಮನೆಯಲ್ಲಿಟ್ಟುಕೊಂಡು ಶಾಲೆಗೆ ಸೇರಿಸಿದರೂ ನಮ್ಮಿಬ್ಬರಿಗೂ ವಿದ್ಯೆ ತಲೆಗೆ ಹತ್ತದೆ ಪೌರೋಹಿತ್ಯ, ವ್ಯವಸಾಯವೆಂದು ಊರನ್ನೇ ನೆಚ್ಚಿಕೊಂಡಿದ್ದು ತಪ್ಪಾಯ್ತೇನೋ ಎಂದು ಈಗೀಗ ಶ್ರೀಧರನಿಗೆ ಅನಿಸುವುದಿದೆ. ಊರು ಈಗ ಮೊದಲಿನಂತಿಲ್ಲ. ಕುಟುಂಬಗಳು ಪಟ್ಟಣಕ್ಕೆ ವಲಸೆ ಹೋಗಿರುವುದರಿಂದ ಊರು ಅರ್ಧಕ್ಕರ್ಧ ಖಾಲಿಯಾಗಿದೆ. ಕೂಲಿಗೆ ಆಳುಗಳು ಸಿಗದೆ ವ್ಯವಸಾಯದಿಂದ ಬರುತ್ತಿರುವ ಆದಾಯ ಶಾಕಾಯ ಲವಣಾಯ ಎನ್ನುವಂತಾಗಿದೆ. ಪೌರೋಹಿತ್ಯವನ್ನೇ ನಂಬಿಕೊಂಡು ಕೂಡುವಂತಿಲ್ಲ. ವತ್ಸಲಾ ಕಕ್ಕಿಗೆ ನಮ್ಮಿಬ್ಬರನ್ನೂ ಮನೆಯಲ್ಲಿಟ್ಟುಕೊಂಡು ಓದಿಸುವುದು ಹೊರೆಯ ಸಂಗತಿಯೆನಿಸಿದರೂ ಪುರುಕಾಕಾನಿಗೆ ಎದುರು ಹೇಳುವ ಧೈರ್ಯಸಾಲದೆ ನುಂಗಿಕೊಂಡಿದ್ದರು. ಅವರ ಮನೆಯಲ್ಲಿದ್ದ ಆ ಮೂರು ವರ್ಷಗಳ ಕಾರಣದಿಂದ ಪುರುಕಾಕಾನೊಂದಿಗೆ ನಮ್ಮಿಬ್ಬರ ಒಡನಾಟ ಮತ್ತಷ್ಟು ಆಪ್ತವಾಯಿತು ಎನ್ನುವ ನೆನಪು ಮನಸ್ಸನ್ನು ತುಂಬಿ ಶ್ರೀಧರನ ಕಣ್ಣುಗಳು ಒದ್ದೆಯಾದವು. 

ಶ್ರೀಧರ ಗೇಟು ತೆರೆದು ಮನೆಯ ಅಂಗಳದಲ್ಲಿ ಕಾಲಿಡುವ ಹೊತ್ತಿಗಾಗಲೇ ಶ್ರೀಹರಿ ಅದೇ ಆಗ ಜಳಕ ಮಾಡಿ ಅಂಗಳದಲ್ಲಿ ನಿಂತು ಸೂರ್ಯ ನಮಸ್ಕಾರ ಮಾಡುತ್ತಿದ್ದ. ಈ ವೇಳೆಯಲ್ಲಿ ಅಣ್ಣನ ಆಗಮನ ಅನಿರೀಕ್ಷಿತವೆನಿಸಿದರೂ ಅಣ್ಣ ಯಾವುದೋ ಗಹನವಾದ ವಿಷಯವನ್ನು ನನ್ನೊಡನೆ ಮಾತನಾಡಲು ಬಂದಿರುವನೆಂದು ಅವನು ಊಹಿಸಿದ. ಶ್ರೀಹರಿಯ ಊಹೆ ನಿಜ ಎನ್ನುವಂತೆ ಇನ್ನು ಅಂಗಳದಲ್ಲಿ ಇರುವಾಗಲೇ ‘ನೋಡೋ ಶ್ರೀಹರಿ ಇದೇ ಈಗ ಕೆಲವು ಕ್ಷಣಗಳ ಹಿಂದೆ ವತ್ಸಲಾ ಕಕ್ಕಿ ಫೆÇೀನ್ ಮಾಡಿದ್ದರು. ಪುರುಕಾಕಾ ಇನ್ನೂ ಮನೆಗೇ ಬಂದಿಲ್ಲಂತ ಇನ್ನು ಏನೇನೋ ತಗಾದೆಯ ಮಾತಾಡಿದರು. ಅಲ್ಲ ಇಲ್ಲಿಂದ ಹೋಗಿ ನಾಲ್ಕು ದಿನಗಳಾಯ್ತು ಕಾಕಾ ಎಲ್ಲಿ ಹೋಗಿರ್ಬಹುದು ಅನ್ನೊದೇ ತಿಳಿವಲ್ದು. ಹೋಗುವಾಗ ಎಲ್ಲಿಗಿ ಹೋಗ್ತಿನಂತ ನಿನಗೇನಾದ್ರೂ ಹೇಳಿ ಹೋಗ್ಯಾರೇನು’ ಶ್ರೀಧರ ದೊಡ್ಡ ಧ್ವನಿಯಲ್ಲಿ ಹೇಳಿದ ಮಾತು ಕೇಳಿ ಶ್ರೀಹರಿಗೆ ಪರಿಸ್ಥಿತಿಯನ್ನು ಅರಿಯಲು ಕೆಲವು ಕ್ಷಣಗಳೇ ಹಿಡಿದವು. ಮೂರುದಿನಗಳ ಕಾಲ ತಮ್ಮೊಂದಿಗಿದ್ದು ಆಪ್ತತೆಯ ಭಾವವನ್ನು ಉಣಿಸಿ ಹೋದ ಜೀವ ಈಗ ಎಲ್ಲೋ ದಿಕ್ಕಿಲ್ಲದೆ ಅಲೆದಾಡುತ್ತಿದೆ ಎನ್ನುವ ಸಂಗತಿಯೇ ಅವರಿಬ್ಬರ ಕಳವಳಕ್ಕೆ ಕಾರಣವಾಗಿ ಮುಂದಿನ ಕೆಲವು ಕ್ಷಣಗಳ ಕಾಲ ತಾವು ಹುಟ್ಟಿನಿಂದಲೇ ಮಾತು ಬರದವರೇನೋ ಎನ್ನುವಂತೆ ಮೌನವಾಗಿ ಒಬ್ಬರನ್ನೊಬ್ಬರು ನೋಡುತ್ತ ನಿಂತರು.

‘ನಾನು ಎಷ್ಟು ಬ್ಯಾಡಾ ಅಂತ ಬಡ್ಕೊಂಡರು ಕಾಕಾ ಕೇಳಲಿಲ್ಲ. ತಮ್ಮದೆ ಹಟ ಸಾಧಿಸಿದರು. ನನ್ನಂಥ ಹುಂಬ ಮನಸ್ಸಿನವರಿಗೆ ಆಕಿ ದ್ವೇಷದ ಮಾತು ತಡಕೊಳ್ಳಲಿಕ್ಕಿ ಆಗಲ್ಲ. ಅಂಥದ್ದರಾಗ ಕಾಕಾನಂಥ ಮೃದು ಮನಸ್ಸಿನವರಿಗಿ ಎಷ್ಟು ಸಂಕಟ ಆಗಿರ್ಲಿಕ್ಕಿಲ್ಲ’ ಶ್ರೀಹರಿಯೆ ಮೌನ ಮುರಿದು ಮಾತಿಗೆ ಶುರುವಿಟ್ಟ. ತಮ್ಮನ ಮಾತಿನಿಂದ ಶ್ರೀಧರನಿಗೆ ಎಲ್ಲವೂ ಅರ್ಥವಾಯಿತು. ‘ಖೋಡಿ ಮುದಿಕಿ ಜೀವನ ಪೂರ್ತಿ ದ್ವೇಷ ಮಾಡ್ಕೊತೆ ಬಂತು. ಒಳ್ಳೆಯವರ್ಯಾರು ಕೆಟ್ಟವರ್ಯಾರು ಅಂತ ಈ ವಯಸ್ಸಿನ್ಯಾಗೂ ತಿಳಿವಲ್ದು ಅಂದ್ರ ಆಕೀನ ಹ್ಯಾಂಗರೆ ಮನುಷ್ಯರ ಜಾತಿಗಿ ಸೇರಿದವಳು ಅಂತ ಅನ್ಬೇಕು’ ಶ್ರೀಧರ ಸ್ವಗತದಲ್ಲೆಂಬಂತೆ ಆಡಿದರೂ ಅವನಾಡಿದ ಮಾತುಗಳು ಅಲ್ಲೇ ಸಮೀಪದಲ್ಲಿ ನಿಂತಿದ್ದ ಶ್ರೀಹರಿಗೂ ಕೇಳಿಸದೆ ಉಳಿಯಲಿಲ್ಲ. ‘ಆವತ್ತು ಕಾಕಾಗ ನಾ ಹೇಳದೆ ಹೋಗೋದು ಬ್ಯಾಡಾಂತ. ಯಾಕಂದರ ಆ ಮುದುಕಿ ನಮ್ಮನ್ನ ಮೊದಲಿನಿಂದಲೂ ದಾಯಾದಿಗಳಂತ ದ್ವೇಷಿಸ್ತಾನೆ ಬಂತು. ಆದರ ಕಾಕಾ ಏನಂದ ಗೊತ್ತದಾಯೇನು ಅಲ್ಲೋ ಶ್ರೀಹರಿ ಸಾಯೋ ಹೊತ್ತನ್ಯಾಗ ಏನು ಒಯ್ತಿವಿ. ಈ ಜಗಳ, ದ್ವೇಷ ಎಲ್ಲ ಬದುಕಿರೊತನಕ ನೋಡು. ಸತ್ತಮ್ಯಾಲ ಎಲ್ಲರೂ ಖಾಲಿಕೈಲೇ ಹೋಗ್ಬೇಕು. ಕಾಕಾನ ಮಾತು ಕೇಳಿ ಅವರನ್ನ ತಡಿಬೇಕು ಅಂತ ನನಗ ಅನಿಸಲಿಲ್ಲ. ಕಾಕಾನ ನೋಡಿದ್ದೆ ಸಕ್ಕುಕಕ್ಕಿ ಅವತಾರ ನೋಡ್ಬೇಕಿತ್ತು. ಮೈದಾಗ ಸಿಂಪಿ ರಕ್ತಾಯಿಲ್ಲ ಎಲ್ಲಿ ಇತ್ತೋ ಶಕ್ತಿ ಎದ್ದು ಕೂತು ಬಾಯಿಗಿ ಬಂದಂಗ ಮಾತಾಡ್ಲಿಕತ್ಳು. ಆಕಿ ಗಂಡ, ಮಕ್ಳು ಸತ್ತಿದ್ದಕ್ಕೆಲ್ಲ ಪುರುಕಾಕಾ ಕಾರಣ ಅಂತ. ದಾಯಾದಿಗಳ ಆಸ್ತಿ ಹಿಸ್ಸೆ ಮಾಡುವಾಗ ನೌಕರದಾರರಿಗಿ, ಸ್ಥಿತಿವಂತರಿಗಿ ಹಿಸ್ಸೆ ಬ್ಯಾಡ. ಊರಲ್ಲೇ ಇದ್ದು ವ್ಯವಸಾಯ ಮಾಡೊರಿಗಿ ಮಾತ್ರ ಹಕ್ಕದಾ ಅಂತ ಕಾಕಾ ಹೇಳಿದ್ದಕ್ಕ ತನ್ನ ಮಕ್ಕಳಿಗಿ ಮಳಖೇಡಕರ್ ಮನೆತನದ ಆಸ್ತಿನಲ್ಲಿ ಪಾಲು ಸಿಗಲಿಲ್ಲ ನೀ ಉದ್ಧಾರ ಆಗಲ್ಲ ಅಂತ ಅಲ್ಲೆ ಅಂಗಳದಾಗಿದ್ದ ಮಣ್ಣು ತೊಗೊಂಡು ಕಾಕಾನ ಕಡಿ ತೂರಿದ್ಳು. ಕಾಕಾಗ ನೋಡ್ಬೇಕಿತ್ತು ಅಂಥ ಹೊತ್ತನ್ಯಾಗೂ ದೇವರು ನಿಂತಂಗ ನಿಂತಿದ್ರು. ಅವರೊಳಗಿನ ಸಂತತನ, ಆ ನಿರ್ಲಿಪ್ತತೆ ಬದುಕಿಡೀ ದ್ವೇಷ ಮಾಡ್ಕೋತ ಬಂದ ಸಕ್ಕುಕಕ್ಕಿಗಿ ಎಲ್ಲಿ ಅರ್ಥ ಆಗ್ಬೇಕು’ ಶ್ರೀಹರಿ ಅಣ್ಣನೆದುರು ಅಂದಿನ ಘಟನೆಯ ವಾಸ್ತವ ಬಿಚ್ಚಿಟ್ಟ.   

ಪುರುಕಾಕಾ ಇಲ್ಲಿಂದ ಹೋದಮೇಲೆ ಮನೆಗೆ ಹೋಗದೆ ಎಲ್ಲಿಯೋ ಹೋಗಿರುವುದಕ್ಕೂ ಸಕ್ಕುಕಕ್ಕಿಯ ಭೇಟಿಗೂ ನಡುವೆ ಇರಬಹುದಾದ ಸಂಬಂಧವನ್ನು ಶ್ರೀಧರನ ಮನಸ್ಸು ಲೆಕ್ಕಹಾಕತೊಡಗಿತು. ಒಂದೇ ಊರಲ್ಲಿದ್ದರೂ ಸಕ್ಕುಕಕ್ಕಿಯನ್ನು ಕೊನೆಯ ಸಲ ನೋಡಿದ್ದು ಅವಳ ಮಗ ವೆಂಕಟರಮಣ ತೀರಿಕೊಂಡಾಗ. ಅದಾಗಿ ಐದು ವರ್ಷಗಳಾದರು ಒಂದುಸಲವೂ ಅವಳ ಮನೆಗೆ ಹೋಗಿಲ್ಲ. ಹತ್ತು ವರ್ಷಗಳ ಹಿಂದೆ ಸುಬ್ಬರಾಯ ಕಾಕಾ ತೀರಿಕೊಂಡ ಮೇಲೆ ಸಕ್ಕುಕಕ್ಕಿಯ ದಾಯಾದಿ ಮತ್ಸರ ಮತ್ತಷ್ಟು ಬೆಳೆಯುತ್ತ ಕೊನೆಗೆ ಅದು ವೆಂಕಟರಮಣನನ್ನು ಬಲಿ ತೆಗೆದುಕೊಳ್ಳುವ ಹಂತಕ್ಕೆ ಹೋದದ್ದನ್ನು ಈಗ ನೆನಪಿಸಿಕೊಂಡಾಗ ಶ್ರೀಧರನ ಮನಸ್ಸಿಗೆ ಒಂದುತೆರನಾದ ಜಡತ್ವ ಆವರಿಸಿತು. ಎರಡು ತಲೆಮಾರುಗಳಾದರೂ ಹಿಸ್ಸೆ ಆಗದೇ ಉಳಿದಿದ್ದ ಆಸ್ತಿಯನ್ನು ಸಕ್ಕುಕಕ್ಕಿಯ ಕುಮ್ಮಕ್ಕಿನಿಂದಲೇ ಸುಬ್ಬರಾಯ ಕಾಕಾ ಪಾಲು ಕೇಳಲು ಮುಂದೆ ಬಂದಿದ್ದ. ವ್ಯವಸಾಯ ಮಾಡುತ್ತಿರುವವರಿಗೆ ಮಾತ್ರ ಆಸ್ತಿಯಲ್ಲಿ ಪಾಲು ಉಳಿದವರಿಗೆ ಇಲ್ಲ ಎಂದು ಪುರುಕಾಕಾ ಕಡ್ಡಿಮುರಿದಂತೆ ಹೇಳಿದ್ದರು. ಆಸ್ತಿಯೇನೂ ಪಿತ್ರಾರ್ಜಿತವಾಗಿ ಬಂದಿದ್ದಲ್ಲ. ಗುಡಿಯ ಪೌರೋಹಿತ್ಯದಿಂದ ಬಳುವಳಿಯಾಗಿ ಬಂದಿದ್ದ ಜಮೀನನನ್ನು ಸರ್ಕಾರ ಹಿಂದೆ ಪಡೆದ ಮೇಲೆ ಈಗಿರುವುದು ಪುರುಕಾಕಾ ದುಡಿದು ಖರೀದಿಸಿದ ಆಸ್ತಿ. ನ್ಯಾಯವಾಗಿ ನೋಡುವುದಾದರೆ ಮಳಖೇಡಕರ್ ಮನೆತನದ ಬೇರೆಯವರಿಗೆ ಆಸ್ತಿಯ ಮೇಲೆ ಹಕ್ಕೇ ಇರಲಿಲ್ಲ. ಮಳಖೇಡಕೇರ್ ಮನೆತನದಲ್ಲಿ ಹೆಚ್ಚು ಓದದೆ ಮನೆತನದ ಪೌರೋಹಿತ್ಯವನ್ನೇ ನಂಬಿ ಬದುಕುತ್ತಿರುವವರೆಂದರೆ ನಾನು ಮತ್ತು ಶ್ರೀಹರಿ ಮಾತ್ರ. ಅದಕ್ಕೆಂದೆ ಪುರುಕಾಕಾ ಖರೀದಿಸಿದ ಕೃಷಿ ಜಮೀನಿನಲ್ಲಿ ನಮ್ಮಿಬ್ಬರಿಗೂ ಸಮಪಾಲು ಮಾಡಿ ಕಾನೂನಿನ ರೀತಿ ನಮ್ಮಿಬ್ಬರ ಹೆಸರಿನಲ್ಲಿ ನೊಂದಾಯಿಸಿದ್ದರು. ವತ್ಸಲಾ ಕಕ್ಕಿಗೆ ಗೊತ್ತಾದರೆ ಎಲ್ಲಿ ತಗಾದೆ ತೆಗೆಯುವಳೊ ಎಂದು ಕಾಕಾ ಅಸಲಿ ವಿಷಯವನ್ನು ಅವರಿಂದ ಮುಚ್ಚಿಟ್ಟು ಅಪ್ಪ ಖರೀದಿಸಿದ್ದೆನ್ನುವಂತೆ ಬಿಂಬಿಸಿದ್ದರು. ಆದರೂ ಅದೆಷ್ಟೋ ದಿನಗಳ ಕಾಲ ಪುರುಕಾಕಾ ಬೆಳೆದದ್ದರಲ್ಲಿ ಎಲ್ಲರಿಗೂ ಸಮಪಾಲು ಹಂಚುತ್ತಿದ್ದರು. ಸಕ್ಕುಕಕ್ಕಿ ತಾನು ಜೀವಹಿಡಿದಿರುವುದೆ ಆಸ್ತಿಯಲ್ಲಿ ಪಾಲು ಪಡೆಯಲು ಎನ್ನುವಂತೆ ಬದುಕುತ್ತಿರುವುದನ್ನು ನೋಡುತ್ತಿದ್ದರೆ ತನಗೆ ಬದುಕಿನ ಮೇಲೇ ಜಿಗುಪ್ಸೆ ಹುಟ್ಟುತ್ತಿದೆ ಎಂದೆನಿಸಿತು ಶ್ರೀಧರನಿಗೆ. ಮಳಖೇಡಕರ್ ಮನೆತನದ ಆಸ್ತಿಯಲ್ಲಿ ಹಿಸ್ಸೆ ಮಾಡಿಸಿಯೇ ತಾನು ಸಾಯುವವಳು ಎಂದು ಸಕ್ಕುಕಕ್ಕಿ ಅವರಿವರ ಎದುರು ಹೇಳುತ್ತಿದ್ದ ಮಾತು ಶ್ರೀಧರನ ಕಿವಿಗೂ ತಲುಪಿ ಈಗ ಎರಡು ಮನೆತನಗಳ ನಡುವೆ ದ್ವೇಷದ ಗೋಡೆಯನ್ನೆಬ್ಬಿಸಿದೆ. ದ್ವೇಷಿಸುವುದಕ್ಕೆ ಆ ಮನೆಯಲ್ಲಿ ಒಂಟಿಗೂಬೆಯಂತೆ ಬದುಕುತ್ತಿರುವ ಕಕ್ಕಿಯನ್ನು ಬಿಟ್ಟರೆ ಬೇರೆ ಯಾರಿದ್ದಾರೆ. ವೆಂಕಟರಮಣ ಸತ್ತಾಗ ಹೆಣ ಎತ್ತುವುದಕ್ಕೂ ಗತಿ ಇರಲಿಲ್ಲ. ಪುರುಕಾಕಾ ಬರುವವರೆಗೆ ಯಾರೊಬ್ಬರೂ ಮನೆಯ ಅಂಗಳದಲ್ಲಿ ಕಾಲಿಟ್ಟಿರಲಿಲ್ಲ. ಪುರುಕಾಕಾ ಸೂತಕದ ಮನೆಯಲ್ಲೂ ಅದೆಂಥ ದ್ವೇಷ ಎಂದು ಎಲ್ಲರಿಗೂ ಬುದ್ಧಿ ಹೇಳಿ ತಾವೆ ಮುಂದೆ ನಿಂತು ಶವಸಂಸ್ಕಾರದಿಂದ ಹಿಡಿದು ವೈಕುಂಠದವರೆಗೆ ಎಷ್ಟೊಂದು ಮುತುವರ್ಜಿಯಿಂದ ನಿರ್ವಹಿಸಿದರು ಎಂದು ಈಗ ನೆನಪಾದರೆ ಮನದ ಭಾವದಲ್ಲಿ ಪುರುಕಾಕಾನ ಬಗ್ಗೆ ಅಭಿಮಾನ ಇಮ್ಮಡಿಯಾಗುತ್ತದೆ. ಗಂಡು ಮಕ್ಕಳು ಗತಿಯಿಲ್ಲದ ಮನೆಯಲ್ಲಿ ವೆಂಕಟರಮಣನ ಹೆಣಕ್ಕೆ ಬೆಂಕಿ ಇಟ್ಟಿದ್ದು ಪುರುಕಾಕಾನೆ. ಆ ಹದಿಮೂರು ದಿನಗಳ ಖರ್ಚನ್ನೆಲ್ಲ ಸ್ವತ: ನೋಡಿಕೊಂಡು ಹೋಗುವ ದಿನ ವಯಸ್ಸಾಗಿದೆ ಒಬ್ಬರೆ ಮನೆಯಲ್ಲಿ ಹ್ಯಾಗ ಇರ್ತಿರಿ ನಂಜೊತೆ ಊರಿಗೆ ಬನ್ನಿ ಕೊನೆಗಾಲದಲ್ಲಿ ನಿಮ್ಮ ಸೇವೆ ಮಾಡಿದ ಪುಣ್ಯ ಆದರೂ ಸಿಕ್ಕುತ್ತೆ ಎಂದಾಗ ಇದೇ ಸಕ್ಕುಕಕ್ಕಿ ಮುಖ ನೋಡಬೇಕಾಗಿತ್ತು. ಮತ್ತೆ ಅದೇ ಹಟ, ಅದೇ ದ್ವೇಷ. ತಾನು ದ್ವೇಷಕ್ಕಾಗಿಯೇ ಬದುಕಿರುವವಳು ಎಂದು ತೋರಿಸಿಕೊಂಡಳು. ಪುರುಕಾಕಾನದು ಮಾತ್ರ ಅದೇ ಶಾಂತ, ಗಂಭೀರ, ನಿರ್ಲಿಪ್ತ ನಿಲುವು. ಊರಿಗೆ ಹೋಗುವಾಗ ಕುಳಿತವಳ ಹತ್ತಿರ ಹೋಗಿ ಪಾದ ಮುಟ್ಟಿ ಪಾದ ಮುಟ್ಟುವುದೇನು ತಮ್ಮ ತಲೆಯನ್ನೇ ಅವಳ ಪಾದಕ್ಕೆ ಹಚ್ಚಿ ನಮಸ್ಕರಿಸಿ ಎದ್ದುಬರುವಾಗಲಾದರೂ ಮುದುಕಿಯ ಮನಸ್ಸು ಒಂದಿಷ್ಟಾದರೂ ಕರಗಬೇಕಲ್ಲ. ಅವಳ ಮನಸ್ಸು ಅದೆಂಥ ಜಡವಾದದ್ದು ನೆನಪಿಸಿಕೊಂಡರೆ ಇವತ್ತಿಗೂ ಮೈಜುಮ್ಮೆಂದು ಮೈಮೇಲಿನ ರೋಮಗಳೆಲ್ಲ ಎದ್ದು ನಿಲ್ಲುತ್ತವೆ. ‘ತಡಮಾಡೋದು ಬ್ಯಾಡ ಶ್ರೀಹರಿ ಈಗಲೇ ಊರಿಗಿ ಹೋಗಿ ವತ್ಸಲಾಕಕ್ಕಿನ ನೋಡಿದರೆ ವಿಷಯ ಏನಂತ ತಿಳಿಬಹುದು’ ಶ್ರೀಧರನ ಮಾತಿಗೆ ಶ್ರೀಹರಿ ತಲೆಯಾಡಿಸಿ ಸಮ್ಮತಿ ಸೂಚಿಸಿದ.

●●●

‘ಮನಿಬಿಟ್ಟು ಎಂಟು ದಿವಸ ಆಯ್ತು. ಸ್ವಲ್ಪ ಆದರೂ ಸಂಸಾರದ ಚಿಂತಿ ಬ್ಯಾಡೇನು. ಇಂಥವರಿಗಿ ಹೆಂಡತಿ, ಮಕ್ಕಳು ಬ್ಯಾರೆ ಕೇಡು. ಇಂಥಲ್ಲಿ ಹೋಗ್ತೀನಿ ಅಂತ ಹೇಳಿ ಹೋಗೊದಕ್ಕೇನು ಧಾಡಿ. ಬರೀ ಪುಸ್ತಕ ಓದಿದರ ಶಾಣ್ಯಾ ಆಗಲ್ಲೊ ಶ್ರೀಧರ ಸಂಸಾರ ಅಂದರೇನು, ಹೆಂಡತಿ-ಮಕ್ಕಳನ್ನ ಹ್ಯಾಗ ನೋಡ್ಕೊಬೇಕು ಅಂತ ಬುದ್ಧಿ ಇರಬೇಕು. ಪ್ರಾಮಾಣಿಕತೆ, ಸರಳ ಜೀವನ ಬರೀ ಇದೇ ಆಯ್ತು. ಇಂಥದ್ದರಿಂದೆಲ್ಲ ಹೊಟ್ಟಿ ತುಂಬ್ತುದೇನು. ನನಗಂತೂ ಇವರಗೂಡ ಏಗದರೊಳಗ ಸಾಕು ಆಗಿ ಹೋಗ್ಯಾದ. ಇನ್ನೊಂದು ವರ್ಷದಾಗ ರಿಟೈರ್ಡ್ ಆಗ್ತಾರ ಇನ್ನೂ ತಲಿ ಮ್ಯಾಲ ಸ್ವಂತದ್ದು ಅಂತ ಒಂದು ಸೂರು ಇಲ್ಲ ನೋಡು. ಹೀಂಗ ಎಂಟೆಂಟು ದಿವಸ ನೌಕರಿ ಬಿಟ್ಟು ಕೂತರ ಮನಿಗಿ ಕಳಿಸ್ತಾರ. ಆಮ್ಯಾಲ ಹೊಟ್ಟಿಗೇನು ತಿಂತಾರ. ತಾವೇನೋ ಊರೂರು ತಿರಗ್ತಾರ ಇಲ್ಲಿ ಹೆಂಡತಿ, ಮಕ್ಕಳು ಏನು ತಿನ್ಬೇಕು. ಶ್ರೀಧರ ಈ ಸಲ ಛಂದ ಬುದ್ಧಿ ಹೇಳಿ ತಿಳಿಸಿ ಮನಿಗಿ ಕರಕೊಂಡು ಬಾ ನೋಡು’ ವತ್ಸಲಾಕಕ್ಕಿ ಮಾತುಗಳಲ್ಲಿ ಕಾಕಾನ ಕುರಿತು ಕಾಳಜಿಗಿಂತ ಅವಳ ಮತ್ತು ಮಕ್ಕಳ ಬದುಕೇ ದೊಡ್ಡದಾಗಿ ಕಾಣಿಸಿ ಶ್ರೀಧರನಲ್ಲಿ ಅವ್ಯಕ್ತ ಸಂಕಟದ ಅನುಭವವೊಂದು ಹುಟ್ಟಿ ಅದು ಕ್ರಮೇಣ ನರನಾಡಿಗಳನ್ನು ವ್ಯಾಪಿಸುತ್ತ ಇಡೀ ದೇಹ ಒಂದು ತೆರನಾದ ನೋವಿನಿಂದ ಬಳಲುತ್ತಿರುವಂತೆ ಭಾಸವಾದಾಗ ಅಲ್ಲಿ ಕುಳಿತು ಕೊಳ್ಳುವುದು ಅಸಹನೀಯವೆನಿಸಿ ಧಗ್ಗನೆ ಎದ್ದು ಮನೆಯಿಂದ ಹೊರಬಂದು ಎದುರು ಕಾಣಿಸಿದ ರಸ್ತೆಯಲ್ಲಿ ಬಿರುಸಿನಿಂದ ಹೆಜ್ಜೆಹಾಕತೊಡಗಿದ. ಹಿಂದೆಯೇ ಓಡಿ ಬಂದ ಶ್ರೀಹರಿ ಅಣ್ಣನನ್ನು ಕೂಡಿಕೊಂಡ. ಈಗ ಮಾತನಾಡುವುದರಿಂದ ಅದು ಮತ್ತಷ್ಟು ಸಂಕಟಕ್ಕೆ ದಾರಿಮಾಡಿ ಕೊಡುತ್ತದೆ ಎನ್ನುವ ಅರಿವು ಏಕಕಾಲಕ್ಕೆ ಇಬ್ಬರಲ್ಲೂ ಮೂಡಿದೆಯೇನೋ ಎನ್ನುವಂತೆ ಮೌನವಾಗಿ ನಡೆಯತೊಡಗಿದರು. ಸ್ವಲ್ಪದೂರ ನಡೆಯುವುದರಲ್ಲಿ ಬಳಲಿಕೆ ಕಾಣಿಸಿಕೊಂಡಂತಾಗಿ ಶ್ರೀಧರ ನೆರಳಿಗಾಗಿ ಸುತ್ತಲೂ ನೋಡಿದ. ಅಣ್ಣನ ಮನಸ್ಥಿಯನ್ನರಿತ ಶ್ರೀಹರಿ ಅಲ್ಲೇ ಸಮೀಪದಲ್ಲಿದ್ದ ಮಠದ ಆವರಣದೊಳಕ್ಕೆ ಅಣ್ಣನ ಕೈಹಿಡಿದು ನಡೆಸಿಕೊಂಡು ಕರೆದೊಯ್ದ. ‘ಜೊತಿಗಿ ಸಂಸಾರ ಮಾಡ್ಲಿಕತ್ತು ಇಷ್ಟು ವರ್ಷಗಳಾದರೂ ಕಕ್ಕಿ ಇನ್ನೂ ಕಾಕಾಗ ಅರ್ಥ ಮಾಡಿಕೊಂಡೆಯಿಲ್ಲ ಅಂದರ ಮನಸ್ಸಿಗಿ ಭಾಳ ಬ್ಯಾಸರ ಅನಿಸ್ತದ’ ಶ್ರೀಹರಿಯ ಧ್ವನಿಯಲ್ಲಿ ನೋವಿನ ಛಾಯೆಯಿತ್ತು. ‘ಇದೇನು ಹೊಸದೇನೋ ಶ್ರೀಹರಿ. ನಾವು ಸಣ್ಣವರಿದ್ದಾಗ ಕಾಕಾನ ಮನ್ಯಾಗ ನಡೆದ ಆ ಘಟನೆ ನೆನಪಿಸಿಕೊ. ಬಡತನದಲ್ಲಿ ಬೆಳೆದ ಕಾಕಾಗ ಉಣ್ಣೊ ಅನ್ನ ಅಂದರ ದೇವರ ಇದ್ದಂಗ. ತಾಟನ್ಯಾಗ ಒಂದು ಅಗಳ ಕೂಡ ಚೆಲ್ಲಬಾರದು. ಆ ದಿನ ಬಚ್ಚಲಿನಲ್ಲಿ ಪಾತ್ರಿದೊಳಗಿದ್ದ ಮುಸುರಿ ನೋಡಿ ಅದೆಲ್ಲಿ ಸಿಟ್ಟು ಇತ್ತೊ ಎಂದೂ ಜೋರು ಧ್ವನಿಲೆ ಮಾತಾಡದವರು ಕಕ್ಕಿಗಿ ಬೈದು ಬಿಟ್ರು. ಕಕ್ಕಿ ಬಚ್ಚಲದಾಂದ ಪಾತ್ರಿ ತಂದು ಹಾಲ್‍ನ್ಯಾಗ ಕೂತು ಮುಸುರಿ ಒಳಗಿಂದ ಅನ್ನ ತಿನ್ನೊದು ನೋಡಿ ಪುರುಕಾಕಾ ಬೆಚ್ಚಿ ಬಿದ್ದಿದ್ರು. ಅನ್ನ ಹಾಳಾಯ್ತು ಅನ್ನೊ ನೋವಿಗಿಂತ ಕಕ್ಕಿ ವರ್ತನೆ ಅವರಿಗಿ ಆಘಾತ ತಂದಿತ್ತು. ಮಾಡಿದ ತಪ್ಪಿಗಿ ಪ್ರಾಯಶ್ಚಿತ ಅಂತ ಮೂರು ದಿವಸ ಕಾಕಾ ಬರೀ ನೀರು ಕುಡಿದು ಇದ್ರು. ಈ ನೋವು, ಯಾತನೆಯಿಂದಲೆ ಕಾಕಾನ ವ್ಯಕ್ತಿತ್ವ ಎಷ್ಟೊಂದು ಕಳೆಗಟ್ಟಿದೆ ನೋಡು’ ಪುರುಕಾಕಾನ ನೆನಪಾಗಿ ಶ್ರೀಧರನ ಕಣ್ಣುಗಳು ತುಂಬಿಬಂದವು.  

ಪೂಜೆ ಮುಗಿಸಿ ಗರ್ಭ ಗುಡಿಯ ಬಾಗಿಲಿಗೆ ಬೀಗ ಹಾಕಿ ಹೊರಹೋಗುತ್ತಿದ್ದ ಅರ್ಚಕರು ಇವರಿಬ್ಬರನ್ನು ನೋಡಿ ಹತ್ತಿರ ಬಂದು ತೀರ್ಥ ಪ್ರಸಾದ ಕೊಟ್ಟು ಮಾತಿಗೆ ನಿಂತರು. ಪೂರ್ವಾಪರಗಳನ್ನೆಲ್ಲ ವಿಚಾರಿಸಿದಾಗ ಮಠದ ಹತ್ತಿರದಲ್ಲೇ ಇರುವ ಪುರುಷೋತ್ತಮರಾಯರ ಸಂಬಂಧಿಗಳೆಂದು ತಿಳಿದು ಅವರ ಮುಖದಲ್ಲಿ ಪ್ರಸನ್ನತೆ ಮೂಡಿತು. ಅರ್ಚಕರ ಮುಖದಲ್ಲಿ ಅರಳಿನಿಂತ ಪ್ರಸನ್ನ ಭಾವದಿಂದಲೇ ಪುರುಕಾಕನ ಬಗ್ಗೆ ಅವರಿಗಿರುವ ಗೌರವದ ಅರಿವಾಗಿ ಬೆಳಗ್ಗೆಯಿಂದ ಬಾಡಿಹೋದ ಶ್ರೀಧರನ ಮನಸ್ಸು ಕೂಡ ಅರಳಿಕೊಂಡಿತು. ಇಬ್ಬರಲ್ಲಿ ಯಾರಾದರೊಬ್ಬರು ಮಾತಿಗಿಳಿಯುವ ಮೊದಲೇ ಅರ್ಚಕರೆ ಮಾತಿಗೆ ಶುರುವಿಟ್ಟುಕೊಂಡರು. ‘ಪುರುಷೋತ್ತಮರಾಯರು ನನಗೆ ನೇರವಾಗಿ ಪರಿಚಿತರೆನಲ್ಲ. ಅವರ ಕುರಿತು ಸಾಕಷ್ಟು ಕೇಳಿದ್ದೀನಿ. ಪ್ರತಿದಿನ ಮಠದ ಎದುರಿಂದಲೇ ಅವರು ತಮ್ಮ ಕಚೇರಿಗೆ ಹೋಗ್ತಿದ್ದರು. ಒಂದುದಿನ ಕೂಡ ಮಠದೊಳಗೆ ಕಾಲಿಟ್ಟವರಲ್ಲ. ಹೊರಗಿನಿಂದಲೇ ಒಂದು ಕ್ಷಣ ನಿಂತು ಗರ್ಭಗುಡಿಯಲ್ಲಿರುವ ದೇವರ ಮೂರ್ತಿಗೆ ಕೈಮುಗಿದು ಹೋಗೋದನ್ನ ನಾನು ಎಷ್ಟೋ ಸಲ ನೋಡಿದ್ದೀನಿ. ದೇವರು, ಸಂಪ್ರದಾಯ ಈ ಕುರಿತು ಅವರಿಗೆ ಸ್ವಲ್ಪ ಒಲುವು ಕಡಿಮೆ ಅಂತ ಕೇಳಿಗೊತ್ತು. ತುಂಬಾ ಓದಿಕೊಂಡವರಂತೆ. ಕೆಲವು ಪುಸ್ತಕಗಳನ್ನು ಬರಿದಿದ್ದಾರಂತೆ. ಒಮ್ಮೆ ನಮ್ಮ ಮಠದಿಂದ ಅವರನ್ನು ಸನ್ಮಾನ ಮಾಡಬೇಕು ಅಂತ ನಿರ್ಧರಿಸಿ ನಾಲ್ಕಾರುಜನ ಜೊತೆಗೂಡಿ ಅವರಿಗೆ ತಿಳಿಸೊದಕ್ಕೆ ಹೋದಾಗ ತನಗೆ ಇದರಲ್ಲೆಲ್ಲ ಆಸಕ್ತಿ ಇಲ್ಲ ಅಂತ ನಯವಾಗಿ ನಿರಾಕರಿಸಿದರು. ಆ ನಿರಾಕರಣೆಯಲ್ಲೂ ಎಂಥ ಘನತೆ ಇತ್ತು ಅಂತೀರಿ. ಯಾವ ಆರೋಪ, ವ್ಯಂಗ್ಯ, ಸಿಟ್ಟು ಇಲ್ಲದೆ ಅವರು ನಿರಾಕರಿಸಿದ ರೀತಿ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಸಂಸಾರದ ಈ ಎಲ್ಲ ಬಂಧನಗಳ ನಡುವಿದ್ದೂ ಆ ಒಂದು ನಿರ್ಲಿಪ್ತತೆಯನ್ನು ಬೆಳೆಸಿಕೊಳ್ಳೊದಿದೆಯಲ್ಲ ಅದು ನಮ್ಮಂಥವರಿಂದ ಸಾಧ್ಯವಾಗುವಂಥದ್ದಲ್ಲ. ಪುರುಷೋತ್ತಮರಾಯರು ಅದನ್ನೆಲ್ಲ ಸಾಧಿಸಿದ್ದಾರೆ. ಹೆಸರಿಗೆ ತಕ್ಕಂತೆ ಅವರು ಪುರುಷೋತ್ತಮರೆ’ ಅರ್ಚಕರು ಮಾತನಾಡಿ ಮುಗಿಸಿದಾಗ ಯಾವ ಏರಿಳಿತಗಳಿಲ್ಲದೆ ಒಂದೇ ಲಯದಲ್ಲಿ ಹರಿಯುತ್ತಿರುವ ಅವರ ಧ್ವನಿಯಲ್ಲಿನ ಅಂತ:ಕರಣದಿಂದ ಶ್ರೀಧರ ಮತ್ತು ಶ್ರೀಹರಿಯ ಮನಸ್ಸು ತುಂಬಿ ಬಂದಿತು. ಅರ್ಚಕರನ್ನು ನಮಸ್ಕರಿಸಿ ಮಠದಿಂದ ಹೊರಬಂದ ಇಬ್ಬರೂ ಪುರುಷೋತ್ತಮರಾಯರು ಕೆಲಸ ಮಾಡುತ್ತಿದ್ದ ಕಚೇರಿಯತ್ತ ನಡೆಯತೊಡಗಿದರು.  

●●●

‘ಬನ್ನಿ ಆಫೀಸ್ ಎದುರುಗಡೆ ಪಾರ್ಕ್ ಇದೆ. ಈಗ ಅಲ್ಲಿ ಜನಸಂಚಾರ ಕೂಡ ಕಡಿಮೆ ಇರುತ್ತೆ. ಪುರುಷೋತ್ತಮರಾಯರ ಬಗ್ಗೆ ಮಾತನಾಡಬೇಕು ಅಂದರೆ ಶಾಂತವಾತಾವರಣದಲ್ಲೇ ಮನಸ್ಸು ಬಿಚ್ಚಿಕೊಳ್ಳುತ್ತೆ. ಅಲ್ಲೆ ಕುಳಿತು ಮಾತನಾಡಿದರಾಯ್ತು’ ಪುರುಷೋತ್ತಮರಾಯರೊಂದಿಗೆ ಒಂದೇ ಸೆಕ್ಷನ್‍ನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜಪ್ಪ ಇಬ್ಬರನ್ನೂ ಕರೆದುಕೊಂಡು ಪಾರ್ಕ್‍ನ ಒಳ ಆವರಣವನ್ನು ಪ್ರವೇಶಿಸಿದರು. ಅವರು ಹೇಳಿದಂತೆ ಜನಸಂಚಾರವಿಲ್ಲದೆ ಅಲ್ಲಿನ ವಾತಾವರಣ ತುಂಬ ಪ್ರಶಾಂತವಾಗಿತ್ತು. ‘ಹೀಗೆ ಪುರುಷೋತ್ತಮರಾಯರು ಹೇಳದೆ ಕೇಳದೆ ಹೋದವರಲ್ಲ. ಇಪ್ಪತ್ತು ವರ್ಷಗಳಿಂದ ನನಗೂ ಅವರಿಗೂ ಪರಿಚಯ. ರಾಯರದು ಇಡೀ ಆಫೀಸಿನಲ್ಲೆ ತುಂಬ ಘನವಾದ ವ್ಯಕ್ತಿತ್ವ. ಸಂಬಳ ಬಿಟ್ಟು ಒಂದು ರೂಪಾಯಿಯನ್ನೂ ತೆಗೆದುಕೊಂಡವರಲ್ಲ. ಸಿಟ್ಟು, ದ್ವೇಷ, ವ್ಯಂಗ್ಯ ಈ ಎಲ್ಲ ಗುಣಗಳು ಈ ಮನುಷ್ಯನಿಗೆ ಪರಿಚಯವೇ ಇಲ್ಲವೇನೋ ಅನ್ನುವಷ್ಟು ರಾಯರು ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಂಡವರು. ಈ ಕೆಲಸದ ವಾತಾವರಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ತಾರತಮ್ಯ, ಮೇಲಾಧಿಕಾರಿಗಳ ಅಸಹಕಾರ, ತಮ್ಮ ತಮ್ಮ ಜನರನ್ನೇ ಆಯಕಟ್ಟಿನ ಜಾಗದಲ್ಲಿರುವಂತೆ ನೋಡಿಕೊಳ್ಳೊದು ಇದೆಲ್ಲ ನೋಡಿ ಅವರ ಮನಸ್ಸು ನೊಂದುಕೊಳ್ಳುತ್ತಿತ್ತು. ಹಾಗಂತ ಯಾರೆದರೂ ಹೇಳಿಕೊಂಡವರಲ್ಲ. ಎಲ್ಲವನ್ನೂ ನಗುನಗುತ್ತಲೆ ಸಹಿಸಿಕೊಳ್ಳುತ್ತಿದ್ದರು. ನನಗನಿಸುತ್ತೆ ಅವರೊಳಗೊಬ್ಬ ಅವಧೂತ ಇದ್ದಾನೆ ಅಂತ. ಈ ಸಾಹಿತ್ಯ ಓದೊದು, ಬರೆಯೊದು ಮಾಡುವುದರಿಂದ ಅವರಿಗೆಲ್ಲ ಇದು ಸಾಧ್ಯವಾಯ್ತೇನೋ ಅನಿಸುತ್ತೆ. ಈ ಹಣ, ಕೀರ್ತಿ, ಹೆಸರು ಇವುಗಳ ಹಿಂದೆ ಬೀಳುವ ಹಪಾಪಿತನ ಅವರಲ್ಲಿರಲಿಲ್ಲ. ಜವಾನನಿಂದ ಮೇಲಾಧಿಕಾರಿಗಳವರೆಗೆ ಎಲ್ಲರಿಗೂ ಗೌರವಕೊಡೊರು. ಅಧಿಕಾರದಲ್ಲಿರೊರನ್ನು ಓಲೈಸಬೇಕು, ಅಧಿಕಾರ ಇಲ್ಲದೆ ಇರೊರನ್ನು ಕಡೆಗಣಿಸೊದು ಇಂಥದ್ದನ್ನು ಎಂದೂ ಮಾಡಿದವರಲ್ಲ. ಇಡೀ ಬದುಕನ್ನು ಒಂದು ನಿರ್ಲಿಪ್ತತೆಯ ನೆಲೆಯಲ್ಲಿ ನೋಡಿದವರು ಅವರು. ಆ ಗುಣ ನಮಗೆಲ್ಲ ಬರೊದಿಲ್ಲ ಬಿಡಿ. ಒಂದು ವ್ಯವಸ್ಥೆಯೊಳಗಿದ್ದೂ ಆ ವವ್ಯಸ್ಥೆಯೊಂದಿಗೆ ಅಂತರವನ್ನು ಕಾಯ್ದುಕೊಳ್ಳೊಕೆ ಆ ಮನುಷ್ಯನಿಗೆ ಹೇಗೆ ಸಾಧ್ಯವಾಯ್ತು ಅನ್ನೊದು ಇವತ್ತಿಗೂ ನನಗೆ ಅದೊಂದು ಒಗಟಿನ ಸಂಗತಿ. ಅವರನ್ನು ನೋಡಿದಾಗಲೆಲ್ಲ ಭಕ್ತಿಯಿಂದ ಕೈಮುಗಿಬೇಕು ಅನಿಸುತ್ತೆ. ನಿಜಕ್ಕೂ ಪುರುಷೋತ್ತಮರಾಯರದು ಅಪರೂಪದ ವಿರಳ ವ್ಯಕ್ತಿತ್ವ. ನೋಡಿ ಈಗ ಒಂದು ಮೀಟಿಂಗ್ ಇದೆ. ನಾನು ಹೋಗಲೇಬೇಕು. ಬೇಕಾದರೆ ಸಂಜೆ ಭೇಟಿಯಾಗಿ ಇನ್ನಷ್ಟು ಮಾತಾಡಿದರಾಯ್ತು. ನೀವೇನೂ ಚಿಂತೆ ಮಾಡಬೇಡಿ. ರಾಯರಲ್ಲಿ ಬದುಕನ್ನು ಕೊನೆಗಾಣಿಸುವ ವಿಚಾರಕ್ಕೆ ಅವಕಾಶವೇ ಇಲ್ಲ. ಅವರದು ಯಾವತ್ತಿದ್ದರೂ ಬದುಕನ್ನು ತುಂಬ ಉಲ್ಲಾಸದಿಂದ ಅನುಭವಿಸುವ ಮನಸ್ಸು. ಜೀವಪ್ರೀತಿಯಿಂದ ಇರೋರು ಯಾರೂ ಜೀವವಿರೋಧಿಯಾಗಿರಲ್ಲ ಅಂತ ನಾನು ಭರವಸೆ ಕೊಡ್ತೀನಿ’ ಇಷ್ಟು ಹೇಳಿ ಬಸವರಾಜಪ್ಪ ಟೈಮಾಯಿತೆಂದು ಅವಸವಸರವಾಗಿ ಕಚೇರಿಯೊಳಗೆ ನಡೆದು ಹೋದರು. ಶ್ರೀಧರ ಮತ್ತು ಶ್ರೀಹರಿಗೆ ಮತ್ತೆ ಬಸವರಾಜಪ್ಪ ಅವರನ್ನು ಭೇಟಿ ಮಾಡುವ ಅವಶ್ಯಕತೆ ಕಾಣಿಸಲಿಲ್ಲ. ಪುರುಕಾಕನ ಘನವಾದ ವ್ಯಕ್ತಿತ್ವ ತಾವು ತಿಳಿದುಕೊಂಡಿದ್ದಕ್ಕಿಂತ ಹೆಚ್ಚೆ ಅವರೆದುರು ತೆರೆದುಕೊಂಡಿತ್ತು. ಪುರುಕಾಕನ ಬಗ್ಗೆ ಹೆಮ್ಮೆಯೂ ಅನಿಸಿತು. ಈಗ ಊರಿಗೆ ಹೊರಡುವುದೊಂದೆ ತಮ್ಮೆದುರಿರುವ ಏಕೈಕ ಮಾರ್ಗವೆಂದರಿತು ರೇಲ್ವೆ ಸ್ಟೇಷನ್ನಿನ ಹಾದಿಯನ್ನು ತುಳಿಯತೊಡಗಿದರು.

ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಮೇಲಿದ್ದ ಸಿಮೆಂಟ್ ಬೆಂಚಿನ ಮೇಲೆ ಕುಳಿತಿದ್ದ ಶ್ರೀಧರ ಮತ್ತು ಶ್ರೀಹರಿಯ ಮನಸ್ಸಿನ ತುಂಬೆಲ್ಲ ಪುರುಕಾಕಾನೇ ತುಂಬಿಕೊಂಡಿದ್ದ. ವತ್ಸಲಾಕಕ್ಕಿಯ ಭರ್ತ್ಸನೆಯ ಮಾತುಗಳಿಂದ ನೊಂದ ಮನಸ್ಸುಗಳಿಗೆ ಮಠದ ಅರ್ಚಕರ ಮತ್ತು ಬಸವರಾಜಪ್ಪನವರ ಮಾತುಗಳು ಒಂದಿಷ್ಟು ಸಮಾಧಾನ ನೀಡಿದ್ದವು. ಶ್ರೀಧರನ ಮನಸ್ಸು ವತ್ಸಲಾಕಕ್ಕಿಯ ಕೋಪದ ಮಾತುಗಳಿಗೆ ಕಾರಣವನ್ನು ಹುಡುಕುವುದರಲ್ಲಿ ತೊಡಗಿತ್ತು. ನಾರಾಯಣಕಾಕಾ ತೀರಿಕೊಂಡ ಮೇಲೆ ಅಲ್ವೆ ಸಕ್ಕುಕಕ್ಕಿಯೊಳಗಿನ ದ್ವೇಷ ಮತ್ತಷ್ಟು ಹೆಚ್ಚಿದ್ದು. ಅದಕ್ಕೆಲ್ಲ ಕಕ್ಕಿಗೆ ದೊರೆತ ಆರ್ಥಿಕ ಸ್ವಾತಂತ್ರ್ಯ ಮತ್ತು ಪರಾವಲಂಬಿತನದಿಂದ ಹೊರಬಂದ ಮನೋಭಾವವೇ ಕಾರಣವಾಗಿರಬಹುದೆ?. ಹಬ್ಬ ಹರಿದಿನ, ಸಂಬಂಧಿಕರ ಮದುವೆ ಮುಂಜಿಗಳಲ್ಲೆಲ್ಲ ಎಲ್ಲರೂ ಒಂದೆಡೆ ಸೇರಿದಾಗ ಹೆಣ್ಣುಮಕ್ಕಳೆಲ್ಲ ಸಕ್ಕುಕಕ್ಕಿಯ ಆರ್ಥಿಕ ಸ್ವಾತಂತ್ರ್ಯದ ಕುರಿತೇ ಎಷ್ಟೊಂದು ಮಾತನಾಡಿಕೊಳ್ಳುವರು. ಸಕ್ಕುಕಕ್ಕಿಯಲ್ಲಿ ನಾರಾಯಣಕಾಕಾ ಬದುಕಿದ್ದಾಗಿನ ಹಿಂಜರಿತ ಈಗಿಲ್ಲ. ಕಾಸುಕಾಸಿಗೂ ಪರದಾಡುತ್ತಿದ್ದ ತನ್ನ ತವರು ಮನೆಯವರಿಗೆ ಹಣಕಾಸಿನ ನೆರವು ನೀಡುವಷ್ಟು ಸುಭದ್ರಳಾಗಿದ್ದಾಳೆ ಆಕೆ. ಸಕ್ಕುಕಕ್ಕಿಯನ್ನು ನೋಡಿದಾಗಲೆಲ್ಲ ತಮಗಿಲ್ಲದ ಆ ಒಂದು ಭಾಗ್ಯಕ್ಕಾಗಿ ಉಳಿದವರೆಲ್ಲ ಮಮ್ಮಲ ಮರುಗುತ್ತಿದ್ದರು. ಹಾಗಾದರೆ ವತ್ಸಲಾಕಕ್ಕಿಯಲ್ಲೂ... ಈ ವಿಷಯ ಮನಸ್ಸಿನಲ್ಲಿ ಹೊಳೆದದ್ದೆ ಅಂಥ ಚಳಿಯಲ್ಲೂ ಶ್ರೀಧರನ ಮೈ ಬೆವರೊಡೆಯಿತು. ಕಕ್ಕಿಗೂ ತಾನು ಸ್ವತಂತ್ರಳಾಗಬೇಕೆನಿಸಿ ಅವಳೂ ಪುರುಕಾಕಾನ ಸಾವನ್ನು ಬಯಸುತ್ತಿರಬಹುದೇ? ಸಕ್ಕುಕಕ್ಕಿಯ ಆರ್ಥಿಕ ಸ್ವಾತಂತ್ರ್ಯ ವತ್ಸಲಾಕಕ್ಕಿಗೆ ಪ್ರೇರಣೆಯಾಯಿತೆ? ಕಕ್ಕಿಯ ಮನೋಗತವನ್ನು ಪುರುಕಾಕಾ ಮನಗಂಡಿದ್ದರೆ? ವತ್ಸಲಾಕಕ್ಕಿಯ ಅಭಿಲಾಷೆಯನ್ನು ಈಡೇರಿಸುವುದಕ್ಕಾಗಿಯೇ ಪುರುಕಾಕಾ ದೂರ ಎಲ್ಲಿಯಾದರೂ ಹೋಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆ? ಪ್ರಶ್ನೆಯ ಮೇಲೆ ಪ್ರಶ್ನೆ ಹುಟ್ಟಿ ಕುಳಿತಲ್ಲೇ ಮೈ ಮತ್ತು ಮನಸ್ಸಿಗೆ ಕೂಡಿಯೇ ಜೋಮು ಹಿಡಿದ ಸ್ಥಿತಿ. ವಾಸ್ತವದ ಅರಿವು ಮತ್ತಷ್ಟು ಮನಸ್ಸಿನ ಆಳಕ್ಕೆ ಇಳಿಯುತ್ತಿದ್ದಂತೆ ಶ್ರೀಧರನ ಕಣ್ಣಿಗೆ ಕತ್ತಲಾವರಿಸಿ ಇಡೀ ರೈಲುನಿಲ್ದಾಣದ ತುಂಬ ಕತ್ತಲು ತುಂಬಿಕೊಂಡಂತಾಗಿ ತನಗೆ ಶಬ್ದದ ವಿನ: ಕಣ್ಣಿಗೆ ಏನೂ ಗೋಚರಿಸುತ್ತಿಲ್ಲ ಎಂದರಿವಾದದ್ದೆ  ಆಸರೆಗಾಗಿ ಕುಳಿತಿದ್ದ ಸಿಮೆಂಟ್ ಬೆಂಚನ್ನು  ತನ್ನ ಎರಡೂ ಕೈಗಳಿಂದ ಭದ್ರವಾಗಿ ಹಿಡಿದುಕೊಂಡ.

-ರಾಜಕುಮಾರ ಕುಲಕರ್ಣಿ 


Wednesday, February 10, 2021

ಬೇರಿಗಂಟಿದ ಮರ: ಕಥಾಸಂಕಲನ ಬಿಡುಗಡೆ






ಫೆಬ್ರವರಿ ೭, ೨೦೨೧ ರಂದು ಕಲಬುರಗಿಯಲ್ಲಿ ನನ್ನ 'ಬೇರಿಗಂಟಿದ ಮರ' ಕಥಾಸಂಕಲನ ಬಿಡುಗಡೆಯಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ವಿಮರ್ಶಕ ಡಾ.ರಹಮತ್  ತರೀಕೆರೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಲಬುರಗಿಯ ಬಸವ ಪ್ರಕಾಶನ ಪ್ರಕಟಿಸಿ ಬಿಡುಗಡೆಗೊಳಿಸಿರುವ ಈ ಕಥಾಸಂಕಲನ ನನ್ನ ಮೊದಲ ಕಥಾಸಂಕಲನವಾಗಿದೆ. 

ಕಥೆ ಬರೆಯುತ್ತೆನೆಂದು ಅಂದುಕೊಂಡಿರಲಿಲ್ಲ ಆದರೂ ಕಥೆಗಳನ್ನು ಬರೆದೆ. ನನ್ನ ಮನಸ್ಸಿನ ಮೂಲೆಯಲ್ಲಿ ಕುಳಿತಿದ್ದ ಕಥೆಗಳು ಅಭಿವ್ಯಕ್ತಿಗಾಗಿ ಕಾತರಿಸುತ್ತಿದ್ದವೆಂದು ಕಾಣುತ್ತದೆ. 2008 ರಲ್ಲಿ ನನ್ನ ‘ಮೂರು ದೃಶ್ಯಗಳು’ ಕಥೆ ತುಷಾರ ಪತ್ರಿಕೆಯಲ್ಲಿ ಪ್ರಕಟವಾಗುವುದರೊಂದಿಗೆ ನಾನು ಕೂಡ ಕಥೆಗಾರನಾದೆ. ಹಾಗೆಂದು ನಿರಂತರವಾಗಿ ಕಥೆಗಳನ್ನು ಬರೆಯಲಿಲ್ಲ. ಹೀಗಾಗಿ ಕಥೆಗಳನ್ನು ಬರೆದದ್ದು ತುಂಬ ಕಡಿಮೆ. ಬೇರಿಗಂಟಿದ ಮರ ಕಥಾ ಸಂಕಲನದ ಹೆಸರಾದರೂ ಆ ಹೆಸರಿನ ಕಥೆ ಇಲ್ಲಿಲ್ಲ. ಇಲ್ಲಿನ ಕಥೆಗಳೆಲ್ಲವೂ ನಾನು ಬದುಕುತ್ತಿರುವ ಪರಿಸರದಿಂದಲೇ ಸ್ಪೂರ್ತಿ ಪಡೆದವುಗಳು ಆದ್ದರಿಂದ ಈ ನೆಲದ ಕಥೆಗಳಿವು. ಒಂದರ್ಥದಲ್ಲಿ ನೆಲದಾಳಕ್ಕಿಳಿದ ಬೇರಿಗಂಟಿದ ಕಥೆಗಳಿವು ಎನ್ನುವ ನಂಬಿಕೆ ನನ್ನದು.

ನಾನು ಬರೆದ ಕಥೆಗಳನ್ನು ಓದಿ ವಿಮರ್ಶಿಸುವ ಒಂದಿಷ್ಟು ಗೆಳೆಯರಿದ್ದಾರೆ. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ. 

ನನ್ನ ಕುಟುಂಬದ ಸದಸ್ಯರ ಸಹಕಾರ ಮತ್ತು ಪ್ರೀತಿಯನ್ನು ಈ ಸಂದರ್ಭ ಮರೆಯಲಾರೆ.

ಕಥಾ ಸಂಕಲನವನ್ನು ಪ್ರಕಟಿಸಿದ  ಕಲಬುರಗಿಯ ಬಸವ  ಪ್ರಕಾಶನದವರಿಗೆ  ನನ್ನ ಕೃತಜ್ಞತೆಗಳು.

-ರಾಜಕುಮಾರ ಕುಲಕರ್ಣಿ 

Saturday, January 30, 2021

ಸತ್ಯಯುಗದಿಂದ ಕಲಿಯುಗಕ್ಕೆ ಸಿನಿಮಾದ ರೂಪಾಂತರ

 

        ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಶರಶಯ್ಯೆಯ ಮೇಲೆ ಮಲಗಿ  ಸಾವಿಗಾಗಿ ಉತ್ತರಾಯಣ ಕಾಲವನ್ನು ನಿರೀಕ್ಷಿಸುತ್ತಿದ್ದ ಭೀಷ್ಮ ಯುಗಧರ್ಮದ ಕುರಿತು ಯುಧಿಷ್ಠಿರನಿಗೆ ಹೀಗೆ ಉಪದೇಶಿಸುತ್ತಾನೆ ‘ಅಧರ್ಮ ಎನ್ನುವುದು ಅಸ್ತಿತ್ವದಲ್ಲಿಯೇ ಇರದ ಕಾಲ ಸತ್ಯಯುಗ ಎನಿಸಿಕೊಳ್ಳುತ್ತದೆ. ನಾಲ್ಕರಲ್ಲಿ ಒಂದು ಪಾಲಿನಷ್ಟು ಧರ್ಮ ಖಿಲವಾಗಿ ಅದರ ಜಾಗದಲ್ಲಿ ಅಧರ್ಮವು ನೆಲೆಸಿದಾಗ ಆ ಕಾಲವು ತ್ರೇತಾಯುಗವೆನಿಸಿಕೊಳ್ಳುವುದು. ಅರ್ಧಾಂಶ ಮಾತ್ರ ಧರ್ಮವಿದ್ದು ಉಳಿದರ್ಧ ಅಧರ್ಮದಿಂದ ತುಂಬಿಹೋಗಿರುವ ಕಾಲವು ದ್ವಾಪರಯುಗ. ಎಲ್ಲೆಲ್ಲಿಯೂ ಅಧರ್ಮವೇ ತಾಂಡವವಾಡುತ್ತಿದ್ದು ಧರ್ಮವು ಹೇಳಹೆಸರಿಲ್ಲದಂತಾದಾಗ ಆ ಕಾಲವು ಕಲಿಯುಗ ಎನಿಸಿಕೊಳ್ಳುವುದು’. ಡ್ರಗ್ಸ್ ಮಾರಾಟಜಾಲದ ಪ್ರಕರಣದಲ್ಲಿ ಸಿನಿಮಾ ನಟ ನಟಿಯರ ಹೆಸರುಗಳು ಕೇಳಿಬರುತ್ತಿರುವ ಈ ಸಂದರ್ಭ ಭೀಷ್ಮನ ಉಪದೇಶದ ಮಾತುಗಳನ್ನು ಸಿನಿಮಾರಂಗಕ್ಕೂ ಅನ್ವಯಿಸಿ ನೋಡಬೇಕಾದ ತುರ್ತು ಎದುರಾಗಿದೆ.

        ಒಂದುಕಾಲದಲ್ಲಿ ಸೃಜನಶೀಲ ಮಾಧ್ಯಮವೆಂದೇ ಗುರುತಿಸಲ್ಪಟ್ಟಿದ್ದ ಸಿನಿಮಾ ಮಾಧ್ಯಮ ಸದಭಿರುಚಿಯ ಸಿನಿಮಾಗಳ ನಿರ್ಮಾಣಕ್ಕೆ ಹೆಸರಾಗಿತ್ತು. ಕುಟುಂಬ ಪ್ರೇಮದ ಕಥಾನಕದ ಸಿನಿಮಾಗಳು ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಆಗೆಲ್ಲ ಸಿನಿಮಾ ಎನ್ನುವುದು ಸಿದ್ಧ ಸೂತ್ರದಲ್ಲೇ ಅಂದರೆ ಕೌಟುಂಬಿಕ ಕಥೆ, ನಾಲ್ಕು ಹಾಡುಗಳು, ಎರಡು ಹೊಡೆದಾಟಗಳು, ಪ್ರತ್ಯೇಕ ಟ್ರ್ಯಾಕ್‍ನಲ್ಲಿ ಸಾಗುವ ಹಾಸ್ಯ ಇದೇ ಮಾದರಿಯಲ್ಲಿ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದರೂ ಅಲ್ಲೊಂದು ನೀತಿಯಿತ್ತು. ಕಲಾವಿದರು ಕೂಡ ಒಂದು ಮೌಲಿಕ ಬದುಕನ್ನು ಬದುಕುತ್ತಿದ್ದರು. ಸಿನಿಮಾವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕ ಸಿನಿಮಾದ ಕಥೆ ತನ್ನದೇ ಮನೆಯ ಕಥೆ ಎನ್ನುವಂತೆ ತಲ್ಲಿನನಾಗುತ್ತಿದ್ದ. ಕುಟುಂಬದ ಸದಸ್ಯರೆಲ್ಲರೂ ಯಾವ ಮುಜುಗರಕ್ಕೊಳಗಾಗದೆ ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದವು. ಇವತ್ತಿಗೂ ರಾಮ, ಕೃಷ್ಣ, ಅರ್ಜುನ ನಮಗೆ ಕಾಣಿಸಿಕೊಳ್ಳುವುದು ರಾಜಕುಮಾರ ನಿರ್ವಹಿಸಿದ ಪಾತ್ರಗಳ ಮೂಲಕವೇ. ಪ್ರತಿಯೊಬ್ಬ ತಾಯಿ ತನಗೆ ರಾಜಕುಮಾರನಂಥ ಮಗನಿರಲೆಂದು ಮತ್ತು ಪ್ರತಿಹೆಣ್ಣುಮಗಳು ರಾಜಕುಮಾರನಂಥ ಸಹೋದರನಿರಲೆಂದು ಆಶಿಸುತ್ತಿದ್ದಳು. ಒಟ್ಟಾರೆ ಸಿನಿಮಾ ಜನರ ಬದುಕಿನ ಭಾಗವಾಗಿತ್ತು. ಸಿನಿಮಾದ ಕಲಾವಿದರು ಕೇವಲ ಬಣ್ಣಹಚ್ಚಿ ಅಭಿನಯಿಸುವ ಪಾತ್ರಗಳಾಗಿರಲಿಲ್ಲ ಅವರು ಆದರ್ಶವಾಗಿದ್ದರು ಮತ್ತು ಅನುಕರಣೀಯರಾಗಿದ್ದರು. 

        ಹಿಂದೆಲ್ಲ ಸಿನಿಮಾ ಮೇಲಿನ ಪ್ರೀತಿಗಾಗಿ ಸಿನಿಮಾಗಳನ್ನು ನಿರ್ಮಿಸುವ ನಿರ್ಮಾಪಕರಿದ್ದರು. ಅದೇರೀತಿ ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು ಕೂಡ ಕಲೆಯ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದಲೇ ಸಿನಿಮಾ ನಿರ್ಮಾಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಬಾಲಕೃಷ್ಣರಂಥ ಕಲಾವಿದ ತಮ್ಮ ಬದುಕಿನ ಬಹುಭಾಗವನ್ನು ಬಡತನದಲ್ಲೇ ಕಳೆದರೂ ಅವರೆಂದೂ ಅಭಿಮಾನ ಸ್ಟುಡಿಯೋ ಮಾರಲು ಮುಂದಾಗಲಿಲ್ಲ. ರಾಜಕುಮಾರ ತಮ್ಮ 150 ಸಿನಿಮಾಗಳ ಅಭಿನಯದ ನಂತರ ಆರ್ಥಿಕವಾಗಿ ಚೇತರಿಸಿಕೊಂಡರು. ಆದರೆ 1990 ರ ದಶಕದ ಸಂದರ್ಭ ಸಿನಿಮಾ ಮಾಧ್ಯಮ ಹೊಸ ಬದಲಾವಣೆಗಳಿಗೆ ತನ್ನನ್ನು ತೆರೆದುಕೊಂಡಿತು. ವಿವಿಧ ಉದ್ಯಮಗಳಲ್ಲಿ ಹಣತೊಡಗಿಸಿ ಲಾಭದ ರುಚಿ ಸವಿದವರು ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟರು. ಸಿನಿಮಾ ಕೂಡ ಬೇರೆ ಕ್ಷೇತ್ರಗಳಂತೆ ಬಂಡವಾಳ ಹೂಡುವ ಕ್ಷೇತ್ರವಾಗಿ ಬದಲಾಯಿತು. ಒಟ್ಟಾರೆ ಈ ಬಂಡವಾಳದಾರರು ಸಿನಿಮಾವನ್ನು ಮಾಧ್ಯಮದಿಂದ ಉದ್ಯಮವಾಗಿ ರೂಪಾಂತರಿಸಿದರು. ವರ್ಷದಿಂದ ವರ್ಷಕ್ಕೆ ಸಿನಿಮಾಗಳ ನಿರ್ಮಾಣದ ಸಂಖ್ಯೆಯಲ್ಲಿ ಏರುಗತಿ ಕಾಣಿಸತೊಡಗಿತು. ಕಲಾವಿದರ ಸಂಭಾವನೆಯಲ್ಲೂ ಸಾಕಷ್ಟು ಪ್ರಗತಿ ಗೋಚರಿಸಿತು. ಕ್ರಮೇಣ ಸಿನಿಮಾರಂಗದ ಥಳಕು ಬಳುಕಿಗೆ ಮಾರುಹೋಗಿ ಸಿನಿಮಾದಲ್ಲಿ ಅಭಿನಯಿಸುವ ಆಸೆಯಿಂದ ಮಾಧ್ಯಮವನ್ನು ಪ್ರವೇಶಿಸುವರ ಸಂಖ್ಯೆಯೂ ಹೆಚ್ಚತೊಡಗಿತು.   

        ಜಾಗತೀಕರಣವು ಸಿನಿಮಾ ಮಧ್ಯಮದಲ್ಲಿ ಮತ್ತಷ್ಟು ಬದಲಾವಣೆಗಳನ್ನು ತಂದಿತು. ಈ ಮೊದಲು ಸೀಮಿತ ಮಾರುಕಟ್ಟೆ ಹೊಂದಿದ್ದ ಸಿನಿಮಾ ಜಾಗತೀಕರಣದ ಪ್ರಭಾವದಿಂದ ತನ್ನ ಮಾರುಕಟ್ಟೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿಕೊಂಡಿತು. ಇವತ್ತು ಕನ್ನಡ ಸಿನಿಮಾಗಳು ಅಮೆರಿಕಾ, ಇಂಗ್ಲೆಂಡ್, ಜಪಾನ್ ದೇಶಗಳಲ್ಲೂ ಪ್ರದರ್ಶನಗೊಳ್ಳುತ್ತಿವೆ. ಇದು ನೇರವಾಗಿ ಸಿನಿಮಾ ಕಲಾವಿದರ ಮೇಲೆ ಪರಿಣಾಮ ಬೀರಿತು. ಸಣ್ಣ ಪ್ರೇಕ್ಷಕ ವರ್ಗಕ್ಕೆ ಸೀಮಿತಗೊಂಡಿದ್ದ ನಟ ನಟಿಯರಿಗೆ ಅಂತರಾಷ್ಟ್ರೀಯ ಮಟ್ಟದ ಪ್ರೇಕ್ಷಕ ವರ್ಗ ಪ್ರಾಪ್ತವಾದ ಕಾರಣ ಅವರ ಜನಪ್ರಿಯತೆಯೂ ಹೆಚ್ಚಿತು. ಸಿನಿಮಾ ನಟ ನಟಿಯರ ಈ ಜನಪ್ರಿಯತೆಯನ್ನು ಅನೇಕ ಉದ್ಯಮಗಳು ತಮ್ಮ ಉತ್ಪಾದನಾ ವಸ್ತುಗಳ ಮಾರಾಟದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾರಂಭಿಸಿದವು. ಒಂದು ಮೂಲದ ಪ್ರಕಾರ ಸಿನಿಮಾದ ಸಂಭಾವನೆಗಿಂತ ಜಾಹೀರಾತುಗಳಲ್ಲಿನ ಅಭಿನಯದಿಂದಲೇ ಕಲಾವಿದರಿಗೆ ಹೆಚ್ಚಿನ ಆದಾಯವಾಗುತ್ತಿದೆ. ಚುನಾವಣಾ ಸಂದರ್ಭದಲ್ಲೂ ವಿವಿಧ ರಾಜಕೀಯ ಪಕ್ಷಗಳು ಸಿನಿಮಾ ನಟ ನಟಿಯರನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಳ್ಳುವುದುಂಟು. ಹೀಗೆ ಧೀಡಿರನೇ ಪ್ರಾಪ್ತವಾಗುತ್ತಿರುವ ಜನಪ್ರಿಯತೆ ಮತ್ತು ಸಂಭಾವನೆ ರೂಪದಲ್ಲಿ ದೊರೆಯುತ್ತಿರುವ ಆರ್ಥಿಕ ಲಾಭ ಸಿನಿಮಾ ಕಲಾವಿದರನ್ನು ಉನ್ಮತ್ತಗೊಳಿಸಿದೆ. ಇದು ಅಪರೋಕ್ಷವಾಗಿ ಸಿನಿಮಾ ರಂಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತಿದೆ. 

        ಉಳಿದೆಲ್ಲ ಮಾಧ್ಯಮಗಳಿಗಿಂತ ಸಿನಿಮಾ ಮಾಧ್ಯಮ ತುಂಬ ಆಕರ್ಷಣೀಯವಾದ ಮಾಧ್ಯಮ. ಇದು ಯುವ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಸಿನಿಮಾದ ಸಂದೇಶವನ್ನು ಯುವ ಪ್ರೇಕ್ಷಕ ವರ್ಗ ಸರಿ ತಪ್ಪುಗಳ ನಿರ್ಣಯವಿಲ್ಲದೆ ಒಪ್ಪಿಕೊಳ್ಳುತ್ತಿದೆ. ಸಿನಿಮಾದ ಪ್ರಭಾವದಿಂದಾಗಿ ಮಚ್ಚ, ಪೊರ್ಕಿ, ಫಿಗರ್ ದಂಥ  ಪದಗಳು ಕಾಲೇಜು ಆವರಣಗಳಲ್ಲಿ ಲೀಲಾಜಾಲವಾಗಿ ಹರಿದಾಡುತ್ತಿವೆ. ‘ಚಿಗುರಿದ ಕನಸು’ವಿನ ಶಂಕರನಲ್ಲಿ ತನ್ನನ್ನು ಕಂಡುಕೊಳ್ಳುವ ಪ್ರೇಕ್ಷಕ ‘ಮೆಂಟಲ್ ಮಂಜ’ದ ಮಂಜನಲ್ಲೂ ತನ್ನನ್ನು ಹುಡುಕಿಕೊಳ್ಳುತ್ತಾನೆ. ಇದು ಇವತ್ತಿನ ಸಿನಿಮಾದ ನಿಜವಾದ ದುರಂತ. ಪ್ರೇಕ್ಷಕರ ಈ ಮನೋಭಾವವನ್ನೇ ಬಂಡವಾಳವಾಗಿಸಿಕೊಳ್ಳುತ್ತಿರುವ ಸಿನಿಮಾ ಮಾಧ್ಯಮ ಇಲ್ಲಿ ನಾಯಕ ನಟನನ್ನು ಸಕಲಕಲಾವಲ್ಲಭನಂತೆ ತೋರಿಸಲು ಅವನಿಂದ ಹಾಡು ಹಾಡಿಸುತ್ತದೆ, ನೃತ್ಯ ಮಾಡಿಸುತ್ತದೆ, ಕೈಯಲ್ಲಿ ಮಚ್ಚು ಕೊಟ್ಟು ಸಾಲು ಸಾಲು ಕೊಲೆಗಳನ್ನು ಮಾಡಿಸುತ್ತದೆ. ಸಿನಿಮಾದ ವಿಚಾರ ಸಂಕಿರಣದಲ್ಲಿ ಶಾಲಾ ಬಾಲಕ ಸಿನಿಮಾ ನೋಡಿದಾಗ ಕೈಯಲ್ಲಿ ಮಚ್ಚು ಬಂದೂಕು ಹಿಡಿಯಬೇಕೆನಿಸುತ್ತದೆ ಏಕೆ ಎಂದು ಕೇಳಿದ ಪ್ರಶ್ನೆಗೆ ವೇದಿಕೆಯಲ್ಲಿದ್ದ ಘಟಾನುಘಟಿಗಳು ಉತ್ತರಿಸಲು ತಡವರಿಸಬೇಕಾಯಿತು. 

ಇಂದು ಸಿನಿಮಾ ನಿರ್ಮಾಣದಲ್ಲಿ ಒಂದು ಬೌದ್ಧಿಕ ಶಿಸ್ತಿಲ್ಲ. ಹಣಗಳಿಕೆ ಸಿನಿಮಾದ ಮೂಲ ಉದ್ದೇಶವಾಗಿರುವಾಗ ಮತ್ತು ಶ್ರಮಿಕ ವರ್ಗದ ಅನಕ್ಷರಸ್ಥ ಪ್ರೇಕ್ಷಕರು ಸಿನಿಮಾದ ಜನಪ್ರಿಯತೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿರುವಾಗ ಸಿನಿಮಾ ಮಾಧ್ಯಮವನ್ನು ಬೌದ್ಧಿಕ ಶಿಸ್ತಿಗೆ ಒಳಪಡಿಸುವುದು ಅಸಾಧ್ಯದ ಸಂಗತಿ. ಸದಭಿರುಚಿಯ ಪ್ರೇಕ್ಷಕ ವರ್ಗ ಸಿನಿಮಾ ವೀಕ್ಷಣೆಯಿಂದ ದೂರಸರಿದಿರುವುದು ಇನ್ನೊಂದು ಪ್ರಮುಖವಾದ ಕಾರಣ. ಸದಭಿರುಚಿಯ ಪ್ರೇಕ್ಷಕ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣವನ್ನು ಒಂದು ಬೌದ್ಧಿಕ ಶಿಸ್ತಿಗೆ ಒಳಪಡಿಸಿ ಕಲಾತ್ಮಕ ಎನ್ನುವ ಮಾದರಿಯ ಹೊಸ ಅಲೆಯ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆಯಾದರೂ ಇಂಥ ಸಿನಿಮಾಗಳನ್ನು ಅದೆಷ್ಟು ಪ್ರೇಕ್ಷಕರು ವೀಕ್ಷಿಸಿ ಯಶಸ್ವಿಗೊಳಿಸುತ್ತಿರುವರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಸದಾಕಾಲ ಮೇನ್‍ಸ್ಟ್ರೀಮ್‍ನಲ್ಲಿ ಕಾಣಿಸಿಕೊಳ್ಳಲು ಆ ಮೂಲಕ ಹಣ ಮತ್ತು ಜನಪ್ರಿಯತೆಗಾಗಿ ಹಂಬಲಿಸುತ್ತಿರುವ ಬಹಳಷ್ಟು ಸಿನಿಮಾ ಕಲಾವಿದರು ಈ ಹೊಸ ಅಲೆಯ ಸಿನಿಮಾಗಳಲ್ಲಿ ಅಭಿನಯಿಸಲು ಮುಂದೆ ಬರುತ್ತಿಲ್ಲ. 

ಸಿನಿಮಾ ನಟ ನಟಿಯರ ಜನಪ್ರಿಯತೆಯನ್ನು ಡ್ರಗ್ಸ್ ಮಾರಾಟದ ಜಾಲ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಸಿನಿಮಾಗಳಲ್ಲಿ ನೀತಿ, ಧರ್ಮದ ಸಂಭಾಷಣೆಗಳನ್ನು ಉರುಹೊಡೆದು ಪ್ರೇಕ್ಷಕರಿಗೊಪ್ಪಿಸುವ ಇವರು ಅದೇ ಪ್ರೇಕ್ಷಕರಿಗೆ ಮಾದಕ ದ್ರವ್ಯಗಳನ್ನು ನೀಡುತ್ತಿರುವರು. ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವ ಮಹತ್ವದ ಜವಾಬ್ದಾರಿ ಸಿನಿಮಾ ಮಧ್ಯಮದ ಮೇಲಿದೆ. ಆದರೆ ಮಾದಕ ದ್ರವ್ಯಗಳ ವ್ಯಸನಿಗಳು ಮತ್ತು ಮಾರಾಟಗಾರರಾಗಿರುವ ಇಂಥ ಕಲಾವಿದರಿಂದ ಆ ಜವಾಬ್ದಾರಿಯನ್ನು ನಿರೀಕ್ಷಿಸುವುದಾದರೂ ಹೇಗೆ? ಇಂಥ ಸಂಕ್ರಮಣ ಕಾಲದಲ್ಲಿ ರಾಜಕುಮಾರ ನೆನಪಾಗುತ್ತಾರೆ. ರಾಜಕುಮಾರ ಎಂದೂ ತಾನೊಬ್ಬ ಸೂಪರ್ ಸ್ಟಾರ್ ಎಂದು ವರ್ತಿಸಲಿಲ್ಲ. ಅಸಾಮಾನ್ಯನಾಗಿಯೂ ಒಬ್ಬ ಸಾಮಾನ್ಯನಂತೆ ಬದುಕಿದರು. ಸಿನಿಮಾ ಬದುಕಿನ ಥಳುಕು ಬಳುಕಿನ ನಡುವೆ ಇದ್ದೂ ತೀರ ಸರಳವಾಗಿ ಬದುಕಿದ ಅಪರೂಪದ ಕಲಾವಿದ. ಇಂಥ ಮಹಾನ್ ಕಲಾವಿದರ ಬದುಕು ನಮ್ಮ ಇಂದಿನ ಯುವ ಕಲಾವಿದರಿಗೆ ಮಾದರಿಯಾಗಬೇಕು.   

-ರಾಜಕುಮಾರ ಕುಲಕರ್ಣಿ  


Tuesday, December 29, 2020

ಬೇರಿಗಂಟಿದ ಮರ (ಕಥೆ)

        


(೧೭ ಡಿಸೆಂಬರ್ ೨೦೨೦ ರ 'ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ) 

 ಬೆಳಗಿನ ವಾಕಿಂಗ್ ಮುಗಿಸಿ ಮನೆಗೆ ಮರಳಿದ ಕೃಷ್ಣಭಟ್ಟರಿಗೆ ಮನೆಯ ಕಾಂಪೌಂಡ್ ಗೋಡೆಯ ಮೇಲೆ ರಾರಾಜಿಸುತ್ತಿದ್ದ ಹೂವಿನ ಹಾರದಿಂದ ಅಲಂಕರಿಸಿದ್ದ ‘ರಾಧಾಕೃಷ್ಣ ಸಂಸ್ಕಾರ ಸರ್ವಿಸ್ ಸೆಂಟರ್’ ಎನ್ನುವ ಬೋರ್ಡ್ ಕಣ್ಣಿಗೆ ಬಿದ್ದು ಅವರಲ್ಲಿ ವಿಚಿತ್ರ ಸಂಕಟವನ್ನು ಮತ್ತು ಮಗನ ಮೇಲೆ ಕೋಪವನ್ನು ಒಟ್ಟೊಟ್ಟಿಗೆ ಮೂಡಲು ಕಾರಣವಾಯಿತು. ಮನೆಯ ಎದುರಿನಿಂದ ಹಾದು ಹೋಗುತ್ತಿದ್ದವರು ಒಂದು ಕ್ಷಣ ನಿಂತು ಬೋರ್ಡಿನ ಮೇಲೆ ಕಣ್ಣು ಹಾಯಿಸಿ ಮನೆಯನ್ನೊಮ್ಮೆ ವಿಚಿತ್ರವಾಗಿ ನೋಡಿ ಹೊರಟುಹೋಗುತ್ತಿದ್ದ ದೃಶ್ಯ ಕೃಷ್ಣಭಟ್ಟರಲ್ಲಿನ ಸಂಕಟ ಮತ್ತು ಕೋಪವನ್ನು ಮತ್ತಷ್ಟು ಹೆಚ್ಚಿಸಿ ಕಾಂಪೌಂಡ್ ಬಾಗಿಲನ್ನು ಧಡಾರನೇ ನೂಕಿದರು. ಅವರು ನೂಕಿದ ರಭಸಕ್ಕೆ ಕಾಂಪೌಂಡಿನ ಬಾಗಿಲು ಕಿರ್ರ್ ಎಂದು ಸದ್ದು ಮಾಡಿ ಆ ಪ್ರಶಾಂತ ಮುಂಜಾನೆಯ ನೀರವ ವಾತಾವರಣಕ್ಕೆ ಒಂದು ವಿಚಿತ್ರ ಕಳೆಯನ್ನು ನೀಡಿತು. ಕಾಂಪೌಂಡು ಧಾಟಿ ಒಳಗೆ ಬಂದವರು ಬಲಭಾಗಕ್ಕೆ ದೃಷ್ಟಿ ಹರಿಸಿದವರ ಮುಖವನ್ನು ಮತ್ತಷ್ಟು ಕಳಾಹೀನವಾಗಿಸುವಂತೆ ಮುಕ್ತಿರಥ ಎನ್ನುವ ಹೆಸರುಹೊತ್ತ ವಾಹನ ಕಣ್ಣಿಗೆ ಬಿದ್ದು ಕೃಷ್ಣಭಟ್ಟರು ಮತ್ತಷ್ಟು ಕೋಪಗೊಂಡರು. ‘ರಾಧಾ ಇವನದು ಯಾಕೋ ಅತಿಯಾಯ್ತು ಅಂತ ಅನಿಸುತ್ತೆ’ ಹೆಗಲ ಮೇಲಿದ್ದ ಪಂಚೆಯಿಂದ ಮುಖದ ಬೆವರನ್ನು ಒರೆಸುತ್ತ ಅಡುಗೆ ಮನೆಗೆ ಬಂದವರು ಅಲ್ಲೆ ಇದ್ದ ಕುರ್ಚಿಯ ಮೇಲೆ ಕುಳಿತು ನೀರಿನ ಲೋಟವನ್ನು ಕೈಗೆತ್ತಿಕೊಂಡು ಅದರಲ್ಲಿದ್ದ ನೀರನ್ನೆಲ್ಲ ಒಂದೇ ಗುಕ್ಕಿಗೆ ತಮ್ಮ ಗಂಟಲಿಗೆ ಸುರಿದುಕೊಂಡರು. ಚಹಾ ಮಾಡುತ್ತಿದ್ದ ರಾಧಮ್ಮನವರಿಗೆ ಪತಿಯ ಸಂಕಟ ಅರ್ಥವಾದರೂ ಅವರು ಅಸಹಾಯಕರಾಗಿದ್ದರು. ‘ಎಲ್ಲಿದ್ದಾನೆ ನಿನ್ನ ಸುಪುತ್ರ. ಇನ್ನು ಬೆಳಗಾಗಿಲ್ಲವಂತೊ’ ಕೃಷ್ಣಭಟ್ಟರ ಮಾತಿನಲ್ಲಿ ವ್ಯಂಗ್ಯವಿತ್ತು. ಅಪ್ಪ ಮತ್ತು ಮಗನ ಶೀತಲ ಸಮರದ ನಡುವೆ ರಾಧಮ್ಮನವರು ಹೈರಾಣಾಗಿದ್ದರು. ‘ನೀವು ವಾಕಿಂಗ್ ಅಂತ ಹೊರಗೆ ಹೋದ ಹಿಂದೆನೆ ಫೆÇೀನ್ ಬಂತು. ಅರ್ಜೆಂಟ್ ಕೆಲಸಯಿದೆ ಅಂತ ಹೋದ. ಬರೋದು ಲೇಟಾಗುತ್ತೆ ಊಟಕ್ಕೆ ಕಾಯ್ಬೇಡಿ ಅಂತ ಹೇಳ್ದ’ ರಾಧಮ್ಮನವರು ಗಂಡನಿಗೆ ವರದಿ ಒಪ್ಪಿಸಿ ಕುದಿಯುತ್ತಿದ್ದ ಚಹಾವನ್ನು ಸ್ಟೌವ್‍ನಿಂದ ಕೆಳಗಿಳಿಸಿ ಕಪ್ಪಿಗೆ ಸುರಿಯತೊಡಗಿದರು. ‘ಸತ್ತವರು ಯಾವ ಪೈಕಿಯಂತೆ ಏನಾದರೂ ಹೇಳಿದನೋ ಹೇಗೆ’ ಕೃಷ್ಣಭಟ್ಟರ ಮಾತಿನಲ್ಲಿ ಸಹಜತೆ ಇದ್ದರೂ ಅದು ರಾಧಮ್ಮನವರಿಗೆ ತನಿಖೆಯ ಧಾಟಿಯಂತೆ ಅನ್ನಿಸಿತು. ‘ಕೆಲಸ ಅಂದರೆ ಅದು ಯಾವಾಗಲೂ ಸಾವೇ ಅಂತ ಯಾಕೆ ಅನ್ಕೊತೀರಿ’ ಅಪೇಕ್ಷಿಸುವ ಧಾಟಿಯಲ್ಲಿ ಕೇಳಿದರಾದರೂ ಅವರ ಒಳ ಮನಸ್ಸು ಮಗ ಹೋಗಿರುವ ಕಾರಣವನ್ನು ಊಹಿಸುತ್ತಿತ್ತು. ಮಾತಿಗೆ ಮಾತು ಬೆಳೆದು ಸುಮ್ಮನೆ ತಮ್ಮಿಬ್ಬರ ನಡುವೆ ಅದು ಜಗಳಕ್ಕೆ ಕಾರಣವಾಗುತ್ತದೆಂದು ಹಿಂದಿನ ಅನುಭವದಿಂದ ಅರಿತಿದ್ದ ಕೃಷ್ಣಭಟ್ಟರು ಮಾತು ಬೆಳೆಸದೆ ಕುಡಿದು ಖಾಲಿಯಾದ ಕಪ್ಪನ್ನು ಡೈನಿಂಗ್ ಟೇಬಲ್ ಮೇಲಿಟ್ಟು ಹಾಲ್‍ಗೆ ಬಂದು ಅಂದಿನ ದಿನಪತ್ರಿಕೆಯ ಮೇಲೆ ಕಣ್ಣಾಡಿಸತೊಡಗಿದರು.

ಮುಕುಂದ ಕೃಷ್ಣಭಟ್ಟ ಮತ್ತು ರಾಧಮ್ಮ ದಂಪತಿಗಳ ಏಕಮಾತ್ರ ಸಂತಾನ. ಮದುವೆಯಾದ ಎಂಟು ವರ್ಷಗಳ ನಂತರ ಹುಟ್ಟಿದ ಪುತ್ರಸಂತಾನವೆಂದು ತುಂಬ ಮುದ್ದಿನಿಂದಲೇ ಬೆಳೆಸಿದ್ದರು. ಮುಕುಂದ ಬಾಲ್ಯದಿಂದಲೇ ತುಂಬ ಚುರುಕಾಗಿದ್ದ. ಓದು, ಆಟ ಎಲ್ಲದರಲ್ಲೂ ಮುಂದಿದ್ದ. ಮಗನನ್ನು ಡಾಕ್ಟರ್ ಇಲ್ಲವೇ ಎಂಜಿನಿಯರ್ ಮಾಡಬೇಕೆನ್ನುವ ಆಸೆ ಕೃಷ್ಣಭಟ್ಟರಿಗಿದ್ದರೂ ಅವನಿಗೆ ಈವೆಂಟ್ ಮ್ಯಾನೇಜಮೆಂಟ್‍ಗಳಲ್ಲಿ ಆಸಕ್ತಿ ಇದ್ದುದ್ದರಿಂದ ಬಿ.ಬಿ.ಎ ಓದುತ್ತೆನೆಂದು ಹಟ ಹಿಡಿದಾಗ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಅಡ್ಮಿಷನ್ ಕೊಡಿಸಿದ್ದರು. ಮುಂದೆ ಎಂ.ಬಿ.ಎ ಗೂ ಸುಲಭವಾಗಿ ಪ್ರವೇಶ ಸಿಕ್ಕು ಮುಕುಂದ ಎರಡು ವರ್ಷ ಪರಿಶ್ರಮಪಟ್ಟು ಓದಿ ಫಸ್ಟ್ ಕ್ಲಾಸಿನಲ್ಲಿ ಉತ್ತೀರ್ಣನಾಗಿದ್ದ. ಈಗೀಗ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಓದಿದವರು ಮಾತ್ರವಲ್ಲದೆ ಎಂ.ಬಿ.ಎ ಓದಿದವರೂ ಅಮೆರಿಕಾ, ಇಂಗ್ಲೆಂಡ್‍ಗಳಿಗೆ ಹೋಗುತ್ತಿದ್ದಾರೆಂದು ಕೇಳಿ ತಿಳಿದಿದ್ದ ಕೃಷ್ಣಭಟ್ಟರಿಗೂ ಮಗ ಫಾರೆನ್ನಿಗೆ ಹೋಗುತ್ತಾನೆನ್ನುವ ಮಹದಾಸೆಯಿತ್ತು. ಕಾಲೊನಿಯ ಗಣಪತಿ ದೇವಸ್ಥಾನದ ಅರ್ಚಕರಾದ ಶ್ರೀಪತಿರಾಯರ ಮಗ ಎಂ.ಬಿ.ಎ ಓದಿ ಈಗ ಅಮೆರಿಕಾದ ದೊಡ್ಡ ಕಂಪನಿಯಲ್ಲಿ ಡಾಲರಿನಲ್ಲಿ ಸಂಬಳ ಪಡೆಯುತ್ತಿರುವ ವಿಷಯ ತಿಳಿದಾಗಿನಿಂದ ಕೃಷ್ಣಭಟ್ಟರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿತ್ತು. ಮಗ ಅಮೆರಿಕಾ ಸೇರಿದ್ದೆ ಅವನಿಗೊಂದು ಮದುವೆಮಾಡಿ ತಾವು ಹೆಂಡತಿಯೊಂದಿಗೆ ಅಮೆರಿಕಾ ಮತ್ತು ಭಾರತದ ನಡುವೆ ಓಡಾಡುತ್ತ ಬದುಕಿನ ಸಂಧ್ಯಾಕಾಲವನ್ನು ಸಂತೃಪ್ತವಾಗಿ ಕಳೆದರಾಯ್ತು ಎನ್ನುವ ದೂರದ ಆಸೆ ಅವರದಾಗಿತ್ತು. ತಮಗೂ ನೌಕರಿಯಿಂದ ನಿವೃತ್ತಿಯಾಗಿದೆ ಮಗನನ್ನು ಬಿಟ್ಟರೆ ನಮ್ಮವರು ಅಂತ ಸಮೀಪದವರು ಯಾರೂ ಇಲ್ಲ ಹೀಗಿರುವಾಗ ನೆಲೆ ನಿಲ್ಲಲು ಭಾರತವೇನು ಅಮೆರಿಕಾವೇನು ಎನ್ನುವ ಲೆಕ್ಕಚಾರ ಭಟ್ಟರದಾಗಿತ್ತು. ಎಂ.ಬಿ.ಎ ಓದಿ ವರ್ಷ ಕಳೆದರೂ ಮುಕುಂದ ಅಮೆರಿಕಾಗೆ ಹೋಗುವುದಿರಲಿ ಇಲ್ಲೇ ಯಾವ ಕಂಪನಿಯಲ್ಲೂ ಕೆಲಸಕ್ಕೆ ಸೇರದೆ ಇದ್ದಾಗ ಕೃಷ್ಣಭಟ್ಟರಿಗೆ ಆತಂಕ ಶುರುವಾಯಿತು. ಒಂದೆರಡು ಸಲ ರಾಧಮ್ಮನವರಿಂದ ಹೇಳಿಸಿ ನೋಡಿದರೂ ಮಗನಿಂದ ಯಾವ ಪ್ರತಿಕ್ರಿಯೆಯೂ ಬರದೆ ಇದ್ದಾಗ ನೇರವಾಗಿ ವಿಷಯವನ್ನು ತಾವೇ ಪ್ರಸ್ತಾಪಿಸಿದರು. ‘ನನಗೆ ಬೇರೆಯವರ ಕೈಕೆಳಗೆ ಕೆಲಸ ಮಾಡೋ ಆಸಕ್ತಿ ಇಲ್ಲ ಅಪ್ಪ. ನಾನೇ ಒಂದು ಕಂಪನಿ ಶುರು ಮಾಡ್ಬೇಕು ಅಂತಿದ್ದೀನಿ’ ಮುಕುಂದ ತನ್ನ ಆಸೆಯನ್ನು ಅಪ್ಪ ಅಮ್ಮನ ಮುಂದೆ ತೋಡಿಕೊಂಡ. ಕೃಷ್ಣಭಟ್ಟರಿಗೂ ಮಗನ ಮಾತು ಸರಿ ಅನಿಸಿತು. ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಕೃಷ್ಣಭಟ್ಟರೇನೂ ಮಗನ ದುಡಿಮೆಯನ್ನು ಅವಲಂಬಿಸಿರಲಿಲ್ಲ. ಮೂವತ್ತು ವರ್ಷಗಳ ಕಾಲ ಹೈಸ್ಕೂಲು ಮಾಸ್ತರರಾಗಿ ದುಡಿದು ಗಳಿಸಿದ್ದೇ ಬೇಕಾದಷ್ಟಿತ್ತು. ವಾಸಿಸಲು ಸ್ವಂತ ಮನೆ ಹತ್ತಿರದ ಊರಿನಲ್ಲಿ ತೋಟ ಆರ್ಥಿಕವಾಗಿ ಯಾವ ತೊಂದರೆಯೂ ಇರಲಿಲ್ಲ. ಮಗ ಸ್ವಂತದ ವ್ಯವಹಾರ ಶುರು ಮಾಡ್ತೀನಿ ಅಂದಾಗ ಖುಷಿಯಿಂದಲೇ ಒಪ್ಪಿಗೆ ನೀಡಿದ್ದರು.

ಕಳೆದ ಹಲವು ದಿನಗಳಿಂದ ಕೃಷ್ಣಭಟ್ಟರಿಗೆ ಸಮಾಧಾನವೇ ಇಲ್ಲ. ಹೊಟ್ಟೆಯಲ್ಲೆಲ್ಲ ವಿಚಿತ್ರ ಸಂಕಟದ ಅನುಭವ. ರಾತ್ರಿ ನಿದ್ದೆಯಲ್ಲಿ ಕನವರಿಸುತ್ತಾರೆ. ಎಚ್ಚರವಾಗಿ ಎದ್ದು ಕುಳಿತರೆ ಮತ್ತೆ ನಿದ್ದೆ ಹತ್ತಿರ ಸುಳಿಯಲಾರದು. ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದದ್ದುಂಟು. ಹೆಂಡತಿ ಜೊತೆ ಹಂಚಿಕೊಳ್ಳಬೇಕೆಂದರೂ ಆ ಜೀವಕ್ಕಾದರೂ ಯಾಕೆ ನೋವು ಕೊಡಬೇಕೆನ್ನುವ ಭಾವವೇ ಮುಂದೆ ಬಂದು ಆಡಬೇಕೆಂದ ಮಾತುಗಳೆಲ್ಲ ತಮ್ಮೊಳಗೇ ಉಳಿಯುತ್ತವೆ. ಕಾಲೊನಿಯಲ್ಲಿ ತಮಗೆ ಪರಿಚಯವಿರುವವರ ಹತ್ತಿರ ಹೇಳಿಕೊಳ್ಳಬೇಕೆಂದರೂ ಎಷ್ಟಾದರೂ ಇದು ತಮ್ಮ ಸಂಸಾರದ ವಿಷಯ ತಾವೇ ಬೇರೆಯವರು ಆಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿಕೊಳ್ಳಲೂ ಆಗದೆ ನೋವನ್ನು ಒಳಗೊಳಗೆ ಅನುಭವಿಸುತ್ತ ಹಣ್ಣಾಗುತ್ತಿರುವರು. ಅಷ್ಟಕ್ಕೂ ಇದೆಲ್ಲ ಶುರುವಾದದ್ದು ಆ ದಿನ ಮುಕುಂದ ಮನೆಗೆ ಬರುವಾಗ ಕೈಯಲ್ಲಿ ಹಿಡಿದು ತಂದಿದ್ದ ಆ ಲಕೋಟೆಯಿಂದಲೇ. ಅವತ್ತು ತುಂಬ ಖುಷಿಯಾಗಿದ್ದ. ಮನೆಗೆ ಬಂದವನೆ ನಮ್ಮಿಬ್ಬರನ್ನೂ ಹಾಲ್‍ಗೆ ಕರೆದು ನಿಲ್ಲಿಸಿ ತಾನು ತಂದಿದ್ದ ಲಕೋಟೆಯನ್ನು ಕೈಗೆ ಕೊಟ್ಟು ಕಾಲಿಗೆರಗಿದ್ದ. ನಾಳೆಯಿಂದ ಕೆಲಸ ಶುರು ಮಾಡುತ್ತಿರುವುದಾಗಿಯೂ ಕಂಪನಿಯನ್ನು ರಜಿಸ್ಟ್ರೇಶನ್ ಮಾಡಿಸಿದ ಪತ್ರವಿದು ಎಂದು ಹೇಳಿದ. ಲಕೋಟೆಯ ಒಳಗಿದ್ದ ಪತ್ರದಲ್ಲಿನ ‘ರಾಧಾಕೃಷ್ಣ ಸಂಸ್ಕಾರ ಸರ್ವಿಸ್ ಸೆಂಟರ್’ ಎನ್ನುವ ಹೆಸರನ್ನು ಓದಿದಾಗ ಏನೊಂದೂ ಅರ್ಥವಾಗಲಿಲ್ಲ. ಮುಕುಂದನೆ ವಿವರಿಸಿ ಹೇಳಿದಾಗ ಅರ್ಥವಾಯಿತು. ಆ ಕ್ಷಣ ಪತ್ರ ಕೈಯಿಂದ ಜಾರಿ ಕೆಳಗೆ ಬಿದ್ದು ಕೃಷ್ಣಭಟ್ಟರ ಮುಖ ಕಪ್ಪಿಟ್ಟಿತು. ಇಂಥ ಉದ್ಯೋಗಕ್ಕಿಂತ ಕೆಲಸವಿಲ್ಲದೆ ಸುಮ್ಮನೆ ಮನೆಯಲ್ಲಿರುವುದು ಒಳಿತು ಎಂದು ಖಾರವಾಗಿಯೇ ಮಗನಿಗೆ ಹೇಳಿದರು. ‘ಅಪ್ಪ ಈ ಈವೆಂಟ್ ಮ್ಯಾನೇಜಮೆಂಟ್‍ಗಳಿಗೆ ಇಂಥದ್ದೆ ಕೆಲಸ ಅಂತ ಇಲ್ಲ. ಇದರಿಂದ ನಾನೊಬ್ಬನೆ ಅಲ್ಲ ಹತ್ತಾರು ಕುಟುಂಬಗಳಿಗೆ ಆಶ್ರಯ ಸಿಗುತ್ತೆ’ ಮಗ ತನ್ನ ಕಂಪನಿಯ ಕೆಲಸವನ್ನು ಸಮರ್ಥಿಸಿಕೊಂಡ. ‘ಎಷ್ಟೆಂದರೂ ಓದಿದವನು ಏನಾದರೂ ಮಾಡ್ಕೋ’ ಕೃಷ್ಣಭಟ್ಟರ ಮಾತಿನಲ್ಲಿನ ಅಸಹಾಯಕತೆಯನ್ನು ಗುರುತಿಸಿದ ರಾಧಮ್ಮನವರ ಕರುಳು ಚುರುಕ್ಕೆಂದಿತು.

ನಾಲ್ಕಾರು ತಿಂಗಳುಗಳಲ್ಲೆ ಮುಕುಂದನ ಕಂಪನಿ ಸಾಕಷ್ಟು ಪ್ರಗತಿಯನ್ನು ಕಂಡಿತು. ಈಗೀಗ ಅವನಿಗೂ ಬಿಡುವಿಲ್ಲದ ಕೆಲಸದಿಂದ ಮನೆಯಲ್ಲಿ ಸಮಯ ಕಳೆಯುವುದೇ ಅಪರೂಪವಾಗುತ್ತಿದೆ. ನಗರದಲ್ಲಿ ಮಾತ್ರವಲ್ಲದೆ ದೂರದ ಹೊರ ಊರುಗಳಲ್ಲೂ ಸಿಗುತ್ತಿರುವ ಕೆಲಸಗಳಿಂದಾಗಿ ಮುಕುಂದನ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯುತ್ತಿದೆ. ಮನೆಯ ಕಾಂಪೌಂಡಿನೊಳಗೆ ಬಲಭಾಗದಲ್ಲಿದ್ದ ಖಾಲಿ ಜಾಗದಲ್ಲಿ ತನ್ನದೇ ಸಣ್ಣದೊಂದು ಆಫೀಸ್ ಮಾಡಿಕೊಂಡು ನಾಲ್ಕಾರು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿರುವನು. ಕಳೆದ ತಿಂಗಳಷ್ಟೆ ಶವಸಾಗಿಸಲು ಹೊಸ ವಾಹನವನ್ನು ಖರೀದಿಸಿ ಅದಕ್ಕೆ ಮುಕ್ತಿರಥ ಎಂದು ಹೆಸರು ಕೊಟ್ಟಿರುವನು. ಕೆಲವೊಮ್ಮೆ ಶವಸಂಸ್ಕಾರಕ್ಕೆ ನಾಲ್ಕಾರು ದಿನ ವಿಳಂಬವಾಗುವಂತಿದ್ದರೆ ಶವಗಳು ಕೊಳೆಯದಂತೆ ಸುರಕ್ಷಿತವಾಗಿಡಲು ಜಪಾನ್ ದೇಶದಿಂದ ಆಮದು ಮಾಡಿಕೊಂಡ ಮಾರ್ಚ್ಯುರಿ ಕ್ಯಾಬೆನೇಟ್ ಮನೆಗೆ ಬಂದು ಅದು ಈಗ ಕಾಲೊನಿಯ ಜನರ ಆಕರ್ಷಣೆಯ ಕೇಂದ್ರವಾಗಿದೆ. ಈ ಮಾರ್ಚ್ಯುರಿ ಕ್ಯಾಬಿನೇಟ್‍ನಲ್ಲಿ ಒಮ್ಮಲೇ ನಾಲ್ಕು ಶವಗಳನ್ನಿಡುವ ಅನುಕೂಲವಿದೆ. ಮುಕುಂದನ ಕಂಪನಿ ಅವರವರ ಅಗತ್ಯಕ್ಕೆ ತಕ್ಕಂತೆ ಸೇವೆಯನ್ನು ಒದಗಿಸುತ್ತಿತ್ತು. ಶವಸಂಸ್ಕಾರಕ್ಕೆ ಬೇಕಾದ ಸಾಮಗ್ರಿಗಳಿಂದ ಹಿಡಿದು ಕುಣಿ ತೋಡುವುದು ಇಲ್ಲವೇ ಚಿತೆಗೆ ಕಟ್ಟಿಗೆಗಳನ್ನು ಪೂರೈಸುವುದು, ಶವ ಸಾಗಿಸುವುದು, ಅಪರಕರ್ಮಗಳನ್ನು ಮಾಡಿಸುವುದು, ಸಂಸ್ಕಾರಕ್ಕೆ ಬರುವ ದೂರದೂರಿನ ನೆಂಟರಿಷ್ಟರಿಗೆ ಉಳಿದುಕೊಳ್ಳಲು ಲಾಡ್ಜಗಳ ವ್ಯವಸ್ಥೆ, ಸಾವು ಸಂಭವಿಸಿದ ಮನೆಯವರಿಗೆ ಶವಸಂಸ್ಕಾರದ ನಂತರ ಊಟದ ವಿಲೇವಾರಿ, ಶ್ರಾದ್ಧದ ಆಚರಣೆ ಹೀಗೆ ಬಿಡಿಯಾಗಿ ಇಲ್ಲವೇ ಪ್ಯಾಕೇಜ್ ರೂಪದಲ್ಲಿ ಶುಲ್ಕವನ್ನು ಪಾವತಿಸಿ ಸಾರ್ವಜನಿಕರು ಸೇವೆಯನ್ನು ಪಡೆಯಲು ಅನುಕೂಲವಿತ್ತು. ಮುಕುಂದ ತನ್ನ ಕಂಪನಿಯ ಪ್ರತ್ಯೇಕ ವೆಬ್‍ಸೈಟ್ ರೂಪಿಸಿದ್ದರಿಂದ ಜನರು ಆನ್‍ಲೈನ್ ಮೂಲಕ ಕೂಡ ಸಂಪರ್ಕಿಸಬಹುದಿತ್ತು. ವಿದೇಶಗಳಲ್ಲಿ ವಾಸಿಸುವ ಅಥವಾ ಬಿಡುವಿಲ್ಲದ ಕೆಲಸದ ಮಧ್ಯೆ ತಮ್ಮ ತಂದೆ ತಾಯಿಯ ಶ್ರಾದ್ಧ, ಮಾಸಿಕಗಳನ್ನು ಆಚರಿಸಲು ಸಾಧ್ಯವಾಗದೆ ಇದ್ದಾಗ ಅಂಥವರು ಮುಕುಂದನ ಕಂಪನಿಗೆ ಶುಲ್ಕ ಪಾವತಿಸಿ ಪ್ರತಿವರ್ಷ ಆಚರಿಸುವಂತೆ ಕೇಳಿಕೊಳ್ಳುತ್ತಿದ್ದರು. ಊರಿನ ಅನೇಕ ಪುರೋಹಿತರು ‘ರಾಧಾಕೃಷ್ಣ ಸಂಸ್ಕಾರ ಸರ್ವಿಸ್ ಸೆಂಟರ್’ನ ಖಾಯಂ ಪುರೋಹಿತರಾಗಿ ಬದುಕನ್ನು ಕಟ್ಟಿಕೊಂಡಿರುವರು.

ಈಗೀಗ ಊರ ತುಂಬ ಮುಕುಂದನದೆ ಗುಣಗಾನ. ಯಾವುದೇ ಶುಭ, ಅಶುಭ ಕಾರ್ಯಗಳಿರಲಿ ನಾಲ್ಕಾರು ಜನ ಸೇರಿದ ಕಡೆ ಮುಕುಂದನ ಮಾತು ಬರದೇ ಹೋಗುವುದಿಲ್ಲ. ಮೊನ್ನೆಯಷ್ಟೇ ಪರಿಚಿತರ ಮನೆಯ ಮದುವೆಗೆಂದು ಪತ್ನಿಯೊಂದಿಗೆ ಹೋಗಿದ್ದ ಕೃಷ್ಣಭಟ್ಟರ ಎದುರು ಶ್ರೀಪತಿರಾಯರು ಮುಕುಂದನನ್ನು ಬಾಯಿತುಂಬ ಹೊಗಳಿದ್ದೆ ಹೊಗಳಿದ್ದು. ಇಂಡಸ್ಟ್ರಿಯಲಿಸ್ಟ್ ಲಕ್ಷ್ಮಣದಾಸ ತೀರಿಕೊಂಡಾಗ ಅವನ ಗಂಡುಮಕ್ಕಳಿಬ್ಬರೂ ಅಮೆರಿಕಾದಲ್ಲಿದ್ದರು. ಸುದ್ದಿ ತಿಳಿದು ಅವರು ಭಾರತಕ್ಕೆ ಬರಲು ನಾಲ್ಕಾರು ದಿನಗಳು ಬೇಕಾದವು. ಆಗ ಮುಕುಂದನೆ ತನ್ನ ಕಂಪನಿಯ ಮಾರ್ಚ್ಯುರಿ ಕ್ಯಾಬಿನೇಟ್‍ನಲ್ಲಿ ಲಕ್ಷ್ಮಣದಾಸರ ಶವವಿಟ್ಟು ಕೊಳೆಯದಂತೆ ನೋಡಿಕೊಂಡ. ನೆಂಟರಿಷ್ಟರ ಊಟ, ವಸತಿಗೆ ವ್ಯವಸ್ಥೆ ಮಾಡಿದ. ಮಕ್ಕಳು ಬಂದದ್ದೆ ಶವಸಂಸ್ಕಾರದಿಂದ ಶ್ರಾದ್ಧದವರೆಗಿನ ಎಲ್ಲ ಕೆಲಸಗಳನ್ನು ತುಂಬ ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರನಾದ. ಮುಕುಂದನ ಅಚ್ಚುಕಟ್ಟುತನವನ್ನು ಮೆಚ್ಚಿ ಲಕ್ಷ್ಮಣದಾಸನ ಮಕ್ಕಳು ಹತ್ತು ಲಕ್ಷ ರೂಪಾಯಿಗಳನ್ನು ಕಂಪನಿಗೆ ಪಾವತಿಸಿದ್ದರು. ‘ಅಂತೂ ಮಗ ಛಲೋ ನೆಲೆಕಂಡ. ಇನ್ನು ನಿಮಗ ಚಿಂತಿ ಇಲ್ಲ ಬಿಡಿ’ ಎಂದು ಮಾತು ಮುಗಿಸಿದ್ದರು ಶ್ರೀಪತಿರಾಯರು.

ರಾತ್ರಿ ಊಟ ಮಾಡಿ ಮಲಗಿದ ಕೃಷ್ಣಭಟ್ಟರಿಗೆ ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ತಾವು ಯಾವುದು ಬೇಡವೆಂದು ದೂರಸರಿದು ಬಂದಿದ್ದರೊ ಅದು ಬಂದು ಕೊರಳಿಗೆ ಸುತ್ತಿಕೊಂಡಂತಾಗಿತ್ತು ಅವರ ಸ್ಥಿತಿ. ಹೀಗಾಗಬಹುದೆಂದು ಅವರು ಕನಸಿನಲ್ಲೂ ಯೋಚಿಸಿರಲಿಲ್ಲ. ತಾವೊಂದು ಬಗೆದರೆ ದೈವವೊಂದು ಬಗೆದಿತ್ತು. ಇಷ್ಟೆಲ್ಲ ತಾವು ಕಷ್ಟಪಟ್ಟಿದ್ದು ನೀರಿನಲ್ಲಿ ಹೋಮ ಮಾಡಿದಂತಾಯಿತಲ್ಲ ಎಂದು ಅವರಿಗೆ ಅವ್ಯಕ್ತ ಸಂಕಟವಾಯಿತು. ಪಕ್ಕದಲ್ಲೇ ಮಲಗಿದ್ದ ರಾಧಮ್ಮನವರನ್ನು ಗಾಢ ನಿದ್ದೆ ಆವರಿಸಿತ್ತು. ಹೆಂಡತಿಯತ್ತ ನೋಡಿದ ಕೃಷ್ಣಭಟ್ಟರಿಗೆ ಒಂದು ಕ್ಷಣ ಅಸೂಯೆಯ ಎಳೆಯೊಂದು ಮನಸ್ಸಿನಲ್ಲಿ ಹಾಯ್ದುಹೋದ ಅನುಭವವಾಯಿತು. ಮರುಕ್ಷಣ ನನ್ನ ಹಣೆಬರಹಕ್ಕೆ ಪಾಪ ಅವಳಾದರೂ ಏನು ಮಾಡಬೇಕು ಎನ್ನುವ ಭಾವವೊಂದು ಉದಿಸಿ ಪತ್ನಿಯ ಹಣೆಯಮೇಲೆ ಮೃದುವಾಗಿ ಕೈಯಾಡಿಸಿ ಹೊದಿಕೆಯನ್ನು ಸರಿಯಾಗಿ ಹೊದಿಸಿ ಎದ್ದು ಕಿಟಕಿಯ ಹತ್ತಿರ ಬಂದು ನಿಂತರು. ಹೊರಗೆ ಆಕಾಶ ಶುಭ್ರವಾಗಿ ಹೊಳೆಯುತ್ತಿತ್ತು. ಆಕಾಶದಲ್ಲಿನ ಅಸಂಖ್ಯಾತ ನಕ್ಷತ್ರಗಳನ್ನು ನೋಡುತ್ತ ಮೈಮರೆತು ನಿಂತವರ ಕಣ್ಣೆದುರು ಅವರ ಗತಬದುಕಿನ ಚಿತ್ರಗಳು ಒಂದೊಂದಾಗಿ ಮೂಡತೊಡಗಿದವು.

● ● ●

ಶೇಷಭಟ್ಟರು ಹೆಂಡತಿಯೊಂದಿಗೆ ಆ ಊರಿಗೆ ಬಂದು ನೆಲೆನಿಂತಾಗ ಅವರಿಗೆ ಬದುಕಿನ ಪ್ರಶ್ನೆಯೇ ದೊಡ್ಡದಾಗಿತ್ತು. ಕೃಷ್ಣಾ ನದಿಯ ದಂಡೆಯಮೇಲಿರುವ ಆ ಸಣ್ಣ ಊರಿನ ಹೆಸರು ಕೃಷ್ಣಾ ಎಂದು. ಈ ಊರಿಗೆ ಬರುವುದಕ್ಕಿಂತ ಮೊದಲು ಶೇಷಭಟ್ಟರು ನಗರದ ಮಠವೊಂದರಲ್ಲಿ ಪುರೋಹಿತರಾಗಿ ಬರುವ ಅಲ್ಪಸ್ವಲ್ಪ ಆದಾಯದಲ್ಲೇ ಕುಟುಂಬದ ಖರ್ಚನ್ನು ನಿಭಾಯಿಸುತ್ತಿದ್ದರು. ಶೇಷಭಟ್ಟರು ಸ್ವಲ್ಪ ತಡವರಿಸಿ ಮಾತಾಡುತ್ತಿದ್ದರಿಂದ ಉಳಿದ ಪುರೋಹಿತರು ಅವರನ್ನು ತಮ್ಮೊಂದಿಗೆ ಹೆಚ್ಚು ಸೇರಿಸಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ದೊಡ್ಡ ಪೂಜೆಯ ಸಂದರ್ಭಗಳಲ್ಲಿ ಪುರೋಹಿತರ ಕೊರತೆಯಿದ್ದಾಗ ಶೇಷಭಟ್ಟರಿಗೂ ಆಹ್ವಾನವಿರುತ್ತಿತ್ತು. ಹಾಗಾಗಿ ಉಪ್ಪಿಗಾದರೆ ಎಣ್ಣೆಗಿಲ್ಲ ಎನ್ನುವಂತೆ ಶೇಷಭಟ್ಟರ ಬದುಕಿನ ಬಂಡಿ ಉರುಳಿಕೊಂಡು ಹೋಗುತ್ತಿತ್ತು. ಪ್ರತಿವರ್ಷದಂತೆ ಆ ವರ್ಷ ಕೂಡ ಮಠದಲ್ಲಿ ಚತುರ್ಮಾಸವನ್ನು ತುಂಬ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಪ್ರತಿದಿನ ಅಸಂಖ್ಯಾತ ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದರಿಂದ ಪುರೋಹಿತರಿಗೆ ದಿನವೆಲ್ಲ ಬಿಡುವಿಲ್ಲದ ಕೆಲಸ. ಅಂಥ ಸಂದರ್ಭಗಳಲ್ಲೂ ಮಠದ ಪುರೋಹಿತವರ್ಗ ಶೇಷಭಟ್ಟರನ್ನು ತುಂಬ ಕೀಳಾಗಿಯೇ ನಡೆಸಿಕೊಳ್ಳುತ್ತಿತ್ತು. ಕೆಲವೊಮ್ಮೆ ಶೇಷಭಟ್ಟರಿಗೆ ಈ ಪೌರೋಹಿತ್ಯವನ್ನೇ ಬಿಟ್ಟು ಬೇರೆ ಏನಾದರೂ ಕೆಲಸ ಮಾಡಬೇಕೆನ್ನಿಸಿದರೂ ಯಾವ ದಾರಿಯೂ ಹೊಳೆಯದೆ ಮಠದಲ್ಲಿನ ಅಪಮಾನವನ್ನು ಅನಿವಾರ್ಯವೆಂಬಂತೆ ಸಹಿಸಿಕೊಳ್ಳುತ್ತಿದ್ದರು. ಈ ಚತುರ್ಮಾಸದ ದಿನಗಳಲ್ಲಿ ಹತ್ತಿರದ ಕೃಷ್ಣಾ ಎನ್ನುವ ಹಳ್ಳಿಯಲ್ಲಿ ಸಂಭವಿಸಿದ ಸಾವಿನಿಂದ ತಮ್ಮ ಬದುಕು ಹೊಸ ತಿರುವು ಪಡೆಯುವುದೆಂದು ಸ್ವತ: ಶೇಷಭಟ್ಟರೆ ಭಾವಿಸಿರಲಿಲ್ಲ. ನಗರದಿಂದ ನಾಲ್ಕಾರು ಮೈಲಿಗಳ ದೂರದಲ್ಲಿರುವ ಆ ಸಣ್ಣ ಹಳ್ಳಿಯಲ್ಲಿ ಪಾರಿಜಾತ ಎನ್ನುವ ಎಂಬತ್ತು ವಯಸ್ಸಿನ ಪಾತರದ ಮುದುಕಿ ರಾತ್ರಿ ಮಲಗಿದವಳು ಹಾಸಿಗೆಯಲ್ಲೇ ಸಾವನ್ನಪ್ಪಿದ್ದು ಊರ ಜನರಿಗೆ ಗೊತ್ತಾಗಿದ್ದು ಬೆಳಗ್ಗೆ ಊರ ಶ್ಯಾನುಭೋಗರ ಮನೆಯ ಆಳು ತೋಟದ ಮನೆಗೆ ಬಂದು ನೋಡಿದಾಗಲೆ. ಒಂದುಕಾಲದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಪಾರಿಜಾತ ಊರ ಶಾನುಭೋಗರ ಮನ ಮತ್ತು ಮನೆಯನ್ನು ಪ್ರವೇಶಿಸಲು ತಡವಾಗಲಿಲ್ಲ. ಶಾನುಭೋಗರು ಹತ್ತೆಕರೆ ತೋಟ ಮತ್ತು ತೋಟದ ಮನೆಯನ್ನು ಪಾರಿಜಾತಳ ಹೆಸರಿಗೆ ಬರೆದು ಅವಳನ್ನು ಮನೆ ತುಂಬಿಸಿಕೊಂಡರು. ಶಾನುಭೋಗರ ಮೊದಲ ಹೆಂಡತಿ ಕೆಲವು ದಿನ ತಕರಾರು ಮಾಡಿದರೂ ನಂತರ ಪಾರಿಜಾತ ಮತ್ತು ಆಕೆಯ ನಡುವೆ ಅಕ್ಕ ತಂಗಿಯರ ಅನ್ಯೋನ್ಯತೆ ಬೆಳೆಯಿತು. ಪಾರಿಜಾತಳ ಶವಸಂಸ್ಕಾರ ಬ್ರಾಹ್ಮಣ ಪದ್ಧತಿಯಂತೆ ಆಗಬೇಕೆನ್ನುವುದು ಶ್ಯಾನುಭೋಗರ ಇಚ್ಛೆಯಾಗಿತ್ತು. ಚತುರ್ಮಾಸದ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದುದ್ದರಿಂದ ಪಾರಿಜಾತಳ ಅಪರಕರ್ಮಗಳಿಗೆ ಪುರೋಹಿತರನ್ನು ಕರೆತರುವುದೇ ದೊಡ್ಡ ಸಮಸ್ಯೆಯಾಯಿತು. ಯಾವ ಕೆಲಸ ಕಾರ್ಯಗಳಿಲ್ಲದೆ ಮಠದ ಮೂಲೆಯಲ್ಲಿ ಜೋಲು ಮೊರೆಹಾಕಿ ಕುಳಿತಿದ್ದ ಶೇಷಭಟ್ಟರೆ ಶಾನುಭೋಗರು ಕಳುಹಿಸಿದ್ದ ಆಳುಗಳಿಗೆ ಮಹಾಜ್ಞಾನಿಯಂತೆ ಕಾಣಿಸಿದರು. ಶೇಷಭಟ್ಟರೂ ಬೇರೆ ದಾರಿಕಾಣದೆ ಅವರೊಂದಿಗೆ ಪಾರಿಜಾತಳ ತೋಟದ ಮನೆಯತ್ತ ಹೆಜ್ಜೆ ಹಾಕಿದರು. ಶವಸಂಸ್ಕಾರದಿಂದ ಉದಕಶಾಂತಿಯವರೆಗೆ ಪಾರಿಜಾತಳ ಕ್ರಿಯಾವಿಧಿಗಳೆಲ್ಲ ಸಾಂಗೋಪಾಂಗವಾಗಿ ನೆರವೇರಿದವು. ಸಂತುಷ್ಟರಾದ ಶಾನುಭೋಗರು ಶೇಷಭಟ್ಟರಿಗೆ ತೃಪ್ತಿಯಾಗುವಷ್ಟು ದಾನ ದಕ್ಷಿಣೆ ಕೊಟ್ಟು ಗೌರವಿಸಿದರು. ಮಠದ ಪುರೋಹಿತವರ್ಗ ಈ ಸುದ್ದಿ ತಿಳಿದು ಕೆಂಡಾಮಂಡಲಗೊಂಡಿತು. ಶೇಷಭಟ್ಟರನ್ನು ಮಠಕ್ಕೆ ಕಾಲಿಡದಂತೆ ಬಹಿಷ್ಕರಿಸಿತು.

ಶೇಷಭಟ್ಟರು ಆ ಕೂಡಲೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಹೆಂಡತಿಯೊಂದಿಗೆ ಕೃಷ್ಣಾಗೆ ಬಂದು ನೆಲೆಸಿದರು. ಶ್ಯಾನುಭೋಗರು ತಮ್ಮ ಹಳೆಯ ಮನೆಯನ್ನು ಶೇಷಭಟ್ಟರ ವಾಸಕ್ಕೆಂದು ಬಿಟ್ಟುಕೊಟ್ಟರು. ಕ್ರಮೇಣ ಶೇಷಭಟ್ಟರು ಅಪರಕರ್ಮಗಳಿಗೆ ಪ್ರಸಿದ್ಧರಾದರು. ಹತ್ತಿರದಲ್ಲೇ ಇರುವ ಕೃಷ್ಣೆಯ ದಡ ಅಪರಕರ್ಮಗಳಿಗೆ ಪ್ರಶಸ್ತವಾಗಿತ್ತು. ಶೇಷಭಟ್ಟರೊಂದಿಗೆ ಊರು ಕೃಷ್ಣಾ ಕೂಡ ಪ್ರಸಿದ್ಧಿಗೆ ಬಂತು. ವರ್ಷದ ಎಲ್ಲ ದಿನಗಳಲ್ಲೂ ಕಾಗೆಗಳ ಕಲರವ, ಮಂತ್ರಗಳ ಘೋಷ, ಹೊಗೆ ತುಂಬಿದ ಕುಂಡಗಳು, ಕ್ಷೌರಗೊಂಡ ನುಣ್ಣನೆಯ ತಲೆಗಳು ಆ ಊರಿನ ಸಾಮಾನ್ಯ ದೃಶ್ಯಗಳಾದವು. ಊರಿಗೆ ಬರುವವರ ಸಂಖ್ಯೆ ಹೆಚ್ಚಿದಂತೆ ಸಣ್ಣದೊಂದು ರೈಲು ನಿಲ್ದಾಣ ತಲೆ ಎತ್ತಿತು. ಸಣ್ಣಪುಟ್ಟ ವ್ಯಾಪಾರದಂಗಡಿಗಳು ಆರಂಭಗೊಂಡವು. ಶೇಷಭಟ್ಟರೆ ಒಂದೆರಡು ಲಾಡ್ಜಗಳನ್ನು ಕಟ್ಟಿಸಿ ಪರವೂರಿನಿಂದ ಬರುವವರು ರಾತ್ರಿ ತಂಗಲು ವ್ಯವಸ್ಥೆ ಮಾಡಿದರು. ಒಬ್ಬರೆ ಕೆಲಸ ನಿರ್ವಹಿಸುವುದು ಅಸಾಧ್ಯವಾದಾಗ ತಮ್ಮ ಹೆಂಡತಿಯ ತವರಿನಿಂದ ಕೆಲವರನ್ನು ಕರೆತಂದು ಪೌರೋಹಿತ್ಯಕ್ಕೆ ಹಚ್ಚಿದರು. ನೋಡು ನೋಡುತ್ತಿರುವಂತೆ ಶೇಷಭಟ್ಟರ ಹೆಸರಿನೊಂದಿಗೆ ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿ ನಗ, ನಾಣ್ಯ, ಭೂಮಿಯನ್ನು ಕಾಣುವಂತಾದರು. ಬದುಕು ನೀಡಿದ ಊರ ಮೇಲಿನ ಕೃತಜ್ಞತೆಯಿಂದ ತಮ್ಮ ಏಕಮಾತ್ರ ಸಂತಾನಕ್ಕೆ ಕೃಷ್ಣಭಟ್ಟ ಎಂದು ಹೆಸರಿಟ್ಟರು.

ಶೇಷಭಟ್ಟರಿಗೆ ತಮ್ಮ ಪುತ್ರ ಕೃಷ್ಣಭಟ್ಟ ತಮ್ಮಂತೆ ಪೌರೋಹಿತ್ಯದಲ್ಲೆ ಮುಂದುವರೆಯಲೆಂಬ ಆಸೆ ಪ್ರಬಲವಾಗಿತ್ತು. ಆದರೆ ಕೃಷ್ಣಭಟ್ಟನಿಗೆ ವೈದಿಕಶಾಲೆಗಿಂತ ಸರ್ಕಾರಿ ಶಾಲೆಯಲ್ಲಿನ ಪಾಠವೇ ತಲೆಗೆ ಬೇಗ ಹತ್ತಿತು. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಪಟ್ಟಣ ಸೇರಿದ ಮೇಲೆ ಕೃಷ್ಣಭಟ್ಟನಿಗೆ ತಂದೆಯಪೌರೋಹಿತ್ಯವೇ ಅದೊಂದು ಡಾಂಭಿಕತನವೆಂದೂ ಮುಗ್ಧರಿಂದ ಹಣ ದೋಚುವ ತಂತ್ರವೆಂದು ಅನಿಸಲು ತೊಡಗಿತು. ಊರಿಗೆ ಹೋದಾಗಲೆಲ್ಲ ಅಪ್ಪನೆದುರು ತನ್ನ ಸಿಟ್ಟನ್ನು ತೋಡಿಕೊಳ್ಳುತ್ತಿದ್ದ. ಇಡೀ ಊರು ಒಂದು ಸ್ಮಶಾನ ಮೌನದಿಂದ ಭಣಗುಟ್ಟುತ್ತಿರುವಂತೆಯೂ ಇದಕ್ಕೆಲ್ಲ ತನ್ನ ತಂದೆಯೇ ಕಾರಣನೆಂದೂ ಅವನಿಗೆ ಭಾಸವಾಗತೊಡಗಿತು. ಆ ವಾತಾವರಣದಿಂದ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಅವನ ಮನಸ್ಸು ತವಕಿಸುತ್ತಿತ್ತು. ಶೇಷಭಟ್ಟರು ಹಲವು ಸಲ ಮಗನನ್ನು ತಮ್ಮ ದಾರಿಗೆ ತರಲು ಪ್ರಯತ್ನಿಸಿ ಕೊನೆಗೆ ಅದು ಸಾಧ್ಯವಿಲ್ಲವೆಂದರಿತು ಸುಮ್ಮನಾದರು. ಕೃಷ್ಣಭಟ್ಟ ವಿದ್ಯಾಭ್ಯಾಸ ಮುಗಿದದ್ದೆ ಹೈಸ್ಕೂಲು ಶಿಕ್ಷಕನಾಗಿ ನೇಮಕಗೊಂಡು ದೂರದ ಪಟ್ಟಣವನ್ನು ಸೇರಿ ಹೊಸ ಬದುಕನ್ನು ಕಟ್ಟಿಕೊಂಡ. ಶೇಷಭಟ್ಟರು ತಮ್ಮ ಕೊನೆಯ ದಿನದವರೆಗೂ ಆ ಹಳ್ಳಿಯಲ್ಲೇ ಬದುಕಿ ಹೆಂಡತಿ ತೀರಿಕೊಂಡ ನಾಲ್ಕು ತಿಂಗಳ ನಂತರ ತಾವು ಕೂಡ ಇಹಲೋಕ ಯಾತ್ರೆ ಮುಗಿಸಿದರು. 

ಕಾಂಪೌಂಡ ಗೇಟಿನ ಕಿರ್ರ್ ಎನ್ನುವ ಸದ್ದಿಗೆ ಕೃಷ್ಣಭಟ್ಟರು ವಾಸ್ತವಕ್ಕೆ ಮರಳಿದರು. ದೀರ್ಘವಾದ ಉಸಿರು ಅವರಿಂದ ಹೊರಬಂತು. ಕಾರು ಪಾರ್ಕಿಂಗ್ ಮಾಡಿ ಮಗ ಆಫೀಸ್ ರೂಮಿನತ್ತ ಹೋಗುತ್ತಿರುವುದು ಕಿಟಕಿಯಿಂದ ಕಾಣುತ್ತಿತ್ತು. ಗಡಿಯಾರದ ಮುಳ್ಳು ನಾಲ್ಕು ಗಂಟೆ ತೋರಿಸುತ್ತಿತ್ತು. ಮಗ ನಡೆದು ಹೋದ ದಿಕ್ಕಿನಿಂದ ಬೀಸಿ ಬಂದ ಗಾಳಿಯೊಂದಿಗೆ ಶವದ ವಾಸನೆ ಮೂಗಿನೊಳಗೆ ಸೇರಿದಂತೆನಿಸಿ ಕೃಷ್ಣಭಟ್ಟರಿಗೆ ಉಸಿರು ಕಟ್ಟಿದಂತಾಗಿ ಅಲ್ಲಿ ನಿಲ್ಲಲಾಗದೆ ಹಾಲ್‍ಗೆ ಬಂದು ಸೋಫಾದ ಮೇಲೆ ಕುಸಿದು ಕುಳಿತರು. ತಾವು ಕುಳಿತ ಸೋಫಾದ ಎದುರು  ಗೋಡೆಯಮೇಲೆ ಶೇಷಭಟ್ಟರ ಆಳೆತ್ತರದ ಫೆÇೀಟೋ ರಾರಾಜಿಸುತ್ತಿತ್ತು. ಫೋಟೋದೊಳಗಿದ್ದ ಅಪ್ಪ ತಮ್ಮನ್ನು ನೋಡಿ ನಕ್ಕಂತೆ ಭಾಸವಾಗಿ ಕೃಷ್ಣಭಟ್ಟರ ಮೈ ಆ ಕೊರೆಯುವ ಚಳಿಯಲ್ಲೂ ಬೆವರಲಾರಂಭಿಸಿತು.

-ರಾಜಕುಮಾರ ಕುಲಕರ್ಣಿ 



Saturday, November 21, 2020

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ

                 



(ಅಕ್ಟೊಬರ್ ೨೦೨೦ ರ ಮಯೂರ ಪತ್ರಿಕೆಯಲ್ಲಿ ಪ್ರಕಟವಾಗಿದೆ)

            ‘ಕ್ರಾಂತಿ ಆಗ್ಬೇಕರಯ್ಯ ಕ್ರಾಂತಿ. ಈ ದೇಶದಲ್ಲಿ ಯಾವುದೂ ಸುಲಭವಾಗಿ ಬದಲಾಗೊಲ್ಲ. ಒಂದು ವೈಚಾರಿಕ ಕ್ರಾಂತಿಯಾಗಿ ಜನರಲ್ಲಿ ತಿಳಿವಳಿಕೆ ಮೂಡ್ಬೇಕು. ಶಾಲೆ ಪಕ್ಕದಲ್ಲಿ ಬೆಳೆದು ನಿಂತ ಗಿಡಕ್ಕೆ ಈ ಜನ ಎಂಥ ದುರ್ಗತಿ ತಂದಿದ್ದಾರೆ ನೋಡಿದ್ರೇನ್ರೋ. ಕಟ್ಟೆ ಕಟ್ಟಿ, ಅದಕ್ಕೆ ಬಟ್ಟೆ ಸುತ್ತಿ, ಸುತ್ತೆಲ್ಲ ಎಣ್ಣೆ ದೀಪ ಹಚ್ಚಿ, ಭಯಪಡೊವಷ್ಟು ಕುಂಕುಮ ಅರಿಷಿಣ ಚೆಲ್ಲಿ ಇನ್ನೂ ಯಾವ ಸ್ಥಿತಿಗೆ ತಂದಿಡ್ತಾರೊ. ಮರ ಬೆಳೆದ ಆ ಜಾಗ ಪವಿತ್ರ, ಪುಣ್ಯ ಅಂತ ಹೇಳಿ ಜನರನ್ನ ಭಯ ಬೀಳಿಸ್ತಾರೆ. ಯಾವುದೋ ಹಕ್ಕಿ ತನ್ನ ಉದರ ಭಾದೆ ತಾಳದೆ ಹೇತು ಅದರೊಳಗಿದ್ದ ಬೀಜದಿಂದ ಬೆಳೆದ ಗಿಡ ಅದು. ಇಂಥ ಮೂಢ ಆಚರಣೆಗಳನ್ನೆಲ್ಲ ಬಿಟ್ಟು ಮರದ ನೆರಳ ಕೆಳಗೆ ನಾಲ್ಕಾರು ಪುಸ್ತಕಗಳನ್ನಿಟ್ಟಿದ್ದರೆ ಅವುಗಳನ್ನು ಓದಿ ಅದರಿಂದ ತಿಳಿವಳಿಕೆ ಮೂಡಿ ಒಂದು ವೈಚಾರಿಕ ಕ್ರಾಂತಿ ಆದರೂ ಆಗ್ತಿತ್ತು’ ದೊಕಾಚಿ ಮೇಷ್ಟ್ರು ಕಾರ್ಲ್‍ಮಾರ್ಕ್ಸ್‍ನನ್ನೋ ಲೆನಿನ್‍ನನ್ನೋ ಮೈಮೇಲೆ ಆವಾಹಿಸಿಕೊಂಡವರಂತೆ ತಮ್ಮ ವಿಚಾರಗಳನ್ನು ಓತಪೆÇ್ರೀತವಾಗಿ ಹರಿಬಿಡುತ್ತಿದ್ದರೆ ಅವರೆದುರು ಕುಳಿತ ಮಕ್ಕಳು ಅರ್ಥವಾಗದೆ ಮೇಷ್ಟ್ರನ್ನೇ ಪಿಳಿಪಿಳಿ ಕಣ್ಣುಬಿಟ್ಟು ನೋಡುತ್ತಿದ್ದವು. ದೊಕಾಚಿ ಮೇಷ್ಟ್ರು ಇವತ್ತೇಕೋ ಒಂದಿಷ್ಟು ರಾಂಗ್ ಆಗಿದ್ದಾರೆ ಅನಿಸಿದ್ದೆ ತಮ್ಮ ಕ್ರಾಂತಿಯ ಮಾತುಗಳಿಂದ ಅವರು ಸಧ್ಯಕ್ಕೆ ಹೊರಬರಲಾರರು ಎನ್ನುವುದು ಮಕ್ಕಳಿಗೆ ಲಾಗಾಯ್ತಿನಿಂದಲೂ ರೂಢಿಯಾಗಿದ್ದರಿಂದ ಗುಜುಗುಜು ಮಾತನಾಡುತ್ತ ಆ ಸದ್ದು ಕ್ರಮೇಣ ದೊಡ್ಡದಾಗುತ್ತ ಮೇಷ್ಟ್ರ ಚಿಂತನೆಗೆ ಭಗ್ನಬಂದಿದ್ದೆ ಉರಿಗಣ್ಣು ಬಿಟ್ಟು ನೇರವಾಗಿ ಲಂಬರೇಖೆಯಲ್ಲಿ ತಮಗೆದುರಾಗಿ ಕುಳಿತಿದ್ದ ನಿನ್ನೆಯಷ್ಟೆ ಶಾಲೆಗೆ ದಾಖಲಾಗಿದ್ದ ಹುಡುಗನನ್ನೇ ದಿಟ್ಟಿಸಿ ನೋಡುತ್ತ ‘ಏನೋ ನಿನ್ನ ಹೆಸರು’ ಎಂದು ಕೇಳಿದರು. ಮೇಷ್ಟ್ರ ಉಗ್ರರೂಪಕ್ಕೆ ಹೆದರಿ ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಂಡ ಹುಡುಗ ತಡವರಿಸುತ್ತ ಉತ್ತರಿಸಿದ ‘ಕಮೂ ಸರ್’. ಆ ಹುಡುಗ ಹೇಳಿದ ಹೆಸರು ಕೇಳಿದ್ದೆ ದೊಕಾಚಿ ಮೇಷ್ಟ್ರ ಸಿಟ್ಟೆಲ್ಲ ಜರ್ರನೆ ಇಳಿದು ಮುಖದ ಮೇಲೆ ಪ್ರಸನ್ನತೆ ಮೂಡಿತು. ಮೇಷ್ಟ್ರು ಅನುಮಾನ ಪರಿಹರಿಸಿಕೊಳ್ಳಲೆಂಬಂತೆ ಮತ್ತೊಮ್ಮೆ ಕೇಳಿದಾಗ ಹುಡುಗ ಅಂಜುತ್ತಲೇ ‘ಕಮೂ ಸರ್’ ಅಂದವನೆ ಚಡ್ಡಿಯೊಳಗಿಂದ ತೊಟ್ಟಿಕ್ಕುತ್ತಿದ್ದ ಉಚ್ಚೆಯ ಹನಿ ಇಡೀ ಕ್ಲಾಸಿಗೆ ಪ್ರದರ್ಶಿತವಾದ ಅವಮಾನದಿಂದ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ದೊಕಾಚಿ ಮೇಷ್ಟ್ರಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಷ್ಟೇ ಖುಷಿಯಾಗಿತ್ತು ಹುಡುಗನ ಹೆಸರು ಕೇಳಿ. ಅಕ್ಷರದ ಗಂಧಗಾಳಿ ಗೊತ್ತಿಲ್ಲದ ಈ ಕುಗ್ರಾಮದ ಗೊಡ್ಡು ಜನರ ನಡುವೆ ತನ್ನೊಳಗಿನ ವೈಚಾರಿಕ ಚಿಂತನೆ ವ್ಯರ್ಥವಾಗುತ್ತಿದೆ ಎಂದು ನಿರಾಶರಾದವರು ಎದುರು ನಿಂತ ಕಮೂನನ್ನು ಆ ಮೇರು ಬರಹಗಾರ ಆಲ್ಬರ್ಟ್ ಕಮೂನೇನೋ ಎನ್ನುವಂತೆ ಅವನನ್ನು ವಿವಿಧ ಕೋನಗಳಿಂದ ದಿಟ್ಟಿಸಿ ನೋಡಲಾರಂಭಿಸಿದರು. ದೊಕಾಚಿ ಮೇಷ್ಟ್ರೇಕೆ ತನ್ನನ್ನು ಅಷ್ಟೊಂದು ಸುದೀರ್ಘವಾಗಿ ದಿಟ್ಟಿಸಿ ನೋಡುತ್ತಿರುವರೆನ್ನುವುದು ತರಗತಿಯಲ್ಲಿನ ಇತರ ಮಕ್ಕಳಿಗಿರಲಿ ಸ್ವತ: ಕಮೂಗೂ ಅರ್ಥವಾಗದೆ ಅವರೆಲ್ಲ ಒಂದರ ಮುಖ ಇನ್ನೊಂದು ನೋಡಿ ತಮ್ಮ ತಮ್ಮ ಮುಖದಲ್ಲಿ ಪ್ರಶ್ನಾರ್ಥಕ ಚಿನ್ಹೆ ಮೂಡಿಸಿಕೊಂಡವು. ನಿಂತು ಕಾಲು ನೋಯ್ಯಲಾರಂಭಿಸಿದಾಗ ಕಮೂ ಒಮ್ಮೆ ಬಲಗಾಲಿನ ಮೇಲೂ ಇನ್ನೊಮ್ಮೆ ಎಡಗಾಲಿನ ಮೇಲೂ ತನ್ನ ದೇಹದ ಭಾರವನ್ನು ವರ್ಗಾಯಿಸುತ್ತ ನಿಂತ ಭಂಗಿಯನ್ನು ಘಳಿಗೆಗೊಮ್ಮೆ ಬದಲಿಸುತ್ತಿರುವಾಗ ಮೇಷ್ಟ್ರ ಇನ್ನೊಂದು ಪ್ರಶ್ನೆ ತೂರಿಬಂತು ‘ನಿನ್ನ ಅಪ್ಪನ ಹೆಸರೇನೋ’. ‘ಬೋದಿಲೇರ ಸರ್’ ಕಮೂ ಬಾಯಿ ತೆರೆಯುವ ಮೊದಲೆ ಅವನ ಹಿಂದೆ ಕುಳಿತಿದ್ದ ಹುಡುಗ ಜೋರಾಗಿ ಉತ್ತರಿಸಿದ. ಬೋದಿಲೇರನ ಹೆಸರು ಕೇಳಿದ್ದೆ ದೊಕಾಚಿ ಮೇಷ್ಟ್ರಿಗೆ ಎದ್ದು ಕುಣಿಯುವಷ್ಟು ಖುಷಿಯಾಗಿತ್ತು. ಆ ಕ್ಷಣಕ್ಕೆ ಅವರಿಗೆ ಇಡೀ ಊರು ಆಕ್ಸಫರ್ಡ್‍ನಂತೆಯೂ, ಆ ಕನ್ನಡ ಶಾಲೆ ಒಂದು ವಿಶ್ವವಿದ್ಯಾಲಯವಾಗಿಯೂ ತಮ್ಮೆದುರು ಕುಳಿತಿದ್ದ ಮಕ್ಕಳೆಲ್ಲ ಶೇಕ್ಸ್‍ಪಿಯರ್‍ನ ವಾರಸುದಾರರಂತೆಯೂ ಗೋಚರಿಸಲಾರಂಭಿಸಿತು. ‘ಲೋ ಕಮೂ ನಾಳೆ ನಿನ್ನಪ್ಪ ಬೋದಿಲೇರನನ್ನು ಬಂದು ನನ್ನನ್ನು ಕಾಣೊದಕ್ಕೆ ಹೇಳು’ ಎಂದು ನುಡಿದ ಮೇಷ್ಟ್ರು ತರಗತಿಯಿಂದ ಹೊರಹೋಗುತ್ತಿರುವಾಗ ಅವರ ನಡಿಗೆಯಲ್ಲಿ ಒಂದುರೀತಿಯ ಎಂದೂ ಇಲ್ಲದ ಲವಲವಿಕೆ ಇತ್ತು. ಮಕ್ಕಳಿಗೂ ಇಂದು ಮೇಷ್ಟ್ರು ಎಂದಿಗಿಂತ ಹೆಚ್ಚು ಖುಷಿಯಾಗಿದ್ದಾರೆ ಅನಿಸಿತು.

* * *

ದೊಡ್ಡವೀರಯ್ಯ ಕಾಡಬಸಯ್ಯ ಚಿಕ್ಕೋಡಿಮಠ್ ಹೆಸರು ಉದ್ದವೂ ಮತ್ತು ಹಳೆಯದೆಂದು ಕಾಲೇಜಿನಲ್ಲಿರುವಾಗಲೇ ದೊಡ್ಡವೀರಯ್ಯ ತನ್ನ ಹೆಸರನ್ನು ‘ದೊಕಾಚಿ’ ಎಂದು ಮೂರಕ್ಷರಕ್ಕಿಳಿಸಿ ಮೊಟಕುಗೊಳಿಸಿಕೊಂಡು ಜನ್ಮಕ್ಕೆ ಕಾರಣನಾದ ಅಪ್ಪನಿಗೆ ಏಕಕಾಲಕ್ಕೆ ಸಮಸ್ಯೆಯಾಗಿಯೂ ಮತ್ತು ಒಗಟಾಗಿಯೂ ಕಂಡಿದ್ದ. ಒಮ್ಮೊಮ್ಮೆ ಈ ಹೆಸರು ಮನುಷ್ಯನದೋ ಪ್ರಾಣಿಯದೋ ಎಂದು ಗಲಿಬಿಲಿಗೊಳ್ಳುತ್ತಿದ್ದ ಕಾಡಬಸಯ್ಯ ಅಷ್ಟೊಂದು ಓದಿರುವ ತನ್ನ ಮಗ ಯಾರದೋ ಹೋರಾಟಗಾರರದೋ ಇಲ್ಲ ಸಮಾಜ ಸುಧಾರಕರದೋ ಹೆಸರಿಟ್ಟುಕೊಂಡಿರಬಹುದೆಂದು ಸಮಾಧಾನಪಟ್ಟುಕೊಳ್ಳುತ್ತಿದ್ದ. ಕಾಡಬಸಯ್ಯನ ಆರು ಗಂಡುಮಕ್ಕಳು ಮತ್ತು ನಾಲ್ಕು ಹೆಣ್ಣು ಸಂತಾನಗಳಲ್ಲಿ ದೊಡ್ಡವೀರಯ್ಯನೇ ಕೊನೆಯವನು. ಕಾಡಬಸಯ್ಯನ ಮಕ್ಕಳಲ್ಲಿ ಮಾತ್ರವಲ್ಲದೆ ಆ ಚಿಕ್ಕೋಡಿಮಠ್ ಮನೆತನದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ್ದು ದೊಡ್ಡವೀರಯ್ಯ ಒಬ್ಬನೇ ಎನ್ನುವುದು ಆ ಇಡೀ ಮನೆತನಕ್ಕೆ ಗೌರವದ ಮತ್ತು ಅಭಿಮಾನದ ವಿಷಯವಾಗಿತ್ತು. ಕಲಬುರಗಿಯ ಎಸ್.ಬಿ ಕಾಲೇಜಿನಲ್ಲಿ ಡಿಗ್ರಿ ಪೂರೈಸಿ ಜ್ಞಾನಗಂಗಾದಲ್ಲಿ ಕನ್ನಡ ಎಂ.ಎ ಗೆ ಸೇರಿ ಭಾರತೀಯ ಸಾಹಿತ್ಯದೊಂದಿಗೆ ಪಾಶ್ಚಿಮಾತ್ಯ ಸಾಹಿತ್ಯವನ್ನೂ ಓದಿಕೊಂಡು ಈ ನಡುವೆ ಕ್ರಾಂತಿಯ ಸೆಳೆತದಿಂದ ಪಿ.ಹೆಚ್.ಡಿ ಅರ್ಧಕ್ಕೆ ಬಿಟ್ಟು ಊರಿಗೆ ಬಂದು ಕೂತಿದ್ದ ದೊಕಾಚಿ ಅಪ್ಪ ಕಾಡಬಸಯ್ಯನಿಗೆ ದೊಡ್ಡ ತಲೆ ನೋವಾಗಿದ್ದ. ಕ್ರಾಂತಿಯ ಮಾತುಗಳನ್ನಾಡುತ್ತ ತಲೆತಲಾಂತರದಿಂದ ಊರಿನಲ್ಲಿ ರೂಢಿಗತವಾಗಿದ್ದ ಸಂಪ್ರದಾಯಗಳ ವಿರುದ್ಧ ಭಾಷಣ ಬಿಗಿಯುತ್ತ ಅಪ್ಪ ಕಾಡಬಸಯ್ಯನಿಗೊಂದು ಗಂಭೀರ ಸಮಸ್ಯೆಯಾಗಿ ಕಾಡತೊಡಗಿದ. ಈ ಸಂದರ್ಭದಲ್ಲೇ ಅವನ ಸಮಸ್ಯೆಯನ್ನು ಪರಿಹರಿಸಲೆಂಬಂತೆ ಮಠದ ಅನುದಾನಿತ ಪ್ರೈಮರಿ ಶಾಲೆಯಲ್ಲಿ ಖಾಲಿಯಿದ್ದ ಶಿಕ್ಷಕ ಹುದ್ದೆ ತುಂಬಲು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿದ್ದೆ ತಡ ಕಾಡಬಸಯ್ಯ ಮಠದ ಅಪಗೊಳ ಕಾಲಿಗೆ ಬಿದ್ದು ಆ ಕೆಲಸ ಮಗನಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದ. ಮಠಕ್ಕೆ ಕಾಡಬಸಯ್ಯ ಕಾಲಕಾಲಕ್ಕೆ ನೀಡುತ್ತ ಬಂದ ದೇಣಿಗೆ ಮತ್ತು ಮಠದ ಮೇಲೆ ಅವನಿಗಿರುವ ಭಕ್ತಿ ಶ್ರದ್ಧೆಯಿಂದ ಅಪಗೊಳು ಸಹಜವಾಗಿಯೇ ಅವನ ಬೇಡಿಕೆಗೆ ತಥಾಸ್ತು ಎಂದಿದ್ದರು. ಅಂತೂ ತಾನು ಓದಿದ ಮಠದ ಶಾಲೆಯಲ್ಲೇ ತನಗೆ ಪಾಠ ಮಾಡುವ ಕೆಲಸ ಸಿಕ್ಕಿರುವುದು ಅದೊಂದು ಯೋಗಾಯೋಗವೆಂದೇ ಬಗೆದ ದೊಕಾಚಿ ಮೇಷ್ಟ್ರಿಗೆ ಇಡೀ ಊರಿನಲ್ಲಿ ಒಂದು ದೊಡ್ಡ ವೈಚಾರಿಕ ಕ್ರಾಂತಿಗೆ ತಾನು ಕಾರಣನಾಗಬೇಕೆಂಬ ಭಾವನೆ ಮನಸ್ಸಿನ ಒಂದು ಮೂಲೆಯಲ್ಲಿ ಮೊಳಕೆಯೊಡೆಯತೊಡಗಿತು.

* * *

‘ಮೇಷ್ಟ್ರೆ ಬಂದು ಕಾಣಿ ಅಂತ ಹೇಳಿದ್ರಂತೆ’ ದೊಕಾಚಿ ಮೇಷ್ಟ್ರು ತರಗತಿಯಲ್ಲಿ ಮಕ್ಕಳಿಗೆ ಬೇಂದ್ರೆ ಅವರ ಹಕ್ಕಿ ಹಾರುತಿದೆ ಕವಿತೆಯ ಸಾಲುಗಳನ್ನು ವಿವರಿಸಿ ಹೇಳುತ್ತ ತನ್ಮಯರಾಗಿರುವ ಹೊತ್ತಿಗೆ ಅಪಶ್ರುತಿಯೊಂದು ಮಿಡಿದಂತಾಗಿ ಧ್ವನಿ ಬಂದ ದಿಕ್ಕಿನತ್ತ ದೃಷ್ಟಿ ಹರಿಸಿದವರಿಗೆ ಬಾಗಿಲಲ್ಲಿ ತನ್ನ ಭೀಮಕಾಯವನ್ನು ಸಂಕೋಚದಿಂದ ಹಿಡಿಯಾಗಿಸಿಕೊಂಡು ನಿಂತಿದ್ದ ಮನುಷ್ಯಾಕೃತಿಯೊಂದು ಕಣ್ಣಿಗೆ ಬಿತ್ತು. ಹುಬ್ಬುಗಳನ್ನು ಮೇಲೇರಿಸಿ ಮುಖದಲ್ಲಿ ಪ್ರಶ್ನಾರ್ಥಕ ಚಿನ್ಹೆ ಮೂಡಿಸಿಕೊಂಡ ಮೇಷ್ಟ್ರನ್ನು ನೋಡಿದ್ದೆ ‘ಅಪ್ಪ ಸರ್’ ಎಂದು ಕಮೂನ ಧ್ವನಿ ಕಿವಿಗೆ ಬಿದ್ದಿದ್ದೆ ಲಂಕೇಶರು ಅನುವಾದಿಸಿದ ಬೋದಿಲೇರನ ಪಾಪದಹೂಗಳು ಕವಿತೆಯ ಸಾಲುಗಳು ದೊಕಾಚಿ ಮೇಷ್ಟ್ರ ಮೆದುಳಿನೊಳಗೆ ಗಿರಗಿಟ್ಲೆಯಾಡಲಾರಂಭಿಸಿದವು. ‘ನಾನು ಬಲ್ಲೆ ನಿನ್ನ ಹೃದಯ ಬೇರುಕಿತ್ತು ಬಿದ್ದು ಹಳೆಯ ಪ್ರೇಮಗಳಿಂದ ತುಂಬಿ ಒಡೆಯುತ್ತಿದೆ. ನಿನ್ನೆದೆ ಕಮ್ಮಾರನ ಕುಲುಮೆಯಂತೆ ಧಗಧಗಿಸುತ್ತಿದೆ. ಅಲ್ಲಿ ಪತಿತಳ ಧಿಮಾಕು ಇಟ್ಟುಕೊಂಡಿದ್ದೀ’ ಮೇಷ್ಟ್ರು ಕ್ಷಣಮಾತ್ರದಲ್ಲಿ ಹಕ್ಕಿ ಹಾರುತಿದೆಯಿಂದ ಬೋದಿಲೇರನ ದು:ಖದ ಪದಕ್ಕೆ ಹನುಮ ಜಿಗಿತ ಜಿಗಿದಿದ್ದರು. ಮೇಷ್ಟ್ರ ಮಾತು ಅರ್ಥವಾಗದೆ ಬೋದಿಲೇರನಿಗೆ ಎಲ್ಲವೂ ಅಯೋಮಯ ಅಗೋಚರ ಅನಿಸಲಾರಂಭಿಸಿತು. ‘ಅಲ್ಲಯ್ಯ ನೀನೋ ಬೋದಿಲೇರ. ನಿನ್ನ ಮಗ ಆಲ್ಬರ್ಟ್ ಕಮೂ. ಇಷ್ಟು ದಿನ ನೀನು ಎಲ್ಲಿದ್ದೆ ಮಾರಾಯ. ನಿಮ್ಮಂಥವರೆ ನನ್ನ ವೈಚಾರಿಕ ಕ್ರಾಂತಿ ಎಂಬ ಯಜ್ಞಕುಂಡದಿಂದ ಸಿಡಿದು ಬರುವ ಕಿಡಿಗಳು’ ಮೇಷ್ಟ್ರು ಹತ್ತಿರ ಹೋಗಿ ಪ್ರೀತಿಯಿಂದ ಅವನ ಮೈಯನ್ನೊಮ್ಮೆ ದಡವಿದರು. ನನ್ನಲ್ಲಿ ಅದ್ಯಾವ ವಿಶೇಷ ಈ ಮೇಷ್ಟ್ರಿಗೆ ಕಾಣಿಸಿದೆ ಎಲ್ಲೋ ತಲೆ ಕೆಟ್ಟಿರಬಹುದೆಂದು ಭಾವಿಸಿದ ಬೋದಿಲೇರ ನಾಲ್ಕು ಹೆಜ್ಜೆ ಹಿಂದೆ ಸರಿದ. ‘ನೀನು ಬೋದಿಲೇರನಾಗಿ ನಿನ್ನ ಮಗನಿಗೆ ಆಲ್ಬರ್ಟ್ ಕಮೂ ಎಂದು ಕರೆದಿರಬೇಕಾದರೆ ಎಷ್ಟೊಂದು ಸಾಹಿತ್ಯ ಓದಿಕೊಂಡಿರಬೇಕು. ಹೇಳು ಯಾರನ್ನೆಲ್ಲ ಓದಿಕೊಂಡಿದ್ದಿ’ ಮೇಷ್ಟ್ರು ಕೇಳಿದ ಪ್ರಶ್ನೆಯಿಂದ ಬೋದಿಲೇರನಿಗೆ ಈಗ ನಿಚ್ಚಳವಾಗಿ ಎಲ್ಲ ಅರಿವಾಗತೊಡಗಿ ಅವನಿಗೆ ನಗು ತಡೆಯಲಾಗಲಿಲ್ಲ. ‘ಅಯ್ಯೋ ಮೇಷ್ಟ್ರೆ ಶಾಲೆಕಡಿ ತಲೆಹಾಕಿ ಮಲಿಗದವನಲ್ಲ ನಾ. ಅಂಥದ್ದರಲ್ಲಿ ನಾನೇನು ಓದ್ಲಿ ಹೇಳಿ. ಮಂಗಳೂರು ಕಡೆ ಕೂಲಿ ಕೆಲಸಕ್ಕಂತ ಹೋಗಿದ್ದಾಗ ದೊಡ್ಡ ಸಾಹೇಬರೊಬ್ಬರು ನನಗೆ ಮತ್ತು ಮಗನಿಗೆ ಇಟ್ಟ ಹೆಸರುಗಳಿವು. ಯಾಕೋ ಛಲೋ ಅನಿಸ್ತು ಅವೇ ಖಾಯಂ ಉಳಿಕೊಂಡಿವೆ ನೋಡಿ’ ಬೋದಿಲೇರನ ವಿವರಣೆಯಿಂದ ದೊಕಾಚಿ ಮೇಷ್ಟ್ರಿಗೆ ಭ್ರಮನಿರಸನವಾದರೂ ಆ ಕ್ಷಣಕ್ಕೆ ಅವರ ತಲೆಯಲ್ಲಿ ಇಂಥ ಹೆಸರುಗಳ ಮೂಲಕವೇ ವೈಚಾರಿಕ ಕ್ರಾಂತಿಯನ್ನು ಇಲ್ಲಿ ಪಸರಿಸಬೇಕೆಂಬ ಆಲೋಚನೆಯೊಂದು ಹೊಳೆದು ಅದನ್ನು ಮುಂದಿನ ಕೆಲವೇ ದಿನಗಳಲ್ಲಿ ಕಾರ್ಯಗತಗೊಳಿಸಿಯೂ ಬಿಟ್ಟರು. ಊರಿನಲ್ಲಿರುವ ಚಿತ್ರ ವಿಚಿತ್ರ ಹೆಸರಿನ ಮಕ್ಕಳಿಗೆಲ್ಲ ಹೊಸ ಹೆಸರುಗಳನ್ನಿಟ್ಟು ಆ ಹೆಸರುಗಳನ್ನು ಕಾನೂನಿನ ಕಕ್ಷೆಗೊಳಪಡಿಸಿ ಕಪ್ಪೆರಾಯನನ್ನು ಕಾಫ್ಕಾ, ಸಿಂಕ್ರಿಯನ್ನು ಸಿಲ್ವಿಯಾ, ಬೀರನನ್ನು ಬ್ರೆಕ್ಟ್ ಆಗಿಸಿದರು. ದೊಕಾಚಿ ಮೇಷ್ಟ್ರ ಈ ಖ್ಯಾತಿ ಸುತ್ತಮುತ್ತಲಿನ ಊರುಗಳಿಗೆಲ್ಲ ಹರಡಿ ಯಾರದೇ ಮನೆಯಲ್ಲಿ ಮಗು ಜನಿಸಿದರೂ ‘ಮೇಷ್ಟ್ರೆ ಒಂದು ಛಲೋ ಹೆಸರು ಇಡಿ ಕೂಸಿಗೆ’ ಎಂದು ಹುಡುಕಿಕೊಂಡು ಬರುವುದು ಅದೊಂದು ರೂಢಿಯಂತಾಯಿತು. ದೊಕಾಚಿ ಮೇಷ್ಟ್ರ ಈ ವೈಚಾರಿಕ ಕ್ರಾಂತಿಯ ಫಲವಾಗಿ ಊರು ಮತ್ತು ಸುತ್ತಲಿನ ಫಾಸಲೆಯಲ್ಲಿ ಕಾಫ್ಕಾ, ನೆರೂಡ್, ನೆಪೆÇಲಿಯನ್, ಗಾರ್ಕಿ, ಮಾರ್ಕ್ವೇಜ್ ಹೆಸರುಗಳು ಜನರ ನಾಲಿಗೆಯ ಮೇಲೆ ಲೀಲಾಜಾಲವಾಗಿ ಹರಿದಾಡತೊಡಗಿದವು. 

* * *

ಹೆಸರು ಬದಲಾವಣೆಗಷ್ಟೇ ದೊಕಾಚಿ ಮೇಷ್ಟ್ರ ವೈಚಾರಿಕ ಕ್ರಾಂತಿ ಸೀಮಿತಗೊಂಡಿದ್ದರೆ ಮಠದ ಅಪಗೊಳಾಗಲಿ, ಆಡಳಿತ ಮಂಡಳಿಯಾಗಲಿ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೆಸರು ಬದಲಾವಣೆಯಿಂದ ಆರಂಭಗೊಂಡ ವೈಚಾರಿಕ ಕ್ರಾಂತಿ ಸಮಾಜದಲ್ಲಿ ಮನೆಮಾಡಿದ್ದ ಕೆಲವು ಪದ್ಧತಿಗಳ ಬದಲಾವಣೆಗೆ ವಿಸ್ತರಿಸಿದ್ದು ಮಠದ ಆಡಳಿತ ಮಂಡಳಿಗೆ ನುಂಗಲಾರದ ತುತ್ತಾಯಿತು. ನಡೆದದ್ದಿಷ್ಟು ಶಾಲೆಯ ಪರಿಸರದಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಲೆಂದು ವಿಭಾಗೀಯ ಶಿಕ್ಷಣಾಧಿಕಾರಿಗಳು ಮಠದ ಶಾಲೆಗೆ ಭೇಟಿ ನೀಡಲಿರುವರೆನ್ನುವ ಸುಳಿವು ದೊರೆತದ್ದೆ ಹೆಡ್ ಮಾಸ್ಟರ್ ರೇವಣ್ಣ ಪಾಟೀಲ ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ದೊಕಾಚಿ ಮೇಷ್ಟ್ರ ಹೆಗಲಿಗೇರಿಸಿ ನಿರಾಳರಾದರು. ಹೀಗೆ ದೊಕಾಚಿ ಮೇಷ್ಟ್ರನ್ನು ಹೊಸ ಜವಾಬ್ದಾರಿಗೆ ಒಳಗಾಗಿಸುವ ಈ ಯೋಜನೆಯು ಅವರ ವೈಚಾರಿಕ ಕ್ರಾಂತಿಗೆ ಒಂದಷ್ಟು ಹಿನ್ನೆಡೆ ಒದಗಿಸಬೇಕೆನ್ನುವ ಮಠದ ಆಡಳಿತ ಮಂಡಳಿಯ ಪಿತೂರಿಯ ಭಾಗವಾಗಿದೆ ಎನ್ನುವ ಗುಮಾನಿ ಕೆಲವರಲ್ಲಿ ಬರದೇ ಇರಲಿಲ್ಲ. ವಿಭಾಗೀಯ ಶಿಕ್ಷಣಾಧಿಕಾರಿಗಳ ಭೇಟಿಗೆ ಇನ್ನು ಹದಿನೈದು ದಿನಗಳಿರುವಾಗಲೇ ದೊಕಾಚಿ ಮೇಷ್ಟ್ರ ನೇತೃತ್ವದಲ್ಲಿ ಇಡೀ ಶಾಲೆಯ ಮಕ್ಕಳೆಲ್ಲ ಒಂದಾಗಿ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು, ಕಸಕಡ್ಡಿ ಗುಡಿಸಿ, ತಳೀರು ತೋರಣಗಳಿಂದ ಶಾಲೆಯನ್ನು ನವವಧುವಿನಂತೆ ಸಿಂಗರಿಸಿದರು. ಶಾಲೆಯ ಸ್ವಚ್ಛತಾ ಕಾರ್ಯಕ್ರಮದ ಸಿದ್ಧತೆಯಲ್ಲಿರುವಾಗಲೇ ಅಸ್ತವ್ಯಸ್ತವಾಗಿ ತಲೆಗೂದಲು ಬೆಳೆದು ನಿಂತ ಕೇರಿಯ ಮಕ್ಕಳು ಮೇಷ್ಟ್ರ ಎದುರಿಗೆ ಬರುವುದಕ್ಕೂ ಮೇಷ್ಟ್ರ ಗಮನ ಅವುಗಳ ತಲೆಯ ಕಡೆ ಹರಿಯುವುದಕ್ಕೂ ಸರಿಹೋಯಿತು. ತಮ್ಮ ಕೆಲಸದ ವಿರಾಮದ ನಡುವೆ ಅವರನ್ನೆಲ್ಲ ಹತ್ತಿರ ಕರೆದು ಮೇಷ್ಟ್ರು ‘ಯಾಕ್ರೋ ಕೂದಲು ಈ ಪರಿ ಬೆಳೆಸಿದ್ದಿರಿ. ಹೇನಾದರೆ ನಿಮಗೇ ಕಷ್ಟ ನೋಡಿ’ ಎಂದು ವಿಚಾರಿಸಿಕೊಂಡರು. ‘ಏನ್ಮಾಡೊದು ಸರ್ ಪ್ಯಾಟಿಕಡೆ ಹೋಗ್ದೆ ಆರು ತಿಂಗಳಾಯ್ತು’ ಮಕ್ಕಳು ತಮ್ಮ ಅಸಹಾಯಕತೆ ತೋಡಿಕೊಂಡವು. ಈ ವಿಷಯವಾಗಿ ಕ್ಷೌರಿಕರ ಅಪಣ್ಣನನ್ನು ಕರೆದು ವಿಚಾರಿಸಿದಾಗ ಲಾಗಾಯ್ತಿನಿಂದಲೂ ಕೇರಿಯವರಿಗೆ ಕ್ಷೌರ ಮಾಡುವ ಪದ್ಧತಿ ಊರಲಿಲ್ಲವೆಂದೂ ತಾನೆನಾದರೂ ಸಂಪ್ರದಾಯ ಮುರಿದಲ್ಲಿ ಊರಿನವರು ತನ್ನನ್ನು ಬಹಿಷ್ಕರಿಸುವರೆಂದು’ ಅಳಲು ತೋಡಿಕೊಂಡ. ಅಪ್ಪಣ್ಣನ ಮನಪರಿವರ್ತಿಸುವಲ್ಲಿ ದೊಕಾಚಿ ಮೇಷ್ಟ್ರು ಮಾಡಿದ ಪ್ರಯತ್ನ ಫಲಕಾಣಲಿಲ್ಲ. ‘ಮೇಷ್ಟ್ರೇ ನಿಮಗೇನೋ ಸರ್ಕಾರದವರು ಪಗಾರ ಕೊಡ್ತಾರ. ನಾನು ಊರನ್ನೇ ನಂಬಿದ್ದೀನಿ. ದಯವಿಟ್ಟು ಬಡವನ ಹೊಟ್ಟಿ ಮ್ಯಾಗ ಹೊಡಿಬ್ಯಾಡರಿ’ ಅಪ್ಪಣ್ಣ ಕೈಮುಗಿದು ಬೇಡಿಕೊಂಡ. ಇಲ್ಲಿ ಯಾವುದೂ ಸುಲಭವಾಗಿ ಬದಲಾಗೊಲ್ಲ ಅದಕ್ಕೆ ಕ್ರಾಂತಿಯೇ ಮದ್ದು ಎಂದು ಭಾವಿಸಿದ ದೊಕಾಚಿ ಮೇಷ್ಟ್ರಿಗೆ ಸಮಸ್ಯೆ ಜಟಿಲವಾಗಿದೆ ಅನಿಸಿ ಈ ಸಮಸ್ಯೆಯನ್ನು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಅನಾವರಣಗೊಳಿಸಬೇಕೆಂದು ನಿಶ್ಚಯಿಸಿ ಅದಕ್ಕೆ ಅಗತ್ಯವಾದ ಯೋಜನೆಯನ್ನು ರೂಪಿಸಿದರು. ಹೆಡ್‍ಮಾಸ್ಟರ್ ರೇವಣ್ಣ ಪಾಟೀಲ ನಗರದಿಂದ ಬಿ.ಇ.ಒ ಸಾಹೇಬರ ಜೊತೆ ಬರುವುದೆಂದು ಮತ್ತು ಇಲ್ಲಿನ ಕಾರ್ಯಕ್ರಮದ ಸಿದ್ಧತೆಯನ್ನು ದೊಕಾಚಿ ಮೇಷ್ಟ್ರು ಖುದ್ದು ಎದುರು ನಿಂತು ನೋಡಿಕೊಳ್ಳುವುದೆಂದು ಮೊದಲೆ ನಿರ್ಧಾರವಾಗಿದ್ದರಿಂದ ಮಠದ ಆಡಳಿತ ಮಂಡಳಿಗಾಗಲಿ, ಶಾಲೆಯ ಇತರ ಶಿಕ್ಷಕರಿಗಾಗಲಿ ಕೇರಿಯ ಮಕ್ಕಳ ಕ್ಷೌರದ ಸಮಸ್ಯೆ ಕುರಿತು ದೊಕಾಚಿ ಮೇಷ್ಟ್ರು ರೂಪಿಸಿದ ಯೋಜನೆಯ ಸಂಚು ಯಾರ ಗಮನಕ್ಕೂ ಬರಲಿಲ್ಲ. 

ಕಾರ್ಯಕ್ರಮದ ದಿನ ಶಾಲೆಯ ಆವರಣವನ್ನು ಕಂಪೌಂಡ್ ಗೇಟ್ ಮೂಲಕ ಬಿ.ಇ.ಒ ಸಾಹೇಬರು ಮೊದಲು ಪ್ರವೇಶಿಸುವರೆಂದು ಅವರ ಹಿಂದೆ ಮಠದ ಅಪಗೊಳು, ಆಡಳಿತ ಮಂಡಳಿ ಸದಸ್ಯರು, ಹೆಡ್ ಮಾಸ್ಟರ್ ರೇವಣ್ಣ ಹಾಗೂ ಉಳಿದ ಶಿಕ್ಷಕರು ಬರುವುದೆಂದು ಪೂರ್ವನಿರ್ಧಾರಿತವಾಗಿತ್ತು. ಬಿ.ಇ.ಒ ಸಾಹೇಬರು ಮೊದಲು ಮಠಕ್ಕೆ ಭೇಟಿ ನೀಡಿ ಹಿಂದಿನ ಅಪಗೊಳ ಗದ್ದುಗೆಗೆ ನಮಸ್ಕರಿಸಿ ಈಗಿನ ಅಪಗೊಳ ಪಾದಗಳಿಗೆ ಅಡ್ಡಬಿದ್ದು ಮಠದ ವತಿಯಿಂದ ಸನ್ಮಾನ ಸ್ವೀಕರಿಸಿ ಪಕ್ಕದಲ್ಲಿದ್ದ ಶಾಲೆಯ ಆವರಣದೊಳಗೆ ಅಡಿಯಿಟ್ಟರು. ಅಪಗೊಳನ್ನೊಳಗೊಂಡಂತೆ ಬಿ.ಇ.ಒ ಸಾಹೇಬರನ್ನು ಹಿಂಬಾಲಿಸಿ ಒಳಬಂದ ಎಲ್ಲರೂ ಎದುರು ಕಂಡ ದೃಶ್ಯ ನೋಡಿ ಒಂದು ಕ್ಷಣ ದಂಗುಬಡಿದವರಂತೆ ನಿಂತರು. ಶಾಲೆಯ ಆವರಣದ ಒಂದು ಮಗ್ಗುಲಲ್ಲಿ ಕೇರಿಯ ಮಕ್ಕಳನ್ನು ಸಾಲಾಗಿ ಕೂಡಿಸಿ ಕೈಯಲ್ಲಿ ಕತ್ತರಿ ಹಿಡಿದಿದ್ದ ದೊಕಾಚಿ ಮೇಷ್ಟ್ರು ಅವರ ತಲೆಗೂದಲನ್ನು ಬೋಳಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಅಪಗೊಳ ಮುಖ ನಖಶಿಖಾಂತ ಉರಿಯುತ್ತಿತ್ತು. ಹೆಡ್ ಮಾಸ್ಟರ್ ರೇವಣ್ಣ ಪಾಟೀಲರಿಗೆ ದೊಕಾಚಿ ಮೇಷ್ಟ್ರ ಈ ಕಾರ್ಯತಂತ್ರದ ಅರಿವಿಲ್ಲದೆ ಬೆಚ್ಚಿ ಬಿದ್ದಿದ್ದರು. ಆಡಳಿತ ಮಂಡಳಿಗೆ ಅದು ಮಠದ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಈ ಎಲ್ಲದರ ನಡುವೆ ಬಿ.ಇ.ಒ ಸಾಹೇಬರು ಮಾತ್ರ ತುಂಬ ಶಾಂತರಾಗಿದ್ದು ಆ ಸಂದರ್ಭದ ಸನ್ನಿವೇಶವನ್ನು ಖುಷಿಯಿಂದ ಆಸ್ವಾದಿಸುತ್ತಿರುವಂತೆ ಕಾಣಿಸುತ್ತಿತ್ತು. ಕೇರಿಯ ಸಂಕಷ್ಟದ ಬದುಕನ್ನು ಸ್ವತ: ಅನುಭವಿಸಿ ಗೊತ್ತಿದ್ದ ಅವರಿಗೆ ದೊಕಾಚಿ ಮೇಷ್ಟ್ರು ರೂಪಿಸಿದ ಈ ಕಾರ್ಯಯೋಜನೆ ಮನಸ್ಸಿಗೆ ಹಿಡಿಸಿತಲ್ಲದೆ ಅವರೊಳಗೊಬ್ಬ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‍ರನ್ನು ಕಂಡಷ್ಟೆ ಖುಷಿಯಾಯಿತು ಮತ್ತು ಅದನ್ನು ಎಲ್ಲರೆದುರು ಹೇಳಿ ಬಾಯಿತುಂಬ ಹೊಗಳಿದರು ಕೂಡ. ಆ ಕೂಡಲೇ ಅಪ್ಪಣ್ಣನನ್ನು ಕರೆಕಳುಹಿಸಿ ಇನ್ನು ಮುಂದೆ ಕೇರಿಯವರಿಗೂ ಅವನು ಕ್ಷೌರ ಮಾಡಬೇಕೆಂದು ಈ ವಿಷಯವಾಗಿ ತಹಸೀಲ್ದಾರರಿಗೂ, ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯುವುದಾಗಿ ಹೇಳಿ ತಪ್ಪಿದಲ್ಲಿ ಕೋರ್ಟಿನಲ್ಲಿ ಕೇಸು ದಾಖಲಿಸುವುದಾಗಿ ಫರ್ಮಾನು ಹೊರಡಿಸಿದರು. ಶಾಲೆಯ ಸಣ್ಣ ಕಾರ್ಯಕ್ರಮವೊಂದು ಊರಿನ ಸಮಸ್ಯೆಯನ್ನು ಬಗೆಹರಿಸುವ ವೇದಿಕೆಯಾಗುತ್ತದೆಂದು ಯಾರೂ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಬಿ.ಇ.ಒ ಸಾಹೇಬರು ಕಾರ್ಯಕ್ರಮ ಮುಗಿಸಿ ಹೋಗುವಾಗ ದೊಕಾಚಿ ಮೇಷ್ಟ್ರ ಕಿವಿಯಲ್ಲಿ ಯಾರಿಗೂ ಕೇಳಿಸದಂತೆ ಮೆಲ್ಲನೆ ಉಸಿರಿದ್ದರು ‘ಮೇಷ್ಟ್ರೆ ಒಂದು ಛಂದದ ಹೆಸರು ಹುಡುಕಿ ಕೊಡಿ ನಂಗೂ ಬದಲಿಸಿಕೊಳ್ಳಬೇಕಿದೆ’ ಎಂದು.

ಊರಿಗೆ ಕಂಟಕಪ್ರಾಯವಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಂತವೀರಪ್ಪಗೌಡರ ಮನೆಯಲ್ಲಿ ಅಪಗೊಳ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ದೊಕಾಚಿ ಮೇಷ್ಟ್ರು ಸಭೆಗೆ ಬಂದವರೆ ಅಪಗೊಳಿಗೆ ನಿಂತೇ ನಮಸ್ಕರಿಸಿ ಎದುರು ಸಾಲಿನಲ್ಲಿದ್ದ ಖುರ್ಚಿಯಲ್ಲಿ ಆಸೀನರಾದರು. ಊರಿನಲ್ಲಿ ಈ ಮೊದಲಿನ ಯಥಾಸ್ಥಿತಿಯನ್ನೆ ಕಾಯ್ದುಕೊಂಡು ಹೋಗುವುದೆಂದು ಬಿ.ಇ.ಒ ಸಾಹೇಬರ ಮನವೊಲಿಸಿ ದೂರನ್ನು ಹಿಂಪಡೆಯುವಂತೆ ಮಾಡುವ ಜವಾಬ್ದಾರಿ ದೊಕಾಚಿ ಮೇಷ್ಟ್ರಿಗೆ ಸೇರಿದ್ದೆಂದು ಇನ್ನು ಮುಂದೆ ಇಂಥ ಅನುಚಿತ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಒಂದು ವೇಳೆ ಮಠದ ಪ್ರತಿಷ್ಠೆಗೆ ಕುಂದಾಗುವಂತೆ ವರ್ತಿಸಿದಲ್ಲಿ ನೌಕರಿಯಿಂದ ವಜಾಗೊಳಿಸಲಾಗುವುದೆಂದು ಸಭೆಯಲ್ಲಿ ಠರಾವು ಹೊರಡಿಸಲಾಯಿತು. ಸಭೆಯಲ್ಲಿನ ಎಲ್ಲ ಸದಸ್ಯರೂ ಅಪಗೊಳ ಈ ನಿರ್ಧಾರವನ್ನು ಒಕ್ಕೊರಳಿನಿಂದ ಅನುಮೋದಿಸಿದರು. ಈ ನಿರ್ಧಾರದ ಕುರಿತು ಸಭೆ ದೊಕಾಚಿ ಮೇಷ್ಟ್ರ ಅಭಿಪ್ರಾಯ ಕೇಳಿದಾಗ ತಿಳಿವಳಿಕೆಯೇ ಇಲ್ಲದ ಈ ತಿರಕ್ಲಾಂಡಿಗಳೆದುರು ವಾದಿಸುವುದು ವ್ಯರ್ಥ ಕಾಲಹರಣವೆಂದು ಬಗೆದ ಮೇಷ್ಟ್ರು ಯಾವ ಪ್ರತ್ಯುತ್ತರವನ್ನು ನೀಡದೆ ಗಂಭೀರವಾಗಿ ಕುಳಿತೆ ಇದ್ದರು. ಅವರ ಈ ಮೌನವನ್ನೆ ಒಪ್ಪಿಗೆಯೆಂದು ಭಾವಿಸಿದ ಸಭೆಯು ಉಪ್ಪಿಟ್ಟು ಚಹಾದ ಸಮಾರಾಧನೆಯ ನಂತರ ಬರಕಾಸ್ತುಗೊಂಡಿತು. ಈ ನಡುವೆ ಬಿ.ಇ.ಒ ಸಾಹೇಬರು ಬೇರೆ ತಾಲೂಕಿಗೆ ವರ್ಗಾವಣೆಗೊಂಡು ತಮ್ಮ ಕಾರ್ಯಭಾರದ ಗಡಿಬಿಡಿಯಲ್ಲಿ ದೊಕಾಚಿ ಮೇಷ್ಟ್ರ ಕ್ರಾಂತಿಯ ಯೋಜನೆಯನ್ನು ಸಂಪೂರ್ಣವಾಗಿ ಮರೆತು ಬಿಟ್ಟರು. ಪರಿಣಾಮವಾಗಿ ಕೇರಿಯವರ ತಲೆಕ್ಷೌರದ ಸಮಸ್ಯೆ ಯಾವ ಬದಲಾವಣೆಯನ್ನೂ ಕಾಣದೆ ಯಥಾಸ್ಥಿತಿ ಮುಂದುವರೆಯಿತು.

* * *

ಶಾಂತವೀರಪ್ಪಗೌಡರ ಮನೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ದೊಕಾಚಿ ಮೇಷ್ಟ್ರ ಘನಗಾಂಭೀರ್ಯ ಮೌನ ಅಲ್ಲಿದ್ದ ಯಾರ ಮೇಲೂ ಅಷ್ಟೊಂದು ವಿಶೇಷ ಪರಿಣಾಮ ಬೀರದೆ ಹೋದರೂ ಗೌಡರ ಮಗಳು ಶಾಂತಿಲಕ್ಷ್ಮಿಯ ಎದೆಯಲ್ಲಿ ಮಾತ್ರ ಅಚ್ಚಳಿಯದ ಮುದ್ರೆಯಾಗಿ ಠಳಾಯಿಸಿಬಿಟ್ಟಿತು. ಈ ಶಾಂತಿಲಕ್ಷ್ಮಿ ಶಾಂತವೀರಪ್ಪಗೌಡರ ನಾಲ್ಕು ಗಂಡು ಮಕ್ಕಳ ನಂತರ ಹುಟ್ಟಿದ ಏಕಮಾತ್ರ ಹೆಣ್ಣುಸಂತಾನ. ಊರಿನ ಮಠದ ಶಾಲೆಯಲ್ಲಿ ಮ್ಯಾಟ್ರಿಕ್‍ವರೆಗೆ ಓದಿದ ಶಾಂತಿಲಕ್ಷ್ಮಿ ಮುಂದೆ ಕಾಲೇಜು ಸೇರಲು ಪಟ್ಟಣಕ್ಕೆ ಹೋಗುತ್ತೆನೆಂದು ಹಟ ಹಿಡಿದಾಗ ಶಾಂತವೀರಪ್ಪಗೌಡರು ಹೌಹಾರಿದ್ದರು. ದಿನದಿನಕ್ಕೂ ವಯಸ್ಸನ್ನು ಮೀರಿ ಬೆಳೆಯುತ್ತಿರುವ ಮಗಳ ದೇಹ ಗೌಡರ ಆತಂಕಕ್ಕೆ ಕಾರಣವಾಗಿತ್ತು. ಶಾಂತಿಲಕ್ಷ್ಮಿ ಒಳ್ಳೆ ಸ್ಪುರದ್ರೂಪಿ ಹೆಣ್ಣು. ಬೆಳದಿಂಗಳ ಬಣ್ಣದ ದೇಹ ಕಾಂತಿ, ಒತ್ತಾದ ಕಪ್ಪು ತಲೆಗೂದಲು, ತಿದ್ದಿ ತೀಡಿದ ಹುಬ್ಬು, ವಿಶಾಲ ನೇತ್ರಗಳು, ನೀಳ ಮೂಗು, ತುಂಬಿದೆದೆ, ಸಣ್ಣ ನಡು, ಬಾಳೆದಿಂಡಿನಂತಹ ಕಾಲುಗಳು ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವಷ್ಟು ರೂಪವತಿ. ದಾರಿಯಲ್ಲಿ ಅವಳು ನಡೆದು ಹೋಗುತ್ತಿದ್ದರೆ ಅವಳೆದೆಯ ಕುಲುಕಾಟಕ್ಕೆ ಯುವಕರಿರಲಿ ವಯಸ್ಸಾದವರ ಎದೆ ಕೂಡ ಝಲ್ ಎನ್ನುತ್ತಿತ್ತು. ಊರಿನ ಅದೆಷ್ಟೋ ಪಡ್ಡೆ ಹುಡುಗರು ಶಾಂತಿಲಕ್ಷ್ಮಿಯ ನೆನಪಲ್ಲಿ ರಾತ್ರಿಯೆಲ್ಲ ತಮ್ಮ ಮೈ ಬಿಸಿಯಾಗಿಸಿಕೊಂಡು ರೋಮಾಂಚನಗೊಳ್ಳುತ್ತಿದ್ದರು. ರೂಪವತಿಯಾದ ಮಗಳನ್ನು ದೂರದ ಊರಿನಲ್ಲಿಟ್ಟು ಕಾಲೇಜಿಗೆ ಸೇರಿಸುವುದು ಗೌಡರಿಗೆ ಸುತಾರಾಂ ಇಷ್ಟವಿರಲಿಲ್ಲ. ಶಾಂತಿಲಕ್ಷ್ಮಿ ಕೆಲವು ದಿನ ಅನ್ನ ನೀರು ಬಿಟ್ಟು ಮುಷ್ಕರ ಹೂಡಿದಳಾದರೂ ಕೊನೆಗೆ ಮನೆಯವರೆಲ್ಲರ ಪ್ರತಿರೋಧಕ್ಕೆ ಮಣಿದು ಕ್ರಮೇಣ ಬದಲಾದ ಈ ಜೀವನಗತಿಗೆ ಹೊಂದಿಕೊಂಡಳು. ದಿನದ ಬಹುಪಾಲು ವೇಳೆಯನ್ನು ಟೀವಿ ನೋಡುವುದು ಇಲ್ಲವೆ ಕಥೆ ಕಾದಂಬರಿಗಳ ಓದಿನಲ್ಲಿ ಕಳೆಯುತ್ತಿದ್ದ ಶಾಂತಿಲಕ್ಷ್ಮಿಗೆ ವಯೋಸಹಜವಾಗಿ ಪ್ರೀತಿ ಪ್ರಣಯದ ಸಿನಿಮಾ, ಕಥೆ, ಕಾದಂಬರಿಗಳು ಇಷ್ಟವಾಗತೊಡಗಿದವು. ಸಿನಿಮಾ ಮತ್ತು ಕಾದಂಬರಿಗಳ ನಾಯಕರಲ್ಲಿ ತನ್ನ ಕನಸಿನ ರಾಜಕುಮಾರನನ್ನು ಹುಡುಕುತ್ತಿದ್ದ ಶಾಂತಿಲಕ್ಷ್ಮಿಗೆ ಮನೆಯಲ್ಲಿ ಸಭೆ ಸೇರಿದ ದಿನದಿಂದ ದೊಕಾಚಿ ಮೇಷ್ಟ್ರ ಚಿತ್ರ ಕಣ್ಣೊಳಗೆ ಕುಳಿತು ಅವಳೆದೆಯಲ್ಲಿ ಪ್ರೇಮಗೀತೆ ಪಲ್ಲವಿಸತೊಡಗಿತು. ಡಾಂಬರು ಬಣ್ಣದ ಬೋಳು ಬೋಳಾದ ತಲೆಯ ಕಡ್ಡಿಪೈಲ್ವಾನನಂತಿರುವ ಈ ಮೇಷ್ಟ್ರು ಅನಾಮತ್ತು ನಲವತ್ತಾರು ಕಿಲೋ ತೂಕದ ದೇಹದೊಂದಿಗೆ ಅವಳ ಹೃದಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದು ಸ್ವತ: ಶಾಂತಿಲಕ್ಷ್ಮಿಗೂ ಸೋಜಿಗದ ವಿಷಯವಾಗಿತ್ತು.

ಮಠದ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಆಗಾಗ ಪಾಲ್ಗೊಳ್ಳುತ್ತಿದ್ದ ಶಾಂತಿಲಕ್ಷ್ಮಿಗೆ ದೊಕಾಚಿ ಮೇಷ್ಟ್ರನ್ನು ಸುಲಭವಾಗಿ ಸಂಧಿಸಲು ಯಾವ ಅಡೆತಡೆಯೂ ಇರಲಿಲ್ಲ. ಬೇರೆ ವಿಚಾರಗಳಲ್ಲಿ ಮೇಷ್ಟ್ರು ಎಡವಟ್ಟು ಎಂದೆನಿಸಿದರೂ ಹೆಣ್ಣಿನ ವಿಷಯದಲ್ಲಿ ತುಂಬ ಸ್ಟ್ರಿಕ್ಟ್ ಎಂಬ ನಂಬಿಕೆ ಗೌಡರಿಗಿದ್ದುದ್ದರಿಂದಲೇ ಶಾಂತಿಲಕ್ಷ್ಮಿ ಮತ್ತು ಮೇಷ್ಟ್ರ ಭೇಟಿ ವಿಷಯದಲ್ಲಿ ಅವರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅದುವರೆಗೂ ಬಡ ಮತ್ತು ಕೆಳವರ್ಗದ ಜನರಷ್ಟೇ ತಮ್ಮ ವೈಚಾರಿಕ ಕ್ರಾಂತಿಯ ವಾರಸುದಾರರು ಎಂದು ಭಾವಿಸಿದ್ದ ದೊಕಾಚಿ ಮೇಷ್ಟ್ರು  ಶಾಂತಿಲಕ್ಷ್ಮಿಯ ಜೊತೆಗಿನ ಒಡನಾಟದಿಂದ ತಮ್ಮ ವೈಚಾರಿಕ ಕ್ರಾಂತಿಗೆ ಹೊಸ ನೆಲೆ ದೊರೆತ ಖುಷಿಯಿಂದ ಪುಳಕಿತರಾಗಿ ಅವಳಿಗೆ ತೇಜಸ್ವಿ, ಅನಂತಮೂರ್ತಿ, ದೇವನೂರರ ಪುಸ್ತಕಗಳನ್ನೆಲ್ಲ ಓದುವಂತೆ ಶಿಫಾರಸ್ಸು ಮಾಡಿದ್ದಲ್ಲದೆ ತಮ್ಮಲ್ಲಿದ್ದ ಒಂದೆರಡು ಪುಸ್ತಕಗಳನ್ನು ಓದಲು ಕೊಟ್ಟು ರೋಮಾಂಚನಗೊಂಡರು. ಆರಂಭದಲ್ಲಿ ಉತ್ಸಾಹ ತೋರಿದ ಶಾಂತಿಲಕ್ಷ್ಮಿ ಬರಬರುತ್ತ ಮೇಷ್ಟ್ರ ವೈಚಾರಿಕ ಕ್ರಾಂತಿಯ ವಿಚಾರಗಳಿಗೆ ರೋಸಿ ಅವರ ದಡ್ಡ ತಲೆಗೆ ನಿಜವಾದ ಅರ್ಥ ಹೊಳೆಯುತ್ತಿಲ್ಲವೆಂದು ಗೊತ್ತಾದದ್ದೆ ಆಪರೇಷನ್ ಲವ್ ಕಾರ್ಯಾಚರಣೆಗೆಂದು ಖುದ್ದು ಅಖಾಡಕ್ಕಿಳಿದಳು. ಚಿಕ್ಕಪ್ಪನ ಮಗ ಗುರುಲಿಂಗನ ಮೂಲಕ ಪುಸ್ತಕದಲ್ಲಿ ಪ್ರೇಮ ಪತ್ರವನ್ನು ಬಚ್ಚಿಟ್ಟು ಮೇಷ್ಟ್ರಿಗೆ ರವಾನಿಸಿದವಳು ಪ್ರತ್ಯುತ್ತರಕ್ಕಾಗಿ ಕ್ಷಣವನ್ನು ಯುಗವಾಗಿಸಿ ಕಾಯ್ದಳು. ಕೊನೆಗೂ ಬಂದಿದ್ದು ಪ್ರತ್ಯುತ್ತರವಲ್ಲ ಅವಳದೇ ಪತ್ರ ಅಲ್ಲಲ್ಲಿ ದೀರ್ಘ, ಒತ್ತಕ್ಷರ, ಅಲ್ಪಪ್ರಾಣ, ಮಹಾಪ್ರಾಣಗಳ ತಿದ್ದುಪಡಿಯೊಂದಿಗೆ ಮರಳಿ ಬಂದಿತ್ತು. ಪತ್ರ ಕೈಗಿತ್ತ ಗುರುಲಿಂಗ ಹೇಳಿದ ‘ಅಕ್ಕಾ ಮೇಷ್ಟ್ರು ಹೇಳಿದರು ನೀನು ಗ್ರಾಮರ್‍ನಲ್ಲಿ ಭಾಳ ವೀಕ್ ಅಂತೆ’ ಅಸಹಾಯಕತೆಯಿಂದ ಶಾಂತಿಲಕ್ಷ್ಮಿ ತಲೆ ಚಚ್ಚಿಕೊಂಡಳು. ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟವಳಿಗೆ ಇನ್ನೊಂದು ಹೆಜ್ಜೆ ಮುಂದಿಡುವುದು ಅಷ್ಟೇನು ದೊಡ್ಡ ಕಷ್ಟದ ಕೆಲಸವಾಗಿರಲಿಲ್ಲ. ಆ ದಿನ ಮನೆಯ ಮೇಲಿನ ಮಹಡಿಯಲ್ಲಿ ದೊಕಾಚಿ ಮೇಷ್ಟ್ರೊಂದಿಗೆ ಸಾಹಿತ್ಯದ ಚರ್ಚೆಯಲ್ಲಿ ತೊಡಗಿದ್ದಾಗ ಶಾಂತಿಲಕ್ಷ್ಮಿ ಇದ್ದಕ್ಕಿದ್ದಂತೆ ಮೈಮೇಲಿನ ಬಟ್ಟೆ ಕಿತ್ತೊಗೆದು ಹುಟ್ಟುಡುಗೆಯಲ್ಲಿ ನಿಂತು ‘ನೋಡಿ ಮೇಷ್ಟ್ರೆ ಏನನಿಸುತ್ತೆ’ ಎಂದು ಕೇಳಿದಳು. ದೊಕಾಚಿ ಮೇಷ್ಟ್ರು ಏಕಕಾಲಕ್ಕೆ ಒಂದು ತೆರನಾದ ನಿರ್ಲಿಪ್ತತೆ ಮತ್ತು ಭಕ್ತಿಯ ಭಾವದಿಂದ ‘ಅಕ್ಕ ಮಹಾದೇವಿಯ ದರುಶನವಾದ ಅನುಭವವಾಯಿತು’ ಎಂದವರೆ ಎದ್ದು ಶಾಂತಿಲಕ್ಷ್ಮಿಯ ಕಾಲಿಗೆರಗಿ ತನುಕರಗದವರಲ್ಲಿ ವಚನ ವಾಚಿಸತೊಡಗಿದರು. ಶಾಂತಲಕ್ಷ್ಮಿಯ ಹೃದಯದಲ್ಲಿ ಈಗ ಪ್ರೇಮದ ಜಾಗದಲ್ಲಿ ಕ್ರೋಧ ಹೆಡೆಯಾಡತೊಡಗಿತು. ಪ್ರೀತಿಯ ಜಾಗವನ್ನು ಸೇಡು ಆಕ್ರಮಿಸಿಕೊಂಡಿತು. ಮೈಗೆ ಅರೆಬರೆ ಬಟ್ಟೆ ಸುತ್ತಿಕೊಂಡವಳೆ ಮೇಷ್ಟ್ರನ್ನು ಬಿಗಿದಪ್ಪಿ ಕಿಟಾರನೆ ಕಿರುಚಿಕೊಂಡಳು. ಆ ಸಂಜೆಯೇ ಸಭೆ ಸೇರಿದ ಮಠದ ಆಡಳಿತ ಮಂಡಳಿ ಅನುಚಿತ ವರ್ತನೆಯ ಕಾರಣ ನೀಡಿ ದೊಕಾಚಿ ಮೇಷ್ಟ್ರನ್ನು ನೌಕರಿಯಿಂದ ವಜಾಗೊಳಿಸಿದ್ದಾಗಿ ಆದೇಶ ಹೊರಡಿಸಿತು. ಮೇಷ್ಟ್ರ ವೈಚಾರಿಕ ಕ್ರಾಂತಿಯನ್ನು ದಮನಗೊಳಿಸಲು ಮಠದ ಆಡಳಿತ ಮಂಡಳಿ ಶಾಂತಿಲಕ್ಷ್ಮಿಯನ್ನು ಬಳಸಿಕೊಂಡಿತು ಎನ್ನುವ ಅನುಮಾನದ ಮಾತುಗಳು ಅಲ್ಲಲ್ಲಿ ಕೇಳಿಬಂದವು.

* * *

ಇದೆಲ್ಲ ನಡೆದು ಹಲವು ವರ್ಷಗಳೇ ಗತಿಸಿ ಹೋಗಿವೆ. ಶಾಂತಿಲಕ್ಷ್ಮಿಗೆ ಸೋದರ ಮಾವನ ಮಗನೊಂದಿಗೆ ಮದುವೆಯಾಗಿ ಎರಡು ಮಕ್ಕಳಾಗಿವೆ. ಮಠ ಈಗ ಮೊದಲಿಗಿಂತ ದೊಡ್ಡದಾಗಿ ಬೆಳೆದು ಸುತ್ತಲೂ ಕಾಲೇಜು, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಕೇರಿಯವರ ತಲೆಗಳನ್ನು ಅಪ್ಪಣ್ಣ ಮತ್ತು ಅವನ ಮಕ್ಕಳ ಕ್ಷೌರಿಕ ವೃತ್ತಿಯ ವ್ಯಾಪ್ತಿಯಿಂದ ಹೊರಗೇ ಇರಿಸಲಾಗಿದೆ. ಕಾಫ್ಕಾ, ನೆರೂಡ, ಕಮೂ, ಬ್ರೆಕ್ಟ್, ಮಾರ್ಕ್ವೇಜ್ ಇವರೆಲ್ಲ ಗೌಡರ ಹೊಲದಲ್ಲಿ ಕೂಲಿ ಆಳುಗಳಾಗಿ ದುಡಿಯುತ್ತ ಬದುಕಿನ ಬಂಡಿ ಎಳೆಯುತ್ತಿರುವರು. ಮೊದಲಿಗಿಂತ ವಯಸ್ಸಾದಂತೆ ಕಾಣುತ್ತಿರುವ ದೊಕಾಚಿ ಮೇಷ್ಟ್ರು ‘ಕ್ರಾಂತಿ ಆಗ್ಬೇಕರಯ್ಯ ಕ್ರಾಂತಿ. ಒಂದು ವೈಚಾರಿಕ ಕ್ರಾಂತಿಯಾಗಿ ಜನರಲ್ಲಿ ತಿಳಿವಳಿಕೆ ಮೂಡಿದಾಗಲೇ ಬದಲಾವಣೆ ಸಾಧ್ಯ ನೋಡಿ’ ಎಂದು ಎದುರು ಸಿಕ್ಕಿದವರಿಗೆಲ್ಲ ಹೇಳುತ್ತ ಊರ ತುಂಬ ಈಗಲೂ ತಿರುಗಾಡುತ್ತಿರುತ್ತಾರೆ.                 

---000---


-ರಾಜಕುಮಾರ ಕುಲಕರ್ಣಿ

Saturday, October 3, 2020

ಈ ಹೊತ್ತಿನ ತುರ್ತು ಇ-ಹೊತ್ತಿಗೆ

         


(ದಿನಾಂಕ ೧೨.೦೮.೨೦೨೦ ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

       ಕೊರೊನಾ ವೈರಾಣು ಸೃಷ್ಟಿಸಿರುವ ಈ ಆತಂಕದ ಸನ್ನಿವೇಶದಲ್ಲಿ ಹಲವು ಉದ್ಯಮಗಳಂತೆ ಪುಸ್ತಕೋದ್ಯಮ ಕೂಡ ತನ್ನ ಮಗ್ಗಲು ಬದಲಿಸಿದೆ. ಈ ಮೊದಲು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದ್ದ ಇ-ಪುಸ್ತಕ ಎನ್ನುವ ಪರಿಕಲ್ಪನೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದೆ. ಲಾಕ್‍ಡೌನ್ ಅವಧಿಯಲ್ಲಿ ಪುಸ್ತಕ ಪ್ರಕಟಣೆಯ ಕೆಲಸ ಸ್ಥಗಿತಗೊಂಡಿದ್ದರ ಕಾರಣ ಕೆಲವು ಪ್ರಕಾಶಕರು ಇ-ಪುಸ್ತಕದ ಮೊರೆ ಹೋದರು. ‘ಛಂದ’ದ ವಸುಧೇಂದ್ರ ತಮ್ಮ ಪ್ರಕಾಶನದ ಎಲ್ಲ ಪುಸ್ತಕಗಳನ್ನು 50 ಪ್ರತಿಶತ ರಿಯಾಯಿತಿ ದರದಲ್ಲಿ ಇ-ಪುಸ್ತಕ ರೂಪದಲ್ಲಿ ಓದುಗರಿಗೆ ಒದಗಿಸುವ ವ್ಯವಸ್ಥೆ ಮಾಡಿದರು. ವಸುಧೇಂದ್ರರ ಈ ಯೋಜನೆ ಅನೇಕ ಪ್ರಕಾಶಕರಿಗೆ ಸ್ಪೂರ್ತಿ ನೀಡಿ ಅವರು ಕೂಡ ಭವಿಷ್ಯದಲ್ಲಿ ಇ-ಪುಸ್ತಕ ಪ್ರಕಟಣೆಯನ್ನು ಕಾರ್ಯರೂಪಕ್ಕೆ ತರುವ ಮಾತುಗಳನ್ನಾಡಿದರು. ಮನೋಹರ ಗ್ರಂಥಮಾಲೆಯವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪ್ರಕಾಶನ ಸಂಸ್ಥೆಯಲ್ಲಿ ಈ ಮೊದಲು ಪ್ರಕಟವಾದ ಪುಸ್ತಕಗಳ ಡಿಜಿಟಲೀಕರಣದ ಕೆಲಸ ಆರಂಭಗೊಂಡಿದೆ ಎಂದು ಹೇಳಿದರು.

    ಕನ್ನಡದ ಬಹುತೇಕ ಪ್ರಕಾಶಕರು ಇ-ಪುಸ್ತಕದ ಕುರಿತು ಆಸ್ಥೆ ತಳೆಯಲು ಕಾರಣಗಳಿಲ್ಲದಿಲ್ಲ. ಪುಸ್ತಕ ಪ್ರಕಟಣೆಗಾಗಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪ್ರಕಾಶಕರಿಗೆ ಪುಸ್ತಕ ಪ್ರಕಟಣೆ ಎನ್ನುವುದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಕಾಗದ, ಮುದ್ರಣದ ಖರ್ಚು, ಲೇಖಕರಿಗೆ ಗೌರವಧನ, ಪುಸ್ತಕಗಳ ಸಾಗಾಣಿಕೆಯ ವೆಚ್ಚ ಇದನ್ನೆಲ್ಲ ಪ್ರಕಾಶಕರು ಭರಿಸಬೇಕಾಗಿದೆ. ಈ ನಡುವೆ ಪ್ರಕಟವಾದ ಪುಸ್ತಕಗಳನ್ನು ವರ್ಣರಂಜಿತ ಸಮಾರಂಭದ ಅದ್ದೂರಿ ವೇದಿಕೆಯ ಮೇಲೆ ಬಿಡುಗಡೆ ಮಾಡಬೇಕಾದ ಅನಿವಾರ್ಯತೆ. ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ, ಸಮುದಾಯ ಭವನದ ಬಾಡಿಗೆ, ಗಣ್ಯರ ಅಧ್ಯಕ್ಷತೆ, ಆಹ್ವಾನಿತರಿಗೆ ಭೋಜನ/ಉಪಹಾರದ ವ್ಯವಸ್ಥೆ, ಪತ್ರಿಕಾ ಮಾಧ್ಯಮದವರಿಗೆ ಗೌರವ ಪ್ರತಿ ಹೀಗೆ ಅನೇಕ ಗಿಮಿಕ್‍ಗಳನ್ನು ಪುಸ್ತಕ ಬಿಡುಗಡೆಗಾಗಿ ಅನುಸರಿಸಬೇಕು. ಪುಸ್ತಕಗಳ ಬಿಡುಗಡೆಯ ನಂತರವೂ ಚರ್ಚೆ, ಸಂವಾದಗಳ ಮೂಲಕÀ ವ್ಯಾಪಕ ಪ್ರಚಾರ ಒದಗಿಸಬೇಕು. ಈ ಎಲ್ಲ ತಂತ್ರಗಳನ್ನು ಅನುಸರಿಸಿದಾಗ ಮಾತ್ರ ಪ್ರಕಾಶಕ ಪುಸ್ತಕೋದ್ಯಮದಲ್ಲಿ ತಳವೂರಿ ನಿಲ್ಲಲು ಸಾಧ್ಯ ಎನ್ನುವಂಥ ವಾತಾವರಣ ನಿರ್ಮಾಣವಾಗಿದೆ.

    ಕನ್ನಡ ಪುಸ್ತಕೋದ್ಯಮದಲ್ಲಿ ಪ್ರಕಾಶಕರು ಎದುರಿಸುತ್ತಿರುವ ಇನ್ನೊಂದು ಮುಖ್ಯ ಸಮಸ್ಯೆ ಎಂದರೆ ಅದು ಓದುಗರು ಪುಸ್ತಕಗಳ ಖರೀದಿಯಲ್ಲಿ ಅಪೇಕ್ಷಿಸುತ್ತಿರುವ ಅಧಿಕ ಪ್ರಮಾಣದ ರಿಯಾಯಿತಿ. ಇಂಗ್ಲಿಷ್ ಭಾಷೆಯಲ್ಲಿನ ಪುಸ್ತಕಗಳ ಮಾರಾಟಕ್ಕಾಗಿ ರಿಯಾಯಿತಿಯಲ್ಲಿ ತೋರಿಸುತ್ತಿರುವ ಧಾರಾಳತನ ಕನ್ನಡ ಭಾಷೆಯ ಪುಸ್ತಕಗಳ ಮಾರಾಟಕ್ಕೆ ತೊಡಕಾಗಿ ಪರಿಣಮಿಸಿದೆ. ಇಂಗ್ಲಿಷ್ ಪುಸ್ತಕಗಳ ಮಾರಾಟಕ್ಕೆ ವಿಸ್ತೃತ ಮಾರುಕಟ್ಟೆ ಇರುವುದರಿಂದ ಅದೇ ಧಾರಾಳತನವನ್ನು ಸೀಮಿತ ಮಾರುಕಟ್ಟೆ ಹೊಂದಿರುವ ಕನ್ನಡ ಪುಸ್ತಕಗಳ ಖರೀದಿಯಲ್ಲಿ ಅಪೇಕ್ಷಿಸುವುದು ತಪ್ಪು. ಇಂಥ ತಪ್ಪುಗಳು ಓದುಗರಿಗೆ ಮನವರಿಕೆಯಾಗಬೇಕು.

ಮಧ್ಯವರ್ತಿಗಳು ಅಂದರೆ ಮಾರಾಟಗಾರರು ವಸ್ತುಗಳ ಖರೀದಿಯಲ್ಲಿ ಉತ್ಪಾದಕರಿಗೆ ಮುಂಗಡ ಹಣ ಪಾವತಿಸಿದ ಉದಾಹರಣೆಯೇ ಇಲ್ಲ. ವಸ್ತುಗಳ ಮಾರಾಟದ ನಂತರ ಉತ್ಪಾದಕರಿಗೆ ಹಣ ಪಾವತಿಸುವ ರೂಢಿಯನ್ನು ಅನುಚಾನವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಈ ರೂಢಿ ಪುಸ್ತಕಗಳ ಮಾರಾಟಕ್ಕೂ ಅನ್ವಯವಾಗುತ್ತಿದೆ. ಸಾಮಾನ್ಯವಾಗಿ ಪುಸ್ತಕ ಮಾರಾಟಗಾರರು ಪ್ರಕಾಶಕರಿಗೆ ಹಣವನ್ನು ವಿಳಂಬವಾಗಿ ಪಾವತಿಸುವರು. ಪ್ರಕಾಶಕರು ತಮ್ಮ ಪುಸ್ತಕಗಳ ಮಾರಾಟಕ್ಕಾಗಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಪುಸ್ತಕ ವ್ಯಾಪಾರಿಗಳನ್ನು ಅವಲಂಬಿಸಿರುವರು. ಶಿಕ್ಷಣ ಸಂಸ್ಥೆಗಳಾಗಲಿ ಮತ್ತು ಪುಸ್ತಕ ವ್ಯಾಪಾರಿಗಳಾಗಲಿ ಮುಂಗಡ ಹಣ ಪಾವತಿಸಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸುವುದಿಲ್ಲ. ಮಾರಟವಾದ ಪುಸ್ತಕಗಳ ಹಣ ಪಡೆಯುವುದಕ್ಕಾಗಿ ಪ್ರಕಾಶಕರು ಹಲವು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಹಣ ಪಡೆಯುವುದಕ್ಕಾಗಿ ಪ್ರಕಾಶಕರು ನ್ಯಾಯಾಲಯದ ಮೊರೆ ಹೋಗಬೇಕಾದ ಸಂದರ್ಭಗಳೂ ಉಂಟು. ಕೆಲವೊಮ್ಮೆ ಖರೀದಿಯಾದ ಪುಸ್ತಕಗಳು ತಿರಸ್ಕೃತಗೊಂಡು ಮತ್ತೆ ಮರಳಿ ಪ್ರಕಾಶಕರ ಕೈಸೇರುವುದುಂಟು.

    ಪ್ರಕಾಶಕರಿಗೆ ಆರ್ಥಿಕವಾಗಿ ಅನುಕೂಲವಾಗಲೆಂದು ಸಾರ್ವಜನಿಕ ಗ್ರಂಥಾಲಯಗಳಿಗೆ ಇಂತಿಷ್ಟು ಸಂಖ್ಯೆಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವ ಯೋಜನೆ ಚಾಲ್ತಿಯಲ್ಲಿದೆ. ಆದರೂ ಈ ಯೋಜನೆಯಲ್ಲಿಯೂ ಅನೇಕ ಸಮಸ್ಯೆಗಳು ಮತ್ತು ಲೋಪದೋಷಗಳಿವೆ. ಸಾರ್ವಜನಿಕ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸುವಾಗ ಪುಸ್ತಕದ ಮುಖಬೆಲೆಯ ಬದಲಾಗಿ ಪ್ರತಿಪುಟಕ್ಕೆ ಇಂತಿಷ್ಟು ಪೈಸೆಗಳೆಂದು ಸರ್ಕಾರ ನಿಗದಿಪಡಿಸಿದೆ. ಜೊತೆಗೆ ಖರೀದಿಸುವ ಪುಸ್ತಕದ ಪ್ರತಿಗಳ ಸಂಖ್ಯೆಯನ್ನು ಕೂಡ ನಿಗದಿಪಡಿಸಲಾಗಿದೆ. ಈ ಎಲ್ಲ ನಿರ್ಬಂಧನೆಗಳಿಗೆ ಒಳಗಾಗಿಯೂ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಮಾರಾಟ ಮಾಡುವುದೇ ಅದೊಂದು ದೊಡ್ಡ ಸಾಹಸವಾಗಿ ಪರಿಣಮಿಸಿದೆ. ಲಾಬಿ, ಶಿಫಾರಸ್ಸು, ಅಧಿಕಾರಿಗಳ ಓಲೈಕೆಯಂಥ ತಂತ್ರಗಳ ಮೊರೆ ಹೋಗಬೇಕಾಗುವುದು. ಜೊತೆಗೆ ಸಾರ್ವಜನಿಕ ಗ್ರಂಥಾಲಯಗಳಿಗೆಂದೇ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರ ಪೈಪೋಟಿಯನ್ನು ಎದುರಿಸಬೇಕು. ಇಂಥ ಸನ್ನಿವೇಶದಲ್ಲಿ ಪುಸ್ತಕ ಪ್ರಕಟಣೆಯಲ್ಲಿ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಪ್ರಕಾಶನ ಸಂಸ್ಥೆಗಳು ಉಳಿದು ಬೆಳೆಯುವುದು ಕಷ್ಟಸಾಧ್ಯವಾದ ಸಂಗತಿ.

     ಕನ್ನಡ ಪುಸ್ತಕೋದ್ಯಮ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಇ-ಪುಸ್ತಕ ಪ್ರಕಟಣೆಯು ಪ್ರಕಾಶಕರಿಗೆ ಅದೊಂದು ಪರಿಹಾರ ಮಾರ್ಗವಾಗಿ ಕಾಣಿಸುತ್ತಿದೆ. ಪ್ರಕಟಣೆಗೆ ಅಗತ್ಯವಾದ ಕಚ್ಚಾ ಸಾಮಗ್ರಿಗಳ ಖರೀದಿ, ಪ್ರಕಟಿತ ಪುಸ್ತಕಗಳ ಬಿಡುಗಡೆ ಸಮಾರಂಭ, ಗಣ್ಯರಿಗೆ ಗೌರವ ಪ್ರತಿ, ಪುಸ್ತಕಗಳ ಸಾಗಾಣಿಕೆ ಈ ಎಲ್ಲ ಖರ್ಚುಗಳನ್ನು ಉಳಿಸುವ ‘ಇ-ಪುಸ್ತಕ’ದ ಪರಿಕಲ್ಪನೆಯೇ ಪ್ರಕಾಶಕರಿಗೆ ಈ ಯೋಜನೆಯತ್ತ ಹೊರಳುವಂತೆ ಉತ್ತೇಜಿಸುತ್ತಿದೆ. ಪರಿಣಾಮವಾಗಿ ಅನೇಕ ಪ್ರಕಾಶಕರು ಇ-ಪುಸ್ತಕ ಯೋಜನೆಯನ್ನು ಆದಷ್ಟು ಬೇಗನೆ ಅನುಷ್ಠಾನಗೊಳಿಸುವ ಉತ್ಸಾಹದಲ್ಲಿರುವರು.

ಪ್ರಕಾಶಕರು ಇ-ಪುಸ್ತಕದ ಮೊರೆ ಹೋಗುತ್ತಿರುವ ಸಂದರ್ಭ ಈ ಯೋಜನೆಯ ಅಂತಿಮ ಫಲಾನುಭವಿಗಳ ಅಂದರೆ ಓದುಗರ ಕುರಿತು ವಿವೇಚಿಸುವುದು ಒಳಿತು. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‍ಗಳನ್ನು ಬಳಸಿ ಆನ್‍ಲೈನ್ ಮೂಲಕ ಪುಸ್ತಕಗಳನ್ನು ಖರೀದಿಸುವ ಓದುಗರ ಸಂಖ್ಯೆಯೇ ವಿರಳವಾಗಿರುವಾಗ ಇನ್ನು ಇ-ಪುಸ್ತಕಗಳಿಗೆ ಓದುಗರನ್ನು ಲಭ್ಯವಾಗಿಸುವುದೊಂದು ದೊಡ್ಡ ಸಾಹಸವೇ ಸರಿ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇ-ಪುಸ್ತಕವನ್ನು ಅಸಂಖ್ಯಾತ ಓದುಗರಿಗೆ ಸುಲಭವಾಗಿ ತಲುಪಿಸಬಹುದು. ಆದರೆ ಇದೇ ಮಾತನ್ನು ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಓದುಗರಿಗೆ ಅನ್ವಯಿಸಿ ಹೇಳುವುದು ತಪ್ಪು ನಿರ್ಧಾರವಾಗುತ್ತದೆ. ವೃತ್ತಿಯ ಕಾರಣದಿಂದ ಪ್ರತಿನಿತ್ಯ ಬಹುಪಾಲು ಸಮಯವನ್ನು ಇ-ಪುಸ್ತಕಗಳು, ಇ-ನಿಯತಕಾಲಿಕೆಗಳ ನಡುವೆಯೇ ಕಳೆಯುವ ನನಗೆ ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರಕಟಿತ ಪುಸ್ತಕ ರೂಪದಲ್ಲಿ ಓದುವುದೇ ಚೆಂದದ ಸಂಗತಿ. ಅಲ್ಲಲ್ಲಿ ಸಾಲುಗಳ ಕೆಳಗೆ ಗೆರೆ ಎಳೆದು, ಪ್ರಶ್ನಾರ್ಥಕ ಚಿನ್ಹೆ ಮೂಡಿಸಿ, ಪಕ್ಕದ ಖಾಲಿಯಿರುವ ಮಾರ್ಜಿನ್‍ನಲ್ಲಿ ಟಿಪ್ಪಣಿ ಬರೆದು ಪುಸ್ತಕವನ್ನು ಓದಿದಾಗಲೇ ಅದರಲ್ಲಿನ ವಿಚಾರಗಳು ಅಂತರಾಳಕ್ಕಿಳಿಯಲು ಸಾಧ್ಯ ಎನ್ನುವ ಮನೋಭಾವದ ಓದುಗರ ಸಂಖ್ಯೆ ಬಹಳಷ್ಟಿದೆ. ಜೊತೆಗೆ ಕನ್ನಡ ಪುಸ್ತಕಗಳನ್ನೊದುವ ಓದುಗರ ವಯೋಮಾನವನ್ನು ಪರಿಗಣನೆಗೆ ತೆಗೆದುಕೊಂಡಾಗ ಅವರಲ್ಲಿ ವೃದ್ಧರ ಮತ್ತು ಮಧ್ಯವಯಸ್ಕರ ಸಂಖ್ಯೆಯೇ ಹೆಚ್ಚು. ಈ ವಯೋಮಾನದ ಓದುಗರನ್ನು ಇ-ಪುಸ್ತಕದ ಓದಿಗೆ ಹೊಂದಿಕೊಳ್ಳುವಂತೆ ಮಾಡುವುದು ಅದೊಂದು ಸವಾಲಿನ ಕೆಲಸ. ಪುಸ್ತಕವನ್ನು ಕೈಯಲ್ಲಿ ಹಿಡಿದು ಅದರ ಹಾಳೆಗಳನ್ನು ಮುಗುಚುತ್ತ ಓದುವಾಗ ದೊರೆಯುವ ಅನುಭೂತಿ ಅದೇ ಪುಸ್ತಕವನ್ನು ಕಂಪ್ಯೂಟರ್ ಪರದೆಯ ಮೇಲೆ ಓದುವಾಗ ಪ್ರಾಪ್ತವಾಗಲಾರದು. ಪ್ರಕಾಶಕರು ಇ-ಪುಸ್ತಕ ಯೋಜನೆಯನ್ನು ಕಾರ್ಯರೂಪಕ್ಕೆ ತಂದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರ ಅಸಂಖ್ಯಾತ ಓದುಗರನ್ನು ಕಳೆದುಕೊಳ್ಳಬಹುದೆನ್ನುವ ಆತಂಕ ಸೃಷ್ಟಿಯಾಗಿದೆ. ಈ ಆತಂಕದ ನಡುವೆಯೂ ಕೆಲವು ಪ್ರಕಾಶಕರು ಪುಸ್ತಕ ತನ್ನ ಮೊದಲಿನ ರೂಪದಲ್ಲೇ ಓದುಗರಿಗೆ ಲಭ್ಯವಾಗಲಿದೆ ಎನ್ನುವ ಭರವಸೆಯ ಮಾತುಗಳನ್ನಾಡಿರುವರು. ಅವರ ಪ್ರಕಾರ ಇ-ಪುಸ್ತಕವು ಸಧ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಅದೊಂದು ಪರ್ಯಾಯವೇ ವಿನ: ಅದೇ ಪರಿಹಾರವಲ್ಲ.

-ರಾಜಕುಮಾರ ಕುಲಕರ್ಣಿ